ಈ ಜೋಡಿ ಮದುವೆ ನಡೆಯುವುದೆಲ್ಲಿ?
ರಾಲಿಯಾ ಜೋಡಿ ಬಗ್ಗೆ ಬಿ ಟೌನ್ನಲ್ಲಿ ಚರ್ಚೆಯೋ ಚರ್ಚೆ. ನಂಬಲರ್ಹ ಸುದ್ದಿಗಳ ಪ್ರಕಾರ ಇವರ ಮದುವೆ ಬಗ್ಗೆ ಯಾವುದೇ ಖಚಿತ ಮಾಹಿತಿ ಸಿಗುತ್ತಿಲ್ಲ. ಈ ಜೋಡಿ ತಮ್ಮ `ಬ್ರಹ್ಮಾಸ್ತ್ರ' ಚಿತ್ರದ ರಿಲೀಸ್ ನಂತರ ಮುಂಬೈಯಲ್ಲೇ ಮದುವೆ ಆಗುವ ನಿರ್ಧಾರಕ್ಕೆ ಬಂದಿದ್ದಾರೆ. ಎಂಬುದು ಮಾತ್ರ ಖಚಿತವಾಗಿದೆ. ಹಿಂದೆ ಈ ಜೋಡಿ ಡೆಸ್ಟಿನೇಶನ್ ವೆಡ್ಡಿಂಗ್ಗಾಗಿ ವಿದೇಶಿ ತಾಣ ಹುಡುಕುತ್ತಿತ್ತು ಎಂದು ಹೇಳಿದವರೇ ಈಗ ನಾಲಿಗೆ ಕಚ್ಚಿಕೊಳ್ಳುತ್ತಿದ್ದಾರೆ. ಖುಲ್ಲಂಖುಲ್ಲ ಇವರೇ ಮೀಡಿಯಾಗೆ ವಿಷಯ ತಿಳಿಸಿಬಿಟ್ಟರೆ ತಂಟೆ ಇರಲ್ಲ.
ಜಾನ್ ಮತ್ತೆ ಆ್ಯಕ್ಷನ್ ಚಿತ್ರಗಳಲ್ಲಿ
ಇತ್ತೀಚೆಗಷ್ಟೇ ರಿಲೀಸ್ ಆಗಿದ್ದ ಜಾನ್ನ ಚಿತ್ರ `ಪಾಗಲ್ ಪಂತಿ' ಮಲ್ಟಿ ಸ್ಟಾರ್ ಇದ್ದರೂ ತೋಪಾಗಿತ್ತು. ಅಕ್ಷಯ್ ಕುಮಾರ್ ತರಹ ತಾನೂ ಸತತ ಫೈಟ್ ಚಿತ್ರದ ಮಧ್ಯೆ ಲೈಟ್ ಕಾಮಿಡಿ ಟ್ರೈ ಮಾಡಿದ, ಆದರೆ ಅದೇನೂ ನಡೆಯಲಿಲ್ಲ. ವದಂತಿಗಳ ಪ್ರಕಾರ ಜಾನ್ ಈಗ ಮತ್ತೆ ಡಿಶುಂ ಡಿಶುಂಗೆ ಮಾರುಹೋಗಿ `ಸತ್ಯಮೇ ಜಯತೆ-2' ಚಿತ್ರ ಮಾಡುತ್ತಿದ್ದಾನೆ. ಜಾನ್ಗೆ ಆ್ಯಕ್ಷನ್ನೇ ಸರಿ. ಏನಂತೀರಿ?
ಕಿಯಾರಾಗೆ ಯಾಕಂತೆ ಗಿಲ್ಟಿ?
`ಕಬೀರ್ ಸಿಂಗ್' ಚಿತ್ರದ ನಂತರ ಕಿಯಾರಾ ಆಕಾಶಕ್ಕೆ ಏಣಿ ಹಾಕಿದ್ದಾಳೆ. ನೆಟ್ ಫ್ಲಿಕ್ಸ್ ನಲ್ಲಿ ಇತ್ತೀಚೆಗೆ ಈಕೆಯ `ಗಿಲ್ಟಿ' ಚಿತ್ರ ಸೈ ಎನಿಸಿಕೊಂಡಿತು. ದೆಹಲಿ ಮೂಲದ ಈ ಹುಡುಗಿ ಇಲ್ಲಿ ರಫ್ಟಫ್ ಪಾತ್ರದಲ್ಲಿ ಯುವಜನತೆ ಮೆಚ್ಚುವಂತೆ ಮಿಂಚಿದ್ದಾಳೆ. ಈ ಚಿತ್ರದಲ್ಲಿ ಡಬ್ಬೂ ಪಾತ್ರದ ಮೂಲಕ ಈಕೆ ಹೊಸ ಸೆನ್ಸೇಶನ್ ಕ್ರಿಯೇಟ್ ಮಾಡಿದ್ದಾಳೆ ಎಂದರೆ ಉತ್ಪ್ರೇಕ್ಷೆಯಲ್ಲ.
ಸಿನಿಮಾ ದಂಧೆ ನೆಲ ಕಚ್ಚಿತೇ?
ಕೊರೋನಾ ತನ್ನ ಕಬಂಧ ಬಾಹುಗಳಲ್ಲಿ ಮಾನವರನ್ನು ಮಾತ್ರವಲ್ಲದೆ, ಅವರ ದಂಧೆಯನ್ನೂ ಕಬಳಿಸಿದೆ. ಎಲ್ಲಾ ಪ್ರಮುಖ ಉದ್ಯಮಗಳಂತೆ ಕನ್ನಡದ ಸ್ಯಾಂಡಲ್ ವುಡ್, ಹಿಂದಿಯ ಬಾಲಿವುಡ್ ಸಹ ನಡುಗಿ ಹೋಗಿದೆ. ಚಿತ್ರಗಳು ಬಿಡುಗಡೆ ಆಗದ ಕಾರಣ ನಿರ್ಮಾಪಕರ ಹಣವೆಲ್ಲ ಅಲ್ಲಿಯೇ ನಿಂತುಬಿಟ್ಟಿದೆ. ಅಂತ್ಯ ಮಾರ್ಚ್, ಏಪ್ರಿಲ್, ಮೇ ತಿಂಗಳಲ್ಲಿ ರಿಲೀಸ್ ಆಗಲಿದ್ದ ಚಿತ್ರಗಳು ಬಹಳ ಮುಂದಕ್ಕೆ ಹೋಗಿವೆ. ಶೂಟಿಂಗ್ ಸಂಪೂರ್ಣ ಸ್ಥಗಿತಗೊಂಡಿದ್ದರಿಂದ ದಿನಗೂಲಿಯ ಕಾರ್ಮಿಕರು ಊಟಕ್ಕಿಲ್ಲದೆ ಕಂಗಾಲಾಗಿದ್ದಾರೆ. ತುಸು ತಡವಾಗಿ ಅಂತೂ ಮಹಾನ್ ತಾರೆಯರು ಇವರ ನೆರವಿಗೆ ಬಂದಿದ್ದಾರೆ. ಅಭಿಮಾನಿಗಳು ತಮ್ಮ ಮೆಚ್ಚಿನ ತಾರೆಯರ ಚಿತ್ರಗಳಿಗಾಗಿ ಕಾಯಲೇಬೇಕಿದೆ.
ಪೃಥ್ವಿರಾಜ್ ಎಲ್ಲಿ ಸಿಲುಕಿದೆ?
ತಮಿಳು, ತೆಲುಗು ನಂತರ ಅಯ್ಯ, ಔರಂಗ್ಜೇಬ್ನಂಥ ಹಿಂದಿ ಚಿತ್ರಗಳಲ್ಲಿ ನಟಿಸಿದ ಮಲೆಯಾಳಿ ಹೀರೋ ಪೃಥ್ವಿ ಯಾರಿಗೆ ತಾನೇ ಗೊತ್ತಿಲ್ಲ? ಎಲ್ಲರಂತೆ ಈತನೂ ಕೊರೋನಾದಿಂದಾಗಿ ಕಂಗಾಲು. ಅಂದರೆ ಕೊರೋನಾ ಅಟ್ಯಾಕ್ ಅಲ್ಲ, ಸಿನಿಮಾ ಶೂಟಿಂಗ್ಗಾಗಿ ಈತ ಜೊರ್ಡಾನ್ಗೆ ಹೋಗಿದ್ದ. ಇಡೀ ಟೀಂ ವಾಪಸ್ ಆದರೂ ಅನಿವಾರ್ಯವಾಗಿ ಅಲ್ಲೇ ಉಳಿಯಬೇಕಾದ ಈತ, ಲಾಕ್ ಡೌನ್ಗೆ ಮೊದಲು ಕೊಚಿನ್ಗೆ ಬರಲು ಆಗಲೇ ಇಲ್ಲ. ಫೇಸ್ಬುಕ್ನಲ್ಲಿ ಇದನ್ನು ತೋಡಿಕೊಂಡ ಈತ, ಸದ್ಯಕ್ಕಂತೂ ಪರಿಸ್ಥಿತಿ ಪರವಾಗಿಲ್ಲ, ಹೀಗೆ ಮುಂದುವರಿದರೆ ಏನು ಮಾಡುವುದು ಎಂದು ಪೇಚಾಡಿದ್ದಾನೆ. ಪೃಥ್ವಿ ಆದಷ್ಟೂ ಬೇಗ ಭಾರತಕ್ಕೆ ಮರಳುವಂತಾಗಲಿ!