ಪ್ರೇಮ ಎಂಬುದಕ್ಕೆ ಪ್ರತಿಯೊಬ್ಬರ ಮನದಲ್ಲೂ ತಮ್ಮದೇ ಆದ ವ್ಯಾಖ್ಯಾನವಿರುತ್ತದೆ. ಚರಿತಾಳನ್ನು ಮನಃಪೂರ್ವಕವಾಗಿ ಪ್ರೇಮಿಸಿ ಅದನ್ನು ಪವಿತ್ರವಾಗಿ ಉಳಿಸಿಕೊಳ್ಳಲು ಬಯಸಿದ ನವನೀತ್, ಮುಂದೆ ಸಂದಿಗ್ಧದಲ್ಲಿ ಸಿಲುಕಿದ್ದ ಚರಿತಾಳಿಗೆ ನೆರವಾಗಲು ಸಾಧ್ಯವಾಯಿತೇ.....?
ನವನೀತ್ ಅಂದು ಚರಿತಾಳನ್ನು ಭೇಟಿ ಮಾಡಲು ಬಂದಿದ್ದ. ಮಾಮೂಲಿನಂತೆ ವಾಕ್ ಮುಗಿಸಿ, ಕಾಮತ್ ರೆಸ್ಟೋರೆಂಟ್ ನಲ್ಲಿ ಭೇಲ್ ಪುರಿ ಮತ್ತು ಕಾಫಿ ಸೇವನೆಯಾದರೇನೇ ಭೇಟಿ ಸಾರ್ಥಕವಾಗುತ್ತಿತ್ತು.
ಇಂದೂ ಅದೇ ಆದದ್ದು. ವಾಕ್ ಮುಗಿಸಿ ಭೇಲ್ ಪುರಿ ತಿನ್ನಲು ರೆಸ್ಟೋರೆಂಟ್ ಗೆ ಬಂದಿದ್ದರು. ರಶ್ ಕಡಿಮೆ ಇದ್ದುದರಿಂದ ಸ್ವಲ್ಪ ಮಾತು ಹೆಚ್ಚೇ ಆಯಿತು. ನಂತರ ಬಿಲ್ ಪಾವತಿಸುವ ವಿಷಯದಲ್ಲಿ ಇಬ್ಬರಲ್ಲೂ ವಿವಾದವಾಗಿ ಚರಿತಾಳೇ ಗೆದ್ದು ಪೇ ಮಾಡಿದಳು. ಬಿಲ್ ನ್ನು ಮೊದಲು ಚರಿತಾಳೇ ಪಡೆದಿದ್ದರಿಂದ ನವನೀತ್ ಗೆ ಚರಿತಾಳ ಕೈ ಹಿಡಿದು ಎಳೆದಾಡುವುದು ಸರಿ ಎನಿಸದೆ ಸೋಲೊಪ್ಪಿಕೊಂಡ.
ಮೇಲಾಗಿ ನವನೀತ್ ಯಾವಾಗಲೂ ಚರಿತಾಳಿಗೆ ನೋವು ಮಾಡುವ ಜಾಯಮಾನದವನಲ್ಲ. ಬಿಲ್ ಕೊಡುವ ನೆಪದಲ್ಲಿ ಮೈ ಕೈ ಮುಟ್ಟಿದ ಎಂದು ಅನುಮಾನ ಪಟ್ಟರೆ ಎಂಬ ಯೋಚನೆಯಿಂದ ಸುಮ್ಮನಾದ. ತಟ್ಟೆಯಲ್ಲಿದ್ದ ಸೋಂಪನ್ನು ತಾನು ಬಾಯಿಗೆ ಹಾಕಿಕೊಂಡು, ನವನೀತ್ ನ ಮುಂದೆ ತಟ್ಟೆ ಹಿಡಿದಳು. ಬಿಲ್ ಜೊತೆ ನೂರು ರೂಪಾಯಿಯನ್ನು ಮಾಣಿಯ ಕೈಗಿರಿಸಿದಳು. ಮಾಣಿ ಚಿಲ್ಲರೆ ತಂದು ಕೊಡದಿದ್ದರಿಂದ ಕಾಯಬೇಕಾಯಿತು.
ಇದೇ ಸಮಯವೆಂದು ಚರಿತಾ, ``ಒಂದು ಮಾತು ಕೇಳಲಾ ನವಿ,'' ಎಂದು ಪೀಠಿಕೆ ಹಾಕಿದಳು.
`ಏನು ಕೇಳಬಹುದು....,' ಎಂದು ಕ್ಷಣ ಊಹಿಸಲಾಗದಿದ್ದರೂ ಅವಳೇ ಕೇಳಲಿ ಎಂದು ಮೌನಿಯಾದ.
``ನೀನು ಯಾರನ್ನಾದರೂ ಪ್ರೀತಿಸಿದ್ದೀಯಾ....? ಪ್ರೀತಿಯನ್ನು ಹೇಗೆ ಪ್ರೀತಿಪಾತ್ರರಲ್ಲಿ ವ್ಯಕ್ತಪಡಿಸಿದೆ....?'' ಒಮ್ಮೆಲೇ ಜೇನುಗೂಡಿಗೆ ಕೈ ಹಾಕಿದಳು.
ಅವನು ಈ ಪ್ರಶ್ನೆಯನ್ನು ಖಂಡಿತಾ ಊಹಿಸಿರಲಿಲ್ಲ. ನಾಲ್ಕಾರು ವರ್ಷದ ಒಡನಾಡಿ, ಒಳ್ಳೆಯ ಸ್ನೇಹಿತೆ ಏಕಾಏಕಿ ಹೀಗೆ ಎದೆಗೆ ಪಾಯಿಂಟ್ ಬ್ಲಾಂಕ್ ಅಂತರದಲ್ಲಿ ಗುಂಡು ಹಾರಿಸಿದಂತೆ ಕೇಳಿದರೆ, ಎಂತಹ ಎದೆಗಾರನ ಗುಂಡಿಗೆಯೂ ನಡುಗದಿರುತ್ತದೆಯೇ? ಹಾಗಿತ್ತು ನವನೀತ್ ನ ಪರಿಸ್ಥಿತಿ. ಉತ್ತರಿಸಲು ಅವನಿಗೆ ಸ್ವಲ್ಪ ಸಮಯವೇ ಬೇಕಾಯಿತು.
ನಿಧಾನವಾಗಿ, ``ಇಲ್ಲ..... ಇಲ್ಲ.... ನಾನು ಯಾರಿಗೂ ಹೇಳಿಲ್ಲ. ಹಾಗೇನಾದರೂ ಆಗಿದ್ದರೆ ಅದು ನಿನಗೆ ತಿಳಿದೇ ತಿಳಿದಿರುತ್ತಿತ್ತಲ್ಲ.....'' ಎಂದು ಹೇಳಿದ.
`ಹೀಗೆ ಹೇಳಿದ್ದು ತಪ್ಪಾಯಿತಾ,' ಎನಿಸದಿರಲಿಲ್ಲ.
``ನಾನು ರಮಣ್ ನನ್ನು ಪ್ರೀತಿಸುತ್ತಿದ್ದೇನೆ. ನನಗೆ ಅವನಲ್ಲಿ ಹೇಳಿಕೊಳ್ಳಲು ಆಗುತ್ತಿಲ್ಲ. ನೀನು ಅವನಿಗೆ ನನ್ನ ಪ್ರೀತಿಯ ಬಗ್ಗೆ ತಿಳಿಸಿ, ನಮ್ಮಿಬ್ಬರನ್ನು ಒಂದುಗೂಡಿಸು. ಇದು ನನ್ನ ಸವಿನಯ ಪ್ರಾರ್ಥನೆ. ನಿನ್ನ ಉಪಕಾರವನ್ನು ನಾನೆಂದೂ ಮರೆಯುವುದಿಲ್ಲ,'' ಹೇಳುತ್ತಿದ್ದವಳ ಕಂಗಳು ತುಂಬಿ ಕೆನ್ನೆಯ ಮೇಲೆ ಇಳಿಯಿತು.

`ಚರಿತಾ ತನ್ನನ್ನೇ ಪ್ರೀತಿಸುತ್ತಿದ್ದಾಳೆ,' ಎಂದುಕೊಂಡಿದ್ದ ನವನೀತ್ ನ ಕಂಗಳಲ್ಲಿ ನೀರು ತುಂಬಿಕೊಂಡಿತು. ಅವಳನ್ನೇ ನೋಡುತ್ತಿದ್ದವನು ದೃಷ್ಟಿ ಬದಲಿಸಿ ಮುಖ ಬೇರೆಡೆ ತಿರುಗಿಸಿ ಕಣ್ಣೆವೆಗಳನ್ನು ಒರೆಸಿಕೊಂಡ. ತುಮಲಕ್ಕೊಳಗಾಗಿದ್ದ ತನ್ನ ಮನಸ್ಸನ್ನು ಹತೋಟಿಗೆ ತಂದುಕೊಂಡು ದೀರ್ಘವಾದ ನಿಟ್ಟುಸಿರುಬಿಟ್ಟು, ``ಚರಿತಾ, ನೀನು ಪ್ರೀತಿಸುತ್ತಿದ್ದೇನೆ ಎಂದು ಹೇಳುವ ರಮಣ್ ನಿನ್ನನ್ನು ಪ್ರೀತಿಸುತಿದ್ದಾನೆ ಎಂದು ಖಾತ್ರಿ ಪಡಿಸಿಕೊಂಡಿದ್ದೀಯಾ? ಮೊದಲು ಅವನಲ್ಲಿ ನಿನ್ನ ಬಗ್ಗೆ ಇರುವ ಪ್ರೀತಿಯ ಬಗ್ಗೆ ಖಾತ್ರಿ ಪಡಿಸಿಕೋ,'' ಎಂದು ಅವಳಿಗೆ ತಿಳಿ ಹೇಳಿದ.





