ಹಿಂದಿನ ಕಾಲದ ಜೀವನ ಶೈಲಿಗೂ ಇಂದಿನ ಆಧುನಿಕ ಜೀವನಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಅಂದಿನ ಮನೆ ಇಂದಿನ ಮನಗಳ ನಡುವೆ ಇಂತಹ ಕಂದಕ ಮೂಡಿರುವುದಾದರೂ ಏಕೆ…….?

ನಮ್ಮದು ಒಂಬತ್ತು ಮಕ್ಕಳ ಕುಟುಂಬ. ಅಪ್ಪ, ಅಮ್ಮ ಸೇರಿದರೆ ಒಟ್ಟು ಹನ್ನೊಂದು. ಜೊತೆಗೆ ಗಂಡನನ್ನು ಕಳೆದುಕೊಂಡು, ಇದ್ದ ಒಬ್ಬ ಮಗ ಓಡಿ ಹೋಗಿದ್ದರಿಂದ ಸದಾ ನಮ್ಮ ಮನೆಯಲ್ಲೇ ಇರುವ ಪುಟ್ಟಮ್ಮತ್ತೆ. ಅಪ್ಪನ ಮನೆಯಲ್ಲಿ ಮೂರು ಗಂಡು ಮಕ್ಕಳು. ಅಪ್ಪನೇ ಚಿಕ್ಕವರು. ಜೊತೆಗೆ ನಾಲ್ಕು ಹೆಣ್ಣು ಮಕ್ಕಳು. ನಮ್ಮ ಮನೆಯ ಪಕ್ಕದಲ್ಲೇ ನಮ್ಮ ದೊಡ್ಡಪ್ಪನ ಮನೆ. ನಮ್ಮಿಬ್ಬರ ಮನೆಯೂ ಒಂದೇ ಅಳತೆಯದು. ಹದಿನೈದು ಅಡಿ ಅಗಲ ಮತ್ತು ನೂರು ಅಡಿ ಉದ್ದದ ನಮ್ಮಜ್ಜನ ಮನೆಯನ್ನು ಎರಡು ಭಾಗ ಮಾಡಿದಾಗ ಇಬ್ಬರು ಅಣ್ಣ ತಮ್ಮಂದಿರಿಗೂ ಏಳೂವರೆ ಅಡಿ ಅಗಲ ಮತ್ತು ನೂರು ಅಡಿ ಉದ್ದದ ಮನೆ ಅಜ್ಜನಿಂದ ದೊರಕಿತ್ತು. ಭಾಗವಾದಾಗ ನಮ್ಮ ದೊಡ್ಡ ದೊಡ್ಡಪ್ಪ, ಅಂಗಡಿಯ ಬಂಡವಾಳಕ್ಕೆಂದು ಹಣ ತೆಗೆದುಕೊಂಡು ಹೋಗಿದ್ದರಿಂದ ಉಳಿದ ಒಂದೇ ಆಸ್ತಿಯಾದ ಮನೆಯನ್ನು ಅಣ್ಣ ತಮ್ಮಂದಿರಿಬ್ಬರೂ ಎರಡು ಭಾಗ ಮಾಡಿಕೊಂಡರು. ಅದರಲ್ಲೂ ಹಿಂದುಗಡೆ ಹೋಗ ಹೋಗುತ್ತಾ ದೊಡ್ಡಪ್ಪನ ಮನೆ ಅಗಲವಾಗಿ ನಮ್ಮದು ಚಿಕ್ಕದಾಗಿತ್ತು. ಅದನ್ನು ಇರುವಂತೆಯೇ ಹಂಚಿಕೊಂಡಿದ್ದರು. ನಾವು ಯಾವಾಗಲಾದರೂ, “ಅಪ್ಪ ನಮಗೇಕೆ ಚಿಕ್ಕದು, ದೊಡ್ಡಪ್ಪನಿಗೇಕೆ ದೊಡ್ಡದು,” ಎಂದು ಕೇಳಿದರೆ, “ಅವರು ದೊಡ್ಡನಲ್ಲವೇನಮ್ಮ ಅದಕ್ಕೆ,” ಎನ್ನುತ್ತಿದ್ದರು.

papa-ki-jiwansangani-story4

ನಂತರ ಸ್ವಲ್ಪ ದೊಡ್ಡವಳಾದ ಮೇಲೆ, “ಸಮನಾಗಿ ಹಂಚಿಕೊಳ್ಳೋಕೆ ಗೋಡೆ ಒಡೆದು ಮತ್ತೆ ಕಟ್ಟಲು ಹಣವಾದರೂ ಎಲ್ಲಿತ್ತು ಮಗಳೇ….” ಎನ್ನುತ್ತಿದ್ದರು ಅಪ್ಪ.

ನಮ್ಮಮ್ಮ ಅಪ್ಪನ ಎರಡನೆಯ ಹೆಂಡತಿ. ಒಂದು ಅಪಘಾತದಲ್ಲಿ  ಅಪ್ಪನ ಮೊದಲ ಹೆಂಡತಿ ಮೃತಪಟ್ಟಿದ್ದರಿಂದ ನಾಲ್ಕು ಮಕ್ಕಳ ಮೇಲೆ ಅವರು ಅಮ್ಮನನ್ನು ಮದುವೆಯಾದರು. ಅಮ್ಮನದು ಕನಸನ್ನು ಕಾಣುವ ವಯಸ್ಸು. ಹದಿಹರೆಯ, ಚೆಲುವೆಯೇ ಮೈವೆತ್ತಿದಂತಿದ್ದ ಸುಕುಮಾರಿ. ಆದರೆ ಕಿತ್ತು ತಿನ್ನುವ ಬಡತನ. ಅಮ್ಮನಿಗೆ ಇಷ್ಟವಿತ್ತೋ ಇಲ್ಲವೋ ಅಂತೂ ಮದುವೆಯಾಯಿತು.  ಅಮ್ಮ ಅತ್ತೆ ಮನೆಗೆ ಬಂದರು. ಒಂದೆರಡು ವಾರದಲ್ಲೇ ಅಪ್ಪನ ಭಾವ ಮೈದುನರ ಮನೆಯಿಂದ ಮಕ್ಕಳ ಆಗಮನವಾಯಿತು. ನಾಲ್ಕೂ ಮಕ್ಕಳು ಮನೆಗೆ ಬಂದರು. ಅಮ್ಮನಿಗೆ ಹದಿನಾರು ವರುಷ, ಮದುವೆಯ ಕನಸನ್ನು ಹೊತ್ತು ಬಂದ ಅವರಿಗೆ ಎಷ್ಟು ನಿರಾಸೆಯಾಗಿರಬೇಡ. ಆದರೆ ಇದರಲ್ಲಿ ಅಮ್ಮನನ್ನು ಕಳೆದುಕೊಂಡ ಮಕ್ಕಳ ತಪ್ಪಾದರೂ ಏನಿದೆ? ತಮ್ಮ ಬೇಸರ ಮತ್ತು ನಿರಾಸೆಯನ್ನು ನುಂಗಿಕೊಂಡೇ ಅಮ್ಮ ತಮ್ಮ ಸಂಸಾರ ಪ್ರಾರಂಭಿಸಿದರು. ಅಜ್ಜನ ಮನೆಯಲ್ಲಿ ಉಪವಾಸ, ವನವಾಸವಿತ್ತು. ಆದರೆ ಗಂಡನ ಮನೆ ಸಹ ಅಂತಹ ಸುಖದ ಸುಪ್ಪತಿಗೆಯೇನಲ್ಲ, ಆದರೂ ನಮ್ಮ ಅಪ್ಪನಿಗೊಂದು ವ್ಯಾಪಾರ, ವ್ಯವಹಾರವಿತ್ತು. ಮನೆಯವರೆಲ್ಲರಿಗೂ ಹೊಟ್ಟೆ ತುಂಬಾ ಊಟದ ಕೊರತೆಯಂತೂ ಇರಲಿಲ್ಲ.

ಅಮ್ಮನಿಗೆ ಬೇಸರ ಸಿಟ್ಟು ಬಂದಾಗೆಲ್ಲಾ ಗೊಣಗುತ್ತಿದ್ದುದುಂಟು. `ನಾಲ್ಕು ಮಕ್ಕಳಿದ್ದಾರೆಂದು ನನಗೆ ಹೇಳೇ ಇರಲಿಲ್ಲ,’ ಎಂದು. ಅಮ್ಮನಿಗೂ ಐದು ಮಕ್ಕಳಾದವು. ಎರಡು ಗಂಡು ಮತ್ತು ಮೂರು ಹೆಣ್ಣು. ಅಮ್ಮ ಈಗಲೂ ಹೇಳುತ್ತಾಳೆ, “ನೀನು ಮತ್ತು ನಿನ್ನ ತಮ್ಮ ಹುಟ್ಟಿದ ಮೇಲೆ ನಮಗೆ ಮಕ್ಕಳು ಬೇಡವಾಗಿತ್ತು,” ಎಂದು.

ಯಾವುದು ಏನೇ ಆಗಲಿ, ಎಷ್ಟೇ ಬಡತನವಿರಲಿ, ಸಂತಾನ ದೊಡ್ಡದಾಗಲು ಏನಡ್ಡಿ. ನನ್ನಮ್ಮನ ಮದುವೆಯಾದ ಮೇಲೂ ಅಜ್ಜಿಗೆ ನನಗಿಂತಾ ಒಂದು ವರ್ಷ ಹಿರಿಯ ಮಗಳು ಮತ್ತು ನನ್ನ ತಮ್ಮನಿಗಿಂತ ಒಂದು ದೊಡ್ಡ ಮಗನೂ ಆದ. ಅವನೇ ನನ್ನ ಚಿಕ್ಕ ಸೋದರಮಾವ. ಅಂದರೆ ಮಗಳ ಮದುವೆಯಾದ ಮೇಲೂ ಅಜ್ಜಿಗೆ ಎರಡು ಮಕ್ಕಳಾದವು.

ಹಿಂದೆಲ್ಲಾ ಹಾಗೆಯೇ, ಅಮ್ಮ ಮಕ್ಕಳ ಬಾಣಂತನ ಒಟ್ಟೊಟ್ಟಿಗೆ ನಡೆಯುತ್ತಿತ್ತು. ಈ ರೀತಿಯ ಸಾಕಷ್ಟು ಉದಾಹರಣೆಗಳಿವೆ. ನಮ್ಮ ದೊಡ್ಡಮ್ಮನಿಗೆ ಕೊನೆಯ ಮಗಳು ಹುಟ್ಟಿದಾಗ ಅವರ ಹಿರಿಯ ಮಗಳೇ ಬಾಣಂತನ ಮಾಡಿದಳು. ನಮ್ಮ ಅತ್ತೆ ಮತ್ತು ನಾದಿನಿಗೆ ಒಂದೇ ತಿಂಗಳಲ್ಲಿ ಹೆರಿಗೆ ಆಯಿತು. ನನ್ನ ನಾದಿನಿಯ ಮಗ ಮತ್ತು ನನ್ನವರ ಕೊನೆಯ ತಮ್ಮ ಒಂದೇ ವಯಸ್ಸಿನವರು. ಆಗ ಕುಟುಂಬ ಯೋಜನೆ ಅಷ್ಟಾಗಿ ಚಾಲ್ತಿಯಲ್ಲಿರಲಿಲ್ಲ.

ಆ ಬಗ್ಗೆ ತಿಳಿವಳಿಕೆ ಕಡಿಮೆ. ಹೀಗಾಗಿ ಹೆಣ್ಣು ಮಕ್ಕಳಿಗೆ ಮುಟ್ಟು ನಿಲ್ಲುವ ತನಕ ಹೆರಿಗೆಗಳಾಗುತ್ತಲೇ ಇದ್ದವು. ಹೆತ್ತು, ಹೆತ್ತು ಅನೇಕ ಬಾರಿ ಹೆಣ್ಣು ಮಕ್ಕಳು ಹೆರಿಗೆಯಲ್ಲೇ ತಮ್ಮ ಪ್ರಾಣ ಕಳೆದುಕೊಳ್ಳುತ್ತಿದ್ದುದೂ ಉಂಟು. ಆಗ ಒಂದು ರೀತಿಯ ಅತಿವೃಷ್ಟಿ. ಈಗ ನಮಗೆ ಒಂದೇ ಮಗು ಸಾಕು. ಇಲ್ಲದಿದ್ದರೆ ಒಂದೂ ಬೇಡಾ. ಹೆರಲು ಮನಸ್ಸಿಲ್ಲ ಅಥವಾ ಪುರಸತ್ತಿಲ್ಲ. ಇಲ್ಲವೇ ಉದ್ಯೋಗಕ್ಕೆ ಅಡ್ಡಿಯಾಗುತ್ತದೆ ಎಂದು ಒಂದು ಮಗುವನ್ನು ಹೆರಲೂ ಬೇಸರ ಪಡುವವರಿಗೇನೂ ಕೊರತೆ ಇಲ್ಲ ಅಥವಾ ಒಂದೇ ಮಗು ಸಾಕೆನ್ನುವವರೇ ಎಲ್ಲಾ.

ಒಂಬತ್ತು ಮಕ್ಕಳ ದೊಡ್ಡ ಸಂಸಾರವಾದ್ದರಿಂದ ಎಷ್ಟೇ ಪ್ರೀತಿ ಇದ್ದರೂ ಈಗಿನ ಮಕ್ಕಳಿಗೆ ನೀಡಿದಂತೆ ಹೇಳಿದ್ದೆಲ್ಲವನ್ನೂ ಕೊಡಿಸಲು ಆಗುತ್ತಿರಲಿಲ್ಲ. ಅಪ್ಪನಿಗೆ ಅಷ್ಟೊಂದು ಹಣವಿರಲಿಲ್ಲವೆನ್ನಿ. ಎಲ್ಲವೂ ಒಂದು ಲಿಮಿಟ್‌ ನಲ್ಲೇ ಸಾಗುತ್ತಿತ್ತು. ವರ್ಷಕ್ಕೊಂದು ಬಾರಿ ಯುಗಾದಿಗೆಂದು ಒಂದು ಜೊತೆ ಬಟ್ಟೆ ಹೊಲಿಸುತ್ತಿದ್ದರು. ಅದೂ ಸಹ ಸಾಲದಲ್ಲಿ. ಸಾಲದ ಕಂತನ್ನು ಅಪ್ಪ ನಂತರ ತೀರಿಸುತ್ತಿದ್ದರು. ಆದರೆ ಅಪ್ಪನಿಗೆ ಊಟ ಮಾತ್ರ ಪುಷ್ಕಳವಾಗಿರಬೇಕು. ಅಲ್ಲಿ ಯಾವುದೇ ಕಾಂಪ್ರಮೈಸ್‌ ಇರಲಿಲ್ಲ. ಘಮ ಘಮ ಬೆಣ್ಣೆ ಕಾಸಿದ ತುಪ್ಪವಿಲ್ಲದೆ, ಗಟ್ಟಿಯಾದ ಮೊಸರಿಲ್ಲದೆ ಊಟ ಸೇರುತ್ತಲೇ ಇರಲಿಲ್ಲ. ಎಲ್ಲವೂ ಹೀಗೆಯೇ ಇರಬೇಕು. ಬಿಸಿಯಾಗಿರಬೇಕು, ಬಹಳಷ್ಟು ತಿನಿಸುಗಳಿಗೆ ರುಬ್ಬಿ ಹಾಕಬೇಕು. ಇಂತಹ ಪದಾರ್ಥಗಳಿಗೆ ಇಂತಿಷ್ಟೇ ಮಸಾಲೆ ಹಾಕಬೇಕು, ತರಕಾರಿ ಈರುಳ್ಳಿಯನ್ನು ಇಷ್ಟೇ ಮೊಗ್ಗಿಸಬೇಕು. ಒಟ್ಟಿನಲ್ಲಿ ಅಪ್ಪ ತಿನ್ನುವ ವಿಷಯದಲ್ಲಿ ಬಹಳ ನಚ್ಚು. ಆದ್ದರಿಂದ ಎಷ್ಟೇ ಹಣದ ಕಡಿತವಿದ್ದರೂ ಊಟ ಮಾತ್ರ ರುಚಿಯಾಗಿ, ರಿಚ್‌ ಆಗಿಯೇ ಇರುತ್ತಿತ್ತು. ಅಮ್ಮ ಮಾಡುತ್ತಿದ್ದ ಅಕ್ಕಿ ರೊಟ್ಟಿ ಮತ್ತು ಬದನೆಕಾಯಿ ಎಣ್ಣೆಗಾಯಿ, ಬಿಸಿ ಬೇಳೆಭಾತ್‌ ನ್ನು ನೆನೆಸಿಕೊಂಡರೆ ಈಗಲೂ ಬಾಯಲ್ಲಿ ನೀರೂರುತ್ತದೆ.

ಆಗಿನ ಕಾಲದಲ್ಲಿ ಅಪ್ಪ ಹೈಸ್ಕೂಲ್ ಸಹ ದಾಟಿರಲಿಲ್ಲ. ಆದರೂ ಕೆಲವು ಇಂಗ್ಲಿಷ್‌ ಪದಗಳನ್ನು ನಿರಾಳವಾಗಿ ಬಳಸುತ್ತಿದ್ದರು. ತಮ್ಮ ಓದಿನ ಬಗ್ಗೆ ಅವರಿಗೆ ಹೆಮ್ಮೆ ಇತ್ತು. ಏಕೆಂದರೆ ಆಗಿನ ಕಾಲದ ಎಲ್.ಎಸ್‌ಗೆ ಬಹಳ ಬೆಲೆ ಇತ್ತು. ಆದರೆ ಅಣ್ಣಂದಿರು ಓದಿನಲ್ಲಿ ಸುಮಾರೇ. ದೊಡ್ಡ ಅಣ್ಣ ಮಿಡಲ್ ಸ್ಕೂಲ್ ‌ದಾಟಿದ ತಕ್ಷಣ ಅವನ ಓದು ನಿಲ್ಲಿಸಿ ಅಂಗಡಿಗೆ ಹಾಕಿಕೊಂಡಿದ್ದರು. ದೊಡ್ಡಣ್ಣನ ಓದು ಇಷ್ಟವಾದರೆ ಎರಡನೇ ಅಣ್ಣ ಸರಿಯಾಗಿ ಶಾಲೆಗೇ ಹೋಗುತ್ತಿರಲಿಲ್ಲ. ಅವಕಾಶವಿದ್ದರೂ ಹೈಸ್ಕೂಲಿನ ಮೆಟ್ಟಿಲೇ ಹತ್ತಲಿಲ್ಲ. ಅವನು ಶಾಲೆಗಿಂತ ಹೆಚ್ಚಾಗಿ ಅದರ ಪಕ್ಕದ ಟೌನ್‌ ಹಾಲಿನ ಪಾರ್ಕಿನಲ್ಲೇ ಇರುತ್ತಿದ್ದ. ಅಪ್ಪನ ಹತ್ತಿರ ಸಾಕಷ್ಟು ಬೈಗಳವನ್ನೂ ತಿನ್ನುತ್ತಿದ್ದ. ಶಾಲೆಯ ಮೇಷ್ಟ್ರುಗಳೆಲ್ಲರೂ ನಮ್ಮ ಅಂಗಡಿಗೆ ಬರುತ್ತಿದ್ದುರಿಂದ ಅವರಿಗೆ ಪ್ರತಿ ವರ್ಷ ಪರೀಕ್ಷೆಯ ನಂತರ ದಪ್ಪ ಪೊಟ್ಟಣದಲ್ಲಿ ತಾಜಾ ಕಾಫಿ ಪುಡಿಯನ್ನು ಕಾಣಿಕೆಯಾಗಿ ನೀಡಲಾಗುತ್ತಿತ್ತು. ಹೀಗಾಗಿ ಅಂತೂ ಇಂತೂ ಅವನನ್ನು ಮುಂದಿನ ತರಗತಿಗೆ ತಳ್ಳುತ್ತಿದ್ದುದುಂಟು.

ನಂತರದವನು ಚಿಕ್ಕ ಅಣ್ಣ. ನಾನಾಗ ನರ್ಸರಿಯಲ್ಲಿ ಓದುತ್ತಿದ್ದೆ. ಐದನೇ ತರಗತಿಯಲ್ಲಿ ಓದುತ್ತಿದ್ದ ಅಣ್ಣನ ಜೊತೆ ಶಾಲೆಗೆ ಹೋಗುತ್ತಿದ್ದೆ.  ಶಾಲೆಯಾದ ನಂತರ ಅವನು ಬಂದು ನನ್ನನ್ನು ಮನೆಗೆ ಕರೆದುಕೊಂಡು ಹೋಗುತ್ತಿದ್ದ. ಒಂದು ದಿನ ಅವನು ಬಂದದ್ದು ಸ್ವಲ್ಪ ನಿಧಾನವಾಯಿತು. ಬೇರೆ ಮಕ್ಕಳೆಲ್ಲರೂ, ಮನೆಗೆ ಹೊರಟುಬಿಟ್ಟರು. ಅಲ್ಲಿ ನಾನೊಬ್ಬಳೇ, ಅಳುವೇ ಬಂದೇ ಬಿಟ್ಟಿತು. ಅಷ್ಟರಲ್ಲಿ ಅಣ್ಣ ಬಂದಾಗ ಜೀವ ಬಂದಂತಾಯಿತು.

“ಯಾಕಣ್ಣಾ ಇಷ್ಟು ಹೊತ್ತು….?” ಎಂದು ಓಡಿ ಹೋಗಿ ಅಣ್ಣನ ಕೈ ಹಿಡಿದುಕೊಂಡೆ. ಇಬ್ಬರೂ ಕೈ ಕೈ ಹಿಡಿದುಕೊಂಡೇ ಬರುತ್ತಿದ್ದೆವು. ವಾಹನಗಳು ಬರುವ ದಾರಿಯಲ್ಲಿ ಅಣ್ಣ ನನ್ನ ಕೈಯನ್ನು ಬಿಡುತ್ತಲೇ ಇರಲಿಲ್ಲ. ದಿನ ನನ್ನನ್ನು ಶಾಲೆಗೆ ಕರೆದುಕೊಂಡು ಹೋಗುವ ಪರಿಪಾಠ ನಡೆದೇ ಇತ್ತು. ಹೀಗಿದ್ದ ನಮ್ಮ ಅನುಬಂಧ, ಅಣ್ಣ ಮಾವಿನಕಾಯಿಯನ್ನು ಕೊಯ್ಯಲು ಹೋಗಿ ಮರದಿಂದ ಬಿದ್ದು ಆಸ್ಪತ್ರೆಗೆ ಸೇರಿದಾಗ, ಶಾಲೆಗೆ ನಾನು ಒಬ್ಬಳೇ ಹೋಗಬೇಕಾಯಿತು.

ಇದು ನನಗಿಂತ ದೊಡ್ಡ ಗಂಡು ಮಕ್ಕಳ ಕಥೆಯಾಯಿತು. ಇನ್ನು ಹೆಣ್ಣುಮಕ್ಕಳ ವಿಷಯಕ್ಕೆ ಬಂದರೆ ಅಕ್ಕ ದೊಡ್ಡವಳು. ನಾನು ಎರಡನೆಯವಳು ಮತ್ತು ನನಗೆ ಇಬ್ಬರು ತಂಗಿಯರು ಮತ್ತು ಇಬ್ಬರು ತಮ್ಮಂದಿರಿದ್ದರು. ದೊಡ್ಡ ತಮ್ಮನನ್ನು ಕಂಡರೆ ನಮ್ಮ ಅಮ್ಮನಿಗೆ ಬಹಳ ಪ್ರೀತಿ, ಅವನು ಮಹಾ ತುಂಟ, ಅಮ್ಮನ ಮುದ್ದು ಬೇರೆ, ಹೇಳಬೇಕೆಂದರೆ ನಾನು ಚೆನ್ನಾಗಿ ಓದುತ್ತಿದ್ದೆ, ನನ್ನನ್ನು ಫಸ್ಟ್ ರಾಂಕ್ ಹುಡುಗಿ ಅಂತಲೇ ಹೇಳುತ್ತಿದ್ದುದು, ನನ್ನ ತಮ್ಮನೂ ನಿಜಕ್ಕೂ ಬಹಳ ಬುದ್ಧಿವಂತನೇ, ಆದರೆ ಸೋಮಾರಿ. ಅವನು ಅಮ್ಮನ ಪ್ರೀತಿಯ ಮಗನಲ್ಲವೇ, ಅಮ್ಮನಿಗೆ ಅವನನ್ನು ಡಾಕ್ಟರ್‌ ಮಾಡಬೇಕೆನ್ನುವ ಆಸೆ. ಅವನ ಓದಿಗೆ ಬಹಳ ಗಮನಕೊಡುತ್ತಿದ್ದರು. ಓದಲೀಂತಾ ಅವನ ಗೆಳೆಯರಿಬ್ಬರನ್ನು ನಮ್ಮ ಮನೆಯಲ್ಲೇ ಇರಿಸಿಕೊಂಡು, ಅವರಿಗೂ ಊಟ ತಿಂಡಿ ಕೊಟ್ಟು ಉಪಚರಿಸುತ್ತಿದ್ದರು.

ಆದರೂ ನಮ್ಮ ತಮ್ಮ ಓದಿದ್ದು ಅಷ್ಟರಲ್ಲೇ ಇದೆ. ಏನೋ ಕಷ್ಟಪಟ್ಟು ಹತ್ತನೆಯ ತರಗತಿ ಪಾಸು ಮಾಡಿದ. ನಂತರ ಕಾಲೇಜಿಗೆ ಹೋದ. ಅವನಿಗೆ ಪಿ.ಯು.ಸಿಯಲ್ಲಿ ಸ್ವಲ್ಪ ಮಾರ್ಕ್ಸ್ ಬಂದಿದ್ದರೂ ಡೊನೇಷನ್‌ ಕೊಟ್ಟು ಅವನನ್ನು ಡಾಕ್ಟರ್‌ ಮಾಡಲು ನಮ್ಮ ತಾಯಿ ತಂದೆಗೆ ಆಸೆ ಇತ್ತು. ಆದರೆ ನಾನು ಒಳ್ಳೆಯ ಮಾರ್ಕ್ಸ್ ತೆಗೆದಿದ್ದೆ. ಸ್ವಲ್ಪ ಪ್ರಯತ್ನ ಪಟ್ಟಿದ್ದರೆ ನನಗೆ ಮೆಡಿಕಲ್ ಸೀಟು ಸುಲಭವಾಗಿ ಸಿಗುತ್ತಿತ್ತು. ಆದರೆ ಪ್ರಯತ್ನಪಡುವ ಅಭಿಪ್ರಾಯ ಅವರ ಮನಸ್ಸಿಗೆ ಬರಲೇ ಇಲ್ಲ.

ಹಾಗೆ ನೋಡಿದರೆ ನನ್ನ ತಂದೆಗೆ ನನ್ನ ಮೇಲೆ ಬಹಳ ಪ್ರೀತಿ. ಆದರೆ ಹೆಣ್ಣುಮಕ್ಕಳನ್ನು ಓದಿಸುವ ವಿಚಾರವೇ ಅಲ್ಲಿರಲಿಲ್ಲ. ಹೆಣ್ಣುಮಕ್ಕಳನ್ನು ಓದಿಸಲು ಖರ್ಚು ಮತ್ತು ಮದುವೆ ಮಾಡಿಸಲೂ ಖರ್ಚು. ಜೊತೆಗೆ ಹೆಣ್ಣುಮಕ್ಕಳು ದುಡಿದದ್ದು ಅವಳ ಗಂಡನ ಮನೆಗೆ, ಆದರೆ ಓದಿಸಲು ಖರ್ಚು ಮಾಡುವುದು ನಾವು ಎನ್ನುವ ಭಾವ. ಆಗಿನ ಕಾಲದಲ್ಲಿನ ಆಲೋಚನೆಗಳೇ ಹಾಗಿದ್ದವು. ಅವರನ್ನು ಎದುರಿಸು ಧೈರ್ಯ ನಮಗಿರಲಿಲ್ಲ. ಒಟ್ಟಿನಲ್ಲಿ ಹೆಣ್ಣುಮಕ್ಕಳಿಗೆ ಮದುವೆಯೇ ಮುಖ್ಯವಾಗಿತ್ತು. ಅಂತೂ ಅವರ ನಿರ್ಧಾರಕ್ಕೆ ನಾವು ತಲೆ ಬಾಗುತ್ತಿದ್ದೆವು. ಅಷ್ಟೊಂದು ಆಸೆಯಿಂದ ಪ್ರಯತ್ನಪಟ್ಟರೂ ನನ್ನ ತಮ್ಮ ಡಾಕ್ಟರ್‌ ಆಗಲೇ ಇಲ್ಲ. ಅದರ ಬದಲು ಅವನು ಫಾರ್ಮಸಿಸ್ಟ್ ಆದ.

ನನಗೆ ಸಿಟ್ಟು ಬಂದಾಗ, “ಡಾಕ್ಟರ್‌ ಆಗೋ ಅಂತಾ ಅಂದ್ರೆ ಕಾಂಪೌಂಡರ್‌ ಆದ್ಯಲ್ಲೋ….” ಅಂತ ಚುಡಾಯಿಸಿ, ಕೆಲವು ಬಾರಿ ಏಟು ತಿಂದದ್ದೂ ಇದೆ. ನಂತರದ ಸ್ವಲ್ಪ ಮೆತ್ತನೆಯವನೇ, ಮಾತೂ ಕಡಿಮೆ ಮತ್ತು ಸದಾ ಅಮ್ಮನ ಮಗ ಅವನು. ಆದರೆ ನನ್ನ ದೊಡ್ಡ ತಮ್ಮನಿಗೆ ಹುಷಾರಿಲ್ಲದೆ ಹರ್ನಿಯಾ ಆಪರೇಷನ್‌ ಆಗಬೇಕಾಗಿ ಬಂದು ಅಮ್ಮ ಆಸ್ಪತ್ರೆಯಲ್ಲಿದ್ದುದರಿಂದ ಅವನು ನಮ್ಮ ಅಕ್ಕನನ್ನು ಅಂಟಿಕೊಂಡುಬಿಟ್ಟ. ಅವಳ ಮದುವೆ ಆಗುವ ತನಕ ಅವಳ ಜೊತೆಯಲ್ಲೇ ಮಲಗುತ್ತಿದ್ದ.

ನಮ್ಮದು ಸ್ವಂತ ಮನೆ, ನಮ್ಮಜ್ಜನದು ಅಂದರೆ ಅಪ್ಪನ ತಂದೆಯ ಆಸ್ತಿ. ಇವರು ಮನೆಯನ್ನು ನನ್ನ ದೊಡ್ಡಪ್ಪ ಮತ್ತು ಅಪ್ಪ ಹಂಚಿಕೊಂಡರಂತೆ. ಮನೆಯ ಮಧ್ಯೆ ಒಂದು ಗೋಡೆ ಕಟ್ಟಿಸಿಕೊಂಡಿದ್ದರು. ಮನೆಯ ಒಳಗೆ ಹೋಗುತ್ತಾ ಮಧ್ಯಭಾಗಕ್ಕೆ ಒಂದು ಅಂಗಳ ಸಿಕುತ್ತದೆ. ಅಲ್ಲಿ ಎರಡು ಮನೆಗಳ ಮಧ್ಯೆ ಒಂದು ಬಾಗಿಲಿತ್ತು. ಅಕ್ಕಪಕ್ಕದ ಅಣ್ಣತಮ್ಮಂದಿರ ಮನೆಗಳೆಂದ ಮೇಲೆ ಕೇಳಬೇಕೆ….? ಕೆಲವು ಬಾರಿ ಬಹಳ ವಿಶ್ವಾಸದಿಂದಿರುವುದೇನು, ವಾರಗಿತ್ತಿಯರಿಬ್ಬರೂ ಒಟ್ಟಿಗೆ ಕಸೂತಿ ಹಾಕುವುದು, ಒಟ್ಟೊಟ್ಟಿಗೆ  ಕಾಫಿ ಕುಡಿಯುವುದು, ಮಾಡಿದ ಅಡುಗೆ ಹಂಚಿ ತಿನ್ನುವುದು, ಅಂಗಳದ ಬಾಗಿಲು ತೆಗೆದುಬಿಟ್ಟರೆ ಒಂದೇ ಮನೆಯನ್ನಬಹುದು. ಈ ರೀತಿ ನಡೆದಿತ್ತು. ಅಕ್ಕಪಕ್ಕದ ಅಣ್ಣ ತಮ್ಮಂದಿರ ಮನೆಯ ಕಥೆ.

ಆದರೆ ಇದ್ದಕ್ಕಿದ್ದಂತೆ ಆ ಬಾಗಿಲಿನ ಚಿಲಕಕ್ಕೆ ಬೀಗ ಬಿದ್ದುಬಿಡುತ್ತಿತ್ತು. ಒಂದಷ್ಟು ದಿನಗಳಾದ ಮೇಲೆ ಅದನ್ನು ಮೆಲ್ಲಗೆ ತೆಗೆಯಲಾಗುತ್ತಿತ್ತು. ಆ ಬಾಗಿಲನ ಕೊನೆ ಅಂದರೆ ಒಂದು ತುದಿಯಲ್ಲಿ ಒಂದು ಸಂದಿ ಇತ್ತು. ಈ ಮನಸ್ತಾಪ ನಿಷ್ಠೂರಗಳೆಲ್ಲವೂ ದೊಡ್ಡವರ ಮಧ್ಯೆ ತಾನೇ, ಮಕ್ಕಳಿಗೆ ಇವೆಲ್ಲಾ ಏನು ಗೊತ್ತಾಗುತ್ತದೆ? ನನ್ನ ಚಿಕ್ಕ ತಂಗಿ ಮತ್ತು ದೊಡ್ಡಪ್ಪನ ಮಗ ಮೋನು ಒಂದೇ ವಾರಿಗೆಯವರು. ಬಾಗಿಲಿಗೆ ಬೀಗ ಹಾಕಿದಾಗ ಅವರಿಬ್ಬರೂ ಆ ಸಂದಿಯಲ್ಲಿ ಚೀಟಿಗಳನ್ನು ಬದಲಿಸಿಕೊಳ್ಳುವುದರ ಮೂಲಕ ಅವರ ಸಂಭಾಷಣೆ ನಡೆಯುತ್ತಿತ್ತು. ಇಬ್ಬರ ಮನೆಯಲ್ಲೂ ಒಂದೇ ವಯಸ್ಸಿನ ಮಕ್ಕಳು. ಒಂದು ರೀತಿಯ ಸ್ನೇಹದ ಜೊತೆ ಸ್ಪರ್ಧೆಯೂ ಇತ್ತೆನ್ನಿ.

papa-ki-jiwansangani-story2

ಎರಡು ಮನೆಗಳೂ ಒಂದೇ ರೀತಿ. ಅಕ್ಕಪಕ್ಕ, ಮುಂದೆ ಅಂಗಡಿ, ಅದರ ಹಿಂದೆ ಮೂಟೆಗಳನ್ನು ಪೇರಿಸಲು ಒಂದು ರೂಮು ನಂತರದ್ದು. ನಮ್ಮ ಲಿವಿಂಗ್‌ ಅರ್ಥಾತ್‌ ಪಡಸಾಲೆ ಅದರ ಮುಂದಿನದು ಅಡುಗೆ ಮನೆ. ಅಡುಗೆಮನೆಯ ಒಂದು ಪಕ್ಕಕ್ಕೆ ಬೇಕೆಂದರೆ ಮುಚ್ಚಬಹುದು, ಇಲ್ಲವಾದರೆ ತೆಗೆಯಬಹುದು ಅಂತಹ ಮರದ ಬಾಗಿಲುಗಳ ವಿಭಾಗ, ನಾವು ಅಡುಗೆಮನೆಯಲ್ಲಿ ಊಟ ಮಾಡಲು ಕುಳಿತುಕೊಳ್ಳಬೇಕೆಂದರೆ ಮಧ್ಯದ ಬಾಗಿಲು ತೆಗೆದು ಹೊರಗೆ ಕುಳಿತು, ತಟ್ಟೆಯನ್ನು ಒಳಗೆ ಇಟ್ಟುಕೊಳ್ಳುತ್ತಿದ್ದೆವು. ಆ ಪುಟ್ಟ ಅಡುಗೆ ಮನೆಯಲ್ಲೇ ಎರಡು ಬೀರುಗಳು ಮತ್ತು ಮೇಲ್ಗಡೆ ಸುತ್ತಲೂ ಪತ್ತುಗೆಗಳಿದ್ದವು, ಪಾತ್ರೆಗಳನ್ನಿಡಲು ಮತ್ತು ಸಾಮಾನುಗಳನ್ನಿಡಲು ಅದೇ ಉಗ್ರಾಣ. ಒಂಬತ್ತು ಜನರ ಸಂಸಾರದ ಸಕಲವೂ ಅಲ್ಲಿಯೇ ಅಡಕವಾಗಿತ್ತು. ಅಷ್ಟು ಚಿಕ್ಕ ಮನೆಯಲ್ಲೇ ಎಲ್ಲವನ್ನೂ ಸೇರಿಸಿಕೊಂಡಿದ್ದೆವು.

ನಂತರದ್ದು ಬಚ್ಚಲು ಮನೆ, ಉದ್ದದ ಮನೆಯಲ್ಲವೇ…. ಬಚ್ಚಲ ಮನೆಗೆ ಎರಡು ಬಾಗಿಲು. ಅಂಗಳಕ್ಕೆ ಹೋಗಬೇಕೆಂದರೆ ಎರಡೂ ಬಾಗಿಲುಗಳನ್ನು ದಾಟಿಯೇ ಹೋಗಬೇಕು. ನಮ್ಮದು ಅಂಗಡಿ ಮನೆ, ಗಂಡು ಮಕ್ಕಳೆಲ್ಲಾ ಬಾಗಿಲು ತೆಗೆದುಕೊಂಡೇ, ಚಡ್ಡಿ ಹಾಕಿಕೊಂಡು ಸ್ನಾನ ಮಾಡುತ್ತಿದ್ದರು. ಮಿಕ್ಕವರೆಲ್ಲಾ ನಿರಾತಂಕವಾಗಿ ಓಡಾಡಿಕೊಂಡು ತಮ್ಮ ಕೆಲಸ ಮಾಡಿಕೊಳ್ಳುತ್ತಿದ್ದರು. ಮನೆಯ ಹೆಂಗಸರು ಸ್ನಾನ ಮಾಡಬೇಕೆಂದರೆ ಎರಡೂ ಬಾಗಿಲುಗಳನ್ನು ಮುಚ್ಚಿಕೊಂಡು ಸ್ನಾನ ಮಾಡಬೇಕಿತ್ತು.

ಅನೇಕ ಬಾರಿ ಅಂಗಡಿಗೆ ಮನೆಯ ಹಿಂದಿನ ಭಾಗದಲ್ಲಿರುವ ಸಾಮಾನುಗಳನ್ನು ತರಬೇಕೆಂದರೆ ಅಂಗಡಿಯಿಂದ ಡಬ್ಬ ಕೊಡುತ್ತಿದ್ದರು. ಮನೆಯ ಹೆಣ್ಣಾಳು ಅವರಿಗೆ ಸಾಮಾನು ತಂದುಕೊಡುತ್ತಿದ್ದಳು. ಒಟ್ಟಿನಲ್ಲಿ ನಿರಾಳವಾಗಿ ಸ್ನಾನ ಮಾಡಿದ್ದು ನಮಗೆ ನೆನಪೇ ಇಲ್ಲ. ಬಚ್ಚಲ ಮನೆಯ ಮುಂದಿನ ಭಾಗ ಅಂಗಳ. ಅಲ್ಲಿಂದ ಮುಂದೆ ಮತ್ತೊಂದು ಕೋಣೆಯಲ್ಲಿ ಒಂದಷ್ಟು ಮೂಟೆಗಳನ್ನು ಸಾಲಾಗಿ ಎತ್ತರಕ್ಕೆ ಪೇರಿಸಿಟ್ಟಿರುತ್ತಿದ್ದರು. ಅದರ ನಂತರ ಕೋಣೆಯಲ್ಲಿ ಎಣ್ಣೆಯ ಡಬ್ಬಗಳನ್ನು ಸಾಲಾಗಿಟ್ಟಿದ್ದರು. ಅಲ್ಲೇ ಒಂದು ಕೊನೆಯಲ್ಲಿ ಒಂದು ಶೌಚಾಲಯ. ಮನೆಯಲ್ಲಿನ ಹನ್ನೆರಡು ಜನಕ್ಕೂ ಒಂದೇ ಶೌಚಾಲಯ. ಅದನ್ನು ಅಮಾವಾಸ್ಯೆಗೋ ಅಥವಾ ಹುಣ್ಣಿಮೆಗೋ ಶುಚಿ ಮಾಡಿಸುತ್ತಿದ್ದರು. ಅದರ ಮುಂದಿನ ಭಾಗ ದನದ ಕೊಟ್ಟಿಗೆ. ಒಂದೆರಡು ದನಗಳನ್ನೂ ಸಾಕಿದ್ದರು. ಪ್ರತಿ ಮಗು ಹುಟ್ಟಿದಾಗ ಅಪ್ಪ ಒಂದೊಂದು ಹಸುವನ್ನು ಕೊಂಡುಕೊಳ್ಳುತ್ತಿದ್ದರು. ಪುಟ್ಟ ಮಗು ಅನ್ನ ತಿನ್ನುವ ತನಕ ಹಸುವಿನ ಹಾಲನ್ನೇ ಕುಡಿಸಲಾಗುತ್ತಿತ್ತು. ಕೊಟ್ಟಿಗೆಯ ಬಾಗಿಲಿನಿಂದ ಮುಂದೆ ಹೋದರೆ ರಸ್ತೆ. ಒಟ್ಟಿನಲ್ಲಿ ಆ ರಸ್ತೆಯಿಂದ ಈ ರಸ್ತೆವರೆಗೂ ಉದ್ದಕ್ಕೂ ನಮ್ಮ ಮನೆ ರೈಲ್ವೇ ಬೋಗಿಯಂತೆ ಹರಡಿಕೊಂಡಿತ್ತು. ನಮ್ಮ ಪಕ್ಕದ ದೊಡ್ಡಪ್ಪನ ಮನೆಯೂ ಹಾಗೆಯೇ ಇತ್ತು. ಎಲ್ಲವೂ ಒಂದೇ ರೀತಿ, ಯಾವುದೇ ಅತ್ಯಾಧುನಿಕ ಅನುಕೂಲ ಇಲ್ಲದ ಮನೆಯಲ್ಲಿ ಅಷ್ಟೊಂದು ಜನರಿಗೆ ತಿಂಡಿ ಅಡುಗೆ ಮಾಡಿಕೊಂಡಿದ್ದು, ಹೆಣಿಗೆಯ ಕೆಲಸಗಳನ್ನೂ ಸಹ ಮಾಡುತ್ತಿದ್ದರು. ಮುಂಜಾನೆ ಎದ್ದು ಹಬ್ಬ ಹರಿದಿನಗಳನ್ನು ಆಚರಿಸುತ್ತಿದ್ದರು. ವರಮಹಾಲಕ್ಷ್ಮಿ ಹಬ್ಬ ಬಂದಿತೆಂದರೆ ಮನೆಯಲ್ಲಿರುವ ಮರದ ಕುರ್ಚಿಗೆ ತೋರಣ ಕಟ್ಟಿ ಎರಡು ಕಳಸಗಳನ್ನಿಟ್ಟು ಅದಕ್ಕೆ ಚಿನ್ನದ ಒಡವೆ ಹಾಕಿ ಅಲಂಕಾರ ಮಾಡುತ್ತಿದ್ದರು. ಸಂಜೆ ಆರತಿಗೆ ಒಂದಷ್ಟು ಜನರನ್ನೂ ಕರೆಯುತ್ತಿದ್ದರು. ಅಷ್ಟೊಂದು ಕೆಲಸ ಮಾಡಲು ಅವರಲ್ಲಿ ಯಾವುದೇ ಬೇಸರ ಕಾಣುತ್ತಿರಲಿಲ್ಲ. ಬದಲಾಗಿ ಸಂಭ್ರಮವೇ ಇತ್ತು.

ನಮ್ಮ ಮನೆಯಲ್ಲಿ ಒಂಬತ್ತು ಮಕ್ಕಳು, ನಮ್ಮ ದೊಡ್ಡಪ್ಪನ ಮನೆಯಲ್ಲಿ ಹನ್ನೊಂದು ಜನ ಮಕ್ಕಳು, ಪೂರ್ಣವಾದ ಕ್ರಿಕೆಟ್‌ ಟೀಮೇ ಅಲ್ಲಿತ್ತು. ಮಾನವ ಸಂಪನ್ಮೂಲ ಸಮೃದ್ಧಿಯಾಗಿತ್ತು. ಹೆರಿಗೆ ಬಾಣಂತನಗಳಿಗೂ ಪುರಸತ್ತಿರಲಿಲ್ಲ. ಒಂದರ ಹಿಂದೆ ಮತ್ತೊಂದು ಮಗು, ಬಾಣಂತನ ಮಾಡಲು ಅಮ್ಮ ಮತ್ತು ದೊಡ್ಡಮ್ಮನ ತಂಗಿಯರಲ್ಲಿ ಯಾರಾದರೂ ಒಬ್ಬರು ನಮ್ಮಿಬ್ಬರ ಮನೆಗಳಲ್ಲಿ ಇರುತ್ತಿದ್ದರು. ಅವರಲ್ಲೂ ಒಬ್ಬರ ಜೊತೆ ಮತ್ತೊಬ್ಬರಿಗೆ ಗೆಳೆತನ. ಪಾಪ ಅವರಿಗಾದರೂ ಮತ್ಯಾವ ಮನರಂಜನೆ ಇರುತ್ತಿತ್ತು. ಹೋದರೆ ದೇವಸ್ಥಾನ ಇಲ್ಲವಾದಲ್ಲಿ ಯಾವುದಾದರೂ ಪಿಕ್ಚರ್‌. ಅದು ಬಿಟ್ಟರೆ ಅಡುಗೆ ಮಾಡುವುದು, ಮನೆಯ ಕೆಲಸ ಹೀಗೆಯೇ ಸಾಗಿತ್ತು ಅವರ ಜೀವನ.

ಇರ ಮುಂದೆ ನಾವೆಲ್ಲಾ ಪುಟ್ಟ ಮಕ್ಕಳು. ನಮ್ಮ ದೊಡ್ಡಮ್ಮನ ದೊಡ್ಡ ಮಗಳು ಅಂದರೆ ಮೊದಲ ಹೆಂಡತಿಯ ಮಗಳು ಮತ್ತು ನನ್ನಕ್ಕ ಒಂದೇ ವಾರಿಗೆಯವರು. ನಮ್ಮ ದೊಡ್ಡಮ್ಮನ ಮಗಳು ತುಂಬಾ ಬೆಳಗಿದ್ದಳು. ನಮ್ಮಕ್ಕ ಸ್ವಲ್ಪ ಕಪ್ಪು, ಲಕ್ಷಣವಾಗೇನೋ ಇದ್ದಳು. ಆದರೆ ಎಲ್ಲರಿಗೂ ಬೆಳ್ಳನೆಯ ಹುಡುಗಿಯೇ ಬೇಕಲ್ಲಾ…. ಹೀಗಾಗಿ ಅಕ್ಕನನ್ನು ಯಾರೂ ಒಪ್ಪುತ್ತಿರಲಿಲ್ಲ. ನಮ್ಮ ದೊಡ್ಡಮ್ಮನ ಮಗಳು ಸಾಗರದವರು. ಒಳ್ಳೆಯ ಸ್ಥಿತಿವಂತರು ಒಪ್ಪಿದರು. ನಮ್ಮ ಭಾವ ಆರು ಅಡಿ, ಇವಳು ನಾಲ್ಕು ಮುಕ್ಕಾಲು. ಆದರೂ ಆಗೆಲ್ಲಾ ಈ ಈಡು ಜೋಡನ್ನು ನೋಡುತ್ತಿರಲಿಲ್ಲವೇನೋ? ಒಳ್ಳೆಯ ಮನೆತನ ಅವರು ಒಪ್ಪಿಗೆ ಕೊಟ್ಟದ್ದೇ ತಡ ದೊಡ್ಡಪ್ಪ ಖುಷಿಯಾಗಿ ಒಪ್ಪಿಯೇ ಬಿಟ್ಟರು.

ಆಗೆಲ್ಲಾ ಮೂರು ದಿನದ ಮದುವೆ. ಮೊದಲ ದಿನ ವರಪೂಜೆ, ಅಂದು ವರ ಮತ್ತು ವಧುವನ್ನು ತೆರೆದ ಓಪನ್‌ ಕಾರಿನಲ್ಲಿ ಕೂರಿಸಿ ಮೆರವಣಿಗೆ ಮಾಡುತ್ತಿದ್ದರು. ನಾವೆಲ್ಲ ವಾಲಗದೊಡನೆ ಪಕ್ಕದಲ್ಲಿ ನಡೆದುಕೊಂಡು ಹೋಗುತ್ತಿದ್ದೆ. ನಂತರ ವರಪೂಜೆ ಮತ್ತು ರಾತ್ರಿ ಊಟ. ವರಪೂಜೆಗೆ ಹತ್ತಿರದವರನ್ನು ಮಾತ್ರ ಕರೆಯುತ್ತಿದ್ದರು. ಮಾರನೆಯ ದಿನ ಧಾರೆ, ಅಂದು ಸ್ವಲ್ಪ ಹೆಚ್ಚು ಜನರನ್ನು ಕರೆಯುತ್ತಿದ್ದರು. ಮಿಕ್ಕವರನ್ನು ಸಂಜೆ ಆರತಕ್ಷತೆಗೆ ಕರೆಯುತ್ತಿದ್ದರು. ಅದರ ಮಾರನೆಯ ದಿನ ಗಂಡು ಹೆಣ್ಣನ್ನು ಅಂದರೆ ಹೊಸ ದಂಪತಿಗಳನ್ನು ಕೂಡಿಸಿ ಸತ್ಯನಾರಾಯಣ ವ್ರತ ಮಾಡುತ್ತಿದ್ದರು. ಆಗ ಹತ್ತಿರದ ಬಂಧುಬಳಗ ಮತ್ತು ಗಂಡಿನ ಕಡೆಯವರಷ್ಟೆ. ಮಧ್ಯಾಹ್ನ ಊಟ ಮಾಡಿ ಹೆಣ್ಣಿನವರಿಂದ ಬುತ್ತಿ ಕಟ್ಟಿಸಿಕೊಂಡು ಗಂಡಿನವರು ಪ್ರಯಾಣ ಮಾಡುತ್ತಿದ್ದರು.

ಮೂರು ದಿನದ ಮದುವೆ. ಗಂಡಿನ ಕಡೆಯ ಬೀಗರೆಲ್ಲರೂ ಹೋದ ಮೇಲೆ ಗಂಡು ಅಲ್ಲೇ ಉಳಿಯುತ್ತಿದ್ದ. ಮತ್ತೆ ಮೂರು ದಿನ ಗಂಡು ಹೆಣ್ಣನ್ನು ಕೂಡಿಸಿ ಅರತಿ ಮಾಡುತ್ತಿದ್ದರು. ದಿನ ಹೂವಿನ ಚೆಂಡಿನಾಟ, ಮತ್ತೆ ಹಲವು ತಮಾಷೆ ಆಟಗಳು. ಎಲ್ಲವೂ ಮುಗಿದ ಮೇಲೆ ಮಕ್ಕಳಿಗೆ ಏನೋ ಒಂದು ಕುರುಕಲು ತಿಂಡಿ ನೀಡುತ್ತಿದ್ದರು. ಆಡಿಸುವ ಆಟ ಚಂದ ಮತ್ತು ತಮಾಷೆಯಾಗಿರುತ್ತಿತ್ತು. ಅಲ್ಲದೆ, ಕೊನೆಗೊಂದು ತಿಂಡಿ. ಹೀಗಾಗಿ ನಮ್ಮ ಮಕ್ಕಳ ದಂಡು ಅಲ್ಲೇ ಹಾಜರು. ಕೆಲವು ಬಾರಿ ಅಮ್ಮಂದಿರು ಬೈದದ್ದೂ ಉಂಟು.  ಒಟ್ಟಿನಲ್ಲಿ ಮದುವೆ ಎಂದರೆ ನಮಗೆಲ್ಲಾ ಮಜವೇ.

ಆಗೆಲ್ಲಾ  ಮದುವೆ ಎನ್ನುವುದು ಮೂರು ದಿನವಾದರೂ, ಅಷ್ಟೊಂದು ಖರ್ಚಾಗುತ್ತಿರಲಿಲ್ಲ. ಮದುವೆಯಲ್ಲಿ ಸಂಪ್ರದಾಯಗಳಿಗೆ ಪ್ರಾಮುಖ್ಯತೆ ಇರುತ್ತಿತ್ತು. ಮದುವೆಯ ಆಚರಣೆ ಸರಳವಾಗಿರುತ್ತಿತ್ತು. ಮದುವೆಗೆ ಇನ್ನೂ ಒಂದು ತಿಂಗಳಿದೆ ಎನ್ನುವಾಗವೇ ಎಲ್ಲರೂ ಒಟ್ಟಿಗೆ ಸೇರಿ ಹಪ್ಪಳ, ಸಂಡಿಗೆ, ಚಕ್ಕುಲಿ ಎಲ್ಲವನ್ನೂ ಮಾಡಲು ಕೈ ಜೋಡಿಸುತ್ತಿದ್ದರು. ಎಲ್ಲರೂ ತಮಾಷೆಯಾಗಿ ಮಾತನಾಡಿಕೊಂಡು, ಹಾಡು ಹೇಳಿಕೊಂಡು ಮಾಡುವ ಕೆಲಸ ಶ್ರಮವೆನಿಸುತ್ತಿರಲಿಲ್ಲ. ಈಗ ಮದುವೆಯ ಸ್ವರೂಪವೇ ಬದಲಾಗಿದೆ. ಅಡುಗೆ, ಅಲಂಕಾರ, ತಾಂಬೂಲ ಎಲ್ಲವೂ ಔಟ್‌ ಸೋರ್ಸ್‌. ಬಂದವರನ್ನು ನಗು ನಗುತ್ತಾ ಸ್ವಾಗತಿಸುವುದಷ್ಟೇ ಮಾಡಿದರೆ ಸಾಕು, ಹಣವಿದ್ದರೆ ಸಾಕು ಮಿಕ್ಕಿದ್ದೆಲ್ಲವನ್ನೂ ಬೇರೆಯವರು ಮಾಡುತ್ತಾರೆ.

ಮದುವೆ ಮುಗಿದ ಮೇಲೆ ಮತ್ತೆ ಶಾಲೆಗೆ ಹೋಗಲೇ ಬೇಕಲ್ಲವೇ? ಯಥಾ ಪ್ರಕಾರ ನಮ್ಮ ದಿನಚರಿ ಪ್ರಾರಂಭವಾಗುತ್ತಿತ್ತು. ನಮಗೆ ತಿಳಿವಳಿಕೆ ಬಂದಾಗಲಿನಿಂದ ನಮ್ಮ ದೊಡ್ಡ ಅಣ್ಣ ಅಂಗಡಿಯಲ್ಲೇ ಇರುತ್ತಿದ್ದ. ಅವನು ಸ್ವಲ್ಪ ಮೆದುಗ. ನಾವು ಮಕ್ಕಳು ಯಾವಾಗಲಾದರೂ ಅವನು ಅಂಗಡಿಯಲ್ಲಿ ಇದ್ದಾಗ ಹೋಗಿ ಕೇಳಿದರೆ ಒಂದಾಣೆ ಕೊಟ್ಟುಬಿಡುತ್ತಿದ್ದ. ಅದೇ ನನ್ನ ಮೂರನೆಯ ಅಣ್ಣನಿಂದ ಒಂದಾಣೆ ತೆಗೆದುಕೊಳ್ಳಬೇಕೆಂದರೆ ಬಹಳ ಕಷ್ಟ ಎನಿಸುತ್ತಿತ್ತು. ನಾವು ಶಾಲೆಗೆ ಹೋಗುವಾಗ ಅಣ್ಣಂದಿರಿಂದ ದುಡ್ಡು ತೆಗೆದುಕೊಳ್ಳಬೇಕು. ಏಕೆಂದರೆ ವಾಪಸ್‌ ಬರುವಾಗ ಅಲ್ಲಿ ನಮ್ಮ ಶಾಲೆಯ ಪಕ್ಕ ಇರುವ ಅಂಗಡಿಯಿಂದ ಡಾಮಟಿ ಅಂತ ಒಂದು ಕಡಲೆ ಮಿಠಾಯಿ ಇರುತ್ತಿತ್ತು. ಅದನ್ನು ತೆಗೆದುಕೊಂಡು  ಕರ್ರುಮ್ ಕುರ್ರುಮ್ ಎಂದು ತಿಂದುಕೊಂಡು ಬಿಡುತ್ತಿದ್ದೆವು. ಇಲ್ಲವಾದಲ್ಲಿ ಹಾಲು ಖೋವಾ ತಿನ್ನುತ್ತಿದ್ದೆ. ಅದಕ್ಕಷ್ಟೇ ನಾವು ಕಾಸು ಕೇಳುತ್ತಿದ್ದುದು.

ಅನೇಕ ಬಾರಿ ನಾವು ಅಣ್ಣನನ್ನು `ಕೋಡೋ ಕೋಡೋ’ ಎಂದು ಗೋಗರೆಯುತ್ತಾ ಅಲ್ಲೇ ನಿಂತಿದ್ದರೆ, ಆಗ ಅಂಗಡಿಗೆ ಬಂದ ಗಿರಾಕಿಗಳು `ಪಾಪ ಕೊಡಿ ಶೆಟ್ರೆ, ಮಗು ಕೇಳುತ್ತಿದೆ,’ ಎನ್ನುತ್ತಿದ್ದರು. ಅವರ ಮುಂದೆ ಅವಮಾನವೆಂದು ಬೇರೆ ದಾರಿ ಕಾಣದೆ ಕೊಟ್ಟುಬಿಡುತ್ತಿದ್ದ. ನಮ್ಮ ಅಂಗಡಿಗೆ ತೋಟದ ಗಿರಾಕಿಗಳು ಬೇಕಾದಷ್ಟು ಬರುತ್ತಿದ್ದರು. ಅದರಲ್ಲಿ ಉನ್ನಿ ಬೇರಿ ಅನ್ನುವವರೊಬ್ಬರಿದ್ದರು. ಅವರಿದ್ದರೆ ನಮಗೆ ಹಣ ಕೊಡಿಸಲು ಶಿಫಾರಸ್ಸು ಮಾಡೋರು. ಅದಕ್ಕೆ ನಾವು ಸಮಯ ಸಾಧಿಸಿ ಅವರಿದ್ದಾಗಲೇ ಹೋಗಿ ಹಣ ಕೇಳುತ್ತಿದ್ದೆವು. ಬಹಳಷ್ಟು ಬಾರಿ ಅಣ್ಣ ಮುಖ ಸಿಂಡರಿಸಿದ್ದೂ ಉಂಟು. ಒಟ್ಟಿನಲ್ಲಿ ಎಲ್ಲರಿಗಿಂತ ದೊಡ್ಡ ಅಣ್ಣನೇ ಹೆಚ್ಚಾಗಿ ಅಂಗಡಿಯಲ್ಲಿರುತ್ತಿದ್ದ.

ಎಲ್ಲಕ್ಕಿಂತ ಹೆಚ್ಚಾಗಿ ನಮ್ಮ ಮನೆಯ ವಾತಾವರಣ ಅಷ್ಟೇನೂ ಮುಂದುವರಿದಿರಲಿಲ್ಲ. ಊಟ ತಿಂಡಿಯ ವಿಷಯದಲ್ಲಿ ನಮ್ಮ ತಂದೆಯವರನ್ನು ಮೆಚ್ಚಿಸುವುದು ಕಷ್ಟವೇ ಇತ್ತು. ಅಲ್ಲದೆ ಮನೆಯ ತುಂಬಾ ಜನ, ಈಗಿನಂತೆ ಅನುಕೂಲವಿರಲಿಲ್ಲ. ಸೌದೆ ಒಲೆ, ಒರಳಿನಲ್ಲಿಯೇ ರುಬ್ಬಬೇಕು, ಫ್ರಿಜ್‌ ಇಲ್ಲವಾದ್ದರಿಂದ ಆಗಿನ ತರಕಾರಿಯನ್ನು ಆಗಲೇ ಹೆಚ್ಚಬೇಕು. ತೆಂಗಿನಕಾಯಿಯನ್ನು ಆಗಲೇ ತುರಿಯಬೇಕು, ಇಡ್ಲಿ ದೋಸೆಗೆಲ್ಲಾ ಮನೆಯಲ್ಲೇ ರುಬ್ಬಬೇಕು. ಹೀಗಾಗಿ ಅಮ್ಮನಿಗೆ ಚಿಕ್ಕಮ್ಮಂದಿರ ಇರುವಿಕೆ ಬಹಳ ಸಹಾಯವಾಗುತ್ತಿತ್ತು. ಅಜ್ಜನ ಮನೆಯ ಮಿಕ್ಕವರು ನಮ್ಮ ಕಾಫಿ ತೋಟದಲ್ಲಿ ಇರುತ್ತಿದ್ದರು. ಓದುವ ಇಬ್ಬರು ತಮ್ಮಂದಿರು ಮತ್ತು ಮದುವೆಗೆ ಸಿದ್ಧವಾಗಿದ್ದ ಚಿಕ್ಕಮ್ಮ ನಮ್ಮ ಮನೆಯಲ್ಲೇ ಇರುತ್ತಿದ್ದರು. ಆಗಾಗ ಅವರಿಗೆ ಗಂಡುಗಳು ಬಂದು ನೋಡಿ ಹೋಗುತ್ತಿದ್ದರು. ಸಾಕಷ್ಟು ಹೆಣ್ಣು ನೋಡುವ ಶಾಸ್ತ್ರಗಳೂ ನಡೆಯುತ್ತಿದ್ದವು. ಆ ಪುಟ್ಟ ಮನೆಯಲ್ಲೇ ಅಷ್ಟೊಂದು ಜನ ಮತ್ತು ಸಮಸ್ತವು ಅಲ್ಲೇ ನಡೆಯುತ್ತಿತ್ತು.

ಆಗ ನಮಗೆಂದು ಯಾವ ಪ್ರತ್ಯೇಕ ಕೋಣೆಯೂ ಇರಲಿಲ್ಲ. ಅಪ್ಪ ಅಮ್ಮ ಪಡಸಾಲೆಯಲ್ಲಿ ಹಾಸಿಕೊಂಡು ಎರಡು ಕಡೆಯ ಬಾಗಿಲು ಹಾಕಿಕೊಂಡು ಮಲಗುತ್ತಿದ್ದರು. ನಾವೆಲ್ಲಾ ಅಂಗಳದ ಹಿಂದಿನ ಕೋಣೆಯಲ್ಲಿ ಸಾಲಾಗಿ ಹಾಸಿಕೊಂಡು ಮಲಗುತ್ತಿದ್ದೆವು. ಅಪ್ಪ ನಮ್ಮ ಮನೆಯ ಹಿಂದಿನ ಭಾಗಕ್ಕೆ ಮಹಡಿಯ ಮೇಲೆ ಒಂದು ದೊಡ್ಡ ಹಾಲ್ ಕಟ್ಟಿಸಿದ್ದರು. ನಮ್ಮ ಚಿಕ್ಕಮ್ಮನ ನಧು ಪರೀಕ್ಷೆಯೂ ಅಲ್ಲೇ ನಡೆಯುತ್ತಿತ್ತು. ರಾತ್ರಿ ಸಾಲಾಗಿ ಹಾಸಿಕೊಂಡು ನಾವು ಮಕ್ಕಳೆಲ್ಲಾ ಮಲಗಿರುತ್ತಿದ್ದೆವು. ದಿನಾ ಯಾರಾದರೊಬ್ಬರು ಹಾಸುತ್ತಿದ್ದೆವು. ಬೆಳಗ್ಗೆ ಎದ್ದು ಹಾಸಿಗೆ ಮಡಚಿ ಗೋಡೆಯ ಪಕ್ಕದಲ್ಲಿ ಜೋಡಿಸಿ, ರಗ್ಗು ಬೆಡ್‌ ಶೀಟುಗಳನ್ನೆಲ್ಲಾ ಮಡಚಿ, ಒಂದರ ಮೇಲೊಂದನ್ನು ನೀಟಾಗಿಟ್ಟು ಅದರ ಮೇಲೆ ಒಂದು ಬೆಡ್‌ ಶೀಟ್‌ ನ್ನು ಮುಚ್ಚಿ ಬಿಡುತ್ತಿದ್ದೆವು. ನಾವೆಲ್ಲ ಓದಿ ಬರೆಯುತ್ತಿದ್ದುದು ನೆಲದ ಮೇಲೆ. ನಮ್ಮ ಅಂಗಡಿಯಲ್ಲಿ ಒಂದು ಕ್ಯಾಶ್‌ ಟೇಬಲ್ ಇತ್ತು. ಇಲ್ಲಿ ಒಂದು ಹಲಗೆಯನ್ನು ಎಳೆಯುವಂತೆ ಮಾಡಿಸಿದ್ದರು ಅಪ್ಪ. ಬಹುಶಃ  ಲೆಕ್ಕ ಬರೆಯಲು ಅನುಕೂಲವಾಗುತ್ತದೆ ಎಂದಿರಬೇಕು. ರಾತ್ರಿ ಅಂಗಡಿ ಮುಚ್ಚಿದ ಮೇಲೆ ನಾವು ಸರತಿಯ ಮೇಲೆ ಅಲ್ಲಿ ಕುಳಿತು ಬರೆಯುತ್ತಿದ್ದೆವು. ನಾವು ಇನ್ನೇನು ಕುಳಿತುಕೊಂಡು ಬರೆಯಬೇಕು ಅಷ್ಟರಲ್ಲಿ ಮಿಲಿಟರಿ ಹೋಟೆಲಿನ ಗಿರಾಕಿ ಬಂದುಬಿಡುತ್ತಿದ್ದ. ಅವನಿಗೆ ಸಾಮಾನು ಕೊಟ್ಟು ಅವನ ಹತ್ತಿರ ಹಣ ತೆಗೆದುಕೊಂಡು ಕಳುಹಿಸುವವರೆಗೂ ನಮ್ಮ ಓದು, ಬರವಣಿಗೆ ನಿಂತುಹೋಗುತ್ತಿತ್ತು. ಆಗ ಸುಮ್ಮನೆ ಕುಳಿತು ಏನು ಮಾಡುವುದು? ಅವನು ಹೋಗುವವರೆಗೆ ಕಾಯಬೇಕಲ್ಲ, ನಮ್ಮ ಅಂಗಡಿಯಲ್ಲಿ ದ್ರಾಕ್ಷಿ, ಗೋಡಂಬಿ ಇರುತ್ತಿತ್ತು. ನನಗೆ ತುಪ್ಪದಲ್ಲಿ ಹುರಿದ ಬಾದಾಮಿ ಬಹಳ ಇಷ್ಟ. ಆಗೆಲ್ಲಾ ಬಾದಾಮಿ ಸಿಪ್ಪೆ ತೆಗೆದದ್ದು ಬರುತ್ತಿರಲಿಲ್ಲ. ನಾನು ನಾಲ್ಕಾರು ಬಾದಾಮಿಗಳನ್ನು ತೆಗೆದುಕೊಂಡು, ಅದನ್ನು ಕಲ್ಲಿನಲ್ಲಿ ಕುಟ್ಟಿ, ಅದರ ಒಳಗಿನ ಬೀಜಗಳನ್ನು ಅಮ್ಮನಿಗೆ ಕೊಟ್ಟು ತುಪ್ಪದಲ್ಲಿ ಹುರಿಸಿಕೊಂಡು, ಉಪ್ಪು ಹಾಕಿಕೊಂಡು ತಿನ್ನುತ್ತಿದ್ದೆ. ಅನೇಕ ಬಾರಿ ಅವರು ಒಲೆ ಆರಿಸಿ ಬಿಟ್ಟಿರುತ್ತಿದ್ದರು. ಆದರೂ ಮಗಳ ಮೇಲಿನ ಪ್ರೀತಿಗೆ ಸೀಮೆಎಣ್ಣೆಯ ಸ್ಟವ್ ಹಚ್ಚಿ ಹುರಿದು ಕೊಡುತ್ತಿದ್ದರು. ಕೆಲವು ಬಾರಿ ಗೊಣಗುತ್ತಿದ್ದುದೂ ಉಂಟು. ನಮ್ಮ ಮನೆ ಚಿಕ್ಕದಾದರೂ ಇಂತಹ ಮಜಗಳಿಗೇನೂ ಕಡಿಮೆ ಇರಲಿಲ್ಲ.

papa-ki-jiwansangani-story3

ಕೂಪ ಮಂಡೂಕ ಎನ್ನುವಂತೆ ನಾವಿರುವುದು ನಮಗೆ ಚೆನ್ನಾಗಿಯೇ ಇರುತ್ತಿತ್ತು. ಚಿಕ್ಕಂದಿನಿಂದಲೂ ನಾವು ಶಾಲೆಗೆ ಹೋಗುವ ಮುನ್ನ ಮತ್ತು ಶಾಲೆಗೆ ಹೋಗಿ ಬಂದ ತಕ್ಷಣವೇ ನಾವು ಮನೆಯಲ್ಲಿ ಇರುವುದಕ್ಕಿಂತ ದೇವಸ್ಥಾನದಲ್ಲಿ ಇರುತ್ತಿದ್ದುದೇ ಹೆಚ್ಚು. ಅಲ್ಲೊಂದು ನಮ್ಮ ಗೆಳೆಯ ಗೆಳತಿಯರ ಬಳಗ. ನಮ್ಮ ಮನೆಯಿಂದ ನಾಲ್ಕೂ ಮನೆಗಳಾಚೆಯೇ ದೇವಸ್ಥಾನ. ಎಲ್ಲರೂ ಅಲ್ಲಿ ಸೇರಿ ಆಡುತ್ತಿದ್ದೆವು. ಗರ್ಭಗುಡಿಯಿಂದ ಹೊರಗಡೆ ಇದ್ದ ದೊಡ್ಡ ಪ್ರಾಂಗಣವೇ ನಮ್ಮ ಆಟದ ತಾಣ. ಕಂಬದ ಆಟ, ಲಗೋರಿ, ಕುಂಟೆಬಿಲ್ಲೆ, ಗುಬ್ಬಿ ಎಲ್ಲವನ್ನೂ ಆಡುತ್ತಿದ್ದೆವು.

ನಮ್ಮ ಕೂಗಾಟ ಎಷ್ಟು ಜೋರಾಗಿ ಇರುತ್ತಿತ್ತೆಂದರೆ ಅಂಗಡಿ ಬೀದಿಯ ದೊಡ್ಡ ಮೀಸೆಯ, ಕಪ್ಪನೆಯ, ದೊಡ್ಡ ಗಾತ್ರದ, ನೋಡಿದರೆ ಭಯವಾಗುವಂತಿದ್ದ ರಂಗಪ್ಪ ಬಂದು ಕೂಗು ಹಾಕುತ್ತಿದ್ದರು. ಅವರು ಬಂದಾಗ ಎಲ್ಲರೂ ಅಡಗಿಕೊಂಡು ಬಿಡುತ್ತಿದ್ದೆ. ಅವರು ಹೋದ ತಕ್ಷಣವೇ ಮತ್ತೆ ಎಲ್ಲರೂ ಹಾಜರ್‌, ನಮಗೆ ಆಟವಾಡಲು ಹೆಚ್ಚು ಆಟದ ಸಾಮಾನುಗಳು ಬೇಕಿರಲಿಲ್ಲ. ಹಾವು ಏಣಿ, ಚೌಕಾಬಾರಾ, ಕವಡೆ, ಗಜ್ಜುಗ ಇವೇ ಸಾಕಿತ್ತು.

ಆದರೆ ಈಗಿನ ಮಕ್ಕಳ ಮಜವೇನು? ಮನೆಯ ತುಂಬಾ ಆಟದ ಸಾಮಾನುಗಳು. ಅದೂ ವಿಧವಿಧದ ಬಣ್ಣಬಣ್ಣದ ಆಟದ ಸಾಮಾನುಗಳು, ಬೋರ್ಡ್‌ ಗೇಮ್ ಗಳು, ನಮಗೆ ಇವೆಲ್ಲಾ ಗೊತ್ತೇ ಇರಲಿಲ್ಲ. ನಮ್ಮ ಮೊಮ್ಮಗಳ ಹತ್ತಿರ ಎಷ್ಟು ಆಟದ ಸಾಮಾನಿದೆ ಎಂದರೆ ಅವಳಿಗೆ ಏನು ಕೊಟ್ಟರೂ, “ಅಯ್ಯೋ ಇದಾ, ನನ್ನ ಹತ್ತಿರ ಇದೆ,” ಎನ್ನುತ್ತಾಳೆ. ನಮಗೆ ಒಂದು ಚಿಕ್ಕ ಆಟಿಕೆ ಕೊಟ್ಟರೆ ಎಷ್ಟು ಖುಷಿಯಾಗುತ್ತಿತ್ತು. ಸಣ್ಣ ಸಣ್ಣ ವಿಷಯಗಳೂ ಎಷ್ಟು ಸಂತೋಷ ಕೊಡುತ್ತಿದ್ದವು. ಆದರೆ ಈಗಿನ ಮಕ್ಕಳು ಈ ಎಲ್ಲಾ ಸಂತಸಗಳಿಂದ ವಂಚಿತರಾಗಿದ್ದಾರೇನೋ ಎಂದು ಒಮ್ಮೊಮ್ಮೆ ಅನ್ನಿಸುವುದೂ ಉಂಟು.

ನಮ್ಮ ಮನೆಯಲ್ಲಿ ಯಾವುದೇ ಮದುವೆ ಎಂದರೂ ಅಪ್ಪನ ಅಕ್ಕಂದಿರು ಅವರ ಮಕ್ಕಳು, ಮೊಮ್ಮಕ್ಕಳ ಜೊತೆ ವಾರದ ಮುಂಚೆಯೇ ಬಂದುಬಿಡುತ್ತಿದ್ದರು. ಮನೆ ತುಂಬಿ ತುಳುಕುತ್ತಿತ್ತು. ಅಷ್ಟು ಜನರಿಗೆ ಅಡುಗೆ, ತಿಂಡಿ ಹೇಗೆ ಮಾಡುತ್ತಿದ್ದರೋ ಗೊತ್ತಿಲ್ಲ. ಎಲ್ಲರೂ ಒಟ್ಟಿಗೆ ಸೇರಿ ನಗು ನಗುತ್ತಾ ತಮಾಷೆ ಮಾಡಿಕೊಳ್ಳುತ್ತಾ ಕೆಲಸ ಮಾಡುತ್ತಿದ್ದರು. ನಮ್ಮ ಸೋದರತ್ತೆಯ ಮೊಮ್ಮಕ್ಕಳು ಅಮ್ಮನಿಗೆ ಸಹಾಯ ಮಾಡುತ್ತಿದ್ದರು. ನಮಗಂತೂ ಯಾವಾಗಲೂ ಬೇಸರ ಎನಿಸುತ್ತಿರಲಿಲ್ಲ. ಅವರ ಜೊತೆ ಆಟವಾಡಲು ಇನ್ನೂ ಚೆನ್ನಾಗಿರುತ್ತಿತ್ತು.

ಅವರೆಲ್ಲ ಹಿಂತಿರುಗಿ ಹೋಗುವಾಗ ಅಮ್ಮ ಅವರಿಗೆ ತಮ್ಮ ಒಂದೆರಡು ಸೀರೆಗಳನ್ನು ಕೊಡುತ್ತಿದ್ದರು. ಅವರೂ ಸಂತೋಷದಿಂದಲೇ ತೆಗೆದುಕೊಂಡು ಹೋಗುತ್ತಿದ್ದರು. ಅತ್ತೆ, ಅತ್ತೆ ಎಂದು ಅಮ್ಮನ ಹಿಂದೆಯೇ ಮಾತನಾಡುತ್ತಾ, ಸಹಾಯವನ್ನೂ ಮಾಡುತ್ತಿದ್ದರು. ಈಗ ನೆನೆಸಿಕೊಂಡರೆ ನಾವೆಲ್ಲಾ ಅಷ್ಟೊಂದು ಜನ, ಅಷ್ಟು ಸಣ್ಣ ಮನೆಯಲ್ಲಿ ಹೇಗಿದ್ದೆವು ಎನ್ನುವುದೇ ಒಂದು ದೊಡ್ಡ ಆಶ್ಚರ್ಯವೆನಿಸುತ್ತದೆ. ಆದರೆ ಆಗ ನಮಗೆ ಯಾವತ್ತಿಗೂ ನಮ್ಮ ಮನೆ ಚಿಕ್ಕದೆಂದು ಅನ್ನಿಸಿಯೇ ಇರಲಿಲ್ಲ.

ಈಗ ದೊಡ್ಡ ನಿವೇಶದನಲ್ಲಿ ನಮ್ಮದು ದೊಡ್ಡ ಮನೆ. ಎಲ್ಲ ಅನುಕೂಲಗಳೂ ಇವೆ. ನನ್ನ ನಾಲ್ಕು ವರ್ಷದ ಮೊಮ್ಮಗಳಿಗೆ ಈಗಲೇ ಒಂದು ಕೋಣೆ. ಮಂಚದ ಎರಡೂ ಪಕ್ಕದಲ್ಲೂ ಬೀರುಗಳು. ಅವೆಲ್ಲಾ ತುಂಬಿಯೇ ಇವೆ. ಎಲ್ಲಾ ಕೋಣೆಗಳಿಗೂ ಅಟ್ಯಾಚ್ಡ್ ಬಾತ್ ರೂಮ್ ಗಳು. ಆದರೂ ಈಗ ಯಾರಾದರೂ ಮನೆಗೆ ಬರುತ್ತಾರೆಂದರೆ ಅವರಿಗೆ ಉಪಚಾರ ಮಾಡುವುದು ಹೇಗೆ? ಅವರಿಗೆ ಕೋಣೆಯನ್ನು ಹೇಗೆ ಒದಗಿಸಬೇಕು ಎನ್ನುವ ಚಿಂತೆ. ಅಲ್ಲದೆ ಬರುವವರೂ ಸಹ ಪ್ರತ್ಯೇಕ ಕೋಣೆಯನ್ನು ಬಯಸುತ್ತಾರೆ.

ಹೀಗಾಗಿ ಮನೆಗೆ ಬಂದು ಇಳಿದುಕೊಳ್ಳುವ ನೆಂಟರು ಕಡಿಮೆಯೇ. ನೆಂಟಸ್ತಿಕೆಯ ಪರಿಭಾಷೆಯೇ ಬದಲಾಗಿದೆ. ದೊಡ್ಡ ನಿವೇಶನದಲ್ಲಿ ವೈಭಯುತ ಮನೆ ಕಟ್ಟಿರುತ್ತಾರೆ. ತಾಯಿ ತಂದೆ ವೃದ್ಧಾಶ್ರಮದಲ್ಲಿ ಇರುತ್ತಾರೆ. ಈಗಿನ ಜೀವನದ ಪರಿಕಲ್ಪನೆಯೇ ಬದಲಾಗಿದೆ. ಮುಂದಿನ ತಿಂಗಳು ವಿದೇಶದಲ್ಲಿರುವ ಮಗ ಸೊಸೆ ಮತ್ತು ಮಗಳ ಸಂಸಾರ ಬರುತ್ತಾರೆ ಎಂದಾಗ ಎಲ್ಲರಿಗೂ ಸ್ಥಳ ಹೇಗೆ ಒದಗಿಸುವುದೆಂದು ಈಗಾಗಲೇ ತಲೆ ಬಿಸಿಯಾಗುತ್ತಿದೆ.

ಇಷ್ಟು ದೊಡ್ಡ ಮನೆಯೂ ಚಿಕ್ಕದೆನಿಸುತ್ತಿದೆ. ಆಗ ಏಳೂವರೆ ಅಡಿಯ ಅಗಲದ ಮನೆಯಲ್ಲಿ ಧಂಡಿಯಾಗಿ ನೆಂಟರು ಬರುತ್ತಿದ್ದರು. ಆದರೆ ಈಗ ಮನೆ ಮಕ್ಕಳು ಬಂದರೂ ಮನೆ ಚಿಕ್ಕದೆನಿಸುತ್ತಿದೆ. ಮನೆ ಮನಗಳ ನಡುವೆ ದೊಡ್ಡ ಕಂದಕ ಬಂದು ಬಿಟ್ಟಿದೆಯೇನೋ……?

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ