ಕಥೆ – ಶ್ಯಾಮಲಾ ಕುಲಕರ್ಣಿ

ಹನಿಮೂನ್‌ನಿಂದ ಹಿಂದಿರುಗುತ್ತಿದ್ದ ಜ್ಯೋತಿಯ ಮನಸ್ಸಿನಲ್ಲಿ ಬಗೆಬಗೆಯ ಯೋಚನೆಗಳು ಸುಳಿಯುತ್ತಿದ್ದವು. ಅವಳ ಅನ್ಯಮನಸ್ಕತೆಯನ್ನು ಕಂಡು ಅಜಯ್‌ ಅವಳ ಕಣ್ಮುಂದೆ ಕೈಗಳನ್ನು ಆಡಿಸುತ್ತಾ ಕೇಳಿದ, “ಏನು, ಬಹಳ ಯೋಚನೆ ಮಾಡುತ್ತಿದ್ದೀಯಲ್ಲ, ಮನೆಗೆ ಹೋಗಲು ಮನಸ್ಸಿಲ್ಲವೇ?”

ಜ್ಯೋತಿ ಮುಗುಳ್ನಕ್ಕಳು. ಅತ್ತೆಮನೆಯಲ್ಲಿ ಹೇಗಿರುತ್ತದೋ ಎಂದು ಆಲೋಚಿಸಿ ಭಯ ವಿಹ್ವಲಳಾದಳು. ಅಜಯ್‌ ಮತ್ತು ಜ್ಯೋತಿಯದು ಪ್ರೇಮವಿವಾಹ. ಇಬ್ಬರೂ ಚಾರ್ಟೆರ್ಡ್‌ ಅಕೌಂಟೆಂಟ್‌ಗಳು. ಇಂದಿರಾನಗರದ ಒಂದು ಕಂಪನಿಯಲ್ಲಿ  ಕೆಲಸ ಮಾಡುತ್ತಿದ್ದರು. ಮದುವೆಯಾದ 1 ವಾರಕ್ಕೆ ಹನಿಮೂನ್‌ಗೆಂದು ಸಿಮ್ಲಾಗೆ ಹೋಗಿದ್ದರು.

ಅಜಯ್‌ ತಂದೆ ಶಿವಸ್ವಾಮಿ ಪ್ರೈವೇಟ್‌ ಕಂಪನಿಯೊಂದರಲ್ಲಿ ಹಿರಿಯ ಹುದ್ದೆಯಲ್ಲಿದ್ದರು. ತಾಯಿ ಶೈಲಜಾ ಗೃಹಿಣಿ ಮತ್ತು ತಂಗಿ ಅನುಶ್ರೀ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಳು.

ತಾಯಿತಂದೆಯರಿಗೆ ಒಬ್ಬಳೇ ಮಗಳಾದ ಜ್ಯೋತಿ ಅಕ್ಕರೆಯಿಂದ ಬೆಳೆದಿದ್ದಳು. ಕೆಲಸದ ಒತ್ತಡದಿಂದಾಗಿ ಮನೆಗೆ ಹಿಂದಿರುಗಲು ನಿಗದಿತ ಸಮಯವೆಂಬುದಿರಲಿಲ್ಲ. ಬಸವನಗುಡಿಯಲ್ಲಿದ್ದ ಅವಳ ಮನೆ ತಲುಪಲು ಕೆಲವು ಸಲ 10-11 ಗಂಟೆ ಆಗುತ್ತಿತ್ತು. ಅವಳಿಗೆ ವಹಿಸಲಾಗುತ್ತಿದ್ದ ಕ್ಲೈಂಟ್‌ನ ಅಕೌಂಟ್ಸ್ ಬಗ್ಗೆ ತನ್ನ ಇಡೀ ಟೀಮಿಗೆ ಲೆಕ್ಕ ಪರಿಶೀಲನೆ ಮಾಡಬೇಕಾಗುತ್ತಿತ್ತು. ಮನೆಯಲ್ಲಿ ಅವಳಿಗೆ ಯಾವುದೇ ಜವಾಬ್ದಾರಿ ಇರಲಿಲ್ಲ. ಮನೆಗೆ ಹೋಗುತ್ತಲೇ ಕೈಕಾಲು ತೊಳೆದು ಊಟ ಮಾಡಿ ಹಾಸಿಗೆ ಹಿಡಿಯುತ್ತಿದ್ದಳು.

ವೀಕೆಂಡ್‌ ಬಂದಿತೆಂದರೆ ಅವಳಿಗೆ ಖುಷಿ. ವಾರದ 5 ದಿನಗಳು ಕೆಲಸದಲ್ಲಿ ಮುಳುಗಿದ್ದು, ಶನಿವಾರ, ಭಾನುವಾರದ ದಿನಗಳಲ್ಲಿ ಆರಾಮವಾಗಿರುತ್ತಿದ್ದಳು. ಬೇಕೆಂದರೆ ಗೆಳತಿಯರ ಜೊತೆ ಮೂವಿಗೆ, ಡಿನ್ನರ್‌ಗೆ ಹೋಗುತ್ತಿದ್ದಳು. ಬೆಂಗಳೂರಿನಲ್ಲಿ ಅವಿವಾಹಿತ ಯುವತಿಯರ ರೊಟೀನ್‌ ಇದೇ ತಾನೇ? “ಆಹಾ! ವೀಕೆಂಡ್‌ ಬಂತು,” ಎಂದು ಅವಳು ಉತ್ಸಾಹದಿಂದ ಹೇಳುತ್ತಿದ್ದಳು. ಅವಳ ತಾಯಿ, “ಪಾಪಾ, ಇಡೀ ವಾರ ದುಡಿದು ಸಾಕಾಗಿದ್ದಾಳೆ,” ಎಂದು ಮಗಳು ವಿಶ್ರಾಂತಿ ಪಡೆಯಲು ಅವಕಾಶ ಮಾಡಿಕೊಡುತ್ತಿದ್ದರು.

ತನ್ನ ಮನೆಯ ಶಾಸ್ತ್ರವಿಧಿಗಳೆಲ್ಲ ಮುಗಿದ ನಂತರ ತಾಯಿ ತನ್ನನ್ನು ಬೀಳ್ಕೊಡುತ್ತಿದ್ದ ಘಟನೆ ಜ್ಯೋತಿಗೆ ನೆನಪಾಯಿತು. ತಾಯಿ ದುಃಖದಿಂದ ಕಣ್ಣೀರು ಹರಿಸುತ್ತಿದ್ದಾಗ ಅವಳ ಅತ್ತೆ ಬಂದು ಭುಜದ ಮೇಲೆ ಕೈಯಿರಿಸಿ ಸಮಾಧಾನ ಹೇಳಿದ್ದರು, “ನೀವು ಯೋಚನೆ ಮಾಡಬೇಡಿ. ಜ್ಯೋತಿ ನಮ್ಮ ಮನೆಯಲ್ಲಿ ಮಗಳ ಹಾಗೆ ಇರುತ್ತಾಳೆ. ನಾನು ಮಗಳು ಸೊಸೆ ಅನ್ನುವ ಭೇದ ಮಾಡುವುದಿಲ್ಲ.”

ಅಲ್ಲಿಯೇ ನಿಂತಿದ್ದ ಚಿಕ್ಕಮ್ಮ, ವ್ಯಂಗ್ಯವಾಗಿ ಜ್ಯೋತಿಯ ಕಿವಿಯಲ್ಲಿ ಉಸುರಿದರು, “ಇವೆಲ್ಲ ಬರೀ ಬಾಯಿ ಮಾತು. ಹೊಸತರಲ್ಲಿ  ಹುಡುಗನ ಕಡೆಯವರು ಹೀಗೇ ದೊಡ್ಡ ದೊಡ್ಡ ಮಾತನಾಡುತ್ತಾರೆ ಅಷ್ಟೇ. ಸೊಸೆಯನ್ನು ಮಗಳಂತೆ ನೋಡುವುದು ಅಷ್ಟು ಸುಲಭವಲ್ಲ.”

ಕಣ್ಣೀರು ಹರಿಯುತ್ತಿದ್ದರೂ ಜ್ಯೋತಿಗೆ ಚಿಕ್ಕಮ್ಮನ ಆ ಮಾತು ಸ್ಪಷ್ಟವಾಗಿ ಕೇಳಿಸಿತ್ತು. ಅತ್ತೆಯ ಮನೆಯಲ್ಲಿ ಮೊದಲ ವಾರ ಸಂತೋಷ ಸಡಗರದಿಂದಲೇ ಕಳೆದಿತ್ತು. ಈಗ ಅವರು ಪ್ರವಾಸ ಮುಗಿಸಿ ಹಿಂದಿರುಗುತ್ತಿದ್ದಾರೆ. ಮುಂದೆ ಹೇಗಿರುತ್ತದೋ ನೋಡಬೇಕು. ಇನ್ನೆರಡು ದಿನಗಳ ನಂತರ ಆಫೀಸಿಗೂ ಹೋಗಬೇಕು.

ಅಜಯ್‌ ಮತ್ತು ಜ್ಯೋತಿ ಮನೆ ತಲುಪಿದರು. ಅವರು ಬರುವುದು ಮೊದಲೇ ತಿಳಿದಿದ್ದರಿಂದ ಎಲ್ಲರೂ ಅವರಿಗಾಗಿ ಕಾಯುತ್ತಿದ್ದರು. ಶಿವಸ್ವಾಮಿ ಮತ್ತು ಶೈಲಜಾ ಪ್ರವಾಸದ ಬಗ್ಗೆ ವಿಚಾರಿಸಿದರು.

“ಅಣ್ಣಾ, ಸದ್ಯ ನಿನಗೆ ಮನೆಯ ನೆನಪಿದೆಯಲ್ಲಾ,” ಎಂದು ಅನುಶ್ರೀ ಹಾಸ್ಯ ಮಾಡಿದಳು.

“ನೀವು ಫ್ರೆಶ್‌ ಆಗಿ ಬನ್ನಿ, ನಾನು ಕಾಫಿ ತರುತ್ತೇನೆ,” ಎಂದು ಶೈಲಜಾ ಹೇಳಿದರು.

ಜ್ಯೋತಿಗೆ ಪ್ರಯಾಣದ ಆಯಾಸವಿತ್ತು. ಆದರೂ ಅವಳು, “ಬೇಡಿ ಅತ್ತೆ, ನಾನು ಕಾಫಿ ಮಾಡುತ್ತೇನೆ,” ಎಂದಳು.

“ಜ್ಯೋತಿ, ನೀನು ಮೊದಲು ಮುಖ ತೊಳೆದು ಬಾ, ಸುಸ್ತಾಗಿರುತ್ತೀಯ. ಸ್ವಲ್ಪ ರೆಸ್ಟ್ ತೆಗೆದುಕೊಳ್ಳುವಿಯಂತೆ. ಮತ್ತೆ ಅಜಯ್‌ ಮತ್ತು ಅನು ಇಬ್ಬರೂ ನನ್ನನ್ನು ಅಮ್ಮ ಅಂತ ಕರೆಯುತ್ತಾರೆ, ನೀನೂ ಹಾಗೆ ಕರಿಯಮ್ಮ…..”

ಜ್ಯೋತಿ ತಲೆಯಾಡಿಸಿದಳು. ನಂತರ ಎಲ್ಲರೂ ಒಟ್ಟಿಗೆ ಕುಳಿತು ಕಾಫಿ ಕುಡಿದರು.

ಕೊಂಚ ಹೊತ್ತು ಮಾತನಾಡುತ್ತಾ ಕುಳಿತಿದ್ದ ಶೈಲಜಾ ಎದ್ದು ಅಡುಗೆಮನೆಯ ಕಡೆ ನಡೆದರು. ಜ್ಯೋತಿ ಅವರನ್ನು ಹಿಂಬಾಲಿಸಿದಳು.

“ಅಮ್ಮಾ, ಡಿನ್ನರ್‌ಗೆ ಏನು ಮಾಡುತ್ತೀರಿ? ನಾನು ನಿಮಗೆ ಹೆಲ್ಪ್ ಮಾಡುತ್ತೇನೆ.”

“ನಾನು ಮಾಡುತ್ತೇನೆ ಬಿಡು. ನೀನು ರೆಸ್ಟ್ ತಗೋ.”

“ಆದರೆ, ನಾನಿದ್ದೂ ನೀವು…..”

ಶೈಲಜಾ ನಕ್ಕುಬಿಟ್ಟರು, “ನಾನಿದ್ದೂ ಅಂದರೆ ಏನು? ಇದುವರೆಗೆ ನಾನೇ ಮಾಡುತ್ತಿದ್ದೇನಲ್ಲ ಈಗಲೂ ಏನೂ ತೊಂದರೆ ಇಲ್ಲ ಬಿಡು.”

ಆದರೂ ಜ್ಯೋತಿ ಅಲ್ಲೇ ಇದ್ದು ತನಗೆ ತೋಚಿದಂತೆ ಕೆಲಸದಲ್ಲಿ ನೆರವಾದಳು. ಮರುದಿನ ರಜೆ ಇದ್ದು ಮನೆಯಲ್ಲೇ ಉಳಿದಿದ್ದ ಜ್ಯೋತಿ ಮನೆಯ ಇತರೆ ಕೆಲಸಗಳಿಗೂ ಕೈ ಹಾಕಿದಳು. ನಂತರ ಅಜಯ್‌ ಜೊತೆ ಕುಳಿತು ತಮ್ಮ ಪ್ರವಾಸದ ಸೂಟ್‌ಕೇಸ್‌ಗಳನ್ನು ಖಾಲಿ ಮಾಡತೊಡಗಿದಳು.

ಮಧ್ಯಾಹ್ನ ಊಟ ಮಾಡುವಾಗ, “ಬೆಳಗ್ಗೆ ಎಲ್ಲರೂ ಆಫೀಸು, ಕಾಲೇಜಿಗೆ ಹೋಗಿಬಿಡುವುದರಿಂದ ನಾನೊಬ್ಬಳೇ ತಿಂಡಿ ಊಟ ಮಾಡಬೇಕಾಗುತ್ತಿತ್ತು. ಇವತ್ತು ನೀವು ಮನೆಯಲ್ಲೇ ಇದ್ದೀರಿ. ಆದ್ದರಿಂದ ನನಗೆ ಜೊತೆ ಸಿಕ್ಕಿದ ಹಾಗಾಯಿತು,” ಶೈಲಜಾ ಹೇಳಿದರು.

ರಾತ್ರಿ ಎಲ್ಲರೂ ಒಟ್ಟಿಗೆ ಕುಳಿತು ನಗುನಗುತ್ತಾ ಊಟ ಮಾಡಿದರು.

ರಾತ್ರಿ ಮಲಗುವಾಗ ಶಿವಸ್ವಾಮಿ ಪತ್ನಿಯನ್ನು ಕೇಳಿದರು, “ನಾಳೆ ಅವರಿಬ್ಬರೂ ಆಫೀಸಿಗೆ ಹೋಗುತ್ತಾರಲ್ಲವೇ? ಇಬ್ಬರೂ ಲಂಚ್‌ ಬಾಕ್ಸ್ ತೆಗೆದುಕೊಂಡು ಹೋಗುತ್ತಾರಾ? ಜ್ಯೋತಿಯೂ ನಿನಗೆ ಸಹಾಯ ಮಾಡುತ್ತಾಳೆ ತಾನೇ?”

“ಬಂದಾಗಿನಿಂದಲೂ ಒಂದಿಷ್ಟು ಕೆಲಸ ಮಾಡುತ್ತಾ ಇದ್ದಾಳೆ. ಆದರೆ ನಾಳೆ ಅವಳು ಆಫೀಸಿಗೆ ಹೊರಡಬೇಕಲ್ಲ. ಇಲ್ಲಿಯವರೆಗೆ ನಾನು 3 ಬಾಕ್ಸ್ ಸಿದ್ಧಪಡಿಸುತ್ತಿದ್ದೆ. ಇನ್ನೂ ಮುಂದೆ 4 ಬಾಕ್ಸ್ ಸಿದ್ಧಪಡಿಸುತ್ತೇನೆ ಅಷ್ಟೇ. ಅದೇನು ಕಷ್ಟವಲ್ಲ ಬಿಡಿ,” ಎಂದರು ಶೈಲಜಾ.

“ನೀನು ಪ್ರೀತಿಯ ಅತ್ತೆ ಆಗುತ್ತೀಯ ಅಂತ ನನಗೆ ಅನಿಸಿತ್ತು,” ಎಂದು ಶಿವಸ್ವಾಮಿ ಪ್ರೀತಿಯಿಂದ ಪತ್ನಿಯತ್ತ ನೋಡುತ್ತಾ ಹೇಳಿದರು.

“ನೀವೇ ಹೇಳಿದ್ದೀರಲ್ಲ, ಜ್ಯೋತಿ ಈ ಮನೆಗೆ ಸೊಸೆ ಅಲ್ಲ ಮಗಳು ಅಂತ.”

“ಆದರೆ ನಿನಗೆ ಅಷ್ಟು ಒಳ್ಳೆ ಅತ್ತೆ ಸಿಕ್ಕಿರಲಿಲ್ಲ,” ಶಿವಸ್ವಾಮಿ ಹಿಂದಿನ ದಿನಗಳನ್ನು ನೆನಪಿಸಿಕೊಂಡು ನುಡಿದರು.

“ಅದು ಆ ಕಾಲ…. ಆಗಿನ ರೀತಿ ನೀತಿಯೇ ಬೇರೆ ತರಹ ಇತ್ತು. ಈಗ ಕಾಲ ಬದಲಾಗಿದೆ. ನಾನು ಅನುಭವಿಸಿದ ಕಷ್ಟ ನನ್ನ ಸೊಸೆಯಾಗುವವಳಿಗೆ ಬೇಡ ಅಂತ ನಾನು ಮೊದಲೇ ತೀರ್ಮಾನಿಸಿಬಿಟ್ಟಿದ್ದೆ. ಜ್ಯೋತಿಗೆ ಪನೀರ್‌ ಡಿಶ್‌ ಇಷ್ಟ ಅಂತ ಅಜಯ್‌ ಹೇಳಿದ. ಅದಕ್ಕೇ ಅವಳ ವೊದಲ ದಿನದ ಲಂಚ್‌ ಬಾಕ್ಸಿಗೆ ಪನೀರನ್ನೇ ಮಾಡೋಣ ಅಂದುಕೊಂಡಿದ್ದೇನೆ. ಅವಳಿಗೂ ಖುಷಿಯಾಗುತ್ತದೆ.”

ಶಿವಸ್ವಾಮಿ ಪತ್ನಿಯತ್ತ ಮೆಚ್ಚುಗೆಯ ದೃಷ್ಟಿಹರಿಸಿದರು.

ಜ್ಯೋತಿ ಅಲಾರ್ಮ್ ಇಟ್ಟುಕೊಂಡು ಎದ್ದು ಸ್ನಾನ ಮಾಡಿ ಸಿದ್ಧಳಾಗಿ ಅಡುಗೆಮನೆಗೆ ಬಂದಳು. ಅಷ್ಟರಲ್ಲಿಯೇ 4 ಲಂಚ್‌ ಬಾಕ್ಸ್ ಗಳು ರೆಡಿಯಾಗಿದ್ದವು. ಶೈಲಜಾ ಡೈನಿಂಗ್‌ ಟೇಬಲ್ ಮೇಲೆ ತಿಂಡಿಯನ್ನು ಸಜ್ಜುಗೊಳಿಸುತ್ತಿದ್ದರು.

ಜ್ಯೋತಿಗೆ ನಾಚಿಕೆಯಾಯಿತು, “ಅಮ್ಮಾ, ಆಗಲೇ ನೀವು ಎಲ್ಲವನ್ನೂ ಮಾಡಿಬಿಟ್ಟಿದ್ದೀರಿ.”

“ಹೌದಮ್ಮ. ಅನು ಬೇಗನೆ ಹೊರಡುತ್ತಾಳೆ. ಆದ್ದರಿಂದ ಎಲ್ಲ ಕೆಲಸಗಳೂ ಜೊತೆ ಜೊತೆಯಲ್ಲಿ ಆಗಿಹೋಗುತ್ತವೆ. ತಿಂಡಿ ತಿನ್ನುವೆಯಂತೆ. ಎಲ್ಲರನ್ನೂ ಕರಿಯಮ್ಮ.”

“ನಾಳೆಯಿಂದ ನಾನು ಬೇಗನೆ ಏಳುತ್ತೇನೆ.”

“ಚಿಂತೆ ಇಲ್ಲ, ನಾನಿದ್ದೇನಲ್ಲ ನೋಡಿಕೊಳ್ಳುತ್ತೇನೆ. ನನ್ನ ಆರೋಗ್ಯ ಏನಾದರೂ ಕೆಟ್ಟರೆ, ಮುಂದೆ ನೀನೇ ಜವಾಬ್ದಾರಿ ತೆಗೆದುಕೊಳ್ಳಬೇಕಾಗುತ್ತದೆ. ಈಗ ಹೊಸದರಲ್ಲಿ ಖುಷಿಯಾಗಿ, ಆರಾಮವಾಗಿ ಇರು.”

ಅಷ್ಟರಲ್ಲಿ ಅಜಯ್‌ ಸಿದ್ಧನಾಗಿ ಬಂದು, “ಅಮ್ಮಾ, ಲಂಚ್‌ಗೆ ಏನು ಮಾಡಿದ್ದೀರಿ?”

“ಪನೀರ್‌.”

ಜ್ಯೋತಿ ಕೂಡಲೇ, “ಅಮ್ಮಾ, ಇದು ನನ್ನ ಫೇವರಿಟ್‌ ಡಿಶ್‌,” ಎಂದಳು.

“ನಾನೇ ಅಮ್ಮನಿಗೆ ಅದನ್ನು ಹೇಳಿದ್ದೆ. ಏನಮ್ಮಾ, ನೀವು ಸೊಸೆಗೆ ಬೇಕಾದ ಅಡುಗೆಯನ್ನೇ ಮಾಡುವಿರಾ?” ಎಂದ ಅಜಯ್‌.

“ಸ್ಟಾಪ್‌ ಸ್ಟಾಪ್‌….. ಅಮ್ಮ ಹೇಳಿದ್ದಾರೆ ನಾನು ಅವರಿಗೆ ಸೊಸೆ ಅಲ್ಲ…. ಮಗಳು ಅಂತ,” ಎಂದಳು ಜ್ಯೋತಿ.

ತಿಂಡಿ ತಿಂದು ಮೇಲೇಳುತ್ತಿದ್ದ ಅನು ಹಾಸ್ಯ ಮಾಡುತ್ತಾ, “ಅಮ್ಮಾ……ಅತ್ತಿಗೆ ಬಂದ ಮೇಲೆ ನನ್ನನ್ನು ಮರೆತು ಬಿಡಬೇಡಿ,” ಹೇಳಿದಳು.

ಶಿವಸ್ವಾಮಿಯೂ ಮಕ್ಕಳ ಹಾಸ್ಯದಲ್ಲಿ ಪಾಲ್ಗೊಂಡು, “ಶೈಲೂ, ಕೊಂಚ ಅತ್ತೆಯ ರೂಪವನ್ನು ತೋರಿಸು. ಸ್ವಲ್ಪ ಗದರಿಸು. ಸ್ವಲ್ಪ ಕೋಪ ಮಾಡಿಕೊ. ಮನೆಯಲ್ಲಿ ಅತ್ತೆ ಸೊಸೆಯರಿದ್ದಾರೆ ಅಂತ ಗೊತ್ತಾಗಲಿ….” ಎಂದರು.

ಎಲ್ಲರೂ ಜೋರಾಗಿ ನಕ್ಕರು.

“ಸಾರಿ, ನನ್ನ ಮನೆಯಲ್ಲಿ ಅತ್ತೆ ಸೊಸೆ ಇದ್ದೇವೆ ಅಂತ ಯಾರಿಗೂ ತಿಳಿಯೋದೇ ಇಲ್ಲ ಬಿಡಿ,” ಎಂದು ಶೈಲಜಾ ಹೇಳಿದರು.

ಎಲ್ಲರೂ ಆಫೀಸು, ಕಾಲೇಜುಗಳಿಗೆ ಹೊರಟ ನಂತರ ಮನೆಗೆಲಸದ ಪಾರ್ವತಿ ಬಂದಳು. ಪೊರಕೆ ಹಿಡಿದು ಕಸ ಗುಡಿಸತೊಡಗಿದಳು.

ಡ್ರಾಯಿಂಗ್‌ ರೂಮಿನ ಕೆಲಸ ಮುಗಿಸಿ ಅಜಯ್‌ ರೂಮಿಗೆ ಹೋದ ಪಾರ್ವತಿ, “ಅಮ್ಮಾ…..” ಎಂದು ಕರೆದವಳು. “ಅಮ್ಮಾ ನೋಡಿ, ನಿಮ್ಮ ಸೊಸೆ ಹೇಗೆ ಸಾಮಾನು ಹರಡಿದ್ದಾರೆ,” ಎಂದಳು.

ಶೈಲಜಾ ಬಂದು ನೋಡಿದರು, ಎಲ್ಲ ಕಡೆಯೂ ಸಾಮಾನು ಹರಡಿತ್ತು. ಅದನ್ನು ಕಂಡು ಅವರಿಗೆ  ನಗು ಬಂದಿತು.

“ಏನಮ್ಮ ನೀವು, ನಗುತ್ತಾ ಇದ್ದೀರಲ್ಲ.”

“ಬಾ ಇಲ್ಲಿ…..?” ಎಂದು ಶೈಲಜಾ ಅವಳನ್ನು ಅನುಶ್ರೀಯ ಕೊಠಡಿಗೆ ಕರೆದೊಯ್ದರು. ಅಲ್ಲಿಯ ಪರಿಸ್ಥಿತಿ ಇನ್ನೂ ಕೆಟ್ಟದ್ದಾಗಿತ್ತು.

“ಈ ರೂಮಿನಲ್ಲೂ ಹಾಗೆಯೇ ಇದೆ ತಾನೇ? ನಡಿ, ಈಗ ಎಲ್ಲವನ್ನೂ ಚೊಕ್ಕಟ ಮಾಡು.”

ಪಾರ್ವತಿ ಕಳೆದ 8 ವರ್ಷಗಳಿಂದ ಇವರ ಮನೆಯಲ್ಲಿ ಕೆಲಸ ಮಾಡುತ್ತಿದ್ದಳು. ಅವಳಿಗೆ ಯಜಮಾನಿಯ ಶಾಂತಸ್ವಭಾವದ ಪರಿಚಯ ಇತ್ತು. ಹೀಗಾಗಿ ಅವಳು ಸುಮ್ಮನೆ ತನ್ನ ಕೆಲಸದಲ್ಲಿ ತೊಡಗಿದಳು.

ಜ್ಯೋತಿ ಆಫೀಸ್‌ಗೆ ಹೋಗುತ್ತಿರುವಾಗ ಅವಳ ತಾಯಿಯ ಫೋನ್‌ ಕರೆಬಂದಿತು. ಕ್ಷೇಮ ಸಮಾಚಾರವನ್ನು ಕೇಳಿದ ಬಳಿಕ ತಾಯಿ, “ಆಫೀಸ್‌ಗೆ ಹೊರಡುವುದಕ್ಕೆ ಮೊದಲು ಏನು ಕೆಲಸ ಮಾಡಿದೆ?” ಎಂದು ಕೇಳಿದರು.

ತನ್ನ ಅತ್ತೆಯನ್ನು ಹೊಗಳುತ್ತಾ ನಾಲ್ಕಾರು ಮಾತುಗಳನ್ನಾಡುತ್ತಿದ್ದ ಜ್ಯೋತಿಗೆ ಇದ್ದಕ್ಕಿದ್ದಂತೆ ಏನೋ ನೆನಪಾಯಿತು “ಮಮ್ಮಿ, ನಾನು ಆಮೇಲೆ ಫೋನ್‌ ಮಾಡ್ತೀನಿ,” ಎಂದು ಹೇಳಿ ಕೂಡಲೇ ಅತ್ತೆಗೆ ಕರೆ ಮಾಡಿದಳು.

ಅತ್ತ ಕಡೆ ಶೈಲಜಾ “ಹಲೋ…” ಎಂದ ಕೂಡಲೇ, “ಸಾರಿ ಅಮ್ಮಾ, ನಾನು ಹೊರಡುವ ಗಡಿಬಿಡಿಯಲ್ಲಿ ಸಾಮಾನುಗಳನ್ನು ಎತ್ತಿಡಲೇ ಇಲ್ಲ….. ಹಾಗೇ ಬಿಟ್ಟು ಬಂದಿದ್ದೇನೆ…..” ಎಂದಳು.

“ಪಾರ್ವತಿ ಎಲ್ಲ ಎತ್ತಿಟ್ಟಿದ್ದಾಳೆ.”

“ಸಾರಿ ಅಮ್ಮಾ, ನಾಳೆಯಿಂದ……”

“ನಿಧಾನವಾಗಿ ಎಲ್ಲ ಸರಿಹೋಗುತ್ತೆ. ಯೋಚನೆ ಮಾಡಬೇಡ.”

ಅತ್ತೆಯ ಸ್ನೇಹಮಯ ಮಾತುಗಳನ್ನು ಕೇಳಿ ಜ್ಯೋತಿಯ ಹೃದಯ ತುಂಬಿ ಬಂದಿತು.

ರಜೆ ಮುಗಿಸಿ ಆಫೀಸಿಗೆ ಹೋದ ಅಜಯ್‌ ಮತ್ತು ಜ್ಯೋತಿಗೆ ಅಲ್ಲಿ ಬಿಡುವಿಲ್ಲದಷ್ಟು ಕೆಲಸ. ಕಡೆಗೆ ಅವರು 8 ಗಂಟೆಗೆ ಆಫೀಸಿನಿಂದ ಹೊರಡಲು ಸಾಧ್ಯವಾಯಿತು. ಮನೆ ತಲುಪಿದಾಗ 10 ಗಂಟೆ. ಜ್ಯೋತಿಗೆ ಹಾಸಿಗೆಗೆ ಹೋಗಿ ದಣಿವಾರಿಸಿಕೊಳ್ಳುವ ಆಸೆ. ಆದರೆ ಇದು ಅತ್ತೆಯ ಮನೆ. ಮನೆಯವರೆಲ್ಲರ ಊಟ ಮುಗಿದಿತ್ತು. ಇವರಿಬ್ಬರ ಪಾಲಿನ ಊಟ ಟೇಬಲ್ ಮೇಲಿತ್ತು. ಜ್ಯೋತಿ ಊಟ ಮಾಡಿ ಪಾತ್ರೆಗಳನ್ನು ತೆಗೆದಿಟ್ಟಳು.

“ಇರಲಿ, ನೀನು ಹೋಗಿ ಮಲಗು. ಸುಸ್ತಾಗಿರುವ ಹಾಗೆ ಕಾಣುತ್ತೀಯಾ,” ಎಂದು ಶೈಲಜಾ ಅವಳಿಗೆ ಹೇಳಿದರು.

ಶೈಲಜಾ ಮಲಗಲು ಬಂದಾಗ ಶಿವಸ್ವಾಮಿ, “ನೀನೂ ಸುಸ್ತಾಗಿದ್ದೀಯಾ,” ಎಂದರು.

“ಹೌದು. ಈಗ ಮಲಗುತ್ತೇನೆ.”

“ನಿನಗೆ ಕೆಲಸ ಹೆಚ್ಚಾಯಿತಲ್ಲವೇ?”

“ಯಾವ ಕೆಲಸ?”

“ಅಡುಗೆ ಕೆಲಸ….. ಈಗ ಮನೆಯಲ್ಲಿ ಇನ್ನೊಬ್ಬರು ಹೆಚ್ಚಾದರಲ್ಲ. ಲಂಚ್‌ ಬಾಕ್ಸ್ ಸಹ ಒಂದು ಹೆಚ್ಚಾಯಿತು.”

“ಏನು ಹೇಳುತ್ತಿದ್ದೀರಿ ನೀವು…. ? 6 ಚಪಾತಿ ಮಾಡುವ ಕಡೆ 8 ಮಾಡುವುದು ಕಷ್ಟವೇ? ಅವಳೊಬ್ಬಳಿಗೆ ಹೆಚ್ಚಿಗೆ ಮಾಡುವುದು ನನಗೇನು ಕಷ್ಟವಲ್ಲ. ಇವತ್ತು ಇಬ್ಬರಿಗೂ ಬೇರೆ ಬೇರೆ ಬಾಕ್ಸ್ ಕೊಟ್ಟಿದ್ದೆ. ನಾಳೆಯಿಂದ ಒಟ್ಟಿಗೆ ಹಾಕಿಕೊಡುತ್ತೇನೆ. ಒಟ್ಟಿಗೆ ತಿನ್ನಲಿ.”

“ಶೈಲೂ, ನೀನು ಎಲ್ಲ ವಿಷಯವನ್ನೂ ಇಷ್ಟು ಸುಲಭವಾಗಿ ಹೇಗೆ ತೆಗೆದುಕೊಳ್ಳುತ್ತೀಯಾ?”

“ಹೊಂದಿಕೊಂಡು ಶಾಂತಿಯಿಂದ ಬಾಳುವುದು ಕಷ್ಟವೇನಲ್ಲ. ನಾವು ಹೆಂಗಸರು ನಮ್ಮ ಹಠ, ಅಹಂನಿಂದಾಗಿ ಮನೆಯಲ್ಲಿ ಅಶಾಂತಿ ಉಂಟು ಮಾಡುತ್ತೇವೆ. ಈಗಿನ ಕಾಲದ ಹುಡುಗಿಯರು ಮೊದಲು ವಿದ್ಯಾಭ್ಯಾಸ, ಆಮೇಲೆ ಕೆರಿಯರ್‌ನಲ್ಲಿ  ತೊಡಗಿರುತ್ತಾರೆ. ನಮ್ಮ ಅನೂನ ನೋಡಿ,  ಅವಳಿಗೂ ಯಾವ ಕೆಲಸ ಅಷ್ಟಾಗಿ ಬರುವುದಿಲ್ಲ. “ಹೊರಗೆ ಕೆಲಸ ಮಾಡುವ ಹುಡುಗಿಯರಿಗೆ ಮನೆಯನ್ನು ತೂಗಿಸುವುದು ಕಷ್ಟವೇ ಆಗುತ್ತದೆ. ನಾನಾದರೆ ಮನೆಯಲ್ಲೇ ಇರುವವಳು. ಕೆಲಸ ಮಾಡಿ ಸಾಕಾದರೆ ಒಂದು ಗಳಿಗೆ ವಿಶ್ರಾಂತಿ ತೆಗೆದುಕೊಳ್ಳಬಹುದು. ನನಗೆ ಸಹಾಯಕ್ಕೆ ಪಾರ್ವತಿ ಇದ್ದಾಳೆ. ಜ್ಯೋತಿ ಈಗ ತಾನೇ ಬಂದಿದ್ದಾಳೆ. ನಿಧಾನವಾಗಿ ಕಲಿಯುತ್ತಾಳೆ. ಅವಳು ಬರುತ್ತಿದ್ದ ಹಾಗೇ ತಲೆಯ ಮೇಲೆ ಕೆಲಸ ಹೊರಿಸಿದರೆ ಅವಳ ಮನಸ್ಸು ಚಿಕ್ಕದಾಗುತ್ತದೆ. ಹಾಗಾಗುವುದು ನನಗೆ ಇಷ್ಟವಿಲ್ಲ,” ಶೈಲಜಾ ತಮ್ಮ ಮನಸ್ಸಿನ ಭಾವನೆಗಳನ್ನು ಹೊರಗೆಡವಿದರು.

ಅತ್ತ ಅಜಯನ ತೋಳನ್ನೇ ತಲೆ ದಿಂಬಾಗಿಸಿಕೊಂಡು ಒರಗಿದ್ದ ಜ್ಯೋತಿ ಮನದಲ್ಲೇ ಯೋಚಿಸುತ್ತಿದ್ದಳು, `ವಿವಾಹಾನಂತರ ಇಂದು ಮೊದಲ ದಿನ ಆಫೀಸಿಗೆ ಹೋದದ್ದು….. ಅಮ್ಮನ ಸ್ವಭಾವ ಮತ್ತು ವ್ಯವಹಾರ ಅದೆಷ್ಟು ಸ್ನೇಹಪೂರ್ಣವಾಗಿರುತ್ತದೆ. ಅವರು ನನ್ನನ್ನು ಮಗಳಂತೆ ನೋಡುತ್ತಿದ್ದಾರೆ. ನಾನೂ ಸಹ ಅವರಿಗೆ ತಾಯಿಯ ಸ್ಥಾನ, ಪ್ರೀತಿ, ಗೌರವಗಳನ್ನು ಕೊಡುತ್ತೇನೆ. ಕಳೆದ 15 ದಿನಗಳಿಂದ ಚಿಕ್ಕಮ್ಮ ಹೇಳಿದ ಮಾತುಗಳು ಎದೆಯ ಮೇಲೆ ಭಾರವಾಗಿ ಕುಳಿತಿದ್ದವು. ಆದರೆ ಇಂದು ನನ್ನ ಹೃದಯ ಹೂವಿನಂತೆ ಹಗುರಾಗಿದೆ.’

ಜ್ಯೋತಿ ನಿರಾಳವಾದ ಮನಸ್ಸಿನಿಂದ ತನ್ನ ತಲೆಯನ್ನು ಅಜಯ್‌ನ ಎದೆಗೊರಗಿಸಿ ಕಣ್ಣು ಮುಚ್ಚಿದಳು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ