ಕಥೆ – ಸುಮಾ ವೀಣಾ
ಎಲ್ಲಾ ಸಂದರ್ಭಗಳಲ್ಲೂ ತನ್ನದೇ ಆದ ಆದರ್ಶದ ಮಾತುಗಳಾಡುತ್ತಿದ್ದ ದಮಯಂತಿ, ತನ್ನದೇ ಸಂಸಾರ ಸೊಟ್ಟಗಾದಾಗ, ಅದರಿಂದ ಹೊರಬಂದು ಮುಂದೆ ಹೇಗೆ ಸಮಾಜಮುಖಿಯಾದಳು….?
ಉಪನ್ಯಾಸ ಮಾಲಿಕೆಯೊಂದರಲ್ಲಿ ಭಾಗವಹಿಸಲು ರೈಲ್ವೇ ಸ್ಟೇಷನ್ನಿನ ಫ್ಲಾಟ್ ಫಾರಂನಲ್ಲಿ ರೈಲಿಗಾಗಿ ಕಾದು ಕುಳಿತ ದಮಯಂತಿ ಪರಿಚಯದ ಹೆಂಗಸರನ್ನು ಕಂಡಾಗ ಅವರಿಂದ ಹಿಂದೆ ಹಿಂದೆ ಉಳಿಯುವ ಪ್ರಯತ್ನ ಮಾಡುತ್ತಿದ್ದಳು. ಅವರೆಲ್ಲಾ ಲೇಡೀಸ್ ಕಂಪಾರ್ಟ್ ಮೆಂಟ್ ನಲ್ಲೇ ಪ್ರಯಾಣ ಮಾಡಬೇಕೆಂಬ ಹಠಕ್ಕೆ ಬಿದ್ದಿದ್ದರು. ದಮಯಂತಿಗೆ ಅವರ ಆ ವಾದ ಏಕೋ ಸರಿಬೀಳಲಿಲ್ಲ. ಎಲ್ಲಾ ವಿಚಾರಗಳಲ್ಲೂ ಪುರುಷರಿಗಿಂತ ನಾವೇನು ಕಡಿಮೆ ಎಂದು ಹೋರಾಟಕ್ಕೆ ಇಳಿಯುವ ಈ ಪ್ರಮೀಳೆಯರು ಇಲ್ಲಿ ಏಕೆ ಮಹಿಳೆಯರ ಬೋಗಿಗೇ ಕಾಯಬೇಕು ಎಂಬುದು ಅವಳ ವಾದ.
ಹಾಲೂಡಿಸುವ ತಾಯಂದಿರು ಇದ್ದರೆ, ಅನಾರೋಗ್ಯದವರಿದ್ದರೆ ಅಡ್ಡಿಯಿಲ್ಲ. ಎಲ್ಲರಂತೆ ಇವರು ನಾವು ಎಲ್ಲರ ಹಾಗೆ ಸಾಮಾನ್ಯ ಬೋಗಿಗಳಲ್ಲೇ ಪ್ರಯಾಣ ಮಾಡಬಹುದಲ್ಲ ಎಂಬುದೇ ಅವಳ ಮನದಿಂಗಿತ. ಆದರೆ ಮಾತನಾಡಲು ಮನಸ್ಸಿಲ್ಲದೆ ನಿರ್ಲಿಪ್ತಳಾದಳು. ಹಳೆಯ ನೆನಪುಗಳು ರೈಲ್ವೇ ಹಳಿಯ ಮೇಲೆ ಗಾಲಿಗಳು ಉರುಳಿದಂತೆ ವೇಗವಾಗಿ ಒಮ್ಮೆ ಸರಿದು ಸರಿದು ಮಾಯವಾಗುತ್ತಿದ್ದವು.
ದಮಯಂತಿ ತನ್ನ ಬದುಕಿನ ಎಲ್ಲ ತಲ್ಲಣ, ತಳಮಳಗಳನ್ನು ಅನುಭವಿಸಿ, ಅನುಭವಿಸಿ ಜಡಕ್ಕೆ ಸರಿದಂತೆ ಸರಿದರೂ ಮತ್ತೆ ಪುಟಿದೆದ್ದು ಸಮಾಜ ಮುಖಿಯಾಗಿದ್ದಳು. ಎಲ್ಲಾ ಸಮಸ್ಯೆಗಳಿಗೆ ತಾನು ತನ್ನನ್ನು ಒಡ್ಡಿಕೊಳ್ಳುವ ಕಲೆಯನ್ನು ಕರಗತ ಮಾಡಿಕೊಂಡಿದ್ದಳು. ಆದರ್ಶಗಳ ಬೆನ್ನು ಹತ್ತಿ ನಡೆದಾಗ ತಪ್ಪುಗಳು, ಅಪಾಯಗಳು ಕಂಡರೂ ಅವೆಲ್ಲವನ್ನೂ ಸರಿದೂಗಿಸಿಕೊಳ್ಳುವೆ ಎಂಬ ಅತೀವ ವಿಶ್ವಾಸವಿದ್ದವಳು. ಸಮಾಜ ಪರಿವರ್ತನೆ ಮಾಡುವೆ ಎಂಬ ಹುಚ್ಚು ಹಠಕ್ಕೆ ಬಿದ್ದು ಕೈ ಸುಟ್ಟುಕೊಂಡಿದ್ದಳು.
ತನ್ನ ಸೋದರತ್ತೆ ಬಾಲ ವಿಧವೆಯಾಗಿ ಬಂದು ಮನೆ ಸೇರಿದಾಗಿನಿಂದ ಅನುಭವಿಸಿದ್ದ ವ್ಯಥೆಗಳನ್ನೇ ಈಕೆ ಕಥೆಗಳನ್ನಾಗಿ ಕೇಳಿ ಬೆಳೆದಳು. ಹಾಗಾಗಿ ಒಂದಿಷ್ಟು ಊರುಗಳನ್ನಲ್ಲದೇ ಇದ್ದರೂ ಒಂದಷ್ಟು ಜನರನ್ನಾದರೂ ಬದಲು ಮಾಡಬೇಕೆಂಬ ಬಯಕೆಯುಳ್ಳವಳು. ಗಂಡ ತೀರಿಕೊಂಡ ಬಳಿಕ ಮಂಗಳ ದ್ರವ್ಯಗಳನ್ನೇಕೆ ತ್ಯಜಿಸಬೇಕು? ಹುಟ್ಟಿದಾಗಿನಿಂದ ಅವೆಲ್ಲಾ ನಮ್ಮ ಬಳುವಳಿಗಳೇ ಅಲ್ವೇ ಎಂದು ಸಾಧ್ಯವಾದಷ್ಟೂ ಜನರಿಗೆ ಅರಿವು ಮೂಡಿಸುವಲ್ಲಿ ಬಹುಪಾಲು ಯಶಸ್ವಿಯೂ ಆಗಿದ್ದಳು. ಋತುಮತಿ ಹೆಣ್ಣುಮಕ್ಕಳನ್ನು ಹೊರಗಿಡುವ ಪದ್ಧತಿ ಏಕೆ? ಹೊರಗೆ ಕೂರಿಸುವ ಬದಲು ವಿಶ್ರಾಂತಿ ಕೊಡಬೇಕು. ಅವರೊಡನೆ ನಯವಾಗಿ ವರ್ತಿಸಿ. ಆ ದಿನಗಳಲ್ಲಿ ಕೋಪ, ಉದ್ವೇಗ ಅವರಲ್ಲಿ ಹೆಚ್ಚಾಗಿರುತ್ತದೆ. ಸ್ವಚ್ಛತೆಯ ಕಡೆಗೆ ಗಮನಕೊಡಿ. ಮೈಲಿಗೆ ಮನೆಗಲ್ಲ…. ನಿಮ್ಮ ಮನಸ್ಸಿಗಾಗಿದೆ ಎಂದೆಲ್ಲಾ ತಿಳಿ ಹೇಳ ಬಯಸಿದ್ದಳು.
ಏನೇ ಆದರೂ ದಮಯಂತಿ ತನ್ನ ಮನೆಯಲ್ಲೇ ತಾನು ನಿರ್ಲಕ್ಷ್ಯಕ್ಕೆ ಒಳಗಾಗಿದ್ದಳು. ದಮಯಂತಿಯ ತಮ್ಮಂದಿರು, ಸೊರ ಸೊರನೆ ಹಾರ್ಲಿಕ್ಸ್ ಕುಡಿಯುತ್ತಾ ಬಾಯಿ ಚಪ್ಪರಿಸುತ್ತಿದ್ದಾಗ ಹಿರಿಯರು, `ನೀನೂ ಕುಡಿ,’ ಎಂದು ಯಾವತ್ತೂ ಹೇಳಿರಲಿಲ್ಲ. ಪುರುಷಪ್ರಧಾನ ವ್ಯವಸ್ಥೆಯನ್ನು ಮನಸ್ಸಿನಲ್ಲೇ ಶಪಿಸುತ್ತಿದ್ದ ದಮಯಂತಿಗೆ ಗಾಜಿನ ಬಾಟಲಿಯೊಂದು ಬಿದ್ದು ಒಡೆದು ಚೂರಾದ ಸದ್ದು ಕೇಳಿಸಿತು. ಅವಳು ಸರಕ್ಕನೆ ಎದ್ದು ಅಡುಗೆಮನೆಗೆ ಹೋದಳು. ಬೆಕ್ಕೊಂದು ಸರಕ್ಕನೆ ಓಡಿಹೋಯಿತು. ಹಾರ್ಲಿಕ್ಸ್ ಬಾಟಲಿ ಒಡೆದು ಹೋಗಿತ್ತು. `ನನಗೇ ಇಲ್ಲ….. ನೀನು ಬೇರೆ ಬಂದ್ಯಾ…..!’ ಎನ್ನುತ್ತಾ ನೆಲದಲ್ಲಿ ಚೆಲ್ಲಿದ್ದ ಹಾರ್ಲಿಕ್ಸ್ ನ್ನು ನೋಡಿ. `ನನಗೆ ಕೊಡಲ್ವಲ್ಲಾ…. ಹೀಗೆ ಆಗಬೇಕು….’ ಎಂದು ಹಿಗ್ಗಿದ್ದಳು.
ಎಲ್ಲೆಲ್ಲೂ ಅನ್ಯಾಯ ಆಗುತ್ತಿದೆ ಎಂದು ಗೊತ್ತಿದ್ದರೂ ಅನಿಸಿಕೆಯನ್ನು ವ್ಯಕ್ತಪಡಿಸುವ ಹಾಗಿರಲಿಲ್ಲ. ಕೈ ಬಾಯಿ ಪರಿಸ್ಥಿತಿ ದಮಯಂತಿಯದ್ದಾಗಿತ್ತು. ಅವಳ ತಮ್ಮ ಶಾಲೆಗೆ ಹೋಗೋದಕ್ಕೆ ಆರಂಭಿಸಿದ ನಂತರವೇ ಕಾಟನ್ ನಿಂದ ಪಾಲಿಯೆಸ್ಟರ್ ಬಟ್ಟೆ ತಂದುಕೊಟ್ಟ ಮನೆಯವರನ್ನು ಯೋಚಿಸಿ ಬೇಜಾರಾಗಿದ್ದಳು.
ಇವೆಲ್ಲವುಗಳಿಂದ ತಾನೂ ಹೊರಬಂದು ಇತರರನ್ನು ಹೊರತರಬೇಕೆಂಬ ಧಾವಂತ ಅವಳಲ್ಲಿ ತೀವ್ರವಾಗಿತ್ತು. ತನ್ನದೇ ಆದ ಹೋರಾಟದ ರೂಪುರೇಷೆಗಳನ್ನು ಮಾಡಹೊರಟ ಇವಳು ಹಳ್ಳಿಯಿಂದ ಪಟ್ಟಣಕ್ಕೆ ಪ್ರಯಾಣಿಸುವಾಗ ನಿರ್ವಾಹಕ ಪರಿಚಯವಾದನು. ಅವನು ಆಗ ನಯವಾಗಿ ಮಾತನಾಡಿಸುತ್ತಿದ್ದ. ಈ ಹೋರಾಟಗಾರ್ತಿ ದಮಯಂತಿ ಬರುವುದು ಸ್ವಲ್ಪ ತಡವಾದರೆ ಡ್ರೈವರ್ ಗೆ ಏನೋ ಕಾರಣ ಹೇಳಿ ಅವಳು ಬರುವವರೆಗೂ ಕಾಯುತ್ತಿದ್ದ. ಅವನನ್ನು `ಕಂಡೆಕ್ಟರ್ ಮಹಾಶಯ,’ ಎನ್ನಲೇ….. `ಇಲ್ಲ….. ಇಲ್ಲ…. ನಿರ್ವಾಹಕ ಎನ್ನೋಣವೇ…?’ ಹಾಗೆ ಕರೆದರಾಯಿತು ಎಂದುಕೊಂಡಳು.
ಹೀಗಿರುವಾಗ ದಮಯಂತಿಗೆ, `ತನ್ನಲ್ಲಿ ಸುಧಾರಣೆ ಆದರೆ ಅಲ್ಲವೇ, ಬೇರೆಯವರಿಗೆ ಹೇಳಲು ಸಾಧ್ಯ,’ ಎಂದುಕೊಂಡು ಅಂತರ್ಜಾತೀಯ ವಿವಾಹಕ್ಕೆ ಕೊರಳೊಡ್ಡಿದಳು. ಅಂತೂ ಆತುರಕ್ಕೆ ಬಿದ್ದು ಕಂಡಕ್ಟರ್ ನ್ನು ಮದುವೆ ಆಗಿಯೇಬಿಟ್ಟಳು. ಮದುವೆಯಾಗಿ 4-5 ದಿನಗಳಲ್ಲೇ ಗಂಡನ ಮೊಬೈಲ್ ಗೆ, `ಅಪ್ಪಾ ಎಷ್ಟು ದಿನಾಯ್ತು…..? ಯಾವಾಗ ಬರ್ತೀರಾ….? ಏನು ತರ್ತೀರಾ….?’ ಎನ್ನುವ ಪದಗಳು ಕೇಳಿಸಿದವು.
ದಮಯಂತಿಗೆ ಎದೆ ಬಿರಿದಂತಾಯಿತು. `ಓಹೋ…. ಈತ ಈಗ ಒಂದಲ್ಲ ಎರಡು ಸಂಸಾರ ನಿರ್ವಹಿಸಬೇಕಾಗಿರುವ ನಿರ್ವಾಹಕ,’ ಎಂದುಕೊಂಡಳು. ದುಃಖ ಉಮ್ಮಳಿಸಿ ಬಂದರೂ ಸ್ವರ ತೆಗೆಯುವಂತಿಲ್ಲ. ತಾನೇ ಹಳ್ಳಕ್ಕೆ ಬಿದ್ದಿರುವುದು. ಬೇರೆಯವರ ಬಳಿ ಹೇಳಿಕೊಂಡರೆ ಮರ್ಯಾದೆ ಪ್ರಶ್ನೆ. `ನಾನೇ ಹಳ್ಳ ಹತ್ತುವೆ, ಮೇಲೇರುವೆ…..’ ಎಂದುಕೊಂಡು ಜೀವನವನ್ನು ಪಣವಾಗಿಯೇ ತೆಗೆದುಕೊಂಡಳು. ಜಟ್ಟಿ ಕೆಳಗೆ ಬಿದ್ದರೂ ಮೀಸೆ ಮಣ್ಣಾಗಿಲ್ಲ ಎಂಬಂತೆ ಎಲ್ಲರ ವಿರೋಧದ ನಡುವೆ ಬದುಕತೊಡಗಿದಳು. ಆತುರದ ನಿರ್ಧಾರ ಎಂಬುದು ಆವೇಶದ ನಿರ್ಧಾರ…. ಎಂತಹ ಅಪಾಯಕಾರಿ ಅಲ್ಲವೇ…..?!
ಹಳ್ಳಿಯಲ್ಲಿ ಜನರ ವ್ಯಂಗ್ಯ, ಕುಹಕ ಹೆಚ್ಚಾದಾಗ ನಿರ್ವಾಹಕ ಮಹಾಶಯ ಪಟ್ಟಣದಲ್ಲಿ ಮನೆ ಮಾಡುವ ನಿರ್ಧಾರ ಮಾಡಿದ. ಪಟ್ಟಣಕ್ಕೆ ಬಂದದ್ದೆ ಬೇರೆ ತೆರನಾದ ಗೋಳು ಪ್ರಾರಂಭವಾಯಿತು. ಗಂಡನ ಮೊದಲ ಹೆಂಡತಿ ಮನೆ ಮುಂದೆ ಬಂದು ಜಗಳವಾಡಿದಳು. ಅದು ದಮಯಂತಿ ಮನಸ್ಸಿಗೆ ಕಿರಿಕಿರಿಯಾಗಿ ಪಾಪಪ್ರಜ್ಞೆ ಕಾಡತೊಡಗಿತು. `ಅಂಧವಿಶ್ವಾಸಕ್ಕೆ ತಾನು ತೆರುತ್ತಿರುವ ಬೆಲೆ ಇದು,’ ಎಂದು ಒಳ ಮನಸ್ಸಿಗೆ ಹೊಳೆದರೂ ಹೊರಮನಸ್ಸು ಅದನ್ನು ಸಂಪೂರ್ಣವಾಗಿ ಒಪ್ಪುತ್ತಿರಲಿಲ್ಲ.
ದಮಯಂತಿಯ ನಿರ್ವಾಹಕ ಗಂಡ ಮೊದಲನೆಯ ಹೆಂಡತಿಯನ್ನು ಬಿಡಲಾರದೆ, `ನಾನಿಲ್ಲಿ ನಿತ್ಯ ಬರಲಾಗದು. ನೀನು ಒಂಟಿಯಾಗಿ ಇರುವುದೂ ಬೇಡ. ನಮ್ಮಮ್ಮ ನಿನ್ನೊಂದಿಗೆ ಇರುತ್ತಾರೆ,’ ಎಂದು ತನ್ನ ತಾಯಿಯನ್ನು ತಂದು ಇರಿಸಿದ. ಆಕೆ ಮಾತಿನಲ್ಲಿ ಸಾಧ್ವಿ, ನಡವಳಿಕೆಯಲ್ಲಿ ಗೋಮುಖ್ಯಾಘ್ರ. `ಹೊಸ ಸಂಸಾರಕ್ಕೆ ತಂದ ರೊಟ್ಟಿ ಹೆಂಚು ಬೆಳ್ಳಗಿದ್ದದ್ದು ಹೀಗೇಕೆ ಕಪ್ಪಾಗಿದೆ….? ಗ್ಯಾಸ್ ಬರ್ನರ್ ತರುವಾಗ ಫಳಫಳ ಹೊಳೆಯುತ್ತಿತ್ತು ಈಗೇಕೆ ಕಪ್ಪಾಗಿದೆ….?’ ಎಂದು ಕೇಳುತ್ತಿದ್ದ ಅತ್ತೆ, `ಪಾತ್ರೆಗಳೆಲ್ಲಾ ಕೊಳಕಾಗಿವೆ, ಮನಸೋ ಇಚ್ಛೆ ಬೇಯಿಸಿ ಬೇಯಿಸಿ ಆಚೆಗೆ ಸುರೀತೀಯಾ,’ ಎಂದು ನಿರಂತರ ದೂರುತ್ತಿದ್ದರು.
ಎಂತಹ ಗಂಭೀರ ಪರಿಸ್ಥಿತಿಯಾಗಿದ್ದರೂ ದಮಯಂತಿ ಹೆಸರಿಗೆ ಬರುತ್ತಿದ್ದ ಕಾಗದ ಪತ್ರಗಳನ್ನು ಅವರತ್ತೆ ಕೊಡುತ್ತಿರಲಿಲ್ಲ ಬಚ್ಚಿಡುತ್ತಿದ್ದರು. ಅವಳ ಗೆಳತಿಯರು ಯಾರಾದರೂ ಫೋನ್ ಮಾಡಿದರೆ ಕದ್ದು ಕೇಳಿಸಿಕೊಳ್ಳುವ ಕೆಟ್ಟ ಬುದ್ಧಿ ತೋರುತ್ತಿದ್ದರು. ಅಪರೂಪಕ್ಕೆ ಬರುತ್ತಿದ್ದ ಮಾವ, ಒಗೆದ ಬಟ್ಟೆಗಳನ್ನು ಒಣಗಿಸಲು ಬರುತ್ತಿದ್ದ ದಮಯಂತಿಯನ್ನು ಕಳ್ಳನ ಹಾಗೆ ಇಣುಕಿ ನೋಡುತ್ತಿದ್ದರು. ಮಗ ಬಂದ ಕೂಡಲೇ ಅವನ ಕಿವಿ ಹಿಂಡಿ ಒಂದಕ್ಕೆರಡು ದೂರು ಹೇಳಿ, “ಹೋಗಲಿ ಬಿಡು ಮಾತಾಡೋದ್ಯಾಕೆ ಮಾತಾಡೋದ್ಯಾಕೆ…..” ಎನ್ನುತ್ತಿದ್ದರು.
ಮೊದಲೇ ನೊಂದ ದಮಯಂತಿಯನ್ನು ಸಂತೈಸುವ ಬದಲು ಅತ್ತೆ ಮೊದಲ ಸೊಸೆಯನ್ನೇ ಬಹಳವಾಗಿ ಹೊಗಳುತ್ತಿದ್ದರು. ಮಗ ಬರುವವರೆಗೆ ಯಾವ ದಮ್ಮು, ಕೆಮ್ಮು ಇರದ ಆಕೆ ಮಗ ಬಂದ ನಂತರ ಕೆಮ್ಮಿ ಕೆಮ್ಮಿ ಕೀರಲು ಧ್ವನಿಯಲ್ಲಿ ಮಾತನಾಡಿ ಅನುಕಂಪ ಗಿಟ್ಟಿಸಿಕೊಳ್ಳುತ್ತಿದ್ದರು.
ಸೊಸೆಯೊಂದಿಗೆ ಚೆನ್ನಾಗಿಯೇ ಇರುತ್ತಿದ್ದ ಅತ್ತೆ ಆಚೀಚೆಯವರ ಬಳಿ, “ಇವಳಿಗೆ ಮನೆಕೆಲಸವೇ ಮಾಡಲು ಬರಲ್ಲ. ನನಗೂ ಮಾಡಿ ಮಾಡಿ ಸಾಕಾಗುತ್ತೆ,” ಎಂದು ಇಲ್ಲ ಸಲ್ಲದ ದೂರು ಹೇಳಿ ನೆರೆಹೊರೆಯವರಲ್ಲಿಯೂ ಕೆಟ್ಟ ಅಭಿಪ್ರಾಯ ಬರುವಂತೆ ಮಾಡಿಟ್ಟಿದ್ದರು. ಭರ್ಜರಿ ಹೆಂಗಸು, `ಹಸಿವಿಲ್ಲ…. ಹಸಿವಿಲ್ಲ…’ ಎಂದು ತಟ್ಟೆ ತುಂಬಾ, ಮೇಲೊಂದು ಸ್ವಲ್ಪ ಊಟ ಮಾಡಿ, `ಅಯ್ಯೋ… ನನಗೆ ಊಟವೇ ಸೇರಲ್ಲ…..” ಎನ್ನುತ್ತಿದ್ದರು.
ಇವೆಲ್ಲದರ ನಡುವೆ ದಮಯಂತಿಗೆ ಸಮಾಜ ಸುಧಾರಿಸುವುದಾ…. ಇಲ್ಲ ತನ್ನ ಮನೆಯನ್ನು ಸುಧಾರಿಸಿಕೊಂಡರೆ ಸಾಕಾ ಎನ್ನುವಂತಾಗಿ ಹೋಗಿತ್ತು. ಹಿಂದೆ ಹೋಗುವಂತಿಲ್ಲ ಮುಂದೆ ಹೋಗಲು ದಾರಿಗಳೇ ಗೋಚರಿಸುತ್ತಿರಲಿಲ್ಲ. ಕಡೆಗೊಂದು ದಿನ ಗಂಡನ ಕೊರಳಪಟ್ಟಿ ಹಿಡಿದು, “ನಾನು ನಿನ್ನ ಜೊತೆ ಇರಲಾರೆ ಬಿಟ್ಟು ಹೋಗುತ್ತೇನೆ…. ನನಗೇಕೆ ಮೋಸ ಮಾಡಿದೆ?” ಎಂದು ಕೇಳಿದಳು.
“ಹೋಗೋದಾದರೆ ಖಾಲಿ ಕೈಯಲ್ಲಿ ಹೊರಡು ನನ್ನಲ್ಲಿ ಬಿಡಿಗಾಸೂ ಇಲ್ಲ. ಕೋರ್ಟ್ ನಲ್ಲಿ ಜೀವನಾಂಶ ಕೇಳಿದರೂ ಸಿಗಲ್ಲ. ನೀನೇನು ಕಾನೂನು ರೀತಿಯಲ್ಲಿ ನನ್ನನ್ನು ಮದುವೆಯಾದಳೇ…..? ಎಂತಹ ಕಾನೂನು ಪಂಡಿತರು ಬಂದರೂ ಮೊದಲನೆ ಹೆಂಡತಿಗೇ ಪರಿಹಾರ ಸಿಗುವುದು,” ಎಂದು ಹೇಳಿದವನು ಸುಮ್ಮನಾಗದೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, “ಶಿಕ್ಷೆ ಕೊಡಿಸುವೆಯಾ ಕೊಡಿಸು. ಇಬ್ಬರ ಹೆಂಡಿರ ಕಾಟ ಇರುಳು ತಿಗಣೆ ಕಾಟ ಎನ್ನುವಂತಾಗಿದೆ ನನಗೆ. ಜೈಲಿನಲ್ಲಾದರೂ ಆರಾಮಾಗಿ ಇರುತ್ತೇನೆ,” ಎಂಬ ಭಂಡ ಮಾತನ್ನು ಹೇಳಿಬಿಟ್ಟ.
ಗಂಡನ ಮಾತುಗಳು ದಮಯಂತಿಗೆ ಆಘಾತ ತರಿಸುತ್ತಿದ್ದವು. ಮಾತಾಡಲು ಮಾತುಗಳೇ ಹೊರಡುತ್ತಿರಲಿಲ್ಲ. ಖಿನ್ನಳಾಗಿ ದಮಯಂತಿ ಹಾಗೆ ಉಳಿದುಬಿಡುತ್ತಿದ್ದಳು. ತಾನು ಜನ್ಮ ಕೊಟ್ಟ ಹೆಣ್ಣು ಮಗುವಿನ ಮುಖ ನೋಡಿಕೊಂಡು ಅದಕ್ಕೋಸ್ಕರವಾದರೂ ಬದುಕಬೇಕೆಂಬ ದೃಢಸಂಕಲ್ಪ ಮಾಡಿಕೊಂಡು ಮುಂದಿನ ಜೀವನದ ಬಗ್ಗೆ ಚಿಂತಿಸ ತೊಡಗಿದಳು.
ನಿರ್ವಾಹಕನೋ ಎರಡೂ ಕಡೆ ಸಂಸಾರ ನಿರ್ವಹಿಸಲಾರದೆ ಕುಡಿತದ ಚಟಕ್ಕೆ ಬಲಿಯಾಗಿದ್ದ. ದಮಯಂತಿಗೆ ಸಂಸಾರವೆಂದರೆ `ಉರುಳು’ ಎಂದೇ ಎನ್ನಿಸಿತ್ತು.
ಪ್ರತಿಭೆಗೆ ತಕ್ಕ ಪುರಸ್ಕಾರ ಎಂಬಂತೆ ಮುಳುಗುವ ಬದುಕಿಗೆ ಆಸರೆ ಸಿಕ್ಕಂತೆ ದಮಯಂತಿಗೆ ಸರ್ಕಾರಿ ಕೆಲಸ ಸಿಕ್ಕಿತು. ಎಲ್ಲಾ ಸರಿದಾರಿಗೆ ಬರುತ್ತಿದೆ ಎಂದು ನಿಟ್ಟುಸಿರು ಬಿಡುವಷ್ಟರಲ್ಲಿ ಗಂಡನ ಮೊದಲ ಹೆಂಡತಿ ಬಂದು, “ಮಕ್ಕಳನ್ನು ಬೇರೆ ಶಾಲೆಗೆ ಸೇರಿಸಬೇಕು ಸ್ಕೂಲ್ ಫೀಸ್ ಬಾಕಿ ಇದೆ. ಹಾಗಾಗಿ ರಿಸಲ್ಟ್ ಕೊಟ್ಟಿಲ್ಲ. ಏನಾದರೂ ಮಾಡು,” ಎಂದು ಅವಲತ್ತುಕೊಂಡಳು. ಆ ಮಕ್ಕಳೂ ತನ್ನವೇ ಎಂದು ದಮಯಂತಿ ಆ ಮಕ್ಕಳ ಜವಾಬ್ದಾರಿಯನ್ನು ತೆಗೆದುಕೊಂಡಳು.
ದಮಯಂತಿಯ ಗಂಡನಿಗೆ ಬಹಳ ಸಂತೋಷವಾಗಿತ್ತು. ಕಪ್ಪಗಿದ್ದರೂ ಕರೆಯೋ ಹಸು ಇರಬೇಕು ಎನ್ನುವ ಹಾಗೆ ಎರಡನೆಯವಳು ದುಡಿಯುತ್ತಾಳೆಂದು ಅವನು ಹಕ್ಕು ಚಲಾಯಿಸಲು ಆರಂಭಿಸಿದ. ದಮಯಂತಿಗೆ ಎಷ್ಟೇ ದುಡಿದರೂ ತನ್ನ ಮಗಳನ್ನು ಸರಿಯಾಗಿ ನೋಡಿಕೊಳ್ಳಲು ಆಗುತ್ತಿಲ್ಲವಲ್ಲ ಎಂಬ ಚಿಂತೆ ಅವಳನ್ನು ಕಾಡುತ್ತಲೇ ಇತ್ತು, `ಇದರಿಂದ ಹೇಗೆ ಹೊರಬರಲಿ….?’ ಎಂದು ಯೋಚಿಸಿ ಉಪಾಯ ಮಾಡಿ ಬಾಡಿಗೆ ಮನೆಯಲ್ಲಿ ಎಷ್ಟು ದಿನ ಇರಲು ಸಾಧ್ಯ ಎಂದು ಸ್ವಂತ ಮನೆ ಮಾಡಿಕೊಳ್ಳಲು ನಿರ್ಧರಿಸಿ, ಸಂಬಳದ ಹಣದಲ್ಲಿ ಎಷ್ಟು ಬೇಕೋ ಅಷ್ಟನ್ನು ಖರ್ಚಿಗೆ ಬರುವಂತೆ ಮಾಡಿಕೊಂಡು ಉಳಿದದ್ದನ್ನು ಲೋನ್ ಗೆ ಕಟ್ಟತೊಡಗಿದಳು.
ಗೃಹಪ್ರವೇಶಕ್ಕೆ ತನ್ನ ಕಡೆಯವರಿಗೆಲ್ಲಾ ಉಡುಗೊರೆ ಕೊಡಿಸಬೇಕೆಂದು ದಮಯಂತಿಯ ಗಂಡ ಹಠ ಹಿಡಿದ. ತನಗೊಂದು ಕಂಚಿ ಸೀರೆ ತೆಗೆದುಕೊಳ್ಳುವೆ ಎಂದಾಗ ನಿನಗೇಕೇ ಸೀರೆ ಎಂದುಬಿಟ್ಟ. ಗೃಹಪ್ರವೇಶವಲ್ಲಾ ಮುಗಿದು ಅವಳ ಕೈಯಲ್ಲಿ ಹಣ ಹರಿದಾಡುವುದು ಕಡಿಮೆಯಾಗುತ್ತಿದ್ದಂತೆ ಅವಳ ಗಂಡನ ಮೊದಲ ಹೆಂಡತಿಯ ಕಡೆಯವರೆಲ್ಲಾ ಮನೆ ಖಾಲಿ ಮಾಡಿದರು. ಗಂಡ ನಿವೃತ್ತಿ ಹಣವನ್ನು ದಮಯಂತಿಗೆ ಕೊಡಬಹುದೆಂದು ನೆನೆಸಿದ ಮೊದಲ ಹೆಂಡತಿ ಉಪಾಯ ಮಾಡಿ ಗಂಡನನ್ನು ತನ್ನ ಮನೆಗೆ ಕರೆದೊಯ್ದಳು. ದಮಯಂತಿಯ ಆದರ್ಶವೆಲ್ಲಾ ಸಂಪೂರ್ಣವಾಗಿ ಮುಗ್ಗರಿಸಿತು.
ಆದರೆ ದಮಯಂತಿ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳಲಿಲ್ಲ. ತನ್ನ ಮಗಳಿಗೆ ಎಜುಕೇಶನ್ ಲೋನ್ ಮಾಡಿಸಿ ಅವಳನ್ನು ಡಾಕ್ಟರ್ ಆಗಿಸಿದಳು. ಸತ್ಸಂಗ ಮಹಿಳಾ ಸಬಲೀಕರಣ, ದೌರ್ಜನ್ಯ ತಡೆ ಮೊದಲಾದ ವಿಷಯಗಳ ಕುರಿತು ವಿಶೇಷ ಅಧ್ಯಯನ ಮಾಡಿ ಉಚಿತ ಉಪನ್ಯಾಸ ಕೊಡಲು ಆರಂಭಿಸಿದಳು. ಪೂರ್ಣಾವಧಿಗೆ ತನ್ನನ್ನು ತಾನು ತೊಡಗಿಸಿಕೊಂಡ ದಮಯಂತಿ ಸ್ವಯಂ ನಿವೃತ್ತಿ ತೆಗೆದುಕೊಂಡು ಬಂದ ಹಣವನ್ನು ತನ್ನ ಸಾಮಾಜಿಕ ಹೋರಾಟಕ್ಕೆ ಉಪಯೋಗಿಸಿಕೊಂಡಳು. ಕಡೆಗೂ ತಾನು ನಂಬಿದ ಆದರ್ಶದ ಬೆನ್ನೇರಿ ಸಮಾಜ ಮುಖಿಯಾದಳು.