ಮಧ್ಯಮ ವರ್ಗದ ಜೀವನವೇ ಹಾಗೇ! ದೈನಂದಿನ ಪ್ರತಿಯೊಂದು ಆಗುಹೋಗಿನ ಘಟನೆಗಳ ಕುರಿತಾಗಿ ಪತಿ ಪತ್ನಿಯರಲ್ಲಿ ಸಣ್ಣ ಪುಟ್ಟ ಸಿಟ್ಟು, ಅಸಮಾಧಾನ, ಕೋಪ ತಾಪ ಇದ್ದದ್ದೇ. ಇದನ್ನೆಲ್ಲಾ ದಾಟಿ ಬದುಕನ್ನು ಮುಂದುರಿಸಬೇಕಲ್ಲವೇ….?
ಅಲಾರಾಂ ಹೊಡೆದಾಗ ಕಣ್ಣು ಬಿಟ್ಟು ಎದ್ದೆ. ಬೆಳಗಿನ ಜಾವ ಐದು ಗಂಟೆ. ಹೊರಗಡೆ ಸಣ್ಣಗೆ ಸುರಿಯುತ್ತಿರುವ ಮಳೆ ಏಳಲು ಆಲಸ್ಯವನ್ನು ತಂದಿತು. ಬೆಚ್ಚಗೆ ಇನ್ನೂ ಸ್ವಲ್ಪ ಹೊತ್ತು ಹೊದ್ದು ಮಲಗಬೇಕು ಎನಿಸಿತು. ಚಳಿಗೆ ಅಸಾಧ್ಯವಾದ ಕಾಲು ನೋವು. ಆದರೆ ಮಾಡಬೇಕಾದ ಕೆಲಸಗಳನ್ನು ನೆನೆದು ಏಳಲೇಬೇಕು ಎನಿಸಿತು. 5 ಗಂಟೆಗೆ ಎದ್ದರೆ ಕೆಲಸಗಳು ಆಗುವುದು. ಇಲ್ಲದಿದ್ದರೆ ಶಾಲೆಯ ಬಸ್ ಮಿಸ್ ಆಗುವುದು ಖಂಡಿತ. ಬಸ್ ಮಿಸ್ ಆದರೆ ನಂತರ 40 ರೂ. ಬಸ್ಚಾರ್ಜ್ ಮತ್ತು 40 ರೂ. ಆಟೋ ಚಾರ್ಜ್ ಕೊಟ್ಟು ಹೋಗಬೇಕು. ಅದನ್ನು ನೆನೆಸಿಕೊಂಡರೆ ಏಳಲೇಬೇಕು.
ಎದ್ದು ನಿತ್ಯ ಕರ್ಮಗಳನ್ನು ಮುಗಿಸಿ ಗೀಸರ್ ಸ್ವಿಚ್ ಹಾಕಿ ಅಡುಗೆಮನೆಗೆ ಹೋಗಿ ಅಂದಿನ ತಿಂಡಿ ತಯಾರಿ ನಡೆಸಿದೆ. ಸೋಮವಾರದ ದಿನ ಬೆಳಗ್ಗೆ ಬೇಗನೇ ಆಗುವ ತಿಂಡಿ ಮತ್ತು ನನ್ನಂತೆ ಕೆಲಸಕ್ಕೆ ಹೋಗುವ ಹೆಂಗಸರ ಕೈ ಹಿಡಿಯುವ ಆಪದ್ಬಾಂಧವ ಉಪ್ಪಿಟ್ಟು! ನಿನ್ನೆಯೆಲ್ಲ ದೋಸೆ, ಆಲೂಗಡ್ಡೆ ಪಲ್ಯ ಮತ್ತು ತೆಂಗಿನಕಾಯಿ ಚಟ್ನಿ ಸಮಾರಾಧಾನೆ ಆಗಿತ್ತು. ಇವತ್ತು ಉಪ್ಪಿಟ್ಟೇ ಗತಿ. ಈರುಳ್ಳಿ, ಹಸಿಮೆಣಸಿನಕಾಯಿ ಹಾಕಿ ಅದಕ್ಕೆ ಒಂದಿಷ್ಟು ಕಾಯಿ ತುರಿದು ಹಾಕಿ, ಉಪ್ಪಿಟ್ಟು ಮಾಡಿ ಮುಗಿಸಿದೆ. ಅಡುಗೆಗೆ ಎಳೇ ಬದನೆಕಾಯಿ, ಬೇಳೆ ಹಾಕಿ ಹುಳಿ ಮಾಡಿಟ್ಟು, ರೈಸ್ ಕುಕ್ಕರ್ ನಲ್ಲಿ ಅನ್ನ ಮಾಡಿದೆ. ಅಷ್ಟರಲ್ಲಿ ಮಗರಾಯ ಎದ್ದು ನನ್ನ ಶೂ ಎಲ್ಲಿ, ಸಾಕ್ಸ್ ಎಲ್ಲಿ, ನಿನ್ನೆ ಹೋಂ ವರ್ಕ್ ಬುಕ್ ಇಲ್ಲೇ ಇಟ್ಟಿದ್ದೆ. ಈಗ ಕಾಣಿಸುತ್ತಾ ಇಲ್ಲ ಎನ್ನುವ ಅಡಾಉಡಿ ಶುರು ಮಾಡಿದ. ಎಲ್ಲವನ್ನೂ ಹುಡುಕಿ ಕೊಟ್ಟು ಸ್ನಾನಕ್ಕೆ ಹೋಗುವ ಹೊತ್ತಿಗೆ ನಾಟಕದ ಒಂದು ಅಂಕ ಮುಗಿಯುತ್ತದೆ. ಪತಿರಾಯರು ಎದ್ದು ಕಾಫಿ ಕುಡಿದು, ಟಿವಿ ಹಾಕಿಕೊಂಡು ಬೆಳಗಿನ ವಾರ್ತೆಗಳನ್ನು ನೋಡುತ್ತಿದ್ದರು. ಸಾಯಂಕಾಲ ನೋಡಬಾರದೇ ಎಂದರೆ ಏನಾದರೂ ಮುಖ್ಯ ವಿಷಯಗಳು ಇದ್ದರೆ ಗೊತ್ತಾಗುತ್ತದೆ ಎನ್ನುತ್ತಾರೆ. ಅದೂ ಒಂದು ರೀತಿಯಲ್ಲಿ ಅನುಕೂಲವೇ ಸರಿ. ಒಂದೆರಡು ಬಾರಿ ಯಾರೋ ಮಂತ್ರಿಗಳು ತೀರಿಕೊಂಡರು ಎಂದು ಇದ್ದಕ್ಕಿದ್ದಂತೆ ರಜೆ ಘೋಷಣೆಯಾದಾಗ ಈ ಟಿವಿ ನೋಡುವುದು ಸಹಾಯವಾಗಿತ್ತು. ಬೇಗ ಮೈಮೇಲೆ ನಾಲ್ಕು ತಂಬಿಗೆ ನೀರು ಸುರಿದುಕೊಂಡು ಸ್ನಾನದ ಶಾಸ್ತ್ರ ಮುಗಿಸಿದೆ. ಅಷ್ಟರಲ್ಲಿ ಏನು ತಿಂಡಿ ಉಪ್ಪಿಟ್ಟಾ…. ಎಂದು ಅಪ್ಪನ ಮಗನ ಗೊಣಗಾಟ ಕೇಳಿಸಿತು. ಅಂದು ದಸರಾ ಹಬ್ಬದ ದಿನ ನೋಡಲು ಬಂದಾಗ ಕೆಂಪಂಚಿನ ಜರಿ ಸೀರೆಯುಟ್ಟು, ಉದ್ದ ಜಡೆಯನ್ನು ಅಲ್ಲಾಡಿಸುತ್ತಾ ನಾಚಿಕೆಯಿಂದ ಉಪ್ಪಿಟ್ಟು ಕೇಸರಿ ಭಾತ್ ಪ್ಲೇಟ್ ಕೊಟ್ಟಾಗ ಚೆಂದದ ಮುಗುಳು ನಗೆ ಬೀರಿ ಉಪ್ಪಿಟ್ಟು ಬಾಯಲ್ಲಿ ಇಟ್ಟು, ಬಹಳ ಚೆನ್ನಾಗಿದೆ ಉಪ್ಪಿಟ್ಟು ಎಂದಿದ್ದರು. ನಮ್ಮ ಅಣ್ಣ ಇದು ಶುಭಾ ಮಾಡಿದ್ದು ಉಪ್ಪಿಟ್ಟು ಎಂದಾಗ ಇನ್ನೂ ಸ್ವಲ್ಪ ಹಾಕಿಸಿಕೊಂಡು ನನಗೆ ಉಪ್ಪಿಟ್ಟು ಅಂದರೆ ಬಹಳ ಇಷ್ಟ ಎಂದಿದ್ದರಲ್ಲವೇ? ಮುಖದಲ್ಲೊಂದು ಮಂದಹಾಸ ಮೂಡಿತು.
ಬೇಗ ಸೀರೆಯುಟ್ಟು, ಜಡೆ ಹೆಣೆಯುವಾಗ, “ನೀನು `ಯು’ ಶೇಪ್ ಮಾಡಿಸಿಕೋ. ಆಗ ನಿನಗೆ ಸಮಯ ಉಳಿಯುತ್ತೆ,” ಎಂದರು.
“ಎಷ್ಟೊತ್ತು ಆಗಿ ಹೋಯಿತು,” ಎಂದು ಜಡೆ ಹೆಣೆಡು ಒಮ್ಮೆ ಕನ್ನಡಿಯಲ್ಲಿ ನೋಡಿಕೊಂಡೆ.
“ಚೆನ್ನಾಗಿದೀಯಾ ಬೇಗ ಬಾ,” ಎಂದು ಅವಸರಿಸಿದರು.
`ನಿನ್ನ ಉದ್ದ ಕೂದಲು ನನಗಿಷ್ಟ,’ ಎಂದು ಚಿತ್ರದುರ್ಗದ ಬೆಟ್ಟದಲ್ಲಿ ಮದುವೆಗೆ ಮೊದಲು ನನ್ನ ಮಾರುದ್ದ ಕೂದಲನ್ನು ಕೈಯಲ್ಲಿ ಹಿಡಿದು ಹೇಳಿದ್ದರಲ್ಲವೇ…? ಎಂದುಕೊಳ್ಳುತ್ತಾ ಹೆಗಲಿಗೆ ಬ್ಯಾಗ್ ಹಾಕಿಕೊಂಡು ದ್ವಿಚಕ್ರ ವಾಹನದ ಹಿಂದೆ ಅವರ ಭುಜ ಹಿಡಿದು ಕುಳಿತೆ.
ಮುಂದೆ ಕುಳಿತಿದ್ದ ಮಗರಾಯ, “ಅಯ್ಯೋ ಸ್ಕೂಲ್ ಬ್ಯಾಗ್ ತಂದಿಲ್ಲ,” ಎಂದು ಕೂಗಿಕೊಂಡ.
ಯಜಮಾನರು ದ್ವಿಚಕ್ರ ನಿಲ್ಲಿಸಿ, “ಹೋಗಿ ತೆಗೆದುಕೊಂಡು ಬಾ,” ಎಂದು ನನ್ನ ಕಡೆ ನೋಡಿ ಹೇಳಿದರು. ಮತ್ತೆ ಇಳಿದು ಹೋಗಿ ಬೀಗ ತೆಗೆದು ಮಗರಾಯನ ಸ್ಕೂಲ್ ಬ್ಯಾಗ್ ತೆಗೆದುಕೊಂಡು, ಬೀಗ ಹಾಕಿ ಬಂದೆ.
`ಮೊದಲೇ ಎಲ್ಲ ನೋಡಿಕೊಳ್ಳಬಾರದೇ,` ಎನ್ನುವ ಯಜಮಾನರ ಆಕ್ಷೇಪಣೆಯ ನೋಟ. ನಂತರ ಬಸ್ ಸ್ಟಾಪ್ ನಲ್ಲಿ ಇಳಿದು ಇವರಿಗೆ ಬೈ ಹೇಳಿ, ಇಬ್ಬರೂ ಶಾಲೆಯ ಬಸ್ ಹತ್ತಿದೆವು.
ಸಾಯಂಕಾಲ ಬಸ್ ಇಳಿದು ಬಂದಾಗ ಗೆಳತಿ ಮಾಲತಿ, “ಮೇಡಂ ಸೀರೆ ಸೇಲ್ಸ್ ಹಾಕಿದ್ದಾರೆ. ನೋಡಿಬರೋಣವೇ?” ಎಂದರು.
ಮೊದಲೇ ಸೀರೆಯೆಂದರೆ ನನಗೆ ಬಹಳ ಇಷ್ಟ. ಜೊತೆಗೆ ದಿನಾಲೂ ಶಾಲೆಗೆ ಉಡಲು ಬೇಕಲ್ಲ. ಇಬ್ಬರೂ ಹೋಗಿ ಎರಡು ಸೀರೆ ತೆಗೆದುಕೊಂಡು ಬಂದೆವು.
ಆಫೀಸಿನಿಂದ ಬಂದ ಯಜಮಾನರು ಸೋಫಾ ಮೇಲೆ ಇಟ್ಟಿದ್ದ ಸೀರೆಗಳನ್ನು ನೋಡಿ, “ಈಗ ಸೀರೆ ತೆಗೆದುಕೊಳ್ಳಲು ಏನವಸರವಿತ್ತು, ಎಷ್ಟು ಕೊಟ್ಟೆ?” ಎಂದರು.
“ಸಾವಿರದ ಐನೂರು,” ಎಂದೆ ಸಣ್ಣಗೆ.
“ಬೀರು ತುಂಬಾ ಸೀರೆಗಳಿವೆ. ಮತ್ತೇಕೆ…..? ಬಟ್ಟೆಗಳಿಗೆ ದುಡ್ಡು ಹಾಕುವುದು ದಂಡ,” ಎಂದರು.
“ಅಯ್ಯೋ, ಮೊನ್ನೆ ಎರಡು ಸೀರೆ ಬಸ್ಸು ಹತ್ತುವಾಗ ಸಿಕ್ಕಿ ಹಾಕಿಕೊಂಡು ಹರಿದು ಹೋದವು,” ಎಂದೆ.
“ಜೋಪಾನವಾಗಿ ಇಟ್ಟುಕೊಳ್ಳಬೇಕು,” ಎಂದರು.
ಮದುವೆಯಾದ ಹೊಸದರಲ್ಲಿ ತಿಂಗಳು ತಿಂಗಳು ಸೀರೆ ತೆಗೆದುಕೋ ಎಂದು ಹೇಳಿದ್ದರಲ್ಲವೇ…..? ಇವೆಲ್ಲ ಮಾಮೂಲಿ. ದಿನನಿತ್ಯ ಇರುವ ಕಥೆಗಳೇ!
ಒಳಗೆ ಹೋಗಿ ಕಾಫಿ ಮಾಡಿ ತಂದೆ. ಅಷ್ಟರಲ್ಲಿ ಮಗರಾಯ ಅವನ ಮಾರ್ಕ್ಸ್ ಕಾರ್ಡ್ ತೋರಿಸಿದ. “ಯಾಕೆ ಹಿಂದಿಯಲ್ಲಿ ಕಡಿಮೆ ಅಂಕ ತೆಗೆದುಕೊಂಡಿರುವೆ? ನಿಮ್ಮಮ್ಮ ಇಡೀ ಸ್ಕೂಲ್ ಮಕ್ಕಳನ್ನೆಲ್ಲ ಉದ್ಧಾರ ಮಾಡುತ್ತಾಳೆ. ಆದರೆ ನಿನ್ನನ್ನು ನೋಡುವುದಿಲ್ಲ,” ಎಂದರು.
“ನನಗೆ ಹಿಂದಿ ಬರುವುದಿಲ್ಲ. ಮದುವೆಯಾದ ಹೊಸದರಲ್ಲಿ ನೀವು ನನಗೆ ಹಿಂದಿ ಹೇಳಿ ಕೊಡುತ್ತೇನೆ ಎಂದು ಹೇಳಿದ್ದಿರಿ ಅಲ್ಲವೇ….?” ಎಂದು ಒಮ್ಮೆ ಅವರ ಕಡೆ ನೋಡಿ ನಕ್ಕೆ.
`ದಿನಾ ಸಾಯಂಕಾಲ ಹಿಂದಿ ಪಾಠ ಹೇಳಿ ಕೊಡುತ್ತೇನೆ ಎಂದಿದ್ದರು. ಆದರೆ ಹೇಳಿ ಕೊಟ್ಟಿದ್ದು ಬೇರೆಯ ಪಾಠ. ಅದರ ಫಲಿತಾಂಶವೇ ಮದುವೆಯಾದ ವರ್ಷದೊಳಗೆ ಈ ನಮ್ಮ ಮುದ್ದು ಮಗರಾಯನ ಆಗಮನವಾಗಿದ್ದು,’ ನೆನೆದು ಕೆನ್ನೆ ಕೆಂಪಾಯಿತು.
ರಾತ್ರಿ ಊಟ ಮಾಡಿ ಮಲಗುವಾಗ, “ಇದು ನೋಡು ಯಾರೋ ನಮ್ಮ ಆಫೀಸಿನರು ತಂದುಕೊಟ್ಟರು. ಇದಕ್ಕೆ ಐದು ಸಾವಿರ. ದಿನಾ ರಾತ್ರಿ ಮಲಗುವಾಗ ಕಾಲಿಗೆ ಹಚ್ಚಿಕೊಂಡರೆ ಕಾಲು ನೋವು ಕಡಿಮೆಯಾಗಿ, ಚೆನ್ನಾಗಿ ನಿದ್ದೆ ಬರುತ್ತದೆ,” ಎಂದು ಕಾಲಿಗೆ ಎಣ್ಣೆಯನ್ನು ಹಚ್ಚಿ ಮಸಾಜ್ ಮಾಡತೊಡಗಿದರು.
“ಅಯ್ಯೋ, ಅಷ್ಟೊಂದು ದುಡ್ಡು ಯಾಕೆ ಕೊಟ್ಟಿರಿ,” ಎಂದೆ.
“ನಿನಗಿಂತ ನನಗೆ ದುಡ್ಡು ಹೆಚ್ಚೇನು ಚಿನ್ನು…..?” ಎನ್ನುವ ಮರುಪ್ರಶ್ನೆಗೆ ಉತ್ತರವಿಲ್ಲದೆ ಹೋದೆ. ಬೆಳಗಿನಿಂದ ಇದ್ದ ಮುನಿಸು ಕರಗಿ ಮುಗುಳುನಗೆ ಬೀರಿದೆ. ಇದೇ ಅಲ್ಲವೇ ಜೀವನ. ನನ್ನ ಕಾಲು ನೋವು ವಾಸಿಯಾಗಲಿ ಎಂದು ಎಷ್ಟು ಹಣ ಖರ್ಚಾದರೂ ಪರವಾಗಿಲ್ಲ ಎಂದು ಎಣ್ಣೆ ತರಿಸಿ, ಸ್ವತಃ ಅವರೇ ಹಚ್ಚಿದಾಗ, ಮುಖದಲ್ಲಿ ತೃಪ್ತಿಯ ಭಾವ ಮೂಡಿತು. ಅವರ ಕೈ ಹಿಡಿದು ಮೃದುವಾಗಿ ಚುಂಬಿಸಿದೆ.
ಮದುವೆಯ ಮೊದಲು ಮತ್ತು ಮದುವೆಯಾದ ಹೊಸದರಲ್ಲಿ ಬಾಹ್ಯ ಸೌಂದರ್ಯಕ್ಕೆ ಹೆಚ್ಚು ಬೆಲೆ ಇರುತ್ತದೆ. ನಂತರ ವರ್ಷಗಳು ಕಳೆದ ಮೇಲೆ ವಯಸ್ಸು ಮಾಗಿ, ಮನಸ್ಸು ಪರಿಪಕ್ವವಾಗಿ ಬಾಹ್ಯ ಸೌಂದರ್ಯಕ್ಕಿಂತ, ಮನಸ್ಸಿನ ಸೌಂದರ್ಯ ಹೆಚ್ಚಾಗುತ್ತದೆ. ಕಷ್ಟ ಸುಖಗಳು, ಕಾಯಿಲೆಗಳು, ಬಸುರಿ, ಬಾಣಂತಿ, ಮಕ್ಕಳು ಆರ್ಥಿಕ ಬಿಕ್ಕಟ್ಟು ಎಲ್ಲ ಪತಿ ಪತ್ನಿಯರನ್ನು ಹೆಚ್ಚು ಅರ್ಥ ಮಾಡಿಕೊಳ್ಳುವ ಹಾಗೆ ಮಾಡುತ್ತದೆ. ಆದ್ದರಿಂದ ಪಾಲಿಗೆ ಬಂದದ್ದು ಪಂಚಾಮೃತ ಎಂದು ಮಧ್ಯಮ ವರ್ಗದಲ್ಲಿ ಸುಖ ಶಾಂತಿ ಕಾಣುವುದೇ ನೆಮ್ಮದಿ. ಇದ್ದುದೆಲ್ಲ ಬಿಟ್ಟು, ಇರದೇ ಇರುವುದರ ಕಡೆಗೆ ತುಡಿಯುವುದೇ ಜೀವನ ಆಗಿಹೋಗಿದೆ!





