ಹೇಳಿ ಕೇಳಿ ಇದು ಬೇಸಿಗೆ ಕಾಲ. ಬೇಸಿಗೆ ಕಾಲದಲ್ಲಿ ತಣ್ಣಗೆ ಇರುವ ಪದಾರ್ಥಗಳನ್ನು ತಿನ್ನುವ ಮತ್ತು ಕುಡಿಯುವ ಮೂಲಕ ದೇಹವನ್ನು ತಣ್ಣಗೆ ಇಟ್ಟುಕೊಳ್ಳಲು ಬಯಸುತ್ತೇವೆ. ಇದಕ್ಕೆ ಅನುಗುಣವಾಗಿ ನಮ್ಮ ಪ್ರಕೃತಿಯೂ ನಮ್ಮೊಂದಿಗೆ ಇದ್ದು ಬೇಸಿಗೆ ಕಾಲದಲ್ಲಿಯೇ ತಣ್ಣನೆ ಹಣ್ಣುಗಳಾದ ಕಲ್ಲಂಗಡಿ ಮತ್ತು ಕರ್ಬೂಜ (ಸಿದ್ದೋಟೆ ಹಣ್ಣು) ರಸ್ತೆಗಳ ಬದಿಗಳಲ್ಲಿಯೂ ಮತ್ತು ಮಾರುಕಟ್ಟೆಗಳಲ್ಲಿಯೂ ಸಿಗುತ್ತಿತ್ತು. ಉಳ್ಳವರು ಉಂಡೇ ಹಣ್ಣುಗಳನ್ನೇ ಕೊಂಡುಕೊಳ್ಳುತಿದ್ದರೆ, ಕೈಯ್ಯಲ್ಲಿ ಕಾಸಿಲ್ಲದವರು ಕತ್ತರಿಸಿಟ್ಟ ಹಣ್ಣುಗಳನ್ನು ತಿಂದು ತಮ್ಮ ನಾಲಿಗೆಯ ಬರವನ್ನು ಕಳೆದುಕೊಳ್ಳುತ್ತಿದ್ದರು.

ಆಗೆಲ್ಲಾ ಬೇಸಿಗೆಯ ಸಮಯದಲ್ಲಿ ನದಿಗಳು ಬತ್ತಿ ಹೋಗಿದ್ದಾಗ ನದಿಗಳ ತಟದಲ್ಲಿ ಕಲ್ಲಂಗಡಿ ಹಣ್ಣನ್ನು ಬೆಳೆಯುತ್ತಿದ್ದರು. ಚಳಿಗಾಲ ಮುಗಿಯುವ ಶಿವರಾತ್ರಿಯ ಫಲಾಹಾರದ ಸಮಯಕ್ಕೆ ಸರಿಯಾಗಿ ಲಭ್ಯವಿರುತ್ತಿದ್ದ ಕಲ್ಲಂಗಡಿ ಇಡೀ ಬೇಸಿಗೆಯಲ್ಲಿ ದೊರೆತು ಮಳೆಗಾಲದ ಆರಂಭದಲ್ಲಿ ಒಂದೆರದು ಮಿಂಚು ತಾಗಿದ ಕೂಡಲೇ ಹಣ್ಣುಗಳು ಕೊಳೆತು ಹೋಗುತ್ತಿದ್ದ ಕಾರಣ ಅಲ್ಲಿಗೆ ಮುಕ್ತಾಯವಾದರೆ ಮತ್ತೆ ಮುಂದಿನ ವರ್ಷದ ವರೆಗೂ ಕಾಯಲೇ ಬೇಕಿತ್ತು.

ಆದರೆ ಇಂದು ಕುಲಾಂತರಿ ತಳಿಗಳು ಬಂದಿರುವ ಕಾರಣ ವರ್ಷದ 365 ದಿನಗಳೂ ಕಲ್ಲಂಗಡಿ ಹಣ್ಣುಗಳು ಲಭ್ಯವಿದ್ದು ಬಹುತೇಕರ ಮನೆಗಳಲ್ಲಿ ಬೆಳಗಿನ ತಿಂಡಿಯೊಂದಿಗೋ ಇಲ್ಲವೇ ಮಧ್ಯಾಹ್ನದ ಊಟದೊಂದಿಗೆ ಖಡ್ಡಾಯವಾಗಿ ಕಲ್ಲಂಗಡಿ ಹಣ್ಣುಗಳನ್ನು ತಿನ್ನುವುದನ್ನು ರೂಢಿ ಮಾಡಿಕೊಂಡಿದ್ದಾರೆ. ಅಂದೆಲ್ಲಾ ಕಲ್ಲಂಗಡಿ ಹಣ್ಣುಗಳನ್ನು ತಿನ್ನುವಾಗ ಬಾಯಿಗೆ ಸಿಗುತ್ತಿದ್ದ ಬೀಜಗಳು ಕಿರಿಕಿರಿಯನ್ನುಂಟು ಮಾಡುತ್ತಿದ್ದರೂ ಮರಳು ಮರಳಾಗಿ ಇರುತ್ತಿದ್ದ ಕಲ್ಲಂಗಡಿ ಹಣ್ಣುಗಳು ತಿನ್ನಲು ಬಲು ರುಚಿಯಾಗಿರುತ್ತಿದ್ದವು. ಆದರೆ ಇಂದು ಬೀಜರಹಿತ ಕಲ್ಲಂಗಡಿ ಹಣ್ಣುಗಳಿಂದಾಗಿ ಬೀಜಗಳ ಕಿರಿ ಕಿರಿಯಿಂದ ಮುಕ್ತರಾಗಿದ್ದರೂ ಅಂದಿನ ಹಣ್ಣಿನಂತೆ ರುಚಿ ಇಂದು ಸಿಗದಿರುವುದು ವಿಪರ್ಯಾಸವೇ ಸರಿ. ಸಂತಾನೋತ್ಪತ್ತಿ ಪ್ರಕೃತಿಯ ನಿಯಮವಾಗಿದ್ದು ಹಣ್ಣುಗಳಲ್ಲಿ ಬೀಜಗಳೇ ಸಂತಾನೋತ್ಪತ್ತಿಯ ಕೇಂದ್ರ ಬಿಂದುವಾಗಿತ್ತು. ಆದರೆ ವಿಜ್ಞಾನಿಗಳು ಬೀಜಗಳು ಬಲಿಯುವ ಶಕ್ತಿಯನ್ನೇ ನಿಶ್ಕಕ್ತಿಯನ್ನಾಗಿ ಮಾಡಿರುವ ಕಾರಣ, ಹಣ್ಣುಗಳ ರುಚಿಯಲ್ಲಿಯೂ ವೆತ್ಯಾಸವಾಗಿದೆ.

ಕಲ್ಲಂಗಡಿ ಹಣ್ಣುಗಳ ಬೀಜದ ಕುರಿತಾಗಿ ಚರ್ಚಿಸುತ್ತಿರುವಾಗ ಕೇಂದ್ರ ಸರ್ಕಾರದ ಮಾಜೀ ರಕ್ಷಣಾ ಸಚಿವರು ಮತ್ತು ಗೋವಾ ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ದಿವಂಗತ ಮನೋಹರ್ ಪರಿಕ್ಕರ್ ಅವರ ಊರಿನಲ್ಲಿ ಬೆಳೆಯುತ್ತಿದ್ದ ಕಲ್ಲಂಗಡಿ ಹಣ್ಣಿನ ವೃತ್ತಾಂತವನ್ನು ನೆನಪಿಸಿಕೊಳ್ಳಲೇ ಬೇಕು.

ಪರಿಕ್ಕರ್ ಅವರ ಪೂವಜರು ಗೋವಾ ಸಮೀಪದ ಪರಿ ಎನ್ನುವ ಊರಾಗಿದ್ದ ಕಾರಣದಿಂದಲೇ ಅವರ ಕುಟುಂಬಕ್ಕೆ ಪರಿಕ್ಕರ್ ಎಂದು ಅಡ್ಡಹೆಸರು ಬಂದಿತ್ತು. ಹಿಂದೆ ಅವರ ಊರು ದೊಡ್ಡ ದೊಡ್ಡ ಕಲ್ಲಂಗಡಿ ಹಣ್ಣಿಗೆ ಖ್ಯಾತಿ ಪಡೆದಿತ್ತು. ಅವರು ಸಣ್ಣವನಿರುವಾಗ ಮೇ ತಿಂಗಳಲ್ಲಿ ಹಣ್ಣು ಕಟಾವಿಗೆ ಬಂದಾಗ ಮಕ್ಕಳಿಗಾಗಿ ಕಲ್ಲಂಗಡಿ ತಿನ್ನುವ ಸ್ಪರ್ಧೆ ಏರ್ಪಡಿಸುತ್ತಿದ್ದರು. ಎಲ್ಲಾ ಮಕ್ಕಳೂ ತಮಗೆ ಬೇಕಾದಷ್ಟು ಮತ್ತು ಸಾಧ್ಯವಾಗುವಷ್ಟು ಕಲ್ಲಂಗಡಿ ಹಣ್ಣುಗಳನ್ನು ತಿನ್ನುವುದೇ ಆಟದ ನಿಯಮ. ಅನಿಮಿಯತವಾದ ಕಲ್ಲಂಗಡಿ ಹಣ್ಣುಗಳನ್ನು ತಿನ್ನಬಹುದು ಎಂದು ಮಕ್ಕಳು ಅತ್ಯುತ್ಸಾಹದಿಂದ ತಾ ಮುಂದು, ನಾ ಮುಂದು ಎಂದು ಆ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದರು.
ಕೆಲವು ವರ್ಷಗಳು ಕಳೆದ ನಂತರ ಪರಿಕ್ಕರ್ ಮುಂಬೈನಲ್ಲಿ ತಮ್ಮ ಓದನ್ನು ಮುಗಿಸಿದ ನಂತರ ಮತ್ತದೇ ಮೇ ತಿಂಗಳಿನ ಕಲ್ಲಂಗಡಿ ಹಣ್ಣುಗಳನ್ನು ತಿನ್ನುವ ಸ್ಪರ್ಥೆಯನ್ನು ನೋಡಲು ಹೋದಾಗ ಅಲ್ಲಿನ ಹಣ್ಣುಗಳ ಸಂಖ್ಯೆಯೂ ಕಡಿಮೆ ಇದ್ದವಲ್ಲದೇ, ಹಣ್ಣಿನ ಗಾತ್ರವೂ ಬಹಳ ಸಣ್ಣದಾಗಿತ್ತು.





