ಕಥೆ –  ಆಶಾ ರಾ‌ವ್ 

ಪ್ರಕಾಶ್‌ ಎರಡು ಬ್ಯಾಗ್‌ಗಳನ್ನೂ ಚೆಕ್‌ ಇನ್‌ ಮಾಡಿ ತನ್ನ ನವಿವಾಹಿತ ಪತ್ನಿ ಕೋಕಿಲಾಳ ಕೈ ಹಿಡಿದು ಅವಳನ್ನು ವಿಮಾನದ ಸೀಟ್‌ನಲ್ಲಿ ಕುಳ್ಳಿರಿಸಿದ. ಹನಿಮೂನ್‌ ಕಾಲವೆಂದರೆ ಅದೆಷ್ಟು ಮಧುರ! ಬೇಕಾದರೆ ಪತ್ನಿಯ ಪರ್ಸ್‌ನ್ನು ಪತಿರಾಯ ಕೈಯಲ್ಲಿ ಹಿಡಿದುಕೊಂಡು ನಡೆಯುತ್ತಾನೆ. ಪತ್ನಿಗೆ ಆಯಾಸವಾದರೆ ಅವಳನ್ನು ಎತ್ತಿಕೊಳ್ಳಲು ಮುಂದಾಗುತ್ತಾನೆ. ಅವಳ ಮುಖ ಸಪ್ಪೆಯಾಗಿದ್ದರೆ ಸಂತೋಷಗೊಳಿಸಲು ನಗೆಗಡಲನ್ನು ಹರಿಸಲು ಉತ್ಸುಕನಾಗುತ್ತಾನೆ.

ಹೊಸತಾಗಿ ಮದುವೆಯಾದವರು. ಆದ್ದರಿಂದ ತುಟಿಗಳ ಮೇಲೆ ಮಂದಹಾಸ, ಕಣ್ಣುಗಳಲ್ಲಿ ಕನಸುಗಳನ್ನು ತುಂಬಿಕೊಂಡು ಪರಸ್ಪರ ಕೈ ಹಿಡಿದು ವಿವಾಹ ಜೀವನವನ್ನು ಪ್ರಾರಂಭಿಸಲು ಹೊರಟಿದ್ದರು. ಹನಿಮೂನ್‌ ವೇಳೆಯಲ್ಲಿ ಪ್ರೀತಿಯಲ್ಲಿ ತೇಲಾಡುತ್ತಲೇ ಪರಸ್ಪರರ ಆಸೆ ಆಕಾಂಕ್ಷೆಗಳು, ಅಭ್ಯಾಸ ಆಚರಣೆಗಳು ಮತ್ತು ಕುಟುಂಬಗಳ ಸದಸ್ಯರ ಬಗ್ಗೆ ತಿಳಿದುಕೊಂಡು, ಭದ್ರವಾದ ದಾಂಪತ್ಯ ಜೀವನವನ್ನು ನಡೆಸುವ ವಚನ ತೆಗೆದುಕೊಂಡರು.

ಪ್ರಕಾಶ್‌ ಒಂದು ಸ್ವಂತ ಕಂಪನಿಯನ್ನು ನಡೆಸುತ್ತಿದ್ದ. ಅದಕ್ಕಾಗಿ ಹಗಲು ರಾತ್ರಿಯ ಪರಿವೆ ಇಲ್ಲದೆ ಶ್ರಮವಹಿಸಿ ದುಡಿಯುತ್ತಿದ್ದ. ದಿನದ ಅರ್ಧ ಭಾಗ ಉದ್ಯೋಗಕ್ಕೆ ಮೀಸಲಾದರೆ ಉಳಿದರ್ಧ ಭಾಗ ಪತ್ನಿ ಕೋಕಿಲಾ ಮತ್ತು ಮನೆಗೆ ಮೀಸಲಾಗಿತ್ತು. ಒಂದು ಸುಖೀ ಸಂಸಾರಕ್ಕೆ ಇದಕ್ಕಿಂತ ಮತ್ತೇನು ಬೇಕು?

ಕೋಕಿಲಾ ಕೂಡ ಮನೆಯ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದಳು.

“ಈವತ್ತು ಮತ್ತೆ ತಡವಾಗಿ ಬಂದೆಯಲ್ಲ ಪಾರ್ವತಿ, ಏನಾಯಿತು?” ತಡವಾಗಿ ಬಂದ ಮನೆಗೆಲಸದಾಕೆಯನ್ನು ಕೋಕಿಲಾ ಪ್ರಶ್ನಿಸಿದಳು.

“ಏನು  ಅಂತ ಹೇಳಲಿ, ನಿನ್ನೆ ರಾತ್ರಿ ನನ್ನ ಗಂಡ ಮತ್ತೆ ಕುಡಿದು ಬಂದು ನನಗೆ ಹೊಡೆದ. ತಾನು ಸಂಪಾದಿಸುವುದಿಲ್ಲ, ನನ್ನ ದುಡ್ಡನ್ನೂ ಬಿಡುವುದಿಲ್ಲ. ದುಡ್ಡು ಕಿತ್ತುಕೊಂಡು ಹೋಗಿ ಕುಡಿದು ಬರುತ್ತಾನೆ. ಬಂದು ನನಗೇ ಹೊಡೆಯುತ್ತಾನೆ,” ಪಾರ್ವತಿ ಅಳುದನಿಯಲ್ಲಿ ಮುಖ, ಮೈ ಮೇಲಿನ ಗುರುತುಗಳನ್ನು ತೋರಿಸಿದಳು.

“ನೀನು ಎಷ್ಟು ಅಂತ ಸಹಿಸುತ್ತೀಯೆ? ನೀವುಗಳು…. ಒಂದಿಷ್ಟು ವಿದ್ಯೆ ಕಲಿಯುವುದಿಲ್ಲ. ಕಲಿತಿದ್ದರೆ ಹೀಗೆ ಗಂಡನ ಮುಂದೆ ತಲೆ ಬಗ್ಗಿಸಿಕೊಂಡು ನಿಲ್ಲಬೇಕಾಗಿರಲಿಲ್ಲ. ಸಂಪಾದಿಸುವವಳು ನೀನೇ…. ಮತ್ತೆ ಏಟು ತಿನ್ನುವವಳೂ ನೀನೇ…..”

ಕೋಕಿಲಾ ಇಂದಿನ ಕಾಲದ ಮಹಿಳೆ. ಅಸಹಾಯ ಸ್ಥಿತಿಗೆ ಹೊಂದಾಣಿಕೆ ಮಾಡಿಕೊಂಡು ಬದುಕುವುದಕ್ಕಿಂತ ಅದಕ್ಕೊಂದು ಪರಿಹಾರ ಹುಡುಕುವ ಮನೋಭಾವದವಳು.

ಸಾಯಂಕಾಲ ಪ್ರಕಾಶ್‌ ಮನೆಗೆ ಬಂದಾಗ ಅವನಿಗೆ ಕಾಫಿ ಕೊಟ್ಟು ಸಿಹಿ ಸುದ್ದಿಯನ್ನು ಅವನ ಕಿವಿಯಲ್ಲಿ ಉಸುರಿದಳು.

“ನಿಜವಾಗಲೂ? ಓಹ್‌ ಕೋಕಿ, ನೀನು ನನ್ನ ಬಾಳಿಗೆ ಸುಂದರ ಬಣ್ಣವನ್ನು ತುಂಬುತ್ತಿದ್ದೀಯ. ನಮ್ಮ ಸಂಸಾರಕ್ಕೆ ಇನ್ನೊಬ್ಬ ಸದಸ್ಯನ ಆಗಮನವಾಗುತ್ತಿದೆ ಎಂದರೆ, ಅದೆಷ್ಟು ಸಂತೋಷವಾಗುತ್ತದೆ! ಈ ಸಿಹಿ ಸುದ್ದಿ ಹೇಳಿದುದಕ್ಕೆ ನಿನಗೇನು ಬೇಕು, ಹೇಳು.”

“ನನಗೆ ಬೇಕಾದದ್ದಲ್ಲೇ ನೀವು ಆಗಲೇ ಕೊಟ್ಟುಬಿಟ್ಟಿದ್ದೀರಿ,” ಕೋಕಿಲಾ ಸಹ ಖುಷಿಯಾಗಿದ್ದಳು.

ಈ ಸಂತಸದ ಸುದ್ದಿಯನ್ನು ಕೋಕಿಲಾಳ ತಂದೆ ತಾಯಿಯೊಡನೆ ಹಂಚಿಕೊಳ್ಳಲು ಪ್ರಕಾಶ್‌ ಅವಳನ್ನು ಅಲ್ಲೇ ಸ್ವಲ್ಪ ದೂರದಲ್ಲಿದ್ದ ಅವಳ ತವರು ಮನೆಗೆ ಕರೆದೊಯ್ದ.

ವಿಷಯ ತಿಳಿದ ಕೋಕಿಲಾಳ ತಾಯಿ ಸಡಗರದಿಂದ ಹಸುವಿನ ತುಪ್ಪ ಹಾಕಿ ಕೇಸರಿಭಾತ್‌ ತಯಾರಿಸಿದರು. ಮಗಳಿಗೆ ಒತ್ತಾಯ ಮಾಡಿ ತಿಂಡಿ ಮತ್ತು ಹಾಲು ಹಣ್ಣುಗಳನ್ನು ತಿನ್ನಿಸತೊಡಗಿದರು. ಆ ಕಡೆ ಅವಳ ತಂದೆ ತಾವು ಅಜ್ಜನಾಗುವೆನೆಂಬ ಸಂತೋಷವನ್ನು ಅಳಿಯನೊಡನೆ, ಸೆಲೆಬ್ರೇಟ್‌ ಮಾಡಲು 2 ಗ್ಲಾಸ್‌ಗಳಲ್ಲಿ ಮದ್ಯವನ್ನು ತಂದರು.

“ಅಪ್ಪಾ…. ಇದೇನಿದು?” ತಂದೆಯ ವರ್ತನೆ ಕೋಕಿಲಾಳಿಗೆ ಕೊಂಚವೂ ಇಷ್ಟವಾಗಲಿಲ್ಲ. ಅವಳಿಗೆ ಒಂದು ಬಗೆಯ ಚಿಂತೆಯೂ ಆಯಿತು.

ಆದರೆ ಪ್ರಕಾಶನಿಗೆ ಅದರಲ್ಲೇನು ತಪ್ಪು ಕಾಣಿಸಲಿಲ್ಲ, “ನೀನು ಹೇಳಿದ ಸುದ್ದಿಯಿಂದ ಖುಷಿಯಾಗಿ ಡ್ರಿಂಕ್ಸ್ ತಂದಿದ್ದಾರೆ. ಇದರಲ್ಲಿ ತಪ್ಪು ತಿಳಿಯುವುದು ಏನಿದೆ?” ಎಂದ.

ಕ್ರಮೇಣ ಇದು ಒಂದು ಪದ್ಧತಿಯಾಗುತ್ತಾ ಬಂದಿತು. ಕೋಕಿಲಾಳೊಡನೆ ಅವಳ ತವರಿಗೆ ಹೋದಾಗೆಲ್ಲ ಪ್ರಕಾಶ್‌ ಮತ್ತು ಅವಳ ತಂದೆ ಕುಡಿಯಲು ಕುಳಿತುಬಿಡುತ್ತಿದ್ದರು. ಹೀಗಾಗಿ ಕೋಕಿಲಾ ತವರಿಗೆ ಹೋಗಲು ಹಿಂದೇಟು ಹಾಕುತ್ತಿದ್ದಳು. ಆದರೆ ಅವಳ ಪರಿಸ್ಥಿತಿಯಲ್ಲಿ ಅಲ್ಲಿಗೆ ಹೋಗುವುದು ಅನಿವಾರ್ಯವಾಗಿತ್ತು.

ದಿನ ತುಂಬಿದ ಮೇಲೆ ಕೋಕಿಲಾ ಅವಳಿ ಮಕ್ಕಳಿಗೆ ಜನ್ಮ ನೀಡಿದಳು. ಪತಿಪತ್ನಿಯರ ಸಂತೋಷಕ್ಕೆ ಪಾರವಿರಲಿಲ್ಲ. ಎರಡು ಮಕ್ಕಳ ಸಂರಕ್ಷಣೆಯಲ್ಲಿ ಅವರಿಗೆ ಸಮಯ ಕಳೆದುದೇ ತಿಳಿಯದಂತಾಯಿತು. ಸಾಯಂಕಾಲ ಪ್ರಕಾಶ್‌ ಮನೆಗೆ ಬಂದಾಗ ಕೋಕಿಲಾ ಮಕ್ಕಳ ಬಾಲಕ್ರೀಡೆಗಳನ್ನು ವರ್ಣಿಸುತ್ತಿದ್ದಳು. ಇಬ್ಬರೂ ಒಟ್ಟಿಗೆ ಕುಳಿತು ಮಕ್ಕಳ ಆಟವನ್ನು ನೋಡಿ ಮೈಮರೆಯುತ್ತಿದ್ದರು.

ಒಂದು ಸಾಯಂಕಾಲ ಪ್ರಕಾಶ್‌ ಮನೆಗೆ ಬಂದಾಗ ಅವನ ಕಡೆಯಿಂದ ಬಂದ ವಾಸನೆ ಕೋಕಿಲಾಳನ್ನು ಬೆಚ್ಚುವಂತೆ ಮಾಡಿತು. “ಏನು,  ಕುಡಿದು ಬಂದಿದ್ದೀರಾ?”

“ಅಯ್ಯೋ….. ಮೋಹನ್‌ ಇದ್ದಾನಲ್ಲ, ಅವನಿಗೆ ಪ್ರಮೋಶನ್‌ ಆಯಿತು. ಅದಕ್ಕೇ ಪಾರ್ಟಿ ಕೊಟ್ಟ. ಸ್ನೇಹಿತರೆಲ್ಲ ಹಿಂಸೆ ಮಾಡಿದ್ದರಿಂದ ಸ್ವಲ್ಪ ಕುಡಿಯಬೇಕಾಯಿತು,” ಎನ್ನುತ್ತಾ ಪ್ರಕಾಶ್‌ ರೂಮಿನತ್ತ ನಡೆದ.1-2 ದಿನದ ಮಾತಾಗಿದ್ದರೆ ಕೋಕಿಲಾ ಚಿಂತಿಸುತ್ತಿರಲಿಲ್ಲವೇನೋ. ಆದರೆ ಇದು ನಿತ್ಯದ ಪರಿಪಾಠವಾದಾಗ ಅವಳಿಗೆ ಸಹಿಸಲಾಗಲಿಲ್ಲ.

“ಇದೇನು ದುರಭ್ಯಾಸ ಅಂಟಿಸಿಕೊಳ್ಳುತ್ತಾ ಇದ್ದೀರಿ. ಹೀಗಾದರೆ ಹೇಗೆ? ಒಂದು ದಿವಸ ಪಾರ್ಟಿ ಅನ್ನುತ್ತೀರಿ. ಇನ್ನೊಂದು ದಿವಸ ಎಂಗೇಜ್‌ಮೆಂಟ್‌. ಮತ್ತೊಂದು ದಿವಸ ಸ್ನೇಹಿತನ ದುಃಖವನ್ನು ಹಂಚಿಕೊಳ್ಳೋದಕ್ಕೆ ಅನ್ನುತ್ತೀರಿ, ನೀವು ದಾರಿ ತಪ್ಪಿ ನಡೆಯುತ್ತಿದ್ದೀರಿ ಅನ್ನುವುದು ನಿಮಗೆ ತಿಳಿಯುತ್ತಿಲ್ಲವೇನು? ನೀವು ಇಷ್ಟು ವರ್ಷ ಕಷ್ಟಪಟ್ಟು ಬೆಳೆಸಿದ ನಿಮ್ಮ ಬಿಸ್‌ನೆಸ್‌, ನಮ್ಮ ಸಂಸಾರ ಎಲ್ಲ ಹಾಳಾಗಿ ಹೋಗುತ್ತದೆ. ಮದ್ಯ ಯಾರನ್ನೂ ಉಳಿಸುವುದಿಲ್ಲ,” ಕೋಕಿಲಾಳಿಗೆ ಭವಿಷ್ಯದ ಚಿಂತೆ ಆವರಿಸಿತ್ತು.

“ನಿನಗೆ ಕೋಕಿಲಾ ಅಂತ ಹೆಸರಿಟ್ಟಿದ್ದಾರೆ. ಆದರೆ ನೀನು ಕಾಗೆ ಹಾಗೆ ಕಿರಿಚುತ್ತಿದ್ದೀಯ!” ಪ್ರಕಾಶ್‌ ರೇಗಿದ.

“ನೀವು ಪ್ರತಿ ದಿಸ ಕುಡಿದುಕೊಂಡು ಬರುತ್ತಿದ್ದರೂ ನಾನು ಸುಮ್ಮನೆ ಇರಬೇಕಾ?” ಕೋಕಿಲಾಳೂ ಸಿಟ್ಟಿನಿಂದ ಕೂಗಿದಳು.

ಪತ್ನಿಯನ್ನು ಶಾಂತಗೊಳಿಸುವ ಉಪಾಯವನ್ನು ಪ್ರಕಾಶ್‌ ಕಂಡುಕೊಂಡನು. ಮರುದಿನ ಬೆಳಗ್ಗೆ ಬೇಗನೆ ಎದ್ದು ಕಾಫಿ ತಯಾರಿಸಿ ಕೋಕಿಲಾಳನ್ನು ಎಬ್ಬಿಸಿದ. ಅವಳು ಕಣ್ಣು ತೆರೆಯುತ್ತಿದ್ದಂತೆ ಕೈ ಜೋಡಿಸಿ ಕ್ಷಮೆ ಯಾಚಿಸಿದ, “ನನ್ನನ್ನು ಕ್ಷಮಿಸು ಕೋಕಿ.  ನೋಡು ನಿನಗೆ ಬೇಸರ ಆಗುವುದಿದ್ದರೆ, ಇನ್ನು ಮುಂದೆ ನಾನು ಖಂಡಿತ ಕುಡಿಯುವುದಿಲ್ಲ. ಸರೀನಾ?”

ಪ್ರಕಾಶ್‌ ಮದ್ಯಪಾನ ಮಾಡದಿರಲು ನಿಜವಾಗಲೂ ನಿಶ್ಚಯಿಸಿ ಅದಕ್ಕಾಗಿ ಎಲ್ಲ ಪ್ರಯತ್ನವನ್ನೂ ಮಾಡತೊಡಗಿದ. ಪಾರ್ಟಿ ಮಾಡುವ ಗೆಳೆಯರ ಸಹವಾಸವನ್ನು ದೂರ ಮಾಡಿದ. ಅವರಿಂದ ಫೋನ್‌ ಕರೆ ಬಂದರೆ, ಏನಾದರೊಂದು ಕಾರಣ ಹೇಳುತ್ತಿದ್ದ. ಅವನ ಚಟ ದೂರವಾಯಿತೆಂದು ಕೋಕಿಲಾಳಿಗೆ ಬಹಳ ಸಂತೋಷಾಯಿತು.

ಇದಾಗಿ 1 ತಿಂಗಳೂ ಕಳೆದಿರಲಿಲ್ಲ. ಅಷ್ಟರಲ್ಲಿ ಅಮೆರಿಕಾದಲ್ಲಿದ್ದ ಅವನ ಚಿಕ್ಕಪ್ಪ ಮನೆಗೆ ಬಂದರು. ಅವರು ಬೆಲೆಬಾಳುವ ವಿಸ್ಕಿ ಬಾಟಲ್‌ಗಳನ್ನು ತಮ್ಮೊಡನೆ ತಂದಿದ್ದರು. ಚಟವನ್ನು ದೂರ ಮಾಡಲು ಪ್ರಯಾಸಪಡುವವರ ಮುಂದೆ ಅದರ ಭಂಡಾರವನ್ನೇ ಇಟ್ಟರೆ ಏನಾದೀತು? ಪ್ರಕಾಶ್‌ ಒಮ್ಮೆಗೇ ಮುನ್ನುಗ್ಗಲಿಲ್ಲ.

“ಚಿಕ್ಕಪ್ಪ, ಇದನ್ನು ಕುಡಿದರೆ ನನ್ನ ಆರೋಗ್ಯ ಸರಿ ಇರುವುದಿಲ್ಲ. ಅದಕ್ಕೇ ನಾನು ಬಿಟ್ಟುಬಿಟ್ಟಿದ್ದೇನೆ,” ಪ್ರಕಾಶ್‌ ಚಿಕ್ಕಪ್ಪನಿಗೆ ಹೇಳಲು ಪ್ರಯತ್ನಿಸಿದ.

ಆದರೆ ಅವನ ಚಿಕ್ಕಪ್ಪ ಕಿವಿಗೊಡಲೇ ಇಲ್ಲ, “ನೀನು, ಯಾವುದೋ ಅಗ್ಗದ ಮದ್ಯ ಕುಡಿದಿದ್ದೀ, ಅದಕ್ಕೇ ಆರೋಗ್ಯ ಕೆಟ್ಟಿದೆ. ಈ ಬೆಲೆ ಬಾಳುವ ಡ್ರಿಂಕ್‌ ಕುಡಿದು ನೋಡು. ನಾವು ಅಮೆರಿಕಾದಲ್ಲಿ ಪ್ರತಿದಿನ ಕುಡಿಯುತ್ತೇವೆ. ಏನೂ ಆಗುವುದಿಲ್ಲಪ್ಪ.”

ಬೆಲೆ ಹೆಚ್ಚಾಗಿರುವುದೇ ಆಗಲಿ, ಒಳ್ಳೆಯ ಕ್ವಾಲಿಟಿಯದೇ ಆಗಿರಲಿ, ಕೆಟ್ಟ ವಸ್ತುವಿನಿಂದ ಕೆಟ್ಟದ್ದೇ ಆಗುವುದು ಎಂಬ ವಿಷಯ ಚಿಕ್ಕಪ್ಪನ ಗಮನಕ್ಕೆ ಬರಲಿಲ್ಲ. ದಿನ ಒಂದೊಂದು ಬಾಟಲ್ ಗುಟುಕರಿಸಿದರೆ ನಷ್ಟವಾಗದೇ ಇದ್ದೀತೆ?

ಪ್ರಕಾಶನ ಅಭ್ಯಾಸ ಮತ್ತೆ ಪ್ರಾರಂಭವಾಯಿತು. ಅದನ್ನು ತಡೆಯಲು ಕೋಕಿಲಾ ಮಾಡಿದ ಅಡ್ಡಿ, ಪ್ರಾರ್ಥನೆ, ಜಗಳ ಯಾವುದೂ ಫಲಕಾರಿಯಾಗಲಿಲ್ಲ.

“ಏನು ನಿನ್ನ ಮಾತು? ಚಿಕ್ಕಪ್ಪನಿಗೆ ನೀವು ಒಬ್ಬರೇ ಕುಡಿಯಿರಿ ಅಂತ ಹೇಳಲೇನು? ನಾನು ಅವರಿಗೆ ಕಂಪನಿ ಕೊಡುತ್ತಾ ಇದ್ದೇನೆ. ನಿನಗೆ ಅಷ್ಟೂ ಅರ್ಥವಾಗುವುದಿಲ್ಲವೇನು? ಮನೆಗೆ ಬಂದ ಅತಿಥಿಗೆ ಅವಮಾನ ಮಾಡಿ ಕಳಿಸಬಾರದು…… ಅದನ್ನು ತಿಳಿದುಕೊ. ನೀನು ಚಿಂತೆ ಮಾಡಬೇಡ. ಚಿಕ್ಕಪ್ಪ ಹೋದ ಮೇಲೆ ನಾನು ಖಂಡಿತ ಕುಡಿಯುವುದಿಲ್ಲ. ಪ್ರಾಮಿಸ್‌….”

ಕೆಲವು ದಿನಗಳ ನಂತರ ಚಿಕ್ಕಪ್ಪ ಹೊರಟುಹೋದರು. ಆದರೆ ಪ್ರಕಾಶನ ಚಟ ಬಿಟ್ಟು ಹೋಗಲಿಲ್ಲ. ಅವನು ಕುಡಿದೇ ಮನೆಗೆ ಬರುತ್ತಿದ್ದ.

ಒಂದು ರಾತ್ರಿ ಕೋಕಿಲಾ ಬಾಗಿಲು ತೆರೆಯಲು ನಿರಾಕರಿಸಿದಳು, “ನೀವು ಕೊಟ್ಟ ಮಾತಿಗೆ ತಪ್ಪುತ್ತೀದ್ದೀರಿ. ಇನ್ನು ಮುಂದೆ ನೀವು ಕುಡಿದು ಬಂದರೆ ನಾನು ಬಾಗಿಲು ತೆರೆಯುವುದಿಲ್ಲ.”

“ಪ್ಲೀಸ್‌ ಕೋಕಿಲಾ ಇದೊಂದು ಸಲ ಬಿಟ್ಟುಬಿಡು. ಇನ್ನು ಮುಂದೆ ಹೊರಗೆ ಕುಡಿದು ಬರುವುದಿಲ್ಲ. ಮನೆಯಲ್ಲೇ ತೆಗೆದುಕೊಳ್ಳುತ್ತೇನೆ. ಇದಕ್ಕೆ ನಿನ್ನದೇನು ಅಡ್ಡಿ ಇಲ್ಲವಲ್ಲ…..”

“ಮನೆಯಲ್ಲಿ ಮಕ್ಕಳ ಮುಂದೆ ಕುಡಿಯುತ್ತೀರಾ?”

“ಸರಿ ಹಾಗಾದರೆ, ನಾನು ಹೊರಗೆ ಗ್ಯಾರೇಜ್‌ನಲ್ಲಿ ಕುಳಿತು ಕುಡಿಯುತ್ತೇನೆ.” ಬೆಳಗ್ಗೆ ಕ್ಷಮೆ ಕೇಳುವ ಪ್ರಕಾಶ್‌ ಸಾಯಂಕಾಲವಾದೊಡನೆ ಎಲ್ಲ ಮರೆತು ಬಾಟಲ್‌ನ ಮೊರೆ ಹೋಗುತ್ತಿದ್ದ.

ರಾತ್ರಿ ಮತ್ತೆ ತೂರಾಡುತ್ತಾ ಮನೆಗೆ ಬಂದ ಪತಿಯನ್ನು ಕಂಡು ಕೋಕಿಲಾ ಹೇಳಿದಳು, “ನಿಮಗೂ ಆ ಪಾರ್ವತಿಯ ಗಂಡನಿಗೂ ಇರುವ ವ್ಯತ್ಯಾಸವೆಂದರೆ, ಅವನು ಹೆಂಡತಿಯ ಹಣದಿಂದ ಕುಡಿದು ಬಂದು ಅವಳಿಗೇ ಹೊಡೆಯುತ್ತಾನೆ. ನೀವು ನಿಮ್ಮದೇ ಹಣದಲ್ಲಿ ಕುಡಿದು ಬಂದು ಸುಮ್ಮನೆ ಮಲಗುತ್ತೀರಿ. ಆದರೆ ಅವಳ ಸಂಸಾರದ ಹಾಗೆ ನನ್ನ ಸಂಸಾರ ಹಾಳಾಗುತ್ತಾ ಇದೆ…. ನಾಳೆಯಿಂದ ನೀವು ಕುಡಿದು ಬರುವಿರಾದರೆ ಈ ರೂಮ್ ಒಳಗೆ ಬರಬೇಡಿ,” ಕೋಕಿಲಾಳಿಗೆ ಸಿಟ್ಟು ನೆತ್ತಿಗೇರಿತ್ತು.

ಕೋಕಿಲಾಳ ಈ ಅಲ್ಟಿಮೇಟಮ್ ನಿಂದ ಇಬ್ಬರಿಗೂ ಜಗಳ ಹತ್ತಿತು. ಇಬ್ಬರೂ ಬೇರೆ ಬೇರೆ ಕೋಣೆಗಳಲ್ಲಿ ಮಲಗತೊಡಗಿದರು. ಕ್ರಮೇಣ ಅವರಲ್ಲಿ ಅಂತರ ಹೆಚ್ಚಿತು. ಪತಿಯನ್ನು ಸರಿದಾರಿಗೆ ತರಲಾರದೆ ಕೋಕಿಲಾ ಹತಾಶಳಾದಳು. ಕಡೆಗೆ ಸೋತು ಅವನಿಗೆ ತಿಳಿಹೇಳುವುದನ್ನು ಬಿಟ್ಟುಬಿಟ್ಟಳು.

ವರ್ಷಗಳು ಕಳೆದಂತೆ ಪ್ರಕಾಶನ ಆರೋಗ್ಯ ಕೆಡತೊಡಗಿತು. ಕೆಲಸಕ್ಕೆ ಹೋಗುವುದೂ ಕಷ್ಟವಾದಾಗ ಡಾಕ್ಟರ್‌ ಹತ್ತಿರ ಹೋದರು. ಆದರೆ ಅಷ್ಟರಲ್ಲಿ ಬಹಳ ತಡವಾಗಿಬಿಟ್ಟಿತ್ತು. ಟೆಸ್ಟ್ ಗಳನ್ನೆಲ್ಲ ಮಾಡಿಸಿದಾಗ ಅತಿಯಾದ ಮದ್ಯಪಾನದಿಂದಾಗಿ `ಸಿರೊಸಿಸ್‌ ಆಫ್‌ ಲಿವರ್‌’ ಕಾಯಿಲೆಗೆ ತುತ್ತಾಗಿರುವುದು ತಿಳಿದು ಬಂದಿತು. ಆಸ್ಪತ್ರೆಗೂ, ಮನೆಗೂ ಸುತ್ತಿ ಸುತ್ತಿ ಕೋಕಿಲಾ ಹೈರಾಣಾದಳು. ಆಗೆಲ್ಲ ಮಕ್ಕಳನ್ನು ತಾಯಿಯ ಮನೆಯಲ್ಲಿ ಅಥವಾ ಅಕ್ಕಪಕ್ಕದ ಮನೆಯಲ್ಲಿ ಬಿಡಬೇಕಾಗುತ್ತಿತ್ತು.

ನೋಡುನೋಡುತ್ತಿದ್ದಂತೆ ಆಸ್ಪತ್ರೆಯ ವೆಚ್ಚದ ಪಟ್ಟಿ 18 ಲಕ್ಷ ರೂಪಾಯಿ ಮುಟ್ಟಿತು. ಪ್ರಕಾಶ್‌ ಮತ್ತು ಕೋಕಿಲಾ ನಡುಗಿದರು. ಅಷ್ಟು ಹಣವನ್ನು ಹೊಂದಿಸುವುದು ಹೇಗೆ? ಅದಕ್ಕಾಗಿ ಮನೆಯನ್ನೇ ಮಾರಬೇಕಾಗಿ ಬಂದಿತು.

ಮನೆಯ ಕಾಗದ ಪತ್ರಗಳೊಂದಿಗೆ ಪ್ರಕಾಶ್‌ ಮತ್ತು ಕೋಕಿಲಾ ಅದಕ್ಕೆ ಸಂಬಂಧಪಟ್ಟ ಆಫೀಸಿಗೆ ಹೋಗುತ್ತಿದ್ದರು. ಪತಿಯ ಕ್ಯಾನ್ಸರ್‌ ಕಾಯಿಲೆ, ಮನೆಯ ಮಾರಾಟ, ಇವೆಲ್ಲದರಿಂದ ಕೋಕಿಲಾ ಕುಸಿದು ಹೋಗಿದ್ದಳು. ಅವಳ ಕಣ್ಣೀರು ನಿಲ್ಲುತ್ತಲೇ ಇರಲಿಲ್ಲ. ”ಇದೇನಾಗಿಬಿಟ್ಟಿತು ಪ್ರಕಾಶ್‌? ನಮ್ಮ ಸಂಸಾರ ಎಲ್ಲಿಂದ ಎಲ್ಲಿಗೆ ಮುಟ್ಟಿತು….. ನಿಮಗೆ ಸ್ವಲ್ಪ ತಿಳಿವಳಿಕೆ ಇದ್ದದ್ದರೆ……”

ಪತ್ನಿಯ ದುಃಖವನ್ನು ಕಂಡು ಪ್ರಕಾಶನೂ ಉದ್ವಿಗ್ನನಾದ. ಅವನ ಕಣ್ಣಿನಲ್ಲಿಯೂ ನೀರು ತುಂಬಿತು. ಪತ್ನಿ, ಮಕ್ಕಳ ಬಗ್ಗೆ ಜವಾಬ್ದಾರಿಯಿಂದ ಇರಬೇಕಾಗಿತ್ತು ಎಂದುಕೊಂಡ. ಗಾಡಿ ನಡೆಸುತ್ತಿದ್ದ ಅವನು ಕಣ್ಣೀರನ್ನು ಒರೆಸಿಕೊಳ್ಳಲು ಸ್ವಲ್ಪ ಮುಖವನ್ನು ಬಾಗಿಸಿದನು. ಅಷ್ಟರಲ್ಲಿ ಇದ್ದಕ್ಕಿದ್ದಂತೆ ಎದುರಿಗೆ ರಭಸವಾಗಿ ಬಂದ ಟ್ರಕ್‌ ಒಂದು ಅವನ ಗಾಡಿಗೆ ಡಿಕ್ಕಿ ಹೊಡೆಯಿತು. ಪ್ರಕಾಶ್‌ ಮತ್ತು ಕೋಕಿಲಾ ಅಲ್ಲೇ ಸಾವನ್ನಪ್ಪಿದರು. ಅವರ ಚಿಕ್ಕ ಮಕ್ಕಳು ಅನಾಥರಾದರು. ಅವರ ಪಾಲನೆ ಪೋಷಣೆ ಮಾಡುವವರು ಯಾರು? ನಾವಿಕನೇ ದೋಣಿಯನ್ನು ಮುಳುಗಿಸತೊಡಗಿದರೆ, ಇನ್ನು ಆ ದೋಣಿಯ ಇತರೆ ಪ್ರಯಾಣಿಕರ ಬಾಳು ಮುಗಿದಂತೆಯೇ ಸರಿ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ