ನನ್ನ ಮದುವೆಯಲ್ಲಿ ನಡೆದ ಘಟನೆ. ನಮ್ಮ ನಿಶ್ಚಿತಾರ್ಥಕ್ಕೂ ಮದುವೆಗೂ 6 ತಿಂಗಳ ಅಂತರವಿತ್ತು. ಆ ದಿನಗಳಲ್ಲಿ ನಮ್ಮ ಅಮ್ಮನ ಆರೋಗ್ಯ ಸರಿ ಇರಲಿಲ್ಲ. ನಮ್ಮ ದೂರದ ಸಂಬಂಧದ ಮಾಲಾ ಎಂಬಾಕೆಯನ್ನು ಅಮ್ಮ ಮದುವೆ ಕೆಲಸಗಳಿಗೆ ಸಹಾಯ ಮಾಡಲೆಂದು ಕರೆಸಿಕೊಂಡಿದ್ದರು. ಅವರು ಅಶಿಕ್ಷಿತರಾಗಿದ್ದು, ವಿಪರೀತ ಮಾತಾಡುತ್ತಿದ್ದರು. ಅವರ ಗಂಡ ನಿರುದ್ಯೋಗಿಯಾಗಿದ್ದ. ಸದಾ ಮನೆಯಲ್ಲಿ ಕೂತು ತಿಂದುಣ್ಣುವುದೇ ಅವನ ಕೆಲಸವಾಗಿತ್ತು. ಅವರಿಗೆ ಇಬ್ಬರು ಮಕ್ಕಳು.

ಮಾಲಾಗೆ ಮನೆಯ ಕೆಲಸ ಅಷ್ಟಾಗಿ ಬರುತ್ತಿರಲಿಲ್ಲ. ಅಮ್ಮನನ್ನು ಕೇಳಿ ಕೇಳಿ ಎಲ್ಲ ಕೆಲಸಗಳನ್ನು ಮಾಡುತ್ತಿದ್ದರು. ಜೊತೆಗೆ ಇಡೀ ದಿನ ಗಂಡನನ್ನು ಹೊಗಳುತ್ತಿರುತ್ತಿದ್ದರು. ತಾನು ಸಂಪಾದಿಸಿದ್ದನ್ನು ಗಂಡನಿಗೆ ಕೊಟ್ಟುಬಿಡುವುದಾಗಿ ಹೇಳುತ್ತಿದ್ದರು.

ನನಗೆ ಅವರ ಮಾತುಗಳು ಬಾಲಿಶ ಅನ್ನಿಸುತ್ತಿತ್ತು. ಅವರನ್ನು ನೋಡಿದರೆ ನನಗೆ ರೇಗುತ್ತಿತ್ತು. ನಾನು ಆಗಾಗ್ಗೆ  ಅಮ್ಮನಿಗೆ ಅವರನ್ನು ಊರಿಗೆ ಕಳಿಸಿಬಿಡು ಎನ್ನುತ್ತಿದ್ದೆ.

ನನ್ನ ಮದುವೆಯ 8 ದಿನ ಮೊದಲು ಅಮ್ಮನ ಆರೋಗ್ಯ ಹದಗೆಟ್ಟಿತು. ಡಾಕ್ಟರ್‌ ಕೂಡಲೇ ಹರ್ನಿಯಾ ಆಪರೇಷನ್ ಮಾಡಿಸಬೇಕೆಂದರು. ಅಮ್ಮ ಒಪ್ಪಲಿಲ್ಲ. ಮಗಳ ಮದುವೆಯ ನಂತರವೇ ಮಾಡಿಸಿಕೊಳ್ಳುತ್ತೇನೆ ಎಂದರು. ಡಾಕ್ಟರ್‌ ಅಮ್ಮನಿಗೆ ಕಂಪ್ಲೀಟ್‌ ಬೆಡ್‌ ರೆಸ್ಟ್ ಹೇಳಿದರು. ನಾವೆಲ್ಲಾ ಬಹಳ ಆತಂಕ ಹಾಗೂ ಗಾಬರಿಯಿಂದ ಕೂಡಿದ್ದೆವು. ಆಗ ಮಾಲಾ ತಾನು ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳುವುದಾಗಿಯೂ, ನಾವೆಲ್ಲರೂ ನಿಶ್ಚಿಂತೆಯಿಂದ ಮದುವೆಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕೆಂದು ನಮಗೆ ಆಶ್ವಾಸನೆ ಕೊಟ್ಟರು. ಹಾಗೆಯೇ ಅವರು ಅಮ್ಮನನ್ನು ಹಗಲು ರಾತ್ರಿ ನೋಡಿಕೊಂಡರು.

ಆ ದಿನಗಳಲ್ಲಿ ಅವರು ತಮ್ಮ ಊರಿಗೂ ಹೋಗಲಿಲ್ಲ. ಪ್ರತಿ 2 ಗಂಟೆಗೊಮ್ಮೆ ಅಮ್ಮನಿಗೆ ಗಂಜಿ ಮಾಡಿ ಕುಡಿಸುತ್ತಿದ್ದರು. ನನ್ನನ್ನು ಬೀಳ್ಕೊಟ್ಟ ನಂತರವೇ ಅಮ್ಮ ಆಪರೇಷನ್‌ಗೆ ಆಸ್ಪತ್ರೆಗೆ ಸೇರಿದರು. ಆಪರೇಷನ್‌ ನಂತರ ಆಸ್ಪತ್ರೆಯಲ್ಲಿ ಹಾಗೂ ಮನೆಯಲ್ಲಿ ಮಾಲಾ ತನು ಮನದಿಂದ ನಮ್ಮ ತಾಯಿಯನ್ನು ನೋಡಿಕೊಂಡರು. ಅಮ್ಮ ಸಂಪೂರ್ಣ ಹುಷಾರಾದರು.

– ಅನುರಾಧಾ, ಕೋಲಾರ.

ಯಾರಾದರೂ ಹಿಡಿದ ಹಠ ಬಿಡದಿದ್ದರೆ ಒಮ್ಮೊಮ್ಮೆ ಬಹಳಷ್ಟು ತೊಂದರೆ ಅನುಭವಿಸ ಬೇಕಾಗುತ್ತದೆ. ನಮ್ಮ ಒಬ್ಬ ಪರಿಚಿತರ ಮದುವೆಯ ಸಂದರ್ಭದಲ್ಲಿ ಹೀಗೇ ಆಯಿತು. ಅವರು ತಮ್ಮ ಒಬ್ಬನೇ ಮಗನ ಮದುವೆಯನ್ನು ಸ್ಮರಣೀಯವನ್ನಾಗಿ ಮಾಡುವ ಉದ್ದೇಶದಿಂದ ಮದುವೆಯನ್ನು ಛತ್ರದಲ್ಲಿ ಮಾಡದೆ ಬಯಲಿನಲ್ಲಿ ದೊಡ್ಡ ಶಾಮಿಯಾನ ಹಾಕಿಸಿ ಅಲಂಕಾರ ಇತ್ಯಾದಿಗಳಿಗೆ ಹೆಣ್ಣಿನ ಕಡೆಯವರಿಂದ ಹೆಚ್ಚು ಖರ್ಚು ಮಾಡಿಸಿದರು ಮತ್ತು ತಾವು ಮೆರವಣಿಗೆಯನ್ನು ಅದ್ಧೂರಿಯಾಗಿ ಮಾಡಿದರು. ಆದರೆ ಆಗಿದ್ದೇ ಬೇರೆ. ಮೆರವಣಿಗೆ ಹೊರಡುತ್ತಿದ್ದಂತೆ ಮೋಡ ಮುಸುಕಿತು. ನೋಡ ನೋಡುತ್ತಿದ್ದಂತೆಯೇ ಜೋರಾಗಿ ಮಳೆ ಸುರಿಯತೊಡಗಿತು. ಮೆರವಣಿಗೆಯಲ್ಲಿದ್ದವರು ಅತ್ತಿತ್ತ ಓಡತೊಡಗಿದರು. ದುಬಾರಿ ಉಡುಪುಗಳು, ರೇಷ್ಮೆ ಸೀರೆಗಳು, ಇತ್ಯಾದಿ ಎಲ್ಲವೂ ನೆಂದು ತೊಪ್ಪೆಯಾಯಿತು. ಪೆಟ್ರೋಲ್ ಮ್ಯಾಕ್ಸ್ ಹಿಡಿದಿದ್ದವರೆಲ್ಲಾ ದೂರ ಓಡಿದರು. ಸ್ವಲ್ಪ ಹೊತ್ತಿಗೆ ರಸ್ತೆಯಲ್ಲಿ ನೀರು ತುಂಬಿ ಮೆರವಣಿಗೆ ಹೊರಡುವುದೇ ಬಹಳ ಕಷ್ಟವಾಯಿತು. ಹಾಗೂ ಹೀಗೂ ಮಳೆಯಲ್ಲಿ  ನೆನೆಯುತ್ತಲೇ ಮಂಟಪದತ್ತ ಹೋದಾಗ ಹೆಣ್ಣಿನ ಕಡೆಯವರು ಮಾಡಿದ್ದ ಸುಂದರ ಏರ್ಪಾಟನ್ನೂ ನೋಡಲಾಗಲಿಲ್ಲ. ಗಂಡು ಹೆಣ್ಣು ಪರಸ್ಪರ ಮಾಲಾರ್ಪಣೆ ಮಾಡುವಾಗಲೂ ಮೊಣಕಾಲುದ್ದ ನೀರು ತುಂಬಿತ್ತು. ನೀರಲ್ಲಿ ಓಡಾಡುತ್ತಲೇ ಇತರ ಶಾಸ್ತ್ರಗಳನ್ನು ನಿಭಾಯಿಸಲಾಯಿತು.

ದುಃಖದ ವಿಷಯವೆಂದರೆ ಮಾಡಿಸಿದ್ದ ಅಡುಗೆ, ಉಡುಗೊರೆ ಇತ್ಯಾದಿಗಳು ಹಾಳಾದವು. ಲಕ್ಷಾಂತರ ರೂ. ನೀರಲ್ಲಿ ಹೋಮ ಮಾಡಿದಂತಾಗಿತ್ತು. ಮದುವೆಯ ವೈಭವ, ಆಡಂಬರ ತೋರಿಸಲು ಹೋಗಿ ನಗೆಪಾಟಲಾಗಿತ್ತು. ಯಾರಿಗೂ ಕೂರಲೂ ಸಾಧ್ಯವಿರಲಿಲ್ಲ.

– ಕಲ್ಯಾಣಿ, ತುಮಕೂರು.

 ನನಗೆ ಮೂವರು ಒಡಹುಟ್ಟಿದ ಅಕ್ಕಂದಿರಿದ್ದಾರೆ. ಆದರೆ ನನಗೆ ಅಕ್ಕನ ನಿಜವಾದ ಪ್ರೀತಿ ಸಿಕ್ಕಿದ್ದು ನಾನು ಧಾರವಾಡದಲ್ಲಿ ಓದುತ್ತಿದ್ದಾಗ, ನೆರೆಮನೆಯಲ್ಲಿದ್ದ ಗೋದಾಬಾಯಿಯವರಿಂದ. ಅವರು ನನ್ನ ಎಲ್ಲಾ ಅಗತ್ಯಗಳನ್ನು ಪೂರೈಸುತ್ತಿದ್ದರು.

ಗೋದಾಬಾಯಿ ಚಿಕ್ಕವರಾಗಿದ್ದಾಗ ಅವರ ಅಣ್ಣಂದಿರು ಅವರನ್ನು ಮನೆಯಿಂದ ಹೊರಹಾಕಿದ್ದರು ಮತ್ತು ಅವರೊಡನೆ ಎಲ್ಲ ಸಂಬಂಧಗಳನ್ನು ಕಡಿದುಕೊಂಡಿದ್ದರು. ಕಾಲ ಬದಲಾಗಿ ಇಂದು ಗೋದಾಬಾಯಿಯವರ ಮಗ ಡಾಕ್ಟರ್‌ ಆಗಿದ್ದಾನೆ. ಅವನ ಮದುವೆ ಬೆಂಗಳೂರಿನ ಒಬ್ಬ ಪ್ರಸಿದ್ಧ ಡಾಕ್ಟರ್‌ರ ಮಗಳೊಂದಿಗೆ ನಿಶ್ಚಯವಾಯಿತು. ಮದುವೆಯ ದಿನ ಉಡಲು ಗೋದಾಬಾಯಿಗೆ ಅವರ ಅಣ್ಣ ಬೆಲೆಬಾಳುವ ರೇಷ್ಮೆ ಸೀರೆ ತಂದುಕೊಟ್ಟರು. ಆದರೆ ಅವರು ಅದನ್ನು ಉಡದೆ ನಾನು ಕೊಟ್ಟ ಸಾಧಾರಣ ಸೀರೆಯನ್ನೇ ಧರಿಸಿದಾಗ ನನ್ನ ಕಣ್ಣುಗಳಲ್ಲಿ ಆನಂದಭಾಷ್ಪ ಸುರಿಯಿತು. ಅವರು ನನಗೆ ಅಷ್ಟು ದೊಡ್ಡ ಗೌರವ ಕೊಟ್ಟಿದ್ದರು.

– ಗೋಪಿ, ಮೈಸೂರು.

 ನನ್ನ ಚಿಕ್ಕಮ್ಮನ ಮಗನ ಮದುವೆಯಲ್ಲಿ ನಡೆದ ಘಟನೆ. ನಾವೆಲ್ಲಾ ಸಂಭ್ರಮದಿಂದ ಮದುವೆಯಲ್ಲಿ ಪಾಲ್ಗೊಂಡಿದ್ದೆ. ಸಪ್ತಪದಿ ಮುಗಿದ ನಂತರ ವರ ಯಾವುದಾದರೂ ಹಾಡು ಹೇಳುವುದು ನಮ್ಮಲ್ಲಿ ಪದ್ಧತಿ. ನಮ್ಮ ಅಣ್ಣನಿಗೆ ಹಾಡು ಹೇಳಲು ಕೇಳಿದಾಗ ಅವನು ನನಗೆ ಹಾಡು ಹೇಳಲು ಬರುವುದಿಲ್ಲ ಎಂದ.

ಆಗ ಹುಡುಗಿಯ ಅತ್ತಿಗೆ ಯಾವುದಾದ್ರೂ ಹಾಡು ಹಾಡಿ. ಎಷ್ಟು ಬಾರಿ ಹಾಡ್ತೀರೋ ಅಷ್ಟು ಬಾರಿ ಉಡುಗೊರೆ ಸಿಗುತ್ತೆ ಅಂದ್ರು. ನಮ್ಮಣ್ಣ ಒಂದು ಹಾಡಿನ 2 ಸಾಲುಗಳನ್ನು ಹಾಡಿದಾಗ ಎಲ್ಲರೂ ಸಾಕಷ್ಟು ಉಡುಗೊರೆ ಕೊಟ್ಟು ಮತ್ತೆ ಹಾಡಲು ಹೇಳಿದರು. ಅಣ್ಣ ಮತ್ತೆ ಮೂರು ಸಾಲು ಹಾಡಿದ. ಅದಕ್ಕೂ ಒಂದಷ್ಟು ಉಡುಗೊರೆಗಳು ಸಿಕ್ಕವು. ನಂತರ ಯಾರೂ ಅವನಿಗೆ ಹಾಡಲು ಹೇಳಲಿಲ್ಲ.

ಅದನ್ನು ಕಂಡು ನಮ್ಮಣ್ಣ ಹೇಳಿದ, “ಅರೆ, ನಾನೂ ಇನ್ನೂ ಹಾಡು ಮುಗಿಸಿಲ್ಲ. ಬರೀ 5 ಸಾಲುಗಳಿಗೆ ಇಷ್ಟು ಉಡುಗೊರೆ ಸಿಕ್ಕಿದೆ. ಪೂರ್ತಿ ಹಾಡಿದ್ರೆ ಇನ್ನೂ ಏನೇನು ಸಿಗುತ್ತೋ?”

ಅದಕ್ಕೆ ಹುಡುಗಿಯ ಅತ್ತಿಗೆ, “ಪೂರ್ತಿ ಹಾಡಿದ್ರೆ ನಿಮಗೆ ಹುಡುಗಿ ಸಿಗ್ತಾಳೆ,” ಎಂದರು.

– ಹಂಸಾ, ಬಳ್ಳಾರಿ.

ನಮ್ಮ ಅಕ್ಕನ ಮದುವೆಯಲ್ಲಿ ನಡೆದ ಘಟನೆ. ಅವಳನ್ನು ಬೀಳ್ಕೊಡುವ ಸಮಯ ಬಂತು. ಅಕ್ಕನ ಮುಖಕ್ಕೆ ಉದ್ದವಾದ ಮುಸುಕು ಹಾಕಲಾಗಿತ್ತು. ಅವಳು ಎಲ್ಲರನ್ನೂ ತಬ್ಬಿಕೊಂಡು ಜೋರಾಗಿ ಅಳುತ್ತಿದ್ದಳು. ಅವಳ ಜೊತೆಯಲ್ಲಿ ನಮ್ಮ ಅತ್ತಿಗೆಯೂ ಇದ್ದರು.

ಇದ್ದಕ್ಕಿದ್ದಂತೆ ನಮ್ಮ ಅತ್ತಿಗೆಯನ್ನು ಯಾರೋ ಕೂಗಿದಾಗ ಅವರು ಹಿಂದೆ ತಿರುಗಿ ನೋಡತೊಡಗಿದರು. ಆಗಲೇ ಅಕ್ಕ ಭಾವನನ್ನು ಅಂದರೆ ಗಂಡನನ್ನು ತಬ್ಬಿಕೊಂಡು ಅಳತೊಡಗಿದಳು. ಏಕೆಂದರೆ ಮುಸುಕಿನ ಒಳಗಿನಿಂದ ಅವಳಿಗೆ ಎದುರಿಗೆ ತನ್ನ ಅಣ್ಣ ನಿಂತಂತಾಗಿತ್ತು.

ತಕ್ಷಣವೇ ಅವಳ ಗೆಳತಿಯರು `ಹೋ’ ಎಂದು ಜೋರಾಗಿ ನಗತೊಡಗಿದರು.

– ಅಶ್ವಿನಿ, ಮಾಲೂರು

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ