`ಯಾವುದೇ ಶ್ರೇಷ್ಠವಾದ ಕಲಾ ಪ್ರಕಾರಗಳು ಮಾನವನ ದೈಹಿಕ, ಭಾವನಾತ್ಮಕ, ಬೌದ್ಧಿಕ ಹಾಗೂ ಆಧ್ಯಾತ್ಮಿಕ ದೃಷ್ಟಿಕೋನಗಳನ್ನು ಸಂಯೋಜಿಸಲು ತಕ್ಕುದಾದ ಶಕ್ತಿ ಸಾಮರ್ಥ್ಯವನ್ನು ನೀಡುತ್ತವೆ. ಹಾಗೆಯೇ ಕಲೆ, ಕಲಾ ಪ್ರಕಾರವೆನ್ನುವುದು ಕೇವಲ ಹವ್ಯಾಸ, ಪ್ರಸಿದ್ಧಿಗಾಗಿ ಮಾತ್ರವಲ್ಲದೆ, ಜೀವನದ ಉನ್ನತಿಗೂ ಮಾರ್ಗವಾಗಬಲ್ಲದು!’

ಇದು ಪ್ರಖ್ಯಾತ ಭರತನಾಟ್ಯ ಕಲಾವಿದರಾದ, ನಾಟ್ಯವನ್ನು `ನೃತ್ಯ ಯೋಗ’ವನ್ನಾಗಿಸಿದ ವಿದುಷಿ ಆಶಾ ಆಚಾರ್ಯ ಅಡಿಗ ಅವರ ಮಾತುಗಳು. ಮೂಲತಃ ಕರ್ನಾಟಕದ ದಾವಣಗೆರೆಯವರಾದ ಆಶಾ ಇದೀಗ ಅಮೆರಿಕಾದ ಶಿಕಾಗೋದಲ್ಲಿ ಆಚಾರ್ಯ ಪರ್ಫಾರ್ಮೆನ್ಸ್ ಆರ್ಟ್ಸ್ ಅಕಾಡೆಮಿ ಸಂಸ್ಥೆಯ ಮುಖೇನ ಅಲ್ಲಿನ ಯುವಜನತೆಗೆ ಭಾರತೀಯ ಸಂಸ್ಕೃತಿ, ಪರಂಪರೆಯ ಅರಿವು ಮೂಡಿಸುತ್ತಿದ್ದಾರೆ. ನೃತ್ಯವನ್ನು ತಮ್ಮ ಬದುಕಿನ ಒಂದು ಅಂಗವೆಂದು ಪರಿಭಾವಿಸಿರುವ ಆಶಾ ಅವರ ಕಿರುಪರಿಚಯ ಇಲ್ಲಿದೆ.

ಕಳೆದ ಇಪ್ಪತ್ತೈದು ವರ್ಷಗಳಿಂದಲೂ ಆ ಪ್ರಪಂಚದಲ್ಲಿ ಸಕ್ರಿಯವಾಗಿರುವ ಅಶಾ ವಿದ್ಯಾರ್ಥಿಯಾಗಿ, ಅಭಿನೇತ್ರಿಯಾಗಿಯೂ ಮಾತ್ರವಲ್ಲ ಉತ್ತಮ ತರುಬೇತುದಾರರಾಗಿಯೂ ಹೆಸರಾದರು.

ಶ್ರೀಮತಿ ಅಡಿಗ ಹಾಗೂ ದಿ. ಚಂದ್ರಶೇಖರ ಅಡಿಗ ಅವರ ಮಗಳಾದ ಆಶಾ, ಅತ್ಯಂತ ಕಿರಿಯ ವಯಸ್ಸಿನಿಂದಲೂ ನೃತ್ಯ ಕುರಿತು ಆಸಕ್ತಿ ಮೂಡಿಸಿಕೊಂಡರು. ಇವರ ತಂದೆ ತಾಯಿ ಸಹ ಸಮಾಜ ಸೇವಾ ಕ್ಷೇತ್ರದಲ್ಲಿ ಸಾಕಷ್ಟು ಹೆಸರಾಗಿದ್ದು ನಾನಾ ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದರು. ಹೀಗಾಗಿ ಅವರೆಂದಿಗೂ ಮಗಳ ಕಲಾಸಕ್ತಿಯನ್ನು ಹತ್ತಿಕ್ಕುವ ಪ್ರಯತ್ನ ನಡೆಸಲಿಲ್ಲ, ಬದಲಾಗಿ ಹುರಿದುಂಬಿಸಿದರು.

ಆಶಾ ತಮ್ಮ  ಬಾಲ್ಯದಲ್ಲಿಯೇ ಮನೆಯ ಟಿ.ವಿ, ರೇಡಿಯೋಗಳಲ್ಲಿ ಪ್ರಸಾರವಾಗುತ್ತಿದ್ದ ಸಂಗೀತಕ್ಕೆ ಹೆಜ್ಜೆ ಹಾಕುತ್ತಿದ್ದರು. ಅವರ ಹಿರಿಯ ಸೋದರಿಯಾದ ಉಷಾ ಸಹ ಭರತನಾಟ್ಯ ಪ್ರವೀಣೆಯಾಗಿದ್ದು, ಅವರು ನೃತ್ಯಾಭ್ಯಾಸಕ್ಕೆ ತೊಡಗಿದ್ದ ವೇಳೆ ಆಶಾ ಅವರಿಗೂ ಸಹ ನೃತ್ಯ ಕಲಿಯುವ ಬಯಕೆ ಮೊಳೆಯಿತು. ಆಗಿನ್ನೂ ಮೂರು ವರ್ಷ ವಯಸ್ಸಿನವರಾಗಿದ್ದ ಆಶಾ, ತನ್ನ ಅಕ್ಕನೊಂದಿಗೆ ನೃತ್ಯ ತರಬೇತಿಗೆ ಸೇರಿಕೊಂಡರು.

ವಿದ್ವಾನ್‌ ರಾಜಗೋಪಾಲ್ ‌ಭಾಗವತ್‌ ಹಾಗೂ ವಿದುಷಿ ಪೂರ್ಣಿಮಾ ಭಾಗವತ್‌ ಅವರಿಂದ ವಿದ್ಯುಕ್ತವಾಗಿ ಭರತನಾಟ್ಯ ತರಬೇತಿಯನ್ನು  ಹೊಂದಿದ ಆಶಾ `ಕಲಾಕ್ಷೇತ್ರ’ ಶೈಲಿಯಲ್ಲಿ ವಿಶೇಷ ನೈಪುಣ್ಯತೆ ಸಾಧಿಸಿದ್ದಾರೆ. ಭಾಗವತ್‌ ದಂಪತಿಗಳು ವಿದ್ವಾನ್‌ ಜನಾರ್ದನ ಅವರ ಶಿಷ್ಯರಾಗಿದ್ದು, ವಿದ್ವಾನ್‌ ಜನಾರ್ಧನ, ಪ್ರೊ. ಎಂ.ಆರ್‌. ಕೃಷ್ಣಮೂರ್ತಿಗಳ ಶಿಷ್ಯರಾಗಿದ್ದರು. ಎಂ.ಆರ್‌. ಕೃಷ್ಣಮೂರ್ತಿ ಕಲಾಕ್ಷೇತ್ರದ ಮೇರು ನೃತ್ಯ ಕಲಾವಿದೆ ರುಕ್ಮಿಣಿ ದೇವಿ ಅರುಂಡೇಲ್‌ರಲ್ಲಿ ಶಾಸ್ತ್ರೀಯ ನೃತ್ಯಾಭ್ಯಾಸ ನಡೆಸಿದ್ದರು. ಈ ರೀತಿಯಲ್ಲಿ ನೋಡಿದರೆ ಆಶಾ, ರುಕ್ಮಿಣಿದೇವಿಯವರ ಶಿಷ್ಯ ಪರಂಪರೆಗೆ ಸೇರಿದವರಾಗಿದ್ದಾರೆ. ತಮ್ಮ ಗುರುಗಳ ಮಾರ್ಗದರ್ಶನದಲ್ಲಿ ವಿದ್ವತ್‌ ಪದವಿಯನ್ನು ಪೂರ್ಣಗೊಳಿಸಿದ ಆಶಾ, ಕರ್ನಾಟಕ ಸರ್ಕಾರ ನಡೆಸುವ ವಿದ್ವತ್‌ ಪರೀಕ್ಷೆಯಲ್ಲಿ ಮೂರನೇ ರಾಂಕ್‌ ಪಡೆದಿದ್ದಾರೆ.

ಎಂಬಿಎ ವಿದ್ಯಾಭ್ಯಾಸ ಮಾಡಿದ್ದ ಆಶಾ, ಕೆಲಕಾಲ ಮ್ಯಾನೇಜ್‌ಮೆಂಟ್‌ ಕ್ಷೇತ್ರದಲ್ಲಿ ಕೆಲಸ ಮಾಡಿದ್ದರು. ಆದರೆ ನೃತ್ಯ ಕ್ಷೇತ್ರದತ್ತ ಅವರಿಗಿದ್ದ ಬಲವಾದ ಆಸಕ್ತಿಯಿಂದಾಗಿ ಕಲಾ ಕ್ಷೇತ್ರಕ್ಕೆ ಮರಳಿ ಅದರಲ್ಲಿಯೇ ಸಂಪೂರ್ಣವಾಗಿ ತೊಡಗಿಸಿಕೊಂಡರು. ಮುಂದೆ ಸಂಧ್ಯಾ, ಕಿರಣ್‌ ಸುಬ್ರಹ್ಮಣ್ಯನ್‌ ಹಾಗೂ ಚೆನ್ನೈ ಕಲಾಕ್ಷೇತ್ರದ ಪ್ರೊ. ಸೂರ್ಯನಾರಾಯಣ ಮೂರ್ತಿಯವರ ಮಾರ್ಗದರ್ಶನದಲ್ಲಿ ತಮ್ಮ ಭರತನಾಟ್ಯ ಅಭ್ಯಾಸವನ್ನು ಮುಂದುವರಿಸಿದ್ದ ಆಶಾ, ಮುಂದಿನ ದಿನಗಳಲ್ಲಿ ಭಾರತೀಯ ಶಾಸ್ತ್ರೀಯ ಸಂಗೀತ ನೃತ್ಯ ಸೇರಿದಂತೆ ಜನಪದ ನೃತ್ಯ ಶೈಲಿಗಳಲ್ಲಿಯೂ ಪರಿಣಿತಿ ಪಡೆದರು.

ದೇಶವಿದೇಶಗಳಲ್ಲಿ ನೃತ್ಯ ಪ್ರದರ್ಶನ, ತರಬೇತಿ ದಾವಣಗೆರೆಯ ವನಿತಾ ಸಮಾಜ ನಡೆಸುತ್ತಿದ್ದ ನಾಟಕ ಮಂಡಳಿ `ಭೂಮಿಕಾ’ ಸಂಘದ ಮೂಲಕ ಆಶಾ ಆಚಾರ್ಯ ಅವರ ರಂಗ ಪ್ರವೇಶವಾಯಿತು. ಅದೇ ಸಮಯದಲ್ಲಿ `ನೀನಾಸಂ’ ಮನುವಾ ಬದಾಮಿ ಅವರಿಂದ ಹೆಚ್ಚಿನ ತರಬೇತಿ ಹೊಂದಿದರು.

ಆಶಾ, ಕರ್ನಾಟಕದ ನಾನಾ ಭಾಗಗಳಲ್ಲಿ ಅಷ್ಟೇ ಅಲ್ಲದೆ ದೆಹಲಿಯ ರಾಜಭವನ್‌, ತಿರುಪತಿ, ಆಗ್ರಾ, ಜೆಮ್ ಶೆಡ್‌ಪುರ್‌, ಚೆನ್ನೈ, ಫ್ರಾನ್ಸ್, ಪ್ಯಾರಿಸ್‌, ಅಮೆರಿಕಾದ ನ್ಯೂಯಾರ್ಕ್‌, ನ್ಯೂಜರ್ಸಿ, ವಾಷಿಂಗ್‌ಟನ್‌ ಮುಂತಾದ ಕಡೆಗಳಲ್ಲಿ ಏಕವ್ಯಕ್ತಿ ನೃತ್ಯ ಪ್ರದರ್ಶನ ಸೇರಿದಂತೆ ಸಮೂಹ ನೃತ್ಯ ರೂಪಕಗಳನ್ನು ಪ್ರದರ್ಶಿಸಿದ್ದಾರೆ.

ಇವನ್ನು ತಮ್ಮ ಹಿರಿಯ ಸಹೋದರಿ ಉಷಾ ಜೊತೆ ನಾನಾ ಕಡೆಗಳಲ್ಲಿ ನೀಡಿದ್ದ ನೃತ್ಯ ಪ್ರದರ್ಶನಗಳಿಂದ ಇವರನ್ನು ಜನರು ಸಾಮಾನ್ಯವಾಗಿ `ಅಡಿಗ ಸೋದರಿಯರು’ ಎಂದೇ ಗುರುತಿಸುತ್ತಿದ್ದರು.

ಆಶಾ ಒಂಬತ್ತು ವರ್ಷದವರಿರುವಾಗ ತಿರುಪತಿ ಡ್ಯಾನ್ಸ್ ಅಕಾಡೆಮಿಯಿಂದ ನಡೆಯುತ್ತಿದ್ದ ನೃತ್ಯ ಕಾರ್ಯಾಗಾರಕ್ಕೆ ಆಯ್ಕೆಗೊಂಡಿದ್ದರು. ಮುಂದೆ ಅದೇ ಸಂಸ್ಥೆಯವರಿಂದ 1992ರಲ್ಲಿ ಫ್ರಾನ್ಸ್ ನ ಪ್ಯಾರಿಸ್‌ನಲ್ಲಿ ನೃತ್ಯ ರೂಪಕ ನಡೆಸುವಂತೆ ಆಹ್ವಾನ ಸಿಕ್ಕಿತ್ತು. ಇದರಿಂದ ಆಶಾರಿಗೆ ನಾಟ್ಯದ ಕುರಿತಂತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಪ್ರಚಾರ ದೊರಕಿತ್ತು. ಮುಂದೆ ತಮ್ಮ ಕಾರ್ಯಕ್ಷೇತ್ರವನ್ನು ವಿಸ್ತರಿಸಿಕೊಳ್ಳಲು ಇದರಿಂದ ಸಾಕಷ್ಟು ನೆರವಾಯಿತು. ನಂತರದಲ್ಲಿ ಆಶಾ ಭಾರತದ ನಾನಾ ಪ್ರದೇಶಗಳಲ್ಲಿ ಮಾತ್ರವಲ್ಲ, ಅಮೆರಿಕಾದ ನ್ಯೂಜರ್ಸಿ ಸೇರಿದಂತೆ ನಾನಾ ರಾಜ್ಯಗಳಲ್ಲಿ ನೃತ್ಯ ಪ್ರದರ್ಶನ, ನಾಟ್ಯಶಾಸ್ತ್ರ ಕುರಿತಂತೆ ತರಬೇತಿ ಕಾರ್ಯಾಗಾರ ಆಯೋಜಿಸಿ ಯಶಸ್ವಿಯಾಗಿದ್ದಾರೆ. ಇನ್ನು ಆಶಾ ಕೇವಲ ಭರತನಾಟ್ಯ ಪ್ರವೀಣೆ ಮಾತ್ರವಲ್ಲ, ಇದರೊಡನೆಯೇ ಕೂಚ್ಚುಪುಡಿ, ಕಥಕ್‌. ಯಕ್ಷಗಾನ, ಒಡಿಸ್ಸಿ ನೃತ್ಯ ಶೈಲಿಗಳಲ್ಲಿಯೂ ಪರಿಣಿತಿ ಸಾಧಿಸಿದ್ದಾರೆ. ತಿರುಪತಿಯ ಡಾ. ರಾಜುರವರಿಂದ ಕೂಚ್ಚುಪುಡಿ ನೃತ್ಯ ಅಭ್ಯಸಿಸಿದ ಇವರು, ರಾಮಕೃಷ್ಣ ಭಟ್‌ ಅವರಿಂದ ಕಥಕ್‌, ಹೆಮ್ಮಾಡಿ ರಾಮಚಂದ್ರ ಭಟ್ಟರಿಂದ ಯಕ್ಷಗಾನ ನೃತ್ಯ, ಅಮೆರಿಕಾದ ನ್ಯೂಜರ್ಸಿಯವರಾದ ರಿಮ್ಲಿ ರಾಯ್‌ರವರಿಂದ ಒಡಿಸ್ಸಿ ನೃತ್ಯಾಭ್ಯಾಸ ನಡೆಸಿದರು. ಅಲ್ಲದೆ ದಾಂಡಿಯಾ ರಾಸ್‌, ಗರ್ಬಾ ನೃತ್ಯ, ಕಂಸಾಳೆ, ಕೋಲಾಟ, ಝೂಮರ್‌ನಾಚ್‌, ವಾಣಿ ಇದೇ ಮೊದಲಾದ ಜನಪದ ನೃತ್ಯ ಪ್ರಕಾರಗಳನ್ನೂ ಸಹ ಆಶಾ ಸ್ವತಃ ಅಭ್ಯಾಸ ಮಾಡಿ ಆ ಶೈಲಿಯ ನೃತ್ಯಗಳನ್ನು ಸಹ ಪ್ರದರ್ಶನ ನೀಡಿದ್ದಾರೆ.

ಆಶಾ ವಿವಾಹದ ನಂತರ ಪತಿ ಶ್ರೀನಿವಾಸ್‌ ಆಚಾರ್ಯರೊಂದಿಗೆ ಅಮೆರಿಕಾದಲ್ಲಿ ನೆಲೆಸಿದ್ದರು. ಅಮೆರಿಕಾದ ಶಿಕಾಗೋದಲ್ಲಿ ತಮ್ಮದೇ ಆಚಾರ್ಯ ಪರ್ಫಾರ್ಮೆನ್ಸ್ ಆರ್ಟ್ಸ್ ಅಕಾಡೆಮಿಯನ್ನು ಸ್ಥಾಪಿಸಿ ಅದರ ಮೂಲಕ ಭಾರತೀಯ ಸಾಂಸ್ಕೃತಿಕ ಪರಂಪರೆಯನ್ನು ಪರಿಚಯಿಸುತ್ತಿದ್ದಾರೆ. ಪಶ್ಚಿಮ ರಾಷ್ಟ್ರಗಳಲ್ಲಿಯೂ ನಮ್ಮ ದೇಶದ ವೈಭವದ ಪರಂಪರೆಯನ್ನು ಪಸರಿಸುವ ಮೂಲಕ ಭಾರತ ದೇಶದ ಸಾಂಸ್ಕೃತಿಕ ಶ್ರೇಷ್ಠತೆಯನ್ನು ಎತ್ತಿಹಿಡಿಯುವ ಕೆಲಸ ಮಾಡುತ್ತಿದ್ದಾರೆ.

ಇನ್ನು ಇವರ ಪತಿ ಶ್ರೀನಿವಾಸ್‌ ಆಚಾರ್ಯ ವೃತ್ತಿಯಲ್ಲಿ ಎಂಜನಿಯರ್‌ ಆಗಿದ್ದರೂ ತಮ್ಮ ಪತ್ನಿಯ ಕಲಾಭಿಮಾನದಿಂದ ಸ್ಛೂರ್ತಿಗೊಂಡು ಅವರಿಂದ ಮಟ್ಟುಗಳನ್ನು ಕಲಿತದ್ದಲ್ಲದೆ, ಆಶಾ ನೀಡುವ ಅನೇಕ ಕಾರ್ಯಕ್ರಮಗಳಲ್ಲಿ ಅವರೊಂದಿಗೆ ವೇದಿಕೆ ಹಂಚಿಕೊಳ್ಳುತ್ತಿದ್ದಾರೆ.

ಕರ್ನಾಟಕ ಸಂಗೀತದಲ್ಲಿ ಸಾಧನೆ

ಆಶಾ ಆಚಾರ್ಯ ತಮ್ಮ ನೃತ್ಯ ಗುರುಗಳಾದ ವಿದ್ವಾನ್‌ ರಾಜಗೋಪಲ ಭಾಗವತ್‌ರಿಂದ ಕರ್ನಾಟಕ ಸಂಗೀತವನ್ನೂ ಸಹ ಅಭ್ಯಸಿಸಿದ್ದರು. ಹಲವು ವರ್ಷಗಳ ಕಾಲ ಇನ್ನೂ ಬೇರೆ ಬೇರೆ ಊರುಗಳಲ್ಲಿ ಸಂಗೀತಾಭ್ಯಾಸ ನಡೆಸಿದ್ದ ಆಶಾ ಕರ್ನಾಟಕ ಸರ್ಕಾರ ನಡೆಸಿದ್ದ ಸಂಗೀತ ಪರೀಕ್ಷೆಯಲ್ಲಿ  ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದರು. ಇವರು ದೇಶ ವಿದೇಶಗಳಲ್ಲಿ ಸಾಕಷ್ಟು ಸಂಖ್ಯೆಯ ಸಂಗೀತ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿರುವುದಲ್ಲದೆ, ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಸಂಗೀತ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನೂ ಗಳಿಸಿದ್ದಾರೆ.

ಕೊರಿಯೋಗ್ರಫಿ ಮತ್ತು ನಿರ್ದೇಶನ

ಆಶಾ ಆಚಾರ್ಯ ಹಲವಾರು ಭರತನಾಟ್ಯ, ಜನಪದ ನೃತ್ಯಗಳಿಗೆ ಕೊರಿಯೋಗ್ರಪಿ ಮಾಡಿದ್ದಾರೆ. ಇನ್ನು ಹೊಸ ಹೊಸ ನೃತ್ಯ  ರೂಪಕಗಳನ್ನು ನಿರ್ಮಿಸಿ ನಿರ್ದೇಶಿಸಿದ್ದಾರೆ `ಶಿವಲಾಟ ತಾಂಡವ, ಕನಕದಾಸ ಉಡುಪಿ ಕೃಷ್ಣ, ಶ್ರೀ ಕೃಷ್ಣ ಬಾಲಲೀಲೆ, ಶಿವಶಕ್ತಿ, ಪಂಚಭೂತಂ, ಕರ್ನಾಟಕ ನೃತ್ಯ ವೈಭವ, ಸ್ಥಿತಿ ಸ್ವರೂಪ, ವಚನ ವೈಭವ,’ ಇದೇ ಮೊದಲಾದ ಆಶಾರ ಕೆಲವು ಜನಪ್ರಿಯ ನೃತ್ಯ ಸಂಯೋಜನೆಗಳಾಗಿವೆ.

ಆಶಾರ ಆಶಾ ನುಡಿಗಳು

ನಾಟ್ಯವೆನ್ನುವುದು ಮಹಾನ್‌ ಕಲೆ. ಅದು ಕೇವಲ ಮನರಂಜನೆಗಾಗಿ ಮಾತ್ರವೆನ್ನುವುದು ತಪ್ಪು ಕಲ್ಪನೆ. ನಾಟ್ಯ ಮನುಷ್ಯನ ಮಾನಸಿಕ ಸ್ಥಿತಿಯನ್ನು ಉನ್ನತಿಯತ್ತ  ಕೊಂಡೊಯ್ಯಬಲ್ಲದು. ನೃತ್ಯ ಅಥವಾ ನಾಟ್ಯ `ನೃತ್ಯ ಯೋಗ’ ಎನಿಸಿಕೊಂಡಿದೆ. ಇದು ನಿಮಗೆ ಒಳ್ಳೆಯ ಆರೋಗ್ಯವನ್ನು ನೀಡಬಲ್ಲದು. ಮಾನಸಿಕ ಶಾಂತಿಯನ್ನೂ ತರಬಲ್ಲದು.

ಹೀಗಾಗಿ ಯಾರು ನೃತ್ಯವನ್ನು ಕಲಿಯಬಯಸಿದರೆ ಅಂತಹವರು ಅದನ್ನು ಕೇವಲ ಕಾಲಹರಣಕ್ಕಾಗಿ ಕಲಿಯದೆ ಅದನ್ನು ತಮ್ಮ ಆತ್ಮ ಸಂಗಾತಿ ಎಂದು ಪರಿಭಾವಿಸಿರಿ. ನಾನು ಶಾಲಾ ದಿನಗಳಲ್ಲಿದ್ದಾಗ ನನಗಿದ್ದ ಸ್ನೇಹಿತರ ಬಳಗವೇ ಬೇರೆ. ಕಾಲೇಜು ಸೇರಿದಾಗಿನ ವಾತಾವರಣವೇ ಬೇರೆ. ಇನ್ನು ಮದುವೆಯಾದ ಬಳಿಕ ನಾನು ಅಮೆರಿಕಾಗೆ ಬಂದು ನೆಲೆಸಿದ್ದು ಇಲ್ಲಿ ಭಾರತಕ್ಕಿಂತಲೂ ಸಂಪೂರ್ಣವಾಗಿ ಭಿನ್ನ ಸಂಸ್ಕೃತಿಯ ದೇಶವನ್ನು ನೋಡಿದೆ. ಆದರೆ ಅಂದಿನಿಂದ ಇಂದಿನವರೆಗೂ ನನ್ನಲ್ಲಿರುವ ಕಲಾಭಿರುಚಿ. ನೃತ್ಯ ಪ್ರತಿಭೆಯು ನನಗೆ ಅದ್ಭುತ ಶಕ್ತಿಯನ್ನು ನೀಡಿದೆ. ಹೀಗಾಗಿ ನಾನು ನೃತ್ಯವನ್ನು ನನ್ನ ಆತ್ಮ ಸಂಗಾತಿ ಎಂದು ಕರೆದಿದ್ದೇನೆ. ಹೇಗೆ ಧರ್ಮವನ್ನು ನಾವು ರಕ್ಷಿಸಿದರೆ ಅದು ನಮ್ಮನ್ನು ರಕ್ಷಿಸುತ್ತದೆಯೋ ಹಾಗೆಯೇ ಕಲೆಯನ್ನು ನೀವು ಅಭಿವ್ಯಕ್ತಿಗೊಳಿಸಿದರೆ ಅದು ನಿಮ್ಮನ್ನು ಅಭಿವ್ಯಕ್ತಿಗೊಳಿಸುವುದಕ್ಕೆ ದಾರಿ ಮಾಡಿಕೊಡುತ್ತದೆ!

ಮುಗಿಸುವ ಮುನ್ನ…..

ಭಾರತೀಯ ನೃತ್ಯ ಶೈಲಿಯಲ್ಲಿ ನಾನಾ ಪ್ರಯೋಗಗಳನ್ನು ನಡೆಸಿಕೊಂಡು ಬರುತ್ತಿರುವ, ಅಮೆರಿಕಾದಲ್ಲಿದ್ದೂ ಭಾರತೀಯ ಪರಂಪರೆಯನ್ನು ಬಿಡದೆ ಪೋಷಿಸುತ್ತಿರುವ ಅಚಾರ್ಯ ಪರ್ಫಾರ್ಮಿಂಗ್‌ಆರ್ಟ್ಸ್ ಅಕಾಡೆಮಿಯ ರೂವಾರಿ ನಾಟ್ಯವನ್ನು `ನೃತ್ಯ ಯೋಗ’ವನ್ನಾಗಿಸಿದ ವಿದುಷಿ ಆಶಾ ಆಚಾರ್ಯ ಅಡಿಗರ ಭವಿಷ್ಯದ ಯೋಜನೆಗಳು ಫಲಪ್ರದವಾಗಲಿ, ತಮ್ಮ ಕ್ಷೇತ್ರದಲ್ಲಿ ಇನ್ನಷ್ಟು ಹೆಚ್ಚಿನ ಸಾಧನೆ ಮಾಡಿ ನಮ್ಮ ದೇಶಕ್ಕೆ ಕೀರ್ತಿ ಲಭಿಸುವಂತಾಗಲಿ ಎಂದು `ಗೃಹಶೋಭಾ’ ಪ್ರೀತಿಯಿಂದ ಹಾರೈಸುತ್ತಾಳೆ.

ರಾಘವೇಂದ್ರ ಅಡಿಗ ಎಚ್ಚೆನ್

ಪ್ರಶಸ್ತಿ ಗೌರವಗಳು

ಆಶಾ ಆಚಾರ್ಯ ಅಮೋಘ ಪ್ರತಿಭಾವಂತೆಯಾಗಿದ್ದಾರೆ. ಅವರ ಈ ಪ್ರತಿಭೆಯನ್ನು ಗುರುತಿಸಿ ಅವರಿಗೆ ಸಾಕಷ್ಟು ಸಂಖ್ಯೆಯ ಪ್ರಶಸ್ತಿಗಳು, ಗೌರವ ಪುರಸ್ಕಾರಗಳು ಸಂದಿವೆ. ಅವುಗಳಲ್ಲಿ ಪ್ರಮುಖವಾದದ್ದನ್ನು ಈ ಕೆಳಗೆ ನೀಡಲಾಗಿದೆ.

`ನೂಪುರ’ ನೃತ್ಯ ಮಹೋತ್ಸವ ಕಾರ್ಯಕ್ರಮದಲ್ಲಿ ತಮ್ಮ ಗುರುಗಳಾದ ವಿದ್ವಾನ್‌ ರಾಜಗೋಪಾಲ ಭಾಗವತ್‌ ಅವರಿಂದ `ಶಾರದಾ ಪುರಸ್ಕಾರ.’

ಏರ್‌ ಇಂಡಿಯಾದ ರಾಂಕ್‌ ಅವಾರ್ಡ್‌ 2006.

ಎಲ್. ಜಯಣ್ಣರ ಸಂಪಾದಕತ್ವದಲ್ಲಿ ಬರುತ್ತಿದ್ದ `ಚಂಪಿಕಾ ಪತ್ರಿಕೆ’ಯವರು ನೀಡಿದ್ದ `ಕಲಾ ಐಸಿರಿ ಪುರಸ್ಕಾರ 2006.’

ಜೆಸಿ ಕ್ಲಬ್‌ ವತಿಯಿಂದ ಔಟ್‌ ಸ್ಟ್ಯಾಂಡಿಂಗ್‌ ಯಂಗ್‌ ಪರ್ಸನಲ್ ಅವಾರ್ಡ್‌.

ದಾವಣಗೆರೆಯ ಎವಿಕೆ ಕಾಲೇಜಿನವರು ನೀಡಿದ್ದ ಟ್ಯಾಲೆಂಡೆಡ್‌ ಸ್ಟೂಡೆಂಟ್‌ ಅವಾರ್ಡ್‌.

1999ರಲ್ಲಿ ನೀಡಿದ್ದ ಅತ್ಯುದ್ಭುತ ನೃತ್ಯ ಪ್ರದರ್ಶನಕ್ಕೆ ಹರಿಯಾಣ ರಾಜ್ಯ ಸರ್ಕಾರದ ಕಾರ್ಯದರ್ಶಿಗಳಾದ ಕೆ.ಸಿ. ಶರ್ಮರಿಂದ ಗೌರವ.

1999ರಲ್ಲಿ ಆಗ್ರಾದಲ್ಲಿ ನಡೆದ ರಾಷ್ಟ್ರಮಟ್ಟದ ಸಂಗೀತ ಹಾಗೂ ನೃತ್ಯ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ.

2001ರಲ್ಲಿ ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂಗೀತ ನೃತ್ಯ ರೂಪಕಗಳನ್ನು ಪ್ರದರ್ಶನ ನೀಡಿರುವುದಷ್ಟೇ ಅಲ್ಲದೆ, ಕರ್ನಾಟಕ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿಕೊಟ್ಟಿದ್ದಾರೆ.

ಇದಲ್ಲದೆ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ನಡೆದ ಹಲವಾರು ನೃತ್ಯ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಗಳಿಸಿ ಬಹುಮಾನಗಳನ್ನು ಪಡೆದಿದ್ದಾರೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ