ಬ್ಯಾಂಕ್‌ ಮ್ಯಾನೇಜರ್‌ ಕೇಶವನ ಹೆಂಡತಿ ಒಮ್ಮಿಂದೊಮ್ಮೆಲೇ ತೌರಿನಿಂದ ಹಿಂದಿರುಗಿ ಬಂದಳು. ಗಂಡನೊಂದಿಗೆ, “ಅಯ್ಯೋ ದೇವ್ರೇ ರೀ ನನಗಂತೂ ತುಂಬಾ ಗಾಬ್ರಿ ಆಗ್ಹೋಯ್ತು. ನಿಮಗೆ ನಾಲ್ಕು ಪತ್ರ ಬರೆದೆ. ಆದರೆ ನೀವು ಒಂದಕ್ಕೂ ಸಹ ಉತ್ತರ ಕೊಡ್ಲಿಲ್ಲ!” ಎಂದಳು.

“ನಿನ್ನ ಯಾವ ಪತ್ರವೂ ಬರಲಿಲ್ಲ. ತಮಾಷೆಗಂತ ಯಾರೋ ನಿನ್‌ ಹೆಸರಿನಲ್ಲಿ ಪತ್ರಗಳನ್ನು ಬರೀತಿದ್ರು,” ಎಂದವನೇ ಕೇಶವ ಡ್ರಾನಿಂದ ನಾಲ್ಕು ಪತ್ರಗಳನ್ನು ಹೊರತೆಗೆದು ಮೇಜಿನ ಮೇಲೆ ಹಾಕಿದ.

“ನೀವೊಂತರ ವಿಚಿತ್ರ ಕಣ್ರಿ! ಈ ಪತ್ರಗಳನ್ನು ನಾನೇರಿ ಬರೆದದ್ದು.”

“ಹಾಂ, ನಿನ್ನವಾ ಇವು ಆದ್ರೆ ನೀನು ಸಹಿ ಮಾಡಿದ ಮೇಲೆ ಒಂದು ಗೆರೆ ಎಳ್ದು, ಪಕ್ಕದಲ್ಲಿ ಎರಡು ಚುಕ್ಕೆ ಇಡ್ತಿದ್ಯಲ್ಲಾ? ನಿನ್ನ ಈ ಪತ್ರಗಳಲ್ಲಿ ಆ ಗೆರೆ, ಆ ಚುಕ್ಕೆಗಳು ಎಲ್ಲಿವೆ, ತೋರ್ಸು!” ಎಂದ ಕೇವಶ.

ಇಬ್ಬರು ಹೆಂಗಸರು ಮೂರನೇ ಹೆಂಗಸಿನ ಬಗ್ಗೆ ಮಾತನಾಡುತ್ತಿದ್ದರು. ಒಬ್ಬಾಕೆ ಹೇಳಿದಳು, “ಗೀತಾ ವಿಚಿತ್ರ ಹೆಣ್ಣಪ್ಪ! ಯಾವಾಗ ನೋಡಿದ್ರೂ ಅವಳು ಗಂಡನ್ನ ಬಯ್ಯುತ್ಲೇ ಇರ್ತಾಳೆ. ಯಾವಾಗಲೂ ಅವನು ಸುಳ್ಳುಗಾರ, ಮೋಸಗಾರ ಹೇಡೀಂತ ಹೇಳ್ತಾಳೆ. ಅದೇ ನನ್ನ ಗಂಡನ್ನ ನೋಡು, ಮೊದಲ ದರ್ಜೆ ಅಂಜುಬುರುಕ, ನಿಶ್ಶಕ್ತ. ಆದ್ರೆ ಎಂದಿಗೂ ಅವರನ್ನು ನಾನು ಬೈದಿಲ್ಲ!”

“ಇದು ನನಗೂ ಒಳ್ಳೇದಾಗಿ ಕಾಣೋಲ್ಲಾಕ್ಕ!” ಎರಡನೇಯವಳು ಹೇಳಿದಳು,

“ನನ್ನ ಗಂಡನನ್ನು ನೋಡು ನಂಬರ್‌ ಒನ್‌ ಸೋಮಾರಿ ಜೊತೆಗೆ ಮೂರ್ಖ! ಹಾಗಂತ ನಾನೇನು ಅವರ ಬಗ್ಗೆ ಎಲ್ಲರ ಹತ್ತಿರ ಹೇಳ್ಕೊಂಡು ಬರ್ತೀನಾ?”

ರೈಲು ಮುಂದೆ ಮುಂದೆ ಹೋಗುತ್ತಿತ್ತು. ಬೋಗಿಯಲ್ಲಿ ರಾಜಕೀಯ ಚರ್ಚೆ ಮುಂದುವರಿಯುತ್ತಿತ್ತು. ಇದಕ್ಕೆ ಮುಕ್ತಾಯ ಹಾಡುವವನಂತೆ ಒಬ್ಬ ನೇತಾರ ಎತ್ತರದ ಧ್ವನಿಯಲ್ಲಿ ಹೇಳಿದ, “ಇನ್ನು ಮುಂದೆ ಸಮಾಜವಾದ ಬರುತ್ತೆ, ಸಾಮಾನ್ಯವಾದ ಬರುತ್ತೆ ಮಾರ್ಕ್ಸ್ ವಾದ ಬರುತ್ತೆ.”

ಇದ್ದಕ್ಕಿದ್ದಂತೆ ಮೇಲ್ಗಡೆ ಬರ್ತ್‌ನಲ್ಲಿದ್ದ, ಪ್ರಯಾಣಿಕ ಎದ್ದು, ಕುಳಿತು, ಕಣ್ಣು ಉಜ್ಜಿಕೊಳ್ಳುತ್ತಾ ಕೆಳಗೆ ಬಗ್ಗಿ ನೋಡಿ, “ಆದ್ರೆ ವಿಜಯವಾಡ ಬಂದಾಗ ಮಾತ್ರ ಮರೀದೆ ನನ್ನನ್ನ ಎಬ್ಬಿಸಿ. ತುಂಬಾ ಉಪಕಾರವಾಗುತ್ತೆ,” ಎಂದವನೇ ಬೆಡ್‌ ಶೀಟ್‌ಹೊದೆದು ಮಲಗಿಬಿಟ್ಟ.

ಹೆಂಡತಿ : ಈವತ್ತಿನ ಆಲೂಗಡ್ಡೆ, ಈರುಳ್ಳಿ ಸಾಂಬಾರ್‌ ಹೇಗಿತ್ತು?

ಗಂಡ : ತುಂಬಾ ರುಚಿಯಾಗಿತ್ತು. ಯಾವ ಹೋಟ್ಲಿಂದ ತರಿಸ್ದೆ?

ಪಕ್ಕದ ಮನೆಯ ಆಂಟಿ ಮಾರುಕಟ್ಟೆಗೆ ಹೋಗುತ್ತಿರುವುದನ್ನು ನೋಡಿದ ಕೌಸಲ್ಯಾಳ ಐದು ವರ್ಷದ ಮಗಳು ಅವರ ಜೊತೆ ತಾನೂ ಹೋಗುವುದಾಗಿ ಹಠ ಹಿಡಿದಳು. ಕೌಸಲ್ಯಾ ಅವಳಿಗೆ ಕೂಡಲೇ ಲಂಗ ಹಾಕಿ, ಸಿದ್ಧಪಡಿಸಿದಳು. ಪಕ್ಕದ ಮನೆಯಾಕೆಯೊಂದಿಗೆ ಹುಡುಗಿಯನ್ನು ಕಳುಹಿಸುತ್ತಾ, ಆ ಆಂಟಿಯ ಕೈಗೆ 50 ರೂ. ಕೊಡುತ್ತಾ, “ಮಗು ಚಿಕ್ಕದು. ಮಾರುಕಟ್ಟೆಯಲ್ಲಿ ಮಗೂಗೆ ಹಸಿವಾದ್ರೆ ಅಥವಾ ಆಟದ ಸಾಮಾನೇನಾದ್ರೂ ಬೇಕೂಂತ ಹಠ ಹಿಡಿದ್ರೆ ಏನಾದರೂ ಕೊಡಿಸಿ,” ಎಂದಳು ಕೌಸಲ್ಯಾ.

ಹುಡುಗಿ ಹಿಂದಿರುಗಿ ಬಂದಳು. ಕೌಸಲ್ಯಾ ಕೇಳಿದಳು, “ಏನಾದ್ರೂ ತಿಂದ್ಯಾ….?”

ಹುಡುಗಿ ಉಸ್ಸೆನ್ನುತ್ತಾ ಉತ್ತರಿಸಿದಳು, “ತಿನ್ನೋದನ್ನು ಕೇಳಬೇಕೂಂದ್ರೆ ಆಂಟೀನೇ ಕೇಳು! ಬರೀ ರುಚಿ ನೋಡುವುದರ ಬಗ್ಗೆ ಕೇಳಬೇಕೂಂದ್ರೆ ನನ್ನ ಕೇಳು!“ ಎಂದಳು.

ಗಂಡ ಮನೆಗೆ ಹೊತ್ತು ಮೀರಿ ಬಂದು ಒಬ್ಬನೇ ಊಟ ಮಾಡತೊಡಗಿದ. ಅವನ ಹೆಂಡತಿ ಮಗುವನ್ನು ಮಲಗಿಸುತ್ತಿದ್ದಳು. ಬಟ್ಟಲಿನಲ್ಲಿ ಪಲ್ಯ ಮುಗಿದಹೋದ ಕೂಡಲೇ, ಗಂಡ ಅಲ್ಲಿಂದಲೇ ಚೀರತೊಡಗಿದ, “ಪಲ್ಯ ತಗೊಂಡ್ಬಾ, ಚಪಾತೀನ್ನ ಯಾವದ್ರಲ್ಲಿ ತಿನ್ನೋದು…..”  ಕೂಡಲೇ ಬಂದ ಹೆಂಡತಿ, ಕೋಪದಿಂದ ಹೇಳಿದಳು, “ಸ್ವಲ್ಪನಾದ್ರೂ ತಾಳ್ಮೆ ಅನ್ನೋದೆ ಇಲ್ಲ. ಒಂದೇ ಉಸಿರಿನಲ್ಲಿ ಕೂಗ್ತೀರಿ!” ಗಂಡ ತನ್ನನ್ನು ತಾನು ರಕ್ಷಿಸಿಕೊಳ್ಳುವವನಂತೆ, “ನನ್ನಲ್ಲಿ ತಾಳ್ಮೆಯೇನೊ ತುಂಬಾ ಇದೆ. ಆದ್ರೆ ಕೂಟು ಬೇಡ, ಪಲ್ಯನಾದ್ರೂ ಬೇಡ್ವಾ, ಅದೂನೂ ಇಲ್ವಲ್ಲ……”

ಗೀತಾ ಪಕ್ಕದ ಮನೆಯಾಕೆಗೆ ಹೇಳಿದಳು, “ನಮ್ಮ  ಮನೇಲಿ ಮನೆ ಒರಸೋದ್ರಿಂದ ಹಿಡಿದು ಅಡುಗೆ ಮಾಡಿ. ಪಾತ್ರೆ ತೊಳದಿಡೋದು ಎಲ್ಲಾ ಸೇರಿ ಬೆಳಗ್ಗೆ ಒಂಬತ್ತು ಗಂಟೆಗೆಲ್ಲ ಮುಗಿದ್ಹೋಗುತ್ತೆ.”

“ಮತ್ತೆ ರಾತ್ರಿ ಅಡುಗೆ?” ಪಕ್ಕದ ಮನೆಯಾಕೆ ಕೇಳಿದಳು.

“ಆಫೀಸಿನಿಂದ ಬಂದ್ಮೇಲೆ ನಮ್ಮವರು ಮಾಡ್ತಾರೆ!” ಗೀತಾ ಥಟ್ಟನೆ ಉತ್ತರಿಸಿದಳು.

ಅವಳು ತುಂಬಾ ವಾಚಾಳಿ. ಇಂಟರ್‌ ವ್ಯೂಗಾಗಿ ಬಂದಾಗ ನೇಮಕಾತಿ ಆಯೋಗದ ಮುಖ್ಯಸ್ಥರೊಂದಿಗೆ ಮಾತನಾಡುತ್ತಿದ್ದಳು, “ನನ್ನ ಕೆಲಸ ನೋಡಬೇಕು ನೀವು. ನಾನು ಮಾಡೋ ತರಹ ಕೈ ಕೆಲಸ ಯಾರೂ ಮಾಡೋಲ್ಲ. ನಾನು ಯಾವುದೇ ಕೆಲಸ ಮಾಡಲಿ, ಅದರಲ್ಲಿ ಮುಳಗಿಬಿಟ್ಟಿರುತ್ತೇನೆ,” ನೇಮಕಾತಿ ಮಾಡುವವನು ಅವಳನ್ನು ಮಧ್ಯದಲ್ಲೇ ತಡೆದು ಹೇಳಿದ, “ನೀವು ಎಂದಾದರೂ ಯಾವುದಾದರೂ ಬಾವಿಯನ್ನು ಅಗೆದಿದ್ದೀರಾ?”

 ನ್ಯಾಯಾಧೀಶ : ನೀನು ಒಂದೇ ಅಂಗಡಿಯಲ್ಲಿ ನಾಲ್ಕು ಸಲ ಏಕೆ ಕಳ್ಳತನ ಮಾಡಿದೆ?

ಕಳ್ಳ : ಒಂದೇ ಸಲ ಕದ್ದಿದ್ದು ಮಹಾಸ್ವಾಮಿ! ಮೂರು ಸಲ ಅವುಗಳನ್ನು ಬದಲಾಯಿಸೋಕ್ಕೆ ಹೋಗಿದ್ದೆ. ನನ್ನ ಹೆಂಡ್ತಿ ಯಾವ ಸೀರೆಯನ್ನೂ ಬೇಗ ಇಷ್ಟಪಡೋಲ್ಲ!

ಅವಳು ಕ್ರಿಕೆಟ್‌ ಆಟಗಾರನೊಬ್ಬನ ಹೆಂಡತಿ. ಅವಳಿಗೆ ಕ್ರಿಕೆಟ್‌ ಜ್ಞಾನ ಏನೇನೂ ಇರಲಿಲ್ಲ. ಅಂತಹವಳನ್ನು ಕರೆದುಕೊಂಡು ಆ ಆಟಗಾರ ಮ್ಯಾಚ್‌ ಆಡಲು ಹೊರಟ. ಆಟದ ಮೈದಾನದಲ್ಲಿ ಅವನೇ ಮೊದಲು ಬ್ಯಾಟ್‌ ಮಾಡಲು ಹೋದ. ಬಹಳ ಹೊತ್ತಿನವರೆಗೂ ಬ್ಯಾಟ್‌ ಮಾಡುತ್ತಿದ್ದ. ಮ್ಯಾಚ್‌ ಮುಗಿದ ಮೇಲೆ ಅವನು ತನ್ನ ಹೆಂಡತಿಯ ಬಳಿಗೆ ಬಂದ. ತನ್ನ ದೀರ್ಘ ಆಟವನ್ನು ನೋಡಿ ತನ್ನ ಹೆಂಡತಿ ಸಂತೋಷಗೊಂಡಿದ್ದಾಳೆ ಎಂದು ಅವನು ತಿಳಿದಿದ್ದ. ಆದರೆ ಅವನ ಹೆಂಡತಿ ಕೋಪಗೊಂಡು ಹೇಳಿದಳು, “ನೀವು ನನ್ನ ಪ್ರೀತಿಸೋದೆ ಇಲ್ಲ, ಎಲ್ಲ ಆಟಗಾರರೂ ಬೇಗ ಬೇಗ ಹಿಂತಿರುಗಿ ತಮ್ಮ ತಮ್ಮ ಹೆಂಡತಿಯರ ಹತ್ತಿರ ಕೂತ್ರು, ನೀವೊಬ್ರೆ ಇಷ್ಟು ಹೊತ್ತಿನವರೆಗೆ ಆಡಿದ್ದು…..”

ವೀರ ರಸವನ್ನು ಉಕ್ಕೇರಿಸುತ್ತಾ ಕವಿಯಿತ್ರಿ (ಸಂಪಾದಕರೊಂದಿಗೆ) ಹೇಳುತ್ತಿದ್ದಳು, “ನೀವು ಏನು ಹೇಳ್ತೀರೀ, ನಾನು ನನ್ನ ಈ ಕವಿತೆಗಳಲ್ಲಿ ಇನ್ನಷ್ಟು ಸ್ವಲ್ಪ ಬೆಂಕಿ ಹಾಕಲೇನು?“

ಸಂಪಾದಕ ಸಿಡಿಮಿಡಿಗುಟ್ಟುತ್ತಾ ಹೇಳಿದ : “ಇಲ್ಲ, ನೀವು ಈ ಕವಿತೆಗಳಿಗೇ ಬೆಂಕಿ ಇಟ್ಟರೆ ವಾಸಿ!”

ಮೊದಲ ಮಿತ್ರ (ತನ್ನ ಇನ್ನೊಬ್ಬ ಮಿತ್ರನ ಪರಿಸ್ಥಿತಿಯನ್ನು ನೋಡಿ) : “ಅರೇ ಇದೇನಿದು ನಿಮ್ಮ ಬಟ್ಟೆಯೆಲ್ಲ ಚಿಂದಿ, ಬಾಯಿಂದ ರಕ್ತ ಬರ್ತಿದೆ. ನಡೀರಿ ನಿಮ್ಮನ್ನು ಮನೇಗೆ ತಲುಪಿಸಿ, ಬರ್ತೀನಿ.”

ಎರಡನೇ ಮಿತ್ರ (ನೋವಿನಿಂದ ಚೀರುತ್ತಾ) “ಅಯ್ಯೋ, ಬೇಡ ಬೇಡ! ನಾನು ನಮ್ಮ ಮನೇಗೆ ಹೋಗೋಲ್ಲ, ಅಲ್ಲಿಂದಲೇ ಬರ್ತಿರೋದು.”

ಮನೆಗೆ ಬಂದಿರುವ ಅತಿಥಿಗಳೊಂದಿಗೆ ಆ ಮನೆಯ ಒಡತಿ ಕುಳಿತು ಮಾತನಾಡುತ್ತಿದ್ದಳು. ಆಗ ಇದ್ದಕ್ಕಿದ್ದಂತೆ ವಿದ್ಯುತ್‌ಹೊರಟುಹೋಯಿತು. ಅದರಿಂದ ಅವಳು ಮೇಣದ ಬತ್ತಿಯನ್ನು ಹೊತ್ತಿಸಿದಳು. ಸ್ವಲ್ಪ ಸಮಯದ ನಂತರ ಅತಿಥಿಗಳು ಆ ಒಡತಿಗೆ ಹೇಳಿದರು, “ತುಂಬಾ ಶಕೆ ಆಗ್ತಿದೆ. ದಯವಿಟ್ಟು ಫ್ಯಾನ್‌ ಹಾಕಿ….”

ಆಗ ಆ ಒಡತಿ ಗಂಭೀರ ಸ್ವರದಲ್ಲಿ ಹೇಳಿದಳು, “ನಾನೇನೋ ಫ್ಯಾನ್‌ ಹಾಕ್ತೀನಿ. ಆದ್ರೆ ಈ ಮೇಣದ ಬತ್ತಿ ಆರಿಹೋಗುತ್ತೆ.”

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ