ಕಥೆ - ಬಿಂಡಿಗನವಿಲೆ ಭಗವಾನ್
ತನ್ನ ಮಗನನ್ನು ನೋಡಿಕೊಳ್ಳಲು ಕೆಲಸದಾಳು ಮಾದೇವಿ ಸುಮಾರು ಒಂದೂವರೆ ವರ್ಷ ಕಾಲ ಇತರ ಮನೆಗೆಲಸಗಳನ್ನು ಬದ್ದಿಗೊತ್ತಿ, ಮದುವೆಯಾದ ಮೇಲೂ ಮಧುಚಂದ್ರಕ್ಕೆ ಹೋಗದೆ ಜೀವ ತೇಯ್ದದ್ದು ವೀಣಾಳಿಗೆ ಚೆನ್ನಾಗಿ ನೆನಪಿದೆ. ಅಂಥವಳಿಗೊಂದು ಸಮಸ್ಯೆ ಎದುರಾದಾಗ, ತಾನೇ ಅದಕ್ಕೆ ಪರಿಹಾರ ಕಂಡುಕೊಂಡಳು ವೀಣಾ. ಮಾದೇವಿಯ ಸಮಸ್ಯೆಗೆ ವೀಣಾ ಹುಡುಕಿದ ಪರಿಹಾರವೇನು.....?
ತೇಜಸ್ ನಿನ್ನೆಯೇ ಅಪ್ಪನ ಬಳಿ ಹೋಂವರ್ಕ್ ಮಾಡಿಸಿಕೊಂಡಿದ್ದರಿಂದ ಇವತ್ತು ಭಾನುವಾರ ಪೂರ್ಣ ಬಿಡುವು.
``ರೀ, ರಾಮನಗರದ ಹತ್ತಿರ ಜಾನಪದ ಲೋಕ ಬಹಳ ಚೆನ್ನಾಗಿದೆಯಂತೆ ನಮ್ಮ ಆಫೀಸಿನ ಸುಶೀಲಾ ಹೇಳ್ತಿರ್ತಾಳೆ. ಅಲ್ಲಿಗೆ ಹೋಗೋಣವೇ?'' ಎಂದಳು ವೀಣಾ.
``ಆಯ್ತು. ಈಗ್ಲೇ ಏಳಾಯ್ತು. ಬೇಗ ನಡಿ. ತೇಜೂನ ಎಬ್ಬಿಸು,'' ಎಂದ ಅರವಿಂದ.
``ಸ್ವಲ್ಪ ಇರಿ. ಮೂಲೆ ಮನೆ ಮುಂದೆ ಬಟ್ಟೆ ಒಣಗಾಕಿದ್ಯಾ ನೋಡ್ತೀನಿ,'' ಅಂತ ರಮಾ ಮನೆಯ ಗೇಟು ತೆರೆದಳು.
``ಅರೆ! ಅವರ ಮನೆಯ ಒಗೆದ ಬಟ್ಟೆಗೂ ನಾವು ಹೊರಡೋಕು ಏನೇ ಸಂಬಂಧ?'' ಎಂದ ಅರವಿಂದ.
``ಖಂಡಿತಾ ಇದೆ ರೀ. ಮಾದೇವಿ ಮೊದಲು ಅಲ್ಲಿಗೆ ಬಂದು ಪಾತ್ರೆ, ಬಟ್ಟೆ ಮುಗಿಸಿ ಆಮೇಲೆ ಹಿಂದಿನ ಬೀದಿಲಿರೊ ಒಂದು ಮನೆ ಮಾಡೀನೇ ಅವಳು ನಮ್ಮನೆಗೆ ಬರೋದು,'' ಎಂದು ಒಗಟೊಡೆದಳು.
``ಹಾಗಾದ್ರೆ ಒಟ್ಟು ಎಂಟು ಮನೇಲಾದ್ರೂ ಕೆಲಸ ಮಾಡ್ತಾಳೆ ಅನ್ನು,'' ಅಂದ .
ವೀಣಾ, ``ಹೌದು ಅದಕ್ಕೆ ತಾನೇ ಅವಳು ಸ್ಕೂಟೀಲಿ ಓಡಾಡೋದು,'' ಎಂದಳು.
ವೀಣಾ ಮಾದೇವಿಯ ದಿನಚರಿ ತೆರೆದಿಟ್ಟಳು, ``ಬೆಳಗ್ಗೆ ಐದಕ್ಕೇ ಎದ್ದು ತನ್ನ ಮನೆ ಕೆಲಸ ಇದ್ದಿದ್ದೇ ತಾನೇ, ಅಡುಗೆ ಮಾಡಬೇಕು, ಗಂಡಂಗೆ ಫ್ಯಾಕ್ಟರಿಲಿ ಕೆಲಸ. ಅವನಿಗೆ ಬುತ್ತಿಯಾದಿಯಾಗಿ ಬೇಕು ಬೇಡ ನೋಡ್ಬೇಕು. ಅವಳಿಗೆ ಮಕ್ಕಳಿಲ್ಲ. ಅದೇನೋ ಸಮಸ್ಯೆಯಂತೆ. ಕ್ಯಾನ್ಸರ್ನಿಂದ ತೀರಿಕೊಂಡ ತನ್ನ ಅಕ್ಕನ ಮಗನನ್ನು ಸಾಕುತ್ತಿದ್ದಾಳೆ. ಸ್ಕೂಲಿಗೆ ಆ ಹುಡುಗನ್ನ ರೆಡಿ ಮಾಡಬೇಕು. ಆಮೇಲೆ ತಾನಷ್ಟು ತಿಂದು ಕೆಲಸದ ಮನೆಗಳನ್ನು ಒಂದೊಂದಾಗಿ ನಿಭಾಯಿಸಬೇಕು.
``ಎಲ್ಲರೂ ಒಂದೇ ತರಹ ಇದ್ದಿದ್ದರೆ ಸಮಸ್ಯೆಯೇ ಇರದು. ಆದರೆ ಮನೆ ಮನೆಯದು ಒಂದೊಂದು ಕಥೆ. ಕೆಲವರು ನಿಧಾನವಾಗಿ ಬಾ ಯಾರೂ ಎದ್ದಿರೋಲ್ಲ ಅಂದ್ರೆ, ಮತ್ತೆ ಕೆಲವರು ಪಾತ್ರೆ ತೊಳೆದ ಮೇಲೆ ಬಟ್ಟೆ ಒಗೆಯೋಕೆ ಅರ್ಧ ಗಂಟೆನಾದ್ರೂ ಬಿಟ್ಟು ಬಾ, ನಮ್ಮನೇಲಿ ಸ್ನಾನ ನಿಧಾನ ಅಂತಾರೆ. ಅಜ್ಜ, ಅಜ್ಜಿ ಇದ್ರೆ ಅವರ ಸೇವೇನೂ ಮಾಡಬೇಕಾಗುತ್ತೆ. ಒಂದು ಮನೇಲಿ ಅಜ್ಜನನ್ನು ವಾರಕ್ಕೆರಡು ಬಾರಿ ಡಯಾಲಿಸಿಸ್ಗೆ ಕರ್ಕೊಂಡ್ಹೊಗ್ಬೇಕಂತೆ. ಈಚೆಗೆ ಗಂಡ ನಾಲ್ಕು ಕಾಸು ಜಾಸ್ತಿ ಓಡಾಡಿದ್ರೆ ಪಕೋಡ ಜೊತೆಗೆ ಬಾಟಲ್ಲು ಇಷ್ಟಪಡ್ತಾನಂತೆ.... ಅರ್ಥವಾಯ್ತ ರೀ,'' ಎಂದಳು.
ಪರವಾಗಿಲ್ಲವೇ ಅರ್ಧಾಂಗಿ ಇಷ್ಟೊಂದು ನವಿರಾಗಿ ಮಾತಾಡುವುದು ಯಾವಾಗ ಕಲಿತಳು ಅನ್ನಿಸಿತು, ತನ್ನ ಗುಟ್ಟು ಗುಟ್ಟಾಗಿಯೇ ಉಳಿದ್ರೆ ಸಾಕೆಂದು ನೀಳವಾಗಿ ಉಸಿರೆಳೆದುಕೊಂಡ. ಅವನ ಆಫೀಸಿನ ಗೆಳೆಯರು ತಿಂಗಳಿಗೊಮ್ಮೆಯಾದರೂ ಪಾರ್ಟಿ ಸೇರುವುದಿದೆ. ಮಾತು ಇನ್ನೆಲ್ಲಿಗಾದರೂ ಹೋದೀತೇನೋ ಎಂಬ ಆತಂಕವಾಗಿ ಮತ್ತೆ ನಡಿ ನಡಿ ತಡವಾಗುತ್ತೆ ಎಂದು ಅವಸರಿಸಿದ. ಸರಣೀ ರಜೆಯಲ್ಲಿ ಅವರು ಎಲ್ಲಿಗಾದರೂ ಪ್ರವಾಸ ಹೋಗಿ ಬರುವುದು ಮಾಮೂಲು. ಅದರಲ್ಲೂ ತೇಜಸ್ ಹುಟ್ಟಿದ ಮೇಲೆ ಆ ಸಡಗರಕ್ಕೆ ಸಾಟಿಯಿಲ್ಲ. ಮಗುವಿನ ಆನಂದದಲ್ಲಿ ತಂದೆ, ತಾಯಿ ಪರಮಾನಂದಿಸುತ್ತಾ ರಂತೆ.