ಹಿಂದಿನ ಕಾಲದ ತುಂಬು ಜೀವನ ಇಂದು ಬರಿಯ ಕನಸಾಗಿದೆ. ಅಲ್ಪಾಯುಷ್ಯದಲ್ಲಿಯೇ ಆಧುನಿಕರು ತೀರಿಕೊಳ್ಳುತ್ತಿರುವುದು ಇಂದಿನ ನವಯುಗದ ಶೋಚನೀಯ ಪರಿಸ್ಥಿತಿಯಾಗಿದೆ. ಇದಕ್ಕೆ ಕಾರಣ ಮತ್ತು ಪರಿಹಾರವೇನು…..?
ಶತಮಾನಂ ಭವತಿ ಶತಾಯುಃ ಪುರುಷಃ ಶತೇಂದ್ರಿಯ ಆಯುಷ್ಯೇವೇನ್ದ್ರಿಯೇಃ ಪ್ರತಿತಿಷ್ಠತಿ ಸಾಮಾನ್ಯವಾಗಿ ನಾವು ನಮ್ಮ ಹಿರಿಯರಿಗೆ ವಂದಿಸಿದಾಗ ಅವರುಗಳಿಂದ ಈ ಆಶೀರ್ವಚನವನ್ನು ಕೇಳಿರುತ್ತೇವೆ. ನಮಗೆ ಆಶೀರ್ವಾದ ಮಾಡುತ್ತಿರುವ ಆ ಹಿರಿಯರು ನಮ್ಮ ಜೀವಿತಾವಧಿಯು 100 ವಸಂತಗಳನ್ನು ಕಾಣುವಂತಾಗಲೀ ಎಂದಷ್ಟೇ ಹೇಳದೇ ಆ ಜೀವಿತಾವಧಿಯಲ್ಲಿ ನಮ್ಮ ಇಂದ್ರೀಯಗಳೆಲ್ಲ ಸಂಪೂರ್ಣವಾಗಿ ಕಾರ್ಯನಿರ್ವಹಿಸುವ ಮೂಲಕ ಸುಖವಾದ ಜೀವನವನ್ನು ನಡೆಸುವಂತಾಗಲಿ ಎಂದು ಹಾರೈಸುತ್ತಾರೆ. ತಲ ತಲಾಂತರಗಳಿಂದಲೂ ಈ ರೀತಿಯ ಆಶೀರ್ವಚನ ಮತ್ತು ಸುಂದರವಾದ ಆಹಾರ ಪದ್ಧತಿಯ ಜೊತೆಗೆ ಆರೋಗ್ಯಕರ ಜೀವನ ಶೈಲಿಗಳಿಂದಲೇ ನಮ್ಮ ಪೂರ್ವಜರ ಸರಾಸರಿ ಆಯುಸ್ಸು 100-120 ಇರುತ್ತಿದ್ದುದನ್ನು ನಾವು ಕೇಳಿದ್ದೇವೆ ಮತ್ತು ಇಂದಿಗೂ ಕೆಲವು ಬೆರಳೆಣಿಕೆಯ ಶತಾಯುಷಿಗಳನ್ನು ನೋಡುತ್ತಿದ್ದೇವೆ.
ಆದರೆ ಇತ್ತೀಚಿನ ದಿನಗಳಲ್ಲಿ ಹಲವರಿಗೆ 30-40 ವರ್ಷದೊಳಗೇ ನಾನಾ ರೀತಿಯ ಖಾಯಿಲೆ, ಖಿನ್ನತೆಗಳಿಗೆ ಒಳಗಾಗಿ ಅಲ್ಪಾಯುಷಿಗಳಾಗಿಯೇ ಹೋಗುತ್ತಿರುವುದು ನಿಜಕ್ಕೂ ಅಚ್ಚರಿಯ ಮತ್ತು ಬೇಸರದ ಸಂಗತಿಯಾಗಿದೆ.
ಪೂರ್ವಜರ ಆರೋಗ್ಯ
ಅಂದು ನಮ್ಮ ಪೂರ್ವಜರಿಗೆ ಯಾವುದೇ ಖಾಯಿಲೆ ಮತ್ತು ಕಸಾಲೆಗಳು ಇಲ್ಲದೇ ಶತಾಯುಷಿಗಳಾಗಿ ಐದಾರು ತಲೆಮಾರುಗಳನ್ನು ನೋಡುತ್ತಿದ್ದರೆ, ಇಂದು ಇಷ್ಟೆಲ್ಲಾ ಆಧುನಿಕ ವೈದ್ಯಕೀಯ ಸೌಲಭ್ಯಗಳು ಇದ್ದರೂ ಮೂರನೇ ತಲಮಾರನ್ನೂ ಸಹ ನೋಡಲಾಗದಂತಹ ಅಲ್ಪಾಯುಷಿಗಳು ಹೆಚ್ಚುತ್ತಿರುವುದಕ್ಕೆ ಕಾರಣವಾದರೂ ಏನು? ಹೀಗೆ ಹುಡುಕಿದಲ್ಲಿ ಥಟ್ ಅಂತ ಮನಸ್ಸಿಗೆ ಬರುವುದೇ ಅನಗತ್ಯ ಒತ್ತಡ, ಬದಲಾದ ಜೀವನ ಶೈಲಿ, ಆಹಾರ ಪದ್ಧತಿ, ದೇಹವನ್ನು ದಂಡಿಸದೇ ಇರುವುದೇ ಕಾರಣ ಎನ್ನುವುದು ಸ್ಪಷ್ಟವಾಗಿ ಗೋಚರಿಸುತ್ತದೆ.
ಕೌಟುಂಬಿಕ ಜೀವನ
ಹಿಂದೆ ಅವಿಭಕ್ತ ಕುಟುಂಬಗಳಿದ್ದವು, ಮನೆಯಲ್ಲಿ ಎಲ್ಲರೂ ಇದ್ದುದರಲ್ಲಿ ಕಷ್ಟ ಸುಖ ಎಲ್ಲವನ್ನೂ ಹಂಚಿಕೊಂಡು ಸಂತೋಷದಿಂದ ಜೀವಿಸುತ್ತಿದ್ದರು. ಅದೇ ರೀತಿ ಹಿಂದೆ ಎಲ್ಲರ ಮನೆಗಳು ಚಿಕ್ಕದಿರುತ್ತಿದ್ದವಾದರೂ ಮನಸ್ಸು ಮಾತ್ರ ದೊಡ್ಡದಾಗಿರುತ್ತಿತ್ತು. ಆದರೆ ಇಂದು ಬಹುತೇಕ ಮನೆಗಳು ದೊಡ್ಡದಾಗಿರುತ್ತಾದರೂ, ಮನಸ್ಸುಗಳು ಸಂಕುಚಿತವಾಗುತ್ತಿರುವುದು ಆಯುಸ್ಸಿನ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಹಿಂದೆ ಬದುಕುವುದಕ್ಕೆ ಎಷ್ಟು ಬೇಕೋ ಅಷ್ಟಕ್ಕೆ ಮಾತ್ರ ದುಡಿಯುತ್ತಿದ್ದರು ಮತ್ತು ಆಹಾರವನ್ನು ಸೇವಿಸುತ್ತಿದ್ದರು. ಆದರೆ ಇಂದು ತನಗೂ ಇರಲಿ ತನ್ನ ಮೂರ್ನಾಲ್ಕು ತಲೆಮಾರಿಗೂ ಇರಲಿ ಎಂದು ಸಿಕ್ಕಾಪಟ್ಟೆ ದುಡಿಯಲು ಹೋಗಿ ಸಣ್ಣ ವಯಸ್ಸಿನಲ್ಲಿಯೇ ದೊಡ್ಡ ಮೊತ್ತದ ದೊಡ್ಡ ಜವಾಬ್ದಾರಿಯ ಹುದ್ದೆಗಳನ್ನು ಅಲಂಕರಿಸಿ ಆ ಕೆಲಸದ ಒತ್ತಡಗಳನ್ನು ತಡೆಯಲಾರದೇ ದುಶ್ಚಟಗಳಿಗೆ ಬಲಿಯಾಗಿಯೋ ಇಲ್ಲವೋ ಖಿನ್ನತೆಗೆ ಒಳಗಾಗುತ್ತಿರುವುದು ಸಹ ಅಲ್ಪಾಯುಷ್ಯಕ್ಕೆ ಕಾರಣವಾಗಿದೆ.
ಶಿಕ್ಷಣದ ಪರಿಣಾಮ
ಹಿಂದೆ ಮಕ್ಕಳು ಆರಾಮವಾಗಿ ಐದಾರು ವರ್ಷಗಳ ಕಾಲ ಅಮ್ಮನ ಎದೆಹಾಲನ್ನು ಕುಡಿಯುತ್ತಾ, ಅಜ್ಜ, ಅಜ್ಜಿಯರ ಆಶ್ರಯದಲ್ಲಿ ವೀರಪುರುಷರ ಪೌರಾಣಿಕ ಕಥೆಗಳನ್ನು ಕೇಳುತ್ತಾ ಪ್ರಕೃತಿಯ ಮಡಿಲಲ್ಲಿ ಆಟವಾಡುತ್ತಾ ತಮ್ಮ ಬಾಲ್ಯವನ್ನು ಕಳೆಯುತ್ತಾ, ಆರಾಮವಾಗಿ 78ನೇ ವಯಸ್ಸಿನಲ್ಲಿ ಗುರುಕುಲ/ ಶಾಲೆಗೆ ಸೇರಿ ಶಿಕ್ಷಣ ಪಡೆಯುತ್ತಿದ್ದರು. ಅಂದೆಲ್ಲಾ ಶಿಕ್ಷಣ ಎನ್ನುವುದು ದೈನಂದಿನ ವ್ಯವಹಾರಕ್ಕೆ ಅವಶ್ಯಕವಿದ್ದ ಜ್ಞಾನಾರ್ಜನೆಯ ಸಾಧನವಾಗಿತ್ತೇ ಹೊರತು ಅವರೆಂದೂ ಅಂಕಗಳ ಹಿಂದೆ ಬಿದ್ದಿರಲಿಲ್ಲ. ಇನ್ನು ಮನೆ ಮತ್ತು ಸುತ್ತಮುತ್ತಲಿನ ಪರಿಸರದಲ್ಲಿಯೇ ಹಾಡು ಹಸೆ, ಸಂಗೀತ ನೃತ್ಯ, ದೇವರ ಪೂಜೆ, ಭಜನೆಗಳು ಎಲ್ಲವೂ ನಡೆಯುತ್ತಿದ್ದರಿಂದ ಆಟ ಪಾಠಗಳ ಜೊತೆಯಲ್ಲಿಯೇ ಸಂಗೀತ ಮತ್ತು ಸಾಹಿತ್ಯ ಕರಗತವಾಗುತ್ತಿತ್ತು. ಆದರೆ ಇಂದು ಮಕ್ಕಳಿಗೆ 2-3 ವರ್ಷಗಳು ಆಗುತ್ತಿದ್ದಂತೆಯೇ ಪ್ರೀನರ್ಸರಿ, ನಂತರ ನರ್ಸರಿ ಎಂದು ನಾಲ್ಕು ಗೋಡೆಗಳ ನಡುವೆ ಕಟ್ಟಿ ಹಾಕಿ, ಕೂಲಿಯವರಂತೆ ಮಣಗಟ್ಟಲೆ ಪುಸ್ತಕಗಳ ಚೀಲವನ್ನು ಹೊರುತ್ತಾ ಶಾಲೆಗೆ ಹೋಗುತ್ತಾರೆ.
ಅಲ್ಲದೆ, ತಿಂಗಳು ತಿಂಗಳು ನಡೆಸುವ ಪರೀಕ್ಷೆಗಳಲ್ಲಿ ಗರಿಷ್ಠ ಅಂಕಗಳನ್ನು ಗಳಿಸಲೇಬೇಕು ಎನ್ನುವ ಭಯದ ವಾತಾವರಣದಿಂದ ಸಣ್ಣ ವಯಸ್ಸಿನಲ್ಲಿಯೇ ಮಕ್ಕಳು ಒತ್ತಡಕ್ಕೆ ತುತ್ತಾಗುವುದಲ್ಲದೇ ಖಿನ್ನತೆಗೂ ಸಹ ಒಳಗಾಗುತ್ತಿರುವುದೂ ಅಲ್ಪಾಯುಷ್ಯಕ್ಕೆ ಕಾರಣವಾಗುತ್ತಿದೆ.
ಆಧುನಿಕ ಆಹಾರ ಪದ್ಧತಿ
ಇನ್ನು ಮಾನ ದೇಹದಲ್ಲಿನ ಟ್ರಿಲಿಯನ್ ಗಟ್ಟಲೆ ಜೀವಕೋಶಗಳಿಗೆ ವಿವಿಧ ಆಹಾರಗಳು ಮತ್ತು ಪೋಷಕಾಂಶಗಳು ಬೇಕಾಗುತ್ತವೆ. ಹಾಗಾಗಿ ಅದರ ಅವಶ್ಯಕತೆಯನ್ನು ಪೂರೈಸುವ ಸಲುವಾಗಿಯೇ ಭಾರತೀಯ ಅಡುಗೆಯಲ್ಲಿ ವಿವಿಧ ಮಸಾಲೆಗಳು ಒಳಗೊಂಡಿವೆ.
ಅವುಗಳು ಆಹಾರದಲ್ಲಿ ವೈವಿಧ್ಯತೆಯನ್ನು ಒದಗಿಸುವುದಲ್ಲದೇ, ಅದರಲ್ಲಿರುವ ಪ್ರತಿಯೊಂದು ಮಸಾಲೆಯು ಅನೇಕ ಆರೋಗ್ಯಕರ ಪ್ರಯೋಜನಗಳನ್ನು ಹೊಂದಿವೆ. ಅದರ ಜೊತೆ ವಿವಿಧ ತರಕಾರಿಗಳನ್ನು ಸೇವಿಸುವುದರ ಮೂಲಕ ಆರೋಗ್ಯಕರ ಜೀವನವನ್ನು ನಡೆಸಬಹುದಾಗಿದೆ. ಆದರೆ ಇಂದು ಅಂತಹ ಆಹಾರಕ್ಕೇ ಸಂಚಕಾರ ಉಂಟಾಗಿ ಎಲ್ಲರೂ ಜಂಕ್ಫುಡ್ ಹಿಂದೆ ಬಿದ್ದಿರುವುದೂ ಸಹ ಅಲ್ಪಾಯುಷ್ಯಕ್ಕೆ ಕಾರಣವಾಗಿದೆ.
ಆಧುನಿಕ ಕೃಷಿ ಪದ್ಧತಿ
ಬೆಳೆಯುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಅಧಿಕ ಆಹಾರವನ್ನು ಬೆಳೆಯುವ ಸಲುವಾಗಿ 1960ರ ದಶಕದಲ್ಲಿ ಭಾರತದಲ್ಲಿ ಆರಂಭಿಸಿದ ಹಸಿರು ಕ್ರಾಂತಿಯಿಂದಾಗಿ ಕೃಷಿಕರು ಅಧಿಕ ಇಳುವರಿಯನ್ನು ಪಡೆಯುತ್ತಿದ್ದರಾದರೂ, ಆ ಆಹಾರವನ್ನು ಸೇವಿಸುವವರ ಜೀವನಕ್ಕೆ ಮಾರಕವಾಗಿದೆ. ಆಧುನಿಕ ಕೃಷಿ ತಂತ್ರಜ್ಞಾನದ ಹೆಸರಿನಲ್ಲಿ ಪಾರಂಪರಿಕ ಸಾವಯವ ಕೃಷಿಯನ್ನು ಬದಿಗಿಟ್ಟು ಕೃಷಿಯನ್ನೂ ಸಹ ಕೈಗಾರಿಕಾ ವ್ಯವಸ್ಥೆಯಾಗಿ ಪರಿವರ್ತಿಸಿದೆ. ಎಗ್ಗಿಲ್ಲದೇ ಕೃತಕ ರಸಗೊಬ್ಬರ ಮತ್ತು ಕೀಟನಾಶಕಗಳ ಬಳಕೆಯಿಂದಾಗಿ ನೈಸರ್ಗಿಕವಾಗಿ ಫಲವತ್ತಾಗಿದ್ದ ಭೂಮಿಗೆ ಕೃತಕ ರಾಸಾಯನಿಕಗಳನ್ನು ಬಳಸುವ ಮೂಲಕ ಜಮೀನು ವಿಷಕಾರಿಯಾಗಿದೆ.
ಆ ವಿಷ ಆಹಾರದ ಮೂಲಕ ನೇರವಾಗಿ ಜನರ ದೇಹವನ್ನು ತಲುಪುತ್ತಿರುವ ಕಾರಣ, ಮನುಷ್ಯರ ಸಹಜ ರೋಗ ನಿರೋಧಕ ಶಕ್ತಿ ಎಲ್ಲವೂ ಮಾಯವಾಗಿ ಸಣ್ಣ ವಯಸ್ಸಿನಲ್ಲೇ ವಿವಿಧ ರೋಗಗಳಿಗೆ ತುತ್ತಾಗಿ ಅಲ್ಪಾಯುಷಿಗಳಾಗುತ್ತಿರುವುದು ನಿಜಕ್ಕೂ ದುರಾದೃಷ್ಟಕರ!
ಹೈನುಗಾರಿಕೆ
ಇನ್ನು ಹೈನುಗಾರಿಕೆಯಲ್ಲಿಯೂ ಸಹ ದೇಸೀ ಹಸುಗಳ ಬದಲು ಅಧಿಕ ಹಾಲು ಕೊಡುವ ಜರ್ಸಿ ಹಸುಗಳನ್ನು (ಹಸು ಮತ್ತು ಹಂದಿಯ ಕುಲಾಂತರಿ ತಳಿ) ಸಾಕುವ ಮೂಲಕ ಆ ಹಾಲು ಸಹ ಸಣ್ಣ ವಯಸ್ಸಿನ ಕೂಸಿನ ಆರೋಗ್ಯದ ಮೇಲೆ ಭಾರೀ ಪರಿಣಾಮವನ್ನು ಬೀರಲಾರಂಭಿಸಿದೆ. ಇನ್ನು ಸಾಂಪ್ರದಾಯಿಕ ಗಾಣದ ಎಣ್ಣೆಯ ಬದಲಾಗಿ ರೀಫೈಂಡ್ ಎಣ್ಣೆ, ಪ್ರಾಣಿಗಳ ಕೊಬ್ಬಿನಿಂದ ತಯಾರಿಸಿದ ಡಾಲ್ಡಾ ಅಲ್ಲದೇ ಕಚ್ಚಾ ಪೆಟ್ರೋಲನ್ನು ಡೀಸೆಲ್ ಮತ್ತು ಪೆಟ್ರೋಲ್ ಗಳಾಗಿ ಪರಿವರ್ತಿಸಿದೆ.
ಅದರಿಂದ ಹೊರಬರುವ ಎಣ್ಣೆಯ ರೂಪದ ಮಾರಕ ಲಿಕ್ವಿಡ್ ಪ್ಯಾರಾಫೀನ್ ಗಳಿಗೆ ಕೃತಕವಾದ ಬಣ್ಣ ಮತ್ತು ರುಚಿ ಬೆರೆಸಿ ಮಾರುವ ಎಣ್ಣೆಯ ಸೇವನೆಯಿಂದಾಗಿಯೇ ಅಧಿಕ ರಕ್ತದೊತ್ತಡ, ಮಧುಮೇಹಕ್ಕೆ ತುತ್ತಾಗುತ್ತಿದ್ದಾರೆ.
ಹೆಣ್ಣುಮಕ್ಕಳು 8-10 ವರ್ಷಗಳಿಗೇ ಋತುಮತಿಯಾಗಿ ನಂತರ ಸಣ್ಣ ವಯಸ್ಸಿಗೇ ಮುದುಕಿಯರಂತೆ ಆಗುತ್ತಿರುವುದು ಸಹ ಕಳವಳಕಾರಿಯಾಗಿದೆ.
ದೈನಂದಿನ ಬಳಕೆಗಾಗಿ ನಾವು ಬಳಸುತ್ತಿರು ಚಪ್ಪಲಿ ಮತ್ತು ಶೂಗಳು ಸಹ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ ಎಂದರೆ ಅಚ್ಚರಿಯಾಗಬಹುದು. ನಮ್ಮ ದೇಹದ ತೂಕವನ್ನು ಹೊರುವ ಕಾಲ್ಗಳಲ್ಲಿ ಇಡೀ ದೇಹದ ಎಲ್ಲಾ ಕಡೆಗೂ ಇರುವ ನರಮಂಡಲದ ಸಂಪರ್ಕವಿದ್ದು ನಮ್ಮ ಪ್ರತಿಯೊಂದು ಕಾಲ್ಬೆರಳಗಳ ಮೂಲಕ ದೇಹದ ನಾನಾ ಭಾಗಗಳ ನೋವುಗಳನ್ನು ನಿವಾರಿಸಬಹುದಾಗಿದೆ.
ಬರಿಗಾಲಿನ ನಡಿಗೆಯ ಮಹತ್ವ
ಹಿಂದಿನ ಕಾಲದ ಜನರು ಬರಿಗಾಲಿನಲ್ಲಿ ನಡೆಯುವಾಗ ಅವರ ಪಾದ ಮತ್ತು ಕಾಲ್ಬೆರಳುಗಳ ವಿವಿಧ ಕಡೆಗೆ, ಕಲ್ಲು ಮುಳ್ಳುಗಳು ಒತ್ತುವ ಮೂಲಕ ದೇಹದ ಪ್ರತಿಯೊಂದು ನರನಾಡಿಗಳೂ ಸಂವಹನಗೊಂಡು ಸಕ್ರಿಯವಾಗಿರುತ್ತಿದ್ದವು. ಅದೇ ರೀತಿಯಾಗಿ ಬರಿಗಾಲಿನ ನಡಿಗೆಯ ಮೂಲಕ ಭೂಮಿಯನ್ನು ಸ್ಪರ್ಷಿಸುವುದರಿಂದ ಬಿಳಿ ರಕ್ತ ಕಣಗಳಲ್ಲಿ ಕಡಿತ ಮತ್ತು ಕೆಂಪು ರಕ್ತ ಕಣಗಳ ಹೆಚ್ಚಳ ಆಗುವ ಮೂಲಕ ರೋಗ ನಿರೋಧಕ ಶಕ್ತಿ ಹೆಚ್ಚುತ್ತಿತ್ತು. ಅದೇ ರೀತಿ ಬರಿಗಾಲಿನ ನಡಿಗೆಯು ಉತ್ಕರ್ಷಣ ನಿರೋಧಕಗಳನ್ನು ಹೆಚ್ಚಿಸಲು, ಉರಿಯೂತವನ್ನು ಕಡಿಮೆ ಮಾಡಲು ಮತ್ತು ನಿದ್ರೆಯನ್ನು ಸುಧಾರಿಸಲಿಕ್ಕೂ ಸಹಾಯ ಮಾಡುತ್ತದೆ ಎಂದು ವೈಜ್ಞಾನಿಕವಾಗಿ ದೃಢಪಟ್ಟಿದೆ.
ಐಶಾರಾಮಿ ಜೀವನ
ದುರಾದೃಷ್ಟಶಾತ್ ಇಂದು ಮನೆಯ ಹೊರಗೆ ಬಿಡಿ, ಮನೆಯಲ್ಲೂ ಸಹ ಚಪ್ಪಲಿಗಳನ್ನು ಧರಿಸಿಕೊಂಡೇ ಓಡಾಡುವುದು ಐಶಾರಾಮ್ಯ ಎಂದು ಭಾವಿಸಿರುವುದರಿಂದಲೂ ದೇಹದ ಆರೋಗ್ಯದ ಮೇಲೆ ದುಷ್ಪರಿಣಾಮವನ್ನು ಉಂಟು ಮಾಡಿ ಅಲ್ಪಾಯುಷ್ಯಕ್ಕೆ ಕಾರಣವಾಗುತ್ತಿದೆ.
ಇನ್ನು ಕುಡಿಯಲು ಶುದ್ಧವಾಗಿದ್ದ ಹಳ್ಳ ಕೊಳ್ಳ ಮತ್ತು ನದಿಗಳಿಗೆ ಕೈಗಾರಿಕೆಗಳ ತ್ಯಾಜ್ಯ ಮತ್ತು ನಗರದ ಕೊಳಚೇ ನೀರನ್ನು ಹರಿಸುವುದರ ಮೂಲಕ ಕುಡಿಯುವ ನೀರನ್ನು ಸಹ ಹಾಳು ಮಾಡಿರುವುದು ಮತ್ತೊಂದು ಆಘಾತಕಾರಿ ಸಂಗತಿಯಾಗಿದೆ. ಸರ್ವಂ ಪ್ಲಾಸ್ಟಿಕ್ ಮಯಂ ಅದೇ ರೀತಿ ಮಣ್ಣು, ತಾಮ್ರ, ಹಿತ್ತಾಳೆ, ಪಂಚಲೋಹ ಮತ್ತು ಬೆಳ್ಳಿಯಿಂದ ಮಾಡಿದ ಲೋಹಗಳಿಂದ ಮಾಡಿದ್ದ ಪಾತ್ರೆಗಳ ಜಾಗದಲ್ಲಿ, ಬಳಸು ಮತ್ತು ಬಿಸಾಡು ಎಂಬ ರೂಪದಲ್ಲಿ ಪ್ಲಾಸ್ಟಿಕ್ ಪಾತ್ರೆಗಳ ಬಳಕೆ, ಓವನ್ ಬಳಕೆ, ಪ್ಲಾಸ್ಟಿಕ್ ಮಿಶ್ರಿತ ಪೇಪರ್ ಕಪ್, ಪ್ಲಾಸ್ಟಿಕ್ ಚಮಚ ಮುಂತಾದವುಗಳನ್ನು ಬಳಸುವ ಮೂಲಕ ಆರೋಗ್ಯವನ್ನು ಮತ್ತಷ್ಟು ಹಾಳು ಮಾಡುತ್ತಿದ್ದೇವೆ. ಹಾಗಾದರೆ ಇದಕ್ಕೆಲ್ಲಾ ಪರಿಹಾರವೇ ಇಲ್ಲವೇ? ಎಂದು ಕೇಳಿದರೆ ಖಂಡಿತವಾಗಿಯೂ ಪರಿಹಾರವಿದೆ. ಮನಸ್ಸಿದ್ದಲ್ಲಿ ಮಾರ್ಗವಿದೆ ಎಂಬಂತೆ ಪರಿಹಾರವನ್ನು ಕಂಡುಕೊಳ್ಳಲು ಮನಸ್ಸು ಮಾಡಬೇಕಷ್ಟೇ.
ಸಾವಯವ ಕೃಷಿ
ಭಾರತ ಕೃಷಿ ಪ್ರಧಾನವಾದ ದೇಶವಾಗಿದ್ದು ರೈತನೇ ಈ ದೇಶದ ಬೆನ್ನೆಲುಬಾಗಿದ್ದಾನೆ. ಹಾಗಾಗಿ ಸ್ಥಳೀಯ ಚಿಂತನೆ, ಸ್ಥಳೀಯ ಮಾರುಕಟ್ಟೆ ಮತ್ತು ದೇಶದ ಸ್ಥಳೀಯ ಆರ್ಥಿಕ ಅಭಿವೃದ್ಧಿ ಎಂಬ ಸ್ವದೇಶಿ ಪರಿಕಲ್ಪನೆಯನ್ನು ಹೆಚ್ಚು ಪ್ರಚುರಪಡಿಸಬೇಕಿದೆ.
ಆ ಮೂಲಕ ಸಾವಯವ ಕೃಷಿಗೆ ಒತ್ತು ಕೊಟ್ಟು ಕೃತಕ ರಾಸಾಯನಿಕ ಗೊಬ್ಬರಗಳಿಂದ ಬರಡಾಗಿರುವ ಭೂಮಿಯನ್ನು ಮತ್ತು ಫಲವತ್ತತೆ ಮಾಡುವ ಮೂಲಕ ಆರೋಗ್ಯಕರ ಆಹಾರವನ್ನು ಬೆಳೆಯಬಹುದಾಗಿದೆ.
ಪಾಶ್ಚಾತ್ಯ ಜೀವನಶೈಲಿ
ಸದ್ಯದ ಪಾಶ್ಚಾತ್ಯ ರೀತಿಯ ಜೀವನ ಶೈಲಿಯನ್ನು ಪಕ್ಕಕ್ಕಿಟ್ಟು ನಮ್ಮ ಪೂರ್ವಜರು ನಡೆಸಿಕೊಂಡು ಬರುತ್ತಿದ್ದ ಸ್ವದೇಶಿ ಜೀವನಶೈಲಿಯ ಉಡುಗೆ, ತೊಡುಗೆ ಆಹಾರ ಪದ್ಧತಿಯನ್ನು ಅವಳಡಿಸಿಕೊಳ್ಳುವ ಮೂಲಕ ಆರೋಗ್ಯವಾಗಿ ಇರಬಹುದಾಗಿದೆ. ಸಣ್ಣ ಪುಟ್ಟ ಖಾಯಿಲೆಗಳಿಗೂ ಆ್ಯಂಟಿಬಯಾಟಿಕ್ ಮಾತ್ರೆಗಳನ್ನು ಸೇವಿಸಿ ನಂತರ ದೇಹದ ಮೇಲಾಗುವ ಅಡ್ಡ ಪರಿಣಾಮವನ್ನು ತಡೆಯುವ ಸಲುವಾಗಿ ಮನೆಯಲ್ಲೇ ಇವರು ಸುಲಭವಾದ ಮನೆ ಮದ್ದು ಮತ್ತು ಆಯುರ್ವೇದ ಪದ್ಧತಿಯನ್ನು ಅಳವಡಿಸಿಕೊಳ್ಳುವುದು ಉತ್ತಮ ಪರಿಹಾರವಾಗಿದೆ.
ದೇಹಕ್ಕೆ ಮಾರಕಾದ ಮೈದಾ ಹಿಟ್ಟಿನಿಂದ ತಯಾರಿಸಿದ ಬೇಕರಿ ಪದಾರ್ಥಗಳು, ಹೊರಗಿನ ಸೋಡ ಹಾಕಿದ ಆಹಾರ, ಆಹಾರದ ರುಚಿಯನ್ನು ಹೆಚ್ಚಿಸಲು ಬಳಸುವ ಟೇಸ್ಟ್ ಮೇಕರ್, ಅಜಿನೋಮೋಟೋ ಮತ್ತು ಕೃತಕ ಬಣ್ಣ ಹಾಕಿದ ಚೈನೀಸ್ ಫಾಸ್ಟ್ ಫುಡ್, ಜಂಕ್ ಫುಡ್ ಮುಂತಾದವುಗಳನ್ನು ತಿನ್ನುವ ಮೂಲಕ ದೇಹದ ಕೊಬ್ಬು ಹೆಚ್ಚುತ್ತಿದೆ.
ಇದರಿಂದಾಗಿ ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ರೋಗಕ್ಕೆ ತುತ್ತಾಗುವ ಬದಲು, ಮನೆಯಲ್ಲೇ ಆಯಾಯ ಪ್ರಾಂತ್ಯಕ್ಕೆ ಅನುಗುಣವಾದ ಸಾಂಪ್ರದಾಯಿಕ ಅಡುಗೆಯನ್ನು ಸೇವಿಸುವುದು ಉತ್ತಮವಾಗಿದೆ.
ಆಧುನಿಕ ಜೀವನ ಶೈಲಿ
ಹಿಂದಿನ ಕಾಲದಲ್ಲಿ ಬಹುತೇಕರು ಸೂರ್ಯೋದಯಕ್ಕೆ ಸರಿಯಾಗಿ ಕೃಷಿ ಚಟವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದುದರಿಂದ ಬೆಳಗಿನ ಸೂರ್ಯ ಕಿರಣದಲ್ಲಿರುವ ವಿಟಮಿನ್ ಡಿ ಹೇರಳವಾಗಿ ಲಭ್ಯವಾಗುತ್ತಿತ್ತು.
ಆದರೆ ಇಂದು ಬಹುತೇಕರು ನಿಶಾಚರರ ರೀತಿಯಲ್ಲಿ ಜೀವನ ಶೈಲಿಯನ್ನು ಅಳವಡಿಸಿಕೊಂಡು ಹೊತ್ತಲ್ಲದ ಹೊತ್ತಿನಲ್ಲಿ ಮಲಗುವ ಮತ್ತು ಏಳುವ ಮೂಲಕ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಸಾಧ್ಯವಾದಷ್ಟು ಹವಾನಿಯಂತ್ರಿತ ನಾಲ್ಕು ಗೋಡೆಗಳ ಮಧ್ಯೆ ಹೆಚ್ಚಿನ ಕಾಲ ಕಳೆಯುವ ಬದಲು, ಬೆಳಗಿನ ಹೊತ್ತು ಸೂರ್ಯನ ಬೆಳಕಿನಲ್ಲಿದ್ದು, ಸದೃಢತೆ ಪಡೆಯಬಹುದಾಗಿದೆ. ಅದೇ ರೀತಿ ಜೀವ ಇದ್ದಲ್ಲಿ ಮಾತ್ರವೇ ಜೀವನ! ದೇಹ ಸದೃಢವಾಗಿದ್ದಲ್ಲಿ ಮಾತ್ರವೇ ಸದೃಢ ದೇಶ ಎಂಬುದನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಸಾಧ್ಯವಾದಷ್ಟೂ ದೇಹವನ್ನು ದಂಡಿಸುವ ಮೂಲಕ ಸದೃಢವಾಗಿ ದೀರ್ಘಾಯುಷ್ಯವನ್ನು ಪಡೆಯಬಹುದಾಗಿದೆ.
ವ್ಯಾಯಾಮದ ಮಹತ್ವ
ದೇಹ ದಂಡನೆ ಎಂದರೆ ಹಿಂದಿನ ಕಾಲದಂತೆ ಗರಡಿ ಮನೆಯಲ್ಲಿ ಕುಸ್ತಿ ಮಾಡಬೇಕು, ಭಾರ ಎತ್ತಬೇಕು, ಇಲ್ಲವೇ ಇಂದಿನ ಕಾಲದಂತೆ ಸಾವಿರಾರು ರೂಪಾಯಿ ಖರ್ಚು ಮಾಡಿ ಮಲ್ಟಿ ಜೆಮ್ ಸೇರಿಕೊಳ್ಳಬೇಕು ಎಂದೇನಿಲ್ಲ. ಸರಳವಾಗಿ ಪ್ರತಿದಿನ ಸುಮಾರು ಅರ್ಧ ಇಲ್ಲವೇ ಒಂದು ಗಂಟೆ ಬರಿಗಾಲಿನಲ್ಲಿ ನಡೆಯುವ ಅಭ್ಯಾಸವನ್ನು ಮಾಡಿದಲ್ಲಿ ದೇಹದಲ್ಲಿ ಇನ್ಸುಲಿನ್ ಹೆಚ್ಚಾಗಿ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸಿಕೊಳ್ಳಬಹುದಾಗಿದೆ. ಸುಮಾರು 1 ಕಿ.ಮೀ. ದೂರ ನಡೆದರೆ ಸರಿ ಸುಮಾರು 60-70 ಕ್ಯಾಲೋರಿಗಳನ್ನು ಸುಡುಬಹುದಾಗಿದೆ. ಈ ರೀತಿ ಒಂದು ಕಿ.ಮೀ. ದೂರ ನಡೆಯಲು ಸರಿ ಸುಮಾರು 10-15 ನಿಮಿಷಗಳಾಗುತ್ತದೆ. ಹಾಗೆ ಅಷ್ಟು ದೂರ ನಡೆಯಲು ಸಾಧ್ಯವಿಲ್ಲವಾದಲ್ಲಿ, ನಮ್ಮ ಪಾರಂಪರಿಕ ಯೋಗಾಭ್ಯಾಸ ಮಾಡುವುದು ಮತ್ತೊಂದು ಉತ್ತಮ ಪರಿಹಾರವಾಗಿದೆ. ಅದರಲ್ಲೂ ಯೋಗಬದ್ಧವಾಗಿ 12 ಅಂಕಗಳ ಒಂದು ಸಂಪೂರ್ಣ ಅಷ್ಟಾಂಗ ಸೂರ್ಯ ನಮಸ್ಕಾರವನ್ನು ಕೇವಲ 12 ನಿಮಿಷಗಳಲ್ಲಿ ಮಾಡುವುದರಿಂದ 14 ಕ್ಯಾಲೋರಿಗಳನ್ನು ಸುಡಬಹುದಾಗಿದೆ. ಈ ರೀತಿಯಾಗಿ ಸೂರ್ಯ ನಮಸ್ಕಾರ ಮಾಡುವ ಮೂಲಕ ಅತೀ ಕಡಿಮೆ ಸಮಯದಲ್ಲಿ ಅತೀ ಹೆಚ್ಚಿನ ಕ್ಯಾಲೋರಿಗಳನ್ನು ಸುಡಬಹುದಾದ ಅತ್ಯುತ್ತಮವಾದ ವ್ಯಾಯಾಮವಾಗಿ ಇರುವುದರಿಂದ ಸದೃಢ ಆರೋಗ್ಯದ ಮೂಲಕ ದೀರ್ಘಾಯುಷ್ಯವನ್ನು ಪಡೆಯಬಹುದಾಗಿದೆ.
ಇಂದಿನ ಕಾಲದಲ್ಲಿ ಅಸಾಧ್ಯ ಎನ್ನುವುದು ಯಾವುದೂ ಇಲ್ಲ. ಅಸಾಧ್ಯದಲ್ಲಿರುವ `ಅ’ ತೆಗೆದು ಹಾಕಿದಲ್ಲಿ `ಸಾಧ್ಯ’ ಎಂದಾಗುತ್ತದೆ ಹಾಗೆ ಅಸಾಧ್ಯದಿಂದ `ಅ’ ತೆಗೆದು ಹಾಕುವ ಮನಸ್ಸು ಮಾಡಬೇಕಷ್ಟೇ…… ಏನಂತೀರಿ?
– ಶ್ರೀಕಂಠ ಬಾಳಗಂಚಿ