`ಚಿಟ್ಟೆ ಹೆಜ್ಜೆ’ಯಲ್ಲಿ ನೇತ್ರಾ ಆಗಿ ಅಭಿನಯಿಸುತ್ತಿರುವ ನಯನಾ ಹೆಸರಿಗೆ ತಕ್ಕಂತೆಯೇ ಕಣ್ಣಿನ ಅಭಿನಯದಿಂದ ಖ್ಯಾತರಾದರು. ಹಾಗೆಂದೇ ಅವರನ್ನು `ಕಣ್ಣಿನ ಹುಡುಗಿ’ ಎಂದೇ ಕರೆಯುತ್ತಾರೆ.

ನಯನಾ ಪುಟ್ಟಸ್ವಾಮಿ ಮೂಲತಃ ಸಾಹಸಿ ಪ್ರವೃತ್ತಿಯ ಯುವತಿ. ಕಾಲೇಜು ಜೀವನದಲ್ಲಿ ತೈಕ್ವಾಂಡೊ ಕ್ರೀಡೆಯಲ್ಲಿ ರಾಷ್ಟ್ರಮಟ್ಟದ ಆಟಗಾರ್ತಿ ಎಂದು ಖ್ಯಾತಿ ಪಡೆದರು.

ಎಂ.ಎಸ್‌. ರಾಮಯ್ಯ ಕಾಲೇಜಿನಲ್ಲಿ ಬಿಕಾಂ ಪದವಿ ಮುಗಿಸುತ್ತಿದ್ದಂತೆಯೇ ಅವರ ಸಾಹಸ ಮನೋಭಾವಕ್ಕೆ ತಕ್ಕುದಾದ ರಿಯಾಲಿಟಿ ಶೋನಲ್ಲಿ ಪಾಲ್ಗೊಳ್ಳುವ ಅವಕಾಶ ದೊರೆಯಿತು. ಅದರಲ್ಲಿ ಜಯಶಾಲಿಯೂ ಆದರು.

ಅಂದಿನ ರಿಯಾಲಿಟಿ ಶೋದಿಂದ ಈವರೆಗಿನ ಧಾರಾವಾಹಿ, ಸಿನಿಮಾ ಲೋಕದಲ್ಲಿನ ತಮ್ಮ ಪಯಣದ ಬಗ್ಗೆ ಇಲ್ಲಿ ತಮ್ಮ ಅನುಭವ ಹಂಚಿಕೊಂಡಿದ್ದಾರೆ.

`ಚಿಟ್ಟೆ ಹೆಜ್ಜೆ’ಗೂ ಮುಂಚೆ ರಿಯಾಲಿಟಿ ಶೋನಲ್ಲಿ ಪಾಲ್ಗೊಂಡು ಅದರಲ್ಲಿ ಗೆದ್ದ ಖ್ಯಾತಿ ನಿಮಗಿದೆ. ಅದೆಲ್ಲ ಹೇಗೆ ಸಾಧ್ಯವಾಯಿತು?

ಶಾಲಾ ಜೀವನದಿಂದಲೇ ಕ್ರೀಡೆಗಳೆಂದರೆ ನನಗೆ ಪಂಚಪ್ರಾಣ. ಸ್ಕೈ ಡೈವಿಂಗ್‌, ಸ್ಕೂಬಾ ಡೈವಿಂಗ್‌ ಪ್ಯಾರಾ ಸೈಲಿಂಗ್ ಸ್ಪಾರ್ಕಲಿಂಗ್‌ ಮುಂತಾದ ಸಾಹಸ ಕ್ರೀಡೆಗಳಲ್ಲೂ ಪಾಲ್ಗೊಂಡಿದ್ದೆ. ಡಿಗ್ರಿ ಮುಗಿಸುತ್ತಿದ್ದಂತೆಯೇ ಸುವರ್ಣ ಚಾನೆಲ್ ನವರು `ಪ್ಯಾಟೆ ಹುಡ್ಗೀರ ಹಳ್ಳಿ ಲೈಫ್’ ರಿಯಾಲಿಟಿ ಶೋ ಮಾಡಲಿದ್ದಾರೆಂದು ನನಗೆ ಯಾರೋ ಹೇಳಿದರು. ನಾನು ಫೋಟೋ ಶೂಟ್‌ ಮಾಡಿ ಕಳಿಸಿದೆ. ಬುಲಾವ್ ‌ಬಂತು, ಆಯ್ಕೆಯೂ ಆದೆ. ಒಂದೆರಡು ವಾರ ಇದ್ದು ಬರಬೇಕೆಂದು ಹೋದಳು ನಾನು. ಆದರೆ ಕ್ರಮೇಣ ಇತರ ಹುಡುಗಿಯರಿಗಿಂತ ಒಳ್ಳೆಯ ಪ್ರದರ್ಶನ ನೀಡಬಲ್ಲೇ ಎನ್ನುವುದು ನನಗೆ ಖಾತ್ರಿಯಾಗುತ್ತ ಬಂತು. ಶಿವಮೊಗ್ಗ ಜಿಲ್ಲೆಯ ಕುರದಾಳದಲ್ಲಿ ನಡೆದ ಈ ಶೋನ ಫೈನಲ್ ನಲ್ಲಿ ನಾನು ಗೆದ್ದೆ. ನನ್ನಲ್ಲಿನ ಆತ್ಮವಿಶ್ವಾಸವೇ ನನ್ನನ್ನು ಗೆಲ್ಲಿಸಿತು.

ರಿಯಾಲಿಟಿ ಶೋನಲ್ಲಿನ ಗೆಲುವು ಸಿನಿಮಾದಲ್ಲೂ ಅವಕಾಶಗಳು ದೊರಕಿಸಿಕೊಟ್ಟವು ಅಲ್ವೇ?

ಹೌದು. `ಗೋಲ್ ‌ಮಾಲ್ ‌ಗಾಯತ್ರಿ’ ಎಂಬ ಸಿನಿಮಾದಲ್ಲಿ ಮೊದಲು ಅಭಿನಯಿಸಿದೆ. ಆದರೆ ಅದು ಕಾರಣಾಂತರದಿಂದ ಬಿಡುಗಡೆ ಕಾಣಲಿಲ್ಲ. ಆ ಬಳಿಕ `ಅಯೋಧ್ಯಾಪುರಂ,’ `ಅಲೆಮಾರಿ’ ಚಿತ್ರದಲ್ಲಿ ಅಭಿನಯಿಸಿದೆ. `ಘರ್ಷಣೆ’ ಚಿತ್ರದಲ್ಲಿ ಮಾಲಾಶ್ರೀಯರು ನನಗೆ ಇನ್‌ಸ್ಪೆಕ್ಟರ್‌ಪಾತ್ರ ಕೊಟ್ಟರು.

`ಚಿಟ್ಟೆ ಹೆಜ್ಜೆ’ಯ ಕಡೆ ನೀ ಹೆಜ್ಜೆ ಹಾಕಿದ್ದು ಹೇಗೆ?

ಸಿನಿಮಾಗಳು ನನ್ನ ಕೈ ಹಿಡಿಯಲಿಲ್ಲ. ಒಳ್ಳೆಯ ಧಾರಾವಾಹಿಗಳು ಸಿಕ್ಕರೆ ಮಾಡೋಣ ಎಂದುಕೊಂಡಿದ್ದೆ. ಅಂತಹ ಸ್ಥಿತಿಯಲ್ಲಿ  `ಚಿಟ್ಟೆ ಹೆಜ್ಜೆ’ ಧಾರಾವಾಹಿ ನನ್ನನ್ನು ಹುಡುಕಿಕೊಂಡು ಬಂದಿತು. ಹೆಸರಾಂತ ನಿರ್ದೇಶಕ ವಿನೂ ಬಳಂಜ ಅವರ ಧಾರಾವಾಹಿಯಲ್ಲಿ ಅನಂತ್‌ ನಾಗ್‌ರಂತಹ ಹಿರಿಯ ನಟರು ನಟಿಸುತ್ತಿದ್ದಾರೆಂದು ತಿಳಿದು ನಾನು ತಕ್ಷಣವೇ ಒಪ್ಪಿಕೊಂಡೆ. ಅದು ನನ್ನ ನಿರೀಕ್ಷೆಗೂ ಮೀರಿದ ಒಳ್ಳೆಯ ಪಾತ್ರ ಎಂದು ಈಗ ಅರ್ಥವಾಗಿದೆ.

ನಿಮ್ಮಲ್ಲಿನ ಪ್ರತಿಭೆ ಹೊರಹೊಮ್ಮಿಸಲು ನಿರ್ದೇಶಕರು ಹೇಗೆ ಸಹಾಯ ಮಾಡುತ್ತಿದ್ದಾರೆ?

ನಮ್ಮ ನಿರ್ದೇಶಕರು ಅತ್ಯಂತ ಕಟ್ಟುನಿಟ್ಟಿನ ವ್ಯಕ್ತಿ. ಅವರಿಗೆ ಪ್ರತಿಯೊಂದು ನಿಟ್ಟಿನಲ್ಲೂ ಪರ್ಫೆಕ್ಷನ್‌ ಬೇಕು. ನಾನಿಂದು ಕನ್ನಡದಲ್ಲಿ ಅಷ್ಟು ಸ್ಪಷ್ಟವಾಗಿ ಸಂಭಾಷಣೆ ಹೇಳ್ತೀನಿ ಅಂದ್ರೆ ಅದಕ್ಕೆ ವಿನೂ ಬಳಂಜ ಸರ್‌ ಕಾರಣ. ಅಂತಹ ನಿರ್ದೇಶಕರ ಬಳಿ ಕೆಲಸ ಮಾಡುತ್ತಿರುವುದರಿಂದ ನಾನು ಎಲ್ಲಿ ಬೇಕಾದರೂ ಕೆಲಸ ಮಾಡ್ತೀನಿ ಅನ್ನೋ ಧೈರ್ಯ ಬಂದಿದೆ.

ಅನಂತನಾಗ್‌ರಂತಹ ಹಿರಿಯ ನಟ, ಸೀತಾ ಕೋಟೆ, ವಿದ್ಯಾ ಮೂರ್ತಿಯಂತಹ ಕಲಾವಿದೆಯರಿಂದ ನೀವು ಏನೇನು ಕಲಿಯಲು ಸಾಧ್ಯವಾಯಿತು?

ಅನಂತ್‌ನಾಗ್‌ ಸರ್‌ ಶೂಟಿಂಗ್‌ನಲ್ಲಿ 1 ನಿಮಿಷ ಕೂಡ ಹಾಳು ಮಾಡುವುದಿಲ್ಲ. ಶೂಟಿಂಗ್‌ ಇಲ್ಲದೆ ಇರುವಾಗ ಪುಸ್ತಕ ಓದ್ತಾ ಕೂತಿರ್ತಾರೆ. ಇಲ್ಲಿ ನಮ್ಮಂತಹ ಕಲಾವಿದರಿಗೆ ಏನಾದರೂ ಟಿಪ್ಸ್ ಕೊಡುತ್ತಿರುತ್ತಾರೆ. ಸೀತಾ ಕೋಟೆ ನನಗೆ ಸಂಭಾಷಣೆ ಹೇಳಲು ಸಾಕಷ್ಟು ಸಹಾಯ ಮಾಡುತ್ತಾರೆ. ವಿದ್ಯಾಮೂರ್ತಿ ಮೇಡಂ ಹಾಗೂ ನಾನು ಒಳ್ಳೆಯ ಫ್ರೆಂಡ್‌ ಆಗಿಬಿಟ್ಟಿದ್ದೇವೆ. ನಾವಿಬ್ಬರೂ ಸಾಕಷ್ಟು ವಿಷಯಗಳ ಬಗ್ಗೆ ಚರ್ಚೆ ಮಾಡುತ್ತಲೇ ಇರುತ್ತೇವೆ.

ಈಗ ಪುನೀತ್‌ ಜೊತೆ ನಟಿಸಲು ಅವಕಾಶ ಸಿಕ್ಕ ಬಗ್ಗೆ ಏನು ಹೇಳುತ್ತೀರಿ?

`ದೂಕುಡು’ ಸಿನಿಮಾದ ಕನ್ನಡ ರೀಮೇಕ್‌ನಲ್ಲಿ ನನಗೆ ತ್ರಿಶಾಳ ಗೆಳತಿಯ ಪಾತ್ರ ದೊರಕಿದೆ. ಒಂದು ಹಾಡಿನ ಚಿತ್ರೀಕರಣಕ್ಕೆ ಈಚೆಗೆ ಸ್ಪೇನ್‌ಗೂ ಹೋಗಿ ಬಂದೆ. ದೊಡ್ಡ ಬ್ಯಾನರ್‌ನಲ್ಲಿ ಪುನೀತ್‌ ಜೊತೆ ಅಭಿನಯಿಸುವ ಅವಕಾಶ ದೊರೆತಿರುವುದು ನನಗೆ ಬಹಳ ಖುಷಿ ಕೊಟ್ಟಿದೆ.

ಹೊರಗಡೆ ಹೋದಾಗ ಜನ ನಿಮ್ಮ ಬಗ್ಗೆ ಹೇಗೆ ಪ್ರತಿಕ್ರಿಯೆ ನೀಡುತ್ತಾರೆ?

ರಿಯಾಲಿಟಿ ಶೋ ಮುಗಿದ ಅನೇಕ ವರ್ಷಗಳವರೆಗೆ ನನ್ನನ್ನು `ಪ್ಯಾಟೆ ಹುಡ್ಗಿ’ ಎಂದೇ ಕರೆಯುತ್ತಿದ್ದರು. ಈಗ `ಚಿಟ್ಟೆ ಹೆಜ್ಜೆ’ಯ `ನೇತ್ರಾ’ ಎಂದೇ ಗುರುತಿಸುತ್ತಾರೆ. ಆರಂಭದಲ್ಲಿ ರಾಮ್ ಜೊತೆಗೆ ಸ್ವಲ್ಪ ಚೆಲ್ಲು ಚೆಲ್ಲಾದ ಅಭಿನಯ. ಈಗ ಅಳು ಮುಖದ ಅಭಿನಯ. ಮೊದಲು `ಈ ಹುಡುಗಿ ಎಷ್ಟು ಚಿಲ್ಲು ಚೆಲ್ಲಾಗಿ ನಟಿಸುತ್ತಿದ್ದಳು ಎಂದು ಜನ ದೂರುತ್ತಿದ್ದರು. ಈಗ ನನ್ನ ಅಳು ಮುಖದ ಅಭಿನಯ ನೋಡಿ ನಮಗೆ ಮೊದಲಿನ ನೇತ್ರಾಳೇ ಬೇಕು ಎಂದು ಹಲವರು ಹೇಳುತ್ತಾರೆ.

– ಅಶೋಕ ಚಿಕ್ಕಪರಪ್ಪಾ

ಸಿನಿಮಾ ಹಾಗೂ ಧಾರಾವಾಹಿಯಲ್ಲಿ ಏನು ವ್ಯತ್ಯಾಸ ಕಂಡುಕೊಂಡಿರಿ?

ಸಿನಿಮಾದಲ್ಲಾದರೆ ಒಂದು ಯೂನಿಟ್‌ನಲ್ಲಿ ನಾವು ಕೆಲವೇ ದಿನ ಕೆಲಸ ಮಾಡ್ತೀವಿ. ಆದರೆ ಧಾರಾವಾಹಿಯಲ್ಲಿ ಕೆಲಸ ಮಾಡಲು ಆರಂಭಿಸಿದಾಗ ಅದು ವರ್ಷಾನುಗಟ್ಟಲೆ ನಡೆಯುವುದರಿಂದ ನಾವು ಪ್ರತಿದಿನ ಶೂಟಿಂಗ್‌ಗೆ ಹೋಗ್ತೀವಿ. ನಮ್ಮ ನಿಜವಾದ ತಂದೆ ತಾಯಿಗಳಿಗಿಂತ ಧಾರಾವಾಹಿಯಲ್ಲಿನ ತಂದೆತಾಯಿಗಳೇ ನಿಜವಾದ ತಂದೆತಾಯಿಗಳಂತಾಗಿಬಿಡುತ್ತಾರೆ. ಅಷ್ಟು ಅನ್ಯೋನ್ಯತೆ, ಕೌಟುಂಬಿಕ ವಾತಾವರಣ, ಹೊಂದಾಣಿಕೆ ಧಾರಾವಾಹಿಗಳ ಶೂಟಿಂಗ್‌ ಸ್ಥಳಗಳಲ್ಲಿ ಉಂಟಾಗುತ್ತದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ