ಕಥೆ – ನೀತಾ ವಿಶ್ವನಾಥ್‌ 

ನಳಿನಿ ಕಳೆದ ಏಳು ವರ್ಷಗಳಿಂದ ಈ ಸುಸಂದರ್ಭಕ್ಕಾಗಿಯೇ ಕಾಯುತ್ತಿದ್ದಳು. ಹತ್ತು ವರ್ಷದ ಹಿಂದೆ ಮಹೇಶನೊಂದಿಗೆ ವಿವಾಹವಾಗಿದ್ದ ನಳಿನಿ, ಇದೀಗ ಮೂರು ವರ್ಷಗಳ ಕೆಳಗೆ ಮಗುವನ್ನು ಪಡೆಯಲು ನಿರ್ಧರಿಸಿದ್ದಳು. ತನ್ನ ಸೋದರಿ ರಾಧಿಕಾ ಮದುವೆ ಆದ ವರ್ಷದಲ್ಲಿಯೇ ತಾಯಿಯಾಗಲು ನಿರ್ಧರಿಸಿದ್ದನ್ನು ನೋಡಿ ನಳಿನಿಗೆ ಅಚ್ಚರಿ ಎನಿಸಿತ್ತು.

ನಳಿನಿ ಆಗಷ್ಟೇ ಫೈನ್‌ ಆರ್ಟ್ಸ್ ಮೊದಲ ವರ್ಷದ ಪದವಿ ವಿದ್ಯಾಭ್ಯಾಸಕ್ಕೆ ಸೇರಿದ್ದಳು. ರಾಧಿಕಾ ತಾನು ಮದುವೆಯಾಗಲು ಆರಿಸಿದ ವ್ಯಕ್ತಿಯನ್ನು ಕಂಡು ನಳಿನಿ ಸೇರಿದಂತೆ ಅವಳ ಪರಿವಾರಕ್ಕೆ ದಿಗ್ಭ್ರಮೆಯಾಯಿತು.

ರಾಧಿಕಾ ಎಂಬಿಎ ಪದವೀಧರೆ. ಅದು ಅವಳು ಆಕ್ಸ್ ಫರ್ಡ್‌ ಬಿಸ್‌ನೆಸ್‌ ಕಾಲೇಜಿನಲ್ಲಿ ಕಲಿಯುತ್ತಿದ್ದ ಸಮಯ. ಅಗ ಅವಳಿಗೆ ರೋಹನ್‌ ಪರಿಚಯವಾಗಿದ್ದ. ಬಹಳ ಬೇಗನೇ ಇಬ್ಬರೂ ಆತ್ಮೀಯ ಸ್ನೇಹಿತರಾದರು. ಜೊತೆಗೆ ಇಬ್ಬರೂ ಮಾರುತಿ ಉದ್ಯೋಗ್‌ ಶಿಬಿರದಲ್ಲಿ ಒಟ್ಟಾಗಿ ಭಾಗವಹಿಸಿದ್ದರು. ಆಗಲೇ ನಳಿನಿಗೆ ಇವರಿಬ್ಬರು ಒಳ್ಳೆಯ ಜೋಡಿ ಎನಿಸಿತ್ತು. ಮತ್ತೊಮ್ಮೆ ರಾಧಿಕಾಳ ಇಪ್ಪತ್ತೆರಡನೇ ಹುಟ್ಟುಹಬ್ಬದಂದು ರೋಹನ್‌ ತಾನು ವಿಶೇಷ ಉಡುಗೊರೆಯೊಂದಿಗೆ ಶುಭಾಶಯ ಕೋರಿದಾಗ, ರೋಹನ್‌ ರಾಧಿಕಾಳನ್ನು ಪ್ರೀತಿಸುತ್ತಿದ್ದಾನೆಂದು ಭಾವಿಸಿದಳು.

ತನಗೂ ರೋಹನ್‌ನಂತಹ ಗೆಳೆಯ ಸದ್ಯದಲ್ಲೇ ಸಿಗಲಿರುವನೆಂದು ನಂಬಿದ್ದ ನಳಿನಿ ತಾನು ಕಾಲೇಜಿಗೆ ಹೋಗುವಾಗಲೆಲ್ಲಾ ಅಂತಹ ವ್ಯಕ್ತಿಗಾಗಿ ಹುಡುಕಾಟ ನಡೆಸಿದ್ದಳು.

ರಾಧಿಕಾ ವಿದ್ಯಾಭ್ಯಾಸದ ನಂತರ ಮಾರುತಿ ಉದ್ಯೋಗ್‌ನಲ್ಲಿಯೇ ಮ್ಯಾನೇಜರ್‌ ಆಗಿ ನೌಕರಿ ಪ್ರಾರಂಭಿಸಿದಳು. ರೋಹನ್‌ ಇನ್‌ಫೋಸಿಸ್‌ ಸಂಸ್ಥೆಯಲ್ಲಿ ಕೆಲಸ ಗಿಟ್ಟಿಸಿದ್ದ. ನಳಿನಿ ರೋಹನ್‌ ವಿಷಯವಾಗಿ ಅಕ್ಕನಲ್ಲಿ ಕೇಳುತ್ತಿದ್ದರೂ ಕೂಡ ರಾಧಿಕಾ ಏನೊಂದನ್ನೂ ಬಿಚ್ಚುಮನಸ್ಸಿನಿಂದ ಹೇಳುತ್ತಿರಲಿಲ್ಲ. ತನ್ನ ವೈಯಕ್ತಿಕ ವಿಚಾರಗಳನ್ನು ಇನ್ನೊಬ್ಬರೊಂದಿಗೆ ಹಂಚಿಕೊಳ್ಳುವುದು ರಾಧಿಕಾಳಿಗೆ ಮೊದಲಿನಿಂದಲೂ ಅಷ್ಟು ಸಮಂಜಸ ಎನಿಸುತ್ತಿರಲಿಲ್ಲ.

ರೋಹನ್‌ ಪ್ರತಿ ರಾತ್ರಿ ಒಂಬತ್ತಕ್ಕೆ ಸರಿಯಾಗಿ ರಾಧಿಕಾಳಿಗೆ ಕರೆ ಮಾಡುತ್ತಿದ್ದ. ಆಗ ಇಬ್ಬರೂ ಬಹಳ ಆತ್ಮೀಯವಾಗಿ ಮಾತನಾಡುತ್ತಿದ್ದರು. ಒಮ್ಮೆ ರಾಧಿಕಾಳಿಗೆ ಬಂದ ಕರೆಯನ್ನು ನಳಿನಿ ಸ್ವೀಕರಿಸಿದಳು. ರೋಹನ್‌ ರಾಧಿಕಾಳನ್ನು ಕೇಳಿದ. ಅವಳಿಗೆ ಫೋನ್‌ ನೀಡಿದ ನಳಿನಿ ಅಲ್ಲೇ ಮರೆಯಲ್ಲಿ ನಿಂತು ಇವರ ಮಾತುಗಳನ್ನು ಕುತೂಹಲದಿಂದ ಆಲಿಸಿದಳು. ಆದರೆ ಅವರ ಮಾತುಕಥೆ ಬಹುತೇಕ ಅವರ ಕಛೇರಿ ಕೆಲಸದ ವಿಚಾರವಾಗಿದ್ದರಿಂದ ಅದು ನಳಿನಿಗೆ ನಿರಾಶೆಯಾಗಿತ್ತು.

ದಿನಗಳು ಸರಿದವು. ಒಮ್ಮೆ ರಾಧಿಕಾ ತನ್ನ ಸಹಪಾಠಿಯಾಗಿದ್ದ ವಿನೋದ್‌ನನ್ನು ವಿವಾಹವಾಗುವುದಾಗಿ ಮನೆಯಲ್ಲಿ ಪ್ರಸ್ತಾಪಿಸಿದಾಗ ನಳಿನಿ ಸೇರಿದಂತೆ ಎಲ್ಲರಿಗೂ ಅಚ್ಚರಿಯಾಗಿತ್ತು. ರೋಹನ್‌ಗೆ ಹೋಲಿಸಿದರೆ ವಿನೋದ್‌ ಅಷ್ಟೇನೂ ಸ್ಛುರದ್ರೂಪಿಯಲ್ಲ. ರಿಲೆಯನ್ಸ್ ಸಂಸ್ಥೆಯಲ್ಲಿ ಕೆಲಸದಲ್ಲಿದ್ದ ವಿನೋದ್‌ನನ್ನು ವಿವಾಹವಾಗುವುದಾಗಿ ರಾಧಿಕಾ ಗಟ್ಟಿ ನಿರ್ಧಾರ ಮಾಡಿದ್ದಳು. ನಳಿನಿ ಈ ಕುರಿತು ರಾಧಿಕಾಳನ್ನು ಕೇಳಿದಾಗಲೂ ಕಾರಣ ತಿಳಿಸಲು ಅವಳು ನಿರಾಕರಿಸಿದ್ದಳು.

ರಾಧಿಕಾ-ವಿನೋದ್‌ ವಿವಾಹ ಕೆಲವೇ ಬಂಧುಮಿತ್ರರ ಸಮ್ಮುಖದಲ್ಲಿ ಸರಳವಾಗಿ ನೆರವೇರಿತು. ವಿನೋದ್‌ ಒಬ್ಬ ಸಾಮಾನ್ಯ ಮಧ್ಯಮ ವರ್ಗದ ಕುಟುಂಬದಿಂದ ಬಂದವನಾಗಿದ್ದ. ಮದುವೆಯ ಸಮಯದಲ್ಲಿ ಕೆಲವರು ಸಣ್ಣ ಪುಟ್ಟ ಕಾರಣಗಳಿಗೆ ಜಗಳ ತೆಗೆದಿದ್ದು ಹೊರತಾಗಿ ಶುಭಕಾರ್ಯ ಸುಸೂತ್ರಾಗಿ ನಡೆಯಿತು. ಇದೆಲ್ಲದರ ನಡುವೆ ನಳಿನಿಗೆ ಮಾತ್ರ ವಿನೋದ್‌ ಹಿಡಿಸಲಿಲ್ಲ. ತಾನು ಮದುವೆಯಾದಲ್ಲಿ ರೋಹನ್‌ನಂತಹವನನ್ನೇ ಆರಿಸಬೇಕೆಂದು ಗಟ್ಟಿ ನಿರ್ಧಾರ ಮಾಡಿದ್ದಳು.

ಇದಾದ ನಂತರ ರಾಧಿಕಾ ಗರ್ಭವತಿಯಾದಳು ಮುಂದಿನ ಬೇಸಿಗೆಯಲ್ಲಿ ನೀರಜ್‌ಗೆ ಜನ್ಮ ನೀಡಿದಳು. ಆರು ತಿಂಗಳು ಹೆರಿಗೆ ರಜೆ ಪಡೆದು ಮಗುವಿನ ಆರೈಕೆಯಲ್ಲಿ ತೊಡಗಿದಳು. ನಳಿನಿ ಆಗಾಗ ಅವಳ ಮನೆಗೆ ಭೇಟಿ ನೀಡುತ್ತಿದ್ದಳು. ಆಗ ಅವಳು ಮಗುವಿಗಾಗಿ ಪಡುವ ಕಷ್ಟಗಳನ್ನು ಕಂಡು ತನ್ನ ಜೀವನದಲ್ಲಿ ಮಗುವನ್ನು ಪಡೆಯಬಾರದೆಂದು ನಿರ್ಧರಿಸಿದ್ದಳು. ರಾಧಿಕಾ ಮೊದಲಿನಂತಿಲ್ಲ. ಅವಳ ತಾರುಣ್ಯ ಕಳೆಗುಂದಿ ಮಧ್ಯಮ ವರ್ಗದ ಮಹಿಳೆಯಂತಾಗಿದ್ದಾಳೆ. ಇದಕ್ಕೆಲ್ಲ ಕಾರಣ ಅವಳು ಮಗುವನ್ನು ಹೆತ್ತದ್ದರಿಂದ. ಎಲ್ಲರೂ ಕಣ್ಣರಳಿಸಿ ನೋಡುವಂಥ ರೂವಪತಿಯಾಗಿದ್ದ ರಾಧಿಕಾ ಇಂದು ಹಾಗಿಲ್ಲ ಎನ್ನುವುದು ನಳಿನಿಯ ಮನಸ್ಸಿನ ವಾದವಾಗಿತ್ತು. ನೀರಜ್‌ಗೆ ಮೂರು ವರ್ಷವಾಗಿದ್ದಾಗ ರಾಧಿಕಾ ಮತ್ತೊಂದು ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದಳು.

ನಳಿನಿ ಸ್ನಾತಕೋತ್ತರ ಪದವಿ ಪೂರೈಸಿದ ನಂತರ ಪಾರ್ವತಿ ಆರ್ಟ್ಸ್ ಗ್ಯಾಲರಿ ಕಲಾ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇರಿಕೊಂಡಳು. ಅಲ್ಲಿ ಅವಳಿಗೆ ಕಾರ್ತಿಕ್‌ ಪರಿಚಯವಾಗಿದ್ದ. ಅವಳ ಸಹೋದ್ಯೋಗಿಯಾಗಿದ್ದ ಅವನ ಫ್ಯಾಷನೆಬಲ್ ವ್ಯಕ್ತಿತ್ವ ಅವಳನ್ನು ಹೆಚ್ಚಾಗಿ ಆಕರ್ಷಿಸಿತ್ತು. ಇಬ್ಬರೂ ಅತೀ ಶೀಘ್ರವಾಗಿ ಆತ್ಮೀಯ ಸ್ನೇಹಿತರಾದರು. ಅಲ್ಲಿಂದ ಅವರ ಗೆಳೆತನ ಪ್ರೀತಿಗೆ ತಿರುಗಿತ್ತು.

ಕಾರ್ತಿಕ್‌ ಸಿರಿವಂತರ ಮನೆಯ ಹುಡುಗ. ಅವನ ತಂದೆ ನಾಗೇಶ್‌ರಾವ್ ನಗರದಲ್ಲಿ ದೊಡ್ಡ ಸಂಸ್ಥೆಯೊಂದರ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು. ತಾಯಿ ಪಾರ್ವತಿ ಫ್ಯಾಷನ್‌ ಡಿಸೈನರ್‌ ಆಗಿ ಸಾಕಷ್ಟು ಹೆಸರು ಮಾಡಿದ್ದರು. ಹೀಗಾಗಿ ಕಾರ್ತಿಕ್‌ಗೆ ಯಾವ ವಿಚಾರದಲ್ಲಿಯೂ ಕೊರತೆ ಇರಲಿಲ್ಲ. ಮನೆಗೆ ಇವನೊಬ್ಬನೇ ಮಗನಾಗಿದ್ದುದು ಇವನ ಅದೃಷ್ಟಕ್ಕೆ ಪ್ಲಸ್‌ಪಾಯಿಂಟ್‌. ದಿನದಿನ ಹೊಸಹೊಸ ಬಟ್ಟೆಗಳನ್ನು ಧರಿಸಿ ವಿನೂತನ ವಿನ್ಯಾಸದ ಬೈಕ್‌ನಲ್ಲಿ ಕಾಲೇಜಿಗೆ ಬರುತ್ತಿದ್ದ ಕಾರ್ತಿಕ್‌ನನ್ನು ಕಂಡು ಆಸೆಗೆ ಬೀಳದ ಯುವತಿಯರೇ ಇರಲಿಲ್ಲ. ನಳಿನಿಯೂ ಅವರಲ್ಲಿ ಒಬ್ಬಳಾಗಿದ್ದಳು. ಕಾರ್ತಿಕ್‌ ಕೂಡ ನಳಿನಿಯೊಂದಿಗೆ ಅತ್ಯಂತ ಸಲಿಗೆಯಿಂದ ವರ್ತಿಸುತ್ತಿದ್ದ. ಇದೇ ಕಾರಣದಿಂದ ಅವರಿಬ್ಬರೂ ಆರ್ಟ್‌ ಗ್ಯಾಲರಿಯ ಹೊರಗೂ ಒಟ್ಟಿಗೆ ತಿರುಗಾಡಲಾರಂಭಿಸಿದ್ದರು.

ಸುಮಾರು ನಾಲ್ಕು ತಿಂಗಳು ಹೀಗೆ ಸಂತಸ ಸಂಭ್ರಮಗಳಿಂದ ಕಳೆಯಿತು. ಅದೊಂದು ದಿನ ನಳಿನಿಗೆ ತಾನು ಗರ್ಭವತಿಯಾಗಿರುವುದು ತಿಳಿಯಿತು. ಇಪ್ಪತ್ತೆರಡು ವರ್ಷದವಳಾದ ನಳಿನಿ ಅದನ್ನು ಕಾರ್ತಿಕ್‌ಗೆ ತಿಳಿಸಿದಳು. ಆದರೆ ಕಾರ್ತಿಕ್‌ ನಾನು ನಿನ್ನನ್ನು ಮದುವೆಯಾಗಲಾರೆ, ನಿನ್ನ ಮಗುವಿನ ಜವಾಬ್ದಾರಿಯನ್ನು ನಾನು ಹೊರಲಾರೆ ಎಂದು ತನ್ನ ಪ್ರೀತಿಯನ್ನು ನಿರಾಕರಿಸಿದ.

ನಳಿನಿ ಕಾರ್ತಿಕ್‌ನನ್ನು ಪರಿಪೂರ್ಣವಾಗಿ ತಿಳಿದುಕೊಳ್ಳದೆ ನಂಬಿದ್ದು ತನ್ನ ತಪ್ಪು ಎಂದು ಬಹಳ ದುಃಖಿಸಿದಳು. ಮಾತ್ರವಲ್ಲ ಭವಿಷ್ಯದ ದೃಷ್ಟಿಯಿಂದ ತನ್ನ ಗರ್ಭದಲ್ಲಿದ್ದ ಕಾರ್ತಿಕ್‌ನ ಮಗುವನ್ನು ಗರ್ಭಪಾತದ ಮೂಲಕ ತೆಗೆಸಿದಳು. ಇಷ್ಟಾದ ಮೇಲೆ ಕಾರ್ತಿಕ್‌ ನಳಿನಿಯೊಂದಿಗೆ ಯಾವ ರೀತಿಯಲ್ಲೂ ಸಂಪರ್ಕ ಬಯಸಲಿಲ್ಲ. ನಳಿನಿಯೂ ಇನ್ನು ಎಂದೂ ಅವನೊಂದಿಗೆ ಮಾತನಾಡಬಾರದೆಂದು ನಿರ್ಧರಿಸಿದಳು.

ಎರಡು ತಿಂಗಳು ಉರುಳಿದವು. ಅಂದು ಪ್ರೇಮಿಗಳ ದಿನ. ನಳಿನಿಗೆ ಎಷ್ಟೇ ಬೇಡವೆಂದರೂ ಕಾರ್ತಿಕ್‌ನ ನೆನಪು ಕಾಡಲಾರಂಭಿಸಿತು. ಅದ್ಯಾವುದೋ ದುರ್ಬಲ ಘಳಿಗೆಯಲ್ಲಿ ನಳಿನಿ ಕಾರ್ತಿಕ್‌ನ ಮನೆಗೆ ಕರೆ ಮಾಡಿದಳು.

“ಹೋ…. ಕಾರ್ತಿಕ್‌ ಇದ್ದಾರಾ?”

“ನೀವು ಯಾರು?” ಮನೆಯ ಕೆಲಸದವನು ಕೇಳಿದ.

“ನಳಿನಿ, ಅಂತ ಹೇಳಿ.”

“ಅವರು ಎರಡು ದಿನಗಳ ಹಿಂದೆ ಆಸ್ಟ್ರೇಲಿಯಾಗೆ ಹೋದರು.”

“ಓ…. ಯಾವಾಗ ಹಿಂದಿರುಗುತ್ತಾರೆ?”

“ಅವರು ಹಿಂತಿರುಗುವುದಿಲ್ಲ. ಅಲ್ಲೇ ನೆಲೆಸಲು ತೆರಳಿದರು,” ಎಂದಷ್ಟೇ ಹೇಳಿ ಫೋನ್‌ ನಿಷ್ಕ್ರಿಯಗೊಂಡಿತು.

ನಳಿನಿಗೆ ಆಕಾಶವೇ ತಲೆಯ ಮೇಲೆ ಬಿದ್ದಂತಾಗಿತ್ತು. ಏನು ಮಾಡಲೂ ತೋಚದೆ ಕುಸಿದು ಕುಳಿತಳು. ಈಗ ಅವಳಿಗೆ ದಿಕ್ಕೇ ತೋಚದಂತಾಗಿತ್ತು. ಹೆಚ್ಚುಕಡಿಮೆ ಒಂದು ತಿಂಗಳ ಕಾಲ ಅವಳು ಮನೆಯಲ್ಲೇ ಉಳಿದಳು.

ಮತ್ತೆ ಪಾರ್ವತಿ ಆರ್ಟ್ಸ್ ಗ್ಯಾಲರಿಗೆ ಕೆಲಸಕ್ಕೆ ಹೋಗಲು ಪ್ರಾರಂಭಿಸಿದ ನಳಿನಿ, ಎರಡು ವರ್ಷಗಳ ಕಾಲ ಅದೇ ರೀತಿ ಮುಂದುವರಿದಳು. ಈಗ ಅವಳು ಪ್ರೌಢಳಾಗಿದ್ದಳು. ರಸ್ತೆಯಲ್ಲಿ ಹೋಗುವಾಗ ಚಿಕ್ಕಮಕ್ಕಳನ್ನು ಕಂಡರೆ ಕಾರ್ತಿಕ್‌ನಿಂದ ಪಡೆದಿದ್ದ ಮಗುವನ್ನು ನೆನೆಯುತ್ತಿದ್ದಳು. ತನಗೊಂದು ಮಗುವಿದ್ದಿದ್ದರೆ ಎಂದು ಚಿಂತಿಸುತ್ತಿದ್ದಳು. ಅದರೊಂದಿಗೆ ಎಷ್ಟು ಬೇಡವೆಂದರೂ ಕಾರ್ತಿಕ್‌ನ ನೆನಪು ಕಾಡುತ್ತಿತ್ತು.

ಇತ್ತ ವಿನೋದ್‌-ರಾಧಿಕಾ ತಮ್ಮ ಮಕ್ಕಳೊಂದಿಗೆ ಸಂತಸದಿಂದ ಇದ್ದರು. ನಳಿನಿ ವಿನೋದ್‌-ರಾಧಿಕಾರ ಔಟ್ ಹೌಸ್ ಮನೆಯಲ್ಲೇ ಉಳಿದುಕೊಂಡಿದ್ದಳು. ರಾಧಿಕಾ ಮಗನಾದ ನೀರಜ್‌ ಬಹಳ ಶಾಂತ ಸ್ವಭಾವದವನಾಗಿದ್ದ. ಯಾವುದೇ ತಂಟೆ ತಕರಾರುಗಳಲ್ಲಿ ತೊಡಗುತ್ತಿರಲಿಲ್ಲ. ಆದರೆ ಅವನ ತಂಗಿ ನಿರೀಕ್ಷಾ ಮಾತ್ರ ಮಹಾ ತುಂಟಿ. ಒಂದಿಲ್ಲೊಂದು ತುಂಟಾಟ ಮಾಡುತ್ತಾ ಮನೆಯಲ್ಲಿ ಎಲ್ಲರಿಗೂ ತಲೆಬೇನೆಯಾಗಿದ್ದಳು.

ಒಮ್ಮೆ ಭಾನುವಾರದ ಮುಂಜಾನೆ ನಳಿನಿಯ ಕೋಣೆಗೆ ಬಂದ ನಿರೀಕ್ಷಾ, ಅವಳ ಕಬೋರ್ಡಿನಲ್ಲಿ ನೀಟಾಗಿ ಜೋಡಿಸಿದ್ದ ಬಟ್ಟೆಗಳನ್ನೆಲ್ಲಾ ಎಳೆದು ನೆಲದ ಮೇಲೆ ಹರಡಿ ಅದರ ಮೇಲೆ ಆಟವಾಡುತ್ತಿದ್ದಳು. ನಳಿನಿ ಇನ್ನೂ ಸವಿನಿದ್ದೆಯಲ್ಲಿದ್ದಳು ನಿರೀಕ್ಷಾಳ ಗಲಾಟೆಯಿಂದ ಎಚ್ಚರಗೊಂಡು ನೋಡಿದಾಗ ಅವಳ ಬಟ್ಟೆಗಳೆಲ್ಲಾ ನೆಲದ ಮೇಲೆ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದು ಕಂಡಿತು.

ನಳಿನಿ ಎರಡು ಬಾರಿ ಎಚ್ಚರಿಸಿದರೂ, ಗದರಿಸಿದರೂ ನಿರೀಕ್ಷಾ ತನ್ನ ಆಟದಿಂದ ಹಿಂದೆ ಸರಿಯಲಿಲ್ಲ. ಬದಲಾಗಿ ಕಬೋರ್ಡಿನಲ್ಲಿ ಉಳಿದಿದ್ದ ಬಟ್ಟೆಗಳನ್ನೂ ಎಳೆದು ಕೆಳಗೆ ಹಾಕಿದಳು. ಇದರಿಂದ ಕೋಪಗೊಂಡ ನಳಿನಿ, ಬಟ್ಟೆಯ ರಾಶಿಯ ಮೇಲೆ ಆಡುತ್ತಿದ್ದ ನಿರೀಕ್ಷಾಳ ಕೈಹಿಡಿದೆಳೆದು ಅವಳ ಕೆನ್ನೆಗೆ ಬಲವಾಗಿ ಎರಡು ಏಟು ಕೊಟ್ಟಳು.

ಸುಮಾರು ನಾಲ್ಕು ವರ್ಷದ ಆ ಪುಟ್ಟ ಹುಡುಗಿ ಆ ಏಟುಗಳನ್ನು ತಡೆದುಕೊಳ್ಳಲಾಗದೆ ಅಲ್ಲಿಂದ ಓಡಿಹೋಗಿ ಡೈನಿಂಗ್‌ ಹಾಲಿನಲ್ಲಿ ಜೋರಾಗಿ ಅಳತೊಡಗಿದಳು.

ಅಷ್ಟರಲ್ಲಿ ಅಲ್ಲಿಗೆ ದೌಡಾಯಿಸಿದ ರಾಧಿಕಾ ಮಗುವನ್ನು ಎತ್ತಿಕೊಂಡು ನಳಿನಿಯನ್ನು ಕೋಪದಿಂದ ನೋಡುತ್ತಾ, “ನಿನ್ನ ಮಗುವಾಗಿದ್ದರೆ ಹೀಗೆ ಹೊಡೆಯುತ್ತಿದೆಯಾ? ಇನ್ನೊಮ್ಮೆ ನನ್ನ ಮಕ್ಕಳ ಮೇಲೆ ಕೈ ಮಾಡಿದರೆ ಜೋಕೆ!” ಎನ್ನುವಾಗ ರಾಧಿಕಾಳ ಮುಖ ಸಿಟ್ಟಿನಿಂದ ಕೆಂಪೇರಿತ್ತು. ಆ ದಿನವೆಲ್ಲ ಮನೆ ಮಂದಿಯ ಸಮಾಧಾನ ಹಾಳಾಗಲು ಈ ಒಂದು ಘಟನೆ ಸಾಕಾಗಿತ್ತು.

ಇದಾದ ಮರುದಿನ ನಳನಿ ಅಕ್ಕನ ಮನೆ ತೊರೆದು ಮುಂಬೈ ಸೇರಿದಳು. ನಂತರ ಮೂರು ವರ್ಷಗಳ ಕಾಲ ಪರಸ್ಪರ ಭೇಟಿ ಆಗಲೇ ಇಲ್ಲ.

ನಳಿನಿ ಕೆಲಸ ಮಾಡುತ್ತಿದ್ದ  ಕಾಲೇಜಿನಲ್ಲಿ ಅವಳಿಗೆ ಬಡತಿ ದೊರೆತು ಮುಂಬೈಗೆ  ಬಂದಿದ್ದಳು. ಆದರೆ ದಿನದಿಂದ ದಿನಕ್ಕೆ ಅವಳಿಗೆ ನಿರಾಸಕ್ತಿ ಮೂಡತೊಡಗಿತು.  ಬೇಡವೆಂದು ಎಷ್ಟೇ ತಡೆದರೂ ಕಾರ್ತಿಕ್‌ನ ನೆನಪು ಮನಸ್ಸಿನಿಂದ ಪೂರ್ಣವಾಗಿ ಮಾಸಿಹೋಗಿರಲಿಲ್ಲ. ಜೊತೆಗೆ ಹುಟ್ಟುವುದಕ್ಕೆ ಮುನ್ನ ತೆಗೆಸಿದ್ದ ಆ ಪುಟ್ಟ ಕಂದನ ನೆನಪು ಬಂದು ಬಿಕ್ಕಿ ಬಿಕ್ಕಿ ಅಳುವಂತಾಗುತ್ತಿತ್ತು.

ಕೆಲವು ತಿಂಗಳುಗಳು ಹೀಗೆ ಕಳೆಯಿತು. ಈ ಮಧ್ಯೆ ನಳಿನಿಗೆ ಟಾಟಾ ಸಂಸ್ಥೆಯಲ್ಲಿ ಮ್ಯಾನೇಜರ್‌ ಆಗಿದ್ದ ಮಹೇಶನ ಪರಿಚಯವಾಯಿತು.  ಅವರಿಬ್ಬರೂ ಪರಸ್ಪರ ಒಪ್ಪಿ ರಿಜಿಸ್ಟರ್‌ ವಿವಾಹವಾದರು. ಹೇಗಾದರೂ ತಾನು ಕಾರ್ತಿಕನ ನೆನಪಿನಿಂದ ದೂರ ಸರಿಯಬೇಕು ಎನ್ನುವುದು ನಳಿನಿಯ ನಿರ್ಣಯವಾಗಿತ್ತು. ಆದರೆ ಮಹೇಶ್‌ ಮತ್ತು ನಳಿನಿಯ ಆಸಕ್ತಿಗಳು ಭಿನ್ನವಾಗಿದ್ದವು. ನಳಿನಿಯಂತೆ ಮಹೇಶ್‌ ಕಲಾರಾಧಕನಲ್ಲ. ಅವನಿಗೆ ತನ್ನ ವ್ಯವಹಾರದ ಹೊರತಾಗಿ ಇನ್ನೊಂದರ ಬಗೆಗೆ ತಿಳಿದುಕೊಳ್ಳುವ ಆಸಕ್ತಿ ಇರಲಿಲ್ಲ. ಇದರಿಂದ ನಳಿನಿ ಪುನಃ ಒಂಟಿತನ ಅನುಭವಿಸುವಂತಾಯಿತು. ಮಹೇಶನೊಂದಿಗೆ ರಾತ್ರಿ ಊಟದ ಸಮಯದಲ್ಲಿ ನಾಲ್ಕು ಮಾತು, ನಂತರ ಟಿ.ವಿ. ವೀಕ್ಷಣೆ ಹೊರತು ಇಬ್ಬರೂ ಸದಾ ತಮ್ಮದೇ ಜಗತ್ತಿನಲ್ಲಿರುತ್ತಿದ್ದರು. ನಳಿನಿಗೆ ಕಾರ್ತಿಕನ ನೆನಪಿನಿಂದ ಹೊರಬಂದು ಹೊಸ ಜೀವನಕ್ಕೆ ಬಂದನಂತರ ಸ್ವಲ್ಪ ಮಟ್ಟಿಗೆ ಮನಃಶಾಂತಿ ಸಿಕ್ಕಿತ್ತು.

ಮೂರು ವರ್ಷಗಳು ಉರುಳಿದವು. ನಳಿನಿ-ಮಹೇಶ್‌ರ ಜೀವನ  ಯಾವ ಏರಿಳಿತಗಳೂ ಇಲ್ಲದೆ ಏಕಮುಖವಾಗಿ ಸಾಗುತ್ತಿತ್ತು. ಇದರಿಂದ ನಳಿನಿಗೆ ತುಸು ನಿರಾಶೆಯಾಗಿತ್ತು. ಜೀವನವೆಲ್ಲ ನೀರಸ ಎನಿಸಿತ್ತು. ತನ್ನದೇ ಆದ ಮಗುವನ್ನು ಹೊಂದುವ ಆಸೆ ಕಡಿಮೆಯಾಗಿತ್ತು. ಹೀಗಾಗಿ ಮತ್ತೆ ಹಳೆಯ ನೆನಪುಗಳತ್ತ ಅವಳ ಮನ ವಾಲುತ್ತಿತ್ತು.

ರಾಧಿಕಾಳ ಮಕ್ಕಳಾದ ನೀರಜ್‌ ಮತ್ತು ನಿರೀಕ್ಷಾ ಇದೀಗ ಬೆಳೆದು ಶಾಲೆಗೆ ಹೋಗುತ್ತಿದ್ದರು. ನೀರಜ್‌ ಐದನೇ ತರಗತಿಯಾದರೆ ನಿರೀಕ್ಷಾ ಎರಡನೇ ತರಗತಿಯಲ್ಲಿದ್ದಳು. ಒಮ್ಮೊಮ್ಮೆ ಮಕ್ಕಳ ರಜೆಯಲ್ಲಿ ರಾಧಿಕಾ ನಳಿನಿಯನ್ನು ಭೇಟಿಯಾಗಲು ಬರುತ್ತಿದ್ದಳು. ಕೆಲವೊಮ್ಮೆ ಕುಟುಂಬದ ಕಾರ್ಯಕ್ರಮಗಳಲ್ಲಿ ಇಬ್ಬರೂ ಭೇಟಿಯಾಗುತ್ತಿದ್ದರು. ಹಾಗೊಮ್ಮೆ ಭೇಟಿಯಾದಾಗ ನಳಿನಿ ತನಗೆ ಮೂವತ್ತೆರಡು ವರ್ಷಾಯಿತು. ಒಂದು ಮಗು ಬೇಕೆಂದು ಆಸೆಯಿದೆ. ಆದರೆ ಯಾವ ಲಕ್ಷಣ ಕಾಣುತ್ತಿಲ್ಲ ಎಂದು ತನ್ನಳಲನ್ನು ರಾಧಿಕಾಳ ಮುಂದೆ ತೋಡಿಕೊಂಡಳು. ಆದರೆ ರಾಧಿಕಾಳಿಂದ ಯಾವ ಸಂತೈಸುವಿಕೆಯೂ ಬರಲಿಲ್ಲ.

ನಳಿನಿ ತನ್ನ ಮತ್ತು ಕಾರ್ತಿಕ್‌ ನಡುವಿನ ಸಂಬಂಧ, ಗರ್ಭಿಣಿಯಾಗಿ ಗರ್ಭಪಾತ ಮಾಡಿಸಿಕೊಂಡದ್ದನ್ನು ಮಾತ್ರ ಯಾವುದೇ ಕಾರಣಕ್ಕೂ ರಾಧಿಕಾಳಿಗಾಗಲೀ ಕುಟುಂಬದ ಇನ್ಯಾರಿಗೇ ಆಗಲೀ ಹೇಳಿರಲಿಲ್ಲ. ಈ ವಿಷಯವನ್ನು ಗೌಪ್ಯವಾಗಿಟ್ಟಿದ್ದಳು. ದಿನಗಳು ಹೀಗೇ ಸರಿಯುತ್ತಿದ್ದವು. ಆ ನಂತರ ನಳಿನಿಗೆ ಬಂದಿದ್ದ ಎರಡು ಫೋನ್‌ ಕರೆಗಳು ಅವಳ ಜೀವನವನ್ನೇ ಬದಲಾಯಿಸಿದ್ದವು.

ಗ್ಲೋಬಲ್ ಆಸ್ಪತ್ರೆಯಿಂದ ಬಂದ ಒಂದು ಫೋನ್‌ ಕರೆಯ ಪ್ರಕಾರ, ರಾಧಿಕಾ ಮತ್ತು ವಿನೋದ್‌ ವಾರಾಂತ್ಯದ ಶಾಪಿಂಗ್‌ ಮುಗಿಸಿ ಮನೆಗೆ ವಾಪಸ್ಸಾಗುತ್ತಿದ್ದ ವೇಳೆ ಅವರ ಕಾರಿಗೆ ಎದುರಿನಿಂದ ಬಂದ ಟ್ರಕ್‌ ಗುದ್ದಿದ ಪರಿಣಾಮ ಇಬ್ಬರೂ ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಅವರ ಅಂತ್ಯಕ್ರಿಯೆಗಳನ್ನು ನಳಿನಿ-ಮಹೇಶ್‌ ಪೂರೈಸಿದರು. ಮಕ್ಕಳಾದ ನೀರಜ್‌, ನಿರೀಕ್ಷಾರನ್ನು ತಮ್ಮ ಮನೆಗೆ ಕರೆದುಕೊಂಡು ಬಂದು ಕಾನೂನು ರೀತಿಯಲ್ಲಿ ದತ್ತು ಸ್ವೀಕರಿಸಿದರು. ಇದರಿಂದ ನಳಿನಿಗೆ ಒಂದರ ಬದಲು ಎರಡು ಮಕ್ಕಳಿಗೆ ತಾಯಿ ಎನಿಸಿಕೊಳ್ಳುವ ಸಂತಸ ದೊರೆಯಿತು.

ಮತ್ತೆ ಒಂದು ವಾರದಲ್ಲೇ ಅವಳಿಗೆ ಮತ್ತೊಂದು ಕರೆ ಬಂದಿತು. ದೂರದ ಕೇರಳದಿಂದ ರವೀಂದ್ರನ್‌ ಕರೆ ಮಾಡಿ ಕಾರ್ತಿಕನ ಕುರಿತಾಗಿ ವಿಚಾರಿಸಿದ. ನಳಿನಿ ಕಾರ್ತಿಕನೊಂದಿಗೆ ತನಗೆ ಯಾವುದೇ ಸಂಬಂಧವಿಲ್ಲವೆಂದು ಉತ್ತರಿಸಿದಳು. “ನನಗೆ ಒಂದು ಅಪೂರ್ವವಾದ ಪೇಂಟಿಂಗ್‌ ಬೇಕಾಗಿತ್ತು. ಅದಕ್ಕಾಗಿ ನಾನು ಅವರ ವಿಳಾಸ ಹುಡುಕುತ್ತಿದ್ದಾಗ ಪಾರ್ವತಿ ಆರ್ಟ್ಸ್ ಗ್ಯಾಲರಿಯಲ್ಲಿ ನೀವಿಬ್ಬರೂ ಒಟ್ಟಿಗೇ ಕೆಲಸ ಮಾಡುತ್ತಿದ್ದಿರೆಂದು ತಿಳಿಯಿತು. ಹೀಗಾಗಿ ಕರೆ ಮಾಡಿದೆ,” ಎಂದ.

“ನೀವು ಅವರ ವಿಳಾಸನ್ನು ಎಲ್ಲಿ ಪತ್ತೆ ಮಾಡಿದಿರಿ?”

“ಅಂತರ್ಜಾಲದಲ್ಲಿ ಕಾರ್ತಿಕ್‌ ಸಂಗಮೇಶ್‌ ಎಂದು ಹುಡುಕಿದಾಗ ಅವರ ಬಯೋಗ್ರಫಿಯಲ್ಲಿ ವಿವರ ಸಿಕ್ಕಿತು.”

ನಳಿನಿ ಕರೆ ನಿಷ್ಕ್ರಿಯಗೊಳಿಸಿ ಲ್ಯಾಪ್‌ಟಾಪ್‌ನಲ್ಲಿ ಕಾರ್ತಿಕ್‌ ಹೆಸರಿನಲ್ಲಿ ಗೂಗಲ್ ಸರ್ಚ್‌ ಮಾಡಿದಳು. ಅಲ್ಲಿ ಅವಳಿಗೊಂದು ಅಚ್ಚರಿ ಕಾದಿತ್ತು. ಕಾರ್ತಿಕ್‌ ಹೆಸರಿನ ಪಕ್ಕದಲ್ಲಿ ಅವನು ಹುಟ್ಟಿದ ದಿನಾಂಕ 5, ಮಾರ್ಚ್‌ 1968 ಎಂದಿತ್ತು. ಜೊತೆಗೆ 16 ಫೆಬ್ರವರಿ 1994ರಂದು ಅವನು ಮರಣ ಹೊಂದಿದ್ದಾನೆ ಎಂದೂ ತಿಳಿಸಲಾಗಿತ್ತು. ಆಸ್ಟ್ರೇಲಿಯಾದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಕಾರ್ತಿಕ್‌ ಮರಣ ಹೊಂದಿದ್ದ ಎಂದು ಬರೆದಿತ್ತು.

ನಳಿನಿ ಕೇವಲ ಎರಡು ದಿನಗಳ ಹಿಂದೆ ಅಂದರೆ ಫೆಬ್ರವರಿ 14 ರಂದು ಕಾರ್ತಿಕ್‌ ಮನೆಗೆ ಕರೆ ಮಾಡಿದ್ದಾಗ ಕಾರ್ತಿಕ್‌ ಆಸ್ಟ್ರೇಲಿಯಾದಲ್ಲಿಯೇ ಉಳಿಯಲು ಹೊರಟಿರುವುದಾಗಿ ತಿಳಿದಿತ್ತು. ಆದರೆ ಎರಡೇ ದಿನದಲ್ಲಿ ಕಾರ್ತಿಕ್‌ ಈ ಭೂಮಿಯನ್ನೇ ತೊರೆದಿದ್ದ! ನಳಿನಿ ಕಾರ್ತಿಕ್‌ನ ನೆನಪಿನಿಂದ ಹೊರಬರಲಾಗದೆ ಚಡಪಡಿಸುತ್ತಿದ್ದಳು. ಆದರೆ ಇದೀಗ ಕಾರ್ತಿಕ್‌ ಅಗಲಿಹೋದ ವಿಚಾರ ತಿಳಿದು ನಳಿನಿಗೆ ಒಮ್ಮೆ ನಂಬಲು ಸಾಧ್ಯವಾಗಲಿಲ್ಲ.  ಎಷ್ಟೇ ಮರೆಯಬೇಕೆಂದು ಪ್ರಯತ್ನಿಸಿದ್ದರೂ ಸಾಧ್ಯವಾಗದಿದ್ದಾಗ, ಕಾರ್ತಿಕ್‌ ತಾನೇ ದೂರವಾಗಿದ್ದ. ಹೀಗೆ ಎರಡು ಕರೆಗಳು ಅವಳ ಜೀವನಕ್ಕೆ ಹೊಸ ಹಾದಿಯನ್ನು ತೋರಿಸಿದ್ದವು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ