ಎಷ್ಟೋ ಕಷ್ಟಪಟ್ಟು ಹಿರಿಯರ ವಿರೋಧದ ನಡುವೆಯೂ ಮೆಚ್ಚಿದವನನ್ನೇ ಮದುವೆಯಾದ ವಿಜಯಾ, ಅಂಗವಿಕಲ ಮಗುವಿನ ತಾಯಿಯಾಗಿ ಪಟ್ಟ ಪಾಡೇನು…..?
ಮುಂದಿನ ಸ್ಪರ್ಧಿ…. ಮೂರು ತೀರ್ಪುಗಾರರೂ ಕಣ್ಣಿಗೆ ಕಪ್ಪು ಬಟ್ಟೆ ಕಟ್ಟಿಕೊಂಡು 12ನೇ ನಂಬರಿನ ಸ್ಪರ್ಧಿಯ ಹಾಡು ಕೇಳಲು ಅಣಿಯಾದರು.
ಮೊದಲ ಆಲಾಪಕ್ಕೆ ಮಹಾ ಗುರುಗಳ ಎದೆ ಝಲ್ ಎಂದಿತು. ಆಯ್ಕೆಯಾದ ಪ್ರತಿಸ್ಪರ್ಧಿಗಳು, ಮೆಂಟರ್ ಗಳು ತಲ್ಲೀನರಾಗಿ ಆಶ್ಚರ್ಯದಿಂದ ಅವನ ಧ್ವನಿ ಕೇಳುತ್ತಿದ್ದರೆ…. ಒಂದೊಂದೇ ಶಬ್ದಗಳ ರಾಗ ಕೇಳುಗರಿಗೆ ತಂಪನ್ನು ಕೊಡುತ್ತಿದ್ದರೆ, ತೀರ್ಪುಗಾರರ ಕೈ ಅನಾಯಾಸವಾಗಿ ಮುದ್ರೆಯನ್ನು (ಬಝರ್) ಒತ್ತಿತ್ತು.
ಅದರೊಂದಿಗೆ ಯಾರು ಆ ಹಾಡುಗಾರ ಎಂದು ಬಟ್ಟೆ ಬಿಚ್ಚಿ ನೋಡಲು ಅತ್ಯಾಶ್ಚರ್ಯದಿಂದ ಬಿಟ್ಟ ಕಣ್ಣು ಬಿಟ್ಟ ಹಾಗೆ ನೋಡಿದರು. ಕುಳಿತವರೆಲ್ಲರ ಕಣ್ಣು ಆಗಲೇ ಹನಿಗೂಡಿದ್ದವು. ಮೂವರು ತೀರ್ಪುಗಾರರಲ್ಲಿ ಇಬ್ಬರ ಗಂಟಲು ಬಿಗಿಯಾದರೆ, ಇನ್ನೊಬ್ಬರ ಕಣ್ಣಾಲಿಗಳು ತುಂಬಿದ್ದವು.
ಹೊರಗಡೆ ಮಗನ ಹಾಡು ಕೇಳುತ್ತಾ, ದೇವರಲ್ಲಿ ಕೈ ಮುಗಿಯುತ್ತಾ ಕಣ್ಣೀರ ಧಾರೆ ಸುರಿಸುತ್ತಿರುವ ಆ ತಾಯಿಯನ್ನು ಆ್ಯಂಕರ್ ತನುಜಾ ಸಂತೈಸುವುದರಲ್ಲಿ ಸೋತಿದ್ದಳು. ಅವಳಿಗೂ ತನ್ನ ಅಳು ಹತ್ತಿಕ್ಕಾಗಲಿಲ್ಲ. ಮೂವರು ಬಝರ್ ಒತ್ತಿ ಮುಂದಿನ ಸುತ್ತಿಗೆ ಆಯ್ಕೆ ಅಂತ ಗೊತ್ತಾದಾಗ ವೀಲ್ ಚೇರ್ ಮೇಲೆ ಆ ಹುಡುಗ ಖುಷಿಯಿಂದ ಎರಡು ಡೊಂಕಾದ ಕೈಗಳನ್ನು ಮೇಲೆತ್ತಿ ಕುಣಿಯುತ್ತಿದ್ದ.
ಎಲ್ಲರ ಕಣ್ಣು ಜೊತೆ ಜೊತೆಗೆ ಎದೆ ತುಂಬಿತು. ಅಲ್ಲಿ ಮಾತುಗಳಿಗೆ ಜಾಗವಿರಲಿಲ್ಲ. ಮೌನಕ್ಕಷ್ಟೇ ಜಾಗ. ಆ ಮಗುವಿನ ಖುಷಿ ಅಲ್ಲಿ ಹೊರಗಡೆ ನಿಂತ ತಾಯಿಯ ಖುಷಿ ನೋಡಿ ಇಡೀ ಕಾರ್ಯಕ್ರಮದ ತಂಡ ಎದ್ದು ನಿಂತು ಖುಷಿಪಟ್ಟಿತು, ಆನಂದಬಾಷ್ಪ ಸುರಿಸಿತ್ತು. ತುಂಬಾ ಪ್ರಯಾಸದಿಂದ ತನ್ನ ಅಳುವನ್ನು ತಹಬದಿಗೆ ತಂದು ತನುಜಾ ಆ ಹುಡುಗನ ವೀಲ್ ಚೇರ್ ಪಕ್ಕದಲ್ಲಿ ಮಂಡಿಯೂರಿ ಕುಳಿತಳು.
ಆ ಮಗುವಿನ ಕಣ್ಣಲ್ಲಿದ್ದ ಖುಷಿಯಲ್ಲಿ ಒಂದು ನಿಮಿಷ ಕಳೆದುಹೋದಳು. ವಾಸ್ತವಕ್ಕೆ ಬಂದು, ಅಮ್ಮ ಬನ್ನಿ….. ಎಂದು ಕುಳಿತಲ್ಲಿಂದ ಕರೆದಳು. ಕಣ್ಣೀರು ಒರೆಸಿಕೊಳ್ಳುತ್ತಾ ಮಿನುಗುವ ಕಣ್ಣುಗಳಿಂದ ಮಗನನ್ನು ನೋಡುತ್ತಾ ಬಂದು ನಿಂತಳು ಆ ತಾಯಿ. ಮಗ ತಾಯಿಯನ್ನು ನೋಡಿ ಕೊರಳಲ್ಲಿ ಮೆಡಲ್ ತೋರಿಸಿ ಖುಷಿಯಿಂದ ನಕ್ಕರೆ ಆ ತಾಯಿ ಮಗನ ತಲೆ ನೇವರಿಸುತ್ತಾ ಕೈ ಮುಗಿದು ನಿಂತಳು.
ತನುಜಾ ಸ್ವಲ್ಪ ಗಂಟಲು ಸರಿ ಮಾಡಿಕೊಂಡು, “ಅಮ್ಮಾ ನಿಮ್ಮ ಹೆಸರೇನು?”
“ವಿಜಯಾ…..”
“ನಿನ್ನ ಹೆಸರೇನು ಪುಟ್ಟ….?”
“ನನ್ನ ಹೆಸರು ವಿಜಯೇಂದ್ರ….”ಎಲ್ಲರೂ ಚಪ್ಪಾಳೆ ತಟ್ಟಿದರೆ ಮಹಾಗುರುಗಳು, “ನಿಜ ಕಣೋ. ವಿಜಯಾಳ ಸುಪುತ್ರ ವಿಜಯೇಂದ್ರ, ನಿನಗೆ ವಿಜಯ ಸದಾ ಕಟ್ಟಿಟ್ಟ ಬುತ್ತಿ! ಆ ತಾಯಿ ಸರಸ್ವತಿ ಆಶೀರ್ವಾದ ನಿನ್ನ ಮೇಲಿದೆ. ನೀನು ಯಾವಾಗಲೂ ಜಯಶಾಲಿ,” ಎಂದರು.
ಎಲ್ಲರೂ ಮತ್ತೊಮ್ಮೆ ಎದ್ದು ನಿಂತು ಚಪ್ಪಾಳೆ ತಟ್ಟಿದರು.
“ಹೇಳೀಮ್ಮಾ, ಇವನಿಗೆ ಹಾಡಿನ ಬಗ್ಗೆ ಆಸಕ್ತಿ ಹೇಗೆ ಬಂತು? ನೀವು ಅದನ್ನು ಯಾವಾಗ ಅರಿತಿರಿ? ಈಗ ಇವನ ವಯಸ್ಸು…..”
ಅಷ್ಟರಲ್ಲಿ, “12 ವರ್ಷ. ನಾಳೇನೇ ನನ್ನ ಹುಟ್ಟಿದ ಹಬ್ಬ!” ಎಂದು ಖುಷಿಯಿಂದ ಆ ಹುಡುಗ ಹೇಳಿದ.
ಮತ್ತೊಮ್ಮೆ ಅವನ ಮುಗ್ಧ ಮಾತಿಗೆ ಎಲ್ಲರೂ ಖುಷಿಯಿಂದ ಕಣ್ಣೀರು ಒರೆಸಿಕೊಳ್ಳುತ್ತಾ ಚಪ್ಪಾಳೆ ತಟ್ಟಿದರು.
“ನನ್ನ ಮಗನಿಗೆ ಹುಟ್ಟಿದಾಗಿನಿಂದ 12 ಆಪರೇಷನ್ ಆಗಿದೆ. 4 ವರ್ಷದವನಿದ್ದಾಗಿನಿಂದಲೇ ಆಸ್ಪತ್ರೆಯಲ್ಲಿ ಮೊಬೈಲ್ ನಲ್ಲೇ ದೇವರನಾಮ ಕೇಳಿಸಿಕೊಳ್ಳುತ್ತಾ, ಅದರ ಒಂದೊಂದೇ ಪದಗಳನ್ನು ಹಾಡುತ್ತಿದ್ದ. ಅಲ್ಲಿದ್ದ ವೈದ್ಯರೊಬ್ಬರು ಇವನ ಸಂಗೀತದ ಕಡೆಗಿದ್ದ ಒಲವನ್ನು ಗುರುತಿಸಿ, `ವಿಜಯೇಂದ್ರನಿಗೆ ಸಂಗೀತ ತುಂಬಾ ಇಷ್ಟ ಅನಿಸುತ್ತೆ, ಅವನಿಗೆ ಸಂಗೀತಾಭ್ಯಾಸ ಮಾಡಿಸಲು ಅವನು ಮಾಡಿಕೊಡಿ. ಧ್ವನಿ ಕೋಗಿಲೆಯ ಕಂಠವಾಗಿದೆ. ಸರಸ್ವತಿ ತಾಯಿ ಒಲಿದಿದ್ದಾಳೆ ಅನಿಸುತ್ತೆ,’ ಎಂದು ಅವನನ್ನು ಆಶೀರ್ದಿಸಿದರು. ಅಂದಿನಿಂದ ಮನೆಯಲ್ಲಿ ಅವನ ಸಂಗೀತಾಭ್ಯಾಸ ಶುರುವಾಯಿತು.
“ಇವನನ್ನು ಶಾಲೆಗೆ ಕಳುಹಿಸಲು ಆಗುತ್ತಿರಲಿಲ್ಲ. ಅದಕ್ಕಾಗಿ ಸಮಯ ತುಂಬಾ ಇರುತ್ತಿತ್ತು. ಮೊಬೈಲ್ ನಲ್ಲಿ ಹಾಡು ಕೇಳುವುದು, ಕೇಳಿದ ಹಾಡುಗಳನ್ನು ಸದಾ ಗುನುಗುತ್ತಾ ಇವನು ಹಾಡು ಕಲಿತ. ನನ್ನ ಶಾಲೆಯ ಸಹ ಶಿಕ್ಷಕರೊಬ್ಬರು, `ನೀನೇಕೆ ವಿಜಯೇಂದ್ರನನ್ನು ಟಿವಿಯ ರಿಯಾಲಿಟಿ ಶೋಗೆ ಕಳಿಸಬಾರದು?’ ಎಂದರು.
“ಇವನು ಕಳೆದ ವರ್ಷದ ಆ ಸೀಸನ್ ನೋಡಿ ಆಸೆಯನ್ನು ವ್ಯಕ್ತಪಡಿಸಿದ್ದ. ಆದರೆ ಸ್ವಲ್ಪ ಸಮಯ ಅಭಾವದಿಂದ ಹಾಗೂ ನಾನು ಶಿವಮೊಗ್ಗದಿಂದ ಇಲ್ಲಿ ಬೆಂಗಳೂರಿಗೆ ಇವನ ಜೊತೆ ಬರಬೇಕಿತ್ತು. ಕೆಲಸಕ್ಕೆ ರಜೆ ಹಾಕುವುದು ಕಷ್ಟವಾಗಿತ್ತು. ಆದರೆ ಈ ಸಾರಿ ಏನೇ ಆಗಲಿ ಅಂತ ಬಂದೆ,” ಎಂದರು ವಿಜಯಾ.
“ಇವನು ನಮ್ಮ ಕಾರ್ಯಕ್ರಮದ ಹೆಮ್ಮೆ. ಎಲ್ಲರೂ ದಯಮಾಡಿ ಎದ್ದು ನಿಂತು ಈ ಪುಟ್ಟ ವಿಜಯೇಂದ್ರನಿಗೆ ಇನ್ನೊಮ್ಮೆ ಚಪ್ಪಾಳೆ ಮೂಲಕ ಸ್ವಾಗತ ಕೋರೋಣ,” ಎಂದು ತನುಜಾ ಹೇಳುತ್ತಿದ್ದಂತೆ ಎಲ್ಲರೂ ಖುಷಿಯಿಂದ ಎದ್ದು ನಿಂತು ಚಪ್ಪಾಳೆ ತಟ್ಟಿದರು.
ಹೀಗೆ ಶುರುವಾದ ಈ ಸ್ಪರ್ಧೆ ವಾರದಿಂದ ವಾರಕ್ಕೆ ಮುಂದುವರಿಯುತ್ತಾ, ವಿಜಯೇಂದ್ರ ತುಂಬಾ ಸುಲಭವಾಗಿ ರಾಗಪೂರ್ವಕ ಹಾಡುಗಾರಿಕೆಯಿಂದ ಎಲ್ಲರ ಮೆಚ್ಚುಗೆ ಗಳಿಸಿದ. ಆ ದಿನ ತಂದೆಯೊಂದಿಗೆ ಗಾಯನ ಸ್ಪರ್ಧೆ ಇತ್ತು. ಮತ್ತೆ ಅದೇ ವೇದಿಕೆ ಎಲ್ಲರೂ ವಿಜಯೇಂದ್ರನ ತಂದೆಯನ್ನು ನೋಡಲು ಕಾತುರದಿಂದ ಕಾಯುತ್ತಿದ್ದರು. ಆಗ ವೇದಿಕೆ ಮಧ್ಯೆ ವಿಜಯೇಂದ್ರನ ಮುಖ ಸಪ್ಪಗೆ ಮಾಡಿ ಕುಳಿತಿದ್ದ.
“ಮಹಾ ಗುರುಗಳೇ, ನಮ್ಮ ವಿಜಯೇಂದ್ರನ ತಂದೆ ಬಾರದ ಕಾರಣ ಅವರ ತಾಯಿಯೊಡನೆ ಹಾಡುತ್ತಾನೆ. ಅನುಮತಿ ಕೊಡಬೇಕು,” ಎಂದು ತನುಜಾ ಕೇಳಿಕೊಂಡಳು.
“ಹಾಗೆಯೇ ಆಗಲಿ, ತಾಯಿಯಾದರೇನು…? ತಂದೆಯಾದರೇನು…..? ಮಗು ಅವರೊಂದಿಗೆ ಹಾಡಿ ಆನಂದಿಸಬೇಕು ಎನ್ನುವುದೇ ನಮ್ಮ ಉದ್ದೇಶ,” ಎಂದು ಮಹಾ ಗುರುಗಳೇ ಅನುಮತಿ ಸೂಚಿಸಿದರು.

ತನ್ನ ಕರುಳ ಕುಡಿಯೊಡನೆ ಸ್ವಲ್ಪ ಸ್ವಲ್ಪ ಹಾಡಿದ ವಿಜಯಾ ಎಲ್ಲರ ಮೆಚ್ಚುಗೆ ಗಳಿಸಿದರು.
“ಮೇಡಂ ಯಾಕೆ ನಾವು ಒಂದು ದಿನವೂ ವಿಜಯೇಂದ್ರನ ತಂದೆಯನ್ನು ನೋಡಲೇ ಇಲ್ಲ….!” ಎಂದು ವೇದಿಕೆಯಿಂದ ಕೇಳಿದರು.
“ನನ್ನ ಮಗ ಎಲ್ಲ ಮಕ್ಕಳಂತಲ್ಲ ಎಂದು ಗೊತ್ತಾದ ಕ್ಷಣ ನನ್ನನ್ನು, ನನ್ನ ಮಗುವನ್ನು ಬಿಟ್ಟುಹೋದರು,” ಎಂದು ಬಾಯಿಗೆ ಕೈ ಅಡ್ಡವಿಟ್ಟುಕೊಂಡು ಅಳುವನ್ನು ನುಂಗುತ್ತಾ ನಿಂತುಬಿಟ್ಟರು ವಿಜಯಾ.
ಒಂದು ಕ್ಷಣ ವೇದಿಕೆಯೇ ಸ್ತಬ್ಧವಾಯಿತು. ಮತ್ತೆ ಎಲ್ಲರ ಕಣ್ಣು ಮಂಜಾದವು.
“ವಿಜಯೇಂದ್ರ ದೇವರ ಮಗು. ಅದಕ್ಕೆ ಅವನಿಗೆ ತಾಯಿಯ ವಿಶೇಷ ಆಶೀರ್ವಾದ ಇದೆ, ಅದಕ್ಕೆ ಈ ತಾಯಿ ಅವನನ್ನು ತಾಯಿ ತಂದೆಯಾಗಿ ಸಾಕುತ್ತಿದ್ದಾಳೆ. ಆ ತಂದೆಗೆ ಏನು ಗೊತ್ತು ತಾನೆಂಥ ನತದೃಷ್ಟ ಎಂದು,” ಮಹಾಗುರುಗಳು ಮಾತು ಮುಗಿಸಿದರು. ಹೀಗೆ ಸಾಗಿದ ವಿಜಯೇಂದ್ರನ ವಿಜಯ ಯಾತ್ರೆ. ಕೊನೆಯ ಹಂತದಲ್ಲಿ ಅವನಿಗೆ ವಿಜಯದ ಮಾಲೆ ಒಲಿಯಿತು. ಎಲ್ಲೆಡೆ ವಾರ್ತೆ, ಸೋಶಿಯಲ್ ಮೀಡಿಯಾ, ದಿನಪತ್ರಿಕೆಗಳಲ್ಲಿ ವಿಜಯೇಂದ್ರನ ಹೆಸರು ರಾರಾಜಿಸಿತು. ಅವನ ತಾಯಿಯ ಮನ ಹಿಂದಕ್ಕೆ ಓಡಿತು……
“ಬಿಡೀಪ್ಪಾ ಏನಿದು, ಅತ್ತೆ ಬಂದರೆ….? ”
“ಬರಲಿ ಬಿಡು. 3 ವರ್ಷ ನಾಯಿ ತರಹ ನಿನ್ನ ಹಿಂದೆ ಅಲೆದು ಕೊನೆಗೂ ನನ್ನ ಪ್ರೀತಿಯನ್ನು ಒಪ್ಪಿಕೊಂಡ ಮೇಲೆ ಎಲ್ಲರ ಸಮ್ಮುಖದಲ್ಲಿ ತಾಳಿ ಕಟ್ಟಿದ್ದೇನೆ. ನನ್ನ ಹೆಂಡತಿಯನ್ನು ನಾನು ಅಪ್ಪಿಕೊಂಡರೆ ಯಾರಿಗೆ ಏನು?”
“ಅತಿಯಾಯಿತು ನಿಮ್ಮದು. ಮದುವೆಯಾಗಿ ಒಂದು ವರ್ಷ ಕಳೆದರೂ ಇನ್ನೂ ನವ ವರನ ಹಾಗೆ ಆಡುತ್ತಿದ್ದೀರಿ,” ಎನ್ನುತ್ತಾ ಗಂಡನ ತೋಳುಗಳನ್ನು ಗಟ್ಟಿಯಾಗಿ ಹಿಡಿದುಕೊಂಡಳು.
ಧೀರಜನ ಮುಖದ ಮೇಲೆ ಮುಗುಳ್ನಗೆ ಹಾದು ಹೋಯಿತು. “ಬಿಟ್ಟೆ ನೋಡು,” ಎಂದ.
“ಅಯ್ಯೋ… ಬಿಟ್ಟೇ ಬಿಟ್ಟಿರಾ,” ಎಂದು ನಾಚಿ ಮುಖ ಮುಚ್ಚಿಕೊಳ್ಳಬೇಕೆಂದು ಕೈ ಎತ್ತಲು ಒಮ್ಮೆಲೆ ತಲೆ ಸುತ್ತು ಬಂದಂತಾಗಿ ಬೀಳಲಿದ್ದವಳನ್ನು ಧೀರಜ್ ಹಿಡಿದುಕೊಂಡು, “ಏನಾಯಿತು….?” ಎನ್ನುತ್ತಾ ಭಯದಿಂದ ತಾಯಿಯನ್ನು ಕರೆದು, ನೀರು ಕುಡಿಸಿ ಸ್ವಲ್ಪ ಸುಸ್ತು ಕಡಿಮೆಯಾದಾಗ ಹಿರಿಯರ ಮಾತಿನಂತೆ ವೈದ್ಯರಿಗೆ ತೋರಿಸಿದರು. ಎಲ್ಲರ ಮುಖದ ಮೇಲೆ ಚಿಂತೆಯ ಗೆರೆಗಳು ಮಾಯವಾಗಿ ಸಂತೋಷದ ಹೊನಲು ಮನೆ ಮಾಡಿತು.
ವಂಶೋದ್ಧಾರಕನ ಸ್ವಾಗತಕ್ಕೆ ಮನೆ ಮಂದಿಯೆಲ್ಲಾ ಟೊಂಕಕಟ್ಟಿ ನಿಂತರು. ವಿಜಯಾಳಿಗೆ ಅವರೆಲ್ಲರ ಸಂಭ್ರಮ, ತನ್ನನ್ನು ಆರೈಕೆ ಮಾಡುವ ರೀತಿ ನೋಡಿದಾಗ ತಾನೆಷ್ಟು ಭಾಗ್ಯಶಾಲಿ ಎನಿಸದೆ ಇರಲಿಲ್ಲ. ಎಂಟು ತಿಂಗಳಲ್ಲಿ `ಅನಾಮಲಿ ಸ್ಕ್ಯಾನ್’ ಮಾಡಿದಾಗ ಒಂದು ಆಶ್ಚರ್ಯಕರ ಹಾಗೂ ಆಘಾತಕಾರಿ ಸುದ್ದಿ ಮನೆಮಂದಿಯ ನಿದ್ದೆಗೆಡಿಸಿತು. ಮಗುವಿನ ಬೆಳವಣಿಗೆಯಲ್ಲಿ ವ್ಯತ್ಯಾಸ ಕಂಡುಬರಲು ತಾಯಿಯ ಜೀವ ವಿಲವಿಲ ಒದ್ದಾಡಿತು. ತನ್ನ ಮಗು ಹೇಗೆ ಇರಲಿ, `ತಾಯಿ ಮಗುವನ್ನು ಬದುಕಿಸು, ನನ್ನ ಮಗುವನ್ನು ಕಾಪಾಡು,’ ಎನ್ನುವ ಮೊರೆ ಆ ತಾಯಿಗೆ ಕೇಳಿಸಿತು.
ಧೀರಜ್ ಒಂದೆಡೆ ಮಗುವಿನ ಆಗಮನದ ಖುಷಿ, ಇನ್ನೊಂದೆಡೆ ಮಗು ಸಾಮಾನ್ಯ ಮಗುವಿನ ತರ ಇರುವುದಿಲ್ಲ ಎನ್ನುವ ಸತ್ಯವನ್ನು ಅರಗಿಸಿಕೊಳ್ಳಲಾಗದೆ ಒದ್ದಾಡುತ್ತಿದ್ದ.
“ಮೊದಲೇ ಬಡ ಹುಡುಗಿಯನ್ನು ಮದುವೆ ಮಾಡಿಕೊಂಡಿದ್ದೀಯ. ಅದೂ ಅಲ್ಲದೆ, ಈಗ ಮಗು ಬೇರೆ ಹೀಗೆ…..! ಮುಂದೆ ನಮ್ಮ ಮನೆತನದ ಗತಿ ಏನು….? ನಿನ್ನ ಮಗುವನ್ನು ನೋಡಲು ನಮ್ಮನ್ನು ಕರೆಯಬೇಡ. ನಾವು ನಿನ್ನ ಅಣ್ಣ ಶ್ರೀಧರನ ಮನೆಗೆ ಹೋಗುತ್ತಿದ್ದೇವೆ, ಇನ್ನು ಮುಂದೆ ನಿನ್ನ ಮನೆಗೆ ಬರುವುದಿಲ್ಲ,” ಎಂದು ಧೀರಜನ ತಾಯಿ ತಂದೆ ಹೇಳಿದರು.
ಇದಾವುದರ ಪರಿವೇ ಇಲ್ಲದ ವಿಜಯಾ ತಾಯಿಯ ಮನೆಯ ಮನೆಗೆ ಹೋದಳು, ಹೆರಿಗೆ ನೋವು ಎಂದು ಆಸ್ಪತ್ರೆಗೆ ಸೇರಿದ್ದಳು. ಆಪರೇಷನ್ ಮಾಡಿ ಮಗುವನ್ನು ಹೊರತೆಗೆದಾಗ ಮಗು ತುಂಬಾ ಕ್ರಿಟಿಕಲ್ ಕಂಡೀಶನ್ ನಲ್ಲಿ ಇತ್ತು. ಆ ಸಮಯದಲ್ಲಿ ತಂದೆಯಾದ ತನ್ನ ಮಗುವನ್ನು ನೋಡಲು ಬರಲೇ ಇಲ್ಲ. ತಾಯಿಯ ಪ್ರಾರ್ಥನೆ, ವೈದ್ಯರ ಪ್ರಯತ್ನದಿಂದ ಮಗು ಬದುಕುಳಿಯಿತು.
ತಿಂಗಳಿಗೊಂದು ಎನ್ನುವ ಹಾಗೆ ಆಪರೇಷನ್ ಗಳ ಮೇಲೆ ಆಪರೇಷನ್ ಆಗಲು ಮಗುವಿನ ಲಾಲನೆ ಪಾಲನೆಯಲ್ಲಿ ವಿಜಯಾ ಎಲ್ಲವನ್ನೂ ಮರೆತಳು. ಪ್ರೀತಿಸಿ ಮದುವೆಯಾದ ಗಂಡ, ಮೊದಲ ಮಗುವಿನ ತಂದೆ ಕೊನೆಗೂ ಮಗುವನ್ನು ನೋಡಲು ಬರಲೇ ಇಲ್ಲ. ತನ್ನ ತಾಯಿ ತಂದೆಯ ಆಸರೆಯಲ್ಲಿ ಕಲಿತ ವಿದ್ಯೆ ಕೈ ಬಿಡಲಿಲ್ಲ. ಶಾಲೆಯ ಶಿಕ್ಷಕಿಯಾಗಿ ನೂರಾರು ಮಕ್ಕಳ ತಾಯಿಯಾಗಿ ತನ್ನ ಮಗನಿಗೆ ಸರ್ವಸ್ವವಾಗಿ ಜೀವನ ನಡೆಸುತ್ತಿರುವ ವಿಜಯಾರಿಗೆ ಕೋಟಿ ಕೋಟಿ ನಮನ. ಎಲ್ಲ ತಾಯಂದಿರಿಗೆ ಈಕೆ ಮಾದರಿ ಎಂದು ತನುಜಾ ಹೇಳಿದಾಗಲೇ ವಿಜಯಾ ವಾಸ್ತವಕ್ಕೆ ಬಂದಿದ್ದು.
ತನ್ನ ಮುದ್ದು ಬಂಗಾರ ಕರುಳಕುಡಿಯನ್ನು ನೋಡಿ, “ಯಾರ ಕಣ್ಣೂ ಬೀಳದಿರಲಿ,” ಎಂದು ದೃಷ್ಟಿ ತೆಗೆದಳು.





