ಕಥೆ –  ದೀಪಾ ಹಿರೇಮಠ

ಸ್ವಾರ್ಥಿ ಗಂಡನಿಂದ ದೂರವಾಗಿ, ಅಂಗವಿಕಲ ಮಗುವಿನ ತಾಯಿಯಾಗಿ, ಮನೋಹರಿ ಯಾವ ರೀತಿ ಜೀವನದಲ್ಲಿ ಸಾರ್ಥಕತೆ ಕಂಡುಕೊಳ್ಳಲು ಸಾಧ್ಯವಾಯಿತು? ಅವಳ ಹೋರಾಟ ಯಶಸ್ವಿಯಾಯಿತೇ……?

“ಯಾರ ಮಗು ಇದು! ಇಂಥ ದೊಡ್ಡ ಪಾರ್ಟಿಯಲ್ಲಿ ಕರೆದುಕೊಂಡು ಬಂದಿದ್ದಾರೆ! ನೋಡಿ ಆ ಮಗು ಹೇಗಿದೆ? ನೋಡಲಾಗುತ್ತಿಲ್ಲ….”

“ಮಗಾ…. ಅದು ಸ್ಪೆಷಲ್ ಚೈಲ್ಡ್ ಸುಮ್ಮನಿರೋ….”

“ಏನು ಸುಮ್ಮನಿರುವುದು…. ಯಾರು ಈ ಮಗುವಿನ ಪೇರೆಂಟ್ಸ್…..?” ಜೋರಾಗಿ ಕೇಳಿದ.

“ಅದು ನನ್ನ ಮಗು…..”

ಎಲ್ಲರೂ ಆಶ್ಚರ್ಯದಿಂದ ತಿರುಗಿ ನೋಡಿ, “ಮೇಡಂ….. ಮೇಡಂ…. ಇದು ನಿಮ್ಮ ಮಗುನಾ….?”

“ಹೌದು ಇವಳು ನನ್ನ ಮಗಳು ಐಶ್ವರ್ಯಾ….. ಐಶ್ವರ್ಯಾ  ಐಶ್ವರ್ಯಾ ಇಂಡಸ್ಟ್ರಿಯ ಏಕೈಕ ವಾರಸುದಾರಳು.”

“ಸಾರಿ ಮೇಡಂ…..”

“ಇರಲಿ ಬಿಡು ಹರೀಶ್‌. ನಿನಗೇನು ಗೊತ್ತು….”

“ಎಕ್ಸ್ ಟ್ರೀಮ್ಲಿ ಸಾರಿ ಮೇಡಂ.”

“ನನ್ನ ಮಗಳಿಗೆ, ತಾಯಿಯ ಪ್ರತಿ ಏಳಿಗೆ, ಪ್ರತಿ ಯಶಸ್ಸನ್ನು ಅನುಭವಿಸುವ ಹಕ್ಕು ಇದೆ. ಅದನ್ನು ಅವಳಿಂದ ಯಾರೂ ಕಸಿದುಕೊಳ್ಳಲು ಆಗದು.”

ವೇದಿಕೆ ಮೇಲೆ ನಿಂತ ಗಣ್ಯರೆಲ್ಲರೂ ಚಪ್ಪಾಳೆ ತಟ್ಟಿದರು. ಅವರೊಂದಿಗೆ ಸಭೆಗೆ ಬಂದ ಅತಿಥಿಗಳೆಲ್ಲರೂ ಎದ್ದು ನಿಂತು ಚಪ್ಪಾಳೆ ತಟ್ಟಿದರು.

ಪತ್ರಕರ್ತರು ಮುಂದೆ ಬಂದು, “ಮೇಡಂ, ನೀವು ಕಾರ್ಪೋರೇಟ್‌ ಜಗತ್ತಿನಲ್ಲಿ ಮಹಾರಾಣಿ. ನಿಮ್ಮ ಕಂಪನಿ ಸಾಧಿಸಬೇಕಾದ್ದು ಏನೂ ಉಳಿದಿಲ್ಲ. ಎಲ್ಲ ಕ್ಷೇತ್ರಗಳಲ್ಲಿ ಐಶ್ವರ್ಯ ಇಂಡಸ್ಟ್ರಿ ಹೆಸರು ಮಾಡಿದೆ. ಆದರೆ ಈ ಬೃಹತ್‌ ಸಮಾರಂಭದಲ್ಲಿ ಝಗಮಗಿಸುವ ಬೆಳಕಲ್ಲಿ ನಿಮ್ಮ ಜೀವನದ ಒಂದು ಭಾಗ ಕತ್ತಲೆಯಲ್ಲಿಯೇ ಇದೆ ಅಂತ ಅನಿಸುವುದಿಲ್ಲವೇ?” ಎಂದು ಕೇಳಿಯೇಬಿಟ್ಟರು.

“ನೀವು ತಪ್ಪು ಹೇಳುತ್ತಿದ್ದೀರಾ. ಅಂದರೆ, ಈ ಝಗಮಗಿಸುವ ಬೆಳಕಿನಲ್ಲಿ ನನ್ನ ಜೀವನದ ಒಂದು ಭಾಗ ನೂರರಷ್ಟು ಪ್ರತಿದಿನ, ಪ್ರತಿ ಕ್ಷಣ ಬೆಳಕನ್ನು ಹೊರಸೂಸುತ್ತದೆ. ಆ ಬೆಳಕು ನನಗಾಗಿ ಮಾತ್ರ,” ಮನೋಹರಿ ಮುಗುಳ್ನಗುತ್ತಾ ಅದೇ ಆತ್ಮವಿಶ್ವಾಸದಿಂದ ಹೇಳಿದಳು.

ಪತ್ರಕರ್ತರಿಗೆ ಒಂದು ಎಳೆ ಸಿಕ್ಕರೆ ಸಾಕು ಬಿಟ್ಟಾರೆಯೇ? ಮುಂದಿನ ಪ್ರಶ್ನೆ ಕೇಳಿದರು, “ಹಾಗಾದರೆ ಇಂದು ಆ ಬೆಳಕಿನ ಬಗ್ಗೆ ಹೇಳುತ್ತೀರಾ ಮೇಡಂ…?”

“ಅಮ್ಮಾ…..” ಎಂದು ಐಶ್ವರ್ಯಾ ಕೂಗಿದಳು. ಮನೋಹರಿ ಮಗಳ ಭುಜದ ಮೇಲೆ ಕೈ ಇಟ್ಟಳು. ಅವಳು ನಗುತ್ತಾ ತಾಯಿಯ ಮುಖ ತಿರುಗಿ ನೋಡಿ ತನ್ನ ಎರಡೂ ಕೈಗಳನ್ನು ಹರಡಿಸುತ್ತಾ ಚಪ್ಪಾಳೆ ತಟ್ಟುತ್ತಿದ್ದಳು. ಬಾಯಿ ಸ್ವಲ್ಪ ವಾರೆ ಇದ್ದುದರಿಂದ ಜೊಲ್ಲು ಸೋರುತ್ತಿತ್ತು. ಮತ್ತೆ ಹಿಂದೆ ತಿರುಗಿದಳು. ಗೋಣು ಅಲುಗಾಡುತ್ತಲೇ ಇತ್ತು. ಮನೋಹರಿ ತನ್ನ ಕೈಯಲ್ಲಿದ್ದ ಟಿಶ್ಯೂ ಪೇಪರ್‌ ನಿಂದ ಜೊಲ್ಲು ಒರೆಸಿದಳು.

ಮೀಡಿಯಾದ ಕ್ಯಾಮೆರಾ, ಸ್ಪೀಕರ್‌ ಗಳು, ಪತ್ರಕರ್ತರು ಅವಳನ್ನು ಸುತ್ತುವರೆದರು. ಸಮಾರಂಭದಲ್ಲಿ ಉಪಸ್ಥಿತರಿದ್ದ ಸಾವಿರಾರು ಕಣ್ಣುಗಳು ಅವಳನ್ನೇ ನೋಡುತ್ತಿದ್ದವು. ಆದರೆ ಎರಡು ಕಣ್ಣುಗಳಲ್ಲಿ ಮಾತ್ರ ಆತಂಕ ಮನೆ ಮಾಡಿತ್ತು.

“ಇಂದು ನನ್ನ ಜೀವನದ ಉತ್ಸಾಹ, ಖುಷಿ, ಸಂತೋಷ, ನನ್ನ ಪ್ರೇರಣೆ, ನನ್ನ ಸ್ವಾಭಿಮಾನ ಎಲ್ಲವೂ ಆದ ನನ್ನ ಮಗಳನ್ನು ನಿಮಗೆ ಪರಿಚಯಿಸುವೆ. ಇವಳೇ ನನ್ನ ಮಗಳು ಐಶ್ವರ್ಯಾ! ದಿ ಗ್ರೇಟ್‌ ಬಿಸ್‌ ನೆಸ್‌ ಐಕಾನ್‌ ಮನೋಹರಿಯ ಒಬ್ಬಳೇ ಮಗಳು,” ಎಂದು ನಕ್ಕಳು ಮನೋಹರಿ.

ಎಲ್ಲರೂ ಅವಳನ್ನು ನೋಡಿ ಚಪ್ಪಾಳೆ ತಟ್ಟಿದರು. ಐಶ್ವರ್ಯಾ ಕೂಡ ಆ ಶಬ್ದಕ್ಕೆ ಮುಖ ಅಲುಗಾಡಿಸಿ ಜೋರಾಗಿ ನಗುತ್ತಾ ತಾನೂ ಚಪ್ಪಾಳೆ ತಟ್ಟಿದಳು. ಅವಳ ಖುಷಿಯನ್ನು ಕಂಡು ನೆರೆದವರೆಲ್ಲರ ಮುಖದ ಮೇಲೆ ನಗು ಮೂಡಿತು.

“ನನ್ನ ಜೀವನದ ಪುಟಗಳನ್ನು ನಿಮ್ಮ ಮುಂದೆ ತೆರೆದಿಡುತ್ತಿದ್ದೇನೆ. ಎಲ್ಲರೂ ಆರಾಮವಾಗಿ ಕುಳಿತುಕೊಳ್ಳಿ. ಊಟ ಇಲ್ಲೇ ಬರುತ್ತದೆ. ಊಟ ಮಾಡುತ್ತಾ ಮಾತನಾಡೋಣ. ಪ್ಲೀಸ್‌ ಟೇಕ್‌ ಯುವರ್‌ ಸೀಟ್‌,” ಎಂದು ಮುಗುಳ್ನಗುತ್ತಾ ಹೇಳಿದ ಮನೋಹರಿ, ತಾನು ಮಗಳ ಪಕ್ಕ ಕುಳಿತು ಮಗಳಿಗೂ ಊಟ ತರಲು ಹೇಳಿದಳು.

“ನನ್ನ ಊರು ಕಟೀಲು. ದುರ್ಗಾಪರಮೇಶ್ವರಿ ಅಮ್ಮನ ಆಶೀರ್ವಾದದಿಂದಲೇ ನಾನು ಹುಟ್ಟಿದ್ದೆನಂತೆ ಎಂದು ಅಜ್ಜಿ ಯಾವಾಗಲೂ ಹೇಳತ್ತಿದ್ದರು. ನನ್ನ ತಂದೆ ರಾಮಾ ಜೋಯಿಸ್‌, ತಾಯಿ ರುಕ್ಮಿಣಿ. ಅಮ್ಮನವರ ದೇವಸ್ಥಾನದಲ್ಲಿ ಪ್ರಧಾನ ಅರ್ಚಕರ ಕೈ ಕೆಳಗೆ ಅಪ್ಪ ಕೆಲಸ ಮಾಡುತ್ತಿದ್ದರು. ನಾನೊಬ್ಬಳೇ ಮಗಳು. ಮೊದಲೇ ಹೇಳಿದ ಹಾಗೆ ಅಮ್ಮ ಅಪ್ಪ ಮದುವೆಯಾಗಿ ಏಳು ವರ್ಷವಾದರೂ ಮಕ್ಕಳಾಗದಿದ್ದಾಗ ಅಮ್ಮನವರಿಗೆ ಹರಕೆ ಹೊತ್ತ ನಂತರ ನಾನು ಹುಟ್ಟಿದ್ದಂತೆ. ನಮ್ಮ ಮನೆಯ ವಾತಾವರಣ ಹೇಗಿರಬಹುದು ಅಂತ ನಿಮಗೆಲ್ಲ ಒಂದು ಅಂದಾಜು ಬಂದಿರಬಹುದು,” ಎಂದು ಜೋರಾಗಿ ನಗುತ್ತಾ ಮುಂದುವರಿಸಿದಳು, “ಹೌದು ತುಂಬಾ ಮಡಿ, ಪೂಜೆ ಪುನಸ್ಕಾರ, ಶಾಸ್ತ್ರ ಸಂಪ್ರದಾಯದ ಮಧ್ಯೆ ನಾನು ಬೆಳೆದವಳು. ಓದಿನಲ್ಲಿ ತುಂಬಾ ಜಾಣೆ. ಅಜ್ಜಿ ದಿನ ಸಾಯಂಕಾಲ ರಾಮಾಯಣ, ಮಹಾಭಾರತದ ಕಥೆಗಳನ್ನು ಹೇಳುತ್ತಿದ್ದರು. ನಾನು ದೇವಸ್ಥಾನದಲ್ಲಿ ಸಂಸ್ಕೃತ ಅಭ್ಯಾಸ ಮಾಡುತ್ತಿದ್ದೆ. ಒಂದು ರೀತಿಯಲ್ಲಿ ಆ ಭದ್ರ ಬುನಾದಿಯೇ ನನಗೆ ಜೀವನದಲ್ಲಿ ಒಳ್ಳೆಯ ನಿರ್ಣಯಗಳನ್ನು ತೆಗೆದುಕೊಳ್ಳಲು ಸಹಾಯ ಮಾಡಿದೆ.”

nilophar-story

ಮಗಳಿಗೆ ಊಟ ಬರುತ್ತಿದ್ದಂತೆ ಹಿಂದೆ ಸರಿದು ಮಗಳ ಕುತ್ತಿಗೆಗೆ ಟವೆಲ್ ‌ಕಟ್ಟಿ ಊಟ ಮಾಡಿಸಲು ಅಣಿಯಾದಳು. ಒಂದು ಶಿಸ್ತುಬದ್ಧ ದೊಡ್ಡ ಒಡೆತನದ ಮನೋಹರಿ ಮೇಡಂರನ್ನು ನೋಡಿದ್ದ ಸಹ ಕೆಲಸಗಾರರು ತಮ್ಮ ಮೇಡಂನಲ್ಲಿ ಅಡಗಿದ್ದ ತಾಯಿಯನ್ನು ಕಂಡು ಆಶ್ಚರ್ಯಚಕಿತರಾದರು.

ಮನೋಹರಿ ಮುಂದುವರಿಸಿದಳು, “ನಾನು ಕಾಲೇಜಿಗೆ ಹೊರಡಲು ಅಮ್ಮ ಅಪ್ಪ ಸ್ವಲ್ಪ ತಗಾದೆ ತೆಗೆದರು. ಆದರೆ ಅಜ್ಜಿ ನನ್ನ ಸಪೋರ್ಟ್‌ ಗೆ ನಿಂತರು. ವಿಜ್ಞಾನ ವಿಭಾಗದಲ್ಲಿ ಜಿಲ್ಲೆಗೆ ಮೊದಲಿಗಳಾಗಿ ಬಂದೆ. ಅಷ್ಟರಲ್ಲಿ  ಅಪ್ಪನಿಗೆ ಒಂದು ಸಾರಿ ಹೃದಯಾಘಾತವಾಗಿತ್ತು. ಅಮ್ಮ ಅಪ್ಪನಿಗೆ ನನ್ನ ಮದುವೆಯ ಭಯ ಶುರುವಾಯಿತು. ನಾನು ಬಿಎಸ್ಸಿ ಡಿಗ್ರಿಗೆ ಹೋಗುತ್ತಿದ್ದಂತೆ ಅಪ್ಪ ವರಾನ್ವೇಷಣೆ ಶುರು ಮಾಡಿದರು. ನಾನು ಹೆಚ್ಚಿಗೆ ಏನಾದರೂ ಹೇಳಿದರೆ ಅವರ ಮನಸ್ಸಿಗೆ ಆಘಾತವಾಗಬಹುದು ಎಂದು ಮದುವೆಗೆ ಒಪ್ಪಿದೆ.

“ಜಾತಕ ಕೂಡಿ ಬರಬೇಕು, ಇನ್ನು ತುಂಬಾ ಆಚರಣೆಗಳು ಇದ್ದುದರಿಂದ ಅಜ್ಜಿ, `ನೀನು ಮದುವೆಗೆ ಒಪ್ಪಿಗೆ ಕೊಡು, ಮದುವೆ ಮಾತುಕತೆ ಶುರುವಾಗಲು ಕನಿಷ್ಠ ಎರಡು ಮೂರು ವರ್ಷ ಆಗುವುದು ಅಷ್ಟರಲ್ಲಿ ನಿನ್ನ ಡಿಗ್ರಿ ಮುಗಿಯುತ್ತದೆ,’ ಎಂದಿದ್ದರಿಂದ ನಾನು ಮದುವೆಗೆ  ಒಪ್ಪಿಗೆ ನೀಡಿದೆ. ಅಜ್ಜಿ ಹೇಳಿದ ಹಾಗೆ ಡಿಗ್ರಿ ಕೊನೆಯ ವರ್ಷದಲ್ಲಿದ್ದಾಗ ನನ್ನ ಮದುವೆ ನಿಶ್ಚಯವಾಯಿತು. ತಟ್ಟೆಯಲ್ಲಿ ಕೈಯಿಟ್ಟು ಕೂಡಬಾರದು. ಊಟ ಮಾಡಿ,” ಎಂದಳು ಮನೋಹರಿ ಓರೆ ನೋಟ ಬೀರುತ್ತಾ.

ಲಗುಬಗೆಯಿಂದ  ತಟ್ಟೆಯಲ್ಲಿದ್ದ ಸ್ಪೂನ್‌ ತೆಗೆದುಕೊಂಡು ಆ ಕಡೆ ತಿರುಗಿ ಊಟ ಮಾಡಲು ಶುರು ಮಾಡಿದ ಒಬ್ಬ ವ್ಯಕ್ತಿಗೆ ಮನದಲ್ಲಿ ಆತಂಕ ಶುರುವಾಯಿತು. ಮನೋಹರಿ ಮುಗುಳ್ನಕ್ಕಳು.

ಮಗಳಿಗೆ ನೀರು ಕುಡಿಸಿ ವೆರಿ ಗುಡ್‌ ಎಂದು ಹಣೆಗೆ ಮುತ್ತಿಟ್ಟಳು. 11 ವರ್ಷದ ಐಶ್ವರ್ಯಾ, `ಅಮ್ಮಾ….” ಎನ್ನುತ್ತಾ ಕೈ ಅಲುಗಾಡಿಸುತ್ತಾ ತಾಯಿಯನ್ನು ಅಪ್ಪಿಕೊಂಡಳು. ಮಗಳ ತಲೆ ಸವರುತ್ತಾ ಮಾತು ಮುಂದುವರಿಸಿದಳು, “ಪ್ರತಿಯೊಂದು ಮನುಷ್ಯ ಏನೇ ಕೆಲಸಕಾರ್ಯ ಮಾಡಿದರೂ ಅದರಲ್ಲಿ ಒಂದು ಸ್ವಾರ್ಥ ಇದ್ದೇ ಇರುತ್ತದೆ. ಅದೇ ವ್ಯಾವಹಾರಿಕ ಬುದ್ಧಿ ಇರುವ ಮನುಷ್ಯನ ಮುಂದೆ ಇರುವ ವ್ಯಕ್ತಿಯಿಂದ ಎಷ್ಟು ಲಾಭ ಆಗಬಹುದು ಎನ್ನುವ ಲೆಕ್ಕಾಚಾರದಲ್ಲಿ ಇರುತ್ತಾನೆ. ನನ್ನನ್ನು ಮದುವೆಯಾಗಲು ಬಂದ ವ್ಯಕ್ತಿ ತುಂಬಾ ಮುಂದಾಲೋಚನೆ ಇಟ್ಟುಕೊಂಡೇ ಒಪ್ಪಿಕೊಂಡಿದ್ದ. ಅಪ್ಪನ ಆರೋಗ್ಯ ತುಂಬಾ ಹದಗೆಟ್ಟಿದ್ದರಿಂದ ನನ್ನ ಕೊನೆಯ ವರ್ಷದ ಪರೀಕ್ಷೆ ಮುಗಿದ ಮಾರನೆಯ ದಿನ ದೇವಸ್ಥಾನದಲ್ಲಿ ಹಾರ ಬದಲಾಯಿಸಿದೆವು. ನನ್ನ ಗಂಡನ ಮನೆಯವರಿಗೂ ಅಷ್ಟೇ ಬೇಕಿತ್ತು. ದುಡ್ಡು ಉಳಿದರೆ ಸಾಕಿತ್ತು.

“ಅವರ ಮನೆಯ ಆರ್ಥಿಕ ಸ್ಥಿತಿ ಅಷ್ಟಕ್ಕಷ್ಟೇ. ಬೆನ್ನಿಗಂಟಿದ ಇಬ್ಬರು ತಂಗಿಯರ ಮದುವೆ, ಶಿಕ್ಷಣ ದುಡ್ಡು ಉಳಿದಷ್ಟು ಒಳ್ಳೆಯದೇ. ನಮ್ಮ ಯಜಮಾನರ ಹೆಸರು ಅವರ ವೃತ್ತಿಯ ಬಗ್ಗೆ ಹೇಳಲೇ ಇಲ್ಲ ಅಲ್ವಾ….” ಎನ್ನುತ್ತಿದ್ದಂತೆ ದೂರದಲ್ಲಿ ಯಾರಿಗೊ ಊಟ ನೆತ್ತಿಗೆ ಹತ್ತಿ, ಕೆಮ್ಮಲಾರಂಭಿಸಿದರು.

“ನೀರು ಕುಡಿಯಿರಿ. ಸಾವಕಾಶವಾಗಿ ಊಟ ಮಾಡಿ,” ಎಂದು ಜೋರಾಗಿ ಹೇಳಿ ನಕ್ಕಳು ಮನೋಹರಿ.

ಎಲ್ಲರೂ ಊಟ ಮುಗಿಸಿ ಕೈಯಲ್ಲಿ ಐಸ್‌ ಕ್ರೀಂ ಹಿಡಿದು ಕುಳಿತರು.

“ನನ್ನ ಯಜಮಾನರ ಹೆಸರು ಪುರುಷೋತ್ತಮ. ತುಂಬಾ ಮಹತ್ವಾಕಾಂಕ್ಷೆಯ ವ್ಯಕ್ತಿ. ಎಲ್ಲವನ್ನೂ ಸಾಧಿಸಬೇಕು, ಹೆಚ್ಚು ದುಡ್ಡನ್ನು ಸಂಪಾದಿಸಬೇಕು ಎನ್ನುವ ಮಹದಾಸೆ ಇರುವ ವ್ಯಕ್ತಿ. ಹೆಂಡತಿ ತುಂಬಾ ಜಾಣೆ. ಅವಳು ನನ್ನ ಕೆಲಸಕ್ಕೆ ಕೈ ಜೋಡಿಸುವಳು. ಇಬ್ಬರೂ ಕೂಡಿ ದುಡ್ಡು ಸಂಪಾದಿಸಿದರೆ ಬೇಗ ಶ್ರೀಮಂತರಾಗಬಹುದು ಎನ್ನುವ ಆಸೆಯಿಂದ ನನ್ನನ್ನು ಮದುವೆಯಾದರು. ನನ್ನ ಪತಿ ದೇವರಿಗೆ ನಾನು ಹೊರಗೆ ಹೋಗಿ ಕೆಲಸ ಮಾಡಬೇಕು ಎನ್ನುವ ಆಸೆ. ಅತ್ತೆಗೆ ಇದು ಸರಿ ಎನಿಸಲಿಲ್ಲ.

“ಆದರೆ ನನ್ನ ಯಜಮಾನರ ಕೈ ಮೇಲೆ ಆಯಿತು. ಷರತ್ತುಗಳನ್ನು ಹಾಕಿ ನನ್ನನ್ನು ಕೆಲಸಕ್ಕೆ ಕಳುಹಿಸಿದರು. ಹೀಗೆ ಸಂಸಾರ ಸಾಗುತ್ತಿತ್ತು. ನನ್ನ ತಂದೆ ದೈವಾಧೀನರಾದರು. ನಾನು ತವರುಮನೆಯಲ್ಲೇ ಇದ್ದೆ. 2 ವಾರವಾದ ಮೇಲೆ ಪುರುಷೋತ್ತಮ ನಮ್ಮ ಮನೆಗೆ ಬಂದು, ನನ್ನನ್ನು ಮುಂಬೈಗೆ ಕರೆದುಕೊಂಡು ಬಂದರು. ನನ್ನ ಗಂಡನ ವಿಚಾರ ಬೇರೆಯದೇ ಇತ್ತು. ಆದರೆ ದೇವರು ಬೇರೆಯೇ ಬರೆದಿದ್ದ. ಒಂದು ಪ್ರತಿಷ್ಠಿತ ಕಂಪನಿಯಲ್ಲಿ  ಪುರುಷೋತ್ತಮನಿಗೆ ಕೆಲಸ ಸಿಕ್ಕಿತು.”

ಅಷ್ಟರಲ್ಲಿ ಆ ವ್ಯಕ್ತಿ ಹೊರಗೆ ಎದ್ದು ಹೊರಡಲು ಅಣಿಯಾದ.

“ಸರ್‌, ನನ್ನ ಜೀವನದ ಪುಟಗಳು ತಮಗೆ ಬೇಸರ ಎನಿಸಿತಾ?” ನಗುತ್ತಾ ಕೇಳಿದಳು. ನಂತರ ಮಲಗಿದ್ದ ಮಗಳನ್ನು ಕರೆದುಕೊಂಡು ಹೋಗಲು ದಾದಿಗೆ ಹೇಳಿದಳು. ಎಲ್ಲರೂ ಆ ವ್ಯಕ್ತಿಯ ಕಡೆ ನೋಡಲು ಸಂಕೋಚದಿಂದ ಮತ್ತೆ ಅದೇ ಕುರ್ಚಿಯ ಮೇಲೆ ಕುಳಿತ. ಅವನ ಕಣ್ಣು ಅವಳ ದೃಷ್ಟಿಯನ್ನು ಎದುರಿಸಲಾಗಲಿಲ್ಲ. ಐಸ್‌ ಕ್ರೀಂ ಮುಗಿದಿತ್ತು.

“ಮುಂದೆ ಏನಾಯಿತು ಮೇಡಂ? ನಿಮ್ಮ ಜೀವನದಲ್ಲಿ ಐಶ್ವರ್ಯಾ ಹೇಗೆ ಬಂದಳು?” ಯಾರೋ ಕೇಳಿದರು.

“ಡಿಗ್ರಿ ಮುಗಿಸಿದ ಒಬ್ಬ ಹುಡುಗಿ ಇಷ್ಟು ದೊಡ್ಡ ಕಂಪನಿ ಹೇಗೆ ಕಟ್ಟಿದಳು ಎಂಬ ಪ್ರಶ್ನೆಗಳು ಏಳುತ್ತಿವೆ ಅಲ್ಲವೇ….?  ನಿಮ್ಮೆಲ್ಲರ ಮುಖ ನೋಡಿ ನಿಮ್ಮ ಮನದಲ್ಲಿ ಏಳುತ್ತಿರುವ ಪ್ರಶ್ನೆಗಳು ಏನೆಂದು ನನಗೆ ಗೊತ್ತಾಯಿತು,” ಎನ್ನುತ್ತಾ ಮತ್ತೆ ಅದೇ ನಗು ಚೆಲ್ಲಿ ತನ್ನ ಮಾತು ಮುಂದುವರಿಸಿದಳು.

“ಇದು ನನ್ನ ಜೀವನದ ತಿರುವು ಎನ್ನಬಹುದು, ಹೋರಾಟ ಎನ್ನಬಹುದು ಅಥವಾ  ಹೊಸದಕ್ಕೆ ನಾಂದಿ ಎನ್ನಬಹುದು. ಆದರೆ ಆ ವರ್ಷ ನನ್ನನ್ನು ತುಂಬಾ ಹತಾಶೆಯಲ್ಲಿ ಒಬ್ಬಂಟಿಯನ್ನಾಗಿ ಮಾಡಿದ್ದಂತೂ ನಿಜ. ನನ್ನ ಪತಿ ನಾನು ಎಲ್ಲಿಯಾದರೂ ಕೆಲಸ ಮಾಡಬೇಕು ಎನ್ನುವ ಆಸೆ. ಅದಕ್ಕೆ ನಾನು ಎಂಬಿಎ ಮಾಡುವೆ ಎಂದಿದ್ದಕ್ಕೆ ಬೇಡ ಇರು ಕ್ವಾಲಿಫಿಕೇಶನ್‌ ನಲ್ಲಿಯೇ ದುಡಿಯಬೇಕು ಎನ್ನುವ ಇರಾದೆ. ಅಷ್ಟರಲ್ಲಿಯೇ ನನ್ನ ಮಡಿಲಲ್ಲಿ ಮೊಗ್ಗೊಂದು ಅರಳಲು ಶುರುವಾಗಿತ್ತು.

“ಒಂದು ವಾರ ನನಗೆ ವಾಂತಿ, ತಲೆಸುತ್ತು ಶುರುವಾಗಿತ್ತು. ಗಂಡನಿಗೆ ಹೇಳಿದರೆ ಕೆಲಸಕ್ಕೆ ಹೋಗದಿರಲು ಕುಂಟು ನೆಪ ಹೇಳುತ್ತಿದ್ದೀಯಾ? ಮಾತ್ರೆ ತೆಗೆದುಕೊಂಡು ಕೆಲಸ ಹುಡುಕು ಎಂದರು. ಒಂದು ಪ್ರೀತಿಯ ಮಾತಿಲ್ಲ. ಕಾಳಜಿ ಇಲ್ಲ. ಸಹಾನುಭೂತಿ ಅಂತೂ ಇಲ್ಲವೇ ಇಲ್ಲ. ರಾತ್ರಿಗೆ ಅದು ಒಂದು ಕೆಲಸ ಅನ್ನುವ ಹಾಗೆ ಮುಗಿಸಿ ಮಲಗಿಬಿಡುವುದು. ಭಾರತ ದೇಶದಲ್ಲಿ ಇದು ಒಂದು ರೀತಿಯ ದಬ್ಬಾಳಿಕೆ,” ನಿಟ್ಟುಸಿರು ಬಿಟ್ಟು ಮತ್ತೆ ಮಾತನ್ನು ಮುಂದುವರಿಸಿದಳು.

“ಆ ದಿನ ನಾನು ಆಸ್ಪತ್ರೆಗೆ ಹೋಗಿ ಜಗತ್ತಿನ ಒಂದು ಅದ್ಭುತ ಖುಷಿಯನ್ನು ಹೊತ್ತು ಮನೆಗೆ ಬಂದಿದ್ದೆ. ನನ್ನ ಮುಖದಲ್ಲಿ ನೂರಾರು ಚಿಕ್ಕಪುಟ್ಟ ಮಕ್ಕಳ ನಗು, ಆ ಮೃದುವಾದ ಸ್ಪರ್ಶ, ಅಮ್ಮ ಎಂದು ಕರೆಯುವ ಕೂಗು. ಆ ದಿನ ನಾನು ಆಕಾಶದಲ್ಲಿ ತೇಲಿದ ಅನುಭವ. 10 ಗಂಟೆಗೆ ಬಂದ ಗಂಡನಿಗೆ ಖುಷಿ ಖುಷಿಯಾಗಿ ಸಿಹಿ ಬಡಿಸಿದೆ. ಊಟ ಮಾಡುತ್ತಾ, ಏನು ವಿಶೇಷ! ತುಂಬಾ ಖುಷಿಯಾಗಿದ್ದೀಯಾ ಕೆಲಸ ಸಿಕ್ಕಿತಾ….? ಕೇಳಿದ ಗಂಡನಿಗೆ, `ಇಲ್ಲ’ ಎಂದೆ. `ಮತ್ತೆ ನಿನ್ನ ಖುಷಿಗೆ ಕಾರಣ,’ ಎಂದಾಗ ನಾನು ವೈದ್ಯರ ರಿಪೋರ್ಟ್‌ ಮುಂದೆ ಇಟ್ಟೆ. ಅವರ ಕಣ್ಣು ಕೆಂಪಾಯಿತು. ಸಿಟ್ಟಲ್ಲಿ ಊಟದ ತಟ್ಟೆ ಎಸೆದುಬಿಟ್ಟರು. ಕಲಿತವಳಾಗಿ ನಿನಗೆ ಬುದ್ಧಿ ಇಲ್ಲಾ….? ನೋಡು ಈಗ ಏನಾಯಿತು…? ನಾವು ಇದನ್ನು ಬೇಕು ಎಂದು ಯೋಚನೆ ಮಾಡಿರಲಿಲ್ಲ. ಮತ್ತೇಕೆ ಇದೆಲ್ಲ…..? “ಒಮ್ಮೆಲೇ ಯಾರೋ ಕತ್ತು ಹಿಸುಕಿ ಉಸಿರನ್ನು ನಿಲ್ಲಿಸಿದ ಹಾಗಾಯಿತು. ಏನು ಅಂತ ಮಾತನಾಡುತ್ತಿದ್ದೀರಿ? ಇದು ನಮ್ಮ ಪ್ರೀತಿಯ ಕುರುಹು ನನ್ನ ಉದರದಲ್ಲಿ ಆಗಲೇ ಅಂಕುರವಾಗಿದೆ ಎಂದೆ. ಅದಕ್ಕೆ, `ಪ್ರೀತಿ ಗೀತಿ ಇದಕ್ಕೆಲ್ಲ ಬೆಲೆ ಇಲ್ಲ. ದುಡ್ಡಿಗೆ ಮಾತ್ರ ಬೆಲೆ. ನಾಳೆ ಹೋಗಿ ಮೊದಲು ಇದನ್ನು ತೆಗೆಸಿಕೊಂಡು ಬಾ. ಮುಂದಿನ ತಿಂಗಳು ತಂಗಿಯ ಮದುವೆ, ಅದರ ಮುಂದಿನ ತಿಂಗಳು ಇನ್ನೊಬ್ಬಳ ಬಾಣಂತನ. ಹೇಗೆ ಎಲ್ಲವನ್ನೂ ನಿಭಾಯಿಸುವುದು? ನನಗೆ ಇನ್ನೂ ದೊಡ್ಡ ಹುದ್ದೆಯಲಿ ಕೆಲಸ ಮಾಡುವ ಆಸೆ. ಅದಕ್ಕೆಲ್ಲ ದುಡ್ಡು ಬೇಕು. ಮನಶ್ಶಾಂತಿ ಬೇಕು,’ ಎಂದು ಜೋರಾಗಿ ಕಿರುಚಿ ರೂಮಿನ ಬಾಗಿಲನ್ನು ದಢಾರನೆ ಹಾಕಿಕೊಂಡು ಮಲಗಿದ.

“ಬೆಳಗ್ಗೆ ಎದ್ದು ನನ್ನ ಕೈಯಲ್ಲಿ ದುಡ್ಡು ಕೊಟ್ಟು ಸಹಜವಾಗಿ ತೆಗೆಸಿಬಿಡು ಎಂದು ಹೇಳಿ ಹೊರಟು ಹೋದ. ರಾತ್ರಿಯೆಲ್ಲಾ ನಿದ್ದೆ ಇಲ್ಲ. ಊಟ ಇಲ್ಲ. ಅತ್ತು ಅತ್ತು ಸುಸ್ತಾಗಿದ್ದೆ. ಆದರೂ ನನ್ನ ಮಗುವನ್ನು ನನ್ನಿಂದ ಯಾರೂ ದೂರ ಮಾಡಲಾರರು ಎಂದು ಗಟ್ಟಿ ನಿರ್ಧಾರ ಮಾಡಿ ಮನೆಯಿಂದ ಹೊರಬಿದ್ದೆ. ಸಾಯಂಕಾಲದವರೆಗೂ ಅಡ್ಡಾಡಿ ಸುತ್ತಾಡಿ ಒಂದು ಚಿಕ್ಕ ಅಂಗಡಿಯಲ್ಲಿ ಲೆಕ್ಕ ಬರೆಯುವ ಕೆಲಸ ಗಿಟ್ಟಿಸಿಕೊಂಡೆ. ತುಂಬಾ ಸುಸ್ತಾಗಿದ್ದರಿಂದ ಮನೆಗೆ ಬಂದು ಹಾಲು ಕುಡಿದು ಮಲಗಬೇಕೆಂದಾಗ ವಾಂತಿ ಶುರುವಾಯಿತು. ಪುರುಷೋತ್ತಮ ಅದೇ ಸಮಯಕ್ಕೆ ಒಳಬಂದು ಏನಿದು…? ನಾನು ಹೇಳಿದ್ದು ಅರ್ಥವಾಗಲಿಲ್ಲವೇ ಎಂದು ಗದರಿಸಿದ.

“ಸುಸ್ತಾಗಿದ್ದರೂ ಅವನ ಮುಂದೆ ನಿಂತು ನಿಮಗೇನು ದುಡ್ಡು ಬೇಕಲ್ಲವೇ…..? ಇವತ್ತು ನನಗೆ ಕೆಲಸ ಸಿಕ್ಕಿದೆ. ನೀವು ಈ ಮಗುವಿನ ವಿಷಯಕ್ಕೆ ಬರಕೂಡದು ಎಂದು ಅಕ್ಷರಶಃ ಗುಡುಗಿದೆ. ತಾಯಿಗೆ ಮಗು ಅಂತ ಬಂದರೆ ಅವಳಲ್ಲಿ ಎಲ್ಲಿಲ್ಲದ ಶಕ್ತಿ ಬರುತ್ತದೆ ಅಂತ ಕೇಳಿದ್ದೆ. ಅಂದು ನಾನು ಅದನ್ನು ಅನುಭವಿಸಿದ್ದೆ. ಆದರೆ ಅಂತಹ ದಿನಗಳಲ್ಲಿ ಹೆಂಡತಿಗೆ ಗಂಡನ ಆರೈಕೆ ಸಾಂತ್ವನ ಬೇಕಿರುತ್ತದೆ. ಆದರೆ ಆತನಿಂದ ನನಗೆ ಸಿಕ್ಕಿದ್ದು ಬರೀ ತಿರಸ್ಕಾರ ಅಷ್ಟೇ. ಮಗು ಹುಟ್ಟಿದ ಮೇಲೆ ಮಗುವಿನ ಮುಖ ನೋಡಿದರೆ ಬದಲಾಗುವರು ಎಂಬ ಒಂದು ಆಸೆ ಇತ್ತು. ಆದರೆ ಮನುಷ್ಯನಿಗೆ ಪ್ರತಿದಿನ ಒಂದು ಹೊಸ ಸವಾಲು, ಹೊಸ ಹೋರಾಟ.

“ನಾಲ್ಕನೇ ತಿಂಗಳ ಸ್ಕ್ಯಾನಿಂಗ್‌ ನಲ್ಲಿ ಒಂದು ಆಘಾತಕಾರಿ ಸುದ್ದಿ ಕಾದಿತ್ತು. ಮಗುವಿನ ಬ್ರೈನ್‌ ಡೆವಲಪ್‌ ಮೆಂಟ್‌ ಸ್ವಲ್ಪ ಸರಿ ಇಲ್ಲ ಎಂದು ರಿಪೋರ್ಟ್‌ ನಲ್ಲಿತ್ತು. ಬರಬರುತ್ತಾ ಚೆನ್ನಾಗಿ ಡೆವಲಪ್‌ ಮೆಂಟ್‌ ಆಗಲೂಬಹುದು, ಆಗದೇ ಇರಬಹುದು. ಆದ್ದರಿಂದ ಮಗುವನ್ನು ತೆಗೆಸು ಸಲಹೆ ನೀಡಿದರು ವೈದ್ಯರು. ಅಂದೇ ನಾನು ನಿರ್ಧಾರ ಮಾಡಿದೆ. ಮಗುವೇ ಬೇಡ ಎನ್ನುವ ತಂದೆ ಮುಂದೆ ಇಂತಹ ಮಗು ಬೇಡವೇ ಬೇಡ ಎಂದರೆ ಅದಕ್ಕೆ, ಸೊಂಟ ಕಟ್ಟಿ ನಿಲ್ಲಬೇಕು. ಮಗುವಿಗೆ ಭದ್ರ ಬುನಾದಿ ಹಾಕಲೇಬೇಕಿತ್ತು.

“ಅದಕ್ಕೆ ಮಾರನೆಯ ದಿನವೇ ಎಂಬಿಎ ಮಾಡಲು ಅಡ್ಮಿಶನ್‌ ಮಾಡಿಸಿದೆ. ಕೆಲಸ ಬಿಟ್ಟು ಈಗ ಎಂಬಿಎ ಏಕೆ ಬೇಕಿತ್ತು ಎಂದು ದೊಡ್ಡ ರಾದ್ಧಾಂತವೇ ಆಗಿಹೋಯಿತು. ಈ ಕಡೆ ಗರ್ಭವತಿ ಬೆಳಗ್ಗೆಯಿಂದ ಸಾಯಂಕಾಲದವರೆಗೆ ಕೆಲಸ. ಮನೆಗೆ ಬಂದ ತಕ್ಷಣ ಮಕ್ಕಳಿಗೆ ಟ್ಯೂಶನ್‌ ಹೇಳುವುದು, ರಾತ್ರಿ ಓದು. ನನ್ನಲ್ಲಿ ಅಷ್ಟೊಂದು ಶಕ್ತಿ ಎಲ್ಲಿಂದ ಬಂತು ಎಂದು ನಾನು ಯೋಚಿಸುತ್ತಿದ್ದೆ. ಅದು ಬಂದ್ದಿದ್ದು ನನ್ನ ಮಗುವಿನಿಂದ. ಮುಂದೆ ಬರುವ ಮಗುವಿಗೆ ಒಳ್ಳೆಯ ಭವಿಷ್ಯ ಕಲ್ಪಿಸಲು ತಾಯಿ ಮಗು ಗರ್ಭದಲ್ಲಿದ್ದಾಗಲೇ ಸನ್ನದ್ಧಳಾದಳು.”

ಆ ವ್ಯಕ್ತಿ ಅಲ್ಲಿ ಕೂರಲು ಆಗದೆ ಹೊರಗೆ ಹೋಗಲೂ ಆಗದೆ ಒದ್ದಾಡುತ್ತಿದ್ದ. ಅವನ ಅವಸ್ಥೆ ಕಂಡು ಮನೋಹರಿ ಒಳಗೆ ನಗುತ್ತಿದ್ದಳು.

“ಏಳು ತಿಂಗಳ ಗರ್ಭಾವಸ್ಥೆಯಲ್ಲಿದ್ದಾಗ ಊರಲ್ಲಿದ್ದ ಆಸ್ತಿಯೆಲ್ಲಾ ಮಾರಿ ತಾಯಿಯನ್ನು ಕರೆದುಕೊಂಡು ಬರಬೇಕು, ಇಲ್ಲವೇ ಬಾಣಂತನಕ್ಕೆ ಅಲ್ಲೇ ಹೋಗಬೇಕು ಅಂದುಕೊಂಡಿದ್ದೆ. ಅದೇ ರೀತಿ ಕಟೀಲು ಅಮ್ಮನ ದರ್ಶನ ಪಡೆದು ಒಂಬತ್ತು ತಿಂಗಳು ಅನುಭವಿಸಿದ ನೋವುಗಳಿಗೆ ಕೊನೆ ಸಿಗುವ ಸಮಯ ಬಂದಾಗಿತ್ತು. ಪುಟ್ಟ ಕೈಗಳ ನನ್ನ ಗೊಂಬೆ ನನ್ನ ಮಡಿಲು ತುಂಬಿದಳು. ಅಪ್ಪ ಎನಿಸಿಕೊಂಡ ಪ್ರಾಣಿ ಮಗುವನ್ನು ನೋಡಲು ಬರಲೇ ಇಲ್ಲ. ತಾಯಿಯ ಮಮತೆ ವಾತ್ಸಲ್ಯಕ್ಕೆ ಬೆಲೆ ಕಟ್ಟಲಾಗದು. ನಿನ್ನ ಮಗು ಹೇಗಿದ್ದರೂ ನೀನೇ ಸಾಕಬೇಕು ಎಂದು ನನ್ನ ಅಮ್ಮ ಬುದ್ಧಿ ಹೇಳಿದರು.

“ಕಟೀಲು ಅಮ್ಮನನ್ನು ಮನದಲ್ಲಿ ನೆನೆದು ಎಷ್ಟೋ ಹೆಣ್ಣುಮಕ್ಕಳಿಗೆ ತಾಯಿಯಾಗುವ ಭಾಗ್ಯ ಇರುವುದಿಲ್ಲ. ಅಂತಹದರಲ್ಲಿ ನನಗೆ  ಭಾಗ್ಯ ಕರುಣಿಸಿದ ನಿನಗೆ ಸದಾ ಚಿರಋಣಿ ಎಂದುಕೊಂಡೆ. ನನ್ನ ಮಗು ನನ್ನದು. ತಾಯಿ ಅವಳಿಗೆ ಆಯುಷ್ಯ ಗಟ್ಟಿ ಕೊಡು ಇದನ್ನಷ್ಟೇ ಬೇಡಿಕೊಂಡೆ. ಮಗು ಆರೋಗ್ಯವಾಗಿರಬಹುದು ಎಂದು ನಿಮಗೆಲ್ಲ ಅನಿಸಿರಬಹುದು. ಖಂಡಿತಾ ಇಲ್ಲ. ನನ್ನ ಮಗಳ ಕೈ ಕಾಲು ಮೂಳೆಗಳು ಡೊಂಕಾಗಿದ್ದವು. ಮುಖದ ಒಂದು ಭಾಗ ವಾರೆಯಾಗಿತ್ತು. ತುಟಿಯ ಬಲಭಾಗ ಊದಿಕೊಂಡಿತ್ತು. ಆದರೆ ಅವಳ ಕಣ್ಣಲ್ಲಿ ಕಾಂತಿ ತುಂಬಿತ್ತು.

“ಮಗುವೇ ಬೇಡ ಎಂದ ಅದರ ತಂದೆ ಇಂಥ ಮಗುವನ್ನು ಸ್ವೀಕರಿಸಲು ಸಾಧ್ಯವೇ…? ಇಲ್ಲ ಅಂತ ಮನವರಿಕೆ ಆಯಿತು. ಅಪ್ಪನ ಹೊಲ ಮಾರಿ ಮಣಿಪಾಲ್ ‌ಆಸ್ಪತ್ರೆಯಲ್ಲಿ ಮಗಳ ಆಪರೇಷನ್‌ ಮಾಡಿಸಿದೆ. ಅಂದುಕೊಂಡ ಹಾಗೆ ಡೈವೋರ್ಸ್‌ ಪೇಪರ್‌ ಮನೆಗೆ ಬಂದಿತ್ತು. ಹಾಗೆ ಸಹಿ ಮಾಡಿ ಕಳಿಸಿದೆ. ಟೊಂಕಕಟ್ಟಿ ನಿಂತ ತಾಯಿ, ಮೊದಲೇ ನಿರ್ಧರಿಸಿದ ಹಾಗೆ ನನ್ನ ಮಗಳಿಗೆ ಒಳ್ಳೆ ಭವಿಷ್ಯ ಕೊಡಬೇಕು, ಒಳ್ಳೆ ಚಿಕಿತ್ಸೆ ಕೊಡಿಸಬೇಕು ಎಂದು ಅದಕ್ಕೆ ಅಮ್ಮನ ಸಹಾಯದಿಂದ ಎಂಬಿಎ ಮುಗಿಸಿದೆ.

“ಅಷ್ಟರಲ್ಲಿಯೇ ಗೊತ್ತಾಗಿದ್ದು ಪುರುಷೋತ್ತಮ ತನ್ನ ಹೆಸರನ್ನು ಬದಲಿಸಿದ್ದ ಹಾಗೂ ಒಳ್ಳೆಯ ಕಂಪನಿಯ ಸಿಇಒ ಕೂಡ ಆಗಿದ್ದ. ಇಲ್ಲಿಂದ ನನ್ನದು ಒಂಟಿ ಹೋರಾಟ ನನ್ನ ದಾರಿಯೇನು ಸುಗಮವಾಗಿರಲಿಲ್ಲ. ನನ್ನ ಐಶ್ವರ್ಯಾಳಿಗಾಗಿ ಐಶ್ವರ್ಯ ಗಳಿಸಲೇಬೇಕಿತ್ತು. ನನ್ನ ಮಗಳ ಹೆಚ್ಚಿನ ಚಿಕಿತ್ಸೆಗೆ ಮುಂಬೈಗೆ ಹೋಗಲೇಬೇಕಾಯಿತು. ಅಪ್ಪನ ಉಳಿದ ಆಸ್ತಿಯನ್ನು ಮಾರಿ ಮಹಾನಗರಕ್ಕೆ ಅಮ್ಮ ನಾನು ನನ್ನ ಮುದ್ದು ಮಗಳು ಬಂದಿಳಿದೆವು.

“ಚಿಕ್ಕ ಕಂಪನಿಯಲ್ಲಿ ಕೆಲಸ ಸಿಕ್ಕಿತು. ಅಲ್ಲಿಂದ ಹೊರಳಿ ನೋಡಲಿಲ್ಲ. ಅದೇ ಕಂಪನಿಯ ಮಾಲೀಕರು ಕಂಪನಿಯನ್ನು ಮಾರಿ ವಿದೇಶಕ್ಕೆ ಹೋಗಬೇಕಾದ ಪರಿಸ್ಥಿತಿ ಎದುರಾದಾಗ ಸಾಲ ಮಾಡಿ ನಾನು ಆ ಕಂಪನಿಯನ್ನು ಕೊಂಡುಕೊಂಡೆ. ಅದೇ ಕಂಪನಿ ಇಂದು ಒಂದೊಂದೇ ಹೆಜ್ಜೆ ಮುಂದಿಡುತ್ತಾ ಈ ಮಟ್ಟಕ್ಕೆ ಬೆಳೆದಿದೆ. ಹಾಗೆಯೇ ನನ್ನ ಐಶ್ವರ್ಯಾ ಒಂದೊಂದೇ ಘಟ್ಟ ದಾಟಿ 11 ವರ್ಷದವಳಾಗಿದ್ದಾಳೆ. ನಿನ್ನೆ ನನ್ನನ್ನು ಮೊದಲ ಬಾರಿ `ಅಮ್ಮಾ…..’ ಎಂದು ಕರೆದಿದ್ದಾಳೆ,” ಎಂದು ಮನೋಹರಿ ಹೇಳುತ್ತಿದ್ದಂತೆ ನೆರೆದಿದ್ದವರೆಲ್ಲರ ಕಣ್ಣಲ್ಲಿ ನೀರಾಡಿತು.

ಮನೋಹರಿ ಮತ್ತೆ ಮುಂದುವರಿಸಿದಳು, “ನೀವೆಲ್ಲರೂ ಅಂದುಕೊಂಡ ಹಾಗೆ ಇದು ಕಂಪನಿಯ ಏಳಿಗೆಯ ಸಮಾರಂಭ ಅಲ್ಲ. ನನ್ನ ಮಗಳು ನನ್ನನ್ನು ಅಮ್ಮಾ ಎಂದು ಕರೆದಿದ್ದಕ್ಕೆ ನಾನು ಕೊಡುತ್ತಿರುವ ಔತಣ ಕೂಟ ಇದು. ನಾವುಗಳು ಸುಳ್ಳು, ಮೋಸ, ಕಪಟ, ವಚನೆ, ಛಲ, ಹೊಟ್ಟೆಕಿಚ್ಚು ಪಡುತ್ತೇವೆ. ಆದರೆ ನನ್ನ ಐಶ್ವರ್ಯ ಏಂಜಲ್. ಅವಳಿಗೆ ಯಾವುದೂ ಗೊತ್ತಿಲ್ಲ. ಅವಳ ಕಣ್ಣಲ್ಲಿ ಸದಾ ನನಗಾಗಿ ಪ್ರೀತಿ ತುಂಬಿರುತ್ತದೆ. ಅವಳೇ ನನ್ನ ಸರ್ವಸ್ವ.

“ನನ್ನ ಪ್ರತಿಯೊಂದು ಏಳಿಗೆಯಲ್ಲಿ ನನ್ನ ಮಗಳು ನನ್ನ ಜೊತೆ ಇದ್ದಾಳೆ. ನಾನು ಹತಾಶಳಾಗಿ ಅವಳ ಪಕ್ಕ ಕುಳಿತರೆ ಕಣ್ಣಲ್ಲೇ ಸಮಾಧಾನ ಹೇಳುತ್ತಾಳೆ. ನಾನು ನಕ್ಕರೆ ಅವಳೂ ನಗುತ್ತಾಳೆ. ನನ್ನ ಐಶ್ವರ್ಯ ಅವಳೇ! ನನ್ನ ಮಗಳಿಂದ ನಾನು ಇಷ್ಟು ಎತ್ತರಕ್ಕೆ ಬೆಳೆದಿದ್ದೇನೆ. ಒಂದು ಸಾಮಾನ್ಯ ಹುಟ್ಟಿದ್ದರೆ ಗಂಡನ ದಬ್ಬಾಳಿಕೆ ಸಹಿಸಿಕೊಂಡು ಚಿಕ್ಕಪುಟ್ಟ ಕೆಲಸ ಮಾಡುತ್ತಾ ಮನೆಯಲ್ಲೇ ಇರುತ್ತಿದ್ದೆನೇನೋ, ಆದರೆ ಇಂದು ನನ್ನ ಐಶ್ವರ್ಯಾ ನನ್ನ ಬಾಳಲ್ಲಿ ಬಂದಿರುವುದರಿಂದ ಜಗತ್ತು ನನ್ನನ್ನೂ ಗುರುತಿಸಿದೆ. ಇವಳು ನನ್ನ ದೇವತೆ,” ಎನ್ನುತ್ತಿದ್ದಂತೆ, “ಅಮ್ಮಾ…..” ಎನ್ನುತ್ತಾ ವೀಲ್ ಚೇರ್‌ ಮೇಲೆ ಬಂದ ಮಗಳನ್ನು ನೋಡಿ ಎಲ್ಲರೂ ಎದ್ದು ನಿಂತು ಕಣ್ಣೀರು ಒರೆಸಿಕೊಳ್ಳುತ್ತಾ ಚಪ್ಪಾಳೆ ತಟ್ಟಿದರು.

ಆ ಸಮಯದಲ್ಲಿ ಆ ವ್ಯಕ್ತಿಗೆ ನೂರು ಜನ ಕಪಾಳಕ್ಕೆ ಹೊಡೆದ ಹಾಗಾಯಿತು. ಎದ್ದು ಹೊರಟು ಹೋದ. ಹತ್ತು ನಿಮಿಷವಾದರೂ ಚಪ್ಪಾಳೆ ಸದ್ದು ಕೇಳಿಸುತ್ತಲೇ ಇತ್ತು. ಮಗಳ ನಗು, ಅವಳ ಖುಷಿ ನೋಡಿ ತಾಯಿಯ ಹೋರಾಟ ಸಾರ್ಥಕತೆ ಪಡೆಯಿತು.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ