– ರಾಘವೇಂದ್ರ ಅಡಿಗ ಎಚ್ಚೆನ್.
ಎಲ್ಲರನ್ನೂ ನಗಿಸುತ್ತಾ, ನಗುತ್ತಾ ಇದ್ದವರು ಅವರು. ತುಂಬಾ ಕಷ್ಟದ ಜೀವನ ನೋಡಿ, ನಂತರ ಹಾಸ್ಯದ ಮೂಲಕ ಎಲ್ಲರ ಮನ ಗೆದ್ದರು. ತುಂಬಾ ಅವಮಾನಗಳನ್ನು ಮೆಟ್ಟಿ ನಿಂತರು. ಈ ರೀತಿ ಇದ್ದ ‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ನಟ ರಾಕೇಶ್ ಪೂಜಾರಿ ನಿಧನ ಹೊಂದಿದ್ದಾರೆ. ಹಾಗಂತ ಇದು ವದಂತಿ ಅಲ್ಲ. ಈ ಸುದ್ದಿ ನಂಬಲು ಅಸಾಧ್ಯ ಎನಿಸಿದರೂ ಸತ್ಯವೇ. ಆರೋಗ್ಯವಾಗಿದ್ದ ನಟ ರಾಕೇಶ್ ಪೂಜಾರಿ (Rakesh Poojary) ಅವರು ಸಣ್ಣ ವಯಸ್ಸಿನಲ್ಲೇ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಬಾಳಿ ಬದುಕ ಬೇಕಿದ್ದ ಅವರು ಕೊನೆಯುಸಿರು ಎಳೆದಿದ್ದಾರೆ. ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ನಿಟ್ಟೆಯಲ್ಲಿ ರಾಕೇಶ್ ಅವರು ಮೆಹಂದಿ ಕಾರ್ಯಕ್ರಮ ಒಂದಕ್ಕೆ ತೆರಳಿದ್ದರು. ಈ ವೇಳೆ ಅವರಿಗೆ ಹೃದಯಾಘಾತ ಆಗಿದೆ. ಇಂದು (ಮೇ 12) ಮುಂಜಾನೆ 2 ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ.
ರಾಕೇಶ್ ಪೂಜಾರಿ ಸಾವಿನ ವಿಚಾರವನ್ನು ನಟ ಹಾಗೂ ಅವರ ಆಪ್ತ ಶಿವರಾಜ್ ಕೆಆರ್ ಪೇಟೆ ಅವರು ಖಚಿತಪಡಿಸಿದ್ದಾರೆ. ಸಾವಿಗೆ ಅವರ ಆಪ್ತ ಬಳಗ ಶಾಕ್ ಆಗಿದೆ. ಅವರ ಸಾವಿಗೆ ಎಲ್ಲರೂ ಕಂಬನಿ ಮಿಡಿಯುತ್ತಿದ್ದಾರೆ. ಹೃದಯಾಘಾತದಿಂದ ಅವರು ನಿಧನ ಹೊಂದಿದ್ದು ಮತ್ತಷ್ಟು ಶಾಕಿಂಗ್ ಎನಿಸಿದೆ.
ವಿಶ್ವರೂಪ್ ಎಂದೇ ರಾಕೇಶ್ ಪೂಜಾರಿ ಜನಪ್ರಿಯತೆ ಪಡೆದಿದ್ದರು. ಅವರು ಹಲವು ವರ್ಷಗಳಿಂದ ಬಣ್ಣದ ಲೋಕದಲ್ಲಿ ಇದ್ದರು. ಆದರೆ, ‘ಕಾಮಿಡಿ ಕಿಲಾಡಿಗಳು’ ವೇದಿಕೆ ಅವರ ಬದುಕನ್ನು ಬದಲಿಸಿತು. ‘ಕಾಮಿಡಿ ಕಿಲಾಡಿಗಳು’ ಮೂರನೇ ಸೀಸನ್ನಲ್ಲಿ ಅವರು ವಿನ್ನರ್ ಆಗಿದ್ದರು. ಹಲವು ವರ್ಷಗಳಿಂದಲೂ ಅವರ ರಂಗಭೂಮಿ, ಕಿರುತೆರೆಯಲ್ಲಿ ಸಕ್ರಿಯರಾಗಿದ್ದರು. 2018 ರಲ್ಲಿ ಜೀ ಕನ್ನಡ ‘ಕಾಮಿಡಿ ಕಿಲಾಡಿಗಳು ಸೀಸನ್ 2’ಗೆ ಅವರು ಆಯ್ಕೆ ಆದರು ಮತ್ತು ರನ್ನರ್ ಅಪ್ ತಂಡದಲ್ಲಿ ಅವರು ಇದ್ದರು. ನಂತರದ ಸೀಸನ್ನಲ್ಲಿ ಅವರು ವಿನ್ನರ್ ಆದರು. ಕನ್ನಡದ ‘ಪೈಲ್ವಾನ್’, ‘ಇದು ಎಂಥಾ ಲೋಕವಯ್ಯ’ ಚಿತ್ರಗಳಲ್ಲಿ ನಟಿಸಿದ್ದಾರೆ. ತುಳು ಭಾಷೆಯ ‘ಪೆಟ್ಕಮ್ಮಿ’, ‘ಅಮ್ಮೆರ್ ಪೊಲೀಸ್’ ಮೊದಲಾದ ಸಿನಿಮಾಗಳಲ್ಲಿ ಅವರು ಅಭಿನಯಿಸಿದ್ದಾರೆ.