ಜೋಡಿ ಮದುವೆ ನಡೆಯುವುದೆಲ್ಲಿ?

ರಾಲಿಯಾ ಜೋಡಿ ಬಗ್ಗೆ ಬಿ ಟೌನ್‌ನಲ್ಲಿ ಚರ್ಚೆಯೋ ಚರ್ಚೆ. ನಂಬಲರ್ಹ ಸುದ್ದಿಗಳ ಪ್ರಕಾರ ಇವರ ಮದುವೆ ಬಗ್ಗೆ ಯಾವುದೇ ಖಚಿತ ಮಾಹಿತಿ ಸಿಗುತ್ತಿಲ್ಲ. ಈ ಜೋಡಿ ತಮ್ಮ `ಬ್ರಹ್ಮಾಸ್ತ್ರ’ ಚಿತ್ರದ ರಿಲೀಸ್‌ ನಂತರ ಮುಂಬೈಯಲ್ಲೇ ಮದುವೆ ಆಗುವ ನಿರ್ಧಾರಕ್ಕೆ ಬಂದಿದ್ದಾರೆ. ಎಂಬುದು ಮಾತ್ರ ಖಚಿತವಾಗಿದೆ. ಹಿಂದೆ ಈ ಜೋಡಿ ಡೆಸ್ಟಿನೇಶನ್‌ ವೆಡ್ಡಿಂಗ್‌ಗಾಗಿ ವಿದೇಶಿ ತಾಣ ಹುಡುಕುತ್ತಿತ್ತು ಎಂದು ಹೇಳಿದವರೇ ಈಗ ನಾಲಿಗೆ ಕಚ್ಚಿಕೊಳ್ಳುತ್ತಿದ್ದಾರೆ. ಖುಲ್ಲಂಖುಲ್ಲ ಇವರೇ ಮೀಡಿಯಾಗೆ ವಿಷಯ ತಿಳಿಸಿಬಿಟ್ಟರೆ ತಂಟೆ ಇರಲ್ಲ.

ಜಾನ್ಮತ್ತೆ ಆ್ಯಕ್ಷನ್ಚಿತ್ರಗಳಲ್ಲಿ

ಇತ್ತೀಚೆಗಷ್ಟೇ ರಿಲೀಸ್‌ ಆಗಿದ್ದ ಜಾನ್‌ನ ಚಿತ್ರ `ಪಾಗಲ್ ಪಂತಿ’ ಮಲ್ಟಿ ಸ್ಟಾರ್‌ ಇದ್ದರೂ ತೋಪಾಗಿತ್ತು. ಅಕ್ಷಯ್‌ ಕುಮಾರ್‌ ತರಹ ತಾನೂ ಸತತ ಫೈಟ್‌ ಚಿತ್ರದ ಮಧ್ಯೆ ಲೈಟ್‌ ಕಾಮಿಡಿ ಟ್ರೈ ಮಾಡಿದ, ಆದರೆ ಅದೇನೂ ನಡೆಯಲಿಲ್ಲ. ವದಂತಿಗಳ ಪ್ರಕಾರ ಜಾನ್ ಈಗ ಮತ್ತೆ ಡಿಶುಂ ಡಿಶುಂಗೆ ಮಾರುಹೋಗಿ `ಸತ್ಯಮೇ ಜಯತೆ-2′ ಚಿತ್ರ ಮಾಡುತ್ತಿದ್ದಾನೆ. ಜಾನ್‌ಗೆ ಆ್ಯಕ್ಷನ್ನೇ ಸರಿ. ಏನಂತೀರಿ?

ಕಿಯಾರಾಗೆ ಯಾಕಂತೆ ಗಿಲ್ಟಿ?

`ಕಬೀರ್‌ ಸಿಂಗ್‌’ ಚಿತ್ರದ ನಂತರ ಕಿಯಾರಾ ಆಕಾಶಕ್ಕೆ ಏಣಿ ಹಾಕಿದ್ದಾಳೆ. ನೆಟ್‌ ಫ್ಲಿಕ್ಸ್ ನಲ್ಲಿ ಇತ್ತೀಚೆಗೆ ಈಕೆಯ `ಗಿಲ್ಟಿ’ ಚಿತ್ರ ಸೈ ಎನಿಸಿಕೊಂಡಿತು. ದೆಹಲಿ ಮೂಲದ ಈ ಹುಡುಗಿ ಇಲ್ಲಿ ರಫ್‌ಟಫ್‌ ಪಾತ್ರದಲ್ಲಿ ಯುವಜನತೆ ಮೆಚ್ಚುವಂತೆ ಮಿಂಚಿದ್ದಾಳೆ. ಈ ಚಿತ್ರದಲ್ಲಿ ಡಬ್ಬೂ ಪಾತ್ರದ ಮೂಲಕ ಈಕೆ ಹೊಸ ಸೆನ್ಸೇಶನ್‌ ಕ್ರಿಯೇಟ್‌ ಮಾಡಿದ್ದಾಳೆ ಎಂದರೆ ಉತ್ಪ್ರೇಕ್ಷೆಯಲ್ಲ.

ಸಿನಿಮಾ ದಂಧೆ ನೆಲ ಕಚ್ಚಿತೇ?

ಕೊರೋನಾ ತನ್ನ ಕಬಂಧ ಬಾಹುಗಳಲ್ಲಿ ಮಾನವರನ್ನು ಮಾತ್ರವಲ್ಲದೆ, ಅವರ ದಂಧೆಯನ್ನೂ ಕಬಳಿಸಿದೆ. ಎಲ್ಲಾ ಪ್ರಮುಖ ಉದ್ಯಮಗಳಂತೆ ಕನ್ನಡದ ಸ್ಯಾಂಡಲ್ ವುಡ್‌, ಹಿಂದಿಯ ಬಾಲಿವುಡ್‌ ಸಹ ನಡುಗಿ ಹೋಗಿದೆ. ಚಿತ್ರಗಳು ಬಿಡುಗಡೆ ಆಗದ ಕಾರಣ ನಿರ್ಮಾಪಕರ ಹಣವೆಲ್ಲ ಅಲ್ಲಿಯೇ ನಿಂತುಬಿಟ್ಟಿದೆ. ಅಂತ್ಯ ಮಾರ್ಚ್‌, ಏಪ್ರಿಲ್‌, ಮೇ ತಿಂಗಳಲ್ಲಿ ರಿಲೀಸ್‌ ಆಗಲಿದ್ದ ಚಿತ್ರಗಳು ಬಹಳ ಮುಂದಕ್ಕೆ ಹೋಗಿವೆ. ಶೂಟಿಂಗ್‌ ಸಂಪೂರ್ಣ ಸ್ಥಗಿತಗೊಂಡಿದ್ದರಿಂದ ದಿನಗೂಲಿಯ ಕಾರ್ಮಿಕರು ಊಟಕ್ಕಿಲ್ಲದೆ ಕಂಗಾಲಾಗಿದ್ದಾರೆ. ತುಸು ತಡವಾಗಿ ಅಂತೂ ಮಹಾನ್‌ ತಾರೆಯರು ಇವರ ನೆರವಿಗೆ ಬಂದಿದ್ದಾರೆ. ಅಭಿಮಾನಿಗಳು ತಮ್ಮ ಮೆಚ್ಚಿನ ತಾರೆಯರ ಚಿತ್ರಗಳಿಗಾಗಿ ಕಾಯಲೇಬೇಕಿದೆ.

prithvi-1

ಪೃಥ್ವಿರಾಜ್ಎಲ್ಲಿ ಸಿಲುಕಿದೆ?

ತಮಿಳು, ತೆಲುಗು ನಂತರ ಅಯ್ಯ, ಔರಂಗ್‌ಜೇಬ್‌ನಂಥ ಹಿಂದಿ ಚಿತ್ರಗಳಲ್ಲಿ ನಟಿಸಿದ ಮಲೆಯಾಳಿ ಹೀರೋ ಪೃಥ್ವಿ ಯಾರಿಗೆ ತಾನೇ ಗೊತ್ತಿಲ್ಲ? ಎಲ್ಲರಂತೆ ಈತನೂ ಕೊರೋನಾದಿಂದಾಗಿ ಕಂಗಾಲು. ಅಂದರೆ ಕೊರೋನಾ ಅಟ್ಯಾಕ್‌ ಅಲ್ಲ, ಸಿನಿಮಾ ಶೂಟಿಂಗ್‌ಗಾಗಿ ಈತ ಜೊರ್ಡಾನ್‌ಗೆ ಹೋಗಿದ್ದ. ಇಡೀ ಟೀಂ ವಾಪಸ್‌ ಆದರೂ ಅನಿವಾರ್ಯವಾಗಿ ಅಲ್ಲೇ ಉಳಿಯಬೇಕಾದ ಈತ, ಲಾಕ್‌ ಡೌನ್‌ಗೆ ಮೊದಲು ಕೊಚಿನ್‌ಗೆ ಬರಲು ಆಗಲೇ ಇಲ್ಲ. ಫೇಸ್‌ಬುಕ್‌ನಲ್ಲಿ ಇದನ್ನು ತೋಡಿಕೊಂಡ ಈತ, ಸದ್ಯಕ್ಕಂತೂ ಪರಿಸ್ಥಿತಿ ಪರವಾಗಿಲ್ಲ, ಹೀಗೆ ಮುಂದುವರಿದರೆ ಏನು ಮಾಡುವುದು ಎಂದು ಪೇಚಾಡಿದ್ದಾನೆ. ಪೃಥ್ವಿ ಆದಷ್ಟೂ ಬೇಗ ಭಾರತಕ್ಕೆ ಮರಳುವಂತಾಗಲಿ!

ಬದಲಾದನೆ ವೀರೂನ ಜಯ್‌?

ಧರ್ಮೆಂದ್ರ ಜೊತೆ ಮನೀಷ್‌ ಪಾಲ್‌ನನ್ನು ಕಂಡು `ಶೋಲೆ’ ನೆನಪಾಗಿ ನೀವು ಹಾಗೆ ಅಂದುಕೊಂಡರೆ ಆಶ್ಚರ್ಯವಿಲ್ಲ. ಅಸಲಿಗೆ ಮನೀಷ್‌ ಒಂದು ಹಾಡಿನ ರಿಯಾಲಿಟಿ ಶೋ ಹೋಸ್ಟ್ ಮಾಡುತ್ತಿದ್ದಾನೆ, ಅದರ ಪ್ರಮೋಶನ್‌ಗಾಗಿ ಹೀಗೆಲ್ಲ ಸರ್ಕಸ್ ಮಾಡುತ್ತಿದ್ದಾನೆ. ಧರ್ಮೆಂದ್ರ ಈ ಶೋಗೆ ಮುಖ್ಯ ಅತಿಥಿಯಾಗಿ ಬಂದಾಗ ಮನೀಷ್‌ ಶೋಲೆಯ ಸಿಹಿ ನೆನಪು ಮರಳಿಸಲು ಹೀಗೆ ಮಾಡಿದ. ಧರ್ಮೇಂದ್ರರನ್ನು ಸಹಜವಾಗಿ ಎಲ್ಲರೂ  ಮೆಚ್ಚಿದರು. ಪಾಪ ಮನೀಷ್‌ ಫ್ಲಾಪ್‌ ಆದ. ಬಾಲಿವುಡ್‌ನಲ್ಲಿ ಶೈನ್‌ ಆಗದ ಮನೀಷ್‌, ನನಗೆ ಹಿರಿತೆರೆಯ ಹಂಗೇ ಇಲ್ಲ, ಕಿರುತೆರೆ ಸಾಕು ಅಂತಾನೆ. `ಕೈಗೆಟುಕದ ದ್ರಾಕ್ಷಿ ಬಲು ಹುಳಿ’ ಎಂಬುದು ಬಹಳ ಹಳೆಯ ಗಾದೆಯಲ್ಲವೇ?

ಶರ್ಮನ್ಹಳ್ಳಿಗೆ ಹೋಗಿಬಿಡುವನೆ?

ದೊಡ್ಡ ದೊಡ್ಡ ಬ್ಯಾನರ್‌ ಮತ್ತು ಸ್ಟಾರ್‌ಗಳೊಂದಿಗೆ ನಟಿಸಿದ ಶರ್ಮನ್‌ ಜೋಶಿ, ಸದ್ಯಕ್ಕಂತೂ ಯಾವುದೇ ಅವಕಾಶಗಳಿಲ್ಲದೆ ಹತಾಶನಾಗಿದ್ದಾನೆ. ಯಾವುದೋ ದಿನಪತ್ರಿಕೆಗೆ ಸಂದರ್ಶನ ಕೊಡುವಾಗ ಶರ್ಮನ್‌, ಹೀಗೇ ಮುಂದುವರಿದರೆ ತಾನು ತನ್ನ ಹಳ್ಳಿಗೆ ಹೋಗಿ ಹೊಲಗದ್ದೆ ನೋಡಿಕೊಳ್ಳುವುದಾಗಿ ಹೇಳಿದ್ದಾನೆ. ಬಾಲಿವುಡ್‌ ಸ್ಟೈಲೇ ಹಾಗೆ, ಒಮ್ಮೆ ಅಟ್ಟಕ್ಕೇರಿಸಿ ತನ್ನ ನೆತ್ತಿ ಮೇಲಿಟ್ಟುಕೊಂಡರೆ, ಮತ್ತೊಮ್ಮೆ ಪಾತಾಳಕ್ಕೆ ತಳ್ಳಿಬಿಡುತ್ತದೆ. ವೆಬ್‌ ಸೀರೀಸ್‌ನ `ಬಾರಿಶ್‌’ ಲಾಕ್‌ ಡೌನ್‌ ಪ್ರಯುಕ್ತ ಮತ್ತೆ ಝೀ ಟಿವಿಗೆ ಮರಳಿದೆ, ಈತನ ಅದ್ಭುತ ನಟನೆ ಎಲ್ಲರನ್ನೂ ಪರವಶಗೊಳಿಸಿದೆ.

ಶೃತಿಯ ಡಿಜಿಟಲ್ ಡೆಬ್ಯೂ

ಇವಳು ಕಮಲ್ ಮಗಳು ದಕ್ಷಿಣದ ಶೃತಿಯಲ್ಲ, ಉತ್ತರದ ಶೃತಿ ಸೇಠ್‌. ಕಾಮಿಡಿ ಶೋಗಳಲ್ಲಿ ಸಾಕಷ್ಟು ಮಿಂಚಿ ಮದುವೆ, ಮಗು ಆಗಿ ಮತ್ತೆ ಕಿರುತೆರೆಗೆ ಮರಳಿದ್ದಾಳೆ. ಈ ಬಾರಿ ಈಕೆ `ಮೆಂಟಲ್ ಹುಡ್‌’ನಿಂದ ಡಿಜಿಟಲ್ ಡೆಬ್ಯೂ ಆಗಿದ್ದಾಳೆ. ಇವಳ ಜರ್ನಿ ಬಗ್ಗೆ ವಿಚಾರಿಸಿದಾಗ, ಇದರಿಂದ ತಾನು ಹ್ಯಾಪಿ ಎನ್ನುತ್ತಾಳೆ. ನನ್ನ ಸ್ವಂತ ಆಯ್ಕೆ ಮೇರೆಗೆ ನಾನು ಪಾತ್ರಗಳನ್ನು ಆರಿಸುತ್ತೇನೆ, ನನಗೆ ಹೋಲಿಸಿ ಇತರ ಸ್ಟಾರಿಣಿಯರು ಹೆಚ್ಚು ಫೇಮಸ್‌, ಶ್ರೀಮಂತರೆಂದರೆ ಐ ಡೋಂಟ್‌ಕೇರ್‌! ಮದುವೆ, ಪ್ರೆಗ್ನೆನ್ಸಿಯಲ್ಲಿ ನಾನು ಹಲವು ಉತ್ತಮ ಶೋ ಕಳೆದುಕೊಂಡದ್ದು ನೆನಪಿದೆ. ಕೆರಿಯರ್‌ಗಿಂತ ನನ್ನ ಪರ್ಸನಲ್ ಜೀವನ ಮುಖ್ಯ. ನನ್ನ ಕಾಲದವರು 20 ವರ್ಷದಿಂದ ಕಿರುತೆರೆಯಲ್ಲಿ ಉಳಿಯುವುದು ಸಣ್ಣ ವಿಷಯವಲ್ಲ ಎಂಬುದು ಎಲ್ಲರಿಗೂ ಗೊತ್ತು. ಎಲ್ಲಕ್ಕೂ ಮುಖ್ಯ ವೀಕ್ಷಕರ ಪ್ರೀತಿ ವಾತ್ಸಲ್ಯವೇ ನನಗೆ ಶ್ರೀರಕ್ಷೆ….. ಶಭಾಷ್‌ ಶೃತಿ!

ಫೋನಿನಲ್ಲೇ ಚಿತ್ರದ ತಯಾರಿ!

ಈ ಲಾಕ್‌ ಡೌನ್‌ನಲ್ಲಿ ಮತ್ತಿನ್ನೇನು ಮಾಡಲು ಸಾಧ್ಯ? ನಟ ಆದಿತ್ಯ ರಾಮ್ ಕಪೂರ್‌ ಹಾಗೂ ನಿರ್ದೇಶಕ ಮೋಹಿತ್‌ ಸೂರಿ, ವಿಡಿಯೋ ಕಾನ್‌ಫರೆನ್ಸಿಂಗ್‌ ಮೂಲಕ ತಮ್ಮ ಮುಂದಿನ `ಏಕ್‌ ವಿಲನ್‌’ ಚಿತ್ರದ ತಯಾರಿ ಆರಂಭಿಸಿದ್ದಾರೆ. `ಮಲಂಗ್‌’ ಚಿತ್ರದಲ್ಲಿ ಈತನ ಕಟ್ಟುಮಸ್ತಾದ ಬಾಡಿ ಯುವಜನತೆಯನ್ನು ಬೆರಗಾಗಿಸಿತ್ತು. ಮುಂದಿನ ಚಿತ್ರಕ್ಕಾಗಿ ಮೇಲಿನ ಫೋಟೋ ತರಹ ಆದಿತ್ಯ ರೆಡಿ ಆಗುತ್ತಿದ್ದಾನೆ.

ಪ್ರಿಯಾಂಕಾ ಹೀಗೇಕೆ ಬಯಸುತ್ತಿದ್ದಾಳೆ?

ಬಾಲಿವುಡ್‌ ಚಿತ್ರಗಳಲ್ಲಿ ಪ್ರಿಯಾಂಕಾ ನಿರ್ವಹಿಸದ ಪಾತ್ರಗಳಿಲ್ಲ, ಆದರೆ ಹಾಲಿವುಡ್‌ನಲ್ಲಿ ಆ್ಯಕ್ಷನ್‌ ಸ್ಟಾರ್‌ ಅಷ್ಟೇ ಆಗಿ ಉಳಿದಿದ್ದಾಳೆ. ಈಗ ತನಗೆ ಹಿಂದಿ ಚಿತ್ರಗಳಲ್ಲೂ ದಕ್ಷಿಣದ ವಿಜಯಶಾಂತಿ, ಮಾಲಾಶ್ರೀಯರಂತೆ ಲೇಡಿ ಬ್ರೂಸ್ಲಿ ಆಗ್ತೀನಿ ಅಂತಿದ್ದಾಳೆ! ಫೈಟಿಂಗ್‌ನಲ್ಲಿ ಗಂಡಸರಷ್ಟೇ ಮಿಂಚಬೇಕೆಂದು ರೂಲ್ಸೇ‌ ಇಲ್ಲ, ನಾವು ಅಷ್ಟೇ ಚೆನ್ನಾಗಿ ಬಾಡಿ ಮೇಂಟೇನ್‌ ಮಾಡಿರುವಾಗ, ಮರ ಸುತ್ತುವ ಪಾತ್ರಗಳಷ್ಟಕ್ಕೇ ತನ್ನನ್ನು ಸೀಮಿತಗೊಳಿಸಬೇಡಿ ಎನ್ನುತ್ತಾಳೆ. ನೀನೇ ನಿರ್ಮಾಪಕಿಯಾಗಿ ಯಾಕೆ ಟ್ರೈ ಮಾಡಿ ನೋಡಬಾರದು…. ಎಂದು ಯಾರೋ ಕುಟುಕಿದಾಗ ಇವಳಿಗೆ ಕೋಪ ಬಂತಂತೆ.

ಹೀಗಾಗಿ ಅಕ್ಷಯ್ಇನ್ನೂ ಅವಿವಾಹಿತ!

ಅಕ್ಷಯ್‌ ಖನ್ನಾನ ಜೀವನ ಯಾವ ಮಿಸ್ಟ್ರಿಗೂ ಕಡಿಮೆ ಇಲ್ಲ. ಒಮ್ಮೆ ಸಿನಿಮಾ ತೊರೆದರೆ, ಮತ್ತೊಮ್ಮೆ ಸಂಬಂಧಗಳನ್ನೇ ತೊರೆಯುತ್ತಾನೆ. ಒಂದು ಕಾಲದಲ್ಲಿ ಅಕ್ಷಯ್‌ ಸತತ ಹಿಟ್‌ ಚಿತ್ರ ನೀಡುತ್ತಿದ್ದ. ಆಗ ಕರಿಶ್ಮಾಳನ್ನು ಮದುವೆ ಆಗುವ ಪ್ರಸ್ತಾಪ ಬಂದಿತ್ತು. ಆದರೆ ಕರಿಶ್ಮಾಳ ತಾಯಿ ಬಬಿತಾ ಇವನನ್ನು ತಿರಸ್ಕರಿಸಿದ್ದಳು. ಹಿಂದೊಮ್ಮೆ ಪತ್ರಿಕೆಗೆ ಸಂದರ್ಶನ ಕೊಡುವಾಗ ಒಂದೇ ರಿಲೇಶನ್‌ ಶಿಪ್‌ನಲ್ಲಿ ಶಾಶ್ವತ ಇರಲಾಗದು ಎಂದು ತಾನೇ ಡೈಲಾಗ್‌ ಹೊಡೆದಿದ್ದ. ವಿಧಿಯಿಲ್ಲದೆ ಈಗ ಸಲ್ಮಾನ್‌  ಖಾನ್‌ನ ದಾರಿ ಹಿಡಿದಿದ್ದಾನೆ ಅಕ್ಷಯ್‌!

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ