ಆಕಸ್ಮಿಕ ಭೇಟಿಯಿಂದ ನಿರೀಕ್ಷಾಳಲ್ಲಿ ಅನುರಕ್ತನಾದ ಅಮರ್, ಮದುವೆಯ ವಿಷಯವಾಗಿ ತಂದೆಯ ಬಳಿ ಮಾತನಾಡಲು ಬಂದಾಗ, ನಡೆದದ್ದೇ ಬೇರೆ. ವಿಧಿಯ ಕೈವಾಡದಿಂದ ಅನಿವಾರ್ಯವಾಗಿ ಅಗಲಿದ ಅಮರ್ ನಿರೀಕ್ಷಾರ ಬಾಳಲ್ಲಿ ಮುಂದೆ ನಡೆದದ್ದಾದರೂ ಏನು.......?
ಕಾರು ಮಡಿಕೇರಿಯ ನಿರೀಕ್ಷಣಾ ಮಂದಿರದ ಮುಂದೆ ಬಂದು ನಿಂತಿತು. ನಿರೀಕ್ಷಾ ರೋಮಾಂಚನಗೊಂಡಳು. ಜಿಟಿ ಜಿಟಿ ಮಳೆ ಹನಿಗಳು ಮೈಮೇಲೆ ಬೀಳಲು ಗತ ಜೀವನದ ಚಿತ್ರಗಳು ನಾ ಮುಂದು, ತಾ ಮುಂದು ಎನ್ನುತ್ತಾ ನುಗ್ಗತೊಡಗಿದ. ಮಳೆ ಹನಿಯೊಂದಿಗೆ ಅವಳ ಕಣ್ಣೀರು ಸೇರಿತು.
``ಲಾ....ಲಾ.... ಅಮ್ಮಾ, ಏನಿದು.... ಎಲ್ಲಿ ನೋಡಿದಲ್ಲಿ ಹಸಿರು ಸೀರೆ ಹೊತ್ತ ಭೂತಾಯಿ, ಮುಂಜಾವಿನ ಮಳೆ ಸ್ವರ್ಗವಿದು,'' ಎಂದು ಉತ್ಸಾಹದಿಂದ ಹೇಳಿದಾಗಲೇ ವಾಸ್ತವಕ್ಕೆ ಬಂದಳು ನಿರೀಕ್ಷಾ.
``ನಮಸ್ಕಾರ ಸರ್,'' ಪ್ರಣವ್ ಕುಣಿದಾಡುವುದನ್ನು ನಿಲ್ಲಿಸಿ ಗಂಭೀರನಾದ.
ಆ ವ್ಯಕ್ತಿ ಮುಗುಳ್ನಕ್ಕು, ಲಗೇಜ್ ಎತ್ತಿಕೊಳ್ಳುತ್ತಾ...... ``ಪ್ರಣವ್ ಸರ್ ನೀವೇ ಅಲ್ಲವೇ...?'' ಎಂದು ಕೇಳಿದ.
ಪ್ರಣವ್ ಹೌದು ಎಂಬಂತೆ ತಲೆ ಆಡಿಸಿದ.
``ಬನ್ನಿ ಸಾರ್ ಕಾಫಿ ನಾಡಿಗೆ ಸ್ವಾಗತ. ನನ್ನ ಹೆಸರು ರಾಮಯ್ಯ. ನಿಮ್ಮ ಸೇವೆಯೇ ನನ್ನ ಆದ್ಯ ಕರ್ತವ್ಯ,'' ಎಂದು ನಾಟಕೀಯವಾಗಿ ನಗುತ್ತಾ ಹೇಳಿದ.
ಪ್ರಣವ್ ಪ್ರತಿ ನಕ್ಕ. ಅಷ್ಟರಲ್ಲಿಯೇ 60 ವರ್ಷ ಆಸುಪಾಸಿನ ವ್ಯಕ್ತಿಯೊಬ್ಬರು ಬಂದು, ``ರಾಮಯ್ಯ ಶುರುವಾಯಿತಾ ನಿನ್ನ ಮಾತು.....,'' ಎನ್ನುತ್ತಾ, ``ನಮಸ್ಕಾರ ಸಾರ್, ನಾನು ಇಲ್ಲಿಯ ಮೇಲ್ವಿಚಾರಕ. ನನ್ನ ಹೆಸರು ನಂಜುಂಡಯ್ಯ,'' ಎಂದು ತನ್ನನ್ನು ಪರಿಚಯಿಸಿಕೊಂಡರು.
``ನಮಸ್ಕಾರ. ನಾನು ಪ್ರಣವ್, ಇವರು ನನ್ನ ತಾಯಿ,'' ಎಂದ ಪ್ರಣವ್.
ಕನ್ನಡಕ ಸರಿ ಮಾಡಿಕೊಂಡು ನಿರೀಕ್ಷಾಳನ್ನು ನೋಡುತ್ತಾ, ``ನಮಸ್ಕಾರ ತಾಯಿ,'' ಎಂದರು ನಂಜುಂಡಯ್ಯ.
ನಿರೀಕ್ಷಾ ಅವರನ್ನು ನೋಡಿ ಗರ ಬಡಿದವಳಂತೆ ಹಾಗೆ ನಿಂತುಬಿಟ್ಟಳು. ಮಗ ತಾಯಿಯ ಭುಜ ಹಿಡಿದು ಅಲುಗಾಡಿಸಿದಾಗ ವಾಸ್ತವಕ್ಕೆ ಬಂದ ನಿರೀಕ್ಷಾ, ``ನಮಸ್ಕಾರ'' ಎಂದಷ್ಟೇ ಹೇಳಿ ಮುಖ ಕೆಳಗೆ ಹಾಕಿದಳು.
``ಬನ್ನಿ ನಿಮಗೆ ಗೆಸ್ಟ್ ಹೌಸ್ ತೋರಿಸ್ತೀನಿ. ಅಲ್ಲೆಲ್ಲಾ ವ್ಯವಸ್ಥೆಯಾಗಿದೆ ಸಾರ್.''
``ನೀವು ವಯಸ್ಸಿನಲ್ಲಿ ತುಂಬಾ ದೊಡ್ಡವರು. ನನ್ನನ್ನ ಸರ್ ಅನ್ನಬೇಡಿ.... ಪ್ರಣವ್ ಎಂದರೆ ಸಾಕು,'' ಎಂದು ಮುಗುಳ್ನಕ್ಕ ಪ್ರಣವ್.
``ಆಯಿತು. ನಿನ್ನಿಷ್ಟ,'' ಎನ್ನುತ್ತಾ, ನಿರೀಕ್ಷಾಳನ್ನೇ ನೋಡುತ್ತಾ ಒಳನಡೆದರು ನಂಜುಂಡಯ್ಯ.
ಸರ್ಕಾರಿ ಎಂಜಿನಿಯರ್ ಹುದ್ದೆಯಲ್ಲಿದ್ದ ಪ್ರಣವ್ ಕೆಲಸದ ನಿಮಿತ್ತ ಒಂದು ತಿಂಗಳ ಮಟ್ಟಿಗೆ ಮಡಿಕೇರಿಗೆ ಬಂದಿದ್ದ. ಜೊತೆಗೆ ತಾಯಿಯನ್ನೂ ತನ್ನೊಂದಿಗೆ ಕರೆತಂದಿದ್ದ.
ನಿರೀಕ್ಷಾ ಭಾರವಾದ ಹೆಜ್ಜೆಗಳನ್ನಿಡುತ್ತಾ ಮಗನನ್ನು ಹಿಂಬಾಲಿಸಿದಳು. ಮಳೆಯ ಪ್ರತಿಯೊಂದು ಹನಿಯಲ್ಲೂ ಒಂದೊಂದು ನೆನಪು ಅಡಗಿದೆ. ಮಧುರ ನೆನಪುಗಳ ಜೊತೆಗೆ ಆ ಘಟನೆ ಬೇಡ ಬೇಡ ಎಂದರೂ ನೆನಪಾಗುತ್ತಿತ್ತು. ಇಲ್ಲಿಗೆ ಬರುವ ಮೊದಲು, ನಿರ್ಧರಿಸಿದ ಹಾಗೆ ಪ್ರಣವ್ ಗೆ ತನ್ನ ಭೂತಕಾಲವನ್ನು ಹೇಳುವ ಕಾಲ ಹತ್ತಿರ ಬಂದಿದೆ, ಎಂದುಕೊಳ್ಳುತ್ತಾ ಗೆಸ್ಟ್ ಹೌಸ್ ಒಳಗೆ ನಡೆದಳು.
``ಅಮ್ಮಾ, ನಾನು ಇಲ್ಲೇ ಸುತ್ತಾಡಿ ಬರುವೆ,'' ಎಂದ ಪ್ರಣವ್.
``ಸ್ವಲ್ಪ ಹೊತ್ತು ವಿಶ್ರಾಂತಿ ತಗೋ ಪ್ರಣವ್, ಆಮೇಲೆ ಹೋಗುವಿಯಂತೆ,'' ಎಂದಳು ನಿರೀಕ್ಷಾ.