ಕಿರುತೆರೆಯ ಖ್ಯಾತ ನಟಿ ಎನಿಸಿದ್ದ ಪ್ರೇಕ್ಷಾಳನ್ನು ಅವಳ ತಾಯಿಯ ಲಿವಿಂಗ್ ಪಾರ್ಟ್ ನರ್ ಕೃಷ್ಣಾನಂದ ಹಿರಿತೆರೆಗೆ ಪರಿಚಯಿಸುವುದಾಗಿ ದುಷ್ಟ ಸಂಚು ಹೂಡಿದ್ದ. ಇದರಿಂದ ಪ್ರೇಕ್ಷಾ ಪಾರಾದದ್ದು ಹೇಗೆ……?
ರಾಜ್ಯದ ಪ್ರಸಿದ್ಧ ದೂರದರ್ಶನ ವಾಹಿನಿಗಳ ಧಾರಾವಾಹಿಗಳಲ್ಲಿ ನಾಯಕಿಯ ಪಾತ್ರಗಳನ್ನು ನಿರ್ವಹಿಸುತ್ತಿರುವಾಕೆ ಪ್ರೇಕ್ಷಾ. ಅಭಿನಯ ಕುಶಲತೆಯಿಂದ ಜನರ ಮನಗಳಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿರುವಾಕೆ. ಹೃದಯಸ್ಪರ್ಶಿ ಭಾವಾಭಿನಯದ ಜೊತೆಗೆ ತನ್ನ ಪ್ರಮಾಣಬದ್ಧ ಅಂಗಸೌಷ್ಠವದಿಂದ ಯುವ ಜನತೆಯ ಹೃದಯಗಳಲ್ಲಿ ಕಿಚ್ಚೆಬ್ಬಿಸಿರುವ ಇಪ್ಪತ್ತೈದರ ಹರೆಯದ ಯುವತಿ ಪ್ರೇಕ್ಷಾಳ ನೈಜ ಅಭಿನಯ, ಸೌಂದರ್ಯಕ್ಕೆ ಮಾರು ಹೋಗಿರುವ ಹಿರಿತೆರೆಯ ಒಬ್ಬಿಬ್ಬರು ನಿರ್ಮಾಪಕರು, ನಿರ್ದೇಶಕರು ಪ್ರೇಕ್ಷಾಳನ್ನು ಹಿರಿ ತೆರೆಗೆ ಪರಿಚಯಿಸಬೇಕೆಂಬ ಸುದ್ದಿ ಗಾಂಧಿನಗರದಲ್ಲಿ ಹರಿದಾಡುತ್ತಿತ್ತು. ಈ ಪ್ರೈಮ್ ನ್ಯೂಸ್, ಕಿರುತೆರೆಯಂತೆ ಹಿರಿತೆರೆಯಲ್ಲಿಯೂ ಪ್ರೇಕ್ಷಾ ಮಿಂಚುವುದಕ್ಕೆ ಬಹಳ ಕಾಲವೇನು ಬೇಕಾಗಲಿಕ್ಕಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ.
ಅಂದು ರವಿವಾರ. ಪ್ರೇಕ್ಷಾಳಿಗೆ ಶೂಟಿಂಗ್ ಇಲ್ಲದ್ದರಿಂದ ಮನೆಯಲ್ಲಿ ಹಾಯಾಗಿ ಸಮಯ ತಳ್ಳುತ್ತಿದ್ದಳು. ಅಮ್ಮ ಪಕ್ಕದ ಮನೆಗೆ ಯಾವುದೋ ಸಮಾರಂಭಕ್ಕೆ ಹೋಗಿದ್ದರಿಂದ ಏಕಾಂಗಿಯಾಗಿ ತನ್ನ ಐಷಾರಾಮಿ ಮಂಚದ ಹಾಸಿಗೆಯಲ್ಲಿ ಬೋರಾಗಿ ಮಲಗಿ ಶೃಂಗಾರ ಕಾವ್ಯದ ಪ್ರತೀಕದಂತಿದ್ದ ಯಾವುದೋ ಇಂಗ್ಲಿಷ್ ಸಿನಿಮಾ ನೋಡುವುದರಲ್ಲಿ ತಲ್ಲೀನಳಾಗಿದ್ದಳು. ಮೇಲೊಂದು ತೋಳಿಲ್ಲದ, ಲೋ ನೆಕ್ ನ ಬನಿಯನ್ ನಂಥಹ ಟಾಪ್ ನಲ್ಲಿ ಅವಳ ತುಂಬಿದೆದೆಯ ಬಹುಭಾಗ ಢಾಳಾಗಿ ಕಾಣುತ್ತಿತ್ತು. ಕೆಳಗೆ ತೊಡೆಯ ಮುಕ್ಕಾಲು ಭಾಗ ಕಾಣುವಂಥ ಹಾಫ್ ಪ್ಯಾಂಟ್. ಪ್ಯಾಂಟ್ ಎನ್ನುವುದಕ್ಕಿಂತ ಚಡ್ಡಿ ಅಂದರೆ ಸರಿಯೇನೋ? ಮಿನಿ ಡ್ರೆಸ್ ನಲ್ಲಿ ಅವಳ ನೈಜ ಅಂಗಸೌಷ್ಠವ ಹೊರಸೂಸುತ್ತಿತ್ತು. ಮನೆಯಲ್ಲಿ ಒಬ್ಬಳೇ ಇದ್ದಾಗ ಇಂಥಹ ಡ್ರೆಸ್ ಗಳನ್ನು ಧರಿಸುವ ವಾಡಿಕೆ ಮಾಡಿಕೊಂಡಿದ್ದಳು. ಸಿನಿಮಾದಲ್ಲಿನ ಪ್ರಣಯ ದೃಶ್ಯಗಳನ್ನು ತದೇಕಚಿತ್ತದಿಂದ ದೃಷ್ಟಿಸುತ್ತಿದ್ದ ಅವಳಿಗೆ ಅಮ್ಮನ ಸ್ನೇಹಿತ ರೂಮಿನಲ್ಲಿ ಎಂಟ್ರಿ ಹೊಡೆದಿದ್ದು ಗೊತ್ತಾಗಲೇ ಇಲ್ಲ. ಅಮ್ಮ ಇನ್ನೇನು ಬರುವ ಹೊತ್ತಾಗಿದ್ದರಿಂದ ಮುಂಬಾಗಿಲು ಮತ್ತು ತನ್ನ ರೂಮಿನ ಬಾಗಿಲನ್ನು ಜಸ್ಟ್ ಮುಂದಕ್ಕೆ ಮಾಡಿಕೊಂಡು ಸಿನಿಮಾದ ದೃಶ್ಯಗಳನ್ನು ಸವಿಯುವುದರಲ್ಲಿ ಮೈ ಮರೆತಿದ್ದಳು.
“ವಾಹ್, ರಿಯಲಿ ಬ್ಯೂಟಿಫುಲ್,” ಎಂಬ ಉದ್ಗಾರದ ಮಾತುಗಳು ಪ್ರೇಕ್ಷಾಳ ಕಿವಿಗೆ ಅಪ್ಪಳಿಸಿದಾಗಲೇ ಪ್ರೇಕ್ಷಾ ಸಿನಿಮಾದಲ್ಲಿನ ತನ್ಮಯತೆಯಿಂದ ಹೊರಬಂದಿದ್ದಳು. ಅಸಹನೆಯಿಂದ ಅಂಕಲ್ ಕೃಷ್ಣಾನಂದನವನ ಕಡೆಗೆ ದೃಷ್ಟಿ ಹರಿಸಿದ್ದಳು. ತುಂಡುಡುಗೆಯಲ್ಲಿ ಹೊರಸೂಸುತ್ತಿದ್ದ ಅವಳ ಯೌವನವನ್ನೇ ದಿಟ್ಟಿಸುತ್ತಾ ನಿಂತಿದ್ದ ಕೃಷ್ಣಾನಂದ, “ಪ್ರೇಕ್ಷಾ, ನಿಜವಾಗಿಯೂ ನೀನು ತುಂಬಾ ಬ್ಯೂಟಿಫುಲ್ ಗರ್ಲ್! ನೀನು ನೋಡುತ್ತಿರುವ ಇಂಗ್ಲಿಷ್ ಸಿನಿಮಾದ ಆ ಹೀರೋಯಿನ್ ನನ್ನು ನಿನ್ನ ಅಂದಚೆಂದದ ಮುಂದೆ ನಿವಾಳಿಸಿ ಒಗೆಯಬೇಕು. ರಿಯಲೀ ಮಾರ್ವಲಸ್ ಅಂಡ್ ಚಾರ್ಮಿಂಗ್. ಶಿಲಾಬಾಲಿಕೆಯಂಥಹ ರೂಪರಾಶಿ ನಿಂದು….” ಮತ್ತೊಮ್ಮೆ ಉಸುರಿದ್ದ. ಅವನ ಕಣ್ಣುಗಳು ಅವಳ ತುಂಬಿದ ದೇಹದ ಮೇಲೆಯೇ ಓಡಾಡುತ್ತಿದ್ದವು. ತಡಬಡಾಯಿಸಿ ಎದ್ದ ಪ್ರೇಕ್ಷಾ ಕೈಗೆ ಸಿಕ್ಕ ದೊಡ್ಡ ವೆಲ್ವೆಟ್ ಟವೆಲ್ ನಿಂದ ತನ್ನ ಮೈ ಮುಚ್ಚಿಕೊಳ್ಳುತ್ತಾ, “ಅಂಕಲ್ ರೂಮಿನ ಒಳಗೆ ಬರುವುದಕ್ಕಿಂತ ಮುಂಚೆ ಬಾಗಿಲು ತಟ್ಟಿ ಬರಬೇಕೆನ್ನುವ ಸೌಜನ್ಯ, ಶಿಷ್ಟಾಚಾರ ನಿಮ್ಮಲ್ಲೇಕಿಲ್ಲ? ನಿಮ್ಮ ನಡೆ ನನಗೆ ಸ್ವಲ್ಪವೂ ಇಷ್ಟವಿಲ್ಲ. ಹೊರಗೆ ಹಾಲಿನಲ್ಲಿ ಕುಳಿತುಕೊಳ್ಳಿ. ಅಮ್ಮ ಇನ್ನೇನು ಒಂದೆರಡು ನಿಮಿಷಗಳಲ್ಲಿ ಬರಬಹುದು.” ಪ್ರೇಕ್ಷಾಳ ಮಾತಿನಲ್ಲಿ ಸಹನೆ ಇರಲಿಲ್ಲ.
“ಪ್ರೇಕ್ಷಾ, ಈ ರೀತಿ ಮುಜುಗರ ಪಡುವ ಅವಶ್ಯಕತೆಯೇ ಇಲ್ಲ. ಈ ತುಂಡುಡುಗೆ, ಮೈ ಚಳಿಬಿಟ್ಟು ದೇಹದ ಸಿರಿ ತೆರೆದಿಡುವುದು ಈಗಿನ ನಾಯಕಿಯರಿಗೆ ಬೇಕಾದದ್ದೇ. ಇಲ್ದಿದ್ರೆ ಈ ಇಂಡಸ್ಟ್ರಿಯಲ್ಲಿ ಮುಂದೆ ಬರುವುದು ಕಷ್ಟದ ಮಾತು. ನನ್ನೆದುರೇ ನೀನು ಇಷ್ಟು ಸಂಕೋಚಪಟ್ರೆ ನಾಳೆ ಹಿರಿತೆರೆಯಲ್ಲಿ ಅದ್ಹೇಗೆ ಪಾತ್ರ ನಿರ್ವಹಿಸುವಿ? ಈ ಮಡಿವಂತಿಕೆ ಬಿಟ್ಟುಬಿಡು. ಈಗಿರುವ ನಿನ್ನುಡುಗೆಯಲ್ಲಿ ನಾನು ಕೆಲವೊಂದಿಷ್ಟು ಬೆಸ್ಟ್ ಸ್ನ್ಯಾಪ್ ಗಳನ್ನು ನನ್ನ ಮೊಬೈಲ್ ಕ್ಯಾಮರಾದಲ್ಲಿ ತೆಗೆದುಕೊಂಡು ನನಗೆ ಗೊತ್ತಿರುವ ನಿರ್ಮಾಪಕರಿಗೆ, ನಿರ್ದೇಶಕರಿಗೆ ತೋರಿಸಿ ನಿನಗೆ ಹಿರಿತೆರೆಯಲ್ಲಿ ಪಾತ್ರಗಳನ್ನು ನೀಡಲು ಶಿಫಾರಸ್ಸು ಮಾಡುವೆ. ಮೈಮೇಲೆ ಹಾಕಿಕೊಂಡಿರುವ ಟವೆಲ್ ತೆಗೆದುಬಿಡು,” ಎಂದು ಹೇಳುತ್ತಾ ಕೃಷ್ಣಾನಂದ ಅವಳ ಮೈಮೇಲಿದ್ದ ಟವೆಲ್ ಗೆ ಕೈ ಹಾಕಲು ಮುಂದಾದ.
ಕೃಷ್ಣಾನಂದನ ವರ್ತನೆಯಿಂದ ಮೊದಲೇ ಬೇಸರಗೊಂಡಿದ್ದ ಪ್ರೇಕ್ಷಾ, “ಅಂಕಲ್, ಸದ್ಯಕ್ಕೆ ನಾನು ಯಾವ ಫೋಟೋಕ್ಕೂ ಪೋಸ್ ಕೊಡಲು ಇಚ್ಛಿಸುವುದಿಲ್ಲ. ನನ್ನ ಯಾವುದೇ ಭಂಗಿಯ ಸ್ನ್ಯಾಪ್ ತೆಗೆಯಬೇಡಿರಿ. ಸದ್ಯಕ್ಕೆ ದಯವಿಟ್ಟು ನನ್ನ ರೂಮಿನಿಂದ ಹೊರಗೆ ಹೋಗಿ,” ಎಂದು ಹೇಳುತ್ತಾ ಪ್ರೇಕ್ಷಾ ಕೃಷ್ಣಾನಂದನನ್ನು ಒತ್ತಾಯಪೂರ್ವಕವಾಗಿ ತನ್ನ ರೂಮಿನಿಂದ ಹೊರಗೆ ಕಳುಹಿಸಿದಳು.
“ಹುಚ್ಚು ಹುಡುಗಿ. ನೀನಿನ್ನೂ ಕಸುಗಾಯಿ. ನಿನಗಿನ್ನೂ ಅನುಭವ ಸಾಲದು. ಗಾಳಿ ಬಂದಾಗ ತೂರಿಕೊಳ್ಳಬೇಕು. ಚಿತ್ರರಂಗದಲ್ಲಿ ನನ್ನಂತಹ ಪ್ರಭಾವಿ ವ್ಯಕ್ತಿ ಇರುವಾಗ ಅದನ್ನು ಸರಿಯಾಗಿ ಬಳಸಿಕೊಂಡರೆ ನೀನು ಆದಷ್ಟು ಬೇಗ ಈ ಇಂಡಸ್ಟ್ರಿಯಲ್ಲಿ ನೇಮ್, ಫೇಮ್, ಹಣ ಗಳಿಸಬಹುದು. ಇನ್ನೂ ಕಾಲ ಮಿಂಚಿಲ್ಲ…. ವಿಚಾರ ಮಾಡಿ ನೋಡು. ಇರಲಿ, ಇಂದು ನಿನಗೇಕೋ ಮೂಡಿಲ್ಲವೆಂದು ಅನಿಸುತ್ತಿದೆ. ಇನ್ನೊಂದು ದಿನ ಇದೇ ತರಹದ ಡ್ರೆಸ್ ನಲ್ಲಿ ಫೋಟೋಗೆ ಪೋಸ್ ಕೊಡು. ನಿನ್ನನ್ನು ಫೇಮಸ್ ತಾರೆಯನ್ನಾಗಿ ಮಾಡುವುದು ನನ್ನ ಜವಾಬ್ದಾರಿ ಮತ್ತು ಕರ್ತವ್ಯ,” ಎಂದು ಹೇಳುತ್ತಾ ಕೃಷ್ಣಾನಂದ ಒಲ್ಲದ ಮನಸ್ಸಿನಿಂದ ಪ್ರೇಕ್ಷಾಳ ರೂಮಿನಿಂದ ಕಾಲ್ತೆಗೆದಿದ್ದ. ತಕ್ಷಣ ಬಾಗಿಲಿನ ಬೋಲ್ಟನ್ನು ಭದ್ರಪಡಿಸಿದ ಪ್ರೇಕ್ಷಾ ಮೈ ಮೇಲಿದ್ದ ಟವೆಲ್ ನ್ನು ಕಿತ್ತೆಸೆದು ನಿಲುವುಗನ್ನಡಿ ಎದುರು ನಿಂತು ತನ್ನ ದೇಹಸಿರಿಯ ಸೌಂದರ್ಯೋಪಾಸನೆಗೆ ಮುಂದಾದಳು.
`ಈ ತುಂಡುಡುಗೆಯಲ್ಲಿ ನನ್ನ ಸೌಂದರ್ಯ ಇಣುಕುತ್ತಿರುವುದಂತೂ ನಿಜ. ನೋಡುಗರ ಮನ ಕೆಣಕುವುದೂ ನಿಜ. ಯಾರೂ ನನ್ನ ಜೊತೆಗಿಲ್ಲ ಎಂದು ನನ್ನದೇ ಆದ ಪ್ರೈವೆಸಿಯಲ್ಲಿ ಇಂಗ್ಲಿಷ್ ಸಿನಿಮಾರಾಧನೆ ಮಾಡುತ್ತಿದ್ದಾಗ ಈ ಮನುಷ್ಯ ಹೇಳದೇ ಕೇಳದೇ ನನ್ನ ರೂಮಿಗೆ ಬಂದು ರಸಭಂಗ ಮಾಡಬೇಕೇ…..? ಸಿನಿಮಾನದಲ್ಲಿನ ಹಾಟ್ ಹಾಟ್ ದೃಶ್ಯಗಳಿಂದ ನನ್ನ ಮೈ, ಮನಗಳಲ್ಲಿ ಕಾವೇರುತ್ತಿದ್ದುದಂತೂ ನಿಜ. ಬಾಗಿಲನ್ನು ಭದ್ರಪಡಿಸಿಕೊಳ್ಳದೇ ಈ ರೀತಿಯ ಡ್ರೆಸ್ ನಲ್ಲಿ ಇಂತಹ ಶೃಂಗಾರ ಕಾವ್ಯದ ಸಿನಿಮಾ ನೋಡುತ್ತಿದ್ದುದು ನನ್ನದೇ ತಪ್ಪು ಎನ್ನಬಹುದು. ನೀಲಿ ಚಿತ್ರದ ಕೆಲವು ದೃಶ್ಯಗಳೂ ಈ ಚಿತ್ರದಲ್ಲಿ ನುಸುಳಿವೆ. ಹಸಿ, ಬಿಸಿ ಸೆಕ್ಸ್ ನ ಹಲವಾರು ದೃಶ್ಯಗಳು ಇವೆ. ಈ ಅಂಕಲ್ ಗೆ ಸ್ವಲ್ಪವಾದರೂ ವಿವೇಚನೆ ಬೇಡವೇ? ಇಂದಿನ ಇವನ ಕಣ್ಣುಗಳಲ್ಲಿದ್ದ ಆಸೆ, ವಾಂಛೆ ನೋಡಿದರೆ ಏಕೋ ಏನೋ ಇವನ ಮೇಲೆ ನನಗೆ ಅನುಮಾನ ಬರುತ್ತಿದೆ.`
ನಿಲುವುಗನ್ನಡಿ ಬಿಂಬಿಸುತ್ತಿರುವ ನನ್ನ ಸೌಂದರ್ಯವನ್ನು ಕಂಡು ನನಗೇ ಹೇಗೇಗೋ ಆಗುತ್ತಿದೆ. ಇನ್ನು ಪಡ್ಡೆ ಹೈಕಳುಗಳ ಗತಿಯೇನು? ನಡುವಯಸ್ಸಿನ ಅಂಕಲ್ ಕೃಷ್ಣಾನಂದ ಸಹ ಒಳಗೊಳಗೇ ಕರುಬಿರಬೇಕು. ಸಾಕು, ಸಾಕು ಈ ಡ್ರೆಸ್,’ ಎಂದು ತನಗೆ ತಾನೇ ಹೇಳಿಕೊಳ್ಳುತ್ತಾ ಮೈ ಮೇಲಿದ್ದ ತುಂಡುಡುಗೆಯನ್ನು ಕಿತ್ತು ಬಿಸಾಕಿ ಜೀನ್ಸ್ ಪ್ಯಾಂಟ್ ಮೇಲೆ ತೋಳಿಲ್ಲದ ಟೈಟ್ ಟೀಶರ್ಟ್ ಧರಿಸಿ ವಿಶಾಲವಾದ ಹೋಮ್ ಥಿಯೇಟರ್ ನ ಪರದೆಯ ಮೇಲೆ ವಿಜೃಂಭಿಸುತ್ತಿದ್ದ ಸಿನಿಮಾವನ್ನು ಆಫ್ ಮಾಡಿ ಬಾಗಿಲು ತೆರೆದು ಬರುತ್ತಿದ್ದಂತೆ, ಮುಖ್ಯ ದ್ವಾರದಿಂದ ಅಮ್ಮ ಬರುತ್ತಿದ್ದುದು ಪ್ರೇಕ್ಷಾಳಿಗೆ ಕಂಡಾಗ, ಅವಳ ಹೃದಯ ನಿರಾಳವಾಗಿ ಬಡಿದುಕೊಳ್ಳತೊಡಗಿತು.
“ಏನೇ ಲಾವಣ್ಯಾ, ನಿನ್ನ ಮಗಳು ತುಂಬಾ ಮಡಿವಂತಿಕೆ ತೋರಿಸುತ್ತಿದ್ದಾಳೆ. ಇದೇ ರೀತಿ ಇವಳು ಮಡಿವಂತಿಕೆಯನ್ನು ಪ್ರದರ್ಶಿಸಿದರೆ ಹಿರಿತೆರೆಯ ನಟಿಯಾಗುವುದು ಕಷ್ಟದ ಮಾತೇ. ನೀನಾದರೂ ತಿಳಿಸಿ ಹೇಳು. ಈ ಮೊದಲಿನ ಡ್ರೆಸ್ ನಲ್ಲಿ ಪ್ರೇಕ್ಷಾಳ ಸೌಂದರ್ಯ ಸರಿಯಾಗಿ ಅನಾವರಣಗೊಂಡಿತ್ತು. ಆ ಡ್ರೆಸ್ಸಿನಲ್ಲಿನ ಒಂದೆರಡು ಸ್ನ್ಯಾಪ್ ತೆಗೆದುಕೊಂಡು ಸಿನಿಮಾ ಜಗತ್ತಿನ ದಿಗ್ಗಜರಿಗೆ ತೋರಿಸಿ ಇವಳಿಗೆ ಚಾನ್ಸ್ ಕೊಡಲು ನಾನು ರೆಕಮಂಡ್ಮಾಡಬೇಕೆಂದಿದ್ದೆ. ಆದರೆ ಇವಳು ಫೋಟೋ ಕ್ಲಿಕ್ಕಿಸಲು ಅನುಮತಿಯೇ ಕೊಡಲಿಲ್ಲ,” ಕೃಷ್ಣಾನಂದ ಲಾವಣ್ಯಾಳ ಮುಂದೆ ಏನೇನೋ ಪ್ರಲಾಪಿಸಿದ.
“ಡೋಂಟ್ ವರಿ ಡಾರ್ಲಿಂಗ್. ಅವಳಿಗೆ ನಾನು ತಿಳಿಸಿ ಹೇಳುವೆ. ಬಿ ಕೂಲ್!” ಎನ್ನುತ್ತಾ ಕೃಷ್ಣಾನಂದನನ್ನು ಹಗ್ ಮಾಡಿ ಸಂತೈಸಿ ಸಂಭ್ರಮಿಸತೊಡಗಿದಳು ಲಾವಣ್ಯಾ. ತನಗೆ ಇನ್ನು ಅಲ್ಲಿ ಕೆಲಸವಿಲ್ಲವೆಂದು ಅರಿತ ಪ್ರೇಕ್ಷಾ ಅಲ್ಲಿಂದ ಕಾಲ್ತೆಗೆದು ತನ್ನ ರೂಮಿನ ಕಡೆಗೆ ಹೆಜ್ಜೆ ಹಾಕತೊಡಗಿದಾಗ, “ಪ್ರೇಕ್ಷಾ, ಕೊಂಚ ನಿಲ್ಲಮ್ಮಾ…. ಅಂಕಲ್ ಹೇಳುತ್ತಿರುವುದು ನಿನ್ನ ಏಳಿಗೆಗಾಗಿಯೇ ಎಂದು ನಿನಗೆ ಅನಿಸುತ್ತಿಲ್ಲವೇ?” ಎಂದು ಲಾವಣ್ಯಾ ಹೇಳಿದಾಗ ಅವಳ ಮಾತಿನಿಂದ ಉತ್ತೇಜಿತನಾದ ಕೃಷ್ಣಾನಂದ ತನ್ನ ಮಾತುಗಳನ್ನು ಮುಂದುವರಿಸಿದ.
“ಈ ಮಡಿವಂತಿಕೆ ಇದ್ದರೆ ಈ ಕಾಲದಲ್ಲಿ ನಟಿಯರು ಸ್ಟಾರ್ ಆಗುವುದೇ ಇಲ್ಲ. ನೀನೂ ಗಮನಿಸುತ್ತಿರಬಹುದು. ಫೇಮಸ್ ನಟಿಯರೂ ಸಹ ಈಗ ಐಟಂ ಸಾಂಗ್ ಗಳಲ್ಲಿ ಮಿಂಚುತ್ತಿದ್ದಾರೆ. ಕೆಲವರಂತೂ ಸಾಲು ಸಾಲಾಗಿ ಬರೀ ಐಟಂ ಸಾಂಗ್ ಗಳಲ್ಲಷ್ಟೇ ಭಾಗವಹಿಸಿ ಸಿನಿಮಾ ಎಂಬ ಮಾಯಾ ನಗರಿಯಲ್ಲಿ ತಮ್ಮ ವರ್ಚಸ್ಸನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ. ಇದು ಕಟು ಸತ್ಯ ತಾನೇ? ಸಿನಿಮಾರಂಗದಲ್ಲಿ ನೀನಿನ್ನೂ ಕಸುಗಾಯಿ. ಕಿರುತೆರೆಯಲ್ಲಿ ನಿನಗಿರುವ ಹೆಸರು ಹಿರಿತೆರೆಯಲ್ಲೂ ಸಿಗುತ್ತದೆ ಎಂದು ಕನಸು ಕಾಣಬೇಡ. ಕಿರಿತೆರೆನೇ ಬೇರೆ, ಹಿರಿತೆರೆನೇ ಬೇರೆ.
“ಸೂಪರ್ ಸೆಕ್ಸೀ ಇಮೇಜು ಇರುವಂಥ ಕೆಲವು ನಟಿಯರಿಗೂ ಹಿರಿತೆರೆಯಲ್ಲಿ ಕಾಲೂರಲು ಆಗಿಲ್ಲ. ಚಿತ್ರರಂಗದಲ್ಲಿ ಕೆಲವೊಬ್ಬರು ಅಂಥ ರೂಪಸಿಯರನ್ನು ತಮ್ಮ ಪರ್ಸನಲ್ ಸೆಕ್ಸ್ ಗಾಗಿ ಬಳಸಿಕೊಂಡು ಉಂಡ ಎಲೆಗಳನ್ನು ಬಿಸಾಡುವಂತೆ ಬಿಸಾಡಿ ಬಿಡುತ್ತಾರೆ. ಗ್ಲಾಮರ್ ಎಕ್ಸ್ ಪೋಜ್ ಮಾಡದಿದ್ದರೆ ಅಂಥಹವರಿಗೆ ಚಿತ್ರರಂಗದಲ್ಲಿ ಉಳಿಗಾಲವಿಲ್ಲ. ಎದೆ, ಸಪೂರ ತೋಳುಗಳು, ಸೊಂಟ, ಹೊಕ್ಕಳು, ತೋರ ತೊಡೆಗಳೇ ಬಂಡವಾಳಗಳು ಈಗಿನ ಹೀರೋಯಿನ್ ಗಳಿಗೆ ಎಂಬುದು ನಿನಗೆ ತಿಳಿದಿರಲಿ. ಇವೆಲ್ಲವುಗಳನ್ನು ಬಹಿರಂಗ ಪಡಿಸಲು ಹಿಂಜರಿದರೆ ಅಂಥಹವರಿಗೆ ಭವಿಷ್ಯದ ಬಾಗಿಲು ತನ್ನಿಂದ ತಾನೇ ಬಂದಾಗಿಬಿಡುತ್ತದೆ. ಅಂಥಹವರೆಲ್ಲಾ ಅನಾಘ್ರಾಣಿತ ಕುಸುಮಗಳಂತೆ ಹಾಗೇ ಉದುರಿ ಹೋಗುತ್ತಾರೆ. ನಿನ್ನಲ್ಲಿ ಅಭಿನಯ, ಗ್ಲಾಮರ್ ಎಲ್ಲಾ ಮೇಳೈಸಿವೆ. ದೇವಲೋಕದಿಂದ ಇಳಿದು ಬಂದಿರುವ ರಂಭೆ ನೀನು! ಪ್ರೇಕ್ಷಾ, ನಿನ್ನ ಭವಿಷ್ಯದ ಮುಂದಿನ ನಡೆಯ ಬಗ್ಗೆ ಸರಿಯಾದ ದಿಶೆಯಲ್ಲಿ ನಿರ್ಧಾರ ತೆಗೆದುಕೋ. ನಿನ್ನ ಒಳ್ಳೆಯದಕ್ಕೇ ಹೇಳುತ್ತಿರುವೆ ಎಂಬುದು ನಿನಗೆ ನೆನಪಿರಲಿ,” ಎಂದು ಕೃಷ್ಣಾನಂದ ಸಣ್ಣ ಭಾಷಣವನ್ನೇ ಬಿಗಿದ.
ಪ್ರೇಕ್ಷಾ ಕೃಷ್ಣಾನಂದನ ಮಾತುಗಳನ್ನು ಗಮನವಿಟ್ಟು ಕೇಳಿಸಿಕೊಳ್ಳುತ್ತಿರುವವಳಂತೆ ನಟಿಸುತ್ತಿದ್ದಳಾದರೂ ಸಂಪೂರ್ಣ ಲಕ್ಷ್ಯವಿರಲಿಲ್ಲ. ವಿಚಾರ ಮಂಥನ ಅವಳ ಮನದಲ್ಲಿ ನಡೆದಿತ್ತು. ಎಲ್ಲಾ ಮಾತುಗಳನ್ನು ಕೇಳಿಸಿಕೊಂಡ ಆಕೆ, “ಅಂಕಲ್, ನಿಮ್ಮ ಹಿತವಚನಗಳನ್ನು ನಾನೆಂದಾದರೂ ತೆಗೆದು ಹಾಕಿರುವೆನೇ? ಇವತ್ತೇನೋ ನನ್ನ ಮನಸ್ಸು ಸರಿಯಿಲ್ಲ. ನೀವು ಹೇಳಿರುವ ಮಾತುಗಳ ಬಗ್ಗೆ ಯೋಚಿಸಿ ಸೂಕ್ತ ಸಮಯದಲ್ಲಿ ನಿಮ್ಮ ಸಹಾಯ ಹಸ್ತವನ್ನು ಪಡೆದೇ ಪಡೆಯುವೆ. ಓಕೇನಾ?” ಎಂದು ಕೃಷ್ಣಾನಂದನಿಗೆ ಹೇಳುತ್ತಾ, ತನ್ನ ಅಮ್ಮನ ಕಡೆಗೆ ತಿರುಗಿ, “ನೀನೆಷ್ಟಾದರೂ ನನ್ನ ಸ್ವೀಟ್ ಮಮ್ಮಿ ಅಲ್ವಾ…..?” ಎಂದು ಪೂಸಿ ಹೊಡೆಯುತ್ತಾ ತಾಯಿಯನ್ನು ಒಂದು ಕ್ಷಣ ಹಗ್ ಮಾಡಿ ಕೆನ್ನೆ, ಹಣೆಗೆ ಸವಿ ಮುತ್ತುಗಳನ್ನಿಟ್ಟು ಅಲ್ಲಿಂದ ತನ್ನ ರೂಮಿಗೆ ಹೆಜ್ಜೆ ಹಾಕಿ ಬಾಗಿಲು ಹಾಕಿಕೊಂಡಳು. ಅವಳಿಗೆ ಏಕಾಂತ ಬೇಕಾಗಿತ್ತು.
ಮರುದಿನ ಪ್ರಮುಖ ದೂರದರ್ಶನ ವಾಹಿನಿಯ ಧಾರಾವಾಹಿಯ ಶೂಟಿಂಗ್ ಇತ್ತು. ಪ್ರೇಕ್ಷಾಳ ಆತ್ಮೀಯ ಗೆಳತಿ ಶ್ರದ್ಧಾಳಿಗೂ ಆ ಧಾರಾವಾಹಿಯಲ್ಲಿ ಮುಖ್ಯ ಪಾತ್ರವೊಂದಿತ್ತು. ಪ್ರೇಕ್ಷಾಳನ್ನು ಕಾಣುತ್ತಲೇ ಶ್ರದ್ಧಾ ಖುಷಿಯಿಂದ ಗೆಳತಿಯನ್ನು ತಬ್ಬಿ ಹಿಡಿದುಕೊಂಡು, “ಏನು ಅಮ್ಮಾ…. ಅವರು ಹಿರಿತೆರೆಗೆ ಹಾರುವವರಿದ್ದಾರಂತೆ? ಹಾಗಂತ ಇಂದಿನ ದಿನಪತ್ರಿಕೆಯೊಂದರ ಸಪ್ಲಿಮೆಂಟರಿಯಲ್ಲಿ ಬಂದಿದೆ. ನಿನ್ನಂಥಹ ಪ್ರತಿಭಾವಂತ, ರತಿವರ್ಚಸ್ಸಿನ ಹುಡುಗಿಗೆ ಅವಕಾಶ ಸಿಗದೇ ಇರುತ್ತದೆಯೇ? ಎನಿವೇ ಆಲ್ ದಿ ಬೆಸ್ಟ್,” ಎಂದು ಹೇಳಿದಾಗ ಅಚ್ಚರಿಯಾಗುವ ಕ್ಷಣ ಪ್ರೇಕ್ಷಾಳಿಗೆ.
“ಶ್ರದ್ಧಾ…. ನೀನು ಹೇಳಿದ್ದು ನನಗೆ ಅರ್ಥವಾಗಲಿಲ್ಲ…..?”
“ಅದೇ ಕಣಮ್ಮಾ…. ಕೃಷ್ಣಾನಂದ ಮತ್ತು ಚಿತ್ರರಂಗದಲ್ಲಿನ ಹಿರಿಯ ವ್ಯಕ್ತಿಯೊಬ್ಬರ ಪ್ರಯತ್ನದ ಫಲವಾಗಿ ಇಷ್ಟರಲ್ಲಿ ನಿನಗೆ ಹಿರಿತೆರೆಯಲ್ಲಿ ಛಾನ್ಸ್ ಸಿಗುವ ಸಾಧ್ಯತೆ ಇದೆ ಎಂಬ ಕೃಷ್ಣಾನಂದರ ಹೇಳಿಕೆ ಪತ್ರಿಕೆಯಲ್ಲಿ ಬಂದಿದೆ.”
“ಹೌದಾ….? ಇದೇನು ಹೊಸದಲ್ಲ ಬಿಡು. ಒಂದು ವರ್ಷದಿಂದ ಈ ಸುದ್ದಿ ಆಗಾಗ ಪತ್ರಿಕೆಯಲ್ಲಿ ಬರುತ್ತಲೇ ಇರುತ್ತದೆ. ಆದರೆ ಇದುವರೆಗೂ ಹಿರಿತೆರೆಗಾಗಿ ಯಾವ ಅವಕಾಶ ನನ್ನನ್ನು ಅರಸಿ ಬಂದಿಲ್ಲ. ಇದೆಲ್ಲಾ ಒಂದು ರೀತಿಯ ಗಿಮಿಕ್ ಅಷ್ಟೇ,” ಪ್ರೇಕ್ಷಾ ನಿನ್ನೆ ತನ್ನ ಮನೆಯಲ್ಲಿ ನಡೆದ ಮಾತುಕತೆಗಳ ಬಗ್ಗೆ ಶ್ರದ್ಧಾಳಿಗೆ ವಿವರಿಸಿದಳು.”
ಪ್ರೇಕ್ಷೀ, ಈ ಕೃಷ್ಣಾನಂದ ಮತ್ತು ನಿನ್ನ ಅಮ್ಮನಿಗೂ ಏನೇ ಸಂಬಂಧ?”
“ಶ್ರದ್ಧಾ…. ಅದೇ ನನಗಿನ್ನೂ ಗೊತ್ತಾಗುತ್ತಿಲ್ಲ ಕಣೆ. ತನ್ನ ಬೆಸ್ಟ್ ಫ್ರೆಂಡ್, ಹಿತೈಷಿ, ನನಗೆ ಅಪ್ಪ ಇದ್ದ ಹಾಗೆ ಎಂದು ಆಗಾಗ ಹೇಳುತ್ತಿರುತ್ತಾಳೆ.”
“ಅಂದರೆ ನಿನ್ನ ಅಮ್ಮ ಮತ್ತು ಅವರಲ್ಲಿ ಲಿವಿಂಗ್ ಟು ಗೆದರ್ ರಿಲೇಷನ್ ಶಿಪ್ ಇದೆಯಾ?” ಶ್ರದ್ಧಾ ಅನುಮಾನಿಸುತ್ತಾ ಕೇಳಿದಳು.
“ಇದು ನನಗೂ ಸರಿಯಾಗಿ ತಿಳಿಯುತ್ತಿಲ್ಲ. ಅನಿಸುತ್ತಿದೆ. ಇದರ ಬಗ್ಗೆ ಕೆದಕಿ ಕೇಳಿ ಅಮ್ಮನ ಮನಸ್ಸನ್ನು ನೋಯಿಸಲು ಇಚ್ಛಿಸುವುದಿಲ್ಲ ನಾನು. ಈ ಅಂಕಲ್ ನಮ್ಮ ಮನೆಗೆ ಬಂದಾಗ ಎಷ್ಟೋ ರಾತ್ರಿಗಳನ್ನು ಅಮ್ಮನ ಜೊತೆಗೆ ಅವಳ ರೂಮಿನಲ್ಲಿಯೇ ಕಳೆಯುತ್ತಾರೆ. ನನ್ನಪ್ಪನ ಬಗ್ಗೆ ನನಗೆ ಸರಿಯಾದ ಮಾಹಿತಿ ಇಲ್ಲ. ನಾನು ಹುಟ್ಟಿದ ವರ್ಷವೇ ನನ್ನಪ್ಪಾಜಿ ಅಪಘಾತವೊಂದರಲ್ಲಿ ತೀರಿಕೊಂಡರೆಂದು ಅಮ್ಮ ಹೇಳುತ್ತಿರುತ್ತಾಳೆ. ಅಪ್ಪ ತೀರಿ ಹೋದಾಗ ಅಮ್ಮ ಏರುಜ್ವನದಲ್ಲಿದ್ದಳಂತೆ. ಆಗ ಈ ಅಂಕಲ್ ರ ಪರಿಚಯವಾಯಿತಂತೆ. ಅಮ್ಮನ ರೂಪಸಿರಿಗೆ ಮಾರುಹೋಗಿದ್ದ ಇವರು ಅಮ್ಮನನ್ನು ಕಿರುತೆರೆಗೆ ಪರಿಚಯಿಸಿದರಂತೆ ನಿನಗೆ ಗೊತ್ತೇ ಇದೆ, ಅಮ್ಮನೂ ಕಿರುತೆರೆಯಲ್ಲಿ ಪಾತ್ರಗಳಿಗೆ ಜೀವ ತುಂಬುವ ಹೆಂಗಸು ಎಂದು. ಈಗ ನನ್ನನ್ನೂ ಕಿರುತೆರೆಗೆ ಪರಿಚಯಿಸಿದ್ದಾಳೆ. ಅಂಕಲ್ ಹಾಕಿದ ಗೆರೆಯನ್ನು ಅಮ್ಮ ದಾಟುವುದಿಲ್ಲ. ಅಮ್ಮನ ಸೌಂದರ್ಯಕ್ಕೆ ಅಂಕಲ್ ಫ್ಲಾಟ್ ಆಗಿದ್ದಾರೆ. ಈ ನಲವತ್ತರ ಆಜುಬಾಜಿನ ವಯಸ್ಸಿನಲ್ಲಿಯೂ ಅಮ್ಮ ಇಪ್ಪತ್ತರ ಹರೆಯದ ಹುಡುಗಿಯಂತೆ ಕಾಣುತ್ತಿಲ್ಲವೇ?”
“ಸ್ಟೋರಿ ಬಹಳ ಇಂಟರೆಸ್ಟಿಂಗ್ ಆಗಿದೆ.”
“ಕೃಷ್ಣಾನಂದ ಅಂಕಲ್ ಗೆ ಫಾರ್ಟಿ ಪ್ಲಸ್ ಇರಬಹುದು ಕಣೆ. ಒಳ್ಳೇ ಫಿಜಿಕಲ್ ಮೇಂಟೇನ್ ಮಾಡಿದ್ದಾರೆ ಅವರು. ಸ್ಮಾರ್ಟ್ ಎನ್ನಬಹುದು. ಆದರೆ ಅವರ ನೋಟ ಬಹಳಷ್ಟು ಸಾರಿ ನನಗೆ ಇರಿಸು ಮುರಿಸು ಮಾಡಿಬಿಡುತ್ತದೆ. ಅವರು ನೋಡುವ ನೋಟ ನನಗೇಕೋ ಇಷ್ಟವಾಗುತ್ತಿಲ್ಲ. ಮನೆಗೆ ಬಂದಾಗ ನನ್ನಂದ, ಚೆಂದ ಹೊಗಳುವುದೇ ಅವರ ಕೆಲಸವಾಗಿರುತ್ತದೆ. ನನ್ನ ದೇಹದ ಇಂಚಿಂಚನ್ನೂ ಹರಿದು ತಿನ್ನುವಂತೆ ನೋಡುತ್ತಿರುತ್ತಾರೆ. ಹಾಗಾಗಿ ಅವರು ಮನೆಯಲ್ಲಿದ್ದಾಗ ನಾನು ನನ್ನ ರೂಮನ್ನು ಸೇರಿಕೊಂಡರೂ ಏನಾದರೂ ನೆಪವೊಡ್ಡಿ ನನ್ನ ರೂಮಿಗೆ ಬಂದು ನನ್ನನ್ನು ಮಾತಾಡಿಸುವ ಕಾತರದಲ್ಲಿರುತ್ತಾರೆ.”
“ಹಾಗಾದರೆ ನೀನು ತುಂಬಾ ಹುಷಾರಾಗಿರಬೇಕು ಕಣೆ. ಅವರು ಮನೆಯಲ್ಲಿದ್ದಾಗ ನೀನೂ ಮೈ ತುಂಬಾ ಬಟ್ಟೆ ಧರಿಸಿಕೊಂಡಿರು,” ಎಂದು ಪ್ರೇಕ್ಷಾಳನ್ನು ಎಚ್ಚರಿಸಿದಳು. ಅವಳಿಗೆ ಗೆಳತಿಯ ಬಗ್ಗೆ ಕಳಕಳಿ ಇತ್ತು. ಅಷ್ಟರಲ್ಲಿ ಶೂಟಿಂಗ್ಗೆ ಬುಲಾವ್ ಬಂದಿದ್ದರಿಂದ ಇಬ್ಬರೂ ಮಾತಿಗೆ ಕಡಿವಾಣ ಹಾಕಿ ಮೇಲೆದ್ದರು.
ಆ ದಿನ ಲಾವಣ್ಯಾ ಶೂಟಿಂಗ್ ಗೆಂದು ಮೈಸೂರಿಗೆ ಹೋಗಿದ್ದಳು. ಮೂರು ದಿನಗಳವರೆಗೆ ಮೈಸೂರಿನಲ್ಲೇ ವಸ್ತಿ ಇರುವುದಾಗಿ ಪ್ರೇಕ್ಷಾಳಿಗೆ ಹೇಳಿ ಹೋಗಿದ್ದಳು. ಪ್ರೇಕ್ಷಾ ಆ ದಿನದ ಶೂಟಿಂಗ್ ಮುಗಿಸಿಕೊಂಡು ಮನೆ ಸೇರಿದ್ದಾಗ ರಾತ್ರಿ ಏಳೂವರೆಯಾಗಿತ್ತು. ಮನೆಗೆ ಬಂದವಳು ಡ್ರೆಸ್ ಬದಲಿಸಿ `ಉಸ್ಸಪ್ಪಾ…’ ಎಂದೆನ್ನುತ್ತಾ ಹಾಗೇ ಹಾಸಿಗೆಗೆ ಬೆನ್ನೊಡ್ಡಿದಳಾದರೂ ಏಕೋ ಏನೋ ಸ್ನಾನ ಮಾಡಿ ಮೈಯನ್ನು ಹಗುರ ಮಾಡಿಕೊಳ್ಳಬೇಕೆಂದು ಅನಿಸಿದ್ದರಿಂದ ಗೀಝರ್ ಆನ್ ಮಾಡಿ ಟಿವಿ ಬಟನ್ ಹಾಕಿದಳು. ನೀರು ಕಾಯುವವರೆಗೆ ಟಿವಿಯ ವಾಹಿನಿಯೊಂದರಲ್ಲಿ ಶುಶ್ರಾವ್ಯವಾಗಿ ಬರುತ್ತಿದ್ದ ಭಾವಗೀತೆಯೊಂದನ್ನು ಕೇಳಿ ಆನಂದಿಸಿದಳು. ಅಮ್ಮ ಬೆಳಗ್ಗೆ ಮೈಸೂರಿಗೆ ಹೋಗುವಾಗ ರಾತ್ರಿಯ ಊಟಕ್ಕೆಂದು ಏನೇನೋ ಮಾಡಿ ಫ್ರಿಜ್ ನಲ್ಲಿ ಇಟ್ಟಿದ್ದನ್ನು ಬಿಸಿ ಮಾಡಿಕೊಳ್ಳಬೇಕಾಗಿತ್ತು. ಆಗಲೇ ಎಂಟೂವರೆಯಾಗಿತ್ತು. ಅಷ್ಟರಲ್ಲಿ ಮನೆಯ ಕಾಲಿಂಗ್ ಬೆಲ್ ಇಂಪಾಗಿ ನುಡಿದು ಅತಿಥಿಯೊಬ್ಬರ ಆಗಮನದ ಸುಳಿವು ನೀಡಿತ್ತು.
ಪ್ರೇಕ್ಷಾಳಿಗೆ. “ಇದ್ಯಾರಪ್ಪ ಈ ಹೊತ್ತಿನಲ್ಲಿ? ಅಮ್ಮ ಮೈಸೂರಿನಲ್ಲೇ ಇರುವುದಾಗಿ ಹೇಳಿದ್ದಾಳೆ. ಬಂದರೆ ಕೃಷ್ಣಾನಂದ ಅಂಕಲ್ ಬರಬೇಕಷ್ಟೇ,” ಎಂದು ಮನದಲ್ಲಿ ಅಂದುಕೊಳ್ಳುತ್ತಾ ಪ್ರೇಕ್ಷಾ ಬಾಗಿಲನ್ನು ತೆಗೆದಾಗ ಕೃಷ್ಣಾನಂದ ನಿಂತಿದ್ದರು.
“ಪ್ರೇಕ್ಷಾ, ನಿಮ್ಮಮ್ಮ ಬಂದಿರುವಳೇ…..?” ಎಂದು ಅವರು ಕೇಳಿದಾಗ, “ಅಂಕಲ್ ಅಮ್ಮ ಮೂರು ದಿನಗಳವರೆಗೆ ಮೈಸೂರಿನಲ್ಲೇ ಇರುವುದಾಗಿ ಹೇಳಿ ಹೋಗಿದ್ದಾಳೆ,” ಎಂದು ಪ್ರೇಕ್ಷಾ ಅಂಕಲ್ ಗೆ ಕುಳಿತುಕೊಳ್ಳಲು ಹೇಳಿದಳು.
ಸೋಫಾದಲ್ಲಿ ಪವಡಿಸಿದ ಕೃಷ್ಣಾನಂದ, ”ನಾನು ಐದು ಗಂಟೆಯ ಸುಮಾರಿಗೆ ಲಾವಣ್ಯಾಳಿಗೆ ಫೋನ್ ಮಾಡಿದ್ದಾಗ, ಇಂದೇ ವಾಪಸ್ಸು ಬರುವುದಾಗಿ ಹೇಳಿದಳು. ಈ ಹೊತ್ತಿಗೆ ಆಕೆ ಬಂದಿರಬಹುದೆಂದು ಅಂದುಕೊಂಡು ನಾನು ಬಂದೆ.”
“ಅಂಕಲ್, ಸಾಯಂಕಾಲ ಆರು ಗಂಟೆಯಿಂದ ಅಮ್ಮನನ್ನು ಸಂಪರ್ಕಿಸಲು ನಾನು ಬಹಳಷ್ಟು ಸಾರಿ ಪ್ರಯತ್ನಿಸಿದೆ. ಆದರೆ ಸ್ವಿಚ್ಡ್ ಆಫ್ ಎಂಬ ಮೆಸೇಜ್ ಬರುತ್ತಿದೆ.”
“ಹೌದೇ? ಅವಳು ವಾಪಸ್ಸು ಬರುವುದಾಗಿ ಹೇಳಿದ್ದರಿಂದ ನಾನು ಬಂದಿದ್ದೇನೆ. ರಾತ್ರಿ ಊಟಕ್ಕೇನು ಮಾಡಿಕೊಂಡಿರುವಿ ಪ್ರೇಕ್ಷಾ?”
“ಅಮ್ಮ ಬೆಳಗ್ಗೆ ಏನೋ ಮಾಡಿಟ್ಟು ಹೋಗಿದ್ದಾಳೆ. ಬಿಸಿ ಮಾಡಿಕೊಂಡು ತಿನ್ನಬೇಕು ಅಷ್ಟೇ,” ಎಂದು ಹೇಳುತ್ತಾ ಫ್ರಿಜ್ ನತ್ತ ಹೋಗಿ ಯಾವುದೋ ಜೂಸ್ನ್ನು ತಂದುಕೊಟ್ಟ ಪ್ರೇಕ್ಷಾ ಅಡುಗೆ ಮನೆಯತ್ತ ಹೊರಟಳು.
“ಪ್ರೇಕ್ಷಾ, ನನಗೆ ಇಂತಹ ಸಾಫ್ಟ್ ಡ್ರಿಂಕ್ಸ್ ಸರಿ ಹೋಗುವುದಿಲ್ಲಮ್ಮಾ……!”
“ನಿಮಗೆ ಬೇಕಾದಂಥ ಅಮ್ಮನ ರೂಮಿನಲ್ಲಿರುವ ಫ್ರಿಜ್ ನಲ್ಲಿವೆ.”
“ನಾನೇ ಅಲ್ಲಿಗೆ ಹೋಗಿ ತಗೊಳ್ತೀನಿ ಬಿಡು ಪ್ರೇಕ್ಷಾ….” ಎಂದೆನ್ನುತ್ತಾ ಕೃಷ್ಣಾನಂದ ಲಾವಣ್ಯಾಳ ರೂಮಿನ ಕಡೆಗೆ ಹೆಜ್ಜೆ ಹಾಕಿದರೆ, ಪ್ರೇಕ್ಷಾ ಅಡುಗೆ ಮನೆಯತ್ತ ಹೆಜ್ಜೆ ಹಾಕಿದಳು. ಅಡುಗೆ ಮನೆಯಲ್ಲಿ ಗ್ಯಾಸ್ ಒಲೆಯ ಮುಂದೆ ನಿಂತು ಏನನ್ನೋ ಬಿಸಿ ಮಾಡುವುದರಲ್ಲಿ ತಲ್ಲೀನಳಾದಳು.
ಲಾವಣ್ಯಾಳ ರೂಮಿಗೆ ಹೋದ ಕೃಷ್ಣಾನಂದ ಗುಂಡೇರಿಸಿಕೊಂಡು ನೇರವಾಗಿ ಅಡುಗೆ ಮನೆಗೆ ಬಂದವನೇ, “ಪುಟ್ಟಾ, ಇಂದಾದರೂ ನಿನ್ನ ಲವ್ಲೀ ಇಮೇಜಿನ ಫೋಟೋಕ್ಕೆ ಪೋಸ್ ಕೊಡು. ನಾನು ನಿನ್ನ ಕೆಲವೊಂದು ಸೂಪರ್ ಸ್ನ್ಯಾಪ್ಸ್ ತೆಗೆದುಕೊಳ್ಳುವೆ.” ಎಂದಾಗ ಅವನ ಅನಿರೀಕ್ಷಿತ ಆಗಮನಕ್ಕೆ ತುಸು ಬೆಚ್ಚಿಬಿದ್ದ ಪ್ರೇಕ್ಷಾ, “ಅದೆಲ್ಲಾ ಏನೂ ಬೇಡ ಅಂಕಲ್,” ಎಂದು ನವಿರಾಗಿ ಹೇಳುತ್ತಾ ಅವನ ಬೇಡಿಕೆಯನ್ನು ನಿರಾಕರಿಸಿದಳಾದರೂ ಅವಳಿಗೆ ತುಂಬಾ ಗಾಬರಿಯಾಗತೊಡಗಿತು.
“ಪ್ರೇಕ್ಷಾ, ನಾನು ಇಂದು ಸ್ನ್ಯಾಪ್ ತೆಗೆದುಕೊಳ್ಳಲೇ ಬೇಕು. ನೀನು ಬೇಡವೆಂದರೂ ಬಿಡೋದಿಲ್ಲ,” ಎಂದು ಅವಳನ್ನು ತಬ್ಬಿಕೊಳ್ಳಲು ಮುಂದಾದ.
`ಅಮ್ಮ ಮನೆಯಲ್ಲಿ ಇರದ ವಿಷಯ ತಿಳಿದುಕೊಂಡೇ ಅಂಕಲ್ ಏನೋ ಷಡ್ಯಂತ್ರ ರೂಪಿಸಿಕೊಂಡು ಬಂದಿರುವ ಹಾಗಿದೆ… ತುಂಬಾ ಹುಷಾರಾಗಿರಬೇಕು,’ ಎಂದು ಮನದಲ್ಲೇ ಧೈರ್ಯ ತಂದುಕೊಳ್ಳುತ್ತಾ ಅವನ ಹಿಡಿತಕ್ಕೆ ಸಿಗದೇ ತಪ್ಪಿಸಿಕೊಳ್ಳಲು ಪ್ರಯತ್ನಿಸಿದಳು ಪ್ರೇಕ್ಷಾ.
“ಪ್ರೇಕ್ಷಾ, ಇಂದು ನಿನ್ನಾಟ ನಡೆಯುವುದಿಲ್ಲ. ನಿನ್ನ ಸಂಗಕ್ಕಾಗಿ ನಾನು ಬಹಳ ದಿನಗಳಿಂದ ಪರಿತಪಿಸುತ್ತಿದ್ದೇನೆ. ಇಂದು ಮುಹೂರ್ತ ಕೂಡಿ ಬಂದಿದೆ. ನೀನಿಂದು ನನ್ನವಳಾಗಲೇ ಬೇಕು. ನಿನ್ನ ನೆರವಿಗೆ ಯಾರೂ ಬರುವುದಿಲ್ಲ. ನೀನಾಗೇ ಒಪ್ಪಿಕೊಂಡು ನನ್ನಾಸೆಗೆ ಸಹಕರಿಸು. ಇಬ್ಬರೂ ಸಂತೃಪ್ತರಾಗಿ ಬ್ರಹ್ಮಾನಂದ ಅನುಭವಿಸೋಣ,” ಎಂದು ಹೇಳುತ್ತಾ ಕೃಷ್ಣಾನಂದ ಪ್ರೇಕ್ಷಾಳನ್ನು ಗಟ್ಟಿಯಾಗಿ ಹಿಡಿದುಕೊಂಡೇ ಬಿಟ್ಟ. ಪ್ರೇಕ್ಷಾಳಿಗೆ ಉಸಿರು ಕಟ್ಟಿದ ಹಾಗಾಯಿತು.
“ಅಂಕಲ್…. ಅಂಕಲ್….. ನೀವು ನನಗೆ ತಂದೆಗೆ ಸಮಾನ. ಇದೆಲ್ಲಾ ಒಳ್ಳೆಯದಲ್ಲ. ನೀವು ಇಷ್ಟಕ್ಕೇ ಕೈ ಬಿಟ್ಟರೆ ಈ ನಿಮ್ಮ ಘನಂದಾರಿ ವಿಚಾರಗಳನ್ನು ಅಮ್ಮನ ಮುಂದೆಯೂ ಹೇಳುವುದಿಲ್ಲ. ಪ್ಲೀಸ್ ಅಂಕ್…..” ಎಂದು ಪ್ರೇಕ್ಷಾ ಬೆದರಿದ ಹರಣಿಯಂತೆ ಅಂಗಲಾಚಿದಳು.
“ನಾನು ನಿನಗೆ…. ತಂದೆ ಸಮಾನ….? ಹ್ಹ….ಹ್ದಾ…ಹ್ಹಾ…. ಅಂತಹ ಶಿಷ್ಟಾಚಾರದ ಮನುಷ್ಯ ನಾನಲ್ಲ. ನೀನು ಪ್ರತಿಭಟಿಸಿದರೆ ಬಲಾತ್ಕಾರ ಮಾಡಬೇಕಾಗುತ್ತದೆ,” ಎಂದ ಕೃಷ್ಣಾನಂದನ ಕಣ್ಣುಗಳಲ್ಲಿ ಕಾಮದ ವಾಂಛೆ ತುಂಬಿತ್ತು. ಹುಲ್ಲೆಯ ಮೇಲೆ ಎರಗುವ ಹುಲಿಯಂತೆ ಕೃಷ್ಣಾನಂದ ಪ್ರೇಕ್ಷಾಳ ಮೇಲೆ ಎರಗಿದ್ದ. ಕೃಷ್ಣಾನಂದನ ದಾಳಿಗೆ ಅವಳ ಮೈ ಮೇಲಿದ್ದ ಬಟ್ಟೆಗಳು ಅರೆಬರೆ ಹರಿದು. ಪ್ರೇಕ್ಷಾ ಜೋರಾಗಿ ಕಿರುಚಾಡತೊಡಗಿದಳು. ಬಲಾಢ್ಯ ಕೃಷ್ಣಾನಂದ ಅವಳ ಬಾಯಿಗೆ ಬಟ್ಟೆ ತುರುಕಿ ಲಾವಣ್ಯಾಳ ಬೆಡ್ ರೂಮಿಗೆ ಎತ್ತಿಕೊಂಡು ಹೊರಟ.
“ನಾನು ಇದೇ ಬೆಡ್ ಮೇಲೆ ನಿನ್ನ ಅಮ್ಮನ ಜೊತೆಗೆ ಚಕ್ಕಂದವಾಡುವುದು. ಇಂದು ಇದೇ ಬೆಡ್ ಮೇಲೆ ನಿನ್ನೊಂದಿಗೆ ರಾಸಲೀಲೆ,” ಎಂದೆನ್ನುತ್ತಾ ಒಂದು ಕೈಯಿಂದ ಅವಳ ಮೇಲೆ ಒತ್ತಡ ಹೇರುತ್ತಾ ಇನ್ನೊಂದು ಕೈಯಿಂದ ತನ್ನ ಬಟ್ಟೆಗಳನ್ನು ಬಿಚ್ಚಲು ಮುಂದಾಗಿದ್ದ.
`ಅಯ್ಯೋ ದೇವರೇ, ನಿನಗೆ ಕರುಣೆ ಎಂಬುದು ಇಲ್ಲವೇ? ಹೇಗಾದರೂ ಮಾಡಿ ಇವನಿಂದ ನನ್ನನ್ನು ಕಾಪಾಡು ತಂದೆ,’ ಎಂದು ಮನದಲ್ಲೇ ದೇವರಲ್ಲಿ ಮೊರೆಯಿಟ್ಟಳು ಪ್ರೇಕ್ಷಾ. ಕೃಷ್ಣಾನಂದನ ಹಿಡಿತ ಬಲವಾಗತೊಡಗಿತ್ತು. `ಇಂದು ನನ್ನ ಕಥೆ ಮುಗಿದು ಹೋಗುತ್ತಿದೆಯೇ?’ ಎಂದು ಪ್ರೇಕ್ಷಾ ಸ್ವಗತದಲ್ಲಿ ಹೇಳಿಕೊಳ್ಳುವಷ್ಟರಲ್ಲಿ ಮನೆಯ ಮುಂಬಾಗಿಲಿನ ಬೆಲ್ ಬಾರಿಸತೊಡಗಿತು. ಕರಗಂಟೆಯ ಶಬ್ದಕ್ಕೆ ಕೃಷ್ಣಾನಂದ ಗಲಿಬಿಲಿಗೊಂಡ. ಪ್ರೇಕ್ಷಾಳಿಗೆ ಉಸಿರು ಬಂದಂತಾಯಿತು. ತಕ್ಷಣ ಕೃಷ್ಣಾನಂದನ ಹಿಡಿತದಿಂದ ತಪ್ಪಿಸಿಕೊಂಡ ಪ್ರೇಕ್ಷಾ ಶರವೇಗದಲ್ಲಿ ಓಡಿಹೋಗಿ ಮುಂಬಾಗಿಲನ್ನು ತೆಗೆದಿದ್ದಳು.
ಎದುರಿಗೆ ಲಾವಣ್ಯಾ ನಿಂತಿದ್ದಳು. ಮಗಳ ಹರಿದ ಬಟ್ಟೆಗಳು, ಕೆದರಿದ ಕೂದಲನ್ನು ಕಂಡು ಲಾವಣ್ಯಾ ಹೌಹಾರುವಷ್ಟರಲ್ಲಿ ಅವಳನ್ನು ಗಟ್ಟಿಯಾಗಿ ತಬ್ಬಿ ಹಿಡಿದುಕೊಂಡ ಪ್ರೇಕ್ಷಾಳ ಕಣ್ಣಲ್ಲಿ ನೀರು ಧಾರೆಯಾಗಿ ಹರಿಯತೊಡಗಿತ್ತು. ಮಗಳನ್ನು ತೆಕ್ಕೆಗೆ ಹಾಕಿಕೊಂಡ ಲಾವಣ್ಯಾ ಸಮಾಧಾನ ಪಡಿಸಲು ಮುಂದಾದಳು. ಪ್ರೇಕ್ಷಾಳ ಹಿಂದೇನೇ ಓಡೋಡಿ ಬಂದಿದ್ದ ಕೃಷ್ಣಾನಂದನನ್ನು ಕಂಡು ಲಾವಣ್ಯಾಳಿಗೆ ಎಲ್ಲವೂ ಅರ್ಥವಾಗಿ ಹೋಯಿತು.
“ಥೂ ನೀಚ! ನೀನು ಈ ರೀತಿ ಮಾಡುವಿ ಎಂದು ನಾನು ಅಂದುಕೊಂಡಿರಲಿಲ್ಲ. ನೀನು ಮಧ್ಯಾಹ್ನ ಮೂರು ಗಂಟೆಗೆ ಫೋನ್ ಮಾಡಿದ್ದಾಗ ನಾನು ಮೂರು ದಿನಗಳವರೆಗೆ ಮೈಸೂರಿನಲ್ಲಿಯೇ ಇರುತ್ತೇನೆಂದು ಸುಳ್ಳು ಹೇಳಿದ್ದೆ. ಅಷ್ಟೊತ್ತಿಗೆ ನಮ್ಮ ಪ್ರೋಗ್ರಾಂನಲ್ಲಿ ಬದಲಾವಣೆಯಾಗಿದ್ದು ನನಗೆ ಗೊತ್ತಾಗಿತ್ತು. ಅಲ್ಲಿಂದ ಹೊರಟ ಮೇಲೆ ಪ್ರೇಕ್ಷಾಳಿಗೆ ವಿಷಯ ತಿಳಿಸಬೇಕೆಂದಿದ್ದೆ……”
“ಅಮ್ಮಾ….. ಅಂಕಲ್ ನಿನಗೆ ಐದು ಗಂಟೆಗೆ ಫೋನ್ ಮಾಡಿದ್ದರಂತೆ. ನೀನು ಬರುವುದಾಗಿ ತಿಳಿಸಿದ್ದಿಯಂತೆ….? ಸಂಜೆ ಆರು ಗಂಟೆಯ ನಂತರ ನಾನು ಹಲವಾರು ಸಾರಿ ನಿನ್ನ ಫೋನ್ ಗೆ ಟ್ರೈ ಮಾಡಿದಾಗ ನಿನ್ನ ಫೋನ್ ಸ್ವಿಚ್ ಆಫ್ ಆಗಿತ್ತು,” ಪ್ರೇಕ್ಷಾ ಗಾಬರಿಯಲ್ಲಿ ಅಳುತ್ತಾ ಹೇಳಿದಳು.
“ಇಲ್ಲಮ್ಮಾ…. ಈ ದುರುಳ ಫೋನ್ ಮಾಡಿದ್ದು ಮೂರು ಗಂಟೆಗಷ್ಟೇ. ನಂತರ ಯಾವುದೇ ಫೋನಿಲ್ಲ. ಇತ್ತೀಚೆಗೆ ಇವನ ನಡತೆಯೇಕೋ ನನ್ನ ಮನದಲ್ಲಿ ಅನುಮಾನ ಮೂಡಿಸತೊಡಗಿತ್ತು. ಇವನ ಚಲನವಲನಗಳನ್ನು ಪರಾಮರ್ಶಿಸಿ ನೋಡತೊಡಗಿದ್ದೆ. ಇವನು ನಿನಗೆ ಕೆಡುಕು ಮಾಡಬಹುದು ಎಂದು ನನಗನಿಸತೊಡಗಿತ್ತು. ಮೈಸೂರಿನಲ್ಲಿ ವೋಲ್ವೋ ಬಸ್ ಹತ್ತಿದ ಸ್ವಲ್ಪ ಸಮಯದ ನಂತರ ನಿನಗೆ ಫೋನ್ ಮಾಡಲು ನೋಡಿದರೆ ನನ್ನ ಮೊಬೈಲ್ ಕಾಣೆಯಾಗಿತ್ತು. ಗದ್ದಲದಲ್ಲಿ ಯಾರೋ ನನ್ನ ಫೋನ್ ನ್ನು ಹಾರಿಸಿದ್ದರು,” ಎಂದು ಪ್ರೇಕ್ಷಾಳಿಗೆ ಹೇಳಿದಳು.
ನಂತರ ಕೃಷ್ಣಾನಂದನ ಕಡೆಗೆ ತಿರುಗಿ, “ಏನೋ ದೊಡ್ಡ ಮನುಷ್ಯ, ನಿನಗೆ ನಾನೂ ಬೇಕು, ನನ್ನ ಮಗಳೂ ಬೇಕು ಅಲ್ವಾ…..? ನಿನ್ನ ಬಣ್ಣದ ಮಾತುಗಳಿಗೆ ಮರುಳಾಗಿ ನನ್ನ ಸರ್ವಸ್ವವನ್ನೇ ನಿನಗೆ ಅರ್ಪಿಸಿಕೊಂಡೆ. ಈಗ ನನ್ನ ಮಗಳ ಮೇಲೂ ಕಣ್ಣು ಹಾಕಿರುವೆಯಲ್ಲಾ…., ನೀನು ಮನುಷ್ಯನೋ ಅಥವಾ ಮೃಗವೋ? ನಿನ್ನ ಜೀವನಕ್ಕೆ ಧಿಕ್ಕಾರವಿರಲಿ. ನಿನ್ನನ್ನು ಹಾಗೇ ಬಿಡುವುದಿಲ್ಲ. ಪೊಲೀಸರಿಗೆ ಒಪ್ಪಿಸಿ ತಕ್ಕ ಶಿಕ್ಷೆಯಾಗುವಂತೆ ಮಾಡಿಸುವೆ. ಇಲ್ಲದಿದ್ದರೆ ಇನ್ನೂ ಅದೆಷ್ಟು ಜನ ಮುಗ್ಧ ಹೆಂಗಸರು ನಿನ್ನ ಕಾಮಪಿಪಾಸೆಗೆ ಬಲಿಯಾಗಿದ್ದಾರೋ ಏನೋ?” ಎಂದೆನ್ನುತ್ತಾ ಪ್ರೇಕ್ಷಾಳೊಂದಿಗೆ ಸೇರಿಕೊಂಡು ಕೃಷ್ಣಾನಂದನನ್ನು ಹಿಡಿದು ರೂಮಿನಲ್ಲಿ ಕೂಡಿ ಹಾಕಿ ಪೊಲೀಸರಿಗೆ ಫೋನ್ ಮಾಡಿದಳು ಲಾವಣ್ಯಾ.
“ಅಮ್ಮಾ…. ನೀನು ಸರಿಯಾದ ವೇಳೆಗೆ ಬಂದು ನನ್ನ ಮಾನ ಕಾಪಾಡಿದಿ. ಇಲ್ಲದಿದ್ದರೆ ಇಷ್ಟೊತ್ತಿಗೆ ನನ್ನ ಗತಿ ಏನಾಗುತ್ತಿತ್ತೋ ಏನೋ?” ಎಂದು ಪ್ರೇಕ್ಷಾ ಹೇಳುಷ್ಟವರಲ್ಲಿ ಲಾವಣ್ಯಾ ಮಗಳ ಬಾಯಿಗೆ ತನ್ನ ಕೈಯನ್ನು ಅಡ್ಡ ಹಿಡಿಯುತ್ತಾ, “ಹಾಗೆನ್ನಬೇಡ ಪ್ರೇಕ್ಷಾ, ನನ್ನ ಪ್ರಾಣವನ್ನು ಪಣಕ್ಕಿಟ್ಟಾದರೂ ನಿನ್ನ ಮಾನವನ್ನು ಉಳಿಸಬೇಕೆಂದು ನಾನೆಂದೋ ಅಂದುಕೊಂಡಿದ್ದೇನೆ. ನಾನು ಜೀವಿಸಿರುವುದು ನಿನಗಾಗಿಯೇ,” ಎಂದು ಹೇಳಿದಾಗ ತಾಯಿಯ ಅಂತರಂಗದ ಅರಿವಿನ ಮಾತುಗಳಿಂದ ಪ್ರೇಕ್ಷಾಳಿಗೆ ಮಾತು ಹೊರಡದೇ ಆಕೆಯನ್ನು ಬಲವಾಗಿ ತಬ್ಬಿಕೊಂಡು ಅಳತೊಡಗಿದಳು.