ಸಿಂಗಾಪೂರದಿಂದ ಸಂಗೀತಾ ಉತ್ಸಾಹಭರಿತ ಧ್ವನಿಯಲ್ಲಿ ಫೋನ್ ನಲ್ಲಿ ತಂದೆ ವಿಕಾಸ್ ಹಾಗೂ ತಾಯಿ ರಾಧಾಗೆ, ``ನಾನು ಶೀಘ್ರದಲ್ಲಿಯೇ ಆದಿತ್ಯನನ್ನು ಭೇಟಿ ಮಾಡಿಸ್ತೀನಿ. ಬಹಳ ಒಳ್ಳೆಯ ಹುಡುಗ. ನನ್ನ ಜೊತೆಯಲ್ಲೇ ಅವನ ಎಂಬಿಎ ಕೂಡ ಮುಗಿತಿದೆ. ನಾವಿಬ್ಬರೂ ಭಾರತಕ್ಕೆ ಬಂದ ಬಳಿಕ ಮುಂದಿನ ಯೋಜನೆ ಮಾಡುತ್ತೇವೆ,'' ಎಂದು ಹೇಳಿದಳು.
ಅವಳ ಮಾತು ಕೇಳಿಸಿಕೊಂಡ ವಿಕಾಸ್, ``ಒಳ್ಳೆಯದಾಯ್ತು ಸಂಗೀತಾ, ಬೇಗನೇ ಬನ್ನಿ. ಆದಿತ್ಯ ಯಾವ ಕಡೆಯ ಹುಡುಗ....?'' ಎಂದು ಖುಷಿಯಿಂದಲೇ ಕೇಳಿದರು.
``ಅವನು ಮೈಸೂರಿನವನು.''
``ಅರೆ ವಾಹ್! ನೀನು ಭಾರತೀಯ ಹುಡುಗನನ್ನೇ ಆಯ್ಕೆ ಮಾಡಿಕೊಂಡೆ. ನೀನು ಯಾವುದಾದರೂ ವಿದೇಶಿ ಹುಡುಗನನ್ನು ಆಯ್ಕೆ ಮಾಡಿಕೊಳ್ಳಬಹುದೆಂದು ನಿನ್ನ ಅಮ್ಮ ಅಂದುಕೊಂಡಿದ್ದಳು.''
ಆ ಕಡೆಯಿಂದ ಸಂಗೀತಾ ಜೋರಾಗಿ ನಕ್ಕಳು. ``ಅಮ್ಮನಿಗೆ ಏನು ಅನಿಸುತ್ತೋ ಅದು ಎಂದಾದರೂ ನಿಜ ಆಗುತ್ತಾ ಅಪ್ಪಾ? ಫೋನ್ ಸ್ಪೀಕರ್ ಆನ್ ಆಗಿದೆ, ಆದರೂ ಅಮ್ಮ ಏನೂ ಹೇಳ್ತಿಲ್ಲ ಏಕೆ.....?''
``ಬಹುಶಃ ನಿನ್ನ ಅಮ್ಮನಿಗೆ ಆದಿತ್ಯನ ಬಗ್ಗೆ ಕೇಳಿ ಶಾಕ್ ಆಗಿದೆ ಅನಿಸುತ್ತೆ.''
ರಾಧಾರ ಮೂಡ್ ನಿಜಕ್ಕೂ ಕೆಟ್ಟು ಹೋಗಿತ್ತು. ಆ ವಿಷಯ ಕೇಳಿ ಅವರು ಏನೂ ಮಾತಾಡಲಿಲ್ಲ. ವಿಕಾಸ್ ಫೋನ್ ಕಟ್ ಮಾಡಿದಾಗ ರಾಧಾರ ಕೋಪ ಸ್ಛೋಟಗೊಂಡಿತು, ``ಅವಳು ಓದುವ ನೆಪದಲ್ಲಿ ಮೋಜು ಮಾಡಲು ಹೋಗಿದ್ದಾಳೆಂದು ನನಗೆ ಗೊತ್ತಿತ್ತು. ಆದರೆ ಈಗ ಗೊತ್ತಾಗುತ್ತೆ ಅವಳನ್ನು ಓದಲು ಕಳಿಸಿದ್ದಾ ಅಥವಾ ಹುಡುಗನನ್ನು ಹುಡುಕಿಕೊಳ್ಳೊಕಾ ಅಂತಾ.......''
``ಅದೇನು ಮಾತಾಡ್ತಿದ್ದೀಯ ನೀನು. ಈಗ ಅವಳಿಗೆ ಜಾಬ್ ಕೂಡ ಸಿಗುತ್ತೆ. ತನ್ನಿಷ್ಟದ ಹುಡುಗನನ್ನು ಆಯ್ಕೆ ಮಾಡಿಕೊಂಡಿದ್ದರಲ್ಲಿ ತಪ್ಪೇನಿದೆ? ಸಂಗೀತಾ ತಿಳಿವಳಿಕೆಯುಳ್ಳವಳು. ಅವಳು ಏನು ನಿರ್ಧಾರ ಕೈಗೊಳ್ಳುತ್ತಾಳೋ, ಸರಿಯಾಗೇ ಇರುತ್ತೆ,'' ವಿಕಾಸ್ಹೇಳಿದರು.
``ಅವಳು ಯಾರೊಂದಿಗೂ ಹೊಂದಿಕೊಂಡು ಹೋಗುವುದಿಲ್ಲ. ಯಾವುದಕ್ಕೂ ಉಪಯೋಗವಿಲ್ಲ. ಅವಳಿಗೆ ಯಾವುದೇ ಶಿಸ್ತು ಸಂಸ್ಕಾರ ಇಲ್ಲ. ಅಂದಹಾಗೆ ಅವಳು ಓದೋಕೆ ಅಂತ ಲೋನ್ ತೆಗೆದುಕೊಂಡಿದ್ದಾಳೆ. ಇನ್ನು ಮದುವೆಯಾಗಿ ಸುಮ್ಮನೆ ಕುಳಿತುಕೊಂಡರೆ ಅದನ್ನು ತೀರಿಸೋರು ಯಾರು? ಈ ಹುಡುಗಿ ಯಾರೊಬ್ಬರಿಗೂ ನೆಮ್ಮದಿಯಿಂದ ಇರಲು ಬಿಡುವುದಿಲ್ಲ,'' ಎಂದು ರಾಧಾ ಮಗಳ ಬಗ್ಗೆ ಮನಬಂದಂತೆ ಮಾತಾಡುತ್ತಲೇ ಇದ್ದರು.
ವಿಕಾಸ್ ಗೆ ಹೆಂಡತಿ ಆಡಿದ ಮಾತುಗಳನ್ನು ಕೇಳಿ ಕೋಪ ಬಂತು, ``ನಿನ್ನನ್ನು ನೀನು ಅಂತರ್ಯಾಮಿ ಎಂದ ತಿಳಿದುಕೊಳ್ತೀಯಾ. ಈಗ ಗೊತ್ತಾಗುತ್ತೆ ಅಂತ ಹೇಳ್ತಿಯಲ್ಲ, ಅಕ್ಕಪಕ್ಕದ ಹೆಂಗಸರ ಹರಟೆಯ ಹೊರತಾಗಿ ನಿನಗೆ ಬೇರೆ ವಿಷಯ ಏನು ಗೊತ್ತಿದೆ?''
ಪ್ರತಿಯೊಂದು ವಿಷಯದ ಹಾಗೆ ಈ ವಿಷಯದ ಬಗೆಗೂ. ಇಬ್ಬರ ನಡುವೆ ಸಾಕಷ್ಟು ವಾದವಿವಾದ ನಡೆಯಿತು. ಅದು ನಿಲ್ಲುವ ಹಾಗೆ ಕಾಣದಿದ್ದಾಗ ವಿಕಾಸ್ ವಿಷಯ ಬದಲಿಸಿ ಸುಮ್ಮನಾಗಿ ಬಿಟ್ಟರು. ಆದಿತ್ಯನ ಬಗ್ಗೆ ಸಕಾರಾತ್ಮಕವಾಗಿ ಮಾತಾಡಬೇಕು. ಮಗಳ ಅಪೇಕ್ಷೆ ಏನು, ಅದರ ಬಗ್ಗೆ ಏಕೆ ಕೇಳಿಸಿಕೊಳ್ಳುವುದಿಲ್ಲ ಎನ್ನುವುದೇ ವಿಕಾಸ್ ನ ತಕರಾರು. ಬಳಿಕ ವಿಕಾಸ್ ಚಪ್ಪಲಿ ಹಾಕಿಕೊಂಡು, ``ನಾನು ಹೊರಗೆ ಹೋಗುವೆ, ನೀನೊಬ್ಬಳೇ ಮಾತಾಡುತ್ತಿರು....'' ಎನ್ನುತ್ತಾ ಅಲ್ಲಿಂದ ಹೊರನಡೆದರು.