ಕೆಲವು ಮಹಿಳೆಯರು ತಮ್ಮ  ಉಳಿತಾಯದ ಹಣವನ್ನು ಬ್ಯಾಂಕ್‌ನಲ್ಲಿ ಇಡದೆ ಷೇರುಗಳಲ್ಲಿ ಹಾಕುತ್ತಾರೆ. ಆದರೆ ಕಳೆದ ವರ್ಷ ಷೇರು ಮಾರುಕಟ್ಟೆಯ ಏರಿಳಿತ ಜನರ ಮನಸ್ಸಿನಲ್ಲಿ ಅತ್ಯಂತ ಕೆಟ್ಟ ಪರಿಣಾಮ ಬೀರಿತು. ಇದು ಸಾಮಾನ್ಯ ಹೂಡಿಕೆದಾರನ ವಿಶ್ವಾಸವನ್ನೇ ಅಲುಗಾಡಿಸಿಬಿಟ್ಟಿತು.

ಬಹಳಷ್ಟು ಹೂಡಿಕೆದಾರರು ತಾವು ಹೂಡಿದ ಮೊತ್ತ ಹಲವು ಪಟ್ಟು ಹೆಚ್ಚಾಗುತ್ತದೆ ಎಂದು ನಂಬಿ ಷೇರು ಮಾರುಕಟ್ಟೆ ಕ್ಷೇತ್ರದಲ್ಲಿ ಇಳಿದಿದ್ದರು. ಆದರೆ ಅವರು ಅತ್ಯಂತ ಹೀನಾಯ ಸ್ಥಿತಿಯಲ್ಲಿ ಅಲ್ಲಿಂದ ವಾಪಸ್ಸಾದರು. ಇನ್ನು ಕೆಲವರು ಆತ್ಮಹತ್ಯೆಗೆ ಶರಣಾದ ಉದಾಹರಣೆಗಳು ಕೂಡ ನಮ್ಮ ಕಣ್ಮುಂದೆ ಇವೆ.

ಷೇರು ಮಾರುಕಟ್ಟೆಯ ಈ ದುಸ್ಥಿತಿಯಿಂದಾಗಿ ತಮ್ಮ ಹೂಡಿಕೆ ಮೊತ್ತದ ಮೇಲೆ ಸಾಮಾನ್ಯ ಪ್ರತಿಫಲ ದೊರೆಯುವುದು ಕೂಡ ಕಷ್ಟಕರ ಎನಿಸಿದಾಗ ಹೂಡಿಕೆದಾರರು ತಮ್ಮ ಮೊತ್ತವನ್ನು ಬೇರೆ ಸುರಕ್ಷಿತ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಲು ಯೋಚಿಸಲಾರಂಭಿಸಿದರು.

ಕಳೆದ ವರ್ಷವಷ್ಟೇ ದೇಶದ ನಾಲ್ಕನೇ ದೊಡ್ಡ ಸಾಫ್ಟ್ ವೇರ್‌ ರಫ್ತು ಕಂಪನಿ ಸತ್ಯಂ ಕಂಪ್ಯೂಟರ್‌ ಸರ್ವೀಸಸ್‌ ಲಿಮಿಟೆಡ್‌ನ ಸಂಸ್ಥಾಪಕ ಅಧ್ಯಕ್ಷ ಬಿ. ರಾಮಲಿಂಗರಾಜು ಕಂಪನಿಯಲ್ಲಿ ಹಣಕಾಸು ಅವ್ಯವಹಾರ ನಡೆಸಿ ರಾಜೀನಾಮೆ ನೀಡಿದರು. ಇದು ಸಾವಿರಾರು ಕೋಟಿ ರೂ.ಗಳ ಅವ್ಯವಹಾರ. ಇದರಲ್ಲಿ ಷೇರು ಹೂಡಿಕೆದಾರರಿಗೆ ಸಾವಿರಾರು ರೂ.ಗಳ ಹಾನಿಯಾಯಿತು. ಈ ಕಂಪನಿಯ ಸಾಮ್ರಾಜ್ಯ ಇಡೀ ವಿಶ್ವದಾದ್ಯಂತ ಪಸರಿಸಿದೆ. ಇದರಲ್ಲಿ 53,000 ಜನರು ಕೆಲಸ ಮಾಡುತ್ತಿದ್ದಾರೆ. ಸುಮಾರು ಒಂದು ದಶಕದ ಮುಂಚೆ ರಾಜು ಹಣಕಾಸು ಬ್ಯಾಂಕಿಂಗ್‌ ಕಂಪನಿಗಳ ಠೇವಣಿದಾರರ 100 ಕೋಟಿ ರೂ.ಗಳ ವ್ಯವಹಾರಕ್ಕೆ ಸಂಬಂಧಪಟ್ಟಂತೆ ಡಿಫಾಲ್ಟರ್‌ ಆಗಿದ್ದರು. ಈ ಕಂಪನಿಯ ಹೆಸರು ನಾಗಾರ್ಜುನ ಫೈನಾನ್ಸ್. ಅದರ ಚೇರ್‌ಮನ್‌ ಹೆಸರು ಕೂಡ ಕೆ.ಎಸ್‌. ರಾಜು. ಇಬ್ಬರೂ ಹೈದರಾಬಾದ್‌ನವರೇ. ಇಬ್ಬರೂ ಕಾರ್ಪೋರೆಟ್‌ ಜಗತ್ತನ್ನು ನಡುಗಿಸಿಬಿಟ್ಟರು.

ಮೋಸದ ಕಂಪನಿಗಳ ದರ್ಬಾರು

images (1)

ಷೇರು ಮಾರುಕಟ್ಟೆ ಕರಡಿಯ ಹಿಡಿತಕ್ಕೆ ಅಂದರೆ ಕುಸಿತಕ್ಕೊಳಗಾದದ್ದು ಏಕೆ ಎಂದು ಬಹಳಷ್ಟು ಹೇಳಲಾಗಿದೆ. ಒಬ್ಬ ಸಾಮಾನ್ಯ ಹೂಡಿಕೆದಾರ ತನ್ನ ಹಣವನ್ನು ಹೂಡಿಕೆ ಮಾಡುವಾಗ ಏನು ಮಾಡಬೇಕು, ಏನು ಮಾಡಬಾರದು ಎಂದೆಲ್ಲ ಕಿವಿಮಾತುಗಳನ್ನು ಹೇಳಲಾಗುತ್ತದೆ. ಇನ್ನೊಂದೆಡೆ ಮೋಸದ ಕಂಪನಿಗಳ ದರ್ಬಾರು ಹಾಗೆಯೇ ಮುಂದುವರಿದಿದೆ. ಈ ಕಂಪನಿಗಳ ಧೂರ್ತ ಜನರು ಬಗೆಬಗೆಯ ಆಮಿಷಗಳನ್ನು ಒಡ್ಡಿ ಹಣ ಸಂಗ್ರಹಿಸಿ ರಾತ್ರೋರಾತ್ರಿ ಪಲಾಯನ ಮಾಡುತ್ತಾರೆ. ಇನ್ನು ಕೆಲವು ಕಂಪನಿಗಳು ಕೃತ್ರಿಮ ಏರಿಕೆ ತೋರಿಸಿ ಹಣ ಗಳಿಸುವಲ್ಲಿ ನಿರತರಾಗಿವೆ. ಷೇರು ಮಾರುಕಟ್ಟೆಯ ಏಕೈಕ ನಿಯಂತ್ರಿತ ಸಂಸ್ಥೆ `ಸೆಬಿ’ ಅರ್ಥಾತ್‌ಭಾರತೀಯ ಷೇರು ವಿನಿಮಯ ಕೇಂದ್ರ `ತಪ್ಪು ಮಾಡಿ ಮತ್ತು ಆ ತಪ್ಪಿನಿಂದ ಪಾಠ ಕಲಿತುಕೊಳ್ಳಿ’ ಎಂಬ ನಿಯಮದನ್ವಯ ಸುಧಾರಣೆ ತರುವಲ್ಲಿ ವ್ಯಸ್ತವಾಗಿದೆ. ಸೆಬಿಯ ಕಾರ್ಯನಿರ್ವಹಣೆಯ ಈ ವ್ಯವಸ್ಥೆಯ ಲಾಭವನ್ನು ಚಾಣಾಕ್ಷ ಕಂಪನಿಗಳ ಪ್ರವರ್ತಕರು ಪಡೆದುಕೊಳ್ಳುತ್ತಿದ್ದಾರೆ. ಷೇರು ಮಾರುಕಟ್ಟೆಯ ರಕ್ಷಣಾಕರ್ತರ ಪಾತ್ರ ವಹಿಸುವ ಸಂಸ್ಥೆ ಎಲ್ಲಿಯತನಕ ತನ್ನ ತಪ್ಪನ್ನು ಗುರುತಿಸಿ ಅದನ್ನು ನಿವಾರಿಸಿಕೊಳ್ಳುತ್ತೋ, ಅಲ್ಲಿಯತನಕ ಈ ಚಾಣಾಕ್ಷ ಮೋಸಗಾರರು ಹಾಗೆಯೇ ಮೋಸ ಮಾಡುತ್ತಿರುತ್ತಾರೆ.

ಸೆಬಿಯ ಮೃದು ಧೋರಣೆ

DownloadedFile-1

ಯಾವುದೇ ಒಂದು ಕಂಪನಿಯ ಖೊಟ್ಟಿ ಹೇಳಿಕೆ ಅಥವಾ ಖೊಟ್ಟಿ ಮಾಹಿತಿಗಾಗಿ ತಾನು ಹೊಣೆಯಲ್ಲ ಎಂದು ಸೆಬಿ ಮುಗ್ಧವಾಗಿ  ಹೇಳಿಬಿಡುತ್ತದೆ. ಇದರ ಪರಿಮಾಣವೆಂಬಂತೆ ಅದರ ಮೂಗಿನ ಕೆಳಗಡೆಯೇ ಹಲವು ಕಂಪನಿಗಳು ಸುಳ್ಳು ಭರವಸೆ ನೀಡಿ ಭಾರಿ ಮೊತ್ತ ಜೇಬಿಗಿಳಿಸುತ್ತಿವೆ. ಇಂತಹ ಅನೇಕ ಉದಾಹರಣೆಗಳು ಸಿಗುತ್ತಿವೆ. ಯಾವ ಉದ್ದೇಶಕ್ಕೆಂದು ಅ ಹಣ ಸಂಗ್ರಹ ಮಾಡಿದ್ದಿ, ಆ ಉದ್ದೇಶಕ್ಕಾಗಿ ಅವು ಬಳಸುವ ಬಗ್ಗೆ ಯೋಚನೆ ಮಾಡಿಯೇ ಇಲ್ಲ.

ನಿಯಮ, ಕಾನೂನು ರೂಪಿಸುವವರು ಕಂಪನಿಗಳ ಕಾರ್ಯ ನಿರ್ವಾಹಕರ ವಿರುದ್ಧ ಷೇರುಗಳಲ್ಲಿ ಹಣ ತೊಡಗಿಸುವವರಿಗೆ ಯಾವುದೇ ರಕ್ಷಣೆ ಒದಗಿಸಿಲ್ಲ. ಷೇರು ಮಾರುಕಟ್ಟೆಗಾಗಿ ನಿಯಮ, ಕಾನೂನು ರೂಪಿಸುವ ಸಂಘಟನೆ `ಸೆಬಿ’ಯ ಮೇಲೆ ಹೆಚ್ಚು ಕೆಲಸದ ಒತ್ತಡ ಇದೆ ಹಾಗೂ ಯಾವ ರೀತಿ ಕಂಪನಿಗಳ ಸಂಖ್ಯೆ ಹೆಚ್ಚುತ್ತಿದೆಯೋ, ಅವುಗಳ ಕಾರ್ಯವೈಖರಿ ಗಮನಿಸಲು ಸಾಕಷ್ಟು ಸಂಖ್ಯೆಯಲ್ಲಿ ಸಿಬ್ಬಂದಿ ಕೂಡ ಇಲ್ಲ.

ನಮ್ಮ ಷೇರು ಮಾರುಕಟ್ಟೆಯಲ್ಲಿ ಕಂಪನಿಗಳು ಲಿಸ್ಟಿಂಗ್‌ ಆಗಲು ಕನಿಷ್ಠ ಅವಶ್ಯಕತೆ ಮತ್ತು ಅದರ ಮಾನದಂಡಗಳು ಅತ್ಯಂತ ಸಾಧಾರಣವಾಗಿವೆ. ಅವನ್ನು ಯಾವುದೇ ಒಬ್ಬ ಆಪರೇಟರ್‌ ಸಾಧಾರಣ ಪ್ರಯತ್ನಗಳಿಂದ ಪೂರ್ತಿಗೊಳಿಸುತ್ತಾನೆ.

ಒಬ್ಬ ಚಾರ್ಟರ್ಡ್‌ ಅಕೌಂಟೆಂಟ್‌ ತನ್ನ ವೃತ್ತಿಯಲ್ಲಿ ಯಾವುದೇ ಯಶಸ್ಸು ಕಾಣದಿದ್ದಾಗ ಅವನು ಬೇರೆ ರೀತಿಯಲ್ಲಿ ಯಶಸ್ಸು ಕಂಡುಕೊಳ್ಳಲು ಒಂದು ಫೈನಾನ್ಸ್ ಕಂಪನಿ ತೆರೆದ. ಇದರ ಮುಖ್ಯ ಕಛೇರಿಯನ್ನು ತನ್ನ ಮನೆಯಲ್ಲಿಯೇ ಮಾಡಿಕೊಂಡು, ದೆಹಲಿಯಲ್ಲಿ ಅದರ ಶಾಖೆ ತೆರೆದ. ಕಂಪನಿಯು  ಷೇರುಗಳ ಮುಖಾಂತರ 25 ಕೋಟಿ ರೂ. ಸಂಗ್ರಹಿಸಿತು. ಈಗ ಈ ವ್ಯಕ್ತಿ ಹಲವು ದುಬಾರಿ ಕಾರುಗಳ ಒಡೆಯ. ದೆಹಲಿಯಲ್ಲಿ ಭರ್ಜರಿ ಬಂಗ್ಲೆ ಇದೆ. ಅವನ ಮಕ್ಕಳು ಹೆಸರಾಂತ ಪಬ್ಲಿಕ್‌ ಸ್ಕೂಲುಗಳಲ್ಲಿ ಓದುತ್ತಿದ್ದಾರೆ. ಇನ್ನೊಂದೆಡೆ ಕಂಪನಿಯ ಷೇರುಗಳ ಬೆಲೆ ಕೊಂಡುಕೊಂಡ ಬೆಲೆಯ ಅರ್ಧದಷ್ಟು ಆಗಿ ಹೋಗಿವೆ. ಈ ರೀತಿ ಹೂಡಿಕೆದಾರರು ಹಾನಿ ಅನುಭವಿಸುತ್ತಿದ್ದಾರೆ. ಇನ್ನೊಂದೆಡೆ ಕಂಪನಿಯ ಪ್ರವರ್ತಕರು ಮಾತ್ರ ಮೋಜು ಮಜ ಮಾಡುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣ ಷೇರು ಮಾರುಕಟ್ಟೆಯ ಪ್ರವೇಶ ನಿಯಮಗಳು ಅತ್ಯಂತ ಸರಳವಾಗಿರುವುದು. ಅದೇ ರೀತಿ ಹಲವು ರಿಯಲ್ ಎಸ್ಟೇಟ್‌ ಕಂಪನಿಗಳು ಕೂಡ ಹೂಡಿಕೆದಾರರ ಹಣವನ್ನು ಷೇರು ಮಾರುಕಟ್ಟೆಯಿಂದ ಸಂಗ್ರಹಿಸಿ ಅದರ ದುರುಪಯೋಗ ಮಾಡಿಕೊಂಡ.

ಬಿಗಿ ನಿಲುವು ಬೇಕು

DownloadedFile

ಕಂಪನಿಗಳು ತಮ್ಮ ಸ್ಥಿತಿಗತಿ ಬಿಂಬಿಸಲು ಸೆಬಿ ಕಠಿಣ ನಿಲುವು ತಾಳಬೇಕು. ಅದು ಆತುರದಲ್ಲಿ  ಸುಧಾರಣೆಯ ಹೆಜ್ಜೆಯಿಡುವ, ನಿಯಮಗಳನ್ನು ತಿದ್ದುಪಡಿ ಮಾಡಿ ಇವರೆಲ್ಲರ ಲೋಪ ದೋಷ ನಿವಾರಣೆ ಮಾಡುವಂತಾಗಬಾರದು. ಅದು ಎಚ್ಚರಿಕೆಯಿಂದ  ಹೆಜ್ಜೆ ಇಟ್ಟು ವಿಶ್ಲೇಷಣೆ ಮಾಡುವುದರ ಮೂಲಕ ಸುಧಾರಣೆಯ ನಿಯಮಗಳನ್ನು ಜಾರಿಗೆ ತರಬೇಕು. ಅರ್ಥ ವ್ಯವಸ್ಥೆ ಮುಕ್ತಗೊಳಿಸುವುದರಿಂದ ಸರ್ಕಾರದ ಪಾತ್ರದಲ್ಲೂ ಬದಲಾವಣೆಯಾಗಿದೆ. ಇತ್ತೀಚಿನ ದಿನಗಳಲ್ಲಿ ನಾವು ಕಂಡುಕೊಂಡಂತೆ ಹಲವು ಮಾನದಂಡಗಳು ಮತ್ತು ನಿಯಮ ರೂಪಿಸುವವರ ಉಪಸ್ಥಿತಿಯ ಹೊರತಾಗಿ ಅನೇಕ ಹೂಡಿಕೆದಾರರು ರಾತ್ರೋರಾತ್ರಿ ಬಾಗಿಲು ಮುಚ್ಚು ಕಂಪನಿಗಳ ಬಲಿಪಶುಗಳಾದರು. ಹೀಗಾಗಿ ಹೂಡಿಕೆದಾರರು ಸೆಬಿ ಅಥವಾ ಕಂಪನಿ ವ್ಯವಹಾರಗಳ ಸಚಿವಾಲಯದ ಭರವಸೆಯ ಮೇಲೆ ನಂಬಿಕೆ ಇಡದೇ ತಮ್ಮ ಹಿತ ಕಾಯ್ದುಕೊಳ್ಳುವ ಸ್ಥಿತಿಯಲ್ಲಿ ಸದಾ ಎಚ್ಚರದಿಂದ ಇರಬೇಕು.

ಇದರ ಹೊರತಾಗಿ ಮರ್ಚಂಟ್‌ ಬ್ಯಾಂಕರ್ಸ್‌ನಂತಹ ಇತರೆ ಮಧ್ಯವರ್ತಿ ಸಂಸ್ಥೆಗಳನ್ನು ಕಂಪನಿಯ ಪ್ರಾಸ್ಪೆಕ್ಟಸ್‌ನಲ್ಲಿ ನೀಡಿದ ತಪ್ಪು ಹೇಳಿಕೆಗಾಗಿ ಹೊಣೆಗಾರನನ್ನಾಗಿಸಬೇಕು. ಗ್ರಾಹಕರ ಹಿತರಕ್ಷಣೆಗಾಗಿ ಸರ್ಕಾರ ಉಚಿತ ವರ್ಕ್‌ ಶಾಪ್‌ ಏರ್ಪಡಿಸಿ ಹೂಡಿಕೆದಾರರಿಗೆ ತಿಳಿವಳಿಕೆ ನೀಡಬೇಕು ದೇಶಾದ್ಯಂತ ಹಂಚಿ ಹೋಗಿರುವ ಹೂಡಿಕೆದಾರರು ತಮ್ಮದೇ ಆದ ಒಂದು ಅಸೋಸಿಯೇಶನ್‌ ಮಾಡಿಕೊಂಡು ಮಾಹಿತಿಗಳನ್ನು ವಿನಿಮಯ ಮಾಡಿಕೊಳ್ಳಬೇಕು. ಏಕೆಂದರೆ ಹೂಡಿಕೆದಾರನ ತನಕ ಹೆಚ್ಚೆಚ್ಚು ಮಾಹಿತಿಗಳು ತಲುಪಬೇಕು. ಅಗತ್ಯ ಎನಿಸಿದರೆ ಆ ಧೂರ್ತ ಕಂಪನಿಗಳ ವಿರುದ್ಧ ಕಾನೂನು ಹೋರಾಟ ನಡೆಸಲು ಕೂಡ ಹಿಂದೇಟು ಹಾಕಬಾರದು. ಸೆಬಿಯ ಹೊರತಾಗಿ ಕಂಪನಿ ವ್ಯವಹಾರಗಳ ಸಚಿವಾಲಯ ಕಂಪನಿಗಳ ಆಡಿಟ್‌ ರಿಪೋರ್ಟ್‌ನ್ನು ಆಗಾಗ ಬೇರೆ ಆಡಿಟರ್‌ಗಳ ಮುಖಾಂತರ ಮಾಡಿಸುವ ನಿರ್ಧಾರ ತೆಗೆದುಕೊಳ್ಳಬೇಕು. ಕುಟುಂಬದ ಉಳಿತಾಯವನ್ನು ಎಂದೂ ಅಪಾಯಕಾರಿ ಕ್ಷೇತ್ರದಲ್ಲಿ ತೊಡಗಿಸಬಾರದು. ಇದನ್ನು ಯಾವಾಗಲೂ ಅತ್ಯಂತ ಸುರಕ್ಷಿತ ಕ್ಷೇತ್ರದಲ್ಲಿ ತೊಡಗಿಸಬೇಕು. ಅವರಿವರು ಹೇಳಿದ್ದನ್ನು ಕೇಳಿ ನನಗಿಂತ ನನ್ನ ಉಳಿತಾಯದ ಗಂಟು ಹೆಚ್ಚು ಶ್ರೇಷ್ಠ ಎಂಬ ರೇಸ್‌ಗೆ ಮಾತ್ರ ಬೀಳಬಾರದು.

– ವಿನುತಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ