ಭರತನಾಟ್ಯ ಕಲಾವಿದೆಯಾಗಿದ್ದ ರಶ್ಮಿ, ತಾನು ಮಾಡೆಲ್ ಆಗಬೇಕೆಂದು ಕನಸು ಕಂಡಳು. ಉತ್ತಮ ಡಾಕ್ಟರ್ ವರ ಸಿಕ್ಕಿದನೆಂದು ಅವಳ ತಾಯಿ ತಂದೆ ದಿಢೀರ್ ಎಂದು ಅವಳ ಮದುವೆ ನಿಶ್ಚಯಿಸಿದಾಗ, ಅದನ್ನು ಧಿಕ್ಕರಿಸಲಾಗದೆ ಮದುವೆ ದಿನವೇ ಅವಳು ಎಲ್ಲರನ್ನೂ ಬಿಟ್ಟು ಗೆಳೆಯನನ್ನು ನಂಬಿ ಹೊರಟು ಹೋದಳು. ಮುಂದೆ ಅವಳ ಭವಿಷ್ಯ……?
ಕನ್ಸಲ್ಟೇಶನ್ ರೂಮಿನಲ್ಲಿ ಡಾ. ಸುದರ್ಶನ್ ಪೇಶೆಂಟ್ ಒಬ್ಬರನ್ನು ಪರೀಕ್ಷಿಸುತ್ತಿದ್ದರು. ರಿಸೆಪ್ಶನಿಸ್ಟ್ ಕಾಲ್ ಮಾಡಿ, “ಗುಡ್ ಮಾರ್ನಿಂಗ್ಡಾಕ್ಟರ್, ಪ್ರಶಾಂತ್ ಅಂತ ನಿಮಗೆ ಕಾಲ್ ಮಾಡಿದ್ದಾರೆ ನೋಡಿ. ಲೈನ್ ಕನೆಕ್ಟ್ ಮಾಡ್ತೀನಿ,” ಎಂದರು.
ಸುದರ್ಶನನ ಮಾವನ ಮಗ ಇನ್ ಸ್ಪೆಕ್ಟರ್ ಪ್ರಶಾಂತ್. ತನ್ನ ಮದುವೆಗೆ ಬರಲು ಸಾಧ್ಯವಿಲ್ಲ ಎಂದು ಹೇಳಿ ಡ್ಯೂಟಿಯಲ್ಲಿ ಇದ್ದ ಪ್ರಶು ಯಾವ ವಿಷಯಕ್ಕೆ ಫೋನ್ ಮಾಡ್ತಿದ್ದಾನೆ ಕೇಳೋಣ ಎಂದುಕೊಂಡ ಸುದರ್ಶನ್.
ಆ ಕಡೆಯಿಂದ ಪ್ರಶಾಂತ್, “ವಿಷಯ ಗೊತ್ತಾಯ್ತು ಸುಧೀ…. ಅತ್ತೆ ಮೊನ್ನೆ ಹೇಳಿದರು. ಆದರೆ ನಾನು ಈಗ ಹೇಳಲಿರುವ ವಿಷಯವನ್ನು ನೀನು ಹೇಗೆ ರಿಸೀವ್ ಮಾಡ್ತಿಯೋ ಗೊತ್ತಿಲ್ಲ. ನಿನ್ನೆ ರಾತ್ರಿ ರೈಡ್ ಮಾಡಿದ್ದೆ, ನಮ್ಮ ಊರಿನ ಕ್ಯೂಟಿ ಹೋಟೆಲ್ ನಲ್ಲಿ ಪ್ರಾಸ್ಟಿಟ್ಯೂಷನ್ ರೇಡ್ ಮಾಡಬೇಕಾದರೆ ಅದೇ ಹೋಟೆಲ್ ನಲ್ಲಿ ನಿನ್ನ ಹೆಂಡತಿ ರಶ್ಮಿ ಕೂಡ ಇದ್ದರು. ವಾಟ್ಸ್ ಆ್ಯಪ್ ನಲ್ಲಿ ನೀನು ಕಳುಹಿಸಿದ್ದ ನಿನ್ನ ಮದುವೆ ಫೋಟೋದಿಂದ ಆಕೆಯನ್ನು ಗುರುತಿಸಿದೆ. ಆಕೆಯನ್ನು ಕೂಡ ಕರೆದುಕೊಂಡು ಬಂದೆ. ಆದರೆ ಸೆಲ್ ಗೆ ಹಾಕಿಲ್ಲ, ತುಂಬಾ ಅಳ್ತಾ ಇದ್ದಾರೆ. ಹೆಚ್ಚು ಹೊತ್ತು ಸ್ಟೇಷನ್ ನಲ್ಲಿ ಅವರನ್ನು ಇಟ್ಟುಕೊಳ್ಳಲು ಸಾಧ್ಯವಿಲ್ಲ. ಆಕೆಗೆ ನಾನು ಯಾರು ಅಂತ ಗೊತ್ತಿಲ್ಲ. ಆದರೆ ನನಗೆ ಆಕೆ ಗೊತ್ತು. ಹಾಗಾಗಿ ನಿನಗೆ ಕಾಲ್ ಮಾಡಿದೆ. ರಶ್ಮಿ ತಂದೆ ಫೋನ್ ನಂಬರ್ ಕೊಡು,” ಎಂದ ಪೊಲೀಸ್ ಇನ್ ಸ್ಪೆಕ್ಟರ್ ಪ್ರಶಾಂತ್.
“ಫೋನ್ ನಂಬರ್ ಕೊಡೋದೇನೂ ಬೇಡ…. ನಾನೇ ಮಾವನನ್ನು ಕರೆದುಕೊಂಡು ಅಲ್ಲಿಗೆ ಬರ್ತೀನಿ. ಈಗಲೇ ಹೊರಡ್ತೀನಿ,” ಎಂದವರೇ ಅವಸರದಲ್ಲಿ ಫೋನಿಟ್ಟು ಶಿಳಿಗೆ ಕಾಲ್ ಮಾಡಿ ತನಗೆ ಎರಡು ದಿನ ಲೀವ್ ಬೇಕು ಎಂದು ಹೇಳಿ, ಬಾಕಿ ಉಳಿದಿದ್ದ ಇಬ್ಬರು ಪೇಶೆಂಟ್ ಗಳ ಕನ್ಸಲ್ಟೇಶನ್ ಮುಗಿಸಿ ಸುದರ್ಶನ್ ಆಸ್ಪತ್ರೆಯಿಂದ ಹೊರಬಂದ.
ವೆಸ್ಟ್ ಆಫ್ ಕಾರ್ಡ್ ರೋಡ್ ನಲ್ಲಿರುವ ಮಾನವರ ಮನೆಗೆ ಬಂದ. ಅವರ ಮನೆಯಲ್ಲಿ ಇನ್ನೂ ಯಾರು ತಿಂಡಿ ತಿಂದಿರಲಿಲ್ಲ. ಮದುವೆಯಾದ ದಿನವೇ ಮಗಳು, ಅಳಿಯನನ್ನು, ತಮ್ಮನ್ನು ಬಿಟ್ಟು ಓಡಿ ಹೋದ ಸಂಕಟ ಅವರಿಂದ ಜೀರ್ಣೀಸಿಕೊಳ್ಳಲು ಆಗಿರಲಿಲ್ಲ. ಸುದರ್ಶನ್ ದಿಢೀರ್ಎಂದು ಬಂದಿದ್ದನ್ನು ನೋಡಿ ಒಂದು ಕ್ಷಣ ಅವರಿಗೆ ಗಾಬರಿಯಾಯಿತು. ಏನು ಹೇಳಬೇಕೋ ಗೊತ್ತಾಗಲಿಲ್ಲ.
“ಅಳಿಯಂದ್ರೆ ಬನ್ನಿ, ತಿಂಡಿ ತಿನ್ನಿ,” ಎಂದು ಮಾವ ರಾಜಶೇಖರ್ ಫಾರ್ಮಾಲಿಟಿಗಾಗಿ ಹೇಳಿದರು.
“ಮಾವ ಒಂದು ವಿಷಯ ಹೇಳಬೇಕಾಗಿದೆ, ರಶ್ಮಿ ಸಿಕ್ಕಿದ್ದಾರೆ. ಚಿತ್ರದುರ್ಗದಲ್ಲಿ ಇದ್ದಾರೆ. ನನ್ನ ಕಸಿನ್ ಪ್ರಶಾಂತ್ ಅಂತ, ಅಲ್ಲಿ ದುರ್ಗದಲ್ಲಿ ಪೊಲೀಸ್ ಇನ್ ಸ್ಪೆಕ್ಟರ್ ಆಗಿದ್ದಾನೆ. ಅವನಿಗೆ ಸಿಕ್ಕಿದ್ದಾರೆ,” ಎಂದ.
“ಪೊಲೀಸ್ ರೇಡ್…. ನನ್ನ ಮಗಳನ್ನು ಅಲ್ಲಿ ನೋಡುವ ಕರ್ಮ….. ಛೇ…!” ಎಂದು ರಾಜಶೇಖರ್ ಬೇಸರಗೊಂಡರು.
“ಮಾವ, ನೀವು ತಿಳಿದಿರುವವರು. ನೀವೇ ಹೀಗೆ ಮಾತಾಡಿದ್ರೆ ರಶ್ಮಿಗೆ ಯಾರು ಸಹಾಯ ಮಾಡ್ತಾರೆ? ನಾವೇ ಸಹಾಯ ಮಾಡಬೇಕು ಬನ್ನಿ ಹೋಗೋಣ,” ಎಂದ ಸದರ್ಶನ್.
“ನೋ… ನಾನಿ ಬರಲ್ಲ. ನನ್ನ ಮರ್ಯಾದೆಯನ್ನು ಹಾಳು ಮಾಡಿದ ಅವಳು ನನ್ನ ಮಗಳೇ ಅಲ್ಲ!” ರಶ್ಮಿ ಮೇಲಿನ ಆಕ್ರೋಶ ಅವರಿಗಿನ್ನೂ ಇಳಿದಿರಲಿಲ್ಲ.
ಮಗಳ ಹೆಸರನ್ನು ಕೇಳುತ್ತಲೇ ಅತ್ತೆ ರೂಮಿನಿಂದ ದೌಡಾಯಿಸಿ ಬಂದು, “ರಶ್ಮಿ ಸಿಕ್ಕಿದ್ದಾಳೆಯೇ? ಎಲ್ಲಿದ್ದಾಳೆ….? ಹೇಗಿದ್ದಾಳೆ…?” ಎಂದು ಕೇಳಿದರು. ಮಕ್ಕಳು ಎಷ್ಟೇ ತಪ್ಪು ಮಾಡಿದರೂ ತಾಯಿ ಹೃದಯ ಕ್ಷಮಿಸಿ ಬಿಡುತ್ತದೆ.
“ಅತ್ತೆ ನೀವು ನನ್ನ ಜೊತೆ ಬರ್ತೀರಾ…?” ಎಂದು ಸುದರ್ಶನ್ ಅತ್ತೆ ಸರೋಜಿನಿಯನ್ನು ಕೇಳಿದ.
“ಹೌದು ಬರ್ತೀನಿ…” ಎಂದರು. ಗಂಡನ ಪರ್ಮೀಶನ್ ಕೂಡ ಈಗ ಆಕೆಗೆ ಬೇಕಾಗಿರಲಿಲ್ಲ. ಅವರಿಗೆ ಆ ಕ್ಷಣ ಮಗಳ ಮುಖ ನೋಡಬೇಕಿತ್ತು. ಅವರ ಮನಸ್ಸಿನಲ್ಲಿ ಎದ್ದಿದ್ದ ಹಲವಾರು ಪ್ರಶ್ನೆಗಳಿಗೆ ಉತ್ತರ ಬೇಕಿತ್ತು.
ಸುದರ್ಶನ್ ಮತ್ತು ಅವನ ಅತ್ತೆ ಸರೋಜಿನಿ ಇಬ್ಬರೂ ಚಿತ್ರದುರ್ಗಕ್ಕೆ ಹೊರಟರು. ಪ್ರಯಾಣ ಮಾಡುತ್ತಿದ್ದ ಸುದರ್ಶನ್ ಗೆ ರಶ್ಮಿಯನ್ನು ಭೇಟಿಯಾದ ದಿನ ನೆನಪಿಗೆ ಬಂದಿತು.
ತಾನು ಪ್ರೀತಿಯಿಂದ ವೈನಿ ಎಂದೇ ಕರೆಯುತ್ತಿದ್ದ ಡಾ. ಸುನೀತಾರ ತಂಗಿ ವನಿತಾ ಮದುವೆಗೆ ಹೋಗಿದ್ದ. ಡಾ. ಸುದರ್ಶನ್ ಮತ್ತು ಡಾ. ಸುನೀತಾ ಕಲೀಗ್ಸ್. ಆಕೆಗೆ ಸುದರ್ಶನ್ ಮೇಲೆ ಅಭಿಮಾನ, ತನ್ನ ಸ್ವಂತ ತಮ್ಮನ ಹಾಗೆಯೇ ನಡೆಸಿಕೊಳ್ಳುತ್ತಿದ್ದರು. ಸುನೀತಾ ತಂಗಿ ವನಿತಾಳ ಸ್ನೇಹಿತೆಯೇ ರಶ್ಮಿ.
ಮದುವೆ ಮನೆಯಲ್ಲಿ ಆಕರ್ಷಕವಾಗಿ, ತುಂಬಾ ಚೂಟಿಯಾಗಿ ಓಡಾಡಿಕೊಂಡಿದ್ದ ರಶ್ಮಿಯ ಮೇಲೆಯೇ ಎಲ್ಲರ ಕಣ್ಣು. ಅವಳು ಅಪ್ರತಿಮ ಸುಂದರಿ, ಜೊತೆಗೆ ಭರತನಾಟ್ಯ ಕಲಾವಿದೆ. ನೋಡಿದ ಮೇಲೂ ಮತ್ತೊಮ್ಮೆ ನೋಡುವಷ್ಟು ಅದ್ಭುತ ಸೌಂದರ್ಯವತಿ. ಸುದರ್ಶನ್ ಅವಳ ಸೌಂದರ್ಯಕ್ಕೆ ಮರುಳಾಗಿರಲಿಲ್ಲ. ಆದರೆ ಅವಳ ಲವಲವಿಕೆ, ಹುಡುಗಾಟಿಕೆ ಅವನನ್ನು ಆಕರ್ಷಿಸಿತ್ತು. ಅವಳು ಹೋದಲೆಲ್ಲಾ ಹುಡುಗರ ದಂಡು ಅವಳನ್ನು ಹಿಂಬಾಲಿಸುತ್ತಿತ್ತು.
ಮದುವೆ ರಿಸೆಪ್ಷನ್ ನಲ್ಲಿ ಅವಳ ನೃತ್ಯ ಪ್ರದರ್ಶನಕ್ಕೆ ಜನರೆಲ್ಲಾ ಎದ್ದು ನಿಂತು ಚಪ್ಪಾಳೆ ತಟ್ಟಿದ್ದರು. ನಂತರ ರಶ್ಮಿ ಮತ್ತು ಗೆಳತಿಯರ ತಂಡದಿಂದ ಫ್ಯಾಷನ್ ಶೋ ಕೂಡ ನಡೆಯಿತು. ಡಾ. ಸುದರ್ಶನ್ ಕಣ್ಣು ರಶ್ಮಿ ಹಿಂದೆಯೇ ಅಲೆದಾಡುತ್ತಿರುವುದನ್ನು ಸುನೀತಾ ವೈನಿ ಗಮನಿಸಿದ್ದರು.
“ಅವಳು ನಮ್ಮ ವನಿತಾಳ ಫ್ರೆಂಡ್ ರಶ್ಮಿ ಅಂತ. ಅವಳನ್ನು ಮದುವೆಯಾಗ್ತೀಯಾ…?” ಎಂದು ಸುದರ್ಶನನನ್ನು ಕೇಳಿದರು. ಡಾ. ಸುನೀತಾರ ನೇರ ನುಡಿಗೆ ಏನು ಹೇಳಬೇಕೋ ಗೊತ್ತಾಗದೆ, “ಇಲ್ಲ ವೈನಿ…. ಸುಮ್ಮನೆ ಹಾಗೆ ನೋಡ್ತಾ ಇದ್ದೀನಿ,” ಎಂದು ಮನದಾಸೆಯನ್ನು ಮರೆ ಮಾಚಿದ ಸುದರ್ಶನ್.
“ನೀನು ಸುಮ್ಮನೆ ಯಾರನ್ನೂ ನೋಡುವವನಲ್ಲ ಎಂದು ಗೊತ್ತಿದೆ. ನಿನಗೆ ರಶ್ಮಿ ಇಷ್ಟ ಆದ್ರೆ ಹೇಳು. ಅವರ ತಂದೆ ರಾಜಶೇಖರ್ನಮ್ಮ ಫ್ಯಾಮಿಲಿಗೆ ತುಂಬಾ ಪರಿಚಿತರು. ಅವರು ಬ್ಯಾಂಕ್ ನಲ್ಲಿ ಮ್ಯಾನೇಜರ್ ಆಗಿದ್ದಾರೆ. ಅವರ ಮಗಳೇ ರಶ್ಮಿ. ನಮ್ಮ ವನಿತಾಳ ಆತ್ಮೀಯ ಸ್ನೇಹಿತೆ. ನಿಮ್ಮಿಬ್ಬರ ಜೋಡಿ ಬಾಳ ಮಸ್ತ್ ಇರುತ್ತದೆ,” ಎಂದು ಸುದರ್ಶನ್ ಆಸೆಗೆ ಇಂಬು ಕೊಟ್ಟರು ಡಾ. ಸುನೀತಾ.
ಯಾಕೋ ಯಾವ ಹುಡುಗಿಯನ್ನು ಇಷ್ಟಪಡದ ಡಾ. ಸುದರ್ಶನ್, ರಶ್ಮಿಯನ್ನು ನೋಡಿದಾಗ ಮದುವೆ ಆಗಬೇಕೆಂದು ಮೊದಲ ಬಾರಿಗೆ ಗಟ್ಟಿಯಾಗಿ ನಿರ್ಧರಿಸಿದ.
ಸುನೀತಾ ವೈನಿ ರಾಜಶೇಖರ್ ದಂಪತಿ ಜೊತೆ ಮಾತಾಡಿ ಮದುವೆಗೆ ಹುಡುಗಿ ನೋಡುವ ಶಾಸ್ತ್ರ ಏರ್ಪಡಿಸಿದರು. ರಶ್ಮಿ ಮನೆಗೆ ಹೋಗಿದ್ದಾಗ, ಮದುವೆ ಮನೆಯಲ್ಲಿ ಗಮನಿಸಿದ್ದ ತುಂಟತನ, ಲವಲವಿಕೆ ಆ ದಿನ ಅವಳ ಮುಖದಲ್ಲಿ ಕಾಣಲಿಲ್ಲ. ಮದುವೆಯ ವಿಷಯವಾದ್ದರಿಂದ ಗಂಭೀರವಾಗಿರಬೇಕು ಎಂದುಕೊಂಡ.
ಎರಡು ಮನೆಯವರಿಗೂ ಈ ಸಂಬಂಧ ಇಷ್ಟವಾಯಿತು. ಮಾಡೆಲಿಂಗ್ ಕ್ಷೇತ್ರದಲ್ಲಿ ತಾನು ಗುರುತಿಸಿಕೊಳ್ಳಬೇಕು, ಪ್ರಸಿದ್ಧಿ ಪಡೆಯಬೇಕು ಎಂಬ ಆಕಾಂಕ್ಷೆ ಹೊತ್ತಿದ್ದ ರಶ್ಮಿಗೆ ಈ ಮದುವೆ ಇಷ್ಟವಾಗಿರಲಿಲ್ಲ. ಆದರೆ ತನ್ನ ತಾಯಿ ತಂದೆಯರ ಒತ್ತಾಯಕ್ಕೆ ಅವಳು ಮಣಿಯಬೇಕಿತ್ತು.
ಹಿಂದಿನ ದಿನ ಅಪ್ಪ ಮಗಳ ನಡುವೆ ಸಾಕಷ್ಟು ವಾಗ್ವಾದವಾಗಿತ್ತು. “ಅಪ್ಪಾ, ಎಲ್ಲವನ್ನೂ ನನ್ನಿಷ್ಟದ ಪ್ರಕಾರ ಮಾಡಲು ಅವಕಾಶ ಕೊಟ್ಟು, ಈಗ ಮದುವೆ ವಿಚಾರವನ್ನು ನಿಮ್ಮಿಷ್ಟದಂತೆ ಮಾಡುವುದು ಸರಿಯೇ…?” ಎಂದು ಕೇಳಿದಳು.
ಮಗಳ ಪ್ರಶ್ನೆಗೆ ರಾಜಶೇಖರ್, “ನಿನ್ನ ಪ್ರತಿಯೊಂದು ನಿರ್ಧಾರಗಳನ್ನು ನಿನಗೆ ಬಿಟ್ಟಿರುವೆ. ಆದರೆ ಮದುವೆಯಂತಹ ಮಹತ್ವದ ವಿಷಯವನ್ನು ತೀರ್ಮಾನ ಮಾಡುವಾಗ ನಿನ್ನ ಬುದ್ಧಿಮಟ್ಟ ಇನ್ನೂ ಚಿಕ್ಕದಿದೆ ರಶ್ಮಿ….. ಹಾಲು ಯಾವುದು? ಮೊಸರು ಯಾವುದು? ಎಂಬುದನ್ನು ಜೀವನ ಪಾಠ ನಮಗೆ ಅನುಭವದಿಂದ ತಿಳಿದಿದೆ. ಹಾಗಾಗಿಯೇ ಈ ನಿರ್ಧಾರ ಮಾಡಿದ್ದೇವೆ,” ಎಂದಾಗ ಅವಳಿಗೆ ಮರು ಉತ್ತರ ಕೊಡುವ ಧೈರ್ಯವಿರಲಿಲ್ಲ.
ಆ ದಿನ ಹುಡುಗ ಹುಡುಗಿ ಪ್ರೈವೇಟ್ ಆಗಿ ಮಾತನಾಡಲು ಅವಕಾಶ ನೀಡಿದರು ರಾಜಶೇಖರ್. ಸುದರ್ಶನ್ ತನ್ನ ಭಾವಿ ಪತ್ನಿಯೊಂದಿಗೆ ಮಾತನಾಡುವಾಗ, “ನನಗೆ ನೀವು ಇಷ್ಟ ಆಗಿದ್ದೀರಿ. ನಿಮಗೆ ನಾನು ಇಷ್ಟ ಆಗಿದ್ದೀನಾ….?” ನೇರವಾಗಿ ಕೇಳಿದ
“ನೀವು ನಮ್ಮ ತಾಯಿ ತಂದೆಗೆ ಇಷ್ಟವಾಗಿರುವಿರಿ. ಅವರ ಇಷ್ಟವೇ ನನ್ನ ಇಷ್ಟ,” ಎಂದಷ್ಟೇ ಹೇಳಿದಳು ರಶ್ಮಿ.
“ಮತ್ತೊಮ್ಮೆ ಕೇಳ್ತಾ ಇದ್ದೀನಿ…. ನಿಮ್ಮ ಮನಸ್ಸಿಗೆ ನಾನು ಇಷ್ಟವಾಗಲಿಲ್ಲವೇ….?” ಎಂದು ಸುದರ್ಶನ್ ಅವಳನ್ನು ನೇರವಾಗಿ ಕೇಳಿದರೂ ಸರಿಯಾದ ಉತ್ತರ ದೊರೆಯಲಿಲ್ಲ. ಅವಸರದಲ್ಲಿ ಎಂಗೇಜ್ ಮೆಂಟ್ ಕೂಡ ನಡೆಯಿತು. ರಶ್ಮಿಯೊಂದಿಗೆ ಹೆಚ್ಚು ಕಾಲ ಕಳೆಯುವ ಅವಕಾಶ ದೊರೆಯಲಿಲ್ಲ. ಅದೆಷ್ಟೋ ಬಾರಿ ಅವಳನ್ನು ಭೇಟಿಯಾಗುವ ಪ್ರಯತ್ನ ಮಾಡಿದರೂ ಅದು ಸಫಲವಾಗಲಿಲ್ಲ. ಒಂದಿಲ್ಲೊಂದು ಕಾರಣದಿಂದ ರಶ್ಮಿ ಅವನನ್ನು ಭೇಟಿಯಾಗದೆ ತಪ್ಪಿಸಿಕೊಳ್ಳುತ್ತಿದ್ದಳು.
ಮದುವೆಯ ದಿನ ಬಂದೇಬಿಟ್ಟಿತು. ಮದುಮಗಳಾಗಿ ಅವಳ ಸೌಂದರ್ಯ ಎರಡು ಪಟ್ಟು ಹೆಚ್ಚಾಗಿತ್ತು. ಮದುವೆ ಶಾಸ್ತ್ರವೆಲ್ಲ ಮುಗಿದು ಮೊದಲ ರಾತ್ರಿಯ ತಯಾರಿಯ ಸಂಭ್ರಮದಲ್ಲಿ ಎರಡೂ ಮನೆಯವರು ಸಿದ್ಧರಾಗಿದ್ದರು.
ಆದರೆ ಸ್ವಲ್ಪ ಹೊತ್ತಿನಲ್ಲೇ ಆ ಸಂಭ್ರಮ ಕಳೆದುಹೋಗಿತ್ತು. ಏಕೆಂದರೆ ಮದುಮಗಳು ರಶ್ಮಿ ಮದುವೆ ಮನೆಯಿಂದ ಕಾಣೆಯಾಗಿದ್ದಳು. ಮೂರು ದಿನ ನಂತರವಷ್ಟೇ ಡಾ. ಸುದರ್ಶನ್ ಗೆ ರಶ್ಮಿ ಚಿತ್ರದುರ್ಗದಲ್ಲಿರುವ ಹೋಟೆಲ್ ನಲ್ಲಿ ಸಿಕ್ಕಿರುವಳೆಂದು ಮಾವನ ಮಗನಿಂದ ವಿಷಯ ತಿಳಿಯಿತು.
ಆ ದಿನ ಚಿತ್ರದುರ್ಗದಲ್ಲಿ ರಶ್ಮಿಯನ್ನು ಸುದರ್ಶನ್ ಮತ್ತು ಸರೋಜಿನಿ ಭೇಟಿಯಾದರು. ರಶ್ಮಿ ಓಡಿ ಬಂದು ತನ್ನ ತಾಯಿಯನ್ನು ತಬ್ಬಿಕೊಂಡು ಅಳಲಾರಂಭಿಸಿದಳು. ಮೂರೇ ದಿನಕ್ಕೆ ಅವಳು ಬಹಳ ಕೃಶವಾಗಿದ್ದಳು. ಆತಂಕ, ಗಾಬರಿಯಿಂದ ಮಾನಸಿಕವಾಗಿ ಕುಗ್ಗಿ ಹೋಗಿದ್ದಳು.
ಇನ್ ಸ್ಪೆಕ್ಟರ್ ಪ್ರಶಾಂತ್ ತನ್ನ ಹೈಯರ್ ಆಫೀಸರ್ ರೊಂದಿಗೆ ಪರ್ಸನಲ್ ಆಗಿ ಮಾತನಾಡಿ ಮುಂದಿನ ಪ್ರೊಸೀಡಿಂಗ್ಸ್ ತೊಂದರೆ ಇಲ್ಲದಂತೆ ನಡೆಸಿ ರಶ್ಮಿಯನ್ನು ಸ್ಟೇಷನ್ ನಿಂದ ತೆರಳಲು ಅವಕಾಶ ಮಾಡಿಕೊಟ್ಟರು. ಕಾರಿನ ಹಿಂಬದಿಯ ಸೀಟಿನಲ್ಲಿ ರಶ್ಮಿ ಮತ್ತು ಅತ್ತೆ ಸರೋಜಿನಿ ಅಳುತ್ತಲೇ ಇದ್ದರು.
ತಾನಾಗಿಯೇ ಎಲ್ಲ ವಿಷಯವನ್ನು ಹೇಳುವವರೆಗೂ ರಶ್ಮಿಯನ್ನು ಯಾವುದೇ ರೀತಿಯಲ್ಲಿ ಪ್ರಶ್ನಿಸಬಾರದೆಂದು ಚಿತ್ರದುರ್ಗಕ್ಕೆ ಹೋಗುವ ಮೊದಲೇ ಸುದರ್ಶನ್ ಸರೋಜಿನಿಗೆ ತಿಳಿಸಿದ್ದ. ಹಾಗಾಗಿ ಆಕೆ ರಶ್ಮಿಯನ್ನು ಸಮಾಧಾನಪಡಿಸುವ ಪ್ರಯತ್ನ ಮಾಡಿದರೇ ಹೊರತು ಯಾವುದೇ ಪ್ರಶ್ನೆ ಕೇಳಲಿಲ್ಲ.
ಆದರೆ ರಶ್ಮಿ ಅಳುತ್ತಲೇ ಇದ್ದಳು. ಸ್ಟೇಷನ್ ನಿಂದ ಹೊರ ಬಂದ ನಂತರ ಸುದರ್ಶನ್ ತಕ್ಷಣವೇ ಅವಳನ್ನು ಹೋಟೆಲ್ ಗೆ ಕರೆದುಕೊಂಡು ಹೋಗಿ ಊಟ ಕೊಡಿಸಿದ. ಹಾಗೆಯೇ ಪಕ್ಕದಲ್ಲೇ ಇದ್ದ ಬಟ್ಟೆ ಅಂಗಡಿಯಿಂದ ಒಳ್ಳೆಯ ಬಟ್ಟೆ ಕೊಡಿಸಿದ. ಏಕೆಂದರೆ ಅವಳು ಧರಿಸಿದ್ದ ಉಡುಪಿನಲ್ಲಿ ಯಾರೇ ನೋಡಿದರೂ ಅಪಾರ್ಥ ಮಾಡಿಕೊಳ್ಳುವ ಸಾಧ್ಯತೆ ಇತ್ತು. ರಶ್ಮಿಯನ್ನು ಆ ಸ್ಥಿತಿಯಲ್ಲಿ ಮಾವ ರಾಜಶೇಖರ್ ನೋಡಿದರೆ ಖಂಡಿತಾ ಅವರಿಗೆ ತಡೆದುಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಊಹಿಸಿದ ಸುದರ್ಶನ್ ಅವಳನ್ನು ಸುಸ್ಥಿತಿಯಲ್ಲಿಡುವ ಪ್ರಯತ್ನ ಮಾಡಿದ್ದ.
ಮಗಳನ್ನು ಮನೆಗೆ ಕರೆದುಕೊಂಡು ಹೋಗುವ ಇರಾದೆ ತಾಯಿ ಸರೋಜಿನಿಗೆ ಇದ್ದರೂ ಗಂಡ ರಾಜಶೇಖರ್ ಮಗಳನ್ನು ಮತ್ತೆ ಒಪ್ಪಿಕೊಳ್ಳುತ್ತಾರೆಯೇ? ನಮ್ಮ ಮನೆಗೆ ಕರೆದುಕೊಂಡು ಹೋಗುವುದೋ ಅಥವಾ ಅಳಿಯ ಸುದರ್ಶನ್ ತಮ್ಮ ಮನೆಗೆ ಕರೆದುಕೊಂಡು ಹೋಗುವರೋ ಎಂಬ ಗೊಂದಲ ಆಕೆಯಲ್ಲಿತ್ತು.
ಸುದರ್ಶನ್ ಮೊದಲಿಗೆ ರಶ್ಮಿಯನ್ನು ತವರುಮನೆಗೆ ಕರೆದುಕೊಂಡು ಹೋದ. ಆದರೆ ರಾಜಶೇಖರ್ ಗೆ ಮಗಳ ಮೇಲಿನ ಆಕ್ರೋಶ ಕಡಿಮೆಯಾಗಿರಲಿಲ್ಲ. ಮನೆಯ ಬಾಗಿಲಿಗೆ ಬಂದ ಮಗಳನ್ನು ಮನಸ್ಸಿಗೆ ಬಂದಂತೆ ಬೈಯ್ಯುವುದಕ್ಕೆ ತೊಡಗಿದರು. ತನ್ನ ಮರ್ಯಾದೆಯನ್ನು ಹಾಳು ಮಾಡಿದ ಮಗಳನ್ನು ಮನೆಯೊಳಗೆ ಸೇರಿಸಿಕೊಳ್ಳಲಿಲ್ಲ. ನಂತರ ಸುದರ್ಶನ್ ತನ್ನ ಮನೆಗೆ ರಶ್ಮಿಯನ್ನು ಕರೆದುಕೊಂಡು ಹೋಗುತ್ತೇನೆ ಎಂದ. ಆದರೆ ರಶ್ಮಿ ಸುದರ್ಶನ್ ಮನೆಗೆ ಹೋಗಲು ಒಪ್ಪಲಿಲ್ಲ.
ಸುದರ್ಶನ್ ಮತ್ತು ಸರೋಜಿನಿಗೆ ಈಗ ರಶ್ಮಿಯನ್ನು ಎಲ್ಲಿ ಉಳಿಸಿಕೊಳ್ಳುವುದು ಎಂದು ಅರ್ಥವಾಗದಿದ್ದಾಗ, ಸುನೀತಾ ವೈನಿ ಫೋನ್ ಮಾಡಿದ್ದರು.
ಸುನೀತಾರಿಗೆ ಈಗಾಗಲೇ ಚಿತ್ರದುರ್ಗದ ವಿಷಯವನ್ನು ತಿಳಿಸಿದ್ದ ಸುದರ್ಶನ್. ಕೆಲವು ದಿನಗಳ ಮಟ್ಟಿಗೆ ರಶ್ಮಿಯನ್ನು ತಮ್ಮ ಮನೆಯಲ್ಲಿ ಇರಿಸಿಕೊಳ್ಳುವುದಾಗಿ ಭರವಸೆ ನೀಡಿದರು.
ಮಾನಸಿಕವಾಗಿ ಆಘಾತಗೊಂಡಿದ್ದ ರಶ್ಮಿ ಒಂದು ವಾರದಲ್ಲಿ ಚೇತರಿಸಿಕೊಂಡಳು. ತಾನು ಮಾಡಿದ ತಪ್ಪಿನ ಅರಿವಾಗಿತ್ತವಳಿಗೆ. ತಾಯಿ ಸಹಜವಾಗಿ ಪ್ರೀತಿ ತೋರಿಸಿದರೂ, ತಂದೆಯನ್ನು ಅತಿಯಾಗಿ ಹಚ್ಚಿಕೊಂಡಿದ್ದ ರಶ್ಮಿಗೆ ಅವರಿಂದ ಒಂದು ಫೋನ್ ಕಾಲ್ ಕೂಡ ಬಾರದ್ದಿದ್ದುದು ಇನ್ನೂ ಹೆಚ್ಚು ಬೇಸರ ತಂದಿತ್ತು.
ತನ್ನ ತಂದೆಯ ಒತ್ತಾಯದ ಮೇರೆಗೆ, ಒಲ್ಲದ ಮನಸ್ಸಿನಿಂದ ಮದುವೆಗೆ ಒಪ್ಪಿಕೊಂಡಿದ್ದಳು, ಮಾಡೆಲಿಂಗ್ ಕ್ಷೇತ್ರದಲ್ಲಿ ಪ್ರಸಿದ್ಧಿ ಪಡೆಯಬೇಕೆಂಬುದು ಅವಳ ಆಕಾಂಕ್ಷೆಯಾಗಿತ್ತು. ಆತ್ಮೀಯ ಸ್ನೇಹಿತನಂತೆ ನಾಟಕವಾಡಿದ್ದ, ಮಾಡೆಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ ಮೋಹನ್, ಮದುವೆಯ ದಿನವೇ ಅಲ್ಲಿಂದ ಹೊರಬರುವಂತೆ ಅವಳನ್ನು ಪ್ರೇರೇಪಿಸಿದ್ದ. ತಾನು ಮುಂಬೈನಲ್ಲಿ ಅವಳಿಗೆ ಕೆಲಸ ಕೊಡಿಸುವುದಾಗಿ ಮಾಡೆಲಿಂಗ್ ಕ್ಷೇತ್ರದಲ್ಲಿ ಪ್ರಸಿದ್ಧಿ ಪಡೆಯುವಂತೆ ಮಾಡಿಸುವೆ ಎಂದು ಸುಳ್ಳು ಭರವಸೆ ನೀಡಿದ್ದ. ಮದುವೆಯಾದ ನಂತರ ಮಾಡೆಲಿಂಗ್ ಮಾಡುವುದು ಕಷ್ಟ ಸಾಧ್ಯ ಎಂದು ಭಾವಿಸಿದ ರಶ್ಮಿ ಮದುವೆ ದಿನವೇ ಯಾರಿಗೂ ತಿಳಿಸದೆ ಹೊರ ಹೋಗಲು ನಿರ್ಧರಿಸಿದಳು.
ಆನಂತರ ಮೋಹನ್ ಅವಳನ್ನು ಚಿತ್ರದುರ್ಗಕ್ಕೆ ಕರೆದುಕೊಂಡು ಹೋಗಿದ್ದ. ಅಲ್ಲಿ ಅವನು ತನಗೇನೂ ಯಾವುದೇ ರೀತಿಯ ಹಾನಿ ಮಾಡದಿದ್ದರೂ ತನ್ನ ವಿವಿಧ ಭಾವಭಂಗಿಗಳ ಫೋಟೋ ತೆಗೆದು ವಿದೇಶಕ್ಕೆ ಮಾರಾಟ ಮಾಡುವ ಹೊಂಚು ಹಾಕಿದ್ದ ಎಂಬ ವಿಷಯ ನಿಧಾನವಾಗಿ ಅರ್ಥವಾಗಿತ್ತು. ತಾಯಿ ತಂದೆಯಿಂದ ದೂರಾಗಿ, ಮದುವೆಯ ಸಂಬಂಧವನ್ನು ಮುರಿದುಕೊಂಡು ತಾನು ಎಂತಹ ದೊಡ್ಡ ತಪ್ಪು ಮಾಡಿಬಿಟ್ಟೆ ಎಂದು ತನ್ನ ಮೂರ್ಖತನಕ್ಕೆ ಪಶ್ಚಾತ್ತಾಪಪಟ್ಟಳು.
ತಕ್ಷಣವೇ ಅಲ್ಲಿಂದ ಹೊರಟು ಬಿಡಬೇಕೆಂದು ತೀರ್ಮಾನಿಸಿದ ಅವಳು ಮೋಹನ್ ನಿಂದ ತಪ್ಪಿಸಿಕೊಂಡು, ಅವನನ್ನೇ ರೂಮಿನಲ್ಲಿ ಲಾಕ್ ಮಾಡಿ ಹೊರಬಂದ ರಶ್ಮಿಯ ಬಳಿ ಸ್ವಲ್ಪವೇ ಹಣ ಉಳಿದಿತ್ತು. ಮೂರು ದಿನಗಳಿಂದ ಸರಿಯಾಗಿ ಊಟ ಮಾಡದೇ ಇದ್ದ ರಶ್ಮಿ ತನ್ನ ಬಳಿಯಿದ್ದ ಹಣದಿಂದ ಅದೇ ಕ್ಯೂಟಿ ಹೋಟೆಲ್ ನಲ್ಲಿ ಜ್ಯೂಸ್ ಕುಡಿಯುತ್ತಿದ್ದಾಗ, ಅವಳ ಪಕ್ಕ ಅಪರಿಚಿತ ವ್ಯಕ್ತಿಯೊಬ್ಬ ಬಂದು ಕುಳಿತ. ಅವನು ಹತ್ತಿರ ಬಂದು ಅವ್ಯವಹಾರಕ್ಕಾಗಿ ಅವಳ ಬಳಿ ವಿಚಾರಿಸುವಷ್ಟರಲ್ಲಿ ಪೊಲೀಸ್ ಬಂದು ಅವನನ್ನು ಕರೆದುಕೊಂಡು ಹೋಗಿದ್ದರು.ರಶ್ಮಿಯ ಅದೃಷ್ಟೀ ಏನೋ ಅಳ ಮಾನಹಾನಿ ಆಗಿರಲಿಲ್ಲ. ಪ್ರಾಣ ಹಾನಿಯಾಗು ಮುನ್ನೀ ಪೊಲೀಸರ ಅತಿಥಿಯಾಗಿ ಸ್ಟೇಷನ್ನಿಗೆ ಬಂದಿದ್ದಳು. ಇನ್ಸ್ಪೆಕ್ಟರ್ಪ್ರಶಾಂತ್ಎದುರು, ಬೆಸ್್ಟ ಫ್ರೆಂಡ್ಆಗಿದ್ದ ವೋಹನ್, ತನಗೆ ಮಾಡೆಲಿಂಗ್ಗೆ ಅಕಾಶ ದೊರಕಿಸಿ ಕೊಡುವುದಾಗಿ ಅಲ್ಲಿಯವರೆಗೆ ಅವನ ಅಕ್ಕನ ಮನೆಯಲ್ಲಿ ಇರಿಸುವುದಾಗಿ ನಂಬಿಸಿ ಚಿತ್ರದುರ್ಗಕ್ಕೆ ಕರೆದುಕೊಂಡು ಹೋಗಿ, ಅಲ್ಲಿ ಕ್ಯೂಟಿ ಹೋಟೆಲ್ ನಲ್ಲಿ ಹೋಗಿ ಇರಿಸಿದ್ದರ ಬಗ್ಗೆ ಎಲ್ಲವನೂ ವಿವರವಾಗಿ ತಿಳಿಸಿದ್ದಳು.
ರಶ್ಮಿಯನ್ನು ನಂಬಿಸಿ ಕುತಂತ್ರ ಮಾಡಿದ್ದ ಮೋಹನ್ ನನ್ನು ಸೆಲ್ ಕಂಬಿಗಳ ಹಿಂದೆ ಹಾಕಿದ್ದ ಇನ್ ಸ್ಪೆಕ್ಟರ್ ಪ್ರಶಾಂತ್, ಅವನಿಗೆ ಸಿಗಬೇಕಾದ ತಕ್ಕ ಶಿಕ್ಷೆಯನ್ನು ನೀಡಿದ್ದ. ರಶ್ಮಿಯ ಮನದಲ್ಲಿ ಸಂಘರ್ಷ ನಡೆದಿತ್ತು. ತನ್ನನ್ನು ಹೆಚ್ಚು ಪ್ರೀತಿಸಿದ ತಾಯಿ ತಂದೆ ತನ್ನ ನಿರ್ಧಾರಗಳಿಗೆ ಬೆಂಬಲ ನೀಡದೆ ಮದುವೆ ಮಾಡಿದ ಬಗ್ಗೆ, ತನ್ನ ಆತ್ಮೀಯ ಸ್ನೇಹಿತನಂತೆ ವರ್ತಿಸಿ ಮೋಸ ಮಾಡಿದ್ದ ಮೋಹನನ ಮೇಲೆ, ಯಾವುದನ್ನೂ ಸ್ಪಷ್ಟವಾಗಿ ಅರ್ಥೈಸಿಕೊಳ್ಳದ ತನ್ನ ಬಗ್ಗೆ ತಾನೇ ಬೇಸರಗೊಂಡಿದ್ದಳು. ಈ ಎಲ್ಲ ಘಟನೆಗಳಿಂದ ಅವಳ ಮನಸ್ಸಿಗೆ ಬಹಳ ಘಾಸಿಯಾಗಿತ್ತು.
ಬೆಂಗಳೂರಿಗೆ ಹಿಂದಿರುಗಿದ ಕೆಲವು ದಿನಗಳ ನಂತರ ಈ ವಿಷಯವನ್ನೆಲ್ಲಾ ಡಾಕ್ಟರ್ ಸುನೀತಾ ಮತ್ತು ಸ್ನೇಹಿತೆ ವನಿತಾಳೊಂದಿಗೆ ರಶ್ಮಿ ಹಂಚಿಕೊಂಡಿದ್ದಳು. ನಂತರ ಈ ವಿಷಯ ಅವಳ ತಾಯಿ ತಂದೆಗೂ ಕೂಡ ತಿಳಿಯಿತು. ಸುನೀತಾ ಮರುದಿನ ಸುದರ್ಶನ್ ನ್ನು ಭೇಟಿ ಮಾಡಿ ವಿಷಯವನ್ನೆಲ್ಲ ತಿಳಿಸಿ ರಶ್ಮಿ ತನ್ನ ತಪ್ಪನ್ನು ಒಪ್ಪಿಕೊಂಡರೆ ಜೊತೆಯಾಗಿ ಜೀವನ ಮುಂದುವರಿಸಿ ಎಂದು ಹಾರೈಸಿದರು. ಆದರೆ ಈಗಲೂ ಡಾ. ಸುದರ್ಶನ್ ಬಗ್ಗೆ ರಶ್ಮಿಗೆ ಯಾವುದೇ ಪ್ರೀತಿ ಇರಲಿಲ್ಲ.
ತನ್ನ ಪ್ರೀತಿಯನ್ನು ತಿರಸ್ಕರಿಸಿದರೂ ರಶ್ಮಿಯನ್ನು ನೋಡಿಕೊಳ್ಳುವುದು ಗಂಡನಾಗಿ ತನ್ನ ಜವಾಬ್ದಾರಿ ಎಂದು ತಿಳಿದ ಸುದರ್ಶನ್, ಸುನೀತಾರ ಮನೆಯಿಂದ ತನ್ನ ಮನೆಗೇ ರಶ್ಮಿಯನ್ನು ಕರೆದುಕೊಂಡು ಬಂದ.
ತನ್ನ ತಾಯಿಯ ಬಳಿ ರಶ್ಮಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂದು ಕೇಳಿಕೊಂಡಿದ್ದ. ಸುದರ್ಶನ್ ನ ತಾಯಿ ಕೂಡ ರಶ್ಮಿಯನ್ನು ಕ್ಷಮಿಸಿ ಒಪ್ಪಿಕೊಂಡಿದ್ದರು. ಆದರೆ ರಶ್ಮಿ ಮಾತ್ರ ಡಿಪ್ರೆಸ್ಡ್ ಆಗಿದ್ದಳು.
ಮನೆಯಲ್ಲಿದ್ದರೆ ಡಿಪ್ರೆಶನ್ ಸಮಸ್ಯೆ ಹೆಚ್ಚಾಗಬಹುದೆಂದು ಅವಳನ್ನು ಭರತನಾಟ್ಯ ಕ್ಲಾಸ್ ಗಳಿಗೆ ಜಾಯಿನ್ ಮಾಡಿಸಿದ. ಅವಳಿಗೆ ಇಷ್ಟವಾದ ಫ್ಯಾಷನ್ ಡಿಸೈನಿಂಗ್ ಕೋರ್ಸ್ ಗೆ ಅವಳನ್ನು ಸೇರಿಸಿದ. ಹೀಗೆ ತನ್ನ ಕರ್ತವ್ಯವನ್ನು ಸುದರ್ಶನ್ ನಿರ್ವಂಚನೆಯಿಂದ ಮಾಡಿದ.
ದಿನಗಳು ಕಳೆಯುತ್ತಾ ಕಳೆಯುತ್ತಾ ಸುದರ್ಶನ್ ನ ಉದಾತ್ತ ಮನೋಧರ್ಮ, ಒಳ್ಳೆಯ ಗುಣಗಳನ್ನು ನೋಡುತ್ತಿದ್ದ ರಶ್ಮಿಗೆ ಸುದರ್ಶನ್ ಬಗ್ಗೆ ಪ್ರೀತಿ ಹುಟ್ಚಿತು. ಮನಸ್ಸಿನ ಕಣ್ಣು ತೆರೆದಾಗ ಲೋಕವೆಲ್ಲ ಸುಂದರವಾಗಿ ಕಾಣುವಂತಾಯಿತು. ಆದರೆ ಸುದರ್ಶನ್, ತನ್ನ ತಪ್ಪನ್ನು ಮರೆತು ತನ್ನೊಂದಿಗೆ ಮತ್ತೆ ಜೀವನ ಆರಂಭಿಸಲು ಸಾಧ್ಯವೇ? ಎಂಬ ಆತಂಕ ಇದ್ದೇ ಇತ್ತು. ಈ ಹಿಂದೆ ತನ್ನ ಅಹಂಕಾರದಿಂದ ಅನೇಕ ಸಲ ಸುದರ್ಶನ್ ಬಳಿ ಒರಟಾಗಿ ನಡೆದುಕೊಂಡಿದ್ದು ನೆನಪಿಗೆ ಬಂದಿತು.
ಸುದರ್ಶನ್ ತನ್ನನ್ನು ತನ್ನ ಇಷ್ಟವಾದ ಕೋರ್ಸ್ ಗಳಿಗೆ ಸೇರಿಸುವಾಗ, `ನಾನು ನಿಮ್ಮ ಹಂಗಿನಲ್ಲಿ ಬದುಕುವುದಿಲ್ಲ. ನನ್ನ ಕಾಲ ಮೇಲೆ ನಿಂತ ಮೇಲೆ ನಿಮ್ಮ ಹಣವನ್ನು ಹಿಂದಿರುಗಿಸುತ್ತೇನೆ,’ ಎಂದು ಹೇಳಿದ್ದ ಬಗ್ಗೆ ಅವಳಿಗೆ ಪಶ್ಚಾತ್ತಾಪವಿತ್ತು. ಸುದರ್ಶನ್ಪ್ರೀತಿಯಿಂದ ಮಾತನಾಡಿಸುವಾಗ ತಾನು ಉದಾಸೀನ ಮಾಡಿದ್ದಳು. ಅದೆಲ್ಲ ನೆನಪಾಗಿ ಈಗ ಗಂಡನಿಗೆ ಎದುರಾಗಿ ಮುಖ ಕೊಟ್ಟು ಮಾತನಾಡಿಸಲು ಸಾಧ್ಯವಾಗುತ್ತಿರಲಿಲ್ಲ.
ಸುದರ್ಶನ್ ನ ಕಾಳಜಿ, ಆರೈಕೆ, ಜವಾಬ್ದಾರಿಯಿಂದ ತನಗೆ ಅವನಲ್ಲಿ ಒಲವು ಮೂಡಿರುವುದನ್ನು ತನ್ನ ತಾಯಿಯ ಬಳಿ ಹೇಳಿಕೊಂಡಿದ್ದಳು ರಶ್ಮಿ. ಮಗಳಲ್ಲಿ ಆದ ಬದಲಾವಣೆ ನೋಡಿ ತಾಯಿ ಸರೋಜಿನಿ ಸಂತೋಷಗೊಂಡರು. ಕಾಲ ಎಲ್ಲ ಗಾಯವನ್ನು ಮರೆಸುವಂತೆ, ಈಗ ರಾಜಶೇಖರ್ ಕೂಡ ಮಗಳನ್ನು ಕ್ಷಮಿಸಿ ಮಮತೆ ತೋರಿಸತೊಡಗಿದ್ದರು.
ರಾಜಶೇಖರ್ ದಂಪತಿಯ ಆಸೆಯೇನೆಂದರೆ ಸುದರ್ಶನ್ ಮತ್ತು ರಶ್ಮಿ ತಮ್ಮ ವಿವಾಹ ಜೀವನವನ್ನು ಮುಂದುವರಿಸಬೇಕು ಎಂಬುದಾಗಿತ್ತು. ಆದರೆ ಅದನ್ನು ಸುದರ್ಶನ್ ಗೆ ನೇರವಾಗಿ ಹೇಳಲು ಅವರಿಗೆ ಸಾಧ್ಯವಾಗಲಿಲ್ಲ. ಅಳಿಯ ಸುದರ್ಶನ್ ಗೆ ಅಪ್ರಬುದ್ಧಳಾಗಿ ತಪ್ಪು ಮಾಡಿದ ಮಗಳನ್ನು ಸ್ವೀಕರಿಸಿ ಎಂದು ಹೇಳುವ ಧೈರ್ಯ ಇರಲಿಲ್ಲ. ಅವರು ತಮ್ಮ ಮಗಳನ್ನು ಮತ್ತೆ ತಮ್ಮ ಮನೆಗೆ ಕರೆದುಕೊಂಡು ಹೋಗಲು ತೀರ್ಮಾನಿಸಿ ಸುದರ್ಶನ್ ಮನೆಗೆ ಬಂದರು.
ತನ್ನ ತವರುಮನೆಗೆ ಹೊರಟು ಹೋದರೆ ತಾನು ಶಾಶ್ವತವಾಗಿ ಸುದರ್ಶನ್ ನ ಪ್ರೀತಿಯನ್ನು ಕಳೆದುಕೊಳ್ಳ ಬೇಕಾಗಬಹುದು ಎಂಬ ಆತಂಕ ರಶ್ಮಿಗೆ ಉಂಟಾಯಿತು.
ತನ್ನ ಅತ್ತೆಯ ರೂಮಿನಲ್ಲಿ ಸದಾ ಇರುತ್ತಿದ್ದ ರಶ್ಮಿಗೆ ಸುದರ್ಶನ್ ಬಳಿ ಅವಳ ಮನದಾಸೆಯನ್ನು ಹೇಳಬೇಕೆಂದು ತಾಯಿ ಸರೋಜಿನಿ ಬುದ್ಧಿ ಹೇಳಿದರು.
ಅಂದು ಸುದರ್ಶನ್ ರೂಮಿಗೆ ಬಂದ ರಶ್ಮಿ ಅವನಿಗೆ, “ನಾನು ತವರು ಮನೆಗೆ ಹೋಗುವುದಿಲ್ಲ. ನೀವು ಅವಕಾಶ ನೀಡಿದರೆ ನಿಮ್ಮ ಹೆಂಡತಿಯಾಗಿ ನಿಮ್ಮ ಮನೆಯಲ್ಲೇ ಇರುವೆ, ನಿಮ್ಮ ಸಂಗಾತಿ ಆಗಬೇಕೆಂಬುದು ನನ್ನ ಆಸೆ,” ಎಂದು ಧೈರ್ಯವಹಿಸಿ ಕೇಳಿಕೊಂಡಳು.
ರಶ್ಮಿಯನ್ನು ಬಹಳವಾಗಿ ಪ್ರೀತಿಸುತ್ತಿದ್ದ ಸುದರ್ಶನ್ ತನ್ನ ಕೈಯಿಂದ ಜಾರಿ ಹೋದ ಪ್ರೇಮ ಕುಸುಮ ಮತ್ತೆ ತನ್ನ ಕೈ ಸೇರಿದಾಗ ಅದನ್ನು ಪ್ರೀತಿಯಿಂದ ಸ್ವೀಕರಿಸಿ ಒಪ್ಪಿ ಅಪ್ಪಿಕೊಂಡ.