ಆಕಸ್ಮಿಕ ಅಪಘಾತಕ್ಕೆ ತನ್ನ ಕಾಲು ಕಳೆದುಕೊಂಡ ರಘುನಂದನ್, ಈಗಾಗಲೇ ಮೈಥಿಲಿಯ ಜೊತೆ ನಡೆದಿದ್ದ ಲಗ್ನ ಪತ್ರಿಕೆ ಕ್ಯಾನ್ಸಲ್ ಮಾಡಿ ಅವಳು ಬೇರೆ ಮದುವೆಯಾಗುವಂತೆ ಒತ್ತಾಯಿಸಿದ. ಮುಂದೆ ನಡೆದದ್ದೇನು......?
ರಘುನಂದನ ಕಣ್ಣು ಬಿಟ್ಟಾಗ ಆಸ್ಪತ್ರೆಯ ಬೆಡ್ ಮೇಲೆ ಮಲಗಿದ್ದ. ಮೈಥಿಲಿ ಹಾಗೂ ಅವನ ಅಮ್ಮ ಅಪ್ಪ ಪಕ್ಕದಲ್ಲಿ ಕುಳಿತಿದ್ದರು. ``ಮೈಥಿಲಿ.... ನಾನು ಯಾಕೆ ಇಲ್ಲಿದ್ದೇನೆ. ಅಪ್ಪ ನೀವಿಬ್ಬರೂ ಯಾವಾಗ ಬಂದಿರಿ....'' ಎನ್ನುತ್ತಾ ಏಳಲು ಯತ್ನಿಸಿದ.
``ನಿಧಾನ ರಘು....'' ಎನ್ನುತ್ತಾ ಮೈಥಿಲಿ ಅವನನ್ನು ಎತ್ತಿ ಕೂರಿಸಿದಳು.
ನೆನಪಾಯಿತು.... ಹೌದು ತಾನು ಮತ್ತು ಮೈಥಿಲಿ ಬೈಕ್ ನಲ್ಲಿ ಹೋಗುವಾಗ ಆ್ಯಕ್ಸಿಡೆಂಟ್ ಆಗಿತ್ತು... ಮುಂದೆ ತನಗೆ ಏನೊಂದೂ ನೆನಪಿಲ್ಲ.
``ಮೈಥಿಲಿ ನೀನು ಹುಷಾರಾಗಿ ಇದ್ದೀಯಾ... ನಿನಗೆ ಏನೂ ಆಗಲಿಲ್ವಾ....?'' ಎನ್ನುತ್ತಾ ಅಮ್ಮನ ಕಡೆ ನೋಡಿದ. ಅಮ್ಮನ ಕಣ್ಣಲ್ಲಿ ನೀರು ತುಂಬಿತ್ತು.
``ಅಮ್ಮಾ....?'' ಎಂದು ಪ್ರಶ್ನಾರ್ಥಕವಾಗಿ ಕಣ್ಣಲ್ಲೇ ಕೇಳಿ ಕಾಲೆತ್ತಲು ನೋಡಿದ, ಆಗಲಿಲ್ಲ. ಬ್ಯಾಂಡೇಜ್ ಸುತ್ತಿದ್ದರು, ಅಷ್ಟರಲ್ಲಿ ಡಾಕ್ಟರ್ ಬಂದರು.
``ಏನಾಯಿತು ನನಗೆ? ಸರಿಯಾಗಿ ಹೇಳಿ ಡಾಕ್ಟರ್....'' ಎಂದು ತನ್ನ ಬ್ಯಾಂಡೇಜ್ ಮಾಡಿದ ಕಾಲನ್ನೇ ನೋಡುತ್ತಾ.
``ಏನಿಲ್ಲಾ.... ನಿನಗೆ ಆ್ಯಕ್ಸಿಡೆಂಟ್ ಆಗಿ ನಿನ್ನ ಬಲಗಾಲು ಜಜ್ಜಿ ಹೋಗಿತ್ತು. ಆಪರೇಷನ್ ಮಾಡಿ ತೆಗೆದಿದ್ದೇವೆ,'' ಎಂದರು ಡಾಕ್ಟರ್.
``ಅಂದರೆ.... ನಾನೀಗ ಕಾಲಿಲ್ಲದ ಕುಂಟನಾ..... ನನಗೆ ನಡೆಯಲು ಸಾಧ್ಯವಿಲ್ವಾ..... ಏನು ನನ್ನ ಹಣೆಬರಹ....'' ಎಂದು ಕಿರುಚಿದ.
``ರಘು.... ನಿನಗೆ ಆ್ಯಕ್ಸಿಡೆಂಟ್ ಆದಾಗ ಮೈಥಿಲಿ ಹಾಗೂ ಅವರ ತಂದೆ ಸೇರಿ ನಿನ್ನನ್ನು ಆಸ್ಪತ್ರೆಗೆ ಸೇರಿಸಿದ್ದರು. ನನಗೆ ಫೋನ್ ಮಾಡಿ ವಿಷಯ ತಿಳಿಸಿದಾಗ ನಾವಿಬ್ಬರೂ ಎದ್ದೇವೋ.... ಬಿದ್ದೇವೋ.... ಎಂದು ಓಡಿಬಂದೆ. ಪುಣ್ಯಕ್ಕೆ ಒಂದು ಕಾಲು ಹೋಗಿ, ನಿನ್ನ ಜೀವ ಉಳಿದಿದೆ,'' ಎಂದು ಭಾವುಕರಾಗಿ ನುಡಿದರು ರಘುನಂದನನ ತಂದೆ.
``ಅಪ್ಪಾ.... ನಾನಿನ್ನು ಕುಂಟನಾ.... ಒಂದೇ ಕಾಲಿನಲ್ಲಿ ನಡೆಯಬೇಕಾ.....'' ಎಂದು ನೋವಿನಿಂದ ತಂದೆಯನ್ನು ಕೇಳಿದ.
ಅಲ್ಲೇ ಇದ್ದ ಡಾಕ್ಟರ್, ``ಏನ್ರೀ..... ರಘುನಂದನ್ ವಿದ್ಯಾವಂತರಾಗಿ ನೀವು ಹೀಗೆ ಹೇಳಿದರೆ ಹೇಗೆ....? ವಿಜ್ಞಾನ ಎಷ್ಟು ಮುಂದುವರಿದಿದೆ.... ನಿಮಗೆ ಬೇರೆ ಕಾಲು ಹಾಕ್ತೀವಿ. ಎಲ್ಲರೂ ನಡೆಯುಂತೆ ನೀವು ನಡೆಯಬಹುದು,'' ಎಂದರು.
ರಘುನಂದನ ಅಪ್ಪ ಬೆಂಗಳೂರಿನಿಂದ ನಾನೂರು ಕಿಲೋಮೀಟರ್ ದೂರದ ಹಳ್ಳಿಯಲ್ಲಿ ದೊಡ್ಡ ಜಮೀನ್ದಾರರು. ರಘುನಂದನ್ ಮಾಸ್ಟರ್ ಡಿಗ್ರಿ ಮುಗಿಸಿ ಬೆಂಗಳೂರಿನಲ್ಲಿ ಕೆಲಸಕ್ಕೆ ಸೇರಿದ್ದ. ಮೈಥಿಲಿ ಅವನ ಜೊತೆಯಲ್ಲಿಯೇ ಕೆಲಸ ಮಾಡುತ್ತಿದ್ದಳು. ಅವಳು ಬೆಂಗಳೂರಿನಲ್ಲಿಯೇ ಹುಟ್ಟಿ ಬೆಳೆದಳು. ಸಿರಿವಂತ ಕುಟುಂಬದ ಒಬ್ಬಳೇ ಮಗಳು. ರಘುನಂದನನ್ನು ನೋಡಿದ ಕ್ಷಣವೇ ಅವನಲ್ಲಿ ಏನೋ ಸೆಳೆತ.... ಮಧುರ ಭಾವನೆ.... ಅವಳೇ ಅವನನ್ನು ಮೊದಲು ಪರಿಚಯ ಮಾಡಿಕೊಂಡು ಮಾತನಾಡಿಸಿದಳು.
ಮುಂದೆ ಅವರಿಬ್ಬರೂ ಪ್ರೀತಿಸಲು ಶುರು ಮಾಡಿದರು. ಎರಡು ಮನೆಯಲ್ಲೂ ಹೇಳಿದಾಗ ಯಾವ ವಿರೋಧ ಬರಲಿಲ್ಲ. ಎರಡು ಕಡೆಯವರೂ ಅವರಿಬ್ಬರ ಮದುವೆಗೆ ಸಮ್ಮತಿ ಸೂಚಿಸಿದ್ದರು.
ಕಳೆದ ವಾರವಷ್ಟೇ ಮೈಥಿಲಿ ಜೊತೆ ಎಂಗೇಜ್ ಮೆಂಟ್ ಆಗಿತ್ತು. ಇನ್ನೂ ಎರಡು ತಿಂಗಳಿಗೆ ಮದುವೆ ಎಂದು ನಿಶ್ಚಯವಾಗಿತ್ತು. ರಘುನಂದನನಿಗೆ ಬೇರೆ ಕೃತಕ ಕಾಲು ಹಾಕಿದ್ದರು. ಒಂದು ತಿಂಗಳು ಆಸ್ಪತ್ರೆಯಲ್ಲೇ ಇದ್ದ. ಅವನನ್ನು ನೋಡಿಕೊಳ್ಳಲು ಊರಿನಿಂದ ಅವನ ತಮ್ಮ ವಿಜಯೇಂದ್ರ ಬಂದಿದ್ದ. ದಿನಾಲು ಮೈಥಿಲಿ ಬೆಳಗ್ಗೆಯಿಂದ ಸಂಜೆಯವರೆಗೆ ಇಲ್ಲೇ ಇರುತ್ತಿದ್ದಳು. ಎರಡು ತಿಂಗಳು ದಿನಾ ಫಿಸಿಯೋಥೆರಪಿ ಮಾಡಿ ನಡೆಯಲು ಪ್ರಾಕ್ಟೀಸ್ ಮಾಡಿಸಬೇಕು ಎಂದು ಹೇಳಿ ಡಿಸ್ ಚಾರ್ಜ್ ಮಾಡಿದರು.