ಹಿಂದಿನ ಕಾಲದ ತುಂಬು ಜೀವನ ಇಂದು ಬರಿಯ ಕನಸಾಗಿದೆ. ಅಲ್ಪಾಯುಷ್ಯದಲ್ಲಿಯೇ ಆಧುನಿಕರು ತೀರಿಕೊಳ್ಳುತ್ತಿರುವುದು ಇಂದಿನ ನವಯುಗದ ಶೋಚನೀಯ ಪರಿಸ್ಥಿತಿಯಾಗಿದೆ. ಇದಕ್ಕೆ ಕಾರಣ ಮತ್ತು ಪರಿಹಾರವೇನು.....?
ಶತಮಾನಂ ಭವತಿ ಶತಾಯುಃ ಪುರುಷಃ ಶತೇಂದ್ರಿಯ ಆಯುಷ್ಯೇವೇನ್ದ್ರಿಯೇಃ ಪ್ರತಿತಿಷ್ಠತಿ ಸಾಮಾನ್ಯವಾಗಿ ನಾವು ನಮ್ಮ ಹಿರಿಯರಿಗೆ ವಂದಿಸಿದಾಗ ಅವರುಗಳಿಂದ ಈ ಆಶೀರ್ವಚನವನ್ನು ಕೇಳಿರುತ್ತೇವೆ. ನಮಗೆ ಆಶೀರ್ವಾದ ಮಾಡುತ್ತಿರುವ ಆ ಹಿರಿಯರು ನಮ್ಮ ಜೀವಿತಾವಧಿಯು 100 ವಸಂತಗಳನ್ನು ಕಾಣುವಂತಾಗಲೀ ಎಂದಷ್ಟೇ ಹೇಳದೇ ಆ ಜೀವಿತಾವಧಿಯಲ್ಲಿ ನಮ್ಮ ಇಂದ್ರೀಯಗಳೆಲ್ಲ ಸಂಪೂರ್ಣವಾಗಿ ಕಾರ್ಯನಿರ್ವಹಿಸುವ ಮೂಲಕ ಸುಖವಾದ ಜೀವನವನ್ನು ನಡೆಸುವಂತಾಗಲಿ ಎಂದು ಹಾರೈಸುತ್ತಾರೆ. ತಲ ತಲಾಂತರಗಳಿಂದಲೂ ಈ ರೀತಿಯ ಆಶೀರ್ವಚನ ಮತ್ತು ಸುಂದರವಾದ ಆಹಾರ ಪದ್ಧತಿಯ ಜೊತೆಗೆ ಆರೋಗ್ಯಕರ ಜೀವನ ಶೈಲಿಗಳಿಂದಲೇ ನಮ್ಮ ಪೂರ್ವಜರ ಸರಾಸರಿ ಆಯುಸ್ಸು 100-120 ಇರುತ್ತಿದ್ದುದನ್ನು ನಾವು ಕೇಳಿದ್ದೇವೆ ಮತ್ತು ಇಂದಿಗೂ ಕೆಲವು ಬೆರಳೆಣಿಕೆಯ ಶತಾಯುಷಿಗಳನ್ನು ನೋಡುತ್ತಿದ್ದೇವೆ.
ಆದರೆ ಇತ್ತೀಚಿನ ದಿನಗಳಲ್ಲಿ ಹಲವರಿಗೆ 30-40 ವರ್ಷದೊಳಗೇ ನಾನಾ ರೀತಿಯ ಖಾಯಿಲೆ, ಖಿನ್ನತೆಗಳಿಗೆ ಒಳಗಾಗಿ ಅಲ್ಪಾಯುಷಿಗಳಾಗಿಯೇ ಹೋಗುತ್ತಿರುವುದು ನಿಜಕ್ಕೂ ಅಚ್ಚರಿಯ ಮತ್ತು ಬೇಸರದ ಸಂಗತಿಯಾಗಿದೆ.
ಪೂರ್ವಜರ ಆರೋಗ್ಯ
ಅಂದು ನಮ್ಮ ಪೂರ್ವಜರಿಗೆ ಯಾವುದೇ ಖಾಯಿಲೆ ಮತ್ತು ಕಸಾಲೆಗಳು ಇಲ್ಲದೇ ಶತಾಯುಷಿಗಳಾಗಿ ಐದಾರು ತಲೆಮಾರುಗಳನ್ನು ನೋಡುತ್ತಿದ್ದರೆ, ಇಂದು ಇಷ್ಟೆಲ್ಲಾ ಆಧುನಿಕ ವೈದ್ಯಕೀಯ ಸೌಲಭ್ಯಗಳು ಇದ್ದರೂ ಮೂರನೇ ತಲಮಾರನ್ನೂ ಸಹ ನೋಡಲಾಗದಂತಹ ಅಲ್ಪಾಯುಷಿಗಳು ಹೆಚ್ಚುತ್ತಿರುವುದಕ್ಕೆ ಕಾರಣವಾದರೂ ಏನು? ಹೀಗೆ ಹುಡುಕಿದಲ್ಲಿ ಥಟ್ ಅಂತ ಮನಸ್ಸಿಗೆ ಬರುವುದೇ ಅನಗತ್ಯ ಒತ್ತಡ, ಬದಲಾದ ಜೀವನ ಶೈಲಿ, ಆಹಾರ ಪದ್ಧತಿ, ದೇಹವನ್ನು ದಂಡಿಸದೇ ಇರುವುದೇ ಕಾರಣ ಎನ್ನುವುದು ಸ್ಪಷ್ಟವಾಗಿ ಗೋಚರಿಸುತ್ತದೆ.
ಕೌಟುಂಬಿಕ ಜೀವನ
ಹಿಂದೆ ಅವಿಭಕ್ತ ಕುಟುಂಬಗಳಿದ್ದವು, ಮನೆಯಲ್ಲಿ ಎಲ್ಲರೂ ಇದ್ದುದರಲ್ಲಿ ಕಷ್ಟ ಸುಖ ಎಲ್ಲವನ್ನೂ ಹಂಚಿಕೊಂಡು ಸಂತೋಷದಿಂದ ಜೀವಿಸುತ್ತಿದ್ದರು. ಅದೇ ರೀತಿ ಹಿಂದೆ ಎಲ್ಲರ ಮನೆಗಳು ಚಿಕ್ಕದಿರುತ್ತಿದ್ದವಾದರೂ ಮನಸ್ಸು ಮಾತ್ರ ದೊಡ್ಡದಾಗಿರುತ್ತಿತ್ತು. ಆದರೆ ಇಂದು ಬಹುತೇಕ ಮನೆಗಳು ದೊಡ್ಡದಾಗಿರುತ್ತಾದರೂ, ಮನಸ್ಸುಗಳು ಸಂಕುಚಿತವಾಗುತ್ತಿರುವುದು ಆಯುಸ್ಸಿನ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಹಿಂದೆ ಬದುಕುವುದಕ್ಕೆ ಎಷ್ಟು ಬೇಕೋ ಅಷ್ಟಕ್ಕೆ ಮಾತ್ರ ದುಡಿಯುತ್ತಿದ್ದರು ಮತ್ತು ಆಹಾರವನ್ನು ಸೇವಿಸುತ್ತಿದ್ದರು. ಆದರೆ ಇಂದು ತನಗೂ ಇರಲಿ ತನ್ನ ಮೂರ್ನಾಲ್ಕು ತಲೆಮಾರಿಗೂ ಇರಲಿ ಎಂದು ಸಿಕ್ಕಾಪಟ್ಟೆ ದುಡಿಯಲು ಹೋಗಿ ಸಣ್ಣ ವಯಸ್ಸಿನಲ್ಲಿಯೇ ದೊಡ್ಡ ಮೊತ್ತದ ದೊಡ್ಡ ಜವಾಬ್ದಾರಿಯ ಹುದ್ದೆಗಳನ್ನು ಅಲಂಕರಿಸಿ ಆ ಕೆಲಸದ ಒತ್ತಡಗಳನ್ನು ತಡೆಯಲಾರದೇ ದುಶ್ಚಟಗಳಿಗೆ ಬಲಿಯಾಗಿಯೋ ಇಲ್ಲವೋ ಖಿನ್ನತೆಗೆ ಒಳಗಾಗುತ್ತಿರುವುದು ಸಹ ಅಲ್ಪಾಯುಷ್ಯಕ್ಕೆ ಕಾರಣವಾಗಿದೆ.
ಶಿಕ್ಷಣದ ಪರಿಣಾಮ
ಹಿಂದೆ ಮಕ್ಕಳು ಆರಾಮವಾಗಿ ಐದಾರು ವರ್ಷಗಳ ಕಾಲ ಅಮ್ಮನ ಎದೆಹಾಲನ್ನು ಕುಡಿಯುತ್ತಾ, ಅಜ್ಜ, ಅಜ್ಜಿಯರ ಆಶ್ರಯದಲ್ಲಿ ವೀರಪುರುಷರ ಪೌರಾಣಿಕ ಕಥೆಗಳನ್ನು ಕೇಳುತ್ತಾ ಪ್ರಕೃತಿಯ ಮಡಿಲಲ್ಲಿ ಆಟವಾಡುತ್ತಾ ತಮ್ಮ ಬಾಲ್ಯವನ್ನು ಕಳೆಯುತ್ತಾ, ಆರಾಮವಾಗಿ 78ನೇ ವಯಸ್ಸಿನಲ್ಲಿ ಗುರುಕುಲ/ ಶಾಲೆಗೆ ಸೇರಿ ಶಿಕ್ಷಣ ಪಡೆಯುತ್ತಿದ್ದರು. ಅಂದೆಲ್ಲಾ ಶಿಕ್ಷಣ ಎನ್ನುವುದು ದೈನಂದಿನ ವ್ಯವಹಾರಕ್ಕೆ ಅವಶ್ಯಕವಿದ್ದ ಜ್ಞಾನಾರ್ಜನೆಯ ಸಾಧನವಾಗಿತ್ತೇ ಹೊರತು ಅವರೆಂದೂ ಅಂಕಗಳ ಹಿಂದೆ ಬಿದ್ದಿರಲಿಲ್ಲ. ಇನ್ನು ಮನೆ ಮತ್ತು ಸುತ್ತಮುತ್ತಲಿನ ಪರಿಸರದಲ್ಲಿಯೇ ಹಾಡು ಹಸೆ, ಸಂಗೀತ ನೃತ್ಯ, ದೇವರ ಪೂಜೆ, ಭಜನೆಗಳು ಎಲ್ಲವೂ ನಡೆಯುತ್ತಿದ್ದರಿಂದ ಆಟ ಪಾಠಗಳ ಜೊತೆಯಲ್ಲಿಯೇ ಸಂಗೀತ ಮತ್ತು ಸಾಹಿತ್ಯ ಕರಗತವಾಗುತ್ತಿತ್ತು. ಆದರೆ ಇಂದು ಮಕ್ಕಳಿಗೆ 2-3 ವರ್ಷಗಳು ಆಗುತ್ತಿದ್ದಂತೆಯೇ ಪ್ರೀನರ್ಸರಿ, ನಂತರ ನರ್ಸರಿ ಎಂದು ನಾಲ್ಕು ಗೋಡೆಗಳ ನಡುವೆ ಕಟ್ಟಿ ಹಾಕಿ, ಕೂಲಿಯವರಂತೆ ಮಣಗಟ್ಟಲೆ ಪುಸ್ತಕಗಳ ಚೀಲವನ್ನು ಹೊರುತ್ತಾ ಶಾಲೆಗೆ ಹೋಗುತ್ತಾರೆ.