`ಆವಾಜ್‌’ ಫೌಂಡೇಶನ್‌ನ ಸಂಸ್ಥಾಪಕ, ಪರಿಸರವಾದಿ ಸುಮೈರಾ ಅಬ್ದುಲ್ಲಾ ಅವರು ಭಾರತದಲ್ಲಿ  ಮೊದಲ ಬಾರಿಗೆ ಶಬ್ದಮಾಲಿನ್ಯ ಕುರಿತಾದ ಅಂಕಿಅಂಶಗಳನ್ನು ಸಂಗ್ರಹಿಸಿದ್ದಾರೆ. ಆ ಅಂಕಿಅಂಶಗಳನ್ನು ಅವರು ಸರ್ಕಾರಕ್ಕೆ, ಪೊಲೀಸರಿಗೆ, ನ್ಯಾಯಾಲಯಕ್ಕೆ ಅಷ್ಟೇ ಏಕೆ ಜನಸಾಮಾನ್ಯರ ತನಕ ತಲುಪಿಸಿದ್ದಾರೆ. ಶಬ್ದಮಾಲಿನ್ಯದಿಂದ (ಪಟಾಕಿಗಳ ಸದ್ದು, ಟ್ರಾಫಿಕ್‌ನ ಗದ್ದಲ, ವಿಮಾನ, ರೈಲುಗಳ ಓಡಾಟದ ಸದ್ದು, ಕೈಗಾರಿಕಾ ಉಪಕರಣ ಅಥವಾ ಆ ಸ್ಥಳದಲ್ಲಿ ಉಂಟಾಗುವ ಸಪ್ಪಳ) ಮನುಷ್ಯನ ಜನಜೀವನದ ಮೇಲೆ ಅದೆಷ್ಟು ಹಾನಿಕಾರಕ ಎಂಬುದನ್ನು ಅವರು ಮೊದಲ ಬಾರಿಗೆ ಬಹಿರಂಗಪಡಿಸಿದರು. ಇಂತಹ ಸದ್ದುಗದ್ದಲ ನಿಯಂತ್ರಿಸಲು ನಿಯಮ ಕಾನೂನುಗಳೇನೋ ರಚಿಸಲ್ಪಟ್ಟಿವೆ. ಆದರೆ ಅವು ಶಬ್ದ ಮಾಲಿನ್ಯವನ್ನು ಕಟ್ಟುನಿಟ್ಟಾಗಿ ನಿಯಂತ್ರಿಸಲಾಗುತ್ತಿಲ್ಲ. ಅದರಲ್ಲೂ ಧಾರ್ಮಿಕ ಉತ್ಸವಗಳಲ್ಲಿ ಹಾವಳಿ ಮಾಡುವ ಮೈಕಾಸುರನನ್ನು ನಿಯಂತ್ರಿಸಲು ಆಗುತ್ತಿಲ್ಲ. ಈ ಬಗೆಯ ಅಬ್ಬರದ ಧ್ವನಿಯ ಮುಂದೆ ಸಂಬಂಧಪಟ್ಟ ಅಧಿಕಾರಿ ಕಿವಿ ಮುಚ್ಚಿಕೊಂಡಿರುವುದರಲ್ಲಿ ತನ್ನ ಹಿತ ಅಡಗಿದೆ ಎಂದು ಭಾವಿಸುತ್ತಾನೆ.

ಧಾರ್ಮಿಕ ಸ್ಥಳಗಳನ್ನು `ನಿಶ್ಶಬ್ದ ಪ್ರದೇಶ’ ಅಥವಾ `ಸೈಲೈಂಟ್‌ ಝೋನ್‌’ ಎಂದು ಭಾವಿಸಲಾಗುತ್ತದೆ. ಆದರೆ ಬಹಳಷ್ಟು ಧಾರ್ಮಿಕ ಕೇಂದ್ರಗಳು ಲೌಡ್‌ ಸ್ಪೀಕರ್‌ನ್ನು ಬೇಕಾಬಿಟ್ಟಿಯಾಗಿ ಅದರಲ್ಲೂ ವಿಶೇಷವಾಗಿ ಹಬ್ಬ, ಜಾತ್ರೆಯ ಸಂದರ್ಭದಲ್ಲಿ ಹಾಕುವುದರ ಮೂಲಕ ಜನರಿಗೆ ಕಿವುಡುತನ ತರುತ್ತಿವೆ. ದೆಹಲಿ ಹಾಗೂ ಕರ್ನಾಟಕ ಉಚ್ಚ ನ್ಯಾಯಾಲಯಗಳು ಈ ಕುರಿತು ಮಹತ್ವದ ತೀರ್ಪು ನೀಡಿದ್ದವು. ಧಾರ್ಮಿಕ ಕೇಂದ್ರಗಳಲ್ಲಿ ಅಳವಡಿಸಲಾಗುವ ಸ್ಪೀಕರ್‌ಗಳ ಮುಖಭಾಗ ಧಾರ್ಮಿಕ ಕೇಂದ್ರಗಳ ಕಡೆಗೆ ಇರಬೇಕೇ ವಿನಾ ನಾಗರಿಕರು ವಾಸಿಸುವ ಕಡೆ ಇರಬಾರದು ಎನ್ನುವುದೇ ಆ ತೀರ್ಪು.

ಎಲ್ಲ ಪ್ರಕಾರದ ಧಾರ್ಮಿಕ ಸ್ಥಳಗಳಲ್ಲಿ ಅಳವಡಿಸಲಾಗುವ ಲೌಡ್‌ ಸ್ಪೀಕರ್‌ಗಳ ಬಗ್ಗೆ ಮದ್ರಾಸ್‌ ಹೈಕೋರ್ಟ್‌ ಹೀಗೆ ಹೇಳಿತ್ತು, “ಎಲ್ಲ ಧರ್ಮಗಳ ಧಾರ್ಮಿಕ ಸ್ಥಳಗಳಲ್ಲಿ ಅಳವಡಿಸಲಾಗುವ ಲೌಡ್‌ ಸ್ಪೀಕರ್‌ಗಳ ಅಬ್ಬರ ನೋಡಿದರೆ, ಸದ್ದು ಗದ್ದಲವಿದ್ದರೆ ಮಾತ್ರ ದೇವರ ಆಶೀರ್ವಾದ ಸಿಗುತ್ತದೆ ಅನಿಸುತ್ತವೆ. ವಿದ್ಯುತ್‌ ಇಲ್ಲದ ಕಾಲದಿಂದಲೇ ಪ್ರತಿಯೊಂದು ಧರ್ಮದಲ್ಲಿ ದೇವಸ್ಥಾನದಲ್ಲಿ ಪೂಜೆ ಪುನಸ್ಕಾರಗಳು ನಡೆದುಕೊಂಡು ಬರುತ್ತಿವೆ. ಆದರೂ ಈ ಅಬ್ಬರ ಏಕೆ?”

ಕಾನೂನಿನ ದೃಷ್ಟಿಯಲ್ಲಿ

ಭಾರತದ ಸಂವಿಧಾನದ ಅನುಚ್ಛೇದ 21ರ ಪ್ರಕಾರ, ಈ ದೇಶದ ನಾಗರಿಕರಿಗೆ ಸಭ್ಯ ವಾತಾವರಣ, ಶಾಂತಿಯುತ ಜೀವನ, ರಾತ್ರಿಯ ನೆಮ್ಮದಿಯ ನಿದ್ರೆ ಹಾಗೂ ನಿರಾಳತೆಯ ಹಕ್ಕು ಅಂದರೆ ಜೀವನ ನಡೆಸುವ ಸಂಪೂರ್ಣ ಹಕ್ಕು ಇದೆ. ಶಬ್ದಮಾಲಿನ್ಯ ಕಾನೂನಿನ ಪ್ರಕಾರ, ಹಗಲು ಮತ್ತು ರಾತ್ರಿ ನಿರ್ಧರಿಸಲ್ಪಟ್ಟ ಮಿತಿಯಲ್ಲಿ ಧ್ವನಿ ಹೊರಹೊಮ್ಮಿಸಬಹುದು. ಹಗಲು 50 ಡಿ.ಬಿ. ಮತ್ತು ರಾತ್ರಿ 40 ಡಿಬಿ ಮೀರಬಾರದು. ಜಿಲ್ಲಾ ಮ್ಯಾಜಿಸ್ಟ್ರೇಟರು, ಪೊಲೀಸ್‌ ಆಯುಕ್ತರು ಮಾತ್ರ ಈ ಕಾನೂನನ್ನು ಜಾರಿಗೆ ತರಬಹುದು.

ಕೇರಳದ ಉಚ್ಚ ನ್ಯಾಯಾಲಯ ನೀಡಿದ ಆದೇಶದ ಪ್ರಕಾರ, ಧಾರ್ಮಿಕ ಸ್ಥಳಗಳಲ್ಲಿ ಭಜನೆ ಕೀರ್ತನೆಗಳ ಸದ್ದು ಶಬ್ದಮಾಲಿನ್ಯ ಮಾನದಂಡದ ಪ್ರಕಾರವೇ ಇರಬೇಕು. ಹಗಲು ಇರಬಹುದು, ರಾತ್ರಿಯೇ ಆಗಿರಬಹುದು ಶಬ್ದ ಮಾಲಿನ್ಯದ ನಿಯಮಗಳನ್ನು ಪಾಲಿಸಲೇಬೇಕು. ಮದ್ರಾಸ್‌ ಉಚ್ಚ ನ್ಯಾಯಾಲಯದಲ್ಲಿ ದೇವಾಲಯವೊಂದರ ಲೌಡ್‌ ಸ್ಪೀಕರ್‌ ಪ್ರಕರಣ ಬಂದಿತ್ತು. ಕೋರ್ಟ್‌ ತನ್ನ ಆದೇಶದಲ್ಲಿ ಹೀಗೆ ಹೇಳಿತು, ಪ್ರತಿಯೊಂದು ಕಾನೂನುಗಳು ಈ ದೇಶದ ಸಂಸತ್ತಿನಲ್ಲಿ ಪಾಸಾಗಿ ಬಂದಿರುತ್ತವೆ. ಅವನ್ನು ಅಧಿಕಾರಿಗಳು ಪಾಲಿಸುವುದು ಅನಿವಾರ್ಯ. ಸಾಮಾಜಿಕ ಕಾರ್ಯಕರ್ತ ಕುಮಾರ್‌ ವೇಲು ಅವರ ರಿಟ್‌ ಮೇರೆಗೆ ನ್ಯಾಯಾಧೀಶ ಸಂಜಯ್‌ ಕಿಶನ್‌ ಕೌರ್‌ ಹಾಗೂ ನ್ಯಾಯಾಧೀಶ ಎಂ.ಎಂ. ಸುಂದರೇಶ್‌ ಲೌಡ್‌ ಸ್ಪೀಕರ್‌ ಮೂಲಕ ಶಬ್ದಮಾಲಿನ್ಯದ ಕಾನೂನನ್ನು ಉಲ್ಲಂಘಿಸುವ ಧಾರ್ಮಿಕ ಸ್ಥಳಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಹೆಸರು ಹೇಳಲಿಚ್ಛಿಸದ 45 ವರ್ಷದ ವ್ಯಕ್ತಿಯೊಬ್ಬರು ಹೇಳುತ್ತಾರೆ, ನಮ್ಮೂರಿನ ಸಮೀಪ ದೇವಸ್ಥಾನವೊಂದರ ಜಾತ್ರೆ ನಡೆಯುತ್ತದೆ. ಜಾತ್ರೆ ಶುರುವಾಗುವ ವಾರದ ಮುಂಚೆಯೇ ಅಂಗಡಿಗಳು ಬರಲು ಪ್ರಾರಂಭಿಸುತ್ತವೆ. ತಮ್ಮ ತಮ್ಮ ವ್ಯಾಪಾರ ಚೆನ್ನಾಗಿ ಆಗಬೇಕೆಂದು ಕೆಲವು ಅಂಗಡಿಕಾರರು ಲೌಡ್‌ ಸ್ಪೀಕರ್‌ನಲ್ಲಿ ಕೂಗುತ್ತಿರುತ್ತಾರೆ. 10-12 ದಿನಗಳ ಕಾಲ ಊರಲ್ಲಿ ಮಕ್ಕಳು, ವಯಸ್ಸಾದವರು ನೆಮ್ಮದಿಯಿಂದ ಇರುವುದು ಅಸಾಧ್ಯವಾಗುತ್ತದೆ. ಅವರ ವ್ಯಾಪಾರ ಬೆಳಗ್ಗೆ 10 ರಿಂದ ರಾತ್ರಿ 1 ಗಂಟೆಯವರೆಗೂ ಮುಂದುವರಿಯುತ್ತದೆ. ಗಣೇಶೋತ್ಸವದ 11 ದಿನಗಳ ಕಾಲ ಮೈಕಾಸುರನ ಹಾವಳಿ ಅಧಿಕವಾಗಿರುತ್ತದೆ.

ಬೆಂಗಳೂರಿನಲ್ಲಿ ವಾಸಿಸುವ ರಾಜೇಶ್‌ ಅವರಿಗೆ ಪ್ರತಿನಿತ್ಯ ಬೆಳಗಿನ ಜಾವ ಹಾಕುವ ಲೌಡ್‌ ಸ್ಪೀಕರ್‌ನಿಂದ ಒತ್ತಾಯ ಪೂರ್ವಕವಾಗಿ ಏಳುವ ಸ್ಥಿತಿ. ಗಣೇಶೋತ್ಸವ ಸಂದರ್ಭದಲ್ಲಿ ಪಟಾಕಿಗಳ ಸದ್ದಿನಿಂದ, ಅದರ ದುರ್ವಾಸನೆಯಿಂದ ಸುರೇಶ್‌ಗೆ ಹೇಳತೀರದಷ್ಟು ಕಷ್ಟವಾಗುತ್ತದೆ. ಏಕೆಂದರೆ ಅವರ ತಾಯಿ ಆಸ್ತಮಾ ರೋಗಿ.

ಮುಂಬೈನ ಅಂಧೇರಿ ಪೂರ್ವದಲ್ಲಿ ವಾಸಿಸುವ ಡಾ. ಪ್ರಭಾಕರ್‌ ರಾವ್‌ರ ಮನೆಯ ಸಮೀಪ ಗುಡಿಸಲುಗಳ ಮಧ್ಯೆ ಒಂದು ಧಾರ್ಮಿಕ ಕೇಂದ್ರವಿದೆ. ಮುಂಜಾನೆ 5 ರಿಂದ ಇಡೀ ದಿನ ಲೌಡ್‌ ಸ್ಪೀಕರ್‌ನ ಕಿರುಚಾಟ ಕಿವಿಗೆ ಅಪ್ಪಳಿಸುತ್ತಿರುತ್ತದೆ. ಡಾ. ಪ್ರಭಾಕರ್‌ ರಾವ್ ಶಬ್ದ ಮಾಲಿನ್ಯದ ವಿರುದ್ಧ ಧ್ವನಿ ಎತ್ತುತ್ತಾರೆ. ನ್ಯಾಯಾಲಯದ ಮೆಟ್ಟಿಲು ಕೂಡ ಹತ್ತುತ್ತಾರೆ.

2013ರಲ್ಲಿ `ಅಸೋಸಿಯೇಶನ್‌ ಆಫ್‌ ಮೆಡಿಕಲ್ ಕನ್ಸ್ಟಿಂಟ್‌’ ಹಾಗೂ ಸುಮೈರಾ ಅಬ್ದುಲ್ಲಾ ಸೇರಿಕೊಂಡು ಮುಂಬೈ ಉಚ್ಚ ನ್ಯಾಯಾಲಯದಲ್ಲಿ ಒಂದು ರಿಟ್‌ ಅರ್ಜಿ ಸಲ್ಲಿಸಿ ಮುಂಬೈ ನಗರದ ಕೆಲವು ಪ್ರದೇಶಗಳನ್ನು `ಸೈಲೆಂಟ್‌ ಝೋನ್‌’ನಲ್ಲಿ ತರಲು ಮನವಿ ಮಾಡಿಕೊಂಡರು ಕೋರ್ಟ್‌ ಕೂಡ ಅವರ ಮನವಿ ಪುರಸ್ಕರಿಸಿ ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು ಮತ್ತು ಧಾರ್ಮಿಕ ಸ್ಥಳಗಳಿಗೆ ಈ ನಿಯಮ ಅನ್ವಯಿಸಿತು. ಆದರೆ ಮುಂಬೈ ಪೊಲೀಸರು ಧಾರ್ಮಿಕ ಕೇಂದ್ರಗಳನ್ನು ಈ ಪಟ್ಟಿಯಿಂದ ಹೊರಗೇ ಇಟ್ಟರು.

ಆರೋಗ್ಯದ ದೃಷ್ಟಿಯಿಂದ

ಮೂಲಚಂದ್‌ ಹಾಸ್ಪಿಟಲ್‌ನ ಡಾ. ಸಚಿನ್‌ ಅಂಬೇಕರ್‌ ಶಬ್ದಮಾಲಿನ್ಯದ ಮಾರಕ ಪರಿಣಾಮಗಳ ಕುರಿತಂತೆ ಹೀಗೆ ಹೇಳುತ್ತಾರೆ, ಅಧಿಕ ಶಬ್ದದಿಂದಾಗಿ ಹಾರ್ಮೋನುಗಳ ಮೇಲೆ ತದ್ವಿರುದ್ಧ ಪರಿಣಾಮ ಉಂಟಾಗುತ್ತದೆ. ಅದರಿಂದ ಹೃದಯದ ಮೇಲೆ ಒತ್ತಡ ಉಂಟಾಗುತ್ತದೆ. ಹೃದಯಾಘಾತ ಉಂಟಾಗುವ ಸಾಧ್ಯತೆ ಹೆಚ್ಚುತ್ತದೆ. ಶಬ್ದ ಮಾಲಿನ್ಯದಿಂದಾಗಿ ಮನುಷ್ಯರ ಆರೋಗ್ಯದ ಮೇಲಾಗುವ ಪರಿಣಾಮಗಳ ಬಗ್ಗೆ ಜನರ ಗಮನ ಸೆಳೆಯುವುದು ಅವಶ್ಯಕವಾಗಿದೆ.

ಶಬ್ದಮಾಲಿನ್ಯದ ಬಗ್ಗೆ ಜಾಗರೂಕತೆ ಹೆಚ್ಚಲು ಶಾಲಾ ಮಕ್ಕಳಿಗೆ ಪಠ್ಯಪುಸ್ತಕದಲ್ಲಿ ಈ ಕುರಿತ ವಿಷಯ ಅಳವಡಿಸುವಂತೆ ನ್ಯಾ. ಆರ್‌.ಸಿ. ಲಾಹೋಟಿ ಹಾಗೂ ನ್ಯಾ. ಅಶೋಕ್‌ ಬಾನ್‌ ಕೋರಿದ್ದರು. ಶಬ್ದ ಹೊರಹೊಮ್ಮಿಸುವ ಧಾರ್ಮಿಕ ಉತ್ಸವಗಳ ಮುಂಚೆ ಕ್ಯಾಂಪೇನ್‌ ನಡೆಸಿ ಜನರನ್ನು ಈ ಕುರಿತಂತೆ ಜಾಗೃತಗೊಳಿಸಬೇಕು. ಧರ್ಮವನ್ನು ಶ್ರೇಷ್ಠ ಎಂದು ಸಾರುವ ನಿಟ್ಟಿನಲ್ಲಿ ಧರ್ಮದ ಗುತ್ತಿಗೆದಾರರು ಲೌಡ್‌ ಸ್ಪೀಕರ್‌ಗಳ ಮೂಲಕ ಜನರಿಗೆ ಹಾನಿಯುಂಟು ಮಾಡುತ್ತಲೇ ಹೊರಟಿದ್ದಾರೆ.

– ಪಿ. ಭಾರದ್ವಾಜ್‌

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ