ಗೀತಾ ಮತ್ತು ಸೋನಿಯ ಈ ಕಥೆ ಓದಿ. ಅದರ ಮಹತ್ವ ನಿಮಗೆ ಗೊತ್ತಾಗುತ್ತದೆ.

ಕೌಟುಂಬಿಕ ಸಂಬಂಧದ ಎಳೆ ತುಂಡರಿಸಿದಾಗ ನಮ್ಮ ಜೀವನದಲ್ಲಿ ಮತ್ತೊಂದು ಸಂಬಂಧ ಅತ್ಯಂತ ಹೆಚ್ಚು ಮಹತ್ವ ಪಡೆದುಕೊಳ್ಳುತ್ತದೆ. ಅದೇ ಸ್ನೇಹ ಸಂಬಂಧ. ಅದು ನಂಬಿಕೆ ಮತ್ತು ಸಹಕಾರ ಎಂಬ ಬಲದ ಮೇಲೆ ನಿಂತಿದೆ. ಸ್ನೇಹಿತೆ ಗೌಪ್ಯ ರಕ್ಷಕಿ ಹಾಗೂ ಸುಖದುಃಖದ ಪಾಲುಗಾರ್ತಿ ಕೂಡ ಆಗಿರುತ್ತಾಳೆ. ಯಾರು ಮದುವೆಯ ಬಗ್ಗೆ ಯೋಚಿಸುದಿಲ್ಲವೋ ಅವರು ಸ್ನೇಹದ ನೆರಳಿನಲ್ಲಿ ಸುರಕ್ಷಿತವಾಗಿ ಇರಬಹುದು.

ಕೇರಳದ ಬ್ಯಾಸ್ಕೆಟ್‌ ಬಾಲ್ ಆಟಗಾರ್ತಿ ಗೀತಾ ಮೆನನ್‌ಹಾಗೂ ಹಿನ್ನೆಲೆ ಗಾಯಕಿ ಸೋನಿ ಸಾಯಿ ಇವರಿಬ್ಬರೂ ಜೀವನದಲ್ಲಿ ಏಕಾಂಗಿತನದ ನೋವು ಅನುಭವಿಸುತ್ತಿರುವವರಿಗೆ ಮಾದರಿಯಾಗಿ ನಿಲ್ಲುತ್ತಾರೆ.

ಗೀತಾ ಸೋನಿ ಸ್ನೇಹ ಎಲ್ಲ ವ್ಯಾಖ್ಯೆಗಳಿಗಿಂತ ವಿಭಿನ್ನವಾಗಿದೆ. ಇಂದಿನ ದಿನಗಳಲ್ಲಿ ಮದುವೆ, ವಿಚ್ಛೇದನ ಮತ್ತು ನಿರಾಶೆ ಸಾಮಾನ್ಯ ಸಂಗತಿ. ಅಂತಹದರಲ್ಲಿ ಈ ಸ್ನೇಹ ಒಂದು ಒಳ್ಳೆಯ ಉದಾಹರಣೆ.

ಮನೋತಜ್ಞರ ಪ್ರಕಾರ, ಜೀವನದಲ್ಲಿ ನೈಜ ಸ್ನೇಹಿತೆ ಇರುವುದು ಅತ್ಯವಶ್ಯಕ. ಎಂತಹ ಒಬ್ಬ ಸ್ನೇಹಿತೆ ಎಂದರೆ, ನೀವು ಆ ಸ್ನೇಹಿತೆಯ ಬಳಿ ನಿಮ್ಮ ದುಃಖ ದುಮ್ಮಾನ ಹೇಳಿಕೊಂಡು ಮನಸ್ಸನ್ನು ಹಗುರ ಮಾಡಿಕೊಳ್ಳಬಹುದು. ಸ್ನೇಹದ ಇಂತಹ ಅದೆಷ್ಟೋ ಕಥೆಗಳಿವೆ. ಆದರೆ ನಾವಿಲ್ಲಿ ಎಂತಹ ಒಂದು ಉದಾಹರಣೆಯನ್ನು ಪ್ರಸ್ತುತಪಡಿಸಿದ್ದೇವೆ ಎಂದರೆ ಅದು ಎಲ್ಲರಿಗಿಂತ ಭಿನ್ನವಾಗಿದೆ.

ಮೊದಲ ಭೇಟಿ

ಅವರಿಬ್ಬರೂ ಮೊದಲು ಭೇಟಿಯಾದದ್ದು ಮಳೆಯಲ್ಲಿ. ತಾವಿಬ್ಬರು ಪರಸ್ಪರ ಒಂದೇ ಕೊಡೆಯಡಿ ಅಪರಿಚಿತರ ನಡುವೆ ನಿಂತು ಸ್ನೇಹಿತೆಯರಾಗಬಹುದು ಎಂದು ಅವರು ಕನಸು ಮನಸ್ಸಿನಲ್ಲಿಯೂ ಎಣಿಸಿರಲಿಲ್ಲ. ಗಾಯಕಿ ಸೋನಿ ಸಾಯಿ ತನ್ನ ಮಗನೊಂದಿಗೆ ಬಾಸ್ಕೆಟ್‌ ಬಾಲ್ ಪ್ರಾಕ್ಟೀಸ್‌ಗೆಂದು ಬಂದಿದ್ದರು. ಗೀತಾ ಬಾಸ್ಕೆಟ್‌ ಬಾಲ್‌ಆಟಗಾರ್ತಿ ಹಾಗೂ ತರಬೇತುಗಾರ್ತಿ. ಅವರು ಸುರಿಯುತ್ತಿರುವ ಮಳೆಯಲ್ಲಿ ಕೊಡೆಯೊಂದನ್ನು ತೆಗೆದುಕೊಂಡು ಬಂದು ಹೇಳಿದರು `ಪ್ಲೀಸ್‌ಕಮ್. ‘ಆ ಎರಡು ಶಬ್ದಗಳಿಂದಲೇ ಅವರ ಸ್ನೇಹ ಸಂಬಂಧ ಚಿಗುರೊಡೆಯಿತು.

ಪರಸ್ಪರರೊಂದಿಗೆ ಜೊತೆ ಜೊತೆಯಲಿ

ಗೀತಾ ಹಾಗೂ ಸೋನಿ ಪರಸ್ಪರ ಭೇಟಿಯಾದಾಗ ಅವರಿಬ್ಬರ ಜೀವನ ಏಕಾಂಗಿತನದಿಂದ ಕೂಡಿತ್ತು. ಇಬ್ಬರೂ ಪರಸ್ಪರರಿಗೆ ಆಧಾರ ಆಗಬಹುದು ಎಂಬ ಯೋಚನೆ ಅವರಿಬ್ಬರ ನಡುವೆ ಕ್ರಮೇಣ ವ್ಯಾಪಿಸಿಕೊಳ್ಳುತ್ತಾ ಹೋಯಿತು. ಬಳಿಕ ಅದೇ ವಾಸ್ತವ ಎಂಬಂತೆ ಆಯಿತು. ಈಗ ಅವರಿಬ್ಬರೂ ಕೇರಳದ ಎಲಮ್ ಕರಾ ಎಂಬಲ್ಲಿ ಒಂದೇ ಮನೆಯಲ್ಲಿ ವಾಸಿಸುತ್ತಿದ್ದಾರೆ.

ಗೀತಾ ಬಾಸ್ಕೆಟ್‌ ಬಾಲ್‌ನಲ್ಲಿ ಉದಯೋನ್ಮುಖ ಕ್ರೀಡಾಪಟುಗಳಿಗೆ ತರಬೇತಿ ಕೊಡಲು ಅಕಾಡೆಮಿ ಸ್ಥಾಪಿಸಲು ಯೋಚಿಸುತ್ತಿರುವ ಹಂತದಲ್ಲಿ ಸೋನಿ ಬೆಂಬಲವಾಗಿ ನಿಂತರು. ಸೋನಿ ಆ ಕನಸನ್ನು ನನಸಾಗಿಸಲು ಸಹಕಾರ ನೀಡಿದರು. `ಪೆಗಾಸಸ್‌’ ಎಂಬ ಹೆಸರಿನ ಈ ಅಕಾಡೆಮಿ ಮುಪ್ಪಾಥದಮ್ ಎಂಬ ಸರ್ಕಾರಿ ಶಾಲೆಯಲ್ಲಿ ಶುರುವಾಗಿದೆ. ಸಚಿ ಇಬ್ರಾಹಿಂ ಕುಂಜು ಇದೇ ಶಾಲೆಯಲ್ಲಿ ಅದನ್ನು ಸ್ಥಾಪನೆ ಮಾಡಬೇಕೆಂದು ಸೂಚಿಸಿದ್ದರಿಂದ ಅದು ಅಲ್ಲಿ ಸ್ಥಾಪನೆಗೊಂಡಿತು.

5 ರಿಂದ 15 ವರ್ಷದ ಮಕ್ಕಳಿಗೆ ಇಲ್ಲಿ ತರಬೇತಿ ಕೊಡಲಾಗುತ್ತದೆ. ಸೋನಿ ಪೆಗಾಸಸ್‌ನ ಮ್ಯಾನೇಜರ್‌ಆಗಿದ್ದುಕೊಂಡು ಅಲ್ಲಿನ ಪ್ರತಿಯೊಂದು ಆಗುಹೋಗುಗಳ ಮೇಲೆ ಗಮನಕೊಡುತ್ತಾರೆ. ಬಹಳಷ್ಟು ಮಕ್ಕಳು ಇಲ್ಲಿ ತರಬೇತಿ ಪಡೆಯಲು ಬರುತ್ತಾರೆ. ಅವರೆಲ್ಲ ಬಡ ವಿದ್ಯಾರ್ಥಿಗಳು. ಅವರಿಗೆ ಕಡಿಮೆ ಶುಲ್ಕದಲ್ಲಿ ತರಬೇತಿ ನೀಡುತ್ತಾರೆ. ಅದರಿಂದ ಬರುವ ಹಣ ಈ ಅಕಾಡೆಮಿ ಮುನ್ನಡೆಸಲು ಸಹಕಾರಿ. ಗೀತಾ ಪ್ರಕಾರ, ಆಕೆ ತನ್ನ ಗುರಿಯಿಂದ ಎಂದೂ ಹಿಮ್ಮೆಟ್ಟುವುದಿಲ್ಲ.

ಎಲ್ಲಾ ಸಹ ಕ್ರೀಡಾಪಟುಗಳೂ ಇವರಿಗೆ ಸಂಪೂರ್ಣ ಸಹಕಾರ ನೀಡಿದ್ದಾರೆ.

ಗೀತಾ ಹೇಳುತ್ತಾರೆ, “ಸೋನಿ ತಾವೇ ಈ ಅಕಾಡೆಮಿ ತೆರೆಯುವ ಸಲಹೆ ನೀಡಿದರು. ಈ ಅಕಾಡೆಮಿ ಶುರುವಾದಾಗ, ಸೋನಿ ಎಲ್ಲಾ ನಿಟ್ಟಿನಲ್ಲೂ ನನ್ನ ಪರವಾಗಿ ನಿಂತಿದ್ದಾರೆ. ನನಗೆ ಆಸರೆಯಾಗಿದ್ದಾರೆ.”

ಅದೇ ತರಹ ಸೋನಿ ಹೇಳುತ್ತಾರೆ, “ಗೀತಾ ನನ್ನೊಂದಿಗೆ ರೆಕಾರ್ಡಿಂಗ್‌ಸಮಯದಲ್ಲಿ ಸ್ಟುಡಿಯೋದಲ್ಲಿರುವಾಗ, ನನಗೆ ಬಹಳ ನಿರಾಳ ಎನಿಸುತ್ತದೆ. ನಾನು `ಜೀಸಿಯಾ’ ಮಲಯಾಳಂ ಚಿತ್ರಕ್ಕಾಗಿ ಹಾಡಿನ ರೆಕಾರ್ಡಿಂಗಲ್ಲಿದ್ದಾಗಲೂ ಸಹ ಗೀತಾ ನನ್ನೊಂದಿಗಿದ್ದರು. ಆ ಚಿತ್ರದ ಡೈರೆಕ್ಟರ್‌ ನಮ್ಮ ಸ್ನೇಹದ ಆವಳ ಅರಿತು, ಹಾಡಿನ ಪೂರ್ವಾಭ್ಯಾಸದ ಎಲ್ಲಾ ಸಂದರ್ಭದಲ್ಲೂ ಗೀತಾ ನನ್ನೊಂದಿಗೆ ಇರಲು ಸಹಕರಿಸಿದರು.”

ಇವರಿಬ್ಬರೂ ತಮ್ಮ ಬಿಸ್‌ನೆಸ್‌ ಮುಂದುವರಿಸಲು ಬಹಳ ಕಷ್ಟಪಡುತ್ತಿದ್ದಾರೆ. ಆದರೆ ಇವರಿಬ್ಬರೂ ಜೊತೆ ಜೊತೆಗಿದ್ದಾಗ, ಇವರ ಬಿಸ್‌ನೆಸ್‌ ಗ್ರಾಫ್‌ ಸಹಜವಾಗಿ ಮೇಲೇರುತ್ತದೆ. ಏಕಾಂಗಿ ಮಹಿಳೆಯರು ಸಮಾಜದಲ್ಲಿ ಅಸಹಾಯಕರಲ್ಲ. ಅವರಿಗೆ ಒಬ್ಬರ ಜೊತೆ ಸಿಕ್ಕರೆ ಎಂಥ ಬಿಸ್‌ನೆಸ್‌ ಮಾಡಲಿಕ್ಕೂ ಸಾಧ್ಯವಿದೆ ಎಂದು ಈ ಜೋಡಿ ನಿರೂಪಿಸಿದೆ.

ತಂಡ ಬಾಸ್ಕೆಟ್‌ ಬಾಲ್ನಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚು ಹೆಚ್ಚು ಪ್ರಗತಿ ಸಾಧಿಸಿದಾಗ, ಅದರ ಕ್ರೆಡಿಟ್‌ ಗೀತಾ ಮೆನನ್‌ಗೇ ಸಿಕ್ಕಿತು! ಕಳೆದ 10 ವರ್ಷಗಳಿಂದ ಮಹಿಳೆಯರು ಎಲ್ಲಾ ಮುಖ್ಯ ಟೂರ್ನಮೆಂಟ್ಸ್ ಅಂದ್ರೆ ಫೆಡರೇಶನ್‌ ಕಪ್‌ ಇತ್ಯಾದಿಗಳಲ್ಲಿ ತಮ್ಮ ಪ್ರೌಢತೆ ಮೆರೆದಿದ್ದಾರೆ. ಆಗಲೂ ಗೀತಾ ಇದೇ ಕ್ರೀಡೆ ಆರಿಸಿಕೊಂಡರು. ಆಕೆಯ ಬಹಳಷ್ಟು ಗೆಳತಿಯರು ಈ ಆಟ ಬಿಟ್ಟು, ತಂತಮ್ಮ ವೈಯಕ್ತಿಕ ಬದುಕಿನಲ್ಲಿ ಸೆಟಲ್ ಆಗಲು ತೆರಳಿದರು. ಆದರೆ ಗೀತಾರ ಮನದಲ್ಲಿ ಮಾತ್ರ ಸದಾ ಆಟದ ಗುಂಗು ತುಂಬಿತ್ತು. ಆ ಮಹತ್ವಾಕಾಂಕ್ಷೆಯೇ ಮುಂದೆ ಗೀತಾರನ್ನು ಈ ಆಟಕ್ಕೆ ಅಂಟಿಕೊಂಡಿರುವಂತೆ ಮಾಡಿತು. ಜೀವನದ ಕಡು ಕಷ್ಟಗಳನ್ನು ಎದುರಿಸಿ ಮೆಟ್ಟಿ ನಿಲ್ಲುವ ಮಹತ್ವಾಕಾಂಕ್ಷೆ ಆಕೆಗೆ ದೊರಕಿದ್ದು ಇಲ್ಲಿಂದಲೇ!

ಗೀತಾಗೆ ದೊರೆತ ಸೌಲಭ್ಯ

ಕ್ರೀಡಾಲೋಕದಲ್ಲಿ ಗೀತಾ 2013ರಲ್ಲಿ ಆಯೋಜಿಸಲಾಗಿದ್ದ ವೆಟೆರೆನ್ಸ್ ಸ್ಪೋರ್ಟ್ಸ್ ಮೂಲಕ ವಾಪಸಾತಿ ಪಡೆದರು. ಇದು ಒಬ್ಬ ಸೈನಿಕ ಮರಳಿ ಸೈನ್ಯಕ್ಕೇ ಸೇರಿದಂತಿದ್ದು, ಈ ನಿಟ್ಟಿನಲ್ಲಿ ವಯಸ್ಸು ಯಾವ ಪ್ರಭಾವವನ್ನೂ ಬೀರಲಿಲ್ಲ. ಆಕೆ ಲಾಂಗ್‌ಜಂಪ್‌ಮತ್ತು ರಾಷ್ಟ್ರೀಯ ಮಟ್ಟದಲ್ಲಿ 4,100 ಮೀ. ರಿಲೇ ರೇಸ್‌ನಲ್ಲಿ ಗೋಲ್ಡ್ ಮೆಡಲ್ ವಿಜೇತೆ ಎನಿಸಿದರು. 2014ರಲ್ಲಿ ಜಪಾನಿನಲ್ಲಿ ಆಯೋಜಿಸಲಾಗಿದ್ದ ಏಷ್ಯಾಡ್‌ ಮಾಸ್ಟರ್ಸ್‌ ಅಥ್ಲೆಟಿಕ್ಸ್ ಕ್ರೀಡೆಗಳಲ್ಲೂ ಸಿಲ್ವರ್‌ ಮೆಡಲ್ ಪಡೆದರು.

ಜಪಾನಿನಿಂದ ಮರಳಿದಾಗ ಇವರಿಗೆ ಭವ್ಯ ಸ್ವಾಗತ ಕೋರಿತು. 2015ರ ಆಗಸ್ಟ್ ನಲ್ಲಿ ಪ್ಯಾರಿಸ್‌ನಲ್ಲಿ ನಡೆದ ರೌಂಡ್‌ ಮಾಸ್ಟರ್ಸ್‌ಅಥ್ಲೆಟಿಕ್ಸ್ ಮೀಟ್‌ನಲ್ಲಿ ಆಕೆ ತನ್ನ ಅಚ್ಚುಮೆಚ್ಚಿನ 2 ಆಟಗಳಲ್ಲೂ 5ನೇ ಸ್ಥಾನದಲ್ಲಿದ್ದರು. ಆಕೆ ಈ ಕ್ರೀಡೆಗಳಲ್ಲಿ ಭಾಗವಹಿಸಲು ಇಷ್ಟೊಂದು ರಿಸ್ಕ್ ತೆಗೆದುಕೊಳ್ಳುತ್ತಿದ್ದಾಗ, ಹೆಚ್ಚು ಹಣ ಖರ್ಚಾಗುತ್ತಿದ್ದಾಗ, ಗೆಲುವು ಒಂದೇ ಅವರ ಆಶಾಕಿರಣವಾಗಿತ್ತು. ಮುರಿದ ಹೃದಯಕ್ಕೆ ಅದು ಮುಲಾಮಾಗಿ ಕೆಲಸ ಮಾಡುತ್ತಿತ್ತು.

ಅದೇ ತರಹ ಸೋನಿ ಸಾಯಿಯ ಒಳಗಿನ ಗಾಯಕಿಗೆ ಒಂದು ಐಡೆಂಟಿಟಿ ಬೇಕಿತ್ತು. ಆಕೆಯ ಹಾಡುಗಳನ್ನು ಕೇಳುತ್ತಿದ್ದರೆ, ಹೊಸದಾಗಿ ಆಕೆಯನ್ನು ಪರಿಚಯಿಸುವ ಅಗತ್ಯವೇ ಇಲ್ಲ. ಆಕೆಯ ಎಲ್ಲಾ ಹಾಡುಗಳೂ ಬಹುತೇಕ ಹಿಟ್‌ ಎನಿಸಿವೆ. ತನ್ನ ಕುರಿತಾಗಿ ತಾನೇ ಪ್ರಚಾರ ಮಾಡಿಕೊಳ್ಳುವಂಥ ಯಾವ ಕಲೆಯೂ ಸೋನಿಗೆ ಬಾರದು. ಆಕೆ ಲಘು ಸಂಗೀತ ಹಾಗೂ ಶಾಲೆಗಳ ಗಾಯನದಲ್ಲಿ ರಾಜ್ಯ ಮಟ್ಟದಲ್ಲಿ 1998ರಲ್ಲಿ ಮಿಮಿಕ್ರಿಗಾಗಿ ಮೊದಲ ಸ್ಥಾನ ಗಿಟ್ಟಿಸಿದ್ದರು. ಆಕೆ 4 ಸಾವಿರಕ್ಕೂ ಅಧಿಕ ಸ್ಟೇಜ್‌ ಪ್ರೋಗ್ರಾಂ ನೀಡಿದ್ದಾರೆ. ಹರಿಹರನ್‌, ಜೇಸುದಾಸ್‌. ಶ್ರೀಕುಮಾರ್‌, ಬ್ರಹ್ಮಾನಂದನ್‌, ವೇಣುಗೋಪಾಲನ್‌, ಜಯಚಂದ್ರನ್‌ ಮುಂತಾದ ಮಲೆಯಾಳದ ಎಲ್ಲಾ ಘಟಾನುಘಟಿ ಗಾಯಕರೊಂದಿಗೆ ಆಕೆ ಹಿನ್ನೆಲೆ ಗಾಯನ ನೀಡಿದ್ದಾರೆ.

ತನ್ನ 13ರ ಹರೆಯದಲ್ಲೇ ಸೋನಿ `ಸುಧಾ ವಾಸಂ’ ಚಿತ್ರಕ್ಕಾಗಿ ಹಾಡಿದ್ದರು. ಇದಾದ  ಮೇಲೆ ಜೇಸುದಾಸ್‌ರ ಜೊತೆ `ಅಧೀನಾ’ ಚಿತ್ರಕ್ಕಾಗಿ ಹಾಡಿದರು. ಇದಾದ ಮೇಲೆ `ಕಣ್ಣಿಲ್‌ ಕನ್ನಾಡಿ, ಭರತನ್‌, ಧೀರಾ, ಮಾರ್ಚ್‌ 12, ಬಾಂಬೆ, ನಿದ್ರಾ’ ಮುಂತಾದ ಚಿತ್ರಗಳಲ್ಲಿ ಸತತ ಹಾಡಿದ್ದಾರೆ. ಬಾಲಿವುಡ್‌ನ ಸೋನು ನಿಗಂ ಜೊತೆ ಹಾಡಿರುವ ಕ್ರೆಡಿಟ್‌ ಸಹ ಉಂಟು. ಆಕೆಗೆ ಅನೇಕ ಪ್ರಶಸ್ತಿಗಳು ಅರಸಿ ಬಂದವು. ಕಾಂಕರಾ ಫೌಂಡೇಶನ್‌ ಅವಾರ್ಡ್‌ (1998), ಸಾರ್ಕ್‌ ಅವಾರ್ಡ್‌ (1999), ಬೆಸ್ಟ್ ಸಿಂಗರ್‌ ಅವಾರ್ಡ್‌,  ರಾಘವನ್‌ ಮಾಸ್ಟರ್‌ ಟ್ರಿಬ್ಯೂಟ್‌ (2014), ಮೂಲಕ ರೋಲ್ ಮಾಡೆಲ್‌ ಸಿಂಗರ್‌ ಪ್ರಶಸ್ತಿ 2015ರಲ್ಲಿ  ಹಾಗೂ ಕೇರಳ ಅಚೀವ್‌ಮೆಂಟ್‌ ಫಾರಂ ಮುಂತಾದ ಪ್ರಶಸ್ತಿಗಳಿಂದ ಈಕೆ ಪುರಸ್ಕೃತೆ. ಈಕೆ ಮುಂದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದಾದ್ಯಂತ ಹಾಡಿದ್ದಾರೆ.

– ಎಂ.ಕೆ. ಗೀತಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ