ಕಥೆ – ರಾಧಿಕಾ ರವೀಂದ್ರ 

ದೇವಿಕಾಳಿಗೆ ಈಗ ಏನು ಮಾಡಲಿಕ್ಕೂ ಅರ್ಥವಾಗದೆ ಕಸಿವಿಸಿಗೆ ಒಳಗಾಗಿದ್ದಳು. ಕಳೆದ 25 ವರ್ಷಗಳ ಹಿಂದೆ ಅವಳು ಯಾವ ದ್ವಂದ್ವಕ್ಕೆ ಸಿಲುಕಿದ್ದಳೋ, ಇಂದು ಅದೇ ಸ್ಥಿತಿಯಲ್ಲಿ ಅವಳ ಮಗಳು ನಿಂತಿದ್ದಳು. ವ್ಯತ್ಯಾಸವಿಷ್ಟೆ, ಅಂದು ಸ್ವಯಂ ದೇವಿಕಾ ತಾನೇ ಆ ಕಷ್ಟಕ್ಕೆ ಸಿಲುಕಿದ್ದಳು, ಇಂದು ಅವಳ ಮಗಳು ಆ ಕಷ್ಟಕ್ಕೆ ಗುರಿಯಾಗಿದ್ದಳು.

ದೇವಿಕಾ ಒಟ್ಟು ಕುಟುಂಬಕ್ಕೆ ಸೇರಿದವಳಾಗಿದ್ದರೂ ಅವಳಿಗೆ ಸೂಕ್ತ ಮಾರ್ಗದರ್ಶನ ಮಾಡುವವರು ಯಾರೂ ಇರಲಿಲ್ಲ. ಅವಳ ಪತಿ ಸುಮಂತ್‌ ಅಂತೂ ತಾನಾಯಿತು, ತನ್ನ ಕೆಲಸಾಯಿತು ಎನ್ನುವ ವರ್ಕೋಹಾಲಿಕ್‌ ಪತಿ. ಸದಾ ತನ್ನ ಫ್ಯಾಕ್ಟರಿಯ ಕೆಲಸಗಳಲ್ಲಿ ಬಿಝಿ ಆಗಿರುತ್ತಿದ್ದ ಆತ, ತಿಂಗಳಿಗೊಮ್ಮೆ ಸಂಬಳ ತಂದು ಹೆಂಡತಿಯ ಕೈಗೆ ಹಾಕಿಬಿಟ್ಟರೆ ಮುಗಿಯಿತು. ಮನೆಯ ಯಾವ ಜವಾಬ್ದಾರಿಗಳನ್ನೂ ಅಂಟಿಸಿಕೊಳ್ಳುತ್ತಿರಲಿಲ್ಲ. ಆತನಿಂದ ಏನಾದರೂ ಸಲಹೆ, ಸಹಾಯ ಅಪೇಕ್ಷಿಸುವುದು ದಂಡವೇ ಆಗಿತ್ತು. ಮದುವೆಯಾದ ಇಷ್ಟು ವರ್ಷಗಳಿಗೆ ಒಮ್ಮೆಯೂ ಸಂಸಾರದಲ್ಲಿ ಏನು ನಡೆಯುತ್ತಿದೆ, ಗಂಡನಾಗಿ ತಾನು ಎಂಥ ಜವಾಬ್ದಾರಿ ನಿರ್ವಹಿಸಬೇಕು ಎಂಬುದರ ಗೊಡವೆಯೇ ಇರಲಿಲ್ಲ. ಆತನಿಂದ ಎರಡು ಪ್ರೀತಿಯ ಮಾತುಗಳನ್ನು ಕೇಳಲು ಅವಳ ಮನಸ್ಸು ಸದಾ ಕಾತರಿಸುತ್ತಿತ್ತು. ಮನೆಗೆ ಬೇಕಾದ ರೇಷನ್‌ ಬಟ್ಟೆಬರೆ, ಹೊರಗಿನ ಸಮಸ್ತ ಕೆಲಸಗಳನ್ನೂ ಅವಳೇ ನಿರ್ವಹಿಸುತ್ತಿದ್ದಳು. ಅವಳೇನಾದರೂ ಮನೆಗೆ ಇಂಥ ಕೆಲಸ ಆಗಬೇಕು ಎಂದರೆ, “ಅದಕ್ಕೆ ಎಷ್ಟು ಹಣ ಬೇಕೋ ಅದನ್ನು ತೆಗೆದುಕೋ…. ನನಗೆ ಮಾತ್ರ ಏನೂ ಹೇಳಬೇಡ,” ಎಂದು ಒಂದೇ ಮಾತಿನಲ್ಲಿ ತಳ್ಳಿಬಿಡುತ್ತಿದ್ದ.

ಅವಿಭಕ್ತ ಕುಟುಂಬದ ಸೊಸೆಯಾದ ದೇವಿಕಾ ಸದಾ ಒಂದಿಲ್ಲೊಂದು ಪರೀಕ್ಷೆಗಳನ್ನು ಎದುರಿಸಬೇಕಾಗುತ್ತಿತ್ತು. ಒಡಹುಟ್ಟಿದವರಲ್ಲಿ ಎಲ್ಲರಿಗಿಂತ ತಾನೇ ಹೆಚ್ಚು ಆದರ್ಶವಾದಿ ಎಂದು ಸಾಬೀತುಪಡಿಸುವಲ್ಲಿ ಸುಮಂತ್‌ ಸದಾ ಮುಂದು. ಅವನ ಅಂಥ ಕೆಲಸಗಳಿಗೆ ಗಾಣದ ಎತ್ತಿನಂತೆ ಸಿಕ್ಕಿಹಾಕಿಕೊಂಡು ಚಡಪಡಿಸಬೇಕಾದವಳು ದೇವಿಕಾ. 25 ವರ್ಷಗಳ ಸಂಸಾರ ಭಾರ ಹೊರುವುದರಲ್ಲಿ ಅವಳು ಎರಡು ಪಟ್ಟು ಹೈರಾಣಾಗಿದ್ದಳು. ಈ ಸಂದಿಗ್ಧದ ಸಂದರ್ಭದಲ್ಲಿ ದೇವಿಕಾಳಿಗೆ ಅವಳ ಗತ ಜೀವನ ಒಂದು ಕಡೆ ಎಳೆಯುತ್ತಿದ್ದರೆ, ಮಗಳು ಅನನ್ಯಾಳ ಭವಿಷ್ಯ ಇನ್ನೊಂದು ಯಕ್ಷಪ್ರಶ್ನೆ ಆಗಿತ್ತು.

ಅವಳಿಗೆ ಮತ್ತೆ ತನ್ನ ಕಳೆದ ದಿನಗಳ ನೆನಪಾಯಿತು. ಅವಳು ಆಗ ತಾನೇ ಪಿ.ಯು.ಸಿ. ಮುಗಿಸಿ ಪದವಿಯ ಮೊದಲ ವರ್ಷದಲ್ಲಿ  ದಾಖಲಾತಿ ಪಡೆದಿದ್ದಳು. ಅದೇ ಕಾಲೇಜಿನ ಲೆಕ್ಚರರ್‌ ಆಗಿದ್ದ ರಾಮಮೂರ್ತಿಗಳ ಮಗ ಅವಿನಾಶ್‌ಗೆ ಅವಳು ಮನಸೋತಿದ್ದಳು. ಇಬ್ಬರ ಮನೆಯೂ ಹತ್ತಿರವೇ ಇದ್ದುದರಿಂದ ಬಂದು ಹೋಗುವ ಗೆಳೆತನ ಎರಡು ಕುಟುಂಬದವರಿಗೂ ಇತ್ತು. ಹೀಗೆ ದೇವಿಕಾ ಮತ್ತು ಅವಿನಾಶ್‌ ಮಧ್ಯೆ ಸಹಜವಾಗಿ ಒಲವು ಹೆಚ್ಚತೊಡಗಿತು.

ಇಬ್ಬರೂ ಕಾಲೇಜಿನ ಕ್ಯಾಂಪಸ್‌ ಅಲ್ಲದೆ ಹೊರಗಿನ ಸುತ್ತಾಟಕ್ಕೂ ಮುಂದಾಗಿದ್ದರು. ಚೆಲುವಿನ ಖನಿಯಾಗಿದ್ದ ದೇವಿಕಾ ಅವಿನಾಶ್‌ನನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತಿದ್ದಳು. ಅವಳನ್ನು ಪಡೆಯವುದಕ್ಕಾಗಿ ಸ್ಛುರದ್ರೂಪಿ ಅವಿನಾಶ್‌ ಹಾತೊರೆಯುತ್ತಿದ್ದ. ಯಾವುದೋ ನೆಪದಲ್ಲಿ ಇಬ್ಬರೂ ಒಟ್ಟಾಗಿ ಹೊರಗೆ ಓಡಾಡುತ್ತಿದ್ದರು. ಕಲಿಕೆಯಲ್ಲೂ ಮುಂದಾಗಿದ್ದ ಅವಿನಾಶ್‌, ದೇವಿಕಾಳಿಗೆ ಪಾಠ ಪ್ರಚನಗಳಲ್ಲೂ ನೆರವಾಗುತ್ತಿದ್ದ. ಬರ್ತ್‌ಡೇ, ಹಬ್ಬಗಳ ನೆಪದಲ್ಲಿ ಇಬ್ಬರಲ್ಲೂ ಉಡುಗೊರೆಗಳ ವಿನಿಮಯ ನಡೆಯುತ್ತಿತ್ತು. ಅವಳು ಅವಿನಾಶ್‌ನ ಪ್ರೇಮದ ಹೊಳೆಯಲ್ಲಿ ಹುಚ್ಚಳಾಗಿದ್ದರೂ ತನ್ನ ಓದು, ಕರ್ತವ್ಯಗಳನ್ನು ಎಂದೂ ಕಡೆಗಣಿಸಿದವಳಲ್ಲ. ಹೀಗೆ ವಾರ, ತಿಂಗಳುಗಳು ಸರಿದು ಪದವಿಯ ಅಂತಿಮ ವರ್ಷಕ್ಕೆ ಕಾಲಿಟ್ಟಳು.

ಅವಳಿಗೆ ಸದಾ ಅವಿನಾಶ್‌ನದೇ ಧ್ಯಾನವಾಗಿತ್ತು. ಇಬ್ಬರ ಮನೆಯರಿಗೂ ಈ ವ್ಯವಹಾರದ ಸುಳಿವು, ಸೂಕ್ಷ್ಮ ಇರಲಿಲ್ಲ. ಇಬ್ಬರೂ ಒಂದೇ ಕಾಲೇಜಿನಲ್ಲಿ ಕಲಿಯುತ್ತಿದ್ದಾರೆ, ಹೀಗಾಗಿ ಅವಿನಾಶ್‌ ಪಠ್ಯದ ವಿಷಯದಲ್ಲಿ ಅವಳಿಗೆ ಹೆಚ್ಚು ನೆರವಾಗುತ್ತಿದ್ದಾನೆ ಎಂದೇ ಭಾವಿಸಿದ್ದರು. ಆದರೆ ಒಮ್ಮೆ ನಡೆದ ವಿಚಿತ್ರ ಘಟನೆಯಿಂದಾಗಿ ಅವರು ಈ ಭ್ರಮೆಯಿಂದ ಹೊರಬರಬೇಕಾಯಿತು.

ಒಮ್ಮೆ ದೇವಿಕಾ ಕಾಲೇಜಿಗೆ ಹೋಗಿದ್ದಾಗ, ಅವಳ ತಂದೆ ಪೇಪರ್‌, ಪೆನ್‌ ಬೇಕೆಂದು ಅವಳ ಕೋಣೆಗೆ ಬಂದಿದ್ದರು. ಪೆನ್‌ ತೆಗೆದುಕೊಳ್ಳಲು ಹೋದಾಗ, ಶೆಲ್ಪಿನಲ್ಲಿ ಅವಳು ಇರಿಸಿದ್ದ ಪುಸ್ತಕ ಜಾರಿಬಿದ್ದು, ಅದರಲ್ಲಿನ ಒಂದ ಪಿಂಕ್‌ ಕಾಗದ ಕೆಳಗೆ ಬಿತ್ತು. ಅವರು ಆತುರದಿಂದ ಅದನ್ನು ಎತ್ತಿಕೊಂಡು ಕಣ್ಣಾಡಿಸಿದಾಗ, ಅದು ಅವಿನಾಶ್‌ ದೇವಿಕಾಳಿಗೆ ಬರೆದ ಪ್ರೇಮ ಪತ್ರವಾಗಿತ್ತು. ಆ ಪತ್ರದ ತುಂಬಾ ತಾನು ಅವಳನ್ನು ಎಷ್ಟು ಪ್ರೀತಿಸುವುದಾಗಿ ಅವನು ಪರಿಪರಿಯಾಗಿ ತೋಡಿಕೊಂಡಿದ್ದ. ಒಟ್ಟಾರೆ ಅವರಿಬ್ಬರ ಪ್ರೇಮ ವ್ಯವಹಾರ ತಂದೆಗೆ ಸ್ಪಷ್ಟವಾಗಿ ತಿಳಿದು ಹೋಯಿತು. ಅವರಿಗೆ ಏನೋ ಅನುಮಾನ ಬಂದು ಅವಳ ಪುಸ್ತಕಗಳು, ಮೇಜಿನ ಅರೆಯಲ್ಲಿ ಹುಡುಕಿದಾಗ ದೇವಿಕಾಳ ಇನ್ನಿತರ ಪ್ರೇಮಪತ್ರಗಳು, ಅವಳು ಪಡೆದಿದ್ದ ಉಡುಗೊರೆ ಇತ್ಯಾದಿಗಳೆಲ್ಲ ದೊರಕಿದವು. `ಓ….. ಬಹಳ ದಿನಗಳಿಂದ ಇವರ ಮಧ್ಯೆ ಈ ವ್ಯವಹಾರ ನಡೆಯುತ್ತಿದೆ,’ ಎಂಬುದು ಅವರಿಗೆ ಸ್ಪಷ್ಟವಾಯಿತು.

ಅಲ್ಲಿಂದ ತಮ್ಮ ಕೋಣೆಗೆ ಬಂದವರೇ ಅವರು ಸಿಟ್ಟಿನಿಂದ ಕೆಂಡಾಮಂಡಲವಾದರು. ತಾವು ಅಂದುಕೊಂಡಂತೆ ತಮ್ಮ ಮಗಳು ಬಹಳ ಮುಗ್ಧಳೇನಲ್ಲ, ಕಾಲೇಜಿಗೆ ಹೋಗುತ್ತಾಳೆ ಎಂದರೆ ಇದೆಲ್ಲ ನಡೆಸುತ್ತಿದ್ದಾಳಾ… ಇಂದು ಸಂಜೆ ಬರಲಿ, ಅವಳ ಗ್ರಹಚಾರ ಬಿಡಿಸಬೇಕು. ಸಾಕು ಇನ್ನು ಕಾಲೇಜಿಗೆ ಮಣ್ಣು ಹೊತ್ತದ್ದು, ಮನೆಯಲ್ಲೇ ಬಿದ್ದಿರಲಿ ಎಂದು ರೇಗಿಕೊಂಡರು.

ತಮ್ಮ ಆಫೀಸಿಗೆ ಹೊರಟಿದ್ದ ಪತಿಗೆ ತಿಂಡಿ ಕೊಡಲು ಬಂದ ದೇವಿಕಾಳ ತಾಯಿ, ಪತಿ ಕೋಪದಿಂದ ರೂಮಿನಲ್ಲಿ ಶತಪಥ ಹಾಕುತ್ತಾ ಇರುವುದನ್ನು ಕಂಡು ದಂಗಾದರು. ಅವರ ಕೈಯಲ್ಲಿ ಎಂಥದೋ ಪತ್ರವಿತ್ತು. ಮೇಜಿನ ಮೇಲೆ ಏನೇನೋ ಉಡುಗೊರೆ ಸಾಮಗ್ರಿಗಳಿದ್ದವು.

“ಏನ್ರಿ….. ತಿಂಡಿ ತಗೊಳ್ಳಿ,” ಎಂದು ಆಕೆ ಹೇಳುಷ್ಟರಲ್ಲಿ ಅವರು ಸಿಡಿದುಬಿದ್ದರು.

“ತಿಂಡಿ ಮನೆ ಹಾಳಾಯ್ತು! ನೋಡಿದ್ಯಾ ನಿನ್ನ ಮಗಳ ಅವಾಂತರ…. ಲವ್ ಅಂತೆ…. ಅಮರ ಪ್ರೇಮವಂತೆ….. ಸುಡುಗಾಡು…..”

“ನೀವು ಏನು ಹೇಳ್ತಿದ್ದೀರಿ?” ಆಕೆ ನಡುಗುವ ದನಿಯಲ್ಲಿ ಕೇಳಿದಾಗ ಪತಿ ಅವರತ್ತ ಪತ್ರ ಎಸೆದರು.

ಆಕೆ ಅದನ್ನು ಎತ್ತಿಕೊಂಡು ಓದಿದಾಗ ವಿಷಯ ಅರ್ಥವಾಯಿತು. ಸದಾ ಮೂಗಿನ ಮೇಲೆ ಕೋಪವುಳ್ಳ ಪತಿ ಬಳಿ ಈಗ ಮಾತನಾಡುವುದು  ಬೇಡವೆಂದು, “ನೀವು ತಿಂಡಿ ತಿಂದು ಆಫೀಸಿಗೆ ಹೊರಡಿ….. ಸಂಜೆ ಅವಳು ಬಂದ ಮೇಲೆ ವಿಚಾರಿಸೋಣ,” ಎಂದು ತಮ್ಮ ಬುದ್ಧಿಯೆಲ್ಲ ಖರ್ಚು ಮಾಡಿ, ಅವರು ತಿಂಡಿ ತಿಂದು ಹೊರಡುಂತೆ ಮಾಡಿದರು.

ಸಂಜೆ ಮಗಳು ಮನೆಗೆ ಬರುವ ಹೊತ್ತಿಗೆ ರಾಯರು ಬಂದಿದ್ದರು. ಹೆಂಡತಿ ಮಗಳಿಗೆ ಬೇರೇನೋ ಹೇಳುವ ಮೊದಲೇ, “ಕಾಫಿ ಕುಡಿದು ನನ್ನ ರೂಮಿಗೆ ಬಾ,” ಎಂದು ಸಿಡುಕಿದವರೇ, ಹೆಂಡತಿಗೆ ತಮ್ಮ ಕೋಣೆಗೆ ಕಾಫಿ ತರುವಂತೆ ತಾಕೀತು ಮಾಡಿ ಹೊರಟುಹೋದರು. ಮಗಳು ಮುಖ ನೋಡಿದಾಗ ತಾಯಿಗೆ ಏನೂ ಉತ್ತರಿಸಲು ಆಗಲಿಲ್ಲ. ಕಾಫಿ ಮುಗಿಸಿದ ದೇವಿಕಾ ಅಂಜುತ್ತಲೇ ತಂದೆ ಕೋಣೆಗೆ ಹೋದಳು.

ಅವರು ಬಾಗಿಲು ಹಾಕಿ ತಕ್ಷಣ ಸಿಡುಕಿದರು, “ಇದೇನು ನಿನ್ನ ರಾದ್ಧಾಂತ ದೇವಿಕಾ?” ಅವಳ ಮುಂದೆ ಅವಿನಾಶ್‌ನ ಪತ್ರ ಹಿಡಿದಾಗ ಅವಳು ಭೂಮಿಗಿಳಿದು ಹೋದಳು.

“ಏನಾಯ್ತು ಅಪ್ಪಾಜಿ?” ಮಡಿಸಿದ್ದ ಪತ್ರದ ಗುರುತು ಸಿಗುತ್ತಲೇ ನಡುಗುತ್ತಾ ಹೇಳಿದಳು. ಅವಳು ಅದನ್ನು ಬಿಡಿಸುಷ್ಟರಲ್ಲಿ ಮತ್ತೆ ಗುಡಗಿದ್ದರು,

“ಏನಿದೆಲ್ಲ ಅಂದೆ…. ಎಷ್ಟು ದಿನಗಳಿಂದ ನಡೆದಿದೆ ಈ ವ್ಯವಹಾರ?”

“ಅ….ಪ್ಪಾ….ಜಿ….” ಅವಳ ದನಿ ಅಲ್ಲೇ ಉಡುಗಿಹೋಗಿತ್ತು. ಇವರಿಗೆ ವಿಷಯ ಗೊತ್ತಾಯಿತು, ಇನ್ನು ತನ್ನ ಕಥೆ ಮುಗಿದಂತೆ, ಭೂಮಿ ಈಗಲೇ ಬಾಯಿ ತೆರೆಯಬಾರದೆ ಎಂದು ನೆಲ ನೋಡತೊಡಗಿದಳು.

“ನಿನಗೆ ಅಷ್ಟೂ ನಾಚಿಕೆ ಆಗುದಿಲ್ಲವೇ… ಮನೆಯ ಹಿರಿಮಗಳಾಗಿ ಪ್ರೀತಿಪ್ರೇಮ ಅಂತ… ಛೀ…ಛೀ!”

“ಏನಾಯಿತು….?” ಅಷ್ಟರಲ್ಲಿ ಅಮ್ಮ ಒಳಗೆ ಬಂದಿದ್ದರು. ಅವಳು ಉತ್ತರಿಸಲಾಗದೆ ಕಣ್ಣೀರು ಸುರಿಸಿದಳು. ಅವಳ ದೇಹ ಥರ ಥರ ನಡುಗುತ್ತಿತ್ತು.

“ನಿನ್ನ ಮಗಳು ಮಾಡಿರುವ ಘನ ಕಾರ್ಯ ಗೊತ್ತಾಯಿತಲ್ಲ…. ಕರೆದುಕೊಂಡು ಹೋಗು ಅವಳನ್ನು….. ನಾಳೆಯಿಂದ ಯಾವ ಕಾಲೇಜೂ ಸಡುಗಾಡೂ ಬೇಡ. ತೆಪ್ಪಗೆ ಮನೆಯಲ್ಲಿ ಬಿದ್ದಿರಲಿ….” ಅವರ ಬಡಬಡಿಕೆ ಮುಂದುವರಿದಂತೆ ತಾಯಿ ಮಗಳನ್ನು ಕರೆದುಕೊಂಡು ಅಡುಗೆಮನೆಯತ್ತ ನಡೆದರು.

ಅವಳ ತಮ್ಮ ತಂಗಿ ಪೆಚ್ಚಾಗಿ ಒಂದು ಮೂಲೆಯಲ್ಲಿ ನಿಂತುಬಿಟ್ಟಿದ್ದರು. ಅವರು 6 ಗಂಟೆ ನಂತರ ಕ್ಲಬ್‌ ಕಡೆ ಹೋಗುವುದನ್ನೇ ಕಾದಿದ್ದು, ಮಗಳನ್ನು ತಬ್ಬಿ ತಾಯಿ ಕೂಡ ಅತ್ತರು, “ಇದೇನು ಮಾಡಿಕೊಂಡೆ ದೇವಿ? ನೀನು ಮಾಡಿದ್ದು ನಿಜಕ್ಕೂ ದೊಡ್ಡ ತಪ್ಪು. ಇಂಥ ಕೆಲಸಕ್ಕೆ ನೀನು ಕೈ ಹಾಕಬಾರದಿತ್ತು. ಮನೆಯ ಹಿರಿಮಗಳು ನೀನು, ಮಹಾ ವಿವೇಕಿ, ಬುದ್ಧಿವಂತೆ. ನಿನ್ನ ಈ ಎಡವಟ್ಟಿನಿಂದ ನಿನ್ನ ತಮ್ಮತಂಗಿಯರ ಭವಿಷ್ಯದ ಮೇಲೆ ನಾಳೆ ಎಂಥ ಪರಿಣಾಮ ಆಗಬಹುದೆಂದು ಯೋಚಿಸಿದೆಯಾ? ನಮ್ಮ ಮನೆತನಕ್ಕೆ ಎಂಥ ಕಳಂಕ ತಗುಲಬಹುದು, ನಮ್ಮನ್ನು ಏನೆಲ್ಲ ಆಡಿಕೊಳ್ಳಬಹುದು ಎಂದೆಲ್ಲ ಗೊತ್ತಾ ನಿನಗೆ?”

“ಇಲ್ಲಮ್ಮ….. ನಮ್ಮಿಬ್ಬರದೂ ನಿಜಕ್ಕೂ ನಿರ್ಮಲ ಪ್ರೀತಿ. ಬರೀ ಆಕರ್ಷಣೆ ಅಲ್ಲ….”

“ಬೇಡಮ್ಮ ಬೇಡ! ನಮ್ಮಂಥವರಿಗಲ್ಲ ಈ ಪ್ರೀತಿ, ಪ್ರೇಮ. ದೇವಿ, ನೀನು ಅವನನ್ನು ಮರೆತುಬಿಡು. ಆಗಿದ್ದೆಲ್ಲ ಒಂದು ಕನಸು ಅಂತ ಮರೆತುಬಿಡು. ನಾನು ನಿಮ್ಮ ಅಪ್ಪಾಜಿಗೆ ಹೇಳಿ ಒಪ್ಪಿಸುತ್ತೇನೆ, ಮುಂದಿನ ಜವಾಬ್ದಾರಿ ನನಗಿರಲಿ.”

“ಅಮ್ಮ…. ನಾವಿಬ್ಬರೂ ಒಬ್ಬರನ್ನೊಬ್ಬರು ಬಹಳ ಪ್ರೀತಿಸುತ್ತೇವೆ. ಬಿಟ್ಟಿರಲು ಆಗೋಲ್ಲ…..” ಹೇಗೋ ಧೈರ್ಯ ಕೂಡಿಸಿಕೊಂಡ ದೇವಿಕಾ ಅಮ್ಮನಿಗೆ ಹೇಳಿದಳು.

“ಬೇಡಮ್ಮ ಬೇಡ! ಹೇಳಿದ್ನಲ್ಲ…. ನಮ್ಮಂಥ ಕುಲಸ್ಥ ಹೆಣ್ಣುಮಕ್ಕಳಿಗೆ ಇದರ ಹಂಗು ಬೇಡ. ಅವನು ನಿನಗೆ ತಕ್ಕವನಲ್ಲ ದೇವಿ….”

“ಯಾಕಮ್ಮ… ಯಾಕಲ್ಲ? ನಾನು ಅವಿಯನ್ನು 2 ವರ್ಷದಿಂದ ಹತ್ತಿರದಿಂದ ಗಮನಿಸಿದ್ದೀನಿ. ಬುದ್ಧಿವಂತ, ಗುಣವಂತ… ನನ್ನ ಬಗ್ಗೆ ಬಹಳ ಕಾಳಜಿ ಇದೆ.”

“ಮುಚ್ಚೇ ಬಾಯಿ! ಇಷ್ಟು ಹೇಳಿದರೂ ಇನ್ನೂ ಅದೇ ರಾಗ ಹಾಡ್ತಿದ್ದೀಯಾ? ಅವರದು ಬೇರೆ ಜಾತಿ, ನಮ್ಮದು ಬೇರೆ ಜಾತಿ! ಅವರ ಊಟ, ಆಚಾರ, ವ್ಯವಹಾರ ಎಲ್ಲ ನಮಗಿಂತ ಬಹಳ ವಿಭಿನ್ನ,” ತಾಯಿ ಮಗಳಿಗೆ ನಾನಾ ವಿಧದಲ್ಲಿ ತಿಳಿಯಪಡಿಸಿದರು.

“ಆದರೆ ಅಮ್ಮ, ಅವಿ ನನಗೋಸ್ಕರ ಎಲ್ಲ ರೀತಿಯಲ್ಲೂ ಬದಲಾಗಲು ಸಿದ್ಧನಾಗಿದ್ದಾನೆ. ಅವನ ತಾಯಿ ತಂದೆ ಸಹ ಬಹಳ ಒಳ್ಳೆಯವರು,” ದೇವಿಕಾ ತಾಯಿಯ ಬಳಿ ತರ್ಕವಿತರ್ಕಕ್ಕೆ ಇಳಿದಳು.

“ನೀನು ಹೀಗೆ ಮನೆ ಬಿಟ್ಟು ಓಡಿಹೋದರೆ ಮುಂದೆ ನಿನ್ನ ತಮ್ಮ, ತಂಗಿಯರ ಗತಿ ಏನು ಅಂತ ಯೋಚಿಸಿದ್ದೀಯಾ? ನೀನು ಹಠ ಹಿಡಿದರೆ ಅಪ್ಪಾಜಿ ಇವತ್ತೇ ನಿನ್ನನ್ನು ಮನೆಯಿಂದ ಓಡಿಸಿಬಿಡುತ್ತಾರೆ. ಆಮೇಲೆ ಈ ಮನೆಗೆ ಎಂದೆಂದೂ ಬರಲಾಗದು. ನಾಳೆ ನಿನ್ನ ತಂಗಿಯ ಕೈ ಹಿಡಿಯಲು ಯಾರು ಮುಂದೆ ಬರ್ತಾನೆ? ಓಡಿಹೋದವಳು ಅನ್ನುವ ಕೆಟ್ಟ ಹೆಸರು ನಿನಗೆ ಬೇಕಾ?”

ಮಗಳ ಮಾತಿಗೆ ಒಂದಿಷ್ಟೂ ಬೆಲೆ ಕೊಡದೆ, ರಾಯರು ಬೇಗ ಬೇಗ ತರಾತುರಿಯಲ್ಲಿ ಬೆಂಗಳೂರಿನ ಹುಡುಗನನ್ನು ಗೊತ್ತು ಮಾಡಿದರು. ಮೈಸೂರಿನ ಹುಡುಗರನ್ನು ವಿಚಾರಿಸಲು ಹೋಗಲೇ ಇಲ್ಲ. ಬೆಂಗಳೂರಿನಲ್ಲಿ ತಮ್ಮದೇ ಆದ ಒಂದು ಫ್ಯಾಕ್ಟರಿ ಹೊಂದಿದ್ದ ಅನುಕೂಲಸ್ಥರ ಮನೆತನದ ಹುಡುಗನೊಂದಿಗೆ ಅವಳ ಮದುವೆ ಆಗೇಹೋಯಿತು. ತನ್ನ ಪ್ರೀತಿಯ ಮೈಸೂರು, ಅವಿನಾಶ್‌ನನ್ನು ತೊರೆದು ಹೋಗುವಾಗ ಅವಳಿಗೆ ಅಪಾರ ಸಂಕಟವಾಗಿತ್ತು. ತಾಯಿ ತಂದೆಯರನ್ನು ವಿರೋಧಿಸಲಾಗದ, ಮನೆ ಬಿಟ್ಟು ಬರಲಾಗದ ಅವಳ ಅಸಹಾಯಕತೆಗೆ ಅವಿನಾಶ್‌ ನೊಂದುಕೊಂಡಿದ್ದ. ಹತಾಶನಾಗಿ ಕೈಚೆಲ್ಲಿ ನಿಟ್ಟುಸಿರಿಟ್ಟಿದ್ದ. ಆದರೆ ಬೆಂಗಳೂರಿಗೆ ಬಂದು ಎಷ್ಟು ದಿನಗಳಾದರೂ ಮೈಸೂರಿನ ತನ್ನ ತವರಿನ ದಿನಗಳನ್ನು ದೇವಿಕಾ ಮರೆಯದಾದಳು. ಘಳಿಗೆ ಘಳಿಗೆಗೂ ಅವಿನಾಶ್‌ನನ್ನು ನೆನೆದು ಬೆಂದು ಹೋಗುತ್ತಿದ್ದಳು. ಸುಮಂತನ ತುಂಬಿದ ಮನೆ ಸೇರಿದ ದೇವಿಕಾ ಇಲ್ಲಿನ ಹೊಸ ಪರಿವಾರಕ್ಕೆ ಹೊಂದಿಕೊಳ್ಳುವಲ್ಲಿ ವರ್ಷವೇ ಹಿಡಿಯಿತು. ಓರಗಿತ್ತಿ, ನಾದಿನಿಯರು, ಮಕ್ಕಳು, ಹಿರಿಯರು ತುಂಬಿದ್ದ ಆ ಮನೆಗೆ ಅವಳು ಕ್ರಮೇಣ ಹೊಂದಿಕೊಂಡಳು. ಮುಂದೆ ಮಗಳು ಅನನ್ಯಾ ಹಾಗೂ ಮಗ ಅಚಿಂತ್ಯ ಹುಟ್ಟಿದ ನಂತರ ಅವಳು ತನ್ನ ಗತವನ್ನು ಮರೆತೇಬಿಟ್ಟಳು. ತಾನು, ತನ್ನ ಸಂಸಾರ, ಗಂಡ, ಮನೆ, ಮಕ್ಕಳು…. ಇದೇ ಅವಳ ಪ್ರಪಂಚವಾಯಿತು. ಹೀಗೆ ಎಂದಾದರೂ ಸಿನಿಮಾ ನೋಡುವಾಗ ಅವಳ ಹೃದಯದ ಮೂಲೆಯಲ್ಲಿ ಎಲ್ಲೋ ಅವಿನಾಶನ ಮಾತುಗಳು ಮಿಡಿಯುತ್ತಿದ್ದವು. ತಾನು ಪ್ರೀತಿಸಿದವನನ್ನು ಕೈ ಹಿಡಿಯಲಾಗಲಿಲ್ಲವಲ್ಲ ಎಂಬ ಕೊರಗು ಅವಳ ಮನದಲ್ಲಿ ಶಾಶ್ವತವಾಗಿ ಉಳಿದುಹೋಯಿತು.

ಹೀಗೆ ದೇವಿಕಾ ತನ್ನ ಭೂತ ಹಾಗೂ ವರ್ತಮಾನದ ದಿನಗಳ ಮಧ್ಯೆ ಕಳೆದು ಹೋಗಿದ್ದಳು. ಪ್ರಸ್ತುತ ಪರಿಸ್ಥಿತಿಗೆ ತನ್ನ ಗತಕಾಲ ಹೋಲಿಸಿಕೊಂಡು ಅವಳ ಮನಸ್ಸು ಭಾರವಾಯಿತು. ನಡೆದುದನ್ನೆಲ್ಲ ನೆನೆದು ಎದ್ದು ಕುಳಿತಳು. ನೀರು ಕುಡಿದು ಮಲಗಿದರೂ ಅವಳಿಗೆ ನಿದ್ದೆ ಬರಲಿಲ್ಲ. ಆಗ 3 ಗಂಟೆ ಆಗಿತ್ತು. ಅವಳ ಪಕ್ಕದಲ್ಲಿ ಮಲಗಿದ್ದ ಸುಮಂತನಿಗೆ ಗಾಢವಾದ ನಿದ್ದೆ ಆವರಿಸಿತ್ತು. ಮಕ್ಕಳು ಬೇರೆ ಕೋಣೆಯಲ್ಲಿ ಮಲಗಿದ್ದರು.

ದೇವಿಕಾಳಿಗೆ ಮಗಳು ಅನನ್ಯಾ ಹಾಗೂ ಅವಳ ಪ್ರೇಮಿ ಅರುಣ್‌ ಬಗ್ಗೆ ಇತ್ತೀಚೆಗೆ ತಾನೇ ತಿಳಿದುಬಂದಿತ್ತು. ಅನನ್ಯಾಳ ಈ ಫ್ರೆಂಡ್‌ ಅರುಣ್‌, ಅವಳೊಂದಿಗೆ ಕಂಪ್ಯೂಟರ್‌ ಕೋರ್ಸ್‌, ಬ್ಯಾಡ್ಮಿಂಟನ್‌ ಎಂದೆಲ್ಲ ಒಟ್ಟೊಟ್ಟಿಗೆ ತಿರುಗುತ್ತಿದ್ದ. ದೇವಿಕಾ ಈ ಕಡೆ ಅಷ್ಟು ಗಮನ ಕೊಟ್ಟಿರಲಿಲ್ಲ. ಅರುಣ್‌ ಒಂದು ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದ್ದ ಸಭ್ಯ ಹುಡುಗ ಎಂದು ತಿಳಿಯಿತು. ಅವನ ತಂದೆ ಒಂದು ಖಾಸಗಿ ಬ್ಯಾಂಕಿನಲ್ಲಿ ಮ್ಯಾನೇಜರ್‌ ಆಗಿದ್ದರು. ಆಸ್ತಿ, ಅನುಕೂಲದ ವಿಷಯದಲ್ಲಿ ಅವರು ದೇವಿಕಾಳ ಮನೆಯವರಿಗಿಂತ ಖಂಡಿತಾ ಮೇಲು ಮಟ್ಟದವರಲ್ಲ. ಅರುಣನ ಮನೆಯವರು ಸುಸಂಸ್ಕೃತರು ಎಂಬುದು ಅವನ ಮಾತುಕಥೆ, ನಡವಳಿಕೆಯಿಂದ ತಿಳಿಯುತ್ತಿತ್ತು. ಇಂದಿನ ಯುವಜನತೆ ಆರ್ಥಿಕ ಅನಾನುಕೂಲ, ಬಡತನ ಸಿರಿತನ ಇತ್ಯಾದಿಗಳಲ್ಲಿ ಆಸಕ್ತಿ ತೋರಿಸುತ್ತಿರಲಿಲ್ಲ. ಹೀಗಾಗಿ ಅನನ್ಯಾ ಅರುಣರ ಪ್ರೇಮ ಸಹಜವಾಗಿ ಬೆಳೆದಿತ್ತು. ಅನನ್ಯಾಳ ಜೊತೆ ಪದವಿ ಮುಗಿಸಿಕೊಂಡ ಅರುಣ್‌, ತಾನೂ ಒಂದು ಖಾಸಗಿ ಬ್ಯಾಂಕಿನಲ್ಲಿ ಕೆಲಸಕ್ಕೆ ಸೇರಿದ್ದ. ಆದರೆ ಅನನ್ಯಾ ಸಿ.ಎ. ಮಾಡುವುದಾಗಿ ಓದು ಮುಂದುವರಿಸಿದ್ದಳು.

ಆ ದಿನ ಅನನ್ಯಾ ಸ್ನಾನಕ್ಕೆ ಹೋಗಿದ್ದಳು. ಅವಳ ಮೊಬೈಲ್ ರಿಂಗ್‌ ಆಗುತ್ತಿತ್ತು. ದೇವಿಕಾ ಹೋಗಿ ಮೊಬೈಲ್ ಕೈಗೆತ್ತಿಕೊಂಡಾಗ ಅದರಲ್ಲಿ `ಗೋಲ್ಡನ್‌ ಹಾರ್ಟ್‌ ಅರುಣ್‌’ ಎಂದು ಹೆಸರು ಸೇವ್‌ ಆಗಿತ್ತು. ಏನೋ ಕುತೂಹಲದಿಂದ ದೇವಿಕಾ ಫೋನ್‌ ಕಾಲ್‌ ರಿಸೀವ್ ಮಾಡಿದಳು.

“ಹೋ ಡಾರ್ಲಿಂಗ್‌…. ಎಲ್ಲಿದ್ದಿ? ಆಗಿನಿಂದ ಒಂದೇ ಸಮ ಟ್ರೈ ಮಾಡ್ತಿದ್ದೀನಿ. ನೀನು ಪಿಕ್‌ ಮಾಡ್ತಾನೇ ಇಲ್ಲ…..”

ದೇವಿಕಾಳಿಗೆ ಅವನೇನು ಹೇಳುತ್ತಿದ್ದಾನೆ ಎಂದು ಒಂದು ಕ್ಷಣ ಅರ್ಥವೇ ಆಗಲಿಲ್ಲ. ಹಾಗೇ ಕೇಳಿಸಿಕೊಳ್ಳುತ್ತಿದ್ದಳು. ಅರುಣ್‌ ಮಾತನಾಡುತ್ತಲೇ ಇದ್ದ.

“ಏನಾಯ್ತು ಡಾರ್ಲಿಂಗ್‌….. ನೀನೇನೂ ಮಾತನಾಡುತ್ತಿಲ್ಲ, ಇನ್ನೂ ಈ ಬಡವನ ಮೇಲೆ ಕೋಪವೇ? ಓ…. ನಿನ್ನೆ ರಾತ್ರಿ ನಾನು ಕಳಿಸಿದ ವೀಡಿಯೋ ಮೆಸೇಜ್‌ ನೋಡಿ ನೀನು ಸಿಟ್ಟಾಗಿರಬೇಕು. ಓ ಕಮಾನ್‌…. ಈಗೆಲ್ಲ ಇಂಥ ನಾನ್‌ವೆಜ್‌ ಮೆಸೇಜ್‌ ಕಾಮನ್‌ ಗೊತ್ತಾ? ನೀನೇನು ಇನ್ನೂ ಮಡಿವಂತಿಕೆಗೆ ಅಂಟಿಕೊಂಡು…. ಹೋ…. ಹೋ….”

“ಹೋ ಅರುಣ್‌, ನಾನು ಅನನ್ಯಾಳ ತಾಯಿ ಮಾತನಾಡುತ್ತಿರುವುದು. ಅವಳು ಬಾತ್‌ರೂಮಿನಲ್ಲಿ ಸ್ನಾನಕ್ಕೆ ಹೋದಳು…. ಇನ್ನೇನು ಬಂದು ಬಿಡ್ತಾಳೆ….”

“ಓ… ಸಾರಿ ಆಂಟಿ… ವೆರಿ ಸಾರಿ…. ಅನನ್ಯಾನೇ ಅಂದುಕೊಂಡು ಬಡಬಡ ಅಂತ ಮಾತನಾಡಿಬಿಟ್ಟೆ. ದಯವಿಟ್ಟು ತಪ್ಪು ತಿಳಿಯಬೇಡಿ. ಅವಳು ಫ್ರೀ ಆದ ಮೇಲೆ ಫೋನ್‌ ಮಾಡಲು ತಿಳಿಸಿ.”

“ಆಯ್ತು, ಹೇಳ್ತೀನಿ ಬಿಡು,” ಎನ್ನುತ್ತಾ ದೇವಿಕಾ ಕಾಲ್‌ ಡಿಸ್‌ಕನೆಕ್ಟ್ ಮಾಡಿದಳು. ಆದರೆ ಅರುಣನ ಕಾಲ್‌ ಅವಳ ಮನದಲ್ಲಿ ಹೆಚ್ಚಿನ ಉದ್ವೇಗ ಉಂಟು ಮಾಡಿತ್ತು. ಇವರ ಸ್ನೇಹ ಎಷ್ಟು ಮುಂದುವರಿದಿದೆಯೋ ಅಂದುಕೊಂಡಳು. ಅವಳು ಅನನ್ಯಾಳ ವಾಟ್ಸ್ಆ್ಯಪ್‌ ತೆರೆದು ನೋಡಿದಾಗ, ಇಬ್ಬರ ಮಧ್ಯೆ ಬಹಳ ಪ್ರೀತಿಪ್ರೇಮದ ಮೆಸೇಜ್‌ ಹರಿದಿರುವುದು ತಿಳಿಯಿತು. ಅರುಣ್‌ ಅವಳಿಗೆ ಕಳುಹಿಸಲಾದ ವರ್ಷದಷ್ಟು ಹಳೆಯ ಮೆಸೇಜ್‌ಗಳನ್ನೂ ಅನನ್ಯಾ ಇನ್ನೂ ಉಳಿಸಿಕೊಂಡಿದ್ದಳೆಂದರೆ ಅವರದು ಎಂಥ ಆಳವಾದ ಪ್ರೇಮ ಎಂದು ಅರ್ಥವಾಯಿತು.

ತಾನು 25 ವರ್ಷಗಳ ಹಿಂದೆ ಅನುಭವಿಸಿದ್ದ ಅಂದಿನ ಸಂದರ್ಭ ಅವಳಿಗೆ ನೆನಪಾಯಿತು. ಅವಳ ತಂದೆ ಅವಿನಾಶ್‌ನ ಪ್ರೇಮ ಪತ್ರ ಕಂಡು ಕಿಡಿಕಿಡಿ ಆಗಿದ್ದರು. ಈಗಿನ ಘಟನೆ ಅದರ ಪುನರಾವರ್ತನೆ ಆಗಿತ್ತು, ಅವಿನಾಶ್‌ ಮತ್ತು ಅವಳ ನಡುವಣ ಸಂಬಂಧ ಅನನ್ಯಾ-ಅರುಣರದಾಗಿತ್ತು. ಪ್ರೀತಿಪ್ರೇಮದಲ್ಲಿ ಮುಳುಗಿದವರ ಭಾವನೆಗಳು ಎಂದೂ ಬದಲಾಗದೇನೋ ಎನಿಸಿತು. ಕಾಲ ಎಷ್ಟೇ ಬದಲಾದರೂ ಪ್ರೀತಿಪ್ರೇಮ ಹಾಗೇ ಉಳಿದಿತ್ತು. ಹಿಂದೆಲ್ಲ ಪ್ರೇಮದ ಸಂದೇಶ ಪೇಪರ್‌ ಮೇಲೆ ಇರುತ್ತಿತ್ತು, ಈಗ ಅದು ಮೊಬೈಲ್ ಸ್ಕ್ರೀನ್‌ ಮೇಲೆ ಹರಿದಾಡುತ್ತಿತ್ತು. ಭಾವನೆ ಮಾತ್ರ ಅದೇ ಆಗಿತ್ತು. ಹಿಂದೆಲ್ಲ ಪ್ರೇಮಪತ್ರ ರವಾನಿಸಲು ಎಷ್ಟೋ ಕಷ್ಟಪಡಬೇಕಿತ್ತು. ಈಗ ಚಿಟಿಕೆ ಹೊಡೆಯುವಷ್ಟರಲ್ಲಿ ಅದು ಆಗಿಹೋಗುತ್ತಿತ್ತು.

ದೇವಿಕಾ ಇತ್ತೀಚೆಗೆ ಗಮನಿಸಿದಂತೆ ಅನನ್ಯಾಳ ಹಾವಭಾವ, ಚಲನವಲನ, ಊಟತಿಂಡಿ, ಅಲಂಕಾರ ಎಲ್ಲ ಬದಲಾಗಿತ್ತು. ಅನನ್ಯಾ-ಅರುಣರ ಹೊಸ ಸ್ನೇಹದ ಕಾರಣವೇ ಅವಳಲ್ಲಿ ಈ ಬದಲಾವಣೆ ಬಂದಿತ್ತು ಎಂಬುದನ್ನು ಅವಳೀಗ ಅರಿತುಕೊಂಡಳು. ಏನೇ ಆಗಲಿ, ತನ್ನ ಮಗಳ ಸಂತೋಷಕ್ಕೆ ಅಡ್ಡಿ ಬಾರದಂತೆ ಈ ಮದುವೆ ನಡೆಸಿಕೊಡಬೇಕು ಎಂಬ ನಿರ್ಧಾರಕ್ಕೆ ಬಂದಳು ದೇವಿಕಾ. ಅಂದು ಸಂಜೆ  ದೇವಿಕಾ ಮಗಳನ್ನು ಕೇಳಿದಳು, “ಅನು, ಅರುಣ್‌ ನಿನ್ನ ಕ್ಲೋಸ್‌ ಫ್ರೆಂಡಾ? ಎಷ್ಟು ದಿನಗಳಿಂದ ಈ ಸ್ನೇಹ?”

“ಅದೇಮ್ಮಾ…. ಮಾಮೂಲಿ ಫ್ರೆಂಡ್‌ಶಿಪ್‌….”

“ಫ್ರೆಂಡ್‌ಶಿಪ್‌ ಅಷ್ಟೇನಾ ಅಥವಾ ಲವ್ ಗಿವ್…..?”

“ಏ…. ಅದೇನಿಲ್ಲಮ್ಮಾ…..”

“ನನಗೆ ನೀನು ಸುಳ್ಳು ಹೇಳಬೇಡ. ನಾನು ನಿನ್ನಮ್ಮ! ನಿನ್ನ ಮೊಬೈಲ್‌ನಲ್ಲಿ ಎಲ್ಲಾ ಮೆಸೇಜ್‌ಗಳನ್ನೂ ಗಮನಿಸಿದ್ದೀನಿ. ಎಷ್ಟು ಆಳದವರೆಗಿದೆ ಈ ಪ್ರೀತಿಪ್ರೇಮ?”

“ಯಾವ ಮೆಸೇಜ್‌ ಓದಿದೆ…. ಏನು ಕಥೆ? ನೀನು ಯಾವುದನ್ನು ಏನು ಅಂತ ತಿಳಿದುಕೊಂಡೆ?”

“ನೋಡಮ್ಮ, ನಾನು ನಿನ್ನಮ್ಮ. ನಿನ್ನ ಆಪ್ತ ಹಿತೈಷಿ ಕೂಡ. ನಾನು ತಾಯಿ ಮಾತ್ರವಲ್ಲ, ನಿನ್ನ ಫ್ರೆಂಡ್‌ ಫಿಲಾಸಫರ್‌, ಗೈಡ್‌ ಎಂಬುದೂ ಗೊತ್ತಿರಲಿ.”

“ಓ.ಕೆ. ನೀನು ಮೆಸೇಜ್‌ ನೋಡಿದ ಮೇಲೆ ಇನ್ನೇನಿದೆ ಬಿಡು. ನಾನು ಅರುಣನನ್ನು ಬಹಳ ಪ್ರೇಮಿಸುತ್ತೇನೆ. ನಾವಿಬ್ಬರೂ ಮದುವೆ ಆಗಬೇಕು ಎಂದು ನಿರ್ಧರಿಸಿದ್ದೇವೆ.”

“ಆದರೆ… ಅವರ ಮನೆಯ ಆರ್ಥಿಕ ಪರಿಸ್ಥಿತಿ? ಅವರ ಮನೆಗೆ ನೀನು ಅಡ್ಜಸ್ಟ್ ಆಗಲು ಸಾಧ್ಯವೇ? ಬಹುಶಃ ಅರುಣನ ಸಂಬಳ 30 ಸಾವಿರಕ್ಕಿಂತ ಹೆಚ್ಚು ಇರಲಾರದು. ಅವರದು ಲೀಸ್‌ ಮನೆ ಅಂತ ಗೊತ್ತು, ಸ್ವಂತದ್ದೂ ಅಲ್ಲ. ಇಷ್ಟರಲ್ಲಿ ಎಲ್ಲಾ ನಡೆಯಬೇಕು….”

“ಓಹೋ…. ಎಲ್ಲಾ ಡೀಟೈಲ್ಸ್ ಗಮನಿಸಿಕೊಂಡಿದ್ದಿ. ಅಮ್ಮಾ, ಈ ಕುರಿತಾಗಿ ಟೆನ್ಶನ್‌ ಬೇಡ. ನಾವಿಬ್ಬರೂ ಹೇಗೋ ಅಡ್ಜಸ್ಟ್ ಮಾಡಿಕೊಳ್ತೀವಿ. ನಾನೂ ಕೆಲಸಕ್ಕೆ ಸೇರಿ ಎಲ್ಲಾ ತೂಗಿಸ್ತೀನಿ.”

“ನೀನೂ ಕೆಲಸಕ್ಕೆ ಸೇರೋದಾ? ಮಧ್ಯಮ ವರ್ಗದ ಜೀವನದ ಬಗ್ಗೆ ನಿನಗೆ ಏನಾದರೂ ಐಡಿಯಾ ಇದೆಯಾ? ಮುಂದೆ ಹೇಗೆ ನಿಭಾಯಿಸ್ತೀಯಾ?”

“ಹ್ಞೂಂ…. ನೀನು ಹೇಳೋದು ಸರಿಯಾಗೇ ಇದೆ. ಇದುವರೆಗೆ  ಇವೆಲ್ಲ ನನಗೆ ಗೊತ್ತಿರಲಿಲ್ಲ. ಇನ್ನು ಮುಂದಿವ ಎಲ್ಲವನ್ನೂ ಒಂದೊಂದಾಗಿ ಅಭ್ಯಾಸ ಮಾಡಿಕೊಳ್ತೀನಿ. ಅರುಣ್‌ ನನಗೆ ಎಷ್ಟೋ ತಿಳಿಸಿದ್ದಾನೆ….”

“ನಾವೇನಾದರೂ ಅವರಿಗೆ ಸಹಾಯ ಮಾಡೋದಾ ಹೇಗೆ…. ಏನಾದರೂ ಸ್ವಂತ ಬಿಸ್‌ನೆಸ್‌ ನಡೆಸುವ ಹಾಗಿದ್ದರೆ ಅಪ್ಪಾಜಿಗೆ ಹೇಳಿ ಏರ್ಪಾಡು ಮಾಡಿಸೋಣ.”

“ಖಂಡಿತಾ ಬೇಡಮ್ಮ! ಅರುಣ್‌ ಹಣಕ್ಕಾಗಿ ಬಾಯಿ ಬಿಡೋಂಥ ಹುಡುಗ ಅಲ್ಲ. ತನ್ನ ಮಾವನ ಮನೆಯಿಂದ ವರದಕ್ಷಿಣೆ, ವರೋಪಚಾರ, ಬಳುವಳಿ ಬಯಸುವಂಥ ಸಣ್ಣ ಮನುಷ್ಯನಲ್ಲ. ನಾನು ಅವನನ್ನು ಒಂದು ವರ್ಷದಿಂದ ಚೆನ್ನಾಗಿ ಬಲ್ಲೆ.”

“ಆದರೆ…. ತಾಯಿತಂದೆ ತಮ್ಮನ ಜೊತೆ ಇರುವ ಅವರ ಜಾಯಿಂಟ್‌ ಫ್ಯಾಮಿಲಿಯಲ್ಲಿ ನೀನು ಹೇಗೆ ಅಡ್ಜಸ್ಟ್ ಮಾಡಿಕೊಳ್ಳಬಲ್ಲೆ? ಇದು ತುಂಬಾ ಗಂಭೀರ ವಿಷಯ…. ಗೊತ್ತಾಗುತ್ತಿದೆ ತಾನೇ?”

“ಹೌದಮ್ಮ… ಈ ಎಲ್ಲಾ ವಿಷಯಗಳನ್ನೂ ನಾನು ಅರುಣ್‌ ನೂರಾರು ಸಲ ಚರ್ಚಿಸಿದ್ದೇವೆ, ಎಲ್ಲವನ್ನೂ ತೂಗಿಸಬಲ್ಲೇ ಅನ್ನೋ ಧೈರ್ಯ ಬಂದ ನಂತರವೇ ನಾನು ಈ ನಿರ್ಧಾರಕ್ಕೆ ಬಂದಿದ್ದು,” ಎಂದು ಮಗಳು ಮಾತು ಮುಗಿಸಿದಳು.

ದೇವಿಕಾಳಿಗೆ ಈಗ ಮಗಳ ಈ ವ್ಯವಹಾರ ನುಂಗಲಾರದ ಬಿಸಿ ತುಪ್ಪವಾಗಿತ್ತು. ತಿಳಿದೂ ತಿಳಿದೂ ಮಗಳನ್ನು ಮಧ್ಯಮ ವರ್ಗದಲ್ಲಿ ಗೆದ್ದು ಬಾ ಎಂದು ನೂಕುವುದೇ? ಮೊದಲ ಅಡ್ಡಿ ಪತಿ ಸುಮಂತ್‌ನಿಂದಲೇ  ಬರುವುದು ದಿಟ. ಆತ ಖಂಡಿತಾ ರಿಸ್ಕ್ ತೆಗೆದುಕೊಂಡು ಈ ಮದುವೆಗೆ ಒಪ್ಪಿಗೆ ಕೊಡಲಾರ. ಜೊತೆಗೆ ಆತನ ತಮ್ಮಂದಿರೂ ತಮಗಿಂತ ಕೆಳಗಿನ ಅಂತಸ್ತಿನವರೊಂದಿಗೆ ಸಂಬಂಧ ಒಪ್ಪಿಕೊಳ್ಳಲು ಖಂಡಿತಾ ಮುಂದಾಗುವುದಿಲ್ಲ. ಇಷ್ಟೆಲ್ಲ ಅಡ್ಡಿಆತಂಕಗಳಿದ್ದರೂ ಈ ಮದುವೆ ನಡದೇ ತೀರಬೇಕೆಂದು ದೇವಿಕಾ ಪಟ್ಟುಹಿಡಿದಿದ್ದಳು. ಅವಳು ತನ್ನ ಮಟ್ಟದಲ್ಲೇ ಅರುಣನ ಮನೆಯವರ ಕುರಿತು ಸಂಪೂರ್ಣ ಮಾಹಿತಿ ಸಂಗ್ರಹಿಸಿದಳು. ಮಹಿಳಾ ಸಂಘದಿಂದ ಬಂದಿರುವ ಹಾಗೆ ಅವರ ಮನೆಗೂ ಹೋಗಿ ನೋಡಿಕೊಂಡು ಬಂದಳು. ಎಲ್ಲ ಸರಿ ಇದೆ ಅನಿಸಿತು. ಅರುಣನ ಮನೆಯವರು ಸಭ್ಯರು, ಮಾನವೀಯತೆಯುಳ್ಳ ಸುಸಂಸ್ಕೃತರು ಎಂದು ತಿಳಿಯಿತು. ಕೊರತೆ ಅಂತ ಹೇಳಲೇಬೇಕೆಂದರೆ…. ದೊಡ್ಡ ಬಂಗಲೆ, ಕಾರು, ಬಿಸ್‌ನೆಸ್‌ನ ಕಾರುಬಾರುಗಳಿರಲಿಲ್ಲ.

ಹೀಗೆ ಪತಿಯ ಜೊತೆ ಒಮ್ಮೆ ರಾತ್ರಿ ಊಟದ ನಂತರ ಮಾತಿಗೆ ಕುಳಿತು, “ನಮ್ಮ ಅನನ್ಯಾ ಈಗ ಮದುವೆಗೆ ಬೆಳೆದು ನಿಂತಿದ್ದಾಳೆ. ನೀವು ಅವಳನ್ನು ಸರಿಯಾಗಿ ಗಮನಿಸಿದ್ದೀರಿ ತಾನೇ? ಅವಳ ಸುಮಾರು ಗೆಳತಿಯರ ಮದುವೆಗಳು ಈಗಾಗಲೇ ಆಗಿಹೋಗಿವೆ.”

“ಇಷ್ಟೇಕೆ ಅವಸರ…. ಈಗಿನ್ನೂ ಸಿ.ಎ. ಶುರು ಮಾಡಿದ್ದಾಳೆ…. 1-2 ವರ್ಷ ಪ್ರಾಕ್ಟೀಸ್‌ ಮಾಡಲಿ….”

“ಅವಳಿಗೀಗಾಗಲೇ 24 ವರ್ಷ….. ಅಷ್ಟು ಸಾಲದೇ ಮದುವೆಗೆ?”

“ಅದೇನೋ ಸರಿ. ಆದರೆ ಈಗ ರಾತ್ರಿಯಿಂದಲೇ ಅವಳಿಗೆ ವರನನ್ನು ಹುಡುಕೋದು ಬೇಡ. ನಾಳೆ ಯಾವುದಾದರೂ ಮದುವೆಯ ವೆಬ್‌ಸೈಟ್‌ನಲ್ಲಿ ಹೆಸರು ರಿಜಿಸ್ಟರ್‌ ಮಾಡಿದರಾಯಿತು. ಈಗೆಲ್ಲ ಇಂಟರ್‌ನೆಟ್‌ ಮದುವೆಗಳೇ ಸಲೀಸು…”

“ನಿಮಗೆ ಅಂಥ ಕಷ್ಟ ಬೇಡ. ಹುಡುಗ ಸಿಕ್ಕಿದ್ದಾನೆ.”

“ಯಾರದು ಹುಡುಗ?”

“ಅರುಣ್‌, ಅನನ್ಯಾಳ ಕಾಲೇಜಿನ ಸೀನಿಯರ್‌. ಇಬ್ಬರೂ ಪರಸ್ಪರ ಬಹಳ ಇಷ್ಟಪಟ್ಟಿದ್ದಾರೆ. ಇಬ್ಬರಲ್ಲೂ ಒಳ್ಳೆ ಅಂಡರ್‌ಸ್ಟ್ಯಾಂಡಿಂಗ್‌ ಇದೆ…” ಎನ್ನುತ್ತಾ ದೇವಿಕಾ ಗಂಡನಿಗೆ ಎಲ್ಲವನ್ನೂ ವಿವರಿಸಿದಳು.

“ಏನು? ಯಾವ ಬಿಸ್‌ನೆಸ್‌ ಇಲ್ಲದ ಖಾಸಗಿ ಬ್ಯಾಂಕಿನಲ್ಲಿ ಕೆಲಸದಲ್ಲಿರುವ ಜುಜುಬಿ ನನ್ನ ಅಳಿಯನಾಗಬೇಕೇ? ಸ್ವಂತ ಮನೆಯೂ ಇಲ್ಲದ ಅವರದೆಂಥ ಮನೆತನ? ಇಂಥ ಮದುವೆ ಮಾಡಿಸೋಣ ಅನ್ನುವ ನಿನ್ನ ತಲೆ ನೆಟ್ಟಗಿದೆ ತಾನೇ?” ಹೆಂಡತಿಯ ಮೇಲೆ ರೇಗಿದ ಸುಮಂತ್‌.

“ಎಲ್ಲ ಸರಿಯಾಗಿದೆ…. ಇಬ್ಬರ ಒಳ್ಳೆಯದನ್ನು ಯೋಚಿಸಿಯೇ ಈ ತೀರ್ಮಾನಕ್ಕೆ ಬಂದಿದ್ದು. ಅವಳು ಕಲಿತವಳು, ಮೇಜರ್‌. ನಾಳೆ ಅವನನ್ನೇ ಆಗ್ತೀನೀಂತ ರೆಜಿಸ್ಟರ್ಡ್‌ ಮದುವೆ ಮಾಡಿಕೊಂಡು ಬಂದರೆ ಆಗ ನಮ್ಮ ಮನೆತನದ ಮಾನ ಹೋಗುವುದಿಲ್ಲವೇ….”

ಅಂದು ಶುರುವಾದ ವಾದವಿವಾದ ಸುಮಾರು ದಿನ ಮುಂದುವರಿಯಿತು. ಹೀಗೆ ಗಂಡನನ್ನು ಒಪ್ಪಿಸುವುದಕ್ಕೆ ಒಂದು ವಾರ ಹಿಡಿಯಿತು. ಅದೇ ತರಹ ಮನೆಯ ಇತರ ಸದಸ್ಯರನ್ನು ಒಪ್ಪಿಸಿದ್ದಾಯ್ತು. ಆದರೆ ಅತ್ತೆ, ಮೈದುನ ಎಲ್ಲರನ್ನೂ ಒಪ್ಪಿಸುವುದು ಅಷ್ಟು ಸುಲಭವಾಗಿರಲಿಲ್ಲ. ಮಗಳು ಮನೆ ಬಿಟ್ಟು ಓಡಿಹೋಗುತ್ತಾಳೆ ಎಂಬ ಮಾತಿಗೆ ಅವರು ಕಟ್ಟುಪಡಬೇಕಾಯಿತು.  ವಯಸ್ಸಿಗೆ ಬಂದ ಮಕ್ಕಳು ನಾಳೆ ಏನಾದರೂ ಹೆಚ್ಚು ಕಡಿಮೆ ಮಾಡಿಕೊಂಡರೆ ಅದನ್ನು ನೋಡಬೇಕಾದವರು ನಾವೇ ತಾನೇ? ಅಂತೂ ಒಲ್ಲದ ಮನದಿಂದಲೇ ಮದುವೆ ಸಿದ್ಧತೆಗಳು ಆರಂಭಗೊಂಡವು.

ಅಂತೂ ಇಂತೂ ಅನನ್ಯಾ-ಅರುಣರ ಮದುವೆ ನಿಶ್ಚಯವಾಯಿತು. ಮದುವೆ ದಿನ ಮಾಂಗಲ್ಯ ಧಾರಣೆ ಮುಗಿದು, ಮಗಳು ಗಂಡನೊಂದಿಗೆ ಸಪ್ತಪದಿ ಸುತ್ತಿ ಬಂದಾಗ ತಾನೇ ಗೆದ್ದಷ್ಟು ದೇವಿಕಾಳಿಗೆ ಸಂತೋಷವಾಯಿತು. ಆ ದಿನ ಅವಳ ಮನದಲ್ಲಿ ಅವಿನಾಶ್‌ ಸಾವಿರ ಬಾರಿ ಸುಳಿದು ಹೋಗಿದ್ದ. ಅಂತೂ ಈ ರೀತಿ ಅವಳು ತನ್ನ ಕನಸನ್ನು ಮಗಳ ಮೂಲಕ ನನಸಾಗಿಸಿ ಕೊಂಡಿದ್ದಳು. ಇದಕ್ಕಾಗಿ ತಾನು 25 ವರ್ಷ ಕಾಯಬೇಕಾಯಿತು ಎಂದು ಅವಳು ಕಣ್ಣು ಒರೆಸಿಕೊಂಡಾಗ, ಮಗಳು-ಅಳಿಯ ಬಂದು ಅವಳ ಕಾಲಿಗೆರಗಿದ್ದರು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ