ಕಥೆ – ಕರುಣಾ ಶರ್ಮ

ನಿತೀಶ್‌ ಬೆಳಗ್ಗೆ ಇಷ್ಟು ಬೇಗನೇ ಎದ್ದಿದ್ದು ನನಗೆ ಆಶ್ಚರ್ಯವಾಯಿತು. ನಿನ್ನೆ ತಾನೇ ಅವನ ಎಸ್‌.ಎಸ್‌.ಎಲ್.ಸಿ. ಪರೀಕ್ಷೆ ಮುಗಿದಿದೆ. ತುಂಬಾ ಹೊತ್ತು ಮಲಗ್ತಾನೆ ಅಂತ ನನಗನ್ನಿಸಿತು. ತಿಂಗಳುಗಟ್ಟಲೆ ಅವನು ಹಗಲೂ ರಾತ್ರಿ ಎನ್ನದೇ ಓದುವುದರಲ್ಲಿ ಮಗ್ನನಾಗಿದ್ದ. ಇಷ್ಟು ದೊಡ್ಡ ಹೊರೆ ತಲೆಯಿಂದ ಇಳಿದಿದೆ. ಪರೀಕ್ಷೇಲೂ ಚೆನ್ನಾಗಿ ಮಾಡಿದಾನೆ. ಆದರೆ ಬೆಳಗ್ಗೇನೆ ಬೇಗ ಎದ್ದು ಏನೋ ತೊಂದರೆಯಲ್ಲಿರುವಂತೆ ಬಂದು ಕುಳಿತ. ನಾನು ಕಾಫಿ ಕುಡೀತಾ ಪೇಪರ್‌ ಓದುತ್ತಿದ್ದೆ.

“ಏನಾಯ್ತು ನಿತೀಶ್‌, ಇಷ್ಟು ಬೇಗ ಎದ್ದುಬಿಟ್ಟಿದ್ದೀಯ? ಏನೋ ಚಿಂತೆ ಮಾಡ್ತಿದೀಯ?” ನಾನು ಕೇಳಿದೆ.

“ನಮ್ಮ ಪ್ರೋಗ್ರಾಂ ಎಲ್ಲಾ ಹಾಳಾಯ್ತು, ಪರೀಕ್ಷೆ ಮುಗಿದಿದೆ. ಇವತ್ತು ನಾವೆಲ್ಲಾ ಸ್ನೇಹಿತರು ಸೇರಿಕೊಂಡು ಸಿನಿಮಾ ನೋಡೋಣ, ಸುತ್ತಾಡೋಣ, ಹೋಟೆಲಲ್ಲಿ ಚೆನ್ನಾಗಿ ತಿಂದು ಇಡೀ ದಿನ ಮಜವಾಗಿ ಕಾಲ ಕಳೆಯೋಣ ಅಂತ ಅಂದುಕೊಂಡಿದ್ದೆ. ಆದರೆ ಇವತ್ತು ಬಂದ್‌ ಅಂತೆ.”

“ನೀನು ಸರಿಯಾಗಿ ಹೇಳಿದೆ. ಪೇಪರಲ್ಲೂ ಬರೀ ಇದೇ ವಿಷಯ ತುಂಬಿದೆ. ಇಂದು ಎಲ್ಲಾ ಅಂಗಡಿಗಳನ್ನೂ ಮುಚ್ಚುತ್ತಾರಂತೆ. ಹೋದ ಸಲದ ಹಾಗೆ ದಂಗೆ, ಬೆಂಕಿ ಹಚ್ಚೋದು, ಲೂಟಿ ಆಗದೇ ಇರಲಿ ಅಂತ ಅಲ್ಲಲ್ಲಿ ಹೆಚ್ಚುವರಿ ಪೊಲೀಸರನ್ನು ನಿಲ್ಲಿಸಿದ್ದಾರಂತೆ. ಆಟೋ ಮತ್ತು  ಖಾಸಗಿ ಬಸ್ಸಿನವರು ಕೂಡ ಬಂದ್‌ಗೆ ಬೆಂಬಲ ಕೊಡ್ತಾರಂತೆ.”

“ಈಗ ತಾನೇ ಮೋಹನನ ಫೋನ್‌ ಬಂದಿತ್ತು. ಹೊರಗೆ ಹೇಗೆ ಹೋಗೋದು ಎಲ್ಲಿಗೆ ಹೋಗೋದು? ಅಂತ ಕೇಳ್ತಾ ಇದ್ದ. ಅಮ್ಮಾ, ಎಷ್ಟು ತಿಂಗಳಿಂದ ಪುಸ್ತಕಗಳಲ್ಲೇ  ಮುಳುಗಿದ್ದೆ. ಪರೀಕ್ಷೆ ಹೆದರಿಕೆ ಬೇರೆ ಇತ್ತು. ಈಗ ಫ್ರೀ ಆಗಿದೀವಿ ಅಂದರೆ ಇದು ಬೇರೆ ಶುರುವಾಗಿದೆ.”

ನಿತೀಶ್‌ ಬೇಸರದಿಂದಿದ್ದ. ಅದನ್ನು ನೋಡಿ ನನಗೂ ಬೇಜಾರಾಯಿತು. ಕಳೆದ ಕೆಲವು ತಿಂಗಳಿಂದ ನನಗೂ ಬೋರ್‌ ಆಗಿತ್ತು. ಇವತ್ತು ಹೊರಗೆ ಎಲ್ಲಾದರೂ ಹೋಗೋದು ಅಂತ ಯೋಚಿಸಿದ್ದೆ. ಏಕೆಂದರೆ ನಿತೀಶ್‌ ಓದುವುದರಲ್ಲಿ ಮುಳುಗಿದ್ದ. ನಾನು ಅವನ ಊಟತಿಂಡಿ ಇತರ ಅನುಕೂಲಗಳ ಬಗ್ಗೆ ಗಮನ ಕೊಡುವುದರಲ್ಲಿ ಮಗ್ನಳಾಗಿದ್ದೆ. ಒಂದೇ ಸೂರಿನ ಕೆಳಗಿದ್ದರೂ ಅಪರಿಚಿತರಾಗಿ ದೂರ ದೂರವಾಗಿ ಬಹಳ ವ್ಯಸ್ತರಾಗಿದ್ದೆವು. ನಮಗಿಬ್ಬರಿಗೂ ಸ್ವಲ್ಪ ಮನರಂಜನೆ ಬೇಕಾಗಿತ್ತು. ಸಮಯ ಕ್ಷಣ ಕ್ಷಣ ಕಳೆಯುತ್ತಾ ತಾನು ಸರಿಯುತ್ತಿರುವುದರ ಅನುಭವವನ್ನು ನಾವು ಅದರ ಜೊತೆ ನಡೆಯುತ್ತಾ ಹಿಂದೆ ಬೀಳುವಾಗ ಅಥವಾ ಅದನ್ನು ಕಟ್ಟಿಹಾಕಲು ಪ್ರಯತ್ನಿಸಿದಾಗ ಮಾಡಿಕೊಡುತ್ತದೆ. ನಾವು ಈ ಊರಿಗೆ ಬಂದು 3 ವರ್ಷಗಳಾಗಿವೆ. ನನ್ನ ಪತಿಗೆ ಅಸ್ಸಾಂಗೆ ಪೋಸ್ಟಿಂಗ್‌ ಆರ್ಡರ್‌ಬಂದಾಗ ಈ ವಿಷಯ ನಮ್ಮ ಅರಿವಿಗೆ ಬಂತು. ಸೇನೆಯಲ್ಲಿ ಅಧಿಕಾರಿಯಾಗಿರುವುದರ ಲಾಭವೆನ್ನಿ, ನಷ್ಟಿವೆನ್ನಿ 3 ವರ್ಷಕ್ಕಿಂತ ಹೆಚ್ಚಿಗೆ ಯಾವ ಸ್ಥಳದಲ್ಲೂ ಇರಲು ಬಿಡುವುದಿಲ್ಲ. ಈ ಸಲ ನಾನು ಮತ್ತು ನಿತೀಶ್‌ ಅವರ ಜೊತೆ ಹೋಗಲಾಗಲಿಲ್ಲ. ಕಾರಣ ಒಂದು, ಅಸ್ಸಾಂನಂತಹ ಜಾಗ, ಎರಡು ನಿತೀಶನ ಎಸ್‌.ಎಸ್‌.ಎಲ್.ಸಿ.  ಪರೀಕ್ಷೆ. ನಾವಿಬ್ಬರೂ ಅವರಿಲ್ಲದ ಖಾಲಿತನವನ್ನು ಅನುಭವಿಸುತ್ತಿದ್ದೆ. ಇದರಿಂದ ಪರಸ್ಪರ ಸಂತೋಷದಲ್ಲಿ ನಮ್ಮ ದುಃಖವನ್ನು ಮರೆಯಲು ಯತ್ನಿಸುತ್ತಿದ್ದೆವು.

“ನಿನ್ನ ಸಮಸ್ಯೆಗೆ ನನ್ನ ಬಳಿ ಪರಿಹಾರವಿದೆ. ನಿಮ್ಮ ದಿನ ಮಜಾದಿಂದ ಕಳೀಬೇಕು ಅನ್ನುವುದು ತಾನೇ ನಿಮ್ಮ ಇಷ್ಟ?”

“ಅದು ಹೇಗಾಗುತ್ತಮ್ಮಾ? ಈಗ ಬೇರೆ ಸ್ನೇಹಿತರ ಫೋನ್‌ ಬರಲು ಆರಂಭವಾಗಬಹುದು. ಹೀಗಿರುವಾಗ ಯಾರ ಅಪ್ಪ ಅಮ್ಮ  ತಾನೇ ಇಡೀ ದಿನ ಹೊರಗಿರಲು ತಮ್ಮ ಮಕ್ಕಳನ್ನು ಬಿಡುತ್ತಾರೆ? ಬಹುಶಃ ನೀವು ಕೂಡ?”

“ಹೊರಗೆ ಯಾಕೆ ಹೋಗ್ಬೇಕು? ನಿಮಗೆ ಬೇಕಾಗಿರುವುದು ಇಡೀ ದಿನ ಮಜಾ ಅಲ್ಲವೇ?”

“ಆದರೆ ಹೇಗಮ್ಮಾ?”

“ನೀನು ನಿನ್ನ ಎಲ್ಲಾ ಸ್ನೇಹಿತರಿಗೂ ಫೋನ್‌ ಮಾಡಿ ಇಲ್ಲಿಗೆ ಬರಲು ಹೇಳು. ಎಲ್ಲರೂ ಇಲ್ಲೇ ಅಕ್ಕಪಕ್ಕ ಇದ್ದಾರಲ್ಲವೇ? ಇಲ್ಲದಿದ್ದರೆ ಅವರಪ್ಪ ಆಫೀಸಿಗೆ ಹೋಗುವಾಗ ಇಲ್ಲಿ ಬಿಟ್ಟು ಸಂಜೆ ಬಂದು ಕರಕೊಂಡು ಹೋಗಲಿ.”

“ಆದರೆ ಇದರಿಂದೇನಾಗುತ್ತೆ? ಎಲ್ಲರೂ ಇಲ್ಲಿ ಬಂದು ಏನು ಮಾಡ್ತಾರೆ?”

“ನಿಮಗಿಷ್ಟವಾದ ಫಿಲ್ಮಿನ ಡಿವಿಡೀನಾ ಕ್ಲಬ್ಬಿಗೆ ಫೋನ್‌ ಮಾಡಿ ಹೇಳು. ಎಲ್ರೂ ಫಿಲ್ಮು ನೋಡಿ. ಪಾಪ್‌ಕಾರ್ನ್‌ ಮತ್ತು ಕೂಲ್‌ಡ್ರಿಂಕ್ಸ್ ನಾನು ಕೊಡ್ತೀನಿ. ಬೇಕಾದರೆ ಎರಡು ಇಂಟವ್ಯೂ ‌ತಗೊಳ್ಳಿ.”

ನಿತೀಶನ ಕಣ್ಣುಗಳು ಹೊಳೆದವು. ಇಡೀ ದಿನ ಮನೇಲಿ ಒಬ್ಬನೇ ಕುಳಿತು ಬೋರ್‌ ಹೊಡೆಸಿಕೊಳ್ಳುವುದಕ್ಕಿಂತ ಇದು ಒಳ್ಳೆಯದೆನಿಸಿತು. ಮನೆಯೂ ಕಳೆಗಟ್ಟುತ್ತೆ ಅಂತ ನನಗೂ ಅನಿಸಿತು. ನಿತೀಶನ ಪರೀಕ್ಷೆಯ ಕಾರಣದಿಂದ ಮನೇಲಿ ನಿಶ್ಶಬ್ದ ಆವರಿಸಿಕೊಂಡಿತ್ತು.

“ಆದರೆ ಊಟದ ಬಗ್ಗೆ ಏನು ಮಾಡೋದು? ನನ್ನ ಗೆಳೆಯರು 5-6 ಜನ ಇದಾರೆ.”

“ಆದರೇನಾಯ್ತು? ನಿಮ್ಮೆಲ್ಲರ ಇಷ್ಟಗಳು ನನಗೆ ಗೊತ್ತು. ಪಿಜ್ಜಾ, ಬರ್ಗರ್‌ ಇಲ್ಲಾಂದರೆ ಪಾವ್‌ಬಾಜಿ ಮತ್ತು ಭೇಲ್‌ಪುರಿ, ಪಾನಿಪೂರಿ….. ಏನು ಹೇಳ್ತಿರೋ ಅದನ್ನು ಮಾಡ್ತೀನಪ್ಪಾ ಮತ್ತೇನು ಬೇಕು?”

“ನಿಜವಾಗಿಯೂ ಅಮ್ಮಾ? ನೀವೆಷ್ಟು ಒಳ್ಳೆಯವರು. ಹಾಗಾದರೆ ನಾನು ಎಲ್ಲಾ ಸ್ನೇಹಿತರಿಗೂ ಫೋನ್‌ ಮಾಡ್ಲಾ?” ನಿತೀಶ್‌ ಬಂದು ನನ್ನನ್ನು ಅಪ್ಪಿಕೊಂಡ.

ಅವನು ನನಗಿಂತ ಅರ್ಧ ಅಡಿ ಎತ್ತರ ಇದಾನೆ. ಆದರೆ ಈಗಲೂ ತನ್ನ ಇಷ್ಟದಂತೆ ಆಗಾಗ ಹಾಲುಗಲ್ಲದ ಮಗುವಿನಂತೆ ನನ್ನ ಕುತ್ತಿಗೆಗೆ ತೋಳುಗಳನ್ನು ಹಾಕಿ ಅಪ್ಪಿಕೊಳ್ಳುತ್ತಾನೆ. ನಾನು ಹ್ಞೂಂ ಅನ್ನುತ್ತಲೇ, ಅವನು ಓಡುತ್ತಾ ತನ್ನ ಸ್ನೇಹಿತರಿಗೆ ಫೋನ್‌ಮಾಡಲು ಹೋದ. ನಾನು ಕೂಡಲೇ ದಿನದ ಕೆಲಸಗಳಲ್ಲಿ ತೊಡಗಿಕೊಂಡೆ. ಎಲ್ಲೂ ಯಾವುದಕ್ಕೂ ಕೊರತೆಯಾಗಬಾರದು. ಮಕ್ಕಳು ಇಡೀ ದಿನ ಮಜವಾಗಿ ಕಾಲ ಕಳೆಯಬೇಕು ಮತ್ತು ಸಂಪೂರ್ಣ ತೃಪ್ತರಾಗಬೇಕು. ಅದಕ್ಕೆ ತಕ್ಕ ಏರ್ಪಾಡು ಮಾಡಬೇಕು.

10 ಗಂಟೆ ಹೊತ್ತಿಗೆ ನಿಖಿಲ, ಅಜಯ, ಮೋಹನ, ಮುಕುಂದ ಮತ್ತು ಅಂಕಿತ್‌ ಬಂದರು. ಒಬ್ಬ ಹುಡುಗ ಸುಮಾರು 11 ಗಂಟೆಗೆ ಬಂದ. ಅವನು ಮೊದಲೆಂದೂ ನಮ್ಮ ಮನೆಗೆ ಬಂದಿರಲಿಲ್ಲ. ಓದಲಿಕ್ಕಾಗಲೀ, ಆಟಾಡಲಿಕ್ಕಾಗಲೀ ಅಥವಾ ನಿತೀಶನ ಜನ್ಮ ದಿನದ ಪಾರ್ಟಿಗಾಗಲೀ ಯಾವುದಕ್ಕೂ ಬಂದಿರಲಿಲ್ಲ. ಉಳಿದ ಹುಡುಗರು ಫಿಲ್ಮ್ ಶುರುವಾಗಲು ಬಹಳ ಕಾತರದಿಂದ ನಿರೀಕ್ಷಿಸುತ್ತಿದ್ದರು. ನೀತೀಶ್‌ ಅವನಿಗೆ 2-3 ಸಲ ಫೋನ್‌ ಕೂಡಾ ಮಾಡಿದ್ದ. ಅವನ ತಂದೆ ತಾಯಿ ಅವನನ್ನು ಹೀಗೆ ಯಾರೋ ಸ್ನೇಹಿತರ ಮನೆಗೆ ಕಳಿಸಲು ಇಷ್ಟಪಡದಿರಬಹುದು ಎಂದು ನನಗನ್ನಿಸಿತು. ಈ ಬಗ್ಗೆ ನಾನು ನಿತೀಶನನ್ನು ಕೇಳಿದಾಗ ಅವನು “ಅವರು ಹಾಗೇ,” ಎಂದ.

ಅವನು ಬರುತ್ತಲೇ ನಿತೀಶ ಪರಿಚಯ ಮಾಡಿಸಿದ, “ಅಮ್ಮಾ ಇವನು ಸುನೀಲ್‌. ಪುಸ್ತಕದ ಕೀಟ. ಯಾವತ್ತೂ ಆಟವಾಡುವುದಿಲ್ಲ. ಬೇರೆಯವರ ಜೊತೆ ಬೆರೆಯುವುದೂ ಇಲ್ಲ. ಬರೀ ಓದು, ಓದು ಮತ್ತು ಓದು ಅಷ್ಟೇ.”

ಸುನೀಲ ಮುಂದೆ ಬಂದು ನನ್ನ ಕಾಲು ಮುಟ್ಟಿ ನಮಸ್ಕರಿಸಿದ. ಇವತ್ತಿನವರೆಗೆ ನಿತೀಶನಾಗಲೀ, ಅವನ ಗೆಳೆಯರಾಗಲೀ ಯಾರೂ ನನ್ನ ಪಾದ ಮುಟ್ಟಿರಲಿಲ್ಲ.  ನಾನು ನಾಚಿಕೆಯಿಂದ ಅವನ ಭುಜ ತಟ್ಟಿ ಪ್ರೀತಿಯಿಂದ, “ಓದುವುದು ಬಹಳ ಒಳ್ಳೆಯ ವಿಷಯ. ಆದರೆ ಅದರ ಜೊತೆ ಆಟ ಆಡಬೇಕು, ಮಜಾ ಮಾಡಬೇಕು. ಎರಡೂ ಅಗತ್ಯ,” ಎಂದೆ.

ಸುನೀಲ ನಾಚಿಕೊಂಡು ಸುಮ್ಮನಿದ್ದ. ಮಾತನಾಡಲಿಲ್ಲ.

“ನಡೀರಿ ಮಕ್ಕಳೆ, ನಾನು ಎಲ್ಲರಿಗೂ ಪಾಪ್‌ಕಾರ್ನ್‌ ಮತ್ತು ಕೂಲ್‌ಡ್ರಿಂಕ್ಸ್ ತರ್ತೀನಿ. ಅಮೇಲೆ ಸಿನಿಮಾ ನೋಡುವಿರಂತೆ,” ಎಂದೆ.

“ನಮ್ಮ ಜೊತೆ ನೀವು ಸಿನಿಮಾ ನೋಡಬೇಕೂಂತಿದೀರೋ ಹೇಗೆ?” ನಿತೀಶ್‌ ತುಂಟತನದಿಂದ ಕೇಳಿದ.

“ಹೌದು ಮತ್ತೆ. ಒಳ್ಳೆ ಫಿಲ್ಮ್. ನಾನೂ ನೋಡ್ತೀನಿ. ನಿಮ್ಮ ಊಟ ತಿಂಡಿ ಎಲ್ಲಾ ಸಮಯಕ್ಕೆ ಸರಿಯಾಗಿ ಸಿಗುತ್ತಿರುತ್ತೆ. ನಾನು ಎಲ್ಲಾ ಮಾಡಿಟ್ಟಿದೀನಿ.”

“ಆದರೆ ಸ್ನೇಹಿತರ ಮಧ್ಯೆ ನಿಮಗೇನೂ ಕೆಲಸ ಇಲ್ಲ,” ತನ್ನ ಗೆಳೆಯರ ಪರವಾಗಿ ಹೇಳಿದ.

“ಯಾಕಪ್ಪ? ನೀವೆಲ್ಲಾ ಸಿನಿಮಾ ನೋಡಲು ಹೋಗ್ತಿದ್ದೀರಿ ತಾನೇ. ಥಿಯೇಟರ್‌ರಲ್ಲಿ ನೂರಾರು ಜನ ಬಂದಿರಲ್ವಾ? ನಾನು ಎಲ್ಲರಿಗೂ ಹಿಂದಿನ ಸೀಟಿನಲ್ಲಿ ಕುಳಿತುಕೋತೀನಿ. ಯಾರಿಗೂ ತೊಂದರೆ ಕೊಡಲ್ಲ. ನೀವುಗಳು ಎಷ್ಟು ಬೇಕಾದರೂ ಗಲಾಟೆ ಮಾಡಬಹುದು. ನಾನೇನು ಹೇಳಲ್ಲ.”

“ಹಾಗಾದರೆ ಸರಿ,” ಎಲ್ಲಾ ಮಕ್ಕಳು ಒಟ್ಟಿಗೇ ಹೇಳಿದರು. ಎಲ್ಲರೂ ಜೋರಾಗಿ ನಕ್ಕೆವು. ಸುನೀಲನೂ ಕೂಡ ತೆಳು ನಗೆ ಬೀರಿದ.

ಇಡೀ ದಿನ ಮಜವಾಗಿ ಕಳೆಯಿತು. ಪರೀಕ್ಷೆ ಮುಗಿಸಿದೀನಿ. ಇವತ್ತು ಸ್ನೇಹಿತರ ಜೊತೆ ಮಜಾ ಮಾಡ್ತೀದೀನಿ ಅಂತ ನನಗೆ ಅನ್ನಿಸುತ್ತಿತ್ತು. ಮನೆಗೆ ಹೊರಟಾಗ ಎಲ್ಲಾ ಮಕ್ಕಳು ತುಂಬಾ ಚೆನ್ನಾಗಿತ್ತು ಎಂದು ಹೇಳಿದಾಗ ನಾನು ಕೂಡ ನನಗೂ ತುಂಬಾ ಮಜಾ ಅನ್ನಿಸ್ತು  ಎಂದೆ.

ಮಕ್ಕಳು ನನ್ನ ಉತ್ತರದಿಂದ ಬೆರಗಾದರು. ಸುನೀಲನೆಂದ, “ ಆಂಟಿ, ನಾವೆಲ್ಲ ನಿಮಗೆ ತುಂಬಾ ತೊಂದರೆ ಕೊಡ್ತಿದೀವಿ ಅಂತ ನಾವಂದುಕೊಂಡಿದ್ದೆವು. ಈಗ ನೀವು ನೋಡಿದರೆ….”

“ಇಲ್ಲ, ಇಲ್ಲ. ಮಗು, ನನಗೆ ತುಂಬಾ ಚೆನ್ನಾಗಿ ಕಾಲ ಕಳೀತು. ನೀವುಗಳು ಒಂದು ದಿನ ನನ್ನ ಬಾಲ್ಯವನ್ನು ನನಗೆ ಮರಳಿ ತಂದುಕೊಟ್ರಿ. ನಿಮಗೆ ಯಾವಾಗ ಬರಬೇಕೆನ್ನಿಸುತ್ತೊ ಆಗ ಖಂಡಿತ ಇಲ್ಲಿಗೆ ಬರಬಹುದು. ಇದೇ ರೀತಿ ಮಜಾ ಮಾಡೋಣ.” ಎಂದೆ.

ಮಕ್ಕಳು ಸಂತೋಷದಿಂದ ಕುಣಿಯುತ್ತಾ ಹೋದರು. ಆಗ ಇವರಿಂದ ಫೋನ್‌ ಬಂತು. ನಿತೀಶ ತನ್ನ ತಂದೆಯ ಜೊತೆ ಮಾತನಾಡುತ್ತಿದ್ದ. ಅವರಿಗೆ ಇಡೀ ದಿನದ ಕಥೆಯನ್ನು ಬಿಡಿಸಿ ಹೇಳಿದ. ನಾನು ಮನೆಯೆಲ್ಲಾ ಹರಡಿದ್ದ ತಟ್ಟೆ, ಪಾತ್ರೆಗಳನ್ನು ತೆಗೆದು ಓರಣ ಗೊಳಿಸುವುದರಲ್ಲಿ ತೊಡಗಿದೆ. ಇಡೀ ದಿನ ಅದು ಇದೂ ಅಂತ ಬಾಯಾಡಿಸುತ್ತಿದ್ದುದರಿಂದ ರಾತ್ರಿ ಏನೂ ತಿನ್ನಬೇಕು  ಅಂತ ಅನ್ನಿಸಲಿಲ್ಲ. ನಾನು ಬೇಗನೇ ಮಲಗಿದೆ. ನಿತೀಶ ಬಂದು ಮಲಗಿದಾಗ ನಾನು ಸುನೀಲನ ಬಗ್ಗೆ ಕೇಳಿದೆ.

“ಅವನು ಯಾಕೆ ಅಷ್ಟು ಮೌನವಾಗಿ ಬೇರೆ ರೀತಿ ಇರುತ್ತಾನೆ?” ನಿತೀಶ ಹೇಳಿದ,

“ಅವನು ಬೇರೆ ತರಹ ಅಮ್ಮ. ಏಕೆಂದರೆ ಅವನ ಜೀವನ ನಮ್ಮೆಲ್ಲರ ಜೀವನಕ್ಕಿಂತ ಬೇರೆಯೇ ಇದೆ. ಅದಕ್ಕೆ ಅವನು ಎಲ್ಲರಿಂದ ದೂರ ಇರ್ತಾನೆ. ಅದಕ್ಕೆ ಸದಾ ಪುಸ್ತಕಗಳಲ್ಲಿ ಮುಳುಗಿರ್ತಾನೆ.”

“ಅವನ ಅಪ್ಪ ಅಮ್ಮ….” ನಿಧಾನವಾಗಿ ಹೇಳಿದ ನಿತೀಶ.

ನಾನು ಬೆಚ್ಚಿದೆ “ಏನು ಹಾಗಂದರೆ? ನನಗರ್ಥವಾಗಲಿಲ್ಲ.”

“ಅವನ ಅಪ್ಪ ಅಮ್ಮ ಎಷ್ಟೋ ವರ್ಷಗಳಿಂದ ಜೊತೇಲಿಲ್ಲ. ಅವನು ಅಪ್ಪನ ಜೊತೆ ಇದಾನೆ. ತಾಯಿನ ತುಂಬಾ ನೆನಪು ಮಾಡಿಕೊಳ್ತಾನೆ.”

ನಿತೀಶ ತನ್ನ ಮತ್ತು ನನ್ನ ಬಗ್ಗೆ ಏನಾದರೂ ಹೇಳುತ್ತಿದ್ದಾನಾ ಎಂದು ಅನುಮಾನಿಸಿ ನಾನು ಅವನ ಮುಖವನ್ನೇ ಗಮನವಿಟ್ಟು ನೋಡಿದೆ. ನಾವು ದೂರ ದೂರ ಇರುವುದರಿಂದ ತನಗಾಗುತ್ತಿರುವ ನೋವನ್ನು ಸುನೀಲನ ನೆಪದಲ್ಲಿ ಈ ರೀತಿ ಹೇಳುತ್ತಿಲ್ಲವಷ್ಟೇ. ನನಗೆ ತಡೆದುಕೊಳ್ಳಲಾಗುತ್ತಿಲ್ಲ.

“ಮಗು ಜೀವನದಲ್ಲಿ  ಬಹಳಷ್ಚು ಅನಿವಾರ್ಯತೆಗಳು ಬರುತ್ತದೆ. ಈಗ ಅಸ್ಸಾಂನಲ್ಲಿ ಸುರಕ್ಷಿತ ವಾತಾವರಣ ಇಲ್ಲ. ಅಲ್ಲದೆ ನಿನಗೆ ಎಸ್‌.ಎಸ್‌.ಎಲ್.ಸಿ. ಪರೀಕ್ಷೆ ಇತ್ತು. ನಿನ್ನ ಭವಿಷ್ಯದ ಚಿಂತೆಯೇ ನಮ್ಮನ್ನು ಅಪ್ಪನಿಂದ ದೂರ ಮಾಡಿದೆ.”

“ನಾವು ಬಹುಶಃ ಸುನೀಲನ ಬಗ್ಗೆ ಮಾತನಾಡುತ್ತಿದ್ದೀವಿ ಅನ್ನಿಸುತ್ತೆ,” ನಿತೀಶ ನನ್ನನ್ನು ದಿಟ್ಟಿಸುತ್ತಾ ಹೇಳಿದ.

“ಹೌದು ಹೌದು, ನಾವು ಸುನೀಲನ ಬಗ್ಗೆ ಮಾತನಾಡುತ್ತಿದ್ದೆವು. ಯಾಕೋ ಗೊತ್ತಿಲ್ಲ ನನಗನ್ನಿಸಿತು…”

“ನೀವು ತಪ್ಪು ತಿಳಿದುಕೊಂಡಿದೀರಿ. ನಾನು ಹೇಳಿದೆನಲ್ಲಾ ನಮ್ಮೆಲ್ಲರಿಗಿಂತ ಬೇರೇನೇ ಅಂತ. ಅವನ ಅಪ್ಪ ಅಮ್ಮ ಜೊತೆಗಿರಲು ಸಾಧ್ಯವೇ ಇಲ್ಲ. ಇದೇ ಊರಲ್ಲಿದ್ದಾರೆ. ಆದರೆ ಬೇರೆ ಬೇರೆ. ಇಬ್ಬರಿಗೂ ಜೋರಾಗಿ ಜಗಳ ಆಗ್ತಿರುತ್ತೆ. ದೂರ ದೂರ ಇದ್ದರೂ ಅವರು ಯಾವುದಾದರೂ ನೆಪದಿಂದ ಜಗಳ ಆಡ್ತಿರ್ತಾರೆ.”

“ಪಾಪ, ಸುನೀಲ್‌,” ನನಗೆ ಸುನೀಲನ ಬಗ್ಗೆ ಬೇಸರವಾಯಿತು.

“ಅವನಿಗೆ ಇದೆಲ್ಲದರಿಂದ ಬೇಜಾರಾಗಿರುತ್ತೆ. ಜೊತೆಗೆ ನೆಂಟರು, ಅಕ್ಕ ಪಕ್ಕದವರು, ಸ್ನೇಹಿತರು ಕೇಳುವ ಪ್ರಶ್ನೆಗಳು ಇನ್ನೂ ಬೇಜಾರು ಮಾಡುತ್ತವೆ. ಅದಕ್ಕೆ ಅವನು ಯಾರ ಹತ್ತಿರಾನೂ ಮಾತಾಡಲ್ಲ. ಯಾರ ಸ್ನೇಹವನ್ನೂ ಮಾಡಿಕೊಳ್ಳಲ್ಲ. ಆದರೆ ತುಂಬಾ ಒಳ್ಳೆ ಹುಡುಗ. ಎಲ್ಲರಿಗೂ ಸಹಾಯ ಮಾಡುತ್ತಾನೆ.”

“ಅವನು ಅಮ್ಮನ ಜೊತೆ ಇರಲು ಇಷ್ಟಪಡ್ತಾನಾ?”

“ಅವನನ್ನು ಕೇಳೋರಾದರೂ ಯಾರಿದಾರೆ ಅಮ್ಮಾ? ಅವನಿಗೆ ಇಬ್ಬರ ಜೊತೇಲೂ ಇರೋಕೆ ಇಷ್ಟ. ಆದರೆ ಒಮ್ಮೆ ಅವನಮ್ಮ ಬಲವಂತವಾಗಿ ಅವನನ್ನು ಕರೆದುಕೊಂಡು ಹೋಗ್ತಾರೆ. ಇನ್ನೊಮ್ಮೆ ಅವರಪ್ಪ ನನ್ನ ಜೊತೆ ಇರು ಅಂತ ಬಲವಂತ ಮಾಡ್ತಾರೆ, ಇವರಿಬ್ಬರ ಎಳೆದಾಟದಲ್ಲಿ ಅವನನ್ನು ಹಾಸ್ಟೆಲಿಗೂ ಕಳಿಸಲ್ಲ.”

“ಅವರಪ್ಪ ಅಮ್ಮನಿಗೆ ತಿಳಿವಳಿಕೆಯಿಲ್ಲ. ತಮ್ಮ ಜಗಳದಲ್ಲಿ ಮಗನನ್ನು ಮರೆತೇಬಿಟ್ಟಿದ್ದಾರೆ.”

“ಅಮ್ಮಾ, ನಾವು ಅವನಿಗೇನಾದರೂ ಸಹಾಯ ಮಾಡಬಹುದಾ?” ನಿತೀಶನಿಗೆ ನಿಜವಾಗಲೂ ಸುನೀಲನ ಬಗ್ಗೆ ಚಿಂತೆಯಾಗಿತ್ತು. ಆದರೆ ನಾವು ಅವನಿಗೆ ಏನು ಸಹಾಯ ಮಾಡಲು ಸಾಧ್ಯ? ಅವನ ತಂದೆ ತಾಯಿ ಚಿಕ್ಕ ಮಕ್ಕಳೇನೂ ಅಲ್ಲ. ಅಲ್ಲದೆ, ಅವರಿಗೆ ಅರ್ಥ ಮಾಡಿಸಲು ಅವರ ಸ್ನೇಹಿತರು ಬಂಧುಗಳು ಪ್ರಯತ್ನಿಸಿರಬಹುದು. ಒಮ್ಮೊಮ್ಮೆ ಅಹಂ ಎಷ್ಟು ಅಡ್ಡ ಬರುತ್ತದೆಯೆಂದರೆ ವ್ಯಕ್ತಿ ತನ್ನ ಮತ್ತು ತನ್ನವರ ಒಳಿತು ಕೆಡುಕುಗಳನ್ನು ಯೋಚಿಸುವ ಶಕ್ತಿಯನ್ನೂ ಕಳೆದುಕೊಂಡುಬಿಡುತ್ತಾರೆ. ನಾನು ಏನೋ ಯೋಚನೆಯಲ್ಲಿ ಮುಳುಗಿದೆ. ನಿತೀಶ ನನ್ನನ್ನು ತಬ್ಬಿಕೊಂಡ.

ಅವನಿಗೆ ಅಪ್ಪನ ನೆನೆಪಾದಾಗಲೆಲ್ಲಾ ಅವನು ಹೀಗೆ ಮಾಡ್ತಾನೆ ಅನ್ನುವುದು ನನಗೆ ಗೊತ್ತಿತ್ತು. ನಾನು ಅವನ ಬೆನ್ನು ತಟ್ಟಿ ತಲೆ ಸವರುತ್ತಾ ಮೆಲ್ಲನೆ ತಟ್ಟತೊಡಗಿದೆ. ಅವನಿಗೆ ಹಾಗೇ ನಿದ್ರೆ ಬಂತು.

ಸ್ವಲ್ಪ ದಿನಗಳ ನಂತರ ನಿತೀಶನ ಸ್ನೇಹಿತರು ಮತ್ತೆ ಮೊದಲಿನಂತೆ ಇಡೀ ದಿನ ಕಳೆಯಲು ನಮ್ಮ ಮನೆಗೆ ಬಂದರು. ಸುನೀಲನೇ ಈ ವಿಷಯ ಎತ್ತಿದ್ದು ನನಗೆ ಮಾತ್ರವಲ್ಲ, ಅವನ ಸ್ನೇಹಿತರಿಗೂ ಆಶ್ಚರ್ಯ ಉಂಟುಮಾಡಿತ್ತು. ಸುನೀಲ ಸ್ನೇಹಿತರನ್ನು ಬಿಟ್ಟು ಮತ್ತೆ ಮತ್ತೆ ಅಡುಗೆಮನೆಗೆ ಬಂದು ನನ್ನ ಹತ್ತಿರ ನಿಲ್ಲುತ್ತಿದ್ದ. ಏನೂ ಮಾತನಾಡುತ್ತಿರಲಿಲ್ಲ. ನಾನು ಏನಾದರೂ ಕೇಳಿದರೆ ಅದಕ್ಕೂ ಹ್ಞೂಂ, ಇಲ್ಲಾ ಅಂತಲೋ ಅಥವಾ ತಲೆ ಅಲ್ಲಾಡಿಸಿಯೋ ಉತ್ತರಿಸುತ್ತಿದ್ದ. ಇದಾಗಿ ಸ್ವಲ್ಪ ದಿನಗಳಲ್ಲಿ ನಗರದ ಪರಿಸ್ಥಿತಿ ಸಾಮಾನ್ಯವಾಯಿತು. ಆಗ ನಿತೀಶ ತನ್ನ ಸ್ನೇಹಿತರೊಂದಿಗೆ ಹೊರಗೆ ಹೋಗುವ ಕಾರ್ಯಕ್ರಮ ಹಾಕಿದ. ಅಂದು ನಿತೀಶ ಮನೆಯ ಹೊರಗೆ ಹೋದ. ಇತ್ತ ಸುನೀಲ ಬಂದ.

“ನಿತೀಶ ಹೋದನಲ್ಲಾ? ನೀನು ಬರೋದು ಅವನಿಗೆ ಗೊತ್ತಿರಲಿಲ್ಲಾ? ಇರಲಿ, ಅವನು ಈಗ ತಾನೇ ಹೋದ. ಎಲ್ಲರೂ ಎಲ್ಲಿ ಹೋಗ್ತಾರೆ ಅನ್ನೋದು ನಿನಗೆ ಗೊತ್ತಿದೆ ಅಲ್ವಾ?” ನಾನು ಪ್ರೀತಿಯಿಂದ ಕೇಳಿದೆ.

“ಆಂಟಿ, ನಾನು ನಿಮ್ಮನ್ನೇ ನೋಡಕ್ಕೆ ಬಂದಿದೀನಿ,” ಅವನು ಬಾಗಿಲ ಹತ್ತಿರವೇ ನಿಂತು ಹೇಳಿದ. ಬಹಳ ಬೇಜಾರಿನಲ್ಲಿದ್ದ.

ನನ್ನ ಜೊತೆ ಮಾತನಾಡಿ ತನ್ನ ಬೇಸರ ಹೇಳಿಕೊಳ್ಳಲು ಬಂದಿದ್ದಾನೆ ಅಂತ ನನಗೆ ತಿಳಿಯಿತು. ಬಹುಶಃ ಆವತ್ತೂ ಅವನು ಅಡುಗೆಮನೆಗೆ ಮತ್ತೆ ಮತ್ತೆ ಬಂದು ನಿಲ್ಲುತ್ತಿದ್ದುದು ಇದಕ್ಕೆ ಇರಬೇಕು. ಆದರೆ ಅವನಿಗೆ ಮಾತನಾಡಲು ಅವಕಾಶ ಸಿಕ್ಕಿರಲಿಲ್ಲ.

“ಸ್ನೇಹಿತರ ಜೊತೆ ಹೋಗಿದ್ದರೆ ನಿನ್ನ ಮೂಡ್‌ ಸರಿಯಾಗ್ತಿತ್ತು,” ನಾನು ಹೇಳಿದೆ.

ಅವನ ಕಣ್ಣುಗಳು ತುಂಬಿಬಂದವು. ಇಲ್ಲ ಅನ್ನುವಂತೆ ತಲೆ ಅಲ್ಲಾಡಿಸಿದ. ನನಗೆ ಅರ್ಥವಾಯಿತು. ಅವನ ಭುಜದ ಮೇಲೆ ಕೈಯಿಟ್ಟು ಪ್ರೀತಿಯಿಂದ, “ನಿನ್ನ ಅಮ್ಮನ ನೆನಪು ಬರುತ್ತಿದೆಯಾ?” ಎಂದು ಕೇಳಿದೆ.

ಅವನು ಏನೂ ಹೇಳದೆ ನನ್ನ ಹೆಗಲ ಮೇಲೆ ತಲೆಯಿಟ್ಟ. ನನ್ನ ಕಣ್ಣುಗಳಲ್ಲಿ ನೀರು ತುಂಬಿತು. ಮನಸ್ಸಿನಲ್ಲಿ ಅವನ ತಾಯಿಯನ್ನು ಬೈದುಕೊಂಡೆ. ತಾಯಿ ಇದ್ದೂ ಇವನು ತಾಯಿ ಪ್ರೀತಿಗಾಗಿ ಅಲೆಯುತ್ತಿದ್ದಾನೆ, ಹಂಬಲಿಸುತ್ತಿದ್ದಾನೆ.

“ಆಂಟಿ, ಕ್ಷಮಿಸಿ, ನಾನು ನಿಮಗೆ ತೊಂದರೆ ಕೊಡ್ತಿಲ್ಲ ತಾನೇ?”

“ಇಲ್ಲ ಇಲ್ಲ ಸುನೀಲ್‌, ತೊಂದರೆ ಎಂಥದ್ದು? ನೋಡು ನಾನೊಬ್ಬಳೇ ಇದ್ದು ಬೋರ್‌ ಆಗ್ತಿತ್ತು. ನೀನು ಬಂದಿದ್ದು ಒಳ್ಳೆದಾಯಿತು. ಈಗ ಇಡೀ ದಿನ ತುಂಬಾ ಮಾತನಾಡೋಣ. ಇವತ್ತಿನ ದಿನ ಪೂರ್ತಿ ನಿನಗೇ ಮೀಸಲು,” ನಾನು ಅವನಿಗಾಗಿ ತಿಂಡಿ ತರಲು ಅಡುಗೆಮನೆಗೆ ಹೋದೆ.

ಅವನು ಸದ್ದಿಲ್ಲದೆ ಕಣ್ಣೊರೆಸಿಕೊಳ್ಳುತ್ತಾ ಅಲ್ಲೇ ಕುಳಿತ. ತಟ್ಟೇಲಿ ಇಡ್ಲಿ ಚಟ್ನಿ ಜೊತೆಗೆ ಕಾಫಿ ತಂದು ಅವನ ಮುಂದೆ ಇಟ್ಟೆ. ಅವನು ಎದ್ದೇ ಬಿಟ್ಟ.

“ಆಂಟಿ, ಇದೆಲ್ಲಾ ಬೇಡ ನನ್ನದು ತಿಂಡಿ ಆಗಿದೆ,” ತಲೆ ತಗ್ಗಿಸಿ ಹೇಳಿದ.

“ಪರವಾಗಿಲ್ಲ. ಮಾತಾಡ್ತಾ ಸ್ವಲ್ಪ ಸ್ವಲ್ಪ ತಿನ್ನು. ಕುಳಿತುಕೊ, ನಿನ್ನ ಬಗ್ಗೆ ಹೇಳು.”

“ ನನ್ನ ಬಗ್ಗೆ ತಿಳಿದುಕೊಂಡು ನೀವೇನು ಮಾಡ್ತೀರಿ? ಅಲ್ಲದೆ, ನನ್ನ ಬಗ್ಗೆ ಹೇಳಲು ಏನು ತಾನೇ ಇದೆ?” ಅವನ ಬೇಸರ ಹೆಚ್ಚಿತು.

“ಇರಲಿ ಅಪ್ಪ ಏನು ಮಾಡ್ತಾರೆ? ಅಮ್ಮ ಏನು ಮಾಡ್ತಾರೆ? ಎಲ್ಲಿರ್ತೀರಾ? ನಿನ್ನ ಹವ್ಯಾಸಗಳೇನು? ಅಣ್ಣ, ತಮ್ಮ, ತಂಗಿ ಎಷ್ಟು ಜನ?” ನಾನು ಅವನ ಹತ್ತಿರ ಸೋಫಾದ ಮೇಲೆ ಕುಳಿತು ಕೇಳಿದೆ. ಅವನೇನು ಹೇಳಲಿಲ್ಲ. ಸುಮ್ಮನೆ ತಲೆ ಆಡಿಸುತ್ತಾ ಕುಳಿತಿದ್ದ. ಅವನು ಮನ ಬಿಚ್ಚಿ ಮಾತಾಡಲಿ ಎಂದು ನಿರೀಕ್ಷಿಸುತ್ತಿದ್ದೆ. ಅದಕ್ಕೆ ಮಾತಿನಲ್ಲಿ ಸಿಕ್ಕಿಸಿ ಮಾತನಾಡಲು ಒತ್ತಡ ಹಾಕುತ್ತಿದ್ದೆ.

“ನೋಡು, ನೀನು ನನ್ನ ಬಗ್ಗೆ ಏನು ಬೇಕಾದರೂ ಕೇಳು ನಾನು ಹೇಳ್ತೀನಿ. ದಿನವೆಲ್ಲಾ ಸುಮ್ಮನೆ ಕುಳಿತುಕೊಳ್ಳಲು ಕಷ್ಟ ಆಗುತ್ತಲ್ವಾ? ಕುಳಿತಿದೀವಿ ಅಂದ ಮೇಲೆ ಮಾತನಾಡಬೇಕಾಗುತ್ತೆ.”

“ನನ್ನ ತಂದೆ ಫ್ಯಾಕ್ಟರಿ ಇಟ್ಟಿದ್ದಾರೆ. ಚೆನ್ನಾಗಿ ನಡೀತಿದೆ. ನಮ್ಮ ಫ್ಯಾಕ್ಟರಿ ವಸ್ತುಗಳು ಹೊರದೇಶಕ್ಕೂ ಹೋಗುತ್ತಿವೆ.”

“ಮತ್ತೆ ಅಮ್ಮಾ”

“ ಅವರು ಒಂದು ಕಂಪನಿಯ ಮ್ಯಾನೇಜಿಂಗ್‌ ಡೈರೆಕ್ಟರ್‌.”

“ನೀನು ಇರೋದು ಎಲ್ಲಿ?”

“ನಾವು ಇಂದಿರಾನಗರದಲ್ಲಿರುತ್ತೀವಿ. ಅಮ್ಮ ವಿಜಯನಗರದಲ್ಲಿ,” ಅವನು ಸುಮ್ಮನಾದ.

“ಏನು ವಿಷಯ ಮಗು? ನಿನಗೆ ಇಷ್ಟವಿಲ್ಲದಿದ್ದರೆ ಹೇಳಬೇಡ ಬಿಡು. ನಿನಗೆ ನಿಮ್ಮಮ್ಮನ ನೆನಪು ಬಂತು ಅದಕ್ಕೆ ಇಲ್ಲಿಗೆ ಬಂದೆ. ನನಗಂತೂ ನೀನು ಬಂದಿದ್ದು ತುಂಬಾ ಸಂತೋಷಾಗ್ತಿದೆ. ಆದರೆ ನೀನು ನಿನ್ನಮ್ಮನ ಹತ್ತಿರ ಹೋಗಬಹುದಿತ್ತು.”

“ಹಾಗೆ ಆಗುವುದಿದ್ದರೆ…” ಅವನು ಉಸಿರೆಳೆದುಕೊಂಡ. ಅವನ ಕಣ್ಣುಗಳು ಮತ್ತೆ ತುಂಬಿಬಂದವು.

“ಯಾಕಾಗುವುದಿಲ್ಲ? ಕಾರಣ ತಿಳಕೋಬಹುದಾ? ನಿನಗೆ ಹೇಳಕ್ಕೆ ಇಷ್ಟ ಇದೆಯಾ?” ನಾನು ಅವನ ತಲೆ ಸವರುತ್ತಾ ಕೇಳಿದೆ.

“ಅಪ್ಪನಿಗೆ ಗೊತ್ತಾದರೆ ಅವರಿಗೆ ಕಷ್ಟವಾಗುತ್ತದೆ. ಅಮೇಲೆ ಎಷ್ಟೋ ದಿನಗಳು ಅಮ್ಮನಿಗೆ ಫೋನ್‌ ಮಾಡಿ ಕೆಟ್ಟದಾಗಿ ಬೈತಾರೆ. ನನಗೂ ಮಾತುಮಾತಿಗೆ ಏನಾದರೂ ಅನ್ನುತ್ತಲೇ ಇರುತ್ತಾರೆ. ನಾನು ಅದನ್ನೆಲ್ಲಾ ಸಹಿಸ್ಕೋತೀನಿ. ಅಮ್ಮ ಮನೆಯಲ್ಲಿ ಎಲ್ಲಿ ಇರ್ತಾರೆ? ನಾನೇದರೂ ಹೋದರೆ ಅವರು ರಜಾ ತಗೊಳ್ಳಲ್ಲ. ಅವರಿಗೆ ಆಫೀಸಿನಲ್ಲಿ ತುಂಬಾ ಕೆಲಸ ಇರುತ್ತಲ್ವಾ?”

ನನಗೆ ಸುನೀಲನ ಮೇಲೆ ದಯೆ  ಉಂಟಾಗಿತ್ತು.

“ಅಲ್ಲದೆ, ಅಮ್ಮ ಇಡೀ ದಿನ ನನ್ನ ಜೊತೆ ಇದ್ದರೆ ನನ್ನ ಜೊತೆ ಮಾತಾಡಲ್ಲ. ಮಾತು ಮಾತಿಗೂ ಅಪ್ಪನಿಗೆ ಏನಾದರೂ ಅನ್ನುತ್ತಿರುತ್ತಾರೆ. ನಾನು ಅವರ ಬೈಗುಳ ಎಣಿಸಿಕೊಳ್ತಿರ್ತೀನಿ.”

ಅಹಂನಿಂದಾಗಿ ಗಂಡ ಹೆಂಡತಿಯ ನಡುವಿನ ವೈಮನಸ್ಯದಲ್ಲಿ ಮಗ ಎಷ್ಟು ಸಹಿಸಿಕೊಳ್ಳುತ್ತಿದ್ದಾನೆ ಅನ್ನುವುದರ ಬಗ್ಗೆ ಯಾರಿಗೂ ಗಮನವೇ ಇಲ್ಲ.

“ನನ್ನನ್ನು ಹಾಸ್ಟೆಲಿಗೆ ಕಳಿಸಿ ಅಂತ ನಾನೆಷ್ಟೋ ಸಲ ಹೇಳಿದೀನಿ. ಆದರೆ ಯಾರೂ ಕಳಿಸೋದಿಲ್ಲ. ಇಬ್ಬರಿಗೂ ಭಯ. ಎಲ್ಲಿ ಯಾರಾದರೂ ಒಬ್ಬರಿಗೆ ಹಾಸ್ಟಲಿಗೆ ಜಾಸ್ತಿ ಸಲ ಬಂದು ನನ್ನನ್ನು ಪುಸಲಾಯಿಸಿ ತಮ್ಮ ಪಕ್ಕ ಮಾಡಿಕೊಂಡು ಬಿಡ್ತಾರೆ ಅನ್ನೋ ಭಯ.”

“ನಿನಗೆ ಯಾರ ಹತ್ತಿರ ಇರಲು ಇಷ್ಟ…. ಅಮ್ಮನ ಹತ್ತಿರನೋ ಅಪ್ಪನ ಹತ್ತಿರನೋ?”

“ಯಾರ ಹತ್ತಿರನೂ ಇಲ್ಲ. ನಾನು ಒಬ್ಬರ ಹತ್ತಿರ ಇದ್ದರೆ ಅಲ್ಲಿ ಇನ್ನೊಬ್ಬರು ವಿಷದ ಬಾಣ ಬಿಡ್ತಾ ಇರ್ತಾರೆ. ನಾನೇನು ಹೇಳಲಿ? ನನಗೆ ಇಬ್ಬರೂ ಒಂದೇ ಸಮ.”

“ನೀನು ಸರಿ ಹೇಳ್ತಿದೀಯ. ಈ ವಿಷಯ ನಿನ್ನ ಅಪ್ಪ, ಅಮ್ಮನಿಗೆ ಅರ್ಥವಾಗ್ಬೇಕು.”

“ಆಂಟಿ ನಿತೀಶನ ಅಪ್ಪ ಕೂಡ ಬೇರೆ ಇರ್ತಾರೆ. ಆದರೂ…”

“ನಿತೀಶನ ಅಪ್ಪ ನಮ್ಮ ಜೊತೇನೇ ಇರ್ತಿದ್ದರು. ಅವರಿಗೆ ವರ್ಗವಾಯಿತು. ಈ ಸಲ ನಿತೀಶನ ವಿದ್ಯಾಭ್ಯಾಸದ ಕಾರಣ ನಾವು ಅವರ ಜೊತೆಲೇ ಹೋಗಲಿಲ್ಲ. ಆದ್ದರಿಂದ ನಾವಿಲ್ಲಿ….” ನಾನು ನನ್ನ ಜೀವನದ ಬಗ್ಗೆ ಸುನೀಲನಿಗಿರುವ ತಪ್ಪಾಭಿಪ್ರಾಯವನ್ನು ದೂರ ಮಾಡಲು ಇಷ್ಟಪಟ್ಟೆ ಅಥವಾ ಅವನು ಹಾಗೆ ಹೇಳಿದ ಮಾತು ನನ್ನಲ್ಲಿ ಭಯ ಹುಟ್ಟಿಸಿತು.

“ನನಗೆ ಸತ್ಯ ಗೊತ್ತು ಆಂಟಿ. ನೀವು ಮತ್ತು ನಿತೀಶ ಅವರ ವಿಷಯ ಮಾತನಾಡುವಾಗ ಗೌರವ ಮತ್ತು ಪ್ರೀತಿಯಿಂದ ಮಾತಾಡ್ತೀರಿ ಅಂತ ಹೇಳ್ತಾ ಇದ್ದೆ. ಅವರನ್ನು ಯಾವಾಗಲೂ ನೆನಪು ಮಾಡಿಕೋತೀರಿ. ಅಂಕಲ್‌ ನಿಮಗೆ ದಿನಾ ಫೋನ್‌ ಮಾಡಿ ಮಾತಾಡ್ತಾರೆ ಅಂತಲೂ ಗೊತ್ತು. ಆದರೆ ನಮ್ಮ ಮನೇಲಿ ಹಾಗಿಲ್ಲ. ನಾನು ಇಬ್ಬರಿಗೂ ಬೇಕು. ಆದರೆ ನಾನು ಯಾರ ಹತ್ತಿರ ಹೋಗ್ತೀನೋ ಅವರು ನನ್ನನ್ನು ಪ್ರೀತಿಸುವ ಬದಲು ಇನ್ನೊಬ್ಬರ ಬಗ್ಗೆ ಕೆಟ್ಟ ಮಾತಾಡ್ತಿರ್ತಾರೆ.”

“ಇದಕ್ಕೆಲ್ಲಾ ಏನಾದರೂ ಕಾರಣ ಇರಬೇಕಲ್ಲ?”

“ಏನು ಕಾರಣ ಇರುತ್ತೆ? ಇಬ್ಬರ ಹತ್ತಿರಾನೂ ಪರಸ್ಪರರಿಗಾಗಿ, ನನಗಾಗಿ, ಮನೆಗಾಗಿ ಯಾರಿಗೆ ಆಗಲಿ ಸಮಯವೇ ಇರೋದಿಲ್ಲ.”

“ನಿನ್ನಮ್ಮನೂ ಕೂಡ ಕೆಲಸ ಮಾಡ್ತಾರೆ. ಅದಕ್ಕೆ ನೀವೆಲ್ಲರೂ ಸೇರಿ ಸ್ವಲ್ಪ ಅಡ್ಜಸ್ಟ್ ಮಾಡಿಕೋಬೇಕು.”

“ಅದನ್ನು ನಾನು ಮಾಡ್ತಿದೀನಿ. ಆದರೆ ಅವರಿಬ್ಬರೂ ತಾವೇ ದೊಡ್ಡವರು ಅಂತ ಸಾಬೀತು ಮಾಡೋದರಲ್ಲಿ ಇರ್ತಾರೆ. ಮೊದಲು ಜಗಳ ಶುರುವಾಗುತ್ತೆ. ಆಮೇಲೆ ಮಾತು ಶುರುವಾಗುತ್ತೆ.”

ಈ ಮಾತುಗಳನ್ನಾಡುವಾಗ ಸುನೀಲನಿಗೆ ಸಂತೋಷವೇನೂ ಆಗುತ್ತಿರಲಿಲ್ಲ. ಆದರೆ ಅವನಲ್ಲಿದ್ದ ಆತಂಕ ಕಡಿಮೆಯಾಗುತ್ತಿತ್ತು. ಅವನ ಮಾತನ್ನು ಕೇಳುವವರು ಯಾರೂ ಇಲ್ಲ ಅನ್ನುವುದು ನನಗೆ ಅರ್ಥವಾಗಿತ್ತು. ಬಹುಶಃ ಇದರಿಂದಲೇ ಅವನು ತನ್ನ ಮನದ ಭಾರವನ್ನು ಹಗುರಗೊಳಿಸಲು ಬಂದಿದ್ದ. ಅಂದು ಅವನು ನನ್ನನ್ನು ಭೇಟಿಯಾಗಿದ್ದಾಗ ಅವನು ನನ್ನಲ್ಲಿ ಏನು ಕಂಡನೋ ತನ್ನ ಮನದ ಮಾತು ಹೇಳಲು ಈಗ ಬಂದಿದ್ದಾನೆ. ನನಗೂ ಅವನನ್ನು ನಿರಾಸೆಗೊಳಿಸಲು ಇಷ್ಟವಿಲ್ಲ. ನಾನು ಮೌನವಾಗಿ ಅವನ ತಂದೆ ತಾಯಿ ಬೇರೆಯಾಗಿದ್ದರಿಂದ ಉಂಟಾದ ಅವನಲ್ಲಿನ ನೋವು, ತೊಂದರೆಗಳು ದ್ವಂದ್ವಗಳ ಕಥೆಯನ್ನು ಕೇಳುತ್ತಾ ಇದ್ದೆ.

ನನಗೆ ಅವನ ಮೇಲೆ ತುಂಬಾ ದಯೆ ಉಂಟಾಗುತ್ತಿತ್ತು. ಆದರೆ ಅವನಿಗ ಹೇಗೆ ಸಹಾಯ ಮಾಡುವುದು ನನಗೆ ಗೊತ್ತಾಗುತ್ತಿರಲಿಲ್ಲ. ನನಗೆ ಸುನೀಲನೂ ನನ್ನ ಮಗ ನಿತೀಶನ ಹಾಗೆ. ನಾನು ಅವನಿಗೆ ಅದೇ ಪ್ರೀತಿ, ವಾತ್ಸಲ್ಯ ಕೊಡಲು ಸಿದ್ಧಳಿದ್ದೇನೆ. ಸುನೀಲನಿಗೆ ನನ್ನಿಂದ ಬೇಕಾಗಿರುವುದು ಅದೇ ಎಂದು ಭಾವಿಸುತ್ತೇನೆ. ಆದರೆ ನಾನು ಅವನ ಜೀವನದಲ್ಲಿ ತಂದೆ ತಾಯಿಯರ ಪ್ರೀತಿಯ ಕೊರತೆಯನ್ನು ಪೂರ್ಣ ಮಾಡಲಾರೆ.

ಈ ಭೇಟಿಯಿಂದ ಸುನೀಲನಿಗೆ ಪೂರ್ಣ ತೃಪ್ತಿಯಾಗಿತ್ತು. ಅವನ ಮನದಲ್ಲಿದ್ದ ಲಾವಾ ಹರಿದುಹೋಗಿತ್ತು. ಅವನ ಮನಸ್ಸು ಹಗುರವಾಗಿತ್ತು. ಆದರೆ ನನಗೆ ತೊಂದರೆಯಾಗತೊಡಗಿತ್ತು.  ಯಾವಾಗಲೂ ನನ್ನ ಮನಸ್ಸಲ್ಲಿ ಸುನೀಲನ ತಂದೆ ತಾಯಿಯರಿಗೆ ಅವನ ನೋವನ್ನು ಹೇಗೆ ತಿಳಿಸುವುದು ಮತ್ತು ಅವರು ತಮ್ಮ ತಪ್ಪನ್ನು ತಿದ್ದಿಕೊಳ್ಳುವಂತೆ ಮಾಡುವುದು ಹೇಗೆ ಎಂಬ ಗೊಂದಲವಿತ್ತು.

ಒಂದು ದಿನ ಬೆಳಗ್ಗೇನೆ ಬಾಗಿಲು ಕರೆಗಂಟೆ ಬಾರಿಸಿತು. ನಾನು ಬಾಗಿಲು ತೆರೆದೆ. ಸುನೀಲ ಬಂದಿದ್ದ. ಕೈಯಲ್ಲಿ ಗುಲಾಬಿ ಹೂವನ್ನು ನನಗೆ ಕೊಟ್ಟು `ಹ್ಯಾಪಿ ಮದರ್ಸ್‌ ಡೇ’ ಎಂದ.

ಮದರ್ಸ್‌ ಡೇ ದಿನ ಆಂಟಿ ಎಂದು ಕರೆಯುವುದು ಅವನಿಗೆ ಸ್ವಲ್ಪ ಹಿಂಸೆಯಾಗಿರಬೇಕು. ಅವನು ನನ್ನ ಕಾಲು ಮುಟ್ಟಲು ಬಗ್ಗಿದಾಗ ನಾನು ಅವನನ್ನು ಮೇಲಕ್ಕೆತ್ತಿ ಆಶೀರ್ವಾದ ರೂಪವಾಗಿ ಅವನ ಹಣೆಯನ್ನು ಚುಂಬಿಸಿದಾಗ ಬೆಚ್ಚುವಂತಾಯಿತು. ಇಷ್ಟು ಉರಿ ಬೇಸಿಗೆಯಲ್ಲಿ ಅವನ ಹಣೆ ಮಂಜಿನಂತೆ ತಣ್ಣಗಿತ್ತು.

ನಾನು ಅವನ ಭಾವನೆಗಳು, ಅಸಹಾಯಕತೆಗಳ ಬಗ್ಗೆ ಯೋಚಿಸುತ್ತಾ ಇರುವಾಗಲೇ ಅವನು ನನ್ನ ತೋಳುಗಳಲ್ಲಿ ಓಲಾಡಿದ. ಮರುಕ್ಷಣ ಅವನಿಗೆ ಜ್ಞಾನ ತಪ್ಪಿತು. ನಿತೀಶ ಮತ್ತು ನಾನು ಅವನನ್ನು ಹಾಲಿನಲ್ಲಿದ್ದ ಸೋಫಾ ಮೇಲೆ ಕರೆತಂದು ಮಲಗಿಸಿ ಮುಖದ ಮೇಲೆ ನೀರು ಚಿಮುಕಿಸಿದೆವು. ಗ್ಲೂಕೋಸನ್ನು ನೀರಿನಲ್ಲಿ ಹಾಕಿ ಕುಡಿಸಿದೆ ಅವನಿಗೆ ಸ್ವಲ್ಪ ಮಟ್ಟಿಗೆ ಜ್ಞಾನ ಬಂದಂತೆ ಆದಾಗ ಅವನು ನನ್ನನ್ನು ಅಪ್ಪಿಕೊಂಡು ಅಳತೊಡಗಿದ.

ಅವನನ್ನು ಸಮಾಧಾನ ಮಾಡಿ ಹಾಗೆ ಮಲಗಿರಲು ಹೇಳಿದೆ. ಅವನ ಸ್ಥಿತಿ ನೋಡಿ ನನಗೆ ಬಹಳ ಚಿಂತೆಯಾಯಿತು. ಅವನಿಗೆ ಮತ್ತೆ ಜ್ಞಾನ ತಪ್ಪಿತು. ನನಗೆ ಏನೂ ಮಾಡಲು ತೋಚಲಿಲ್ಲ. ಪಕ್ಕದ ಮನೆಯಲ್ಲಿದ್ದ ಡಾಕ್ಟರ್‌ಗೆ ತಕ್ಷಣ ಫೋನ್‌ ಮಾಡಿದೆ. ಸುನೀಲನ ಮನೆಯ ನಂಬರಿಗೂ ಫೋನ್‌ ಮಾಡಿದೆ. ನೌಕರ ಫೋನೆತ್ತಿಕೊಂಡ. ಅವನಿಂದ ಸುನೀಲನ ತಂದೆ ತಾಯಿಯರ ಫೋನ್‌ ನಂಬರ್‌ ತೆಗೆದುಕೊಂಡೆ. ನೌಕರ ನಂಬರ್‌ ಕೊಡುವ ಮೊದಲು ನೂರೆಂಟು ಪ್ರಶ್ನೆ ಕೇಳಿದ. ನಾನು ಅವನಿಗೆ ಸುನೀಲನ ಆರೋಗ್ಯದ ಬಗ್ಗೆ ತಿಳಿಸಲಿಲ್ಲ.

ಸುನೀಲನ ತಂದೆ ತಾಯಿಗೆ ಫೋನ್‌ ಮಾಡಿ ಅವನ ಅನಾರೋಗ್ಯದ ಬಗ್ಗೆ ತಿಳಿಸಿದೆ. ನನಗೆ ಅವರಿಬ್ಬರ ಮೇಲೂ ಕೋಪ ಬಂದಿತ್ತು. ಸ್ವಲ್ಪ ಹೊತ್ತಿಗೆ ಡಾಕ್ಟರ್‌ ಬಂದರು. ಸುನೀಲನನ್ನು ಪರೀಕ್ಷಿಸಿದರು. ನಾನು ಬಹಳ ಹೊತ್ತು ಅವರೊಡನೆ ಸುನೀಲನ ಸ್ಥಿತಿಯ ಬಗ್ಗೆ ಚರ್ಚಿಸಿದೆ.

ಡಾಕ್ಟರ್‌ ಅವನಿಗೆ ಒಂದು ಇಂಜೆಕ್ಷನ್‌ ಕೊಟ್ಟು ಅದರ ಪ್ರಭಾವ ಏನಾಗುತ್ತದೆ ಎಂದು ನೋಡಲು ಅಲ್ಲೇ ಕುಳಿತರು. ಆಗ ಸುನೀಲನ ತಂದೆ ತಾಯಿ ಒಬ್ಬೊಬ್ಬರಾಗಿ ಗಾಬರಿಯಿಂದ ಬಂದರು. ಅವರನ್ನು ನೋಡುತ್ತಲೇ ನಮ್ಮ ಹುಬ್ಬು ಗಂಟಿಕ್ಕಿದವು.

“ಸುನೀಲನಿಗೆ ಇದ್ದಕ್ಕಿದ್ದಂತೆ ಏನಾಯಿತು? ಅವನು ಹೇಗಿದ್ದಾನೆ ಈಗ?” ಎಂದು ಕೇಳಿದರು.

“ಆಡುವ ವಯಸ್ಸಿನಲ್ಲಿ ನಿಮ್ಮ ಮಗನ ಸ್ಥಿತಿ ಹೀಗಿದೆ. ನೀವು ನನ್ನನ್ನು ಏನಾಗಿದೆ ಅಂತ ಕೇಳ್ತಿದೀರ? ಅವನು ಭಾರಿ ಆಘಾತಕ್ಕೊಳಗಾಗಿದ್ದಾನೆ. ಇದೇ ಸ್ಥಿತಿ ಮುಂದುವರಿದರೆ ಅವನ ಮೆದುಳಿನ ಮೇಲೂ ಪ್ರಭಾವ ಬೀರಬಹುದು.”

“ಇಲ್ಲಾ ಡಾಕ್ಟರ್‌, ನನಗೆ ಏನೂ ಗೊತ್ತಾಗುತ್ತಿಲ್ಲ. ಇವತ್ತು ಮದರ್ಸ್‌ ಡೇ. ತಾಯೀನ ನೋಡಲು ಹೋಗ್ತೀನೀಂತ ಹಟ ಮಾಡ್ತಿದ್ದ. ನಾನು ಅಪ್ಪಿಕೊಂಡಿದ್ದೆ….. ಮತ್ತೇನಾಯಿತೋ,” ತಂದೆ ಹೇಳಿದರು.

“ಬೆಳಗ್ಗೆನೇ ಅವನ ಫೋನ್‌ ಬಂದಿತ್ತು. ಮನೆಗೆ ಬರ್ತೀನಿ ಅಂತ. ನಾನು ಕೆಲವು ಅರ್ಜೆಂಟ್‌ ಕೆಲಸಗಳನ್ನು ಮುಗಿಸಿ ಸಂಜೆ ನೋಡ್ತೀನಿ ಅಂತ ಹೇಳಿದ್ದೆ,” ಅವನ ತಾಯಿ ಸ್ಪಸ್ಟೀಕರಣ ನೀಡಿದರು.

“ನೀವಿಬ್ಬರೂ ತುಂಬಾ ವಿಚಿತ್ರ ಜನ. ನೀವಿಬ್ಬರೂ ಒಂದು ಕಾಲದಲ್ಲಿ ಮಕ್ಕಳಾಗಿದ್ದಿರಿ ಅಲ್ಲವೇ? ಜೀವನದ ಮಹತ್ವಾಕಾಂಕ್ಷೆಯ ಮುಂದೆ ಎಲ್ಲ ಮುಗಿದು ಹೋಗಿದೆಯೇ? ಅಮ್ಮನ್ನ ಭೇಟಿಯಾಗಲು ಮಗನಿಗೆ ತಂದೆಯ ಅನುಮತಿ ಬೇಕು. ಇನ್ನು ತಾಯಿಗೆ ಬೇರೆ ದಿನ ಹೋಗಲಿ, ಮದರ್ಸ್‌ ಡೇ ದಿನ ತನ್ನ ಒಬ್ಬನೇ ಮಗನನ್ನು ಭೇಟಿಯಾಗಲು ಸಮಯವೇ ಇರುವುದಿಲ್ಲ,” ಡಾಕ್ಟರ್‌ ವ್ಯಂಗ್ಯವಾಗಿ ನುಡಿದರು.

“ಕ್ಷಮಿಸಿ ನೀವಿಬ್ಬರೂ ಇದ್ದೂ ನಿಮ್ಮ ಪ್ರೀತಿ ಪಡೆಯಲು ನಿಮ್ಮ ಮಗ ಎಲ್ಲೆಲ್ಲಿ ಅಲೆಯುತ್ತಿದ್ದಾನೆ ಅನ್ನುವುದು ಬಹುಶಃ ನಿಮ್ಮಿಬ್ಬರಿಗೂ ಗೊತ್ತಿಲ್ಲ. ಅವನ ಅಲೆದಾಟವೇ ಅವನನ್ನು ಇವತ್ತು ಇಲ್ಲಿಗೆ ಕರೆತಂದಿದೆ,” ನಾನು ಹೇಳಿದೆ.

“ನೋಡಿ ನಿಮಗೆ ತಿಳಿಸುವುದು ನನ್ನ ಕರ್ತವ್ಯವಾಗಿತ್ತು. ಉಳಿದಿದ್ದು ನಿಮ್ಮ ಜೀವನ. ನಿಮ್ಮದೇ ಮಗ.” ಎಂದರು ಡಾಕ್ಟರ್‌.  ಅಷ್ಟರಲ್ಲಿ ನಿತೀಶ್‌ ಜೋರಾಗಿ ಕೂಗಿದ. “ಡಾಕ್ಟರ್‌ ಸುನೀಲನಿಗೆ ಮತ್ತೆ ಫಿಟ್ಸ್ ಬಂದಿದೆ!” ಡಾಕ್ಟರ್‌ ಓಡುತ್ತಾ ಅವನ ಬಳಿ ಹೋದರು. ನಮಗೆಲ್ಲರಿಗೂ ಹೊರಗೆ ಹೋಗುವಂತೆ ಹೇಳಿದರು. ನಮಗೆ ಬಹಳ ಗಾಬರಿಯಾಗಿತ್ತು. ಸುನೀಲನ ತಂದೆ ತಾಯಿ ನಾಚಿಕೆಯ ಜೊತೆ ಗಾಬರಿಯಾಗಿ ಹೊರಗಡೆ ಇದ್ದರು.

ಸುನೀಲನನ್ನು ಮೊದಲ ಸಲ ಭೇಟಿಯಾದಾಗಿನಿಂದ ನಾನು ಕಾಯುತ್ತಿದ್ದ ಅವಕಾಶ ಸಿಕ್ಕಿತು. ನಾನು ಅವರಿಬ್ಬರಿಗೂ ಸುನೀಲನ ಜೊತೆ ಕಳೆದ ಒಂದೊಂದು ಕ್ಷಣದ ಬಗ್ಗೆ, ಅವನಾಡಿದ್ದ ಮಾತುಗಳು, ಅವನ ವಿಚಾರಗಳು ಎಲ್ಲವನ್ನೂ ವಿವರವಾಗಿ ತಿಳಿಸಿದೆವು. ನನಗೆ ತಿಳಿದ ಮಟ್ಟಿಗೆ ಅರ್ಥ ಮಾಡಿಸಲು ಪ್ರಯತ್ನಪಟ್ಟೆ. ಅವರ ತಪ್ಪುಗಳನ್ನು ಅವರಿಗೆ ತಿಳಿಸಿದೆ. ಅಷ್ಟರಲ್ಲಿ ಡಾಕ್ಟರ್‌ ಹೊರಬಂದು, “ಗಾಬರಿಯಾಗಬೇಕಾದ್ದೇನಿಲ್ಲ. ಆದರೆ ನೀವಿಬ್ಬರೂ ಇದನ್ನು ಒಂದು ಎಚ್ಚರಿಕೆ ಅಂತ ತಿಳೀರಿ. ನೀವು ನಿಮ್ಮ ಮೂರ್ಖತನದಿಂದ ನಿಮ್ಮ ಒಬ್ಬನೇ ಮಗನ ಭವಿಷ್ಯದ ಜೊತೆ ಆಟ ಆಡುತ್ತಿರುವಿರಿ. ಬಹುಶಃ ನಿಮ್ಮ ಭವಿಷ್ಯದ ಜೊತೆಯೂ,” ಎಂದರು.

ಎಲ್ಲರೂ ಬಹಳ ಹೊತ್ತು ಮಾತನಾಡುತ್ತಿದ್ದೆವು. ನಮ್ಮ ಮಾತುಗಳು ಮತ್ತು ಸುನೀಲನ ಪರಿಸ್ಥಿತಿ ಅವರ ಮೇಲೆ ಪರಿಣಾಮ ಬೀರುತ್ತಿತ್ತು. ಇಬ್ಬರಿಗೂ ತಮ್ಮ ತಪ್ಪಿನ ಅರಿವಾಗುತ್ತಿತ್ತು. ಸುನೀಲನ ತಾಯಿ ಹೇಳಿದರು, “ಎಲ್ಲಾ ತಪ್ಪು ನನ್ನದೇ, ಅದಕ್ಕೆ ಇವತ್ತು ಈ ಪರಿಸ್ಥಿತೀಲಿ ನನ್ನ ಮಗನನ್ನು ನೋಡಬೇಕಾಗಿದೆ. ಈ ಪರಿಸ್ಥಿತೀಲಿ ನನ್ನ ಮಗ ದಾರಿ ತಪ್ಪಲಿಲ್ಲವಲ್ಲ ಅದೇ ದೊಡ್ಡದು. ಅವನು ನಿಮ್ಮ ಹತ್ತಿರ ಬಂದ ಮತ್ತು ನೀವು…” ಆಕೆ ಬಿಕ್ಕುತ್ತಾ ಅಳತೊಡಗಿದರು. ಅವು ಪಶ್ಚಾತ್ತಾಪದ ಕಣ್ಣೀರಾಗಿತ್ತು.

“ನನ್ನ ಉದ್ದೇಶ ನಿಮ್ಮನ್ನು ನಾಚಿಕೆಪಡಿಸಬೇಕೆಂದು ಅಲ್ಲ. ಸುನೀಲನ ಪರಿಸ್ಥಿತಿ ನನಗೆ ಬಹಳ ಚಿಂತೆಯಾಗಿತ್ತು. ಅವನಿಗೆ ಅವನ ತಂದೆ ತಾಯಿ ಮತ್ತೆ ದೊರೆತರು. ನನಗೆ ತುಂಬಾ ಸಂತೋಷವಾಗಿದೆ. ಅವನ ಹತ್ತಿರ ಎಲ್ಲ ಇದೆ. ನಿಮ್ಮ ಪ್ರೀತಿಯನ್ನು ಬಿಟ್ಟು…” ಹೇಳುತ್ತಾ ನನ್ನ ಗಂಟಲೂ ಕಟ್ಟಿಕೊಂಡಿತು. ಅವರಿಬ್ಬರೂ ಮಗನ ಹತ್ತಿರ ಹೋದರು. ತಂದೆ ಪ್ರೀತಿಯಿಂದ ಮಗನ ತಲೆ ಸವರುತ್ತಾ, “ಮಗು, ಕಣ್ಣು ತೆಗಿ, ನಿನ್ನನ್ನು ಕರೆದುಕೊಂಡು ಹೋಗಲು ಬಂದಿದ್ದೇವೆ,” ಎಂದರು.

ಅರೆ ತೆರೆದಿದ್ದ ಸುನೀಲನ ಕಣ್ಣುಗಳು ತಂದೆ ತಾಯಿ ಇಬ್ಬರೂ ಒಟ್ಟಿಗೆ ನಿಂತಿದ್ದನ್ನು ನೋಡಿದ. ತಂದೆ ತಾಯಿ ಇಬ್ಬರ ಕಣ್ಣುಗಳಿಂದಲೂ ಮಗನ ಮೇಲಿನ ಪ್ರೀತಿಯ ಧಾರೆ ಹರಿಯುತ್ತಿತ್ತು. ಅವನು ತಾಯಿಯ ಕೊರಳನ್ನು ತಬ್ಬಿಕೊಂಡು ಅಳತೊಡಗಿದ. ತಂದೆ ಅವನನ್ನು ತೋಳಿನಿಂದ ಬಳಸಿದರು.

ನಾನು ಸುನೀಲನ ಕೈಗೆ ಅವನು ತಂದಿದ್ದ ಗುಲಾಬಿ ಹೂವನ್ನೇ ಕೊಟ್ಟು, “ತಗೊ ಸುನೀಲ್‌, ಇದನ್ನು ನಿಮ್ಮಮ್ಮನಿಗಾಗಿ ತಂದೆಯಲ್ಲವೇ?” ಎಂದೆ.

“ಅದನ್ನು ಆಂಟಿ ನಾನು ನಿಮ್ಮ….” ಅವನು ಮೆಲ್ಲನೆ ಹೇಳಿದ.

“ಅದು ಇದು ಏನೂ ಇಲ್ಲ. ನಿನ್ನಮ್ಮ ಎದುರಿಗಿದ್ದಾರೆ. ನಾನು ಹೂವು ತಗೊಳ್ಳೋದಾ?” ಹೇಳುತ್ತಾ ನಾನು ಕಣ್ಣುಗಳಿಂದಲೇ ಅವನಿಗೆ ಸನ್ನೆ ಮಾಡಿದೆ. ನನಗೆ ಅವನ ಗೊಂದಲ ಅರ್ಥವಾಗುತ್ತಿತ್ತು. ಆ ಹೂವನ್ನು ಅವನು ನನಗೆಂದೇ ತಂದಿರಬಹುದು. ಆದರೆ ಅದರ ನಿಜವಾದ ಹಕ್ಕು ಇರುವುದು ಅವನ ತಾಯಿಗೆ.

“ಹ್ಯಾಪಿ ಮದರ್ಸ್‌ ಡೇ ಅಮ್ಮಾ !”

ತಾಯಿಗೆ ಹೂವು ಕೊಟ್ಟು ಅವನು ಜೋರಾಗಿ ಅಳತೊಡಗಿದ. ಡಾಕ್ಟರ್‌ ಚಿಕಿತ್ಸೆ ಮತ್ತು ತಡೆಹಿಡಿದಿದ್ದ ಕಣ್ಣೀರನ್ನು ಹೊರ ಹಾಕಿದ್ದರಿಂದ ಅವನು ಸ್ವಸ್ಥನಾಗಿ ಕಾಣುತ್ತಿದ್ದ. ಸ್ವಲ್ಪ ಹೊತ್ತಿನ ನಂತರ ಅವನು ತನ್ನ ತಂದೆ ತಾಯಿ ಜೊತೆ ಹೊರಟು ಹೋದ. ಹೋಗುವಾಗ ನನಗೆ ನಮಸ್ಕರಿಸಿ ನನ್ನ ಕೈಗಳನ್ನು ಭದ್ರವಾಗಿ ಹಿಡಿದು ಧನ್ಯವಾದಗಳನ್ನು ಹೇಳಿದ.

ಅನೇಕ ದಿನಗಳ ನಂತರ ಅವನ ಫೋನ್‌ ಬಂತು. ಅವನು ನಮ್ಮನ್ನು ತನ್ನ ಮನೆಗೆ ಊಟಕ್ಕೆ ಬರಲು ಆಹ್ವಾನಿಸಿದ್ದ.

ಅವನ ದನಿಯಿಂದಲೇ ಅವನು ಖುಷಿಯಾಗಿದ್ದುದು ಗೊತ್ತಾಗುತ್ತಿತ್ತು. ಅವನಿಗೆ ಬೇಕಾಗಿದ್ದೆಲ್ಲ ಸಿಕ್ಕಿದ್ದು ನನಗೆ ಸಂತೋಷ ತಂದಿತ್ತು. ನಾನು ಸಂತೋಷದಿಂದ ಅವನ ಆಹ್ವಾನ ಒಪ್ಪಿಕೊಂಡೆ.

Tags:
COMMENT