ಶೈಲಜಾ ಹಾಗೂ ಪ್ರಭು ಬೇರೆ ಜಾತಿಯವರಾದರೂ, ಪ್ರೇಮಿಸಿ ಹಿರಿಯರ ಅನುಮತಿ ಪಡೆದು ಮದುವೆಯಾದರು. ಮೊದಲಿನಿಂದಲೂ ಅತೀ ಭಾವುಕಳಾಗಿದ್ದ ಶೈಲಜಾ, ತನಗೆ ಮೈದುನ ನಾದಿನಿ ಹೇಗೆ ಹೊಂದಿಕೊಳ್ಳುವರೋ ಎಂಬ ಆತಂಕದಲ್ಲಿದ್ದಳು. ಇವಳು ತೋರಿದ ಮಾತೃ ವಾತ್ಸಲ್ಯದ ಭಾವಕ್ಕೆ ಅವರ ಪ್ರೀತಿ ವಿಶ್ವಾಸ ಹೇಗೆ ಸ್ಪಂದಿಸಿತು……!
ಶೈಲಜಾ ಕಂಪನಿಯ ಕಛೇರಿಯಿಂದ ಮನೆಗೆ ಬಂದಾಗ ಆಗಲೇ ಸಮಯ ಸಂಜೆ ಏಳು ಗಂಟೆಯಾಗಿತ್ತು. ಮಧ್ಯಾಹ್ನ ನಾಲ್ಕು ಗಂಟೆಯಿಂದಲೇ ಅವಳಿಗೆ ವಿಪರೀತ ತಲೆನೋವು. ತಲೆ ಹಿಡಿಯುತ್ತಿತ್ತು. ಸಹೋದ್ಯೋಗಿ ಮತ್ತು ಆತ್ಮೀಯ ಗಳೆತಿ ಮೈತ್ರಾ ಅದಾಗಲೇ ತನ್ನ ಹ್ಯಾಂಡ್ ಬ್ಯಾಗ್ ನಲ್ಲಿದ್ದ ತಲೆನೋವಿನ ಮಾತ್ರೆಯನ್ನು ಕೊಟ್ಟಿದ್ದಳು. ಆರು ಗಂಟೆಯವರೆಗೆ ತಲೆ ಸಿಡಿತ ಒಂದಿಷ್ಟು ಶಮನವಾಗಿದ್ದೇನೋ ನಿಜ. ಆರು ಗಂಟೆಗೆ ಕಂಪನಿ ಕೆಲಸ ಮುಗಿದಾಗ ಶೈಲಜಾ ಅಪಾರ್ಟ್ ಮೆಂಟ್ ಗೆ ಮರಳಲು ಸಿಟಿ ಬಸ್ ಏರಿದ್ದಳು. ಆರೂವರೆಗೆ ಮತ್ತೆ ತಲೆನೋವು ಸಣ್ಣದಾಗಿ ಪ್ರಾರಂಭವಾಗಿತ್ತು. ಮನೆ ತಲುಪುವಷ್ಟರಲ್ಲಿ ತಲೆನೋವು ತಾರಕಕ್ಕೇರಿತ್ತು, ಸಹಿಸಲಸಾಧ್ಯವಾಗಿತ್ತು. ಎಡಗೈ ಬೆರಳುಗಳು ಅವಳಿಗರಿವಿಲ್ಲದಂತೆ ಕಣ್ಹುಬ್ಬು, ಹಣೆ, ಮುಂದಿಯನ್ನು ನಿಧಾನವಾಗಿ ಒತ್ತತೊಡಗಿದ್ದ. ಹಣೆಯಲ್ಲಿ ನೋವಿನ ಗೆರೆಗಳು ಮೂಡಿ ಮಾಯವಾಗತೊಡಗಿದ್ದ. ಮನೆ ಸೇರುತ್ತಲೇ ಪ್ರತಿ ದಿನ ಬಟ್ಟೆ ಬದಲಾಯಿಸಿ ಕೈ ಕಾಲು ಮುಖ ತೊಳೆದುಕೊಂಡು ಫ್ರೆಶ್ ಆಗಿ ಒಂದಿಷ್ಟು ಚಹಾ ಅಥವಾ ಕಾಫಿಯನ್ನು ಮಾಡಿಕೊಂಡು ಕುಡಿದು ರಾತ್ರಿ ಅಡುಗೆಯ ಕೆಲಸದಲ್ಲಿ ಲವಲವಿಕೆಯಿಂದ ತೊಡಗುತ್ತಿದ್ದಳು. ಮನೆಯಲ್ಲಿ ಇದ್ದದ್ದೇ ನಾಲ್ಕು ಜನರು. ಶೈಲಜಾ, ಅವಳ ಗಂಡ ಪ್ರಭುರಾಜ್. ಅವನ ತಮ್ಮ ಅಥರ್ ಮತ್ತು ತಂಗಿ ಕೀರ್ತನಾ. ಶೈಲಜಾ ಮತ್ತು ಪ್ರಭುರಾಜ್ ಇಬ್ಬರೂ ಸಾಫ್ಟ್ ವೇರ್ ಎಂಜಿನಿಯರ್ಸ್. ಅಥರ್ವನ ಬಿಇ ಮುಗಿಯು ಹಂತದಲ್ಲಿದೆ. ಕೀರ್ತನಾ ಈ ವರ್ಷವಷ್ಟೇ ಬಿಇಗೆ ಸೇರಿಕೊಂಡಿದ್ದಳು. ಬೆಂಗಳೂರಿನ ಮಾರತ್ ಹಳ್ಳಿಯಲ್ಲಿ ಮನೆ. ಶೈಲಜಾ ಮತ್ತು ಪ್ರಭುರಾಜ್ ಮದುವೆಯಾಗಿ ಈಗಷ್ಟೇ ಮೂರು ವರ್ಷವಾಗಿತ್ತು. ಸದ್ಯ ಮಕ್ಕಳು ಬೇಡವೆಂಬ ದೂರದೃಷ್ಟಿಯ ಯೋಜನೆ ಅವರದು.
ಪ್ರಭುರಾಜ್ ಮನೆಗೆ ಬರುವುದು ಎಂಟೂವರೆಯ ನಂತರವೇ. ಕೀರ್ತನಾ ಸಂಬಂಧಿಕರ ಮದುವೆ ಎಂದು ಊರಿಗೆ ಹೋಗಿದ್ದಳು. ಅಥರ್ವ ಸಹ ಕಂಬೈನ್ ಸ್ಟಡೀಸ್ ಅಂತ ಇನ್ನೂ ಮನೆ ಸೇರಿಕೊಂಡಿರಲಿಲ್ಲ. ಮನೆಗೆ ಬಂದ ಶೈಲಜಾ ಹೇಗೋ ಬಟ್ಟೆ ಬದಲಿಸಿ ಮುಖ ತೊಳೆದುಕೊಂಡಳು. ಒಂದಿಷ್ಟು ಚಹಾ ಮಾಡಿಕೊಂಡು ಕುಡಿಯುವುದಕ್ಕೂ ಬೇಸರ ಎನಿಸಿದ್ದರಿಂದ ಹಾಗೇ ಹಾಸಿಗೆಗೆ ಒರಗಿದಳು. ಅಥರ್ವ ಇದ್ದರೆ ಅವನಾದರೂ ಟೀ ಅಥವಾ ಕಾಫಿ ಮಾಡಿ ಕೊಡುತ್ತಿದ್ದ ಎಂಬ ಆಶಾಭಾವನೆ ಅವಳ ಮನಸ್ಸಿನಲ್ಲಿತ್ತು. ತಲೆ ಸಿಡಿತದಿಂದ ಮನಸ್ಸು ಸ್ಥಿಮಿತದಲ್ಲಿ ಇರಲಿಲ್ಲ. ಇನ್ನು ರಾತ್ರಿ ಅಡುಗೆಗೆ ತಯಾರಿ ನಡೆಸಬೇಕಿದೆ ಎಂದು ನೆನಪಾದಾಗ ಮನಸ್ಸಿಗೆ ಒಂಥರ ಬೇಸರವೆನಿಸಿತು. `ಪ್ರಭೂಗೆ ಫೋನ್ ಮಾಡಿ ಹೇಳಿದರೆ ಮನೆಗೆ ಬರುವಾಗ ದಾರಿಯಲ್ಲಿ ಹೋಟೆಲ್ ಅಥವಾ ಖಾನಾವಳಿಯಲ್ಲಿ ಊಟವನ್ನು ಕಟ್ಟಿಸಿಕೊಂಡು ಬಂದಾನು,’ ಎಂಬುದು ಮನದ ಪರದೆಯ ಮೇಲೆ ಸುಳಿದು ಹೋಯಿತು. `ನೋಡೋಣ, ಇಷ್ಟರಲ್ಲೇ ಈ ಹಾಳು ತಲೆನೋವು ತೊಲಗಿದರೂ ತೊಲಗಿ ಹೋಗಬಹುದು,’ ಎಂದು ಶೈಲಜಾ ತನ್ನೊಳಗೆ ಅಂದುಕೊಂಡಳು.
ಆಗಷ್ಟೇ ಅಥರ್ವ ಬಂದ. ಅತ್ತಿಗೆ ಮಲಗಿದ್ದುದನ್ನು ನೋಡಿ, “ಯಾಕ್ರೀ ವೈನೀ…. ಅರಾಮಿಲ್ವೇನು….? ಹಿಂಗ್ಯಾಕ ಮಲಗೀರಿ…..?” ಎಂದು ಕೇಳಿದ.
“ಯಾಕೋ ವಿಪರೀತ ತಲೆನೋವು ಕಣ್ರೀ….. ಗೋಣು ಅಲುಗಾಡಿಸಲಿಕ್ಕೂ ಬಾರದಷ್ಟು ನೋವು. ಆಫೀಸನಲ್ಲೇ ಶುರುವಾತು. ನಡುವೆ ಒಂದಿಷ್ಟು ಕಡಿಮೆಯಾದಂಗೆನಿಸಿ ಮತ್ತೆ ಶುರುವಾಗೇದ…” ಎಂದಳು.
“ಹೌದ್ರಾ….? ಕಾಫಿ ಗೀಫಿ, ಚಾ ಪಾ ಮಾಡ್ಕೊಂಡ್ ಕುಡ್ದ್ರೇನ್ರಿ…..?”
“ಎಂಥಹದು ಇಲ್ಲ ಮಾರಾಯ್ರೆ…..ಆಫೀಸಿನಿಂದ ಬಂದಾಕಿ ಹೇಗೋ ಬಟ್ಟೆ ಬದಲಾಯಿಸಿ, ಮುಖ ತೊಳ್ಕೊಂಡು ಹಾಗೇ ಅಡ್ಡಾಗಿ ಬಿಟ್ಟೀನಿ.”
“ಹೌದಾ….? ಹಂಗಾದ್ರೆ ಮೊದ್ಲು ಒಂದೀಟು ಕಾಪಿ ಕುಡಿಯುವಿರಂತೆ. ನಾ ಈಗ್ಲೇ ಗರಂ ಗರಂ ಕಾಫಿ ಮಾಡ್ಕೊಂಡು ಬರ್ತೀನಿ,” ಎನ್ನುತ್ತಾ ಅಥರ್ವ ಅಡುಗೆ ಮನೆಯತ್ತ ದೌಡಾಯಿಸಿದ.
“ನಿಮಗ್ಯಾಕಾ ತ್ರಾಸು ಬಿಡ್ರಿ….?” ಎಂದು ಹೇಳಿದ ಶೈಲಜಾಳ ಮಾತುಗಳು ಅಥರ್ವನ ಕಿವಿಗೆ ಬೀಳಲಿಲ್ಲವೆಂದಲ್ಲ. ಕೇಳಿದ್ರೂ ಕೇಳಿಸಿಕೊಳ್ಳದವನಂತೆ ಕಾಫಿಗೆ ಹಾಲನ್ನು ಕಾಯಿಸಲು ಮುಂದಾದ.
“ವೈನಿ, ಮೊದ್ಲು ಇದನ್ನು ಕುಡ್ದು ಬಿಡ್ರಿ,” ಎನ್ನುತ್ತಾ ಹಬೆಯಾಡುತ್ತಿದ್ದ ಬಿಸಿ ಬಿಸಿ ಕಾಫಿ ಕಪ್ ನ್ನು ಶೈಲಜಾಳ ಕೈಗಿಟ್ಟ ಅಥರ್ವ, ತಾನು ಮುಖ ತೊಳೆದುಕೊಂಡು ಬರಲು ಬಚ್ಚಲು ಮನೆಯತ್ತ ಹೆಜ್ಜೆ ಹಾಕಿದ.
ಅಥರ್ವ ಕೈಕಾಲು ಮುಖ ತೊಳೆದುಕೊಂಡು ಬರುವಷ್ಟರಲ್ಲಿ ಶೈಲಜಾ ಕಾಫಿ ಕುಡಿದಾಗಿತ್ತು.
“ವೈನಿ, ನಾನೀಗ ಒಂದೈದ್ಹತ್ತು ನಿಮಿಷ ರೇಖಿ ಮಾಡಿಬಿಡ್ತೀನಿ. ತಲೆನೋವು ಕಾಣದಂತೆ ಮಾಯವಾಗಿ ಬಿಡುತ್ತೆ. ನಿಮಗೆ ರೇಖಿ ಚಿಕಿತ್ಸೆ ಏನು ಎಂದು ಗೊತ್ತಾ ಇಲ್ವಾ….” ಎಂದು ಕೇಳಿದ.
“ಅಥರ್ವ… ನಿಮ್ಗೂ ರೇಖಿ ಚಿಕಿತ್ಸೆ ಬರುತ್ತೇನ್ರೀ….? ಅದೇ ಪಾಮ್ ಹೀಲಿಂಗ್ ಟ್ರೀಟ್ ಮೆಂಟ್ ಅಲ್ವೇನ್ರಿ…..?” ಎಂದು ಕೇಳಿದಳು.
“ಎಸ್…. ಯೂ ಆರ್ ಕರೆಕ್ಟ್ ವೈನಿ. ಏನೋ ಹೋದ್ವರ್ಷ ರೇಖಿ ಚಿಕಿತ್ಸೆಯ ಒಂದು ಕೋರ್ಸ್ ಮಾಡೀನ್ರಿ… ಫಾರ್ ರಿಫ್ರೆಶ್ ಮೆಂಟ್ ರೇಖಿ ಬಗ್ಗೆ ಚುಟುಕಾಗಿ ಹೇಳುವೆ. ವೈನಿ, ಈ ರೇಖಿ ಚಿಕಿತ್ಸೆ ಎಂಬುದು ಆಧ್ಯಾತ್ಮಿಕ ಅಭ್ಯಾಸವಾಗಿದೆ.
“ಇದನ್ನು 1922ರಲ್ಲಿ ಜಪಾನಿನ ಬೌದ್ಧ ಧರ್ಮೀಯ ಮಿಕಾವೋ ಉಸುಯಿ ಎಂಬಾತ ಅಭಿವೃದ್ಧಿಪಡಿಸಿದ್ದಾರೆ. ಇದಕ್ಕೆ ಸಾಮಾನ್ಯವಾಗಿ ಪಾಮ್ ಹೀಲಿಂಗ್ ಎಂದೂ ಕರೆಯುತ್ತಾರೆ. ರೇಖಿ ಚಿಕಿತ್ಸೆಯ ತರಬೇತಿ ಪಡೆದರು ಅಂಗೈ ಮೂಲಕ ಶಕ್ತಿಯನ್ನು ವರ್ಗಾವಣೆ ಮಾಡಿ ರೋಗಿಯ ರೋಗವನ್ನು ಗುಣಪಡಿಸುತ್ತಾರೆ.
“ರೋಗಿಗೆ ನೋವಿರುವ ಭಾಗಗಳ ಮೇಲೆ ಚಿಕಿತ್ಸಕರು ತಮ್ಮ ಅಂಗೈಗಳನ್ನಿರಿಸಿ ಆಧ್ಯಾತ್ಮಿಕ ಜೀವನ ಶಕ್ತಿ ಅಥವಾ ಜೀವಾಧಾರಕ ಆಧ್ಯಾತ್ಮಿಕ ಶಕ್ತಿಯನ್ನು ರೋಗಿಗಳಿಗೆ ವರ್ಗಾಯಿಸಿ ರೋಗಿಯ ಸ್ವಾಭಾವಿಕ ರಕ್ಷಣಾ ಪ್ರಕ್ರಿಯೆಯು ಚುರುಕಾಗುವಂತೆ ಮಾಡಿ, ಭಾವನಾತ್ಮಕವಾಗಿ ರೋಗಿಯ ಶಾರೀರಿಕ ಆರೋಗ್ಯ ಸ್ಥಿತಿಯನ್ನು ಮೊದಲಿನಂತೆ ಮಾಡುವುದರಲ್ಲಿ ಯಶಸ್ವಿ ಆಗುತ್ತಾರೆ. “ಅಂಗೈಗಳನ್ನು ನೋವಿರುವ ಭಾಗಗಳ ಮೇಲಿಡದೇ ಮೂರ್ನಾಲ್ಕು ಇಂಚು ಮೇಲೆ ಇಟ್ಟುಕೊಂಡು ಚಿಕಿತ್ಸೆ ನೀಡಬಹುದು. ಆಗಲೇ ಎಫೆಕ್ಟಿವ್ ರಿಸಲ್ಟ್ ಸಿಗುತ್ತದೆ. ನೀವು ಹ್ಞೂಂ ಅಂದರೆ ಈಗ್ಲೇ ಚಿಕಿತ್ಸೆ ಶುರು ಮಾಡುವೆ. ನಿಮಗೆ ಆದಷ್ಟು ಬೇಗ ನೋವು ಕಡಿಮೆಯಾಗುತ್ತದೆ,” ಎಂದು ಅಥರ್ವ ಅತ್ತಿಗೆಯ ಮುಖವನ್ನೇ ನೋಡಿದ. ಅವಳ ಮುಖದಲ್ಲಿ ಕಳೆಯೇ ಇಲ್ಲದ್ದನ್ನು ಗಮನಿಸಿದ ಅಥರ್ವ.
“ನೋವಂತೂ ಬಾಳ ಐತೆ. ಆತು… ನೀವು ರೇಖಿ ಚಿಕಿತ್ಸೆ ಆರಂಭಿಸಿ,” ಎಂದಳು. ಅವಳ ಮನಸ್ಸಿನಲ್ಲಿ ಪ್ರಯೋಗಾತ್ಮಕವಾಗಿ ರೇಖಿ ಚಿಕಿತ್ಸೆಯ ಪರಿಣಾಮವನ್ನು ಪರಿಶೀಲಿಸಬೇಕೆಂಬ ಕುತೂಹಲವಿತ್ತು.
“ಹಾಗಾದರೆ ನೀವು ಈ ಕಡೆಗೆ ತಿರುಗಿ ಅಂಗಾತ ಮಲಗಿಬಿಡ್ರಿ. ನಾನು ಇಲ್ಲೇ ಕುರ್ಚಿ ಎಳೆದುಕೊಂಡು ಕೂಡ್ರುತೀನಿ. ನೀವು ಹಾಗೇ ಕಣ್ಮುಚ್ಚಿಕೊಂಡು ಅರಾಮವಾಗಿ ಮಲ್ಗಿಬಿಡ್ರಿ. ನಾನು ಚಿಕಿತ್ಸೆ ಶುರು ಮಾಡ್ತೀನಿ,” ಎಂದ ಅಥರ್ವ.
ಶೈಲಜಾ ಈ ಕಡೆಗೆ ತಿರುಗಿಕೊಂಡು ಅಂಗಾತ ಮಲಗಿದಳು. ಅಥರ್ವ ವೈನಿಯ ಹಣೆಯ ಮೇಲೆ ಮತ್ತು ಮುಂದಿಯ ಮೇಲೆ ತುಸು ಅಂತರದಲ್ಲಿ ಮೇಲೆ ಕೈಗಳನ್ನು ಹಿಡಿದುಕೊಂಡು ಕುಳಿತ. ಶರೀರದ ಯಾವುದೇ ಭಾಗಕ್ಕೂ ಕೈಗಳು ಸೋಕದಂತೆ ನೋಡಿಕೊಂಡ. ನಿಧಾನಕ್ಕೆ ಕಣ್ಮುಚ್ಚಿಕೊಳ್ಳುತ್ತಾ ಶೈಲಜಾಳ ಹಣೆ ಮತ್ತು ತಲೆಯ ಮೇಲೆ ಒಳ ದೃಷ್ಟಿಯನ್ನು ಕೇಂದ್ರೀಕರಿಸತೊಡಗಿದ.
ಅಥರ್ವ ಹೇಳಿದಂತೆ ಶೈಲಜಾ ಕಣ್ಮುಚ್ಚಿ ಅಂಗಾತ ಮಲಗಿದಳು. ಅವಳ ಮನಸ್ಸಿನಲ್ಲಿ ಒಂಚೂರು ಗಲಿಬಿಲಿ ಇತ್ತು. ಮನಸ್ಸಿನಲ್ಲಿ ಚಡಪಡಿಕೆಯೂ ಶುರುವಾಯಿತು. ಏನೇನೋ ಭಯಾನಕ ಊಹಾಪೋಹಗಳು ಮನದಲ್ಲಿ ಹುಚ್ಚೆದ್ದು ಕುಣಿಯತೊಡಗಿದವು.
`ಅರೆ…. ಇವನೇನೊ ಕಣ್ಮುಚ್ಚಿಕೊಂಡು ಅಂಗಾತ ಮಲಗಿ, ನಾನೂ ಕಣ್ಮುಚ್ಚಿಕೊಂಡು ನಿಮ್ಮ ಶರೀರಕ್ಕೆ ನನ್ನ ಕೈ ಸೋಕದಂತೆ ರೇಖಿ ಚಿಕಿತ್ಸೆ ಆರಂಭಿಸುವೆ ಎಂದ. ಅವನ ಮಾತಿಗೆ ನಾನೂ ಗೋಣಾಡಿಸುತ್ತಾ ಕಣ್ಮುಚ್ಚಿ ಮಲಗಿದೀನಿ. ಆದರೆ ನಾನಿಂದು ಸ್ಲೀವ್ ಲೆಸ್ ಸ್ಕಿನ್ ಟೈಟ್ ಟಾಪ್ ಮತ್ತು ಸ್ಕಿನ್ ಟೈಟ್ ಲೆಗಿಂಗ್ಸ್ ಪ್ಯಾಂಟ್ ಧರಿಸಿದ್ದೀನಿ. ನೋವಿನ ಬಾಧೆ ತಾಳಲಾರದೇ ಅವಸರದಲ್ಲಿ ಕೈಗೆ ಸಿಕ್ಕಿದ್ದನ್ನು ಹಾಕಿಕೊಂಡು ತಪ್ಪು ಮಾಡಿದೆನೇನೋ ಎನಿಸುತ್ತಿದೆ. ಒಂದಿಷ್ಟು ಸಡಿಲವಾದ ಟಾಪ್ ನ್ನು ಹಾಕಿಕೊಳ್ಳಬೇಕಿತ್ತೇನೋ…? ಮೈಗಂಟಿಕೊಂಡಿರುವ ಬಟ್ಟೆಯಲ್ಲಿ ತನ್ನ ಯೌವನ ಎದ್ದು ಕಾಣುತ್ತಿದೆ.
`ನನಗೆ ಕಣ್ಣುಚ್ಚಿಕೊಳ್ಳಲು ಹೇಳಿರುವ ಇವನು ತಾನು ಕಣ್ತೆರೆದು ನನ್ನ ಉಬ್ಬಿದೆದೆಯನ್ನೇ ನೋಡುತ್ತಾ ಕೂಡುವನೋ ಏನೋ,,,,,? ಸ್ಕಿನ್ ಟೈಟ್ ಬಟ್ಟೆಯಲ್ಲಿ ಒಡೆದು ಕಾಣುತ್ತಿರುವ ನನ್ನ ಯೌವನ ಸಿರಿಗೆ ಕೈ ಹಾಕುವನೋ ಏನೋ….? ಯಾವ ಹುತ್ತದಲ್ಲಿ ಯಾವ ಹಾವೋ ಏನೋ….? ಇಂತಹ ಅವಕಾಶಕ್ಕಾಗಿ ಇವನು ಕಾಯುತ್ತಿದ್ದನೇನೋ….? ಪ್ರಭು ಆಫೀಸಿನಿಂದ ಬರುವುದು ಯಾವಾಗಲೋ ಏನೋ….? ಕೀರ್ತನಾ ಬೇರೆ ಊರಲ್ಲಿ ಇಲ್ಲ. ಹಾಗಾದರೆ ಇವನದೇನೋ ಮಸಲತ್ತಿರಬೇಕು….? ಇವನ ಕಳ್ಳಾಟಕ್ಕೆ ಕುಮ್ಮಕ್ಕು ಕೊಡಬಾರದು,’ ಎಂದು ಶೈಲಜಾ ಮನಸ್ಸಿನಲ್ಲೇ ಅಂದುಕೊಳ್ಳುತ್ತಾ ಕಣ್ತೆರೆದು ಅಥರ್ವನ ಕಡೆಗೆ ನೋಡಿದಳು. ಅಥರ್ವ ಕಣ್ಮುಚ್ಚಿಕೊಂಡೇ ಕುಳಿತಿದ್ದ. ಅವನ ಕೈಗಳು ಶೈಲಜಾಳ ಹಣೆ ಮತ್ತು ಮುಂದಿಯಿಂದ ಮೂರ್ನಾಲ್ಕು ಅಂಗುಲ ಎತ್ತರದಲ್ಲೇ ನೆಲೆ ನಿಂತಿದ್ದ. ಮುಖದಲ್ಲಿ ಯಾವ ವಿಕಾರಭಾವ ಇರಲಿಲ್ಲ. ಶಾಂತಚಿತ್ತದಿಂದ ಮುಖ ಪ್ರಕಾಶಿಸುತ್ತಿತ್ತು. ಪರಮಶಿವನಂತೆ ಧ್ಯಾನಾಸಕ್ತ ಭಂಗಿಯಲ್ಲಿ ಕುಳಿತಿದ್ದ. ಮನದಲ್ಲಿ ಏಕಾಗ್ರತೆಯೂ ಇತ್ತೇನೋ? ನಿಶ್ಚಲವಾಗಿ ಕುಳಿತಿದ್ದ. ಶೈಲಜಾಳ ಕಲ್ಪನೆಗಳಿಗೆ ತಡೆಬಿತ್ತು. ಮನಸ್ಸಿಗೆ ಸಮಾಧಾನ ಎನಿಸಿದಾಗ ತಕ್ಷಣ ಕಣ್ಮುಚ್ಚಿಕೊಂಡಳು.
ಶೈಲಜಾ ಮತ್ತೆ ಮನಸ್ಸಿನಲ್ಲಿ, `ಅಥರ್ವ ಅಂಥಹವನಲ್ಲ ಅಂತ ನನಗೂ ಚೆನ್ನಾಗಿ ಗೊತ್ತು. ಆದರೂ ಮಾನವ ಸಹಜ ಗುಣಗಳು ಉದ್ರೇಕಿಸಿದರೂ ಉದ್ರೇಕಿಸಬಹುದಲ್ಲವೇ…..?’ ಎಂದುಕೊಳ್ಳುತ್ತಾ ತನ್ನ ಮನಸ್ಸಿನ ಅನುಮಾನದ ವಿಚಾರಗಳಿಗೆ ತನ್ನನ್ನು ತಾನೇ ಹಳಿದುಕೊಂಡಳು. ಮನಸ್ಸಿನಲ್ಲೇ ಅಥರ್ವನ ಕ್ಷಮೆ ಕೇಳಿದಳು. ಅವನ ಜೊತೆ ಚರ್ಚಿಸಿ ಕುಬ್ಜಳಾಗುವುದು ಬೇಡ ಎಂಬುದು ಅವಳ ಲೆಕ್ಕಾಚಾರ. ನಾಲ್ಕೈದು ನಿಮಿಷಗಳಾಗುವಷ್ಟರಲ್ಲಿ ಅವಳಿಗೆ ಹಣೆ, ತಲೆ ನೋವಿನಿಂದ ಬಿಡುಗಡೆ ಪಡೆದ ಅನುಭವ. ಸುಮಾರು ಆರೇಳು ನಿಮಿಷಗಳವರೆಗೆ ಅಥರ್ವ ಅದೇ ಭಂಗಿಯಲ್ಲಿ ಕುಳಿತಿದ್ದ. ನಂತರ ನಿಧಾನವಾಗಿ ಕಣ್ತೆರೆದು, “ವೈನೀ, ನೀವು ನಿಧಾನವಾಗಿ ಕಣ್ತೆರೆಯಿರಿ. ಈಗ ತಲೆನೋವು ಹೇಗಿದೆ…..? ಒಂಚೂರು ವಾಸೀನಾ….? ಇಲ್ಲವಾದರೆ ಇನ್ನೊಂದೈದು ನಿಮಿಷ ಚಿಕಿತ್ಸೆ ಮುಂದುರಿಸುವೆ,” ಎಂದ.
“ಒಂಚೂರೇನು, ನೋವು ಸಂಪೂರ್ಣ ಮಾಯಾಗಿದೇರಿ ಅಥರ್ವ….” ನಿಧಾನವಾಗಿ ಕಣ್ಣುಬಿಡುತ್ತಾ ಶೈಲಜಾ ಮೆಲುದನಿಯಲ್ಲಿ ಹೇಳಿದಳು.
“ಹೌದೇನ್ರೀ….? ಹಂಗಾದ್ರೆ ನನ್ನ ಪ್ರಯತ್ನ ಫಲಿಸಿತು ಬಿಡ್ರಿ. ನಾನು ರೇಖಿ ಕೋರ್ಸ್ ಕಲಿತಿದ್ದಕ್ಕೂ ಸಾರ್ಥಕವಾತು. ನೀವು ಹೀಗೇ ಇನ್ನೊಂದರ್ಧ ತಾಸು ಕಣ್ಣುಚ್ಚಿ ಮಲಗಿ ರೆಸ್ಟ್ ಮಾಡಿಬಿಡ್ರಿ. ನಾನು ಅನ್ನ ಬೇಯಿಸಲು ಕುಕ್ಕರ್ ಇಡುವೆ,” ಎಂದ ಕಕ್ಕುಲತೆಯಿಂದ.
“ನಿಮಗ್ಯಾಕ್ರಿ ತೊಂದರೆ….? ನಾನೀಗ ಆರಾಮವಾಗೀನಿ… ನೀವು ಓದುವುದಿದ್ದರೆ ಓದಿಕೊಳ್ಳಿರಿ. ನಾನೇ ಅಡುಗೆ ಮನೆಗೆ ಹೋಗುವೆ,” ಎಂದಳು ಶೈಲಜಾ.
“ನನ್ಗೆ ಸದ್ಯ ಓದುವುದೇನಿಲ್ಲ. ನೀವು ಇನ್ನೊಂಚೂರು ರೆಸ್ಟ್ ಮಾಡಿದ್ರೆ ನಾಳೆ ಆಫೀಸಿಗೆ ಹೋಗೋದಿಕ್ಕೆ ಸರಳ ಆಗುತ್ತೆ, ಪ್ಲೀಸ್…..” ಗೋಗರೆಯುವ ದನಿಯಲ್ಲಿ ಹೇಳಿದ ಅಥರ್ವ.
ಅಥರ್ವನ ದೀನಭಾವ ಶೈಲಜಾಳ ಹೃದಯ ತಟ್ಟಿತು. ಗೋಣಾಡಿಸುತ್ತಾ ಅಷ್ಟಕ್ಕೇ ಸುಮ್ಮನಾದಳು. ಅಥರ್ವ ನಿಧಾನವಾಗಿ ಅಡುಗೆ ಮನೆಯತ್ತ ಹೆಜ್ಜೆ ಹಾಕಿದ.
ಅಥರ್ವ ಮೊದಲಿನಿಂದಲೂ ಅತ್ತಿಗೆಗೆ ರೀ ಹಚ್ಚೇ ಮಾತಾಡುತ್ತಿದ್ದರೆ ಶೈಲಜಾ ಕೂಡ ಅಥರ್ವನಿಗೆ ರೀ ಹಚ್ಚೇ ಮಾತಾಡುವುದನ್ನು ರೂಢಿಸಿಕೊಂಡಿದ್ದಳು. ಅಷ್ಟರಲ್ಲಿ ಶೈಲಜಾಳ ಮನದ ಪರದೆಯ ಮುಂದೆ ನೆನಪಿನ ರೀಲು ಬಿಚ್ಚತೊಡಗಿತು.
ಪ್ರಭುರಾಜ್ ಮತ್ತು ಶೈಲಜಾರಿಗೆ ಅಂದು ಮೊದಲ ರಾತ್ರಿ. ನವ ದಂಪತಿಗಳಿಗೆ ರಸಮಯ ಘಳಿಗೆ ಅನುಭವಿಸು ತವಕ, ಕಾತುರ ಇತ್ತು. ಸುಖವನ್ನು ಬಾಚಿಕೊಳ್ಳುವ ತುಡಿತವಿತ್ತು. ಇಬ್ಬರೆದೆಗಳಲ್ಲೂ, ಬಿಗಿದಪ್ಪುಗೆ, ಸಿಹಿ ಚುಂಬನ, ಪರಸ್ಪರ ಕಿಚಾಯಿಸುವಿಕೆ, ಮುಟ್ಟುವಿಕೆ, ತಟ್ಟುವಿಕೆಗಳೆಲ್ಲ ಸಾಂಗವಾಗಿ ಮುಗಿದು ಅಂತಿಮ ಘಟ್ಟದ ಶೃಂಗಾರ ಕಾವ್ಯದ ರಚನೆಗೆ ಮುನ್ನುಡಿ ಬರೆಯಬೇಕೆಂದಿದ್ದರು.
“ಪ್ರಭೂ, ನಮಗೀಗಾಲೇ ಇಬ್ಬರು ಮಕ್ಕಳಿದ್ದಾರೆ. ಅವರಿಬ್ಬರಿಗೆ ಮತ್ತೆ ಮಕ್ಕಳನ್ನು ಜೊತೆಯಾಗಿಸುವುದು ಸದ್ಯಕ್ಕೆ ಬೇಡವೆಂದೆನಿಸುತ್ತಿದೆ ನನಗೆ….” ಎಂದು ಮೆಲ್ಲಗೆ ಪಿಸುಗುಟ್ಟಿದ್ದಳು ಶೈಲಜಾ.
ಭೋರ್ಗರೆಯುವ ನದಿ ಸಮುದ್ರವನ್ನು ಸೇರುವಂತೆ ಶೈಲಜಾಳನ್ನು ಸೇರುವ ಅವಸರದಲ್ಲಿದ್ದ ಪ್ರಭುರಾಜನ ತವಕ ಟುಸ್ಸೆಂದಿತು. ಹಾವು ಮೆಟ್ಟಿದವನಂತೆ ಅವಳಿಂದ ದೂರ ಸರಿದ.
“ಹ್ಞಾಂ….! ಏನಂದೀ….? ನಿನಗೀಗಾಗಲೇ ಎರಡು ಮಕ್ಕಳಿವೆಯೇ….? ನೀನೆಂಥಹ ಜಾರಿಣಿ ಎಂದು ಒಂದು ವರ್ಷದ ನಮ್ಮ ಪ್ರೀತಿಯ ಪಯಣದಲ್ಲಿ ನನ್ನರಿವಿಗೆ ಬರಲೇ ಇಲ್ಲ. ಥೂ! ನಿನ್ನ ಮುಖಕ್ಕಿಷ್ಟು ಬೆಂಕಿಹಾಕ….” ಬುಸುಗುಡತೊಡಗಿದ್ದ ಪ್ರಭುರಾಜ್.
“ಪ್ರಭೂ, ನಾನು ಹಾಗೆಂದೆನೇ…..? ನನಗೆ ಎರಡು ಮಕ್ಕಳಿವೆ ಎಂದು ನಾನು ಹೇಳಲಿಲ್ಲ. ನಮಗೆ ಎರಡು ಮಕ್ಕಳಿವೆ ಎಂದು ಹೇಳಿದೆ. ನಾನು ಜಾರಿಣಿ ಅಲ್ಲವೇ ಅಲ್ಲ. ನಾನು ಅಪ್ಪಟ ಭಾರತದ ನಾರಿ. ನೀನು ಹೀಗೆ ಅಂದಿದ್ದಕ್ಕೆ ನನಗೇನೂ ಬೇಸರವಿಲ್ಲ……” ಶೈಲಜಾಳ ಮಾತು, ನೋಟದಲ್ಲಿ ತುಂಟತನವಿತ್ತು. ಮುಸಿ ಮುಸಿ ನಗತೊಡಗಿದಳು.
“ನಮಗ್ಯಾವಾಗ ಎರಡು ಮಕ್ಕಳು ಹುಟ್ಟಿದವು…..? ಅದೇನಂತ ತುಸು ಬಿಡಿಸಿ ಹೇಳಬಾರದೇ…..?” ತಿಳಿದುಕೊಳ್ಳುವ ತವಕ, ಕುತೂಹಲ ಪ್ರಭುರಾಜನಿಗೆ.
“ಪ್ರಭೂ, ಅದೇ ನಿಮ್ಮ ತಮ್ಮ ಅಥರ್ವ ಮತ್ತು ತಂಗಿ ಕೀರ್ತನಾ ಇಬ್ಬರೂ ನಮಗೆ ಮಕ್ಕಳಿದ್ದ ಹಾಗೆ ಅಲ್ವಾ….? ಅವರ ವಿದ್ಯಾಭ್ಯಾಸ, ಮದುವೆ ಮತ್ತು ಭಾವೀ ಜೀವನದ ಬಗ್ಗೆ ನಮ್ಮಿಬ್ಬರಿಗೂ ಜವಾಬ್ದಾರಿ ಇರುವುದರಿಂದ ಸದ್ಯ ಅಂದರೆ ಮುಂದಿನ ಮೂರ್ನಾಲ್ಕು ವರ್ಷಗಳವರೆಗೆ ನಮಗೆ ಮಕ್ಕಳು ಬೇಡವೆಂದೆ ಅಷ್ಟೇ.”
“ಅಬ್ಬಾ! ಶೈಲೂ, ನನ್ನ ಜೀವನನ್ನೇ ಹಿಂಡಿಬಿಟ್ಟಿದ್ದಿಯಲ್ಲೇ….? ನನ್ನ ಮನಸ್ಸಿಗೆ ಈಗ ಸಮಾಧಾನವಾಯಿತು. ಸಾರಿ ಶೈಲೂ, ದುಡುಕಿ ಏನೇನೋ ಅಸಹ್ಯಕರ ಶಬ್ದ ಬಳಸಿ ಬಯ್ದುಬಿಟ್ಟೆ. ದುಡುಕು ಸ್ವಭಾವದ ಈ ಹುಡುಗನನ್ನು ಕ್ಷಮಿಸಿಬಿಡು. ಮತ್ತೆ ನೀನು ನನ್ನ ಒಡಹುಟ್ಟಿದವರನ್ನು ನಿನ್ನ ಮಕ್ಕಳೇ ಎಂದು ಭಾವಿಸಿರುವುದನ್ನು ತಿಳಿದು ನನ್ನ ಮನದುಂಬಿ ಬರುತ್ತಿದೆ. ಹೃದಯ ಅರಳುತ್ತಿದೆ.
“ನಿನ್ನ ಭಾವನೆಗಳಿಗೆ ಶರಣು ಶರಣಾರ್ಥಿಗಳು. ನಿನ್ನಂಥ ಸದ್ಗುಣಿ, ಸಂಪನ್ನೆಯನ್ನು ಪಡೆದಿರುವ ನಾನೇ ಭಾಗ್ಯಶಾಲಿ. ಪ್ಲೀಸ್ಕ್ಷಮಿಸಿ ಬಿಡು ನನ್ನ ಒರಟುತನಕ್ಕೆ,” ಎನ್ನುತ್ತಾ ಪ್ರಭುರಾಜ್ ಶೈಲಜಾಳನ್ನು ಬಿಗಿದಪ್ಪಿಕೊಂಡು ಮನಸಾರೆ ಮುದ್ದಿಸಿದ.
ಅನ ತೋಳ್ತೆಕ್ಕೆಯಲ್ಲಿ ಅವಳು, ಅವಳ ತೋಳ್ತೆಕ್ಕೆಯಲ್ಲಿ ಅವನು ಅದೆಷ್ಟೋ ಹೊತ್ತು ಬಿಗಿದಪ್ಪಿಕೊಂಡು ಸಮಯದ ಪರಿವೇ ಇಲ್ಲದೇ ಸಂಭ್ರಮಿಸಿದರು.
“ಶೈಲೂ, ನಿನ್ನಂತೆ ನಾನೂ ಯೋಚಿಸಿದ್ದೇನೆ. ಜವಾಬ್ದಾರಿಯನ್ನು ನಿಭಾಯಿಸಿದ ನಂತರಷ್ಟೇ ನಮ್ಮದೆನ್ನುವ ಕುಡಿಗಳಿಗೆ ಪ್ರಯತ್ನಿಸೋಣ. ಸದ್ಯ ನಮಗೆ ಮಕ್ಕಳು ಬೇಡ. ಅದಕ್ಕೆ ಮುಂಜಾಗರೂಕತೆ ಕ್ರಮ ತೆಗೆದುಕೊಂಡೇ ಮುಂದುವರಿಯೋಣ, ಸರೀನಾ….?”
“ನನ್ನ ಪ್ರಭು ತುಂಬಾ ಜಾಣ.”
“ನನ್ನ ಹುಡುಗಿಯಷ್ಟು ನಾನು ಜಾಣನಲ್ಲ ಬಿಡು,” ಎಂದೆನ್ನುತ್ತಾ ಪ್ರಭುರಾಜ್ ಶೈಲಜಾಳನ್ನು ಆವರಿಸಿದ. ನವದಂಪತಿಗಳ ತುಂಟಾಟಕ್ಕೆ ಮಿತಿ ಇರಲಿಲ್ಲ.
ಪ್ರಭುರಾಜ್ ಮತ್ತು ಶೈಲಜಾರದು ಅಂತರ್ಜಾತೀಯ ಮದುವೆ. ಪ್ರಭುರಾಜ್ ಸ್ಮಾರ್ಥ ಬ್ರಾಹ್ಮಣನಾದರೆ ಶೈಲಜಾ ಲಿಂಗಾಯತ ಮತದವಳು. ಇಬ್ಬರೂ ಕೊಪ್ಪಳ ಜಿಲ್ಲೆಯವರೇ. ಆದರೆ ತಾಲ್ಲೂಕು ಮತ್ತು ಊರುಗಳು ಬೇರೆ ಬೇರೆ ಅಷ್ಟೇ. ಬಿಇ ಮುಗಿಯುವುದಕ್ಕಿಂತ ಮೊದಲೇ ಪ್ರಭುರಾಜನಿಗೆ ಕ್ಯಾಂಪಸ್ ಸೆಲೆಕ್ಷನ್ ಆಗಿತ್ತು. ಒಳ್ಳೇ ಹೆಸರಾಂತ ಸಾಫ್ಟ್ ವೇರ್ ಕಂಪನಿ. ಗ್ರಾಮವೊಂದರ ನಿವಾಸಿಗಳಾಗಿದ್ದ ಅವನ ತಂದೆ ಜಯತೀರ್ಥ ಶಾಸ್ತ್ರೀಗಳು ಗ್ರಾಮದ ನಂದೀಶ್ವರ ದೇವಸ್ಥಾನದ ಅರ್ಚಕರು. ತಾಯಿ ಪುಷ್ಪಾಬಾಯಿ ಗೃಹಿಣಿ. ಮೂರು ಜನ ಮಕ್ಕಳು. ಪ್ರಭುರಾಜ್, ಅಥರ್ವ, ಕೀರ್ತನಾ. ಮೂವರೂ ಸ್ವಯಂ ಪ್ರತಿಭೆಯಲ್ಲಿ ಅರಳಿದ ಕುಸುಮಗಳು. ಓದಿನಲ್ಲಿ ಯಾವಾಗಲೂ ಮುಂದು.
ಅರ್ಚಕ ವೃತ್ತಿಯ ಅಲ್ಪಸ್ವಲ್ಪ ಆದಾಯದಲ್ಲಿ ಜಯತೀರ್ಥ ಶಾಸ್ತ್ರೀಗಳು ಹಿರೇ ಮಗನ ವಿದ್ಯಾಭ್ಯಾಸದ ಖರ್ಚನ್ನು ನಿಭಾಯಿಸಿದ್ದರು. ಬಿಇ ಮುಗಿಯುತ್ತಲೇ ಪ್ರಭುರಾಜ್ ಕೆಲಸಕ್ಕೆ ಸೇರಿಕೊಂಡ. ತಮ್ಮ, ತಂಗಿಯ ವಿದ್ಯಾಭ್ಯಾಸದ ಖರ್ಚು ಪ್ರಭುರಾಜನ ಹೆಗಲಿಗೆ ಬಿತ್ತು. ಇಪ್ಪತ್ನಾಲ್ಕು ತುಂಬುತ್ತಲೇ ಅವನ ಹೆತ್ತವರು ಪ್ರಭುರಾಜನಿಗೆ ಕನ್ಯಾನ್ವೇಷಣೆಯಲ್ಲಿ ತೊಡಗಿದರು. ಪ್ರಭುರಾಜ್ ಕೆಂಪನೆಯ ಮೈಬಣ್ಣದ ಸುಂದರಾಂಗ. ಮುಂದಿನ ಒಂದು ವರ್ಷದಲ್ಲಿ ಹಲವಾರು ಹುಡುಗಿಯರನ್ನು ನೋಡಿದ. ದಿನಗಳು ಸರಿದು ಹೋದವೇ ವಿನಾ ಪ್ರಭುರಾಜನಿಗೆ ಸೂಕ್ತ ಜೋಡಿಯಾಗುವಂತಹ ಹುಡುಗಿಯೇ ಸಿಗಲಿಲ್ಲ. ಹಲ್ಲುಬ್ಬಿ, ಅಕ್ರಾಳ ವಿಕ್ರಾಳ ರೂಪದ, ಡಬಲ್ ಡೆಕ್ಕರ್, ಇದ್ದಿಲು ಬಣ್ಣದ ಚೆಂದವಿಲ್ಲದ ಹುಡುಗಿಯರೇ ಕನ್ಯಾನ್ವೇಷಣೆಯ ಹಾದಿಯಲ್ಲಿ ಕಂಡಿದ್ದರು.
ಅಷ್ಟರಲ್ಲಿ ಬೆಂಗಳೂರಿನ ವರ್ಣಿತಾ ಎಂಬ ಟೆಕ್ಕಿಯೊಬ್ಬಳಿಗೆ ಪ್ರಭುರಾಜನ ಪರಿಚಯವಾಗಿತ್ತು. ಹ್ಯಾಂಡ್ಸಮ್ ಗೈ ಪ್ರಭುರಾಜ್ ಅವಳಿಗೆ ಇಷ್ಟವಾಗಿಬಿಟ್ಟ. ಪ್ರಭುರಾಜನಿಗೂ ಚೆಂದದ ಹುಡುಗಿ ವರ್ಣಿತಾ ಇಷ್ಟವಾದಳು. ಇಬ್ಬರ ಪ್ರೀತಿಯ ತಿರುಗಾಟ ಶುರುವಾಯಿತು. ಆಗರ್ಭ ಶ್ರೀಮಂತರ ಮನೆತನ ಅವಳದು. ಒಂದು ಶುಭ ಗಳಿಗೆಯಲ್ಲಿ ವರ್ಣಿತಾ ತಾನು ಪ್ರಭುರಾಜನನ್ನು ಪ್ರೀತಿಸುವುದಾಗಿ ತನ್ನೆದೆಯ ಹಂಬಲವನ್ನು ತೆರೆದಿಟ್ಟಳು.
ಅಳೆದೂ ತೂಗಿ ಪ್ರಭುರಾಜ್ ತಾನೂ ಅವಳನ್ನು ಪ್ರೀತಿಸುವುದಾಗಿ ಘೋಷಿಸಿದ. ಜೊತೆಗೆ ತನ್ನ ಮನೆಯ ಹಣಕಾಸು ಸ್ಥಿತಿಯ ಬಗ್ಗೆ ಸೂಕ್ಷ್ಮವಾಗಿ ಹೇಳಿದ.
“ಪ್ರಭೂ, ನಿನ್ನ ಮನೆತನದ ಸ್ಥಿತಿ ಹೇಗೇ ಇರಲಿ, ನೋ ಪ್ರಾಬ್ಲಂ. ಆದರೆ ನನ್ನದು ಒಂದೆರಡು ಕಂಡೀಶನ್ಸ್ ಇದೆ. ಅವುಗಳನ್ನು ನೀನು ಫುಲ್ ಫಿಲ್ ಮಾಡಿದರೆ ಸಾಕು ಅಷ್ಟೆ…..?” ಮೆಲ್ಲಗೇ ಬಾಂಬ್ ಸಿಡಿಸಿದಳು ವರ್ಣಿತಾ. ಪ್ರಭು ಒಂದಿಷ್ಟು ವಿಚಲಿತನಾದ, `ತನ್ನ ಪ್ರೀತಿ ಸುಖಾಂತ್ಯ ಕಂಡಿದೆ ಎನ್ನುವಷ್ಟರಲ್ಲಿ ಕಂಡೀಶನ್ಸ್ ಹಾಕುತ್ತಿದ್ದಾಳಲ್ಲ….? ಇರಲಿ, ಅವೇನೆಂದು ಮೊದಲು ಕೇಳಿಸಿಕೊಳ್ಳೋಣಾ…’ ಎಂದು ಮನದೊಳಗೆ ಗುಣಾಕಾರ, ಭಾಗಾಕಾರ ಹಾಕಿದ.
“ವರ್ಣಿತಾ. ಅದೇನೆಂದು ಹೇಳಿಬಿಡಲ್ಲ…..?” ಕೇಳಿದ.
“ಮದುವೆಯ ನಂತರ ರಾಹು, ಕೇತು, ಶನಿಗಳು ನಮ್ಮ ಜೊತೆಗಿರಬಾರದು…..” ಎಂದಳು.
“ಹಾಗೆಂದರೇನು….? ಈ ಕೋಡ್ ವರ್ಡ್ಸ್ ನನಗೆ ಅರ್ಥವಾಗುತ್ತಿಲ್ಲ……?” ಎಂದ ಕುತೂಹಲದಿಂದ.
“ಅಷ್ಟೂ ಅರ್ಥವಾಗುತ್ತಿಲ್ಲವೇ….? ರಾಹು, ಕೇತು ಅಂದರೆ ನಿನ್ನ ತಾಯಿ ತಂದೆ ಅಂತ. ಶನಿಗಳು ಎಂದರೆ ನಿನ್ನ ಒಡಹುಟ್ಟಿದವರು ಕಣೋ. ಅವರ್ಯಾರೂ ನನಗೆ ಬೇಕಿಲ್ಲ. ನಿನ್ನ ಪ್ರೀತಿಯೊಂದಿದ್ದರೆ ಸಾಕು ಅಷ್ಟೇ…..” ಎಂದಳು ನಿಷ್ಠೂರವಾಗಿ.
“ವರ್ಣಿತಾ, ನೀನು ಹೇಳುತ್ತಿರುವುದೇನು…..? ತಾಯಿ ತಂದೆಯರಿಲ್ಲದೇ ನಾವು ಧರೆಗೆ ಉದಯಿಸಿ ಬಂದಿದ್ದೇವೇನು…..? ಒಡಹುಟ್ಟಿದವರಿಲ್ಲದ ಕುಟುಂಬ ಒಂದು ಕುಟುಂಬವೇ….? ಇದೊಂಥರ ಅಮಾನವೀಯತೆಯ ಅಟ್ಟಹಾಸ ಕಣೇ…..” ಎಂದು ವಿಚಲಿತನಾಗಿ ಹೇಳಿದ.
“ಇಂತಹ ಪಾಠಗಳು ನನಗೆ ಸೇರುವುದಿಲ್ಲ ಪ್ರಭೂ…. ನಮ್ಮಪ್ಪ ನಮಗಾಗಿ ಬೆಂಗಳೂರಿನಲ್ಲಿ ಒಂದು ಮನೆಯನ್ನೂ ಗಿಫ್ಟ್ ಆಗಿ ಕೊಡುವುದಾಗಿ ಒಪ್ಪಿಕೊಂಡಿದ್ದಾರೆ. ನನ್ನ ಕಂಡೀಶನ್ಸ್ ಗೆ ಒಪ್ಪುವುದಾದರೆ ನಮ್ಮಿಬ್ಬರ ಜೋಡಿ ಒಂದಾಗುವುದು. ಇಲ್ಲವಾದರೆ ನನ್ನ ದಾರಿ ನನಗೆ, ನಿನ್ನ ದಾರಿ ನಿನಗೆ. ನಿನ್ನ ಪ್ರೀತಿಗೆ ಎಳ್ಳುನೀರು ಬಿಟ್ಟು ಬೇರೊಬ್ಬನಲ್ಲಿ ಪ್ರೀತಿಯನ್ನು ಹುಡುಕಿಕೊಳ್ಳುವೆ, ಅಂತಹ ತಾಕತ್ತೂ ನನಗಿದೆ….” ನೇರವಾಗಿ ದಿಟ್ಟವಾಗಿ ಹೇಳಿದ್ದಳು ವರ್ಣಿತಾ.
`ಅವಳು ಮಾತನಾಡುತ್ತಿಲ್ಲ, ಅವಳ ಶ್ರೀಮಂತಿಕೆ ಮಾತಾಡುತ್ತಿದೆ. ಇಂಥವಹಳ ಶ್ರೀಮಂತಿಕೆಯಿಂದ ನನಗೇನೂ ಆಗಬೇಕಿಲ್ಲ,’ ಎಂದು ಮನದೊಳಗೆ ಯೋಚಿಸಿ ಪ್ರಭುರಾಜ್ ವರ್ಣಿತಾಳ ಪ್ರೀತಿಗೆ ಅಂದೇ ಎಳ್ಳು ನೀರು ಬಿಟ್ಟ.
ತದನಂತರ ಪರಿಚಯವಾದದ್ದು ಅವನ ಕಂಪನಿಯ ಪಕ್ಕದ ಕಂಪನಿಯ ಆಫೀಸಿನಲ್ಲಿ ಕೆಲಸ ಮಾಡುತ್ತಿದ್ದ ಶೈಲಜಾ ಎಂಬ ನಿರಾಭರಣ ಸುಂದರಿ. ಅವನ ಜಿಲ್ಲೆಯವಳೇ. ಪರಿಚಯ ಸ್ನೇಹವಾಗಿ, ಸ್ನೇಹ ಪ್ರೀತಿಗೆ ತಿರುಗಲು ಬಹಳ ದಿನಗಳೇನೂ ಬೇಕಾಗಲಿಲ್ಲ. ಆಗ ಗೊತ್ತಾಗಿದ್ದು ಇಬ್ಬರ ಜಾತಿ ಬೇರೆ ಬೇರೆ ಎಂಬುದು. ಅಷ್ಟರಲ್ಲಿ ಅವರ ಪ್ರೀತಿ ಆಕಾಶದೆತ್ತರಕ್ಕೆ ಬೆಳೆದಿತ್ತು. ಶೈಲಜಾ ಬಡ ರೈತಾಪಿ ಕುಟುಂಬದಿಂದ ಬಂದವಳು. ಚಿಕ್ಕಂದಿನಲ್ಲಿಯೇ ಹೆತ್ತವರನ್ನು ಕಳೆದುಕೊಂಡ ನತದೃಷ್ಟೆ. ಬೆಳೆದದ್ದು ದೊಡ್ಡಪ್ಪ ದೊಡ್ಡಮ್ಮನ ಪೋಷಣೆಯಲ್ಲಿ.
“ಪ್ರಭೂ, ನನ್ನ ನಿನ್ನ ಜಾತಿ ಬೇರೆ ಇರುವುದರಿಂದ ನಮ್ಮ ಮದುವೆಗೆ ನಿನ್ನ ದೊಡ್ಡಪ್ಪ ದೊಡ್ಡಮ್ಮನ ಒಪ್ಪಿಗೆ ಅವಶ್ಯಕತೆ ಇದೆ. ನಾನು ಅವರನ್ನು ಒಪ್ಪಿಸುವ ಭಗೀರಥ ಪ್ರಯತ್ನ ಮಾಡುವೆ,” ಮೆಲ್ಲಗೆ ವಿಷಯ ಪ್ರಸ್ತಾಪಿಸಿದ್ದಳು ಶೈಲಜಾ.
“ಶೈಲೂ, ನಾನೂ ನಮ್ಮ ಮನೆಯಲ್ಲಿ ಅದನ್ನೇ ಮಾಡಬೇಕಿದೆ. ಮೇಲಾಗಿ ನನ್ನ ತಮ್ಮ ತಂಗಿಯರ ವಿದ್ಯಾಭ್ಯಾಸದ ಜವಾಬ್ದಾರಿಯೂ ನನ್ನ ಮೇಲಿದೆ. ಅದಕ್ಕೆ ನಿನ್ನ ಸಹಕಾರದ ಅಗತ್ಯವಿದೆ,” ಎಂದು ಪ್ರಭುರಾಜ್ ತನ್ನ ಮನೆಯ ಸ್ಥಿತಿಗತಿಯ ಬಗ್ಗೆಯೂ ಬಿಚ್ಚಿಟ್ಟಿದ್ದ.
“ನಿನ್ನ ತಮ್ಮ, ತಂಗಿಯ ವಿದ್ಯಾಭ್ಯಾಸ, ಮದುವೆಯ ಬಗ್ಗೆ ನನ್ನ ಸಹಕಾರ ಇದ್ದೇ ಇರುತ್ತದೆ. ನಮ್ಮ ತ್ಯಾಗದಲ್ಲಿ ಅವರ ಏಳಿಗೆಯನ್ನು ಕಂಡುಕೊಳ್ಳೋಣ. ಅವರ ಏಳಿಗೆಯಲ್ಲಿ ನಾವು ಸಾರ್ಥಕತೆ ಅನುಭವಿಸಿ ಸಂಭ್ರಮಿಸೋಣ. ಅವರಿಬ್ಬರನ್ನೂ ನನ್ನ ಮಕ್ಕಳೆಂದೇ ಭಾವಿಸುವೆ,” ಶೈಲಜಾ ಬಿಚ್ಚು ಮನಸ್ಸಿನಿಂದ ಹೇಳಿದ್ದಳು.
ಪ್ರಭುರಾಜ್ ಮತ್ತು ಶೈಲಜಾ ತಮ್ಮ ತಮ್ಮ ಮನೆಗಳಲ್ಲಿ ವಿಷಯ ಪ್ರಸ್ತಾಪಿಸಿದ್ದರು. ಜಾತಿಯ ಆಧಾರದ ಮೇಲೆ ಎಲ್ಲರೂ ತಿರಸ್ಕರಿಸಲು ಪ್ರಯತ್ನಿಸಿದ್ದು ನಿಜವೇ. ಕೊನೆಗೆ ಶೈಲಜಾಳ ಹಟ ಅವಳ ದೊಡ್ಡಪ್ಪ ದೊಡ್ಡಮ್ಮನ ಮನಸ್ಸುಗಳನ್ನು ಗೆಲ್ಲುವುದರಲ್ಲಿ ಯಶಸ್ಸು ಪಡೆದಿತ್ತು.
“ಮುಂದಿನ ಇಪ್ಪತ್ತು ಮೂವತ್ತು ವರ್ಷಗಳಲ್ಲಿ ಸಮಾಜದ ರೀತಿ ನೀತಿಗಳಲ್ಲಿ ಆಗುವ ಬದಲಾವಣೆಗಳನ್ನು ಕಂಡವರ್ಯಾರು…? ಸದ್ಯಕ್ಕಂತೂ ಶೈಲಜಾಳ ಪ್ರೀತಿಯನ್ನು ಸ್ವೀಕರಿಸಿದರಾಯಿತು,” ಎಂದು ಶೈಲಜಾಳ ವಿಶಾಲ ಮನೋಭಾವದ ಬಗ್ಗೆ ತಿಳದುಕೊಂಡ ಪ್ರಭುರಾಜನ ಹೆತ್ತವರು ಸಂತಸದಿಂದ ಮದುವೆಗೆ ಹಸಿರು ನಿಶಾನೆ ತೋರಿಸಿದ್ದರು.
ಅಂತೂ ಪ್ರಭುರಾಜ್ ಶೈಲಜಾರ ಕಲ್ಯಾಣೋತ್ಸವ ಯಾವ ಅಡೆತಡೆ ಇಲ್ಲದೇ ಸಂಭ್ರಮದಿಂದ ಜರುಗಿದ್ದಲ್ಲದೇ ಶೈಲಜಾ ಪ್ರಭುರಾಜನ ಮನೆ ತುಂಬಿದಳು. ಶೈಲಜಾ ತಾನು ಹೇಳಿದ್ದಂತೆ ಅಥರ್ವ ಮತ್ತು ಕೀರ್ತನಾರನ್ನು ತನ್ನ ಮಕ್ಕಳೇ ಎಂದು ಘೋಷಿಸಲು ಮುಂದಾದಳು.
ಅಂದು ತನ್ನ ಸಹೋದ್ಯೋಗಿ ಗೆಳತಿಯ ಪಾರ್ಟಿಯನ್ನು ಮುಗಿಸಿಕೊಂಡು ಮನೆ ಸೇರುವಷ್ಟರಲ್ಲಿ ರಾತ್ರಿ ಹನ್ನೊಂದು ಗಂಟೆ ಸಮೀಪಿಸುತ್ತಿತ್ತು. ಪ್ರಭುರಾಜ್ ಕಂಪನಿಯ ಜರೂರಿ ಕೆಲಸದ ನಿಮಿತ್ತ ಚೆನ್ನೈಗೆ ಹೋಗಿದ್ದ. ಕೀರ್ತನಾ ಕಾಲೇಜಿನ ಪ್ರವಾಸಕ್ಕೆ ಹೋಗಿದ್ದಳು. ಮನೆಯಲ್ಲಿ ಅಂದೂ ಶೈಲಜಾ ಮತ್ತು ಅಥರ್ವ ಇಬ್ಬರೇ.
“ಯಾಕ್ರೀ ವೈನೀ, ಬಾಳ ಲೇಟಾತಲ್ಲ….? ಹೆಂಗ್ ಬಂದ್ರಿ….?”
“ಫಂಕ್ಷನ್ ತುಸು ಲೇಟಾಗಿ ಸ್ಟಾರ್ಟ್ ಆಯ್ತು. ಹಂಗಾಗಿ ಬರೋದಿಕ್ಕೆ ತಡವಾಯಿತು. ಕ್ಯಾಬ್ ಮಾಡ್ಕೊಂಡು ಬಂದೆ…..” ಎಂದಳು ಶೈಲಜಾ.
“ಹಾದ್ರಾ….? ಇಷ್ಟೊತ್ತಿನ್ಯಾಗ ಕ್ಯಾಬ್ ನಲ್ಲಿ ಒಬ್ರೇ ಬರೋದು ಅಷ್ಟು ಸೇಫಲ್ಲ ವೈನೀ…. ನೀವು ಹೇಳಿದ್ರೆ ನಾನೇ ಅಲ್ಲಿಗೆ ಬಂದು ಕರ್ಕೊಂಡು ಬಂದ್ಬಿಡ್ತಿದ್ದೆ. ನೀವೇನೋ ಎಂಟೂವರೆ, ಒಂಬತ್ತಕ್ಕೆಲ್ಲಾ ಬರ್ಬೋದು ಅಂತ ನಾ ಅಂದ್ಕೊಂಡಿದ್ದೆ.”
“ನಾನೂ ಹಾಗೇ ಅಂದ್ಕೊಂಡೆ…. ಆದ್ರೆ ನಿಮಗ್ಯಾಕೆ ತೊಂದ್ರೆ ಅಂತ ಅಂದ್ಕೊಂಡು ದೇವರ ಮ್ಯಾಲೆ ಭಾರ ಹಾಕಿ ಕ್ಯಾಬಲ್ಲಿ ಬಂದ್ಬಿಟ್ಟೆ. ಹಂಗೆಲ್ಲ ಏನೂ ಆಗಂಗಿಲ್ಲ…… ಅದಿರ್ಲಿ, ನಿಮ್ದು ಊಟ…..?” ಎಂದು ಮೈದುನನ್ನು ಕೇಳಿದಳು.
“ಆಗ್ಲೇ ಒಂಬತ್ತಕ್ಕೇ ನಾ ಊಟ ಮಾಡ್ದೆ. ನಿಮ್ದೇ ದಾರಿ ನೋಡ್ತಾ ಕೂತಿದ್ದೆ….”
“ಹೌದಾ….?” ಎಂದೆನ್ನುತ್ತಾ ಶೈಲಜಾ ತನ್ನ ರೂಮಿನತ್ತ ಹೆಜ್ಜೆ ಹಾಕುತ್ತಿದ್ದಾಗ ಅಥರ್ವನತ್ತ ದೃಷ್ಟಿ ಹರಿಸಿದಳು. ಅಥರ್ವ ಅವಳನ್ನೇ ನೋಡುತ್ತಿದ್ದುದನ್ನು ಗಮನಿಸದೇ ಇರಲಿಲ್ಲ.
ಒಂದ್ಹತ್ತು ನಿಮಿಷದಲ್ಲಿ ಶೈಲಜಾ ಬಟ್ಟೆ ಬದಲಿಸಿ ರಾತ್ರಿ ಉಡುಗೆ ಧರಿಸಿ ಬಂದಳು. ಅಥರ್ವ ಸೋಫಾದಲ್ಲಿ ಕುಳಿತುಕೊಂಡು ಟಿವಿಯಲ್ಲಿ ಬರುತ್ತಿದ್ದ ಸುದ್ದಿಯ ಕಡೆಗೆ ಗಮನಹರಿಸಿದ್ದ.
“ಅಥರ್ವ, ಆಗಲೇ ತುಂಬಾ ಹೊತ್ತಾಗಿದೆ. ಮಲಗಿಬಿಡ್ರೆಲ್ಲ….? ಈ ನ್ಯೂಸ್ ಬೆಳಗಿನ ತನಕ ಇದ್ದದ್ದೇ….” ಎಂದು ಅಥರ್ವನನ್ನು ಎಬ್ಬಿಸಿದಳು.
“ಹೂಂನ್ರೀ ವೈನೀ…. ನೀವು ಮಲಗಿಬಿಡ್ರಿ,” ಎಂದೆನ್ನುತ್ತಾ ಟಿವಿ ಆಫ್ ಮಾಡಿದ.
“ವೈನೀ…. ಇವತ್ತು ಫಂಕ್ಷನ್ ಗೆ ಸೀರೆ ಉಟ್ಕೊಂಡು ಹೋಗಿದ್ರಲ್ಲ. ಆ ಸೀರೆಯಲ್ಲಿ ನೀವು ಬಾಳಾ ಬೊಂಬಾಟಾಗಿ ಕಾಣ್ತಿದ್ರಿ. ಅದ್ಕೇ ಸೀರೆಯೇ ನಾರಿಗೆ ಭೂಷಣ ಅಂತ ಹೀರೇರು ಹೇಳೋದು ಸರಿ ಐತೆ ನೋಡ್ರಿ…..” ಎಂದ ಅಥರ್ವ.
“ಹೌದೇನ್ರಿ…..?” ಎಂದೆನ್ನುತ್ತಾ ಶೈಲಜಾ ಅಥರ್ವನತ್ತ ದೃಷ್ಟಿ ಹರಿಸಿದಾಗ ಅವನು ಆಗಲೂ ಅವಳನ್ನೇ ಬಿಟ್ಟ ಕಣ್ಣುಗಳಿಂದ ನೋಡುತ್ತಿದ್ದ.
`ಇವತ್ತು ಇವನು ಹಿಂಗ್ಯಾಕೆ ನನ್ನ ನೋಡ್ಲಿಕತ್ಯಾನ….? ಹೊಸ ಟ್ರೆಂಡಿನ ಡ್ರೆಸ್ ಧರಿಸಿದಾಗ, ಹೊಸ ಡಿಸೈನಿನ ಸೀರೆ ಉಟ್ಕೊಂಡಾಗ ಇವನು ಹೀಗೆ ಹೊಗಳುವುದು, ನೋಡುವುದು ಹೊಸದೇನಲ್ಲ ಬಿಡು,’ ಎಂದು ಶೈಲಜಾ ಅಂದುಕೊಂಡಳಾದರೂ ತುಸು ಹೆದರಿಕೊಂಡಿದ್ದು ನಿಜ.
“ಸರಿ ವೈನೀ…. ಗುಡ್ ನೈಟ್…” ಎಂದು ಅಥರ್ವ ಹಾಲಿನಲ್ಲಿದ್ದ ದಿವಾನಾದ ಮೇಲಿದ್ದ ತನ್ನ ಹಾಸಿಗೆಯನ್ನು ಸರಿಪಡಿಸಲು ಮುಂದಾದ. ಅದು ಎರಡು ಬೆಡ್ ರೂಮಿನ ಫ್ಲ್ಯಾಟ್. ಒಂದು ರೂಮು ಪ್ರಭು ಶೈಲಜಾರದು. ಇನ್ನೊಂದು ಕೀರ್ತನಾಳದು. ಅಥರ್ವ ಮಲಗುವುದು ಹಾಲಿನಲ್ಲಿಯೇ. ಅಷ್ಟರಲ್ಲಿ ಶೈಲಜಾ, “ಅಥರ್ವ, ಯಾಕೋ ವಾಂತಿ ಬಂದಂಗಾಗ್ಲಕತ್ತೇದ….” ಎನ್ನುವಷ್ಟರಲ್ಲಿ ಅಥರ್ವ ಅವಳತ್ತ ದೌಡಾಯಿಸಿದ. ಅವನು ಅವಳ ಸಮೀಪ ಹೋಗುವುದಕ್ಕೂ ಅವಳು ವಾಂತಿ ಮಾಡಿಕೊಳ್ಳುವುದಕ್ಕೂ ಸರಿಹೋಯಿತು. ಅವನುಟ್ಟಿದ್ದ ಲುಂಗಿಯ ಮೇಲೆ ವಾಂತಿ ಎಲ್ಲಾ ಸಿಡಿಯಿತು. ಅಷ್ಟೊತ್ತಿಗೆ ಶೈಲಜಾ ನಿತ್ರಾಣಳಾಗಿದ್ದನ್ನು ಅಥರ್ವ ಗಮನಿಸಿದ್ದ. ತಕ್ಷಣ ಅವಳ ತೋಳನ್ನು ಹಿಡಿದುಕೊಂಡು ಜನರಲ್ ಬಾಥ್ ರೂಮಿಗೆ ಕರೆದುಕೊಂಡು ಹೋಗಿ ಸ್ಟೂಲ್ ಮೇಲೆ ಕೂಡ್ರಿಸಿದ.
ಅವಳ ಒಂದು ಕೈ ಹಣೆಯ ಮೇಲಿತ್ತು, ಇನ್ನೊಂದು ಕೈ ಎದೆಯನ್ನು ಒತ್ತಿಕೊಂಡು ಹಿಡಿದಿತ್ತು. ಅವಳು ಪಾರ್ಟಿಯಲ್ಲಿ ತಿಂದಿದ್ದೆಲ್ಲ ಹೊರಗೆ ಬಂದಿತ್ತು. ವಾಂತಿಯಾಗುವುದು ಸಂಪೂರ್ಣ ನಿಂತ ನಂತರ ಶೈಲಜಾ ಬಾಯಿ ತೊಳೆದುಕೊಂಡಳು. ಆಗಲ್ ಸುಸ್ತು ಆವರಿಸಿತ್ತು. ಅವಳ ತೋಳಿಡಿದುಕೊಂಡೇ ಅಥರ್ವ ಅವಳನ್ನು ಅವರ ರೂಮಿಗೆ ಕರೆದುಕೊಂಡು ಹೋದ. ಅವಳು ಹಾಗೆಯೇ ಹಾಸಿಗೆಗೆ ಒರಗಿದಳು. ಸಮಯ ಆಗಲೇ ರಾತ್ರಿ ಹನ್ನೆರಡೂವರೆ ದಾಟಿತ್ತು.
“ವೈನೀ…. ಹೀಗೆ ಮಲಗಿಕೊಳ್ಳಿರಿ. ನಾನು ಒಂದಿಷ್ಟು ಬಿಸಿ ನೀರಿಗೆ ನಿಂಬೆ ಹಣ್ಣು ಹಿಂಡಿ ಪಾನಕ ಮಾಡಿಕೊಂಡು ಬರುವೆ,” ಎನ್ನುತ್ತಾ ಅಥರ್ವ ಅಡುಗೆ ಮನೆಯತ್ತ ದೌಡಾಯಿಸಿದ. ಎರಡು ಲೋಟದಷ್ಟು ನೀರನ್ನು ಕಾಯಿಸಿದ. ಅದಕ್ಕೆ ಒಂದಿಷ್ಟು ಸಕ್ಕರೆ, ಉಪ್ಪು ಸೇರಿಸಿ, ಮೇಲೆ ನಿಂಬೆ ರಸ ಹಿಂಡಿ ಅದನ್ನು ಲೋಟಕ್ಕೆ ಹಾಕಿಕೊಂಡು ಬಂದು ಶೈಲಜಾಳ ಮುಂದೆ ಹಿಡಿದು, “ವೈನೀ…. ಇದನ್ನು ತಕ್ಷಣ ಕುಡಿಯಿರಿ. ಮೈಯಲ್ಲಿ ಚೈತನ್ಯ ಬರುತ್ತೆ,” ಎಂದ.
ಅವಳು ಮಾತಿಲ್ಲದೇ ಎದ್ದು ಕುಳಿತು ಗುಟುಕು ಗುಟುಕಾಗಿ ಪಾನಕವನ್ನು ಹೀರಿದಳು. ತುಂಬಾ ಹಿತವೆನಿಸಿತು. ಹಾಗೇ ಮತ್ತೆ ಹಾಸಿಗೆಗೆ ಒರಗಿದಳು. ಅಂಗಾತ ಮಲಗಿದ ಅವಳ ದೃಷ್ಟಿ ಅಥರ್ವ ಮೇಲೆಯೇ ಇತ್ತು.
“ಇನ್ನೂ ಒಂದು ಲೋಟ ಪಾನಕವಿದೆ. ತುಸು ಹೊತ್ತಿನ ನಂತರ ಕುಡಿಯುವಿರಂತೆ. ಹಾಗೇ ನಿದ್ರೆ ಬಂದರೆ ಮಲಗಿಬಿಡಿ. ಹಾಗೇನಾದರೂ ಅಸ್ವಸ್ಥತೆ ಕಂಡರೆ, ನನ್ನನ್ನು ಕೂಗಿ. ನಾನಿಲ್ಲೇ ಹಾಲ್ ನಲ್ಲಿ ಮಲಗಿರ್ತೀನಿ. ಆಸ್ಪತ್ರೆಗೆ ಹೋಗೋಣವೆಂದರೆ ಹೋಗೋಣ,” ಎಂದ.
“ಆಸ್ಪತ್ರೆಗೇನು ಬೇಡ. ಆದರೆ ಹಾಲ್ ನಲ್ಲಿ ವಾಂತಿಯಿಂದಾಗಿ ಗಲೀಜಾಗಿದೆಯಲ್ಲಾ…..?” ಎಂದಳು.
“ಅದರ ಬಗ್ಗೆ ಚಿಂತಿಸಬೇಡಿ….” ಎನ್ನುತ್ತಾ ಖಾಲಿ ಲೋಟವನ್ನು ತೆಗೆದುಕೊಂಡು ಹೊರಗೆ ಹೋದ ಅಥರ್ವ. ಹಾಲ್ ನಲ್ಲಿ ಆಗಲೇ ವಾಸನೆ ಹಿಡಿದಿತ್ತು. ಅಥರ್ವ ಮೆಲ್ಲಗೇ ಎಲ್ಲವನ್ನೂ ಸ್ವಚ್ಛ ಮಾಡಿ. ಹಾಗೆಯೇ ಹಾಸಿಗೆಯ ಮೇಲೆ ಅಡ್ಡಾಗಿದ್ದ. ಅರ್ಧ ತಾಸು ಕಳೆದಿತ್ತೇನೋ…? ಶೈಲಜಾ ಕೂಗು ಹಾಕಿದಳು. ಅಥರ್ವ ದೌಡಾಯಿಸಿ ಹೋದ.
“ಅಥರ್ವ…. ಯಾಕೋ ಹೊಟ್ಟೆ ತುಂಬಾ ನೋಯ್ತಿದೆ ಕಣ್ರೀ…..?” ಅವಳ ಧ್ವನಿಯಲ್ಲಿ ನೋವಿನ ಎಳೆ ಇತ್ತು, ಮುಖವನ್ನು ಕಿವುಚುತ್ತಿದ್ದಳು.
“ವೈನೀ, ಫುಡ್ ಪಾಯಿಸನಿಂಗ್ ಆಗಿರ್ಬೇಕು. ವಾಂತಿಯಾಗಿದ್ದರಿಂದ ಹೊಟ್ಟೆಯಂತೂ ಕ್ಲೀನಾಗಿದೆ. ಹೊಟ್ಟೆ ನೋವಿಗೆ ಒಂದು ಮಾತ್ರೆ, ಜೊತೆಗೆ ಇನ್ನೊಂದು ಲೋಟ ಪಾನಕ ಕೊಡುವೆ,” ಎನ್ನುತ್ತಾ ಅಥರ್ವ ಮನೆಯಲ್ಲಿದ್ದ ಮೆಡಿಸಿನ್ ಕಿಟ್ ತಡಕಾಡಿದ. ಹೊಟ್ಟೆ ನೋವಿನ ಮಾತ್ರೆ ಸಿಕ್ಕಿತು. ಒಂದು ಮಾತ್ರೆ ನುಂಗಲು ಹೇಳಿ, ಒಂದು ಲೋಟ ಬಿಸಿ ನೀರು ಕಾಯಿಸಿ ಪಾನಕ ಕುಡಿಸಿದ.
“ಅಲ್ರೀ ಅಥರ್ವ, ಅವತ್ತು ರೇಖಿ ಚಿಕಿತ್ಸೆ ಕೊಟ್ಟು ತಲೆನೋವು ಮಾಯ ಮಾಡಿದ್ರಿ. ಇವತ್ತೂ ಹೊಟ್ಟೆನೋವಿಗೆ ರೇಖಿ ಚಿಕಿತ್ಸೆ ಕೊಟ್ಬಿಡ್ರಿ… ಬೇಗ ಕಡಿಮೆಯಾಗ್ಬೋದು….” ಎಂದಳು.
“ಸರಿ ವೈನೀ… ಹಂಗಾದ್ರೆ ಮಂಚದ ಈ ತುದಿಗೆ ಮಲಗಿಬಿಡ್ರಿ…..” ಶೈಲಜಾ ಅವನು ಹೇಳಿದಂತೆ ಮಲಗಿ ಕಣ್ಣು ಮುಚ್ಚಿಕೊಂಡಳು.
ಅಥರ್ವ ಅವಳ ಹೊಟ್ಟೆಯ ಮೂರಿಂಚು ಮೇಲೆ ಅಂಗೈ ಇಟ್ಟುಕೊಂಡು ಕಣ್ಮುಚ್ಚಿದ.
“ರೀ ಅಥರ್ವ, ಹೊಟ್ಟೆಯ ಮೇಲೆ ಇಟ್ಟೇ ರೇಖಿ ಮಾಡ್ರಿ. ಹೀಗೆ ಮಾಡಿದ್ರೆ ರಿಸಲ್ಟ್ ಹೇಗಿರುತ್ತೆ ಅಂತ ನೋಡುವೆ.”
“ಸರಿ ಅತ್ತಿಗೆ…..” ಎಂದೆನ್ನುತ್ತಾ ಅಥರ್ವ ನಿಧಾನವಾಗಿ ತನ್ನ ಅಂಗೈಗಳನ್ನು ಶೈಲಜಾಳ ಹೊಟ್ಟೆಯ ಮೇಲೆ ಇಟ್ಟು ಕಣ್ಮುಚ್ಚಿಕೊಂಡ. ಅವನ ಹಸ್ತ ಸ್ಪರ್ಶದಲ್ಲಿ ಏನೋ ಒಂದು ಆಪ್ತಭಾವದ ಸೆಳವಿದೆ ಎಂದು ಗುರುತಿಸಿದಳು ಶೈಲಜಾ. ಸುಮಾರು ಏಳೆಂಟು ನಿಮಿಷ ಅವನು ಧ್ಯಾನಾಸಕ್ತನಾದ. ಅಷ್ಟರಲ್ಲಿ ಶೈಲಜಾಳ ಹೊಟ್ಟೆನೋವು ಬಹುಮಟ್ಟಿಗೆ ಶಮನವಾಗಿತ್ತು. ತಾನೂ ಕಣ್ತೆರೆದು ವೈನಿಗೂ ಕಣ್ತೆರೆಯಲು ಹೇಳಿದ.
“ಅಥರ್ವ, ಜ್ವರ ಇರುವ ಹಾಗಿದೆ,” ಹಣೆ, ಕುತ್ತಿಗೆಯ ಮೇಲೆ ಕೈಯಿಟ್ಟುಕೊಂಡಿದ್ದ ಶೈಲಜಾ ಹೇಳಿದಳು. ಅಥರ್ವನಿಗೂ ಹಣೆಯ ಮೇಲೆ ಕೈಯಿಟ್ಟು ನೋಡಲು ಹೇಳಿದಳು. ಅವನೂ ಹಾಗೆ ಮಾಡಿದ.
“ಅಂಥದ್ದೇನಿಲ್ಲ, ತುಸು ಬೆಚ್ಚಗಿದೆ. ಈಗ ಸುಮ್ಮನೇ ಮಲಗಿಬಿಡ್ರಿ. ಹಾಗೇನಾದ್ರೂ ತ್ರಾಸೆನಿಸಿದ್ರೆ ಕೂಗಿ ಕರೆದುಬಿಡ್ರಿ,” ಎನ್ನುತ್ತಾ ಹಾಲ್ ನತ್ತ ಹೆಜ್ಜೆ ಹಾಕಿದ.
“ನನ್ನಿಂದ ನಿಮ್ಮ ನಿದ್ದೇನೂ ಹಾಳಾಯ್ತು….” ಶೈಲಜಾ ಹೇಳಿದ್ದು ಅಥರ್ವನಿಗೂ ಕೇಳಿಸಿತು.
ಅಥರ್ವನಿಗೆ ಬೇಗನೇ ನಿದ್ದೆ ಬರಲಿಲ್ಲ. ತಾಸೊತ್ತಿನ ನಂತರ ಆಗಷ್ಟೇ ನಿದ್ದೆಗೆ ಜಾರಿದ್ದ. ಶೈಲಜಾಳ ಕೂಗು ಅಥರ್ವನನ್ನು ಎಚ್ಚರಿಸಿತು. ಅಥರ್ವ ಓಡೋಡುತ್ತಾ ಶೈಲಜಾಳ ಕೋಣೆಗೆ ಹೋದ. ಅವಳು ಮುಲುಗುತ್ತಿದ್ದಳು. ಅವಳ ಹಣೆಯ ಮೇಲೆ ಕೈಯಿರಿಸಿ ಪರೀಕ್ಷಿಸಿದ. ಬೆಂಕಿಯಂತೆ ಸುಡುತ್ತಿತ್ತು. ಜ್ವರದ ತಾಪದಲ್ಲಿ ಆಗಾಗ ಏನೇನೋ ಕನವರಿಸುತ್ತಿದ್ದಳು, ಮುಲುಗುತ್ತಿದ್ದಳು. ಯಾವುದೂ ಸ್ಪಷ್ಟವಾಗಿ ಅರ್ಥವಾಗುತ್ತಿರಲಿಲ್ಲ. ಮನೆಯಲ್ಲಿದ್ದ ಥರ್ಮಾಮೀಟರ್ನಿಂದ ಪರೀಕ್ಷಿಸಿದ. ನೂರಾ ಮೂರು ಡಿಗ್ರಿ ಫ್ಯಾರನ್ಹಿಟ್ಇತ್ತು. ಅಡುಗೆ ಮನೆಗೆ ದೌಡಾಯಿಸಿದ. ಒಂದಿಷ್ಟು ತೆಳು ಬಟ್ಟೆ, ಒಂದು ಪಾತ್ರೆಯಲ್ಲಿ ನೀರು ತೆಗೆದುಕೊಂಡು ಹೋದ. ವೈನಿಯ ಹಣೆಗೆ ಒದ್ದೆ ಬಟ್ಟೆಯ ಪಟ್ಟಿ ಹಾಕಿದ. ಅವಳ ಮಂಚದ ಪಕ್ಕದಲ್ಲೇ ಒಂದು ಕುರ್ಚಿ ಎಳೆದುಕೊಂಡು ಕುಳಿತುಕೊಂಡ. ತಣ್ಣೀರಿನ ಬಟ್ಟೆ ಹಣೆಯನ್ನು ಮುಟ್ಟುತ್ತಲೇ ಶೈಲಾಜಾಳಿಗೆ ಎಚ್ಚರವಾಗಿತ್ತು. ಜ್ವರ ಬಂದಿರುವ ಬಗ್ಗೆ ತಿಳಿಸಿದ. ಹಣೆಗೆ ರೇಖಿ ಮಾಡಲು ತಿಳಿಸಿದಳು. ಅಥರ್ವ ಅವಳ ಹಣೆಯ ಮೇಲೆ ಕೈಯಿಟ್ಟು ಚಿಕಿತ್ಸೆ ಆರಂಭಿಸಿ ಮನಸ್ಸನ್ನು ಕೇಂದ್ರೀಕರಿಸಿ ಧ್ಯಾನಾಸಕ್ತನಾದ. ಐದಾರು ನಿಮಿಷಗಳಲ್ಲಿ ಜ್ವರ ಒಂದಿಷ್ಟು ತಹಬಂದಿಗೆ ಬಂದಿತ್ತು. ಮತ್ತೊಮ್ಮೆ ಥರ್ಮಾಮೀಟರ್ ನಿಂದ ಮತ್ತೆ ಪರೀಕ್ಷಿಸಿದ. ತೊಂಬತ್ತೊಂಬತ್ತು ಡಿಗ್ರಿ ತೋರಿಸುತ್ತಿತ್ತು. ಒದ್ದೆ ಬಟ್ಟೆ ಹಾಕುವುದನ್ನು ಮುಂದುವರಿಸಿದ.
ಹಾಗೆಯೇ ನಾಲ್ಕಾರು ಬಿಸ್ಕೆಟ್ ತಿನ್ನಿಸಿ ಒಂದು ಪ್ಯಾರಾಸಿಟಾಮಲ್ ಮಾತ್ರೆ ನುಂಗಿಸಿದ. ಬೆಳಗಾಗುವವರೆಗೂ ಒದ್ದೆ ಬಟ್ಟೆ ಹಾಕುವುದನ್ನು ಮುಂದುವರಿಸಿದ. ಮಧ್ಯೆ ಮತ್ತೊಂದು ಸಾರಿ ರೇಖಿ ಚಿಕಿತ್ಸೆ ಕೊಟ್ಟ. ನಡುವೆ ನೂರರ ಗಡಿ ದಾಟಿದ್ದ ಜ್ವರ ಬೆಳಗು ಹರಿಯುವಷ್ಟರಲ್ಲಿ ಸಾಮಾನ್ಯ ಸ್ಥಿತಿಗೆ ಬಂದಿತ್ತು. ಶೈಲಜಾಳ ಮೊಗದಲ್ಲಿ ಲವಲವಿಕೆ ಮೂಡಿತ್ತು. ಮನಸ್ಸು ಉಲ್ಲಸಿತವಾಗಿತ್ತು. ಮುಂಜಾನೆ ಹೊತ್ತಿಗೆ ಗಡದ್ದಾಗಿ ನಿದ್ದೆಗೆ ಶರಣಾಗಿದ್ದಳು. ಅಥರ್ವ ಇಡೀ ರಾತ್ರಿ ನಿದ್ದೆ ಇಲ್ಲದೇ ಅವಳ ಆರೈಕೆಯಲ್ಲಿ ತೊಡಗಿದ್ದ. ಮೂಡಣದಲ್ಲಿ ಕೆಂಪೊಡೆಯುವ ಮುನ್ನ ನಿದ್ರಾದೇವಿ ಅವನನ್ನು ತನ್ನ ಮಡಿಲಿಗೆ ಸೇರಿಸಿಕೊಳ್ಳುವ ಹುನ್ನಾರದಲ್ಲಿ ಯಶಸ್ವಿಯಾಗಿದ್ದಳು.
ಮನೆಯ ಕಾಲಿಂಗ್ ಬೆಲ್ ಉಲಿದಾಗಲೇ ಶೈಲಜಾಳಿಗೆ ಎಚ್ಚರವಾದದ್ದು. ಆಗ ಸಮಯ ಬೆಳಗಿನ ಎಂಟು ಗಂಟೆ. ಕಣ್ಣು ಬಿಟ್ಟು ನೋಡಿದಾಗ ಅಥರ್ವ ಕುರ್ಚಿಯಲ್ಲೇ ಮಲಗಿದ್ದನ್ನು ಗಮನಿಸಿದಳು. ಹಣೆಯ ಮೇಲೆ ಒದ್ದೆ ಬಟ್ಟೆಯ ಪಟ್ಟಿ ಇತ್ತು. ದೇಹ ನಿತ್ರಾಣಗೊಂಡಿತ್ತು. ಅವನನ್ನು ಎಬ್ಬಿಸುವ ಪ್ರಯತ್ನ ಮಾಡದೆ, ಹೇಗೋ ಸಂಭಾಳಿಸಿಕೊಂಡು ಎದ್ದು ತೂರಾಡುತ್ತಾ ಬಾಗಿಲು ತೆರೆದಳು. ಕೀರ್ತನಾ ಪ್ರವಾಸ ಮುಗಿಸಿಕೊಂಡು ಬಂದಿದ್ದಳು.”
ಅತ್ತಿಗೆ ಹುಷಾರಿಲ್ವಾ….?” ಎಂದು ಕೇಳುತ್ತಾ ಕೀರ್ತನಾ ತನ್ನ ಬ್ಯಾಗನ್ನು ಅಲ್ಲೇ ಇಟ್ಟು ಶೈಲಜಾಳ ತೋಳಿಗೆ ಆಸರೆ ಕೊಟ್ಟು ಕೋಣೆಗೆ ಕರೆತಂದಳು. ಅಥರ್ವ ಅಲ್ಲೇ ಕುರ್ಚಿಯಲ್ಲಿ ಮಲಗಿದ್ದನ್ನು ಕಂಡು ಗಾಬರಿಗೊಂಡಳು. ಶೈಲಜಾ ಚುಟುಕಾಗಿ ನಿನ್ನೆ ರಾತ್ರಿ ನಡೆದಿದ್ದನ್ನು ಹೇಳಿದಳು. ಅಷ್ಟರಲ್ಲಿ ಅಥರ್ವನಿಗೆ ಎಚ್ಚರವಾಗಿತ್ತು. ಕಣ್ಣು ಬಿಟ್ಟವನೇ ತಡಬಡಾಯಿಸಿ, “ವೈನೀ, ಹೇಗಿದ್ದೀರಿ….? ಕೀರ್ತನಾ ನೀನ್ಯಾವಾಗ ಬಂದಿ….?” ಎಂದು ಕೇಳಿ. ಕೀರ್ತನಾ ತಾನು ಈಗಷ್ಟೇ ಬಂದೆ ಎಂದು ತಿಳಿಸಿದಳು.
ಶೈಲಜಾ ಹತ್ತಿರ ಬಂದು ಅಥರ್ವನ ತಲೆಗೂದಲಲ್ಲಿ ಬೆರಳಾಡಿಸುತ್ತಾ, “ನಾನು ಗೆಲುವಾಗಿದ್ದೇನೆ ಕಣ್ರೀ….. ಒಂದಿಷ್ಟು ನಿಶ್ಶಕ್ತಿ ಅಷ್ಟೆ. ನೀವು ತುಂಬಾ ತೊಂದರೆ ತೆಗೆದುಕೊಂಡುಬಿಟ್ರಿ. ಇಡೀ ರಾತ್ರಿ ನಿದ್ದೆ ಇಲ್ಲದೇ ನನ್ನ ಸೇಲೆ ಮಾಡಿದ್ರಿ. ಸ್ವಂತ ಹೆತ್ತಮ್ಮನನ್ನು ನೋಡಿಕೊಳ್ಳುವಂತೆ ನನ್ನ ಆರೈಕೆ ಮಾಡಿದ್ರಿ….” ಎನ್ನುವಷ್ಟರಲ್ಲಿ ಶೈಲಜಾ ಭಾವಕಳಾಗಿ ಗದ್ಗದಿತಳಾದಳು.
“ವೈನೀ, ಅತ್ತಿಗೆ ಎಂದರೆ ತಾಯಿಗೆ ಸಮಾನ ಅಂತ ಹೇಳ್ತಾರೆ. ನಮ್ಮ, ನಿಮ್ಮ ಜಾತಿ ಬೇರೆ ಬೇರೆಯಾಗಿದ್ರೂ ನೀವು ಅಣ್ಣನಿಗೆ ಜೊತೆಯಾಗಿ ಬಂದ ಮೇಲೆ ನಮ್ಮನ್ನು ನಿಮ್ಮ ರಕ್ತವನ್ನು ಹಂಚಿಕೊಂಡ ಮಕ್ಕಳಂತೆಯೇ ನೋಡಿಕೊಂಡು ಬಂದಿದ್ದೀರಿ. ಮಗನಿಗೆ ತಾಯಿಯ ಸೇವೆ ಮಾಡುವ ಅವಕಾಶ ಬಂದಿತ್ತು, ಮಾಡಿದೆ ಅಷ್ಟೇ. ಅದರಲ್ಲೇನೂ ವಿಶೇಷವಿಲ್ಲ.
“ನನಗಿಂತ ನೀವು ಐದಾರು ವರ್ಷ ದೊಡ್ಡವರಿರಬಹುದೇನೋ….? ಈಗಿನ ಕಾಲದಲ್ಲಿ ಮದುವೆಯಾಗುತ್ತಲೇ ಹುಡುಗಿಯರೆಲ್ಲರೂ ಗಂಡನೊಂದಿಗೆ ಬೇರೆ ಮನೆ ಮಾಡುತ್ತಾರೆ. ತಾವಾಯಿತು, ತಮ್ಮ ಮಕ್ಕಳಾಯಿತು ಎಂಬಂತಿರುತ್ತಾರೆ. ಅವರಿಗೆ ಅತ್ತೆಮಾವ ಬೇಡ ಮೈದುನ ನಾದಿನಿಯರು ಬೇಡ, ಗಂಡನ ಅಕ್ಕಅಣ್ಣಂದಿರು ಬೇಡ.
“ಆದರೆ ನೀವು ಗುಣದಲ್ಲಿ ಮೇರುಪಂಕ್ತಿಯಲ್ಲಿ ನಿಲ್ಲುತ್ತೀರಿ. ನಿಮ್ಮ ಸ್ವಭಾವ, ಗುಣಗಳು ಭೂಮಿತಾಯಿಯ ಗುಣಗಳೂ ಒಂದೇ. ನಿಮ್ಮ ಆಸೆ ಆಕಾಂಕ್ಷೆಗಳನ್ನು ಬದಿಗಿಟ್ಟು ನಮ್ಮ ಭವಿಷ್ಯದ ಜವಾಬ್ದಾರಿ ಹೊತ್ತು ನಮ್ಮನೆಗೆ ಬಂದಿರಿ. ನನ್ನ, ಕೀರ್ತನಾಳ ವಿದ್ಯಾಭ್ಯಾಸ, ಊಟ ಉಪಚಾರದ ಹೊಣೆ ಹೊತ್ತಿರಿ. ನಮಗಾಗಿ ನಿಮ್ಮ ಸ್ವಂತದ ಕುಡಿಗಳಿಗೆ ಜೀವ ತುಂಬುವುದನ್ನು ಮುಂದೂಡುತ್ತಿದ್ದೀರಿ,” ಅಥರ್ವನೂ ಭಾವುಕನಾದ.
“ಯಾವ ಜನ್ಮದ ಋಣಾನುಬಂಧವೋ ಏನೋ….? ನಮ್ಮ ಸಂಬಂಧ ಇಷ್ಟು ಭಾವನಾತ್ಮಕವಾಗಿ ಇರುತ್ತದೆಂದು ನಾನು ಕನಸು ಮನಸ್ಸಿನಲ್ಲಿಯೂ ಊಹಿಸಿರಲಿಲ್ಲ. ನೀವು ನನಗೆ ಮಕ್ಕಳಾಗಿರುವಿರಿ. ನಾನೇ ಅದೃಷ್ಟವಂತಳು…. ಧನ್ಯಳು!” ಭಾವುಕಳಾಗಿದ್ದ ಶೈಲಜಾ ಅಥರ್ವ ಮತ್ತು ಕೀರ್ತನಾರನ್ನು ತಬ್ಬಿಕೊಂಡು ಗದ್ಗದಿತಳಾದಳು.