ಕಥೆ - ಶ್ಯಾಮಲಾ ಕುಲಕರ್ಣಿ
ಬೆಳಗ್ಗೆ 9 ಗಂಟೆಯಾಗಿತ್ತು. ನಂದಿನಿ ಲಗುಬಗೆಯಿಂದ ಪತಿ ಮತ್ತು ಮಕ್ಕಳಿಗಾಗಿ ತಿಂಡಿ ಸಿದ್ಧಪಡಿಸಿದಳು. ಅವರೆಲ್ಲರೂ ತಿಂಡಿ ತಿಂದು ಲಂಚ್ ಬಾಕ್ಸ್ ನ್ನೂ ಕೊಂಡೊಯ್ಯುತ್ತಿದ್ದರು. ಆದ್ದರಿಂದ ಮೂವರಿಗೂ ಡಬ್ಬಿಗಳನ್ನು ಪ್ಯಾಕ್ ಮಾಡಿಟ್ಟಳು. ಮಕ್ಕಳು ಕಾಲೇಜಿನಿಂದ ಸಾಯಂಕಾಲ ಹಿಂದಿರುಗುತ್ತಿದ್ದರು. ಪತಿ ವಿಜಯ್ ಆಫೀಸ್ನಿಂದ ಬರಲು ಇನ್ನೂ ತಡವಾಗುತ್ತಿತ್ತು.
ವಿಜಯ್ ತಿಂಡಿ ತಿನ್ನುತ್ತಾ ಅಂದಿನ ದಿನ ಪತ್ರಿಕೆಯ ಮೇಲೆ ಕಣ್ಣಾಡಿಸುತ್ತಿದ್ದ. ಸೌಮ್ಯಾ ಮತ್ತು ಸುರೇಶ್ ತಮ್ಮ ತಮ್ಮ ಮೊಬೈಲ್ ಫೋನ್ನಲ್ಲಿ ಕಣ್ಣು ಕೀಲಿಸಿ ತಿಂಡಿ ತಟ್ಟೆಯಲ್ಲಿ ಬೆರಳಾಡಿಸುತ್ತಿದ್ದರು.
ನಂದಿನಿ ಮಕ್ಕಳ ಮೇಲೆ ರೇಗಿದಳು, ``ನಿಮಗೆ ಸದಾ ಫೋನ್ ಒಂದು ಇದ್ದರೆ ಆಯಿತು. ತಿಂಡಿ ಕಡೆ ಗಮನ ಇಟ್ಟು ತಿನ್ನಬಾರದೇ? ಎಲ್ಲರೂ ಬೆಳಗ್ಗೆ ಹೊರಟರೆ ಇನ್ನು ಸಂಜೆವರೆಗೂ ಯಾರೂ ಇರುವುದಿಲ್ಲ. ಎರಡು ಮಾತನಾಡುತ್ತಾ ನೆಮ್ಮದಿಯಿಂದ ತಿಂಡಿ ತಿನ್ನಿ.''
ನಂದಿನಿಯ ಮಾತಿನಿಂದ ಪೇಪರ್ ಓದುತ್ತಿದ್ದ ವಿಜಯ್ಗೆ ಡಿಸ್ಟರ್ಬ್ ಆಯಿತು. ಅವನು, ``ಯಾಕೆ ಬೆಳಗ್ಗೆ ಬೆಳಗ್ಗೆ ರೇಗಾಡುತ್ತಿದ್ದೀಯಾ? ಅವರು ಫೋನ್ನಲ್ಲಿ ಏನೋ ಮಾಡುತ್ತಿರಬಹುದು ಬಿಡು,'' ಎಂದ.
``ನಾನೇನು ಕೇಳಿದೆ? ನೀವು ಮೂವರೂ ದಿನವೆಲ್ಲ ಹೊರಗಿರುತ್ತೀರಿ. ಶಾಂತಿಯಿಂದ ತಿಂಡಿ ತಿನ್ನಿ ಅಂದೆ,'' ಎಂದಳು ನಂದಿನಿ ಕೋಪದಿಂದ.
ವಿಜಯ್ ಮುಗುಳ್ನಗುತ್ತಾ, ``ನಾವು ಶಾಂತವಾಗಿಯೇ ತಿನ್ನುತ್ತಾ ಇದ್ದೇವೆ. ನೀನೇ ಗಲಾಟೆ ಮಾಡುತ್ತಾ ಇರುವವಳು....'' ಎಂದ.
ಮಕ್ಕಳು ಫೋನ್ನಿಂದ ದೃಷ್ಟಿ ಕಿತ್ತು ತಂದೆಯ ಮಾತನ್ನು ಖುಷಿಯಿಂದ ಸಮರ್ಥಿಸುತ್ತಾ, ``ವಾಹ್ ಪಪ್ಪಾ...! ಸರಿಯಾಗಿ ಹೇಳಿದಿರಿ,'' ಎಂದರು.
ನಂದಿನಿ ಮೂವರ ಟಿಫಿನ್ ಬ್ಯಾಗ್ಗಳನ್ನು ಟೇಬಲ್ ಮೇಲೆ ತಂದಿಟ್ಟು ಬೇಸರದಿಂದ ಅಲ್ಲಿಂದ ಸರಿದುಹೋದಳು. `ಇನ್ನು ಇಡೀ ದಿನ ಒಬ್ಬಳೇ ಇರಬೇಕು.... ಇವರು ಯಾರಿಗೂ ಸ್ವಲ್ಪ ಹೊತ್ತು ನಗುತ್ತಾ ಮಾತನಾಡೋಣ ಎನ್ನುವ ಯೋಚನೆಯೇ ಬರುವುದಿಲ್ಲ. ಸಾಯಂಕಾಲ ಸುಸ್ತಾಗಿ ಬರುತ್ತಾರೆ. ಆಮೇಲೆ ಟಿವಿ, ಪೋನ್ ಕಡೆಗೇ ಜ್ಞಾನ. ಈಗೀಗ ಯಾರಿಗೂ ಮನೆಯವರ ಜೊತೆ ಮಾತೇ ಬೇಕಾಗಿಲ್ಲ.....`
ಮಕ್ಕಳು ಸದಾಕಾಲ ಫೋನ್ ಹಿಡಿದುಕೊಂಡೇ ಇದ್ದರೆ ಒಂಟಿತನ ಕಾಡುತ್ತದೆ. ಮೂವರಿಗೂ ಸ್ವಲ್ಪ ಹೊತ್ತು ನಿಮ್ಮ ಟಿವಿ, ಪೋನ್, ಲ್ಯಾಪ್ಟಾಪ್ ಮುಚ್ಚಿಟ್ಟು ನನ್ನ ಕಡೆ ಸ್ವಲ್ಪ ನೋಡಿ ಎಂದು ಹೇಳಿದರೆ ನನಗೆ ಏನಾಗಿದೆ ಅಂತ ಅಂದುಕೊಳ್ಳುತ್ತಾರೆ.
`ಸೋಶಿಯಲ್ ನೆಟ್ವರ್ಕಿಂಗ್ನ ಹುಚ್ಚು ನನಗಿಲ್ಲ. ಬಲವಂತವಾಗಿ ಸ್ನೇಹ ಬೆಳೆಸುವುದಾಗಲಿ, ಅಕ್ಕಪಕ್ಕದವರೊಂದಿಗೆ ಹರಟೆ ಹೊಡೆಯುವುದಾಗಲಿ ನನಗೆ ಇಷ್ಟವಿಲ್ಲ. ಇದು ನನ್ನ ತಪ್ಪೆ? ಈ ಮೂವರೂ ತಮ್ಮ ಫೇಸ್ಬುಕ್ ಫ್ರೆಂಡ್ಸ್ ನೊಂದಿಗೆ ಚಿಕ್ಕಪುಟ್ಟ ವಿಷಯವನ್ನೂ ಶೇರ್ ಮಾಡಿಕೊಳ್ಳುತ್ತಾರೆ. ಆದರೆ ನನ್ನ ಜೊತೆ ಮಾತನಾಡಲು ಸಮಯವಿಲ್ಲ.'
ಮೂವರೂ ಆಫೀಸ್, ಕಾಲೇಜುಗಳಿಗೆ ಹೊರಟ ನಂತರ ಮನೆಯಲ್ಲಿ ಒಂದು ವಿಚಿತ್ರವಾದ ಮೌನ ಆವರಿಸಿತು. ನಂದಿನಿಯ ಮನಸ್ಸಿಗೆ ಮತ್ತೆ ಬೇಸರ ಕವಿಯಿತು. ಅವಳು ನಿಧಾನವಾಗಿ ತಿಂಡಿ ತಿಂದು ಮುಗಿಸಿದಳು. ಅಡುಗೆ ಮನೆಯ ಕೆಲಸ ಮುಗಿಸುವಷ್ಟರಲ್ಲಿ ಕೆಲಸದಾಕೆ ಲಕ್ಷ್ಮಿ ಬಂದಳು. ಅವಳು ಕೆಲಸ ಮಾಡಿ ಹೋದ ಮೇಲೆ ಮನೆಯಲ್ಲಿ ಮತ್ತೆ ಮೌನ.