ಕಥೆ – ವೇದಾ ಮಂಜುನಾಥನ್‌

ಇಂದಿರೆ’ ಈ ಹೆಸರೇ ಅಂಥದ್ದು! ಆ ವರ್ಷದ ರಾಜ್ಯೋತ್ಸ ಪ್ರಶಸ್ತಿ ಪ್ರಕಟಗೊಂಡಿತ್ತು. `ಇಂದಿರೆ’ ಎಂಬ ಕಾವ್ಯನಾಮದಿಂದ ಕಳೆದ ಮೂವತ್ತು ವರ್ಷಗಳಿಂದ ಸಾಹಿತ್ಯ ಕ್ಷೇತ್ರದಲ್ಲಿ ಅತ್ಯುತ್ತಮ ಕಾದಂಬರಿಗಳನ್ನು ನೀಡಿದ ಕೀರ್ತಿ ಇಂದಿರೆಯದು. ಪ್ರಶಸ್ತಿ, ಪ್ರದಾನ ಸಮಾರಂಭ ಮುಗಿಸಿಕೊಂಡು ಮನೆಗೆ ಬಂದ ಇಂದಿರೆಯನ್ನು ಸಂಪರ್ಕಿಸಲು ಪ್ರತಕರ್ತೆ ರೇಖಾ ಬಂದಿದ್ದಳು. ತನ್ನ ಬದುಕಿನ ನೆನಪುಗಳ ಪುಟಗಳನ್ನು ಬಿಚ್ಚಿ ಹರಡಿದ್ದಳು ಇಂದಿರೆ.

ಇಂದಿರೆಯ ಬದುಕಿನ ಮೊದಲ ಪುಟವೇ ದುರಂತದಿಂದ ಆರಂಭವಾಗಿತ್ತು! ಬಾಲ್ಯದಲ್ಲಿ ಪೋಲಿಯೋಗೆ ತುತ್ತಾದ ಇಂದಿರೆಯ ಬಲಗಾಲು ಊನವಾಗಿ, ಜೀವನಪರ್ಯಂತ ಓಡಾಡಲು ಬಾರದೆ ವಿಕಲಚೇತನೆಯಾಗಿದ್ದಳು. ಈ ದುರಂತ ಹೆಣ್ಣು ಇಂದಿರೆಯ ಮೊದಲ ಹೆಸರು ವಿಮಲಾಬಾಯಿ. ಸಾಹಿತ್ಯ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದಾಗ ಕನ್ನಡ ಉಪನ್ಯಾಸಕರೊಬ್ಬರು ಕೊಟ್ಟ ಕಾವ್ಯನಾಮ `ಇಂದಿರೆ!’

ಇಂದಿರೆಯ ದುರಂತ ಮತ್ತೂ ಮುಂದುವರಿದು, ಅವಳು ಚಿಕ್ಕಂದಿನಲ್ಲಿಯೇ ತಂದೆತಾಯಿಯನ್ನು ಕಳೆದುಕೊಂಡು, ಬೇರೆಯವರ ಆಶ್ರಯದಲ್ಲಿ ಅನಾದರಣೀಯವಾದ, ಕಣ್ಣೀರಿನ ಬದುಕು ಕಂಡಳು. ಇಂದಿರೆಯ ಬಾಳಿಗೆ ಸಂತಸ, ನೆಮ್ಮದಿ ಗಗನಕುಸುಮವಾಗುತ್ತಿದ್ದಂತೆ ಅವಳು ತನ್ನ ಆಸಕ್ತಿಯನ್ನು ಗ್ರಂಥಾಲಯದ ಪುಸ್ತಕಗಳ ಜೊತೆಗೆ ಕಳೆಯುತ್ತಾ ತನ್ನ ಜ್ಞಾನಾರ್ಜನೆಯನ್ನು ಹೆಚ್ಚಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಳು. ಬಿಡುವಿನ ವೇಳೆಯಲ್ಲಿ ಮಕ್ಕಳಿಗೆ ಪಾಠ ಹೇಳಿಕೊಟ್ಟು, ಒಂಟಿಕಾಲಿನಲ್ಲಿ ಒಂಟಿಯಾಗಿಯೇ ತನ್ನ ಬದುಕನ್ನು ಸವೆಸಿದ ಧೀಮಂತ ಮಹಿಳೆಯಾಗಿದ್ದಳು! ಸಂದರ್ಶನ ಮಾಡುತ್ತಿದ್ದ ರೇಖಾಳ ಕಂಗಳು ತುಂಬಿಬಂದವು. ಇಂದಿರೆ, ನನಗೂ ಚಿಕ್ಕಂದಿನಲ್ಲಿ ಎಲ್ಲಾ ಹುಡುಗಿಯರಂತೆ ಕುಂಟೇಬಿಲ್ಲೆ ಆಡಬೇಕು, ಪ್ರಾಯದಲ್ಲಿ ಗೆಜ್ಜೆ ಹಾಕಿ ಸದ್ದು ಮಾಡುತ್ತಾ ನಡೆಯಬೇಕು, ಆಗಸದ ಕಾಮನಬಿಲ್ಲನ್ನು ನೋಡಿ ಕುಣಿದಾಡಬೇಕು, ಜರತಾರಿ ಸೀರೆ ಉಟ್ಟು, ನಾಚುತ್ತಾ ಹಬ್ಬೆರಳಿನ ತುದಿಯಿಂದ ನೆಲದ ಮೇಲೆ ರಂಗೋಲಿ ಹಾಕುತ್ತಾ ಇತ್ಯಾದಿ, ಇತ್ಯಾದಿ…. ಆದರೆ ತನ್ನ ಬಯಕೆಗಳು ಈ ಜನ್ಮಕ್ಕೆ ಕೇವಲ ಬಯಕೆಗಳಾಗಿಯೇ ಉಳಿದಿವೆ. ಈಗ ತಾನು ಸಾಹಿತ್ಯ ಕ್ಷೇತ್ರಕ್ಕೆ ಇನ್ನೂ ಹೆಚ್ಚಿನ ಸೇವೆ ಮಾಡುತ್ತಾ ಇರಬೇಕು. ತನಗೆ ಕೆಲಸದ ಹುಡುಗಿ ಸಾವಂತ್ರಿಯ ಆಸರೆಯೊಂದೇ ಇರುವುದು ಎಂದು ಹೇಳಿಕೊಂಡದ್ದನ್ನು ರೇಖಾ ಬರೆದುಕೊಂಡು, ಇಂದಿರೆಯ ಹಾಗೆ ಎಲ್ಲಾ ಹೆಣ್ಣುಮಕ್ಕಳೂ ದಿಟ್ಟತನದಿಂದ ಬದುಕನ್ನು ಎದುರಿಸಬೇಕೆಂದು ಆಶಿಸಿದಳು.

ಎಂದಿನಂತೆ ಅಂದೂ ಸಾವಂತ್ರಿಯ ಸಹಾಯದಿಂದ ಇಂದಿರೆ ಪಾರ್ಕಿಗೆ ಬಂದು ಕುಳಿತಳು. ವಯಸ್ಸು 50 ಸಮೀಪಿಸುತ್ತಿದ್ದರಿಂದ ಕೊಂಚ ಆಯಾಸವೆನಿಸಿತು. ದಿನ ಪಾರ್ಕಿನಲ್ಲಿ ಭೇಟಿಯಾಗಿ, ಕಷ್ಟಸುಖಗಳನ್ನು ಹಂಚಿಕೊಳ್ಳುವ ಪ್ರೊಫೆಸರ್‌ ರಾಜಶೇಖರ್‌ ಅಂದೂ ಭೇಟಿಯಾದರು.

“ಕಂಗ್ರಾಟ್ಸ್ ಇಂದಿರೆ! ನಿಮಗೆ ರಾಜ್ಯೋತ್ಸವ ಪ್ರಶಸ್ತಿ ಬಂದಿತೆಂದು ಪತ್ರಿಕೆಯಲ್ಲಿ ಓದಿದೆ.”

“ಧನ್ಯವಾದಗಳು ಸಾರ್‌.”

“ಅಂತೂ ನಿಮ್ಮ ಜೀವನದಲ್ಲಿ ಅಂದುಕೊಂಡದ್ದನ್ನೆಲ್ಲಾ ಸಾಧಿಸಿದಿರಿ ಎಂಬಂತಾಯಿತು.”

“ಒಂದು ಹಂತಕ್ಕೆ ಹೌದು, ಆದರೆ ಈಗ ನನ್ನ ಮೇಲೆ ಜವಾಬ್ದಾರಿ ಹೆಚ್ಚಾಯಿತು. ನಾನಿನ್ನೂ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಸೇವೆಯನ್ನು ಸಲ್ಲಿಸಬೇಕು.”

“ನಿಮ್ಮ ಸ್ವಾಭಿಮಾನ, ಛಲ, ಉತ್ಸಾಹ, ಆಸಕ್ತಿ, ಶ್ರದ್ಧೆ, ಪರಿಶ್ರಮ ಎಲ್ಲ ಅನುಕರಣೀಯ.”

“ಹೊಗಳಿಕೆ ಅತಿಯಾಯ್ತು. ಅಂಥದ್ದೇನಿಲ್ಲ,” ಇಂದಿರೆ ನಗುತ್ತಾ ಹೇಳಿದಳು.

“ಹಾಗೇಕೆ ಅಂತೀರಿ? ಇಂದಿರೆ, ಈಗಿನ ಕಾಲದ ಹದಿಹರೆಯದವರು ನಿಮ್ಮನ್ನು ನೋಡಿ ಕಲಿಯಬೇಕಾದದ್ದು ಸಾಕಷ್ಟಿದೆ. ನಾನು ಮುಂದಿನ ವರ್ಷ ರಿಟೈರ್ಡ್‌ ಆಗ್ತೀನಿ. ಆಮೇಲೆ ನಿಮ್ಮ ಸಾಹಿತ್ಯವನ್ನು ಓದುವುದು, ವಿಮರ್ಶೆ ಮಾಡುವುದು, ಇಷ್ಟೇ ನನ್ನ ಕೆಲಸ,” ಎಂದರು ರಾಜಶೇಖರ.

“ನಿಮ್ಮ ಸಾಹಿತ್ಯಾಸಕ್ತಿಗೆ ಧನ್ಯವಾದಗಳು. ಒಂದು ಹೊಸ ಕಥೆ ಬರೆದಿದ್ದೇನೆ…. ಓದುತ್ತೀರ?”

“ಓದದೇ ಏನು? ಕಥೆಯ ಶೀರ್ಷಿಕೆ?”

“ಕಾಮನಬಿಲ್ಲು.”

“ವಾವ್‌! ಚೆನ್ನಾಗಿದೆ. ಈ ಕಥೆ ಬರೆಯಲು ಸ್ಛೂರ್ತಿ ಏನು?”

“ಕಾಮನಬಿಲ್ಲು ನನ್ನ ಮನಸ್ಸನ್ನು ಚಿಕ್ಕಂದಿನಿಂದಲೂ ಕೆಣಕುತ್ತಲೇ ಇದೆ! ಇಲ್ಲಿ ನೋಡಿ, ದೂರದ ದಿಗಂತದಲ್ಲಿ ಮಳೆ ನಿಂತು, ಹೊಂಬಿಸಿಲು ಮೂಡಿದಾಗ ಆಗಸದ ಅಂಚಿನಲ್ಲಿ ಎಷ್ಟು ಸುಂದರವಾಗಿ ಮೂಡಿದೆ. ಆದರೆ, ಏಳೂ ಬಣ್ಣಗಳೂ ಒಟ್ಟಿಗೆ ಗಾಢವಾಗಿ ಎಂದಿಗೂ ನನ್ನ ಕಣ್ಣಿಗೆ ಕಂಡಿಲ್ಲ. ನನಗೆ ಬಯಕೆ, ಕುತೂಹಲ, ಹಂಬಲ ಏಳೂ ಬಣ್ಣಗಳನ್ನೂ ಗಾಢವಗಿ ಕಾಣಬೇಕು ಅಂತ.”

“ನಿಮ್ಮ ಕಲ್ಪನೆ ಅದ್ಭುತ. ಇಂದಿರೆ, ನಿಮಗಾಗಿ ಹೊಂಬಿಸಿಲಿನೊಂದಿಗೆ ಗುದ್ದಾಡಿ, ಕಾಮನ ಬಿಲ್ಲಿನಲ್ಲಿ ಏಳು ಬಣ್ಣಗಳನ್ನೂ ಗಾಢವಾಗಿ ಮೂಡಿಸಲು ನಾನು ಪ್ರಯತ್ನಿಸುವೆ.”

“ಇದೂ ಮತ್ತೂ ಅತಿಯಾಯ್ತು. ನಾನಿನ್ನು ಹೊರಡುತ್ತೇನೆ. ಕತ್ತಲಾಗುತ್ತಾ ಬಂತು.”

“ನಾಳೆ ಇದೇ ಸಮಯಕ್ಕೆ ನನ್ನ ನಿಮ್ಮ ಭೇಟಿ.”

ಇಂದಿರೆ ನಗುತ್ತಾ ಮೇಲೆದ್ದು, ಸಾವಂತ್ರಿಯ ಸಹಾಯದಿಂದ ಮನೆಗೆ ಬಂದಳು.

ರಾಜಶೇಖರ್‌ ವಿಧುರ. ಅವರ ಮಗ ಹೆಂಡತಿಯೊಂದಿಗೆ ಪಾಶ್ಚಾತ್ಯ ದೇಶದಲ್ಲಿದ್ದ. ಸುಪ್ರಸಿದ್ಧ ಕಾಲೇಜಿನಲ್ಲಿ ಪ್ರೊಫೆಸರ್‌ ಆಗಿದ್ದ ರಾಜಶೇಖರ್‌ ಇಂದಿರೆಗೆ ಪರಿಚಯವಾಗಿ ಒಂದು ವರ್ಷವಾಗಿತ್ತು. ಆತನ ಸಾಹಿತ್ಯಾಸಕ್ತಿ ಇಬ್ಬರಲ್ಲೂ ಸ್ನೇಹ ಬೆಳೆಯುವಂತೆ ಮಾಡಿತ್ತು. ಇಂದಿರೆ ಅವರಲ್ಲಿ ಬದುಕಿನ ಸಿಹಿಕಹಿಗಳನ್ನು ಹಂಚಿಕೊಳ್ಳಲು ಬಯಸುತ್ತಿದ್ದಳು!

ಮೂರು ದಿನಗಳಿಂದ ಹಿಡಿದ ಜ್ವರ ಬಿಟ್ಟಿರಲಿಲ್ಲ. ಪಾರ್ಕಿಗೆ ಬಾರದ ಇಂದಿರೆಗಾಗಿ ಕಾದು, ಚಡಪಡಿಸಿ, ರಾಜಶೇಖರ್‌ತಾನೇ  ನಾಲ್ಕನೇ ದಿನ ಅವಳ ಮನೆಗೆ ಹುಡುಕಿಕೊಂಡು ಬಂದಿದ್ದರು.

“ನಿಮ್ಮ ಆರೋಗ್ಯ, ಯೋಗಕ್ಷೇಮ ವಿಚಾರಿಸಿಕೊಂಡು ಹೋಗಲೆಂದು ಬಂದೆ.”

ಇಂದಿರೆ ಪ್ರಯಾಸದಿಂದ ಹಾಸಿಗೆಯಿಂದ ಎದ್ದು ಕುಳಿತು, “ಸಾವಂತ್ರಿ ಮಾರುಕಟ್ಟೆಗೆ ತರಕಾರಿ, ಹಣ್ಣುಹಂಪಲು ತರಲು ಹೋಗಿದ್ದಾಳೆ. ಒಬ್ಬಳೇ ಮಲಗಿ, ಮಲಗಿ ಬೇಸರವಾಯ್ತು. ನೀವು ಬಂದದ್ದೂ ಒಳ್ಳೆಯದೇ ಆಯಿತು,” ಎಂದಳು ನಿಧಾನವಾಗಿ.

“ಹೆಚ್ಚು ಆಯಾಸ ಪಡಬೇಡಿ. ಬನ್ನಿ, ಹೊರಗೆ ಗಾರ್ಡನ್ನಿನಲ್ಲಿ ಕೂರೋಣ, ಬೇಸರ ಕಳೆಯುತ್ತೆ.”

ರಾಜಶೇಖರ ಇಂದಿರೆಯ ಉತ್ತರಕ್ಕೆ ಕಾಯದೆ ಊರುಗೋಲನ್ನು ಮುಂದಿಟ್ಟರು. ಇಂದಿರೆ ಮೇಲೆದ್ದು ಕೆದರಿದ್ದ ತಲೆಗೂದಲನ್ನು ಹಿಂದಕ್ಕೆ ಮಾಡಿಕೊಂಡು, ಸೀರೆಯನ್ನು ಸರಿಪಡಿಸಿಕೊಂಡು, ರಾಜಶೇಖರನನ್ನು ಹಿಂಬಾಲಿಸಿ ಗಾರ್ಡನ್‌ಗೆ ಬಂದಳು. ಮಾತುಕತೆ ಮುಂದುವರಿಯಿತು.

“ನಿಮ್ಮ ಮಗ ಸೊಸೆ ಹೇಗಿದ್ದಾರಂತೆ?”

“ಅವರಿಗೇನು ಫಸ್ಟ್ ಕ್ಲಾಸ್‌…. ಈ ಮುದುಕನನ್ನು ಇಲ್ಲಿ ವಿಚಾರಿಸುವವರು ಯಾರು? ನಾನೇ ಬೇಯಿಸಿದ ನಳಪಾಕ ತಿಂದು, ತಿಂದು ನಾಲಿಗೆ ಜಡ್ಡುಗಟ್ಟಿ ಹೋಗಿದೆ.”

“ನಾಳೆ ಸಾವಂತ್ರಿಗೆ ಹೇಳಿ, ನಿಮಗಿಷ್ಟವಾದ ಗಸಗಸೆ ಪಾಯಸ, ಹೀರೇಕಾಯಿ ಬೋಂಡ ಮಾಡಿಸುತ್ತೇನೆ. ಊಟಕ್ಕೆ ಇಲ್ಲಿಗೇ ಬನ್ನಿ.”

“ಆಯಿತು. ನೀವು ಬಾಯಲ್ಲಿ ನೀರೂರಿಸಿದ ಮೇಲೆ ಬಾರದೇ ಇರುತ್ತೇನೆಯೇ?” ಇಬ್ಬರೂ ನಕ್ಕರು.

“ಇಂದಿರೆ ಅಲ್ಲಿ ನೋಡಿ, ಆಗಸದಲ್ಲಿ ಚೆಂದದ ಕಾಮನಬಿಲ್ಲು ಮೂಡುತ್ತಿದೆ.”

“ವಾವ್‌, ಹೌದು. ರಮಣೀಯ, ನಯನ ಮನೋಹರ.”

“ಈ ಶುಭ ಘಳಿಗೆಯಲ್ಲಿ ನಿಮ್ಮನ್ನೊಂದು ಮಾತು ಕೇಳಲಾ?”

“ಸಂಕೋಚವಿಲ್ಲದೆ ಕೇಳಿ.”

“ಈ ಊರುಗೋಲು ನಿಮಗೆ ಶಾಶ್ವತವೇ?”

“ಹ್ಞೂಂ. ಅವಿನಾಭಾವ ಸಂಬಂಧ, ಬಿಡದ ನಂಟು ಅಂತಾರಲ್ಲಾ ಹಾಗೆ.”

“ಆದರೆ ಈ ರಾಜಶೇಖರ ನಿಮ್ಮ ಬಾಳಿಗೆ ಊರುಗೋಲಿನಂತೆ ಆಸರೆಗೆ, ಆಧಾರಕ್ಕೆ ಬಂದು ನಿಂತರೇ?”

“ಅಂದರೆ ನಿಮ್ಮ ಮಾತಿನ ಅರ್ಥ?”

“ಪ್ರಬುದ್ಧೆಯಾದ ನಿಮಗೆ ನನ್ನ ಮಾತಿನ ಹಿಂದಿರುವ ಉದ್ದೇಶ ಅರ್ಥವಾಗಿದೆ ಎಂದು ಭಾವಿಸುತ್ತೇನೆ. ಇಂದಿರೆ, ಇನ್ನೆಷ್ಟು ದಿನ ಹೀಗೆ ಒಂಟಿಯಾಗಿ ಬಾಳುತ್ತೀರಿ, ನಿಮಗೊಬ್ಬ ಬಾಳಸಂಗಾತಿ ಬೇಕು ಅನ್ನಿಸುವುದಿಲ್ಲವೇ?”

“ಆದರೂ ಸ್ನೇಹದ ದುರುಪಯೋಗವಾಗಬಾರದು. ಕ್ಷಮಿಸಿ, ನಾನೆಂದೂ ನಿಮ್ಮನ್ನು ಆ ದೃಷ್ಟಿಯಿಂದ ಕಂಡಿಲ್ಲ, ಅಲ್ಲದೇ, ನಮ್ಮ ವಯಸ್ಸು, ಈ ಸಮಾಜ……”

“ಇನ್ನು ಮುಂದೆ ನನ್ನನ್ನು ಬಾಳಸಂಗಾತಿಯಾಗಿ ಕಂಡರಾಯಿತು. ಬಾಳ ಸಂಗಾತಿ ಅಂದರೆ ಅರ್ಥವಾದರೂ ಏನು? ವಿವಾಹಕ್ಕೆ ವಯಸ್ಸಿನ ಸಂಕೋಲೆ ಬೇಕೆ? ಇನ್ನು ಈ ಸಮಾಜ ಎಂದರೆ ಯಾರು, ನಾವೇ ತಾನೇ? ಭಾವನೆಗಳಿಗೆ ಪ್ರತಿಸ್ಪಂದಿಸುವ ಹೃದಯ ದೊರೆತರೆ ಅಷ್ಟೇ ಸಾಕು. ಅಲ್ಲಿ `ಪ್ರೀತಿ’ಯ ಸಾಕ್ಷಾತ್ಕಾರವಾಗುತ್ತದೆ ಎಂದು ನೀವೇ ಕಾದಂಬರಿಯಲ್ಲಿ ಬರೆದಿದ್ದೀರಿ.”

“ಆದರೂ…. ಹೀಗೆ…. ಹಠಾತ್ತಾಗಿ.”

“ಈಗ ಈ ರಾಗ ಯಾಕೆ?”

“ಕತ್ತಲಾಯಿತು, ನಾನು ಒಳಗೆ ಹೋಗುತ್ತೇನೆ.”

ಇಂದಿರೆ ಮೇಲೆದ್ದಳು. ಆದರೆ ಅವಳು ಹಿಡಿದಿದ್ದ ಊರುಗೋಲು ಥಟ್ಟನೆ ಮುರಿದುಬಿತ್ತು. ರಾಜಶೇಖರ ಸಮಯಕ್ಕೆ ಸರಿಯಾಗಿ ಇಂದಿರೆಯನ್ನು ಹಿಡಿಯದಿದ್ದರೆ ಆಕೆ ಕೆಳಗೆ ಬಿದ್ದಿರುತ್ತಿದ್ದಳು…!

“ನಿಮ್ಮ ಈ ತಾತ್ಕಾಲಿಕ ಊರುಗೋಲು ಎಂದಾದರೂ ಮುರಿಯಬಹುದು. ಆದರೆ ನಾನು….! ನಿಮ್ಮನ್ನು ಹೆಚ್ಚು ಬಲವಂತ ಪಡಿಸಲಾರೆ. ಚೆನ್ನಾಗಿ ಯೋಚನೆ ಮಾಡಿ, ಒಂದು ಒಳ್ಳೆಯ ನಿರ್ಧಾರಕ್ಕೆ ಬನ್ನಿ. ನಾಳೆ ನನ್ನ ಹೆಂಡತಿಯ ವೈದೀಕ ಇದೆ, ನಾನು ನಿಮಗೆ ನಾಡಿದ್ದು ಪಾರ್ಕಿನಲ್ಲಿ ಸಿಗುತ್ತೇನೆ.”

ಅಷ್ಟು ಹೇಳಿದ ರಾಜಶೇಖರ ಇಂದಿರೆಯನ್ನು ಒಳಗೆ ಬಿಟ್ಟು ಮನೆಗೆ ಹೊರಟುಹೋದರು. ರಾತ್ರಿಯಿಡೀ ಯೋಚನೆಗಳಲ್ಲಿ ಮುಳುಗಿದ್ದ ಇಂದಿರೆ ಒಂದು ದೃಢ ನಿರ್ಧಾರಕ್ಕೆ ಬಂದಿದ್ದಳು.

ಮನೆಯಲ್ಲಿ ಹೆಂಡತಿಯ ವೈದೀಕ ಮಾಡಿ ಮುಗಿಸಿದ ರಾಜಶೇಖರ ಬ್ರಾಹ್ಮಣರನ್ನು ಕಳುಹಿಸಿ, ಉಸ್ಸೆಂದು ಕುಳಿತಿದ್ದರು. ಸಾವಂತ್ರಿಯ ಸಹಾಯದಿಂದ ರಾಜಶೇಖರನ ಮನೆಗೆ ಬಂದಳು ಇಂದಿರೆ. ರಾಜಶೇಖರನಿಗೆ ಅಚ್ಚರಿಯಾಯಿತು. ಸಾವಂತ್ರಿ ಹೊರಗೆ ಹೋಗಿ ನಿಂತಳು.

“ಒಂದು ಹೊಸ ಕಾದಂಬರಿ ಬರೆಯಬೇಕೆಂದು ಶೀರ್ಷಿಕೆ ಬರೆದಿಟ್ಟಿದ್ದೇನೆ, ನೋಡುತ್ತೀರಾ?” ಎಂದಳು ಇಂದಿರೆ.

“ಓ ಖಂಡಿತ, ಯಾವುದು?” ಶೀರ್ಷಿಕೆ ಬರೆದಿದ್ದ ಪುಸ್ತಕ ತೆಗೆದುಕೊಂಡು ನೋಡಿದರು ರಾಜಶೇಖರ್‌.“ರಾ…ಜ….ಶೇ…ಖ…ರ…” ನಿಧಾನವಾಗಿ ಓದಿದ ರಾಜಶೇಖರ್‌, ಇಂದಿರೆಯ ಕಡೆ ನೋಡಿದರು.

“ಹೌದು, ರಾಜಶೇಖರ್‌ನನ್ನ ಬಾಳೆಂಬ ಆಗಸದಲ್ಲಿ ಏಳು ಬಣ್ಣಗಳನ್ನು ಮೂಡಿಸಿದ ವ್ಯಕ್ತಿ. ಬದುಕಲ್ಲಿ ಹಿಂದೆಂದೂ ಕಂಡರಿಯದ ಸ್ಛೂರ್ತಿ, ಉತ್ಸಾಹ, ಭಾವನೆಗಳನ್ನು ತುಂಬಿದ ಧೀಮಂತ ವ್ಯಕ್ತಿ. ಇಂದು ನಿಮ್ಮ ಹೆಂಡತಿಯ ವೈದೀಕ. ಅಂದರೆ ಸತ್ತವರ ಆತ್ಮ ಮನೆಗೆ ಬಂದಿರುತ್ತದೆ ಎಂಬ ನಂಬಿಕೆ ಇದೆ. ಆ ಹೆಣ್ಣಿನ `ಸ್ಥಾನ’ವನ್ನಲ್ಲದಿದ್ದರೂ, ಮುತ್ತೈದೆಯಾಗಿ ಆಕೆಯ ಆಶೀರ್ವಾದ ಪಡೆದು, ನಾನು ನಿಮಗೆ ಬಾಳಸಂಗಾತಿಯಾಗಿ ಬರಬೇಕೆಂದಿದ್ದೇನೆ. ಇದಕ್ಕೆ ನಿಮ್ಮ ಮಗ ಸೊಸೆ ಒಪ್ಪುತ್ತಾರೆಯೇ?” ಎಂದಳು ಇಂದಿರೆ.

ಇಂದಿರೆಯ ಮಾತುಗಳನ್ನು ಕೇಳಿದ ರಾಜಶೇಖರನ ಮುಖ ಸಂತಸದಿಂದ ಅರಳಿತು. ಅಷ್ಟರಲ್ಲಿ ಫೋನ್‌ ರಿಂಗಾಯಿತು.

“ಹೋ….. ಮಗು ಪ್ರದೀಪ್‌ ಹೇಗಿದ್ದೀಯಪ್ಪಾ? ನಿನ್ನ ತಾಯಿಯ ತಿಥಿ ಕಾರ್ಯ ಈಗ ಮುಗಿಯಿತು. ನಿಮ್ಮ ಅಮ್ಮನ ಆತ್ಮ ಇಂದಿಗೆ ತೃಪ್ತಿಯಾಯಿತು ಕಣೋ. ಅವಳು ತನ್ನ ಕೊನೆ ಘಳಿಗೆಯಲ್ಲಿ ಹೇಳಿದ್ದಳು, `ಎಂದಾದರೊಂದು ದಿನ ನಿಮ್ಮ ಮನಸ್ಸನ್ನು ಅರಿಯುವ ಹೆಣ್ಣು ಸಿಕ್ಕರೆ ಖಂಡಿತ ಮರುಮದುವೆ ಮಾಡಿಕೊಳ್ಳಿ’ ಅಂತ. ಈಗ ಅಂತಹ ಹೆಣ್ಣು ನನಗೆ ದೊರೆತಿದ್ದಾಳೆ. ಅದೇ ನಾನು ಪಾರ್ಕಿನಲ್ಲಿ ಭೇಟಿಯಾಗುತ್ತಿದ್ದ ಸುಪ್ರಸಿದ್ಧ ಸಾಹಿತಿ ಇಂದಿರೆಯ ಬಗ್ಗೆ ಹೇಳುತ್ತಿದ್ದೆನಲ್ಲಾ… ಆಕೆಯೇ. ನಾನು ಅವರನ್ನು ಮದುವೆಯಾಗಬೇಕೆಂದಿದ್ದೇನೆ. ಇದಕ್ಕೆ ನೀನು ಏನು ಹೇಳ್ತಿಯಪ್ಪಾ? ಆ…. ಸರಿ ಆಕೆಗೇ ಫೋನ್‌ ಕೊಡುತ್ತೇನೆ ಮಾತನಾಡು.”

ಪ್ರದೀಪನೊಂದಿಗೆ ಫೋನ್‌ನಲ್ಲಿ ಮಾತನಾಡಿದ ಮೇಲೆ ಇಂದಿರೆಯ ತುಟಿಯ ಮೇಲೆ ನಗು ಮೂಡಿತು.

“ಇಂದಿರೆ, ಇನ್ನು ಯಾಕೆ ತಡ? ಮದುವೆ ಸಿದ್ಧತೆ ನಡೆಯಲಿ, ನಿಮಗಾಗಿ ನಾನು ಏನು ಉಡುಗೊರೆ ಕೊಡುತ್ತೇನೆ ಗೊತ್ತೇ….?”

“……?”

ರಾಜಶೇಖರ ಕಾಮನಬಿಲ್ಲಿನ ಬಣ್ಣಗಳನ್ನು ಹೊತ್ತ ರೇಷ್ಮೆ ಸೀರೆಯನ್ನು ತಂದು ಇಂದಿರೆಯ ಮುಂದೆ ಹಿಡಿದು, “ಇಂದಿರೆ, ಇದು ಹೊಸದಾಗಿ ತಂದ ಸೀರೆಯಲ್ಲ. ಇದು ನನ್ನ ಮಡದಿಯದು. ಆಕೆಯ ಮತ್ತು ನಿಮ್ಮ ಅಭಿರುಚಿ ಒಂದೇ ರೀತಿ ಇದೆ,” ರಾಜಶೇಖರನ ಕಣ್ಣು ತುಂಬಿ ಬಂತು.

ಇಂದಿರೆ ಭಾವಪೂರ್ವಕವಾಗಿ ಆತನನ್ನೇ ನೋಡಿದಳು.

“ಇಂದಿರೆ ನಿನ್ನ ಕಣ್ಣ ಹೊಳಪಿನಲ್ಲಿ ಏಳು ಬಣ್ಣಗಳು ನರ್ತನಗೈಯುತ್ತಿವೆ,” ಎಂದರು ರಾಜಶೇಖರ್‌.

“ಆ ಬಾಳಿನ ಬಣ್ಣಗಳು ಶಾಶ್ವತವಾಗಿ ಹೀಗೆಯೇ ಇರಲಿ ಎಂದು ಆಶಿಸುತ್ತೇನೆ,” ಎಂದು ಇಂದಿರೆ ರಾಜಶೇಖರನ ತೋಳಬಂಧಿಯಾದಳು.

ನಾಲ್ಕೂ ಕಣ್ಣುಗಳು ಒಂದಾದವು. ಬಾಳಿನ ಮಧುರ ಬಣ್ಣಗಳು ಪ್ರೇಮರಾಗ ಹಾಡತೊಡಗಿದವು. ಆ ಪ್ರೀತಿ ಪರಿಶುಭ್ರವಾಗಿದ್ದು, ಅದರಲ್ಲಿ ಕಾಮುಕತೆಯ ಸೋಂಕಿರಲಿಲ್ಲ!!

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ