ಹೊಸದಾಗಿ ಮದುವೆಯಾದ ದಂಪತಿಗೆ, ಹುಡುಗನ ತಾಯಿ ತಂದೆಯರೇ ಅವರ ಪ್ರೈವೆಸಿಗೆ ಧಕ್ಕೆ ಬಾರದಿರಲೆಂದು ಬೇರೆ ವಾಸಿಸಲು ಹೊಸ ಮನೆ ಕೊಡಿಸಿದರು. ಅದನ್ನು ಮತ್ತಷ್ಟು ಅಂದಗೊಳಿಸಲು, ನವ ದಂಪತಿ ತಮ್ಮ ಸಂಪಾದನೆ ಪೂರ್ತಿ ಸುರಿದರು. ಈ ಮಧ್ಯೆ ಅತ್ತೆ ನಡುನಡುವೆ ಮಗನ ಮನೆಗೆ ಬಂದು, ಗೃಹಕೃತ್ಯಗಳಲ್ಲಿ ಮೂಗು ತೂರಿಸುತ್ತಾ, ಇದು ಹೀಗೇಕೆ, ಅದು ಹಾಗೇಕೆ ಎಂದು ದಬಾಯಿಸ ತೊಡಗಿದರು. ಕರೆಗಂಟೆ ಒತ್ತಿದಾಗ ಮನೆಯ ಆಳು ಕದ ತೆರೆಯಲು ತಡ ಮಾಡಿದಳೆಂದು, ಅವಳನ್ನು ಬದಲಾಯಿಸಲು ಹುನ್ನಾರ ನಡೆಸಿದರು. ಅಡುಗೆಯವಳು ಮಸಾಲಾ ಟೀ ಬದಲು ಗ್ರೀನ್‌ ಟೀ ಕೊಟ್ಟಳೆಂದು ಅವಳನ್ನೂ ಓಡಿಸುವುದೇ?

ಇಷ್ಟು ಮಾತ್ರವಲ್ಲದೇ, ಆಕೆ ಮಗನ ಹೊಸ ಸಂಸಾರವನ್ನು ಒಂದಾಗಿಸುವ ಬದಲು ಮುರಿಯಲು ಮುಂದಾದರು. ಇದೇ ಕೆಲಸವನ್ನು ನಮ್ಮ ಕೇಂದ್ರ ಸರ್ಕಾರ ನಿಯುಕ್ತ ರಾಜ್ಯಪಾಲರುಗಳು BJP ಆಡಳಿತವಿಲ್ಲದ ರಾಜ್ಯಗಳಲ್ಲೂ ನಡೆಸುತ್ತಿದ್ದಾರೆ.

ದೆಹಲಿಯಲ್ಲಂತೂ ಇದು ಭಯಂಕರ ರೂಪ ತಾಳಿ, ಒಬ್ಬರಾದ ಮೇಲೆ ಒಬ್ಬರಂತೆ ರಾಜ್ಯಪಾಲರನ್ನು ಬದಲಾಯಿಸುತ್ತಿದೆ. 7ಕ್ಕೆ 7  ಸಂಸತ್ತಿನ ಸೀಟುಗಳನ್ನು ಗೆದ್ದರೂ, ಮೊದಲು 2 ಸಲ ಅದು ವಿಧಾನಸಭೆ ಹಾಗೂ ದೆಹಲಿ ನಗರ ನಿಗಮ ಚುನಾವಣೆಗಳಲ್ಲಿ ಅರವಿಂದ್‌ ಕೇಜ್ರಿವಾಲ್‌ರ ನಿಂದ ಸೋತಿದ್ದನ್ನು ಮರೆಯಬಾರದು. ಹೀಗಾಗಿಯೇ ಅದು ಮೇಲೆ ಹೇಳಲಾದ ಅತ್ತೆಯಂತೆ ವ್ಯವಹರಿಸುತ್ತಿದೆ, ಕಾರಣ…. ಮಗ ತಾನು ಮೆಚ್ಚಿದ ಹುಡುಗಿಯನ್ನು ಮದುವೆ ಆದನೇ ಹೊರತು ತಾಯಿ ಆರಿಸಿದವಳನ್ನಲ್ಲ!

ಈ ರೀತಿ ಸದಾ ಕಾಟ ಕೊಡುವ ಹಕ್ಕು ಸಹಜವಾಗಿಯೇ ಬೆರೆತುಹೋಗಿದೆ. ಏಕೆಂದರೆ ಪುರಾಣಗಳಲ್ಲಿ ಹೇಳಿರುವಂತೆ ಇದ್ದಕ್ಕಿದ್ದಂತೆ ರಾಜನ ಒಡ್ಡೋಗಲಕ್ಕೆ ನುಗ್ಗಿ ಬರುವ ಋಷಿಗಳು, ರಾಜನ ಕಿವಿ ಹಿಂಡಿ ತಮಗೆ ಬೇಕಾದ ಕೆಲಸ ಮಾಡಿಸಿಕೊಳ್ಳುತ್ತಿದ್ದರು, BJP ಇದಕ್ಕೆ ಹೊರತಲ್ಲ.

ನರಸಿಂಹಾವತಾರದಲ್ಲಿ ಮಹಾವಿಷ್ಣು ಹಿರಣ್ಯಕಶಿಪುವನ್ನು ಅಕಾರಣವಾಗಿಯೇ ಸಂಹರಿಸಿದ. ಯಾವುದೇ ಕಾರಣವಿಲ್ಲದೆ ಕೃಷ್ಣನು ಪಾಂಡವ ಕೌರವರ ಮಧ್ಯೆ ಭೇದಭಾವ ತೋರಿ, ಕೌರವರ ವಿನಾಶಕ್ಕೆ ಕಾರಣನಾದ. ತಾಟಕಿ ಸುಬಾಹುರಂಥ ರಾಕ್ಷಸ ಸಂಹಾರಕ್ಕಾಗಿ ವಿಶ್ವಾಮಿತ್ರನು ರಾಮ ಲಕ್ಷ್ಮಣರ ಸಹಾಯ ಕೋರಿದ್ದೇಕೆ? ಇಡೀ ರಾಮಾಯಣದಲ್ಲಿ ಇಂಥದೇ ಋಷಿಗಳು ಅಯೋಧ್ಯೆಯ ಆಡಳಿತದಲ್ಲಿ ಸತತ ವಿಘ್ನ ಉಂಟು ಮಾಡುತ್ತಲೇ ಇದ್ದರು.

ಈ ಋಷಿಗಳು ಬೇಕೆಂದೇ ಎಲ್ಲಾ ಕಾಲದ ರಾಜರನ್ನೂ ತಮ್ಮ ಬೆರಳ ತುದಿಯಲ್ಲೇ ಕುಣಿಸಿದ್ದಾರೆ. ಇದೇ ತರಹ ಕೇಂದ್ರ ಸರ್ಕಾರ BJP ಆಡಳಿತವಿಲ್ಲದ ತಮಿಳುನಾಡು, ಪ.ಬಂಗಾಳ, ಕೇರಳ, ದೆಹಲಿ, ಛತ್ತೀಸ್‌ ಗಢ, ಝಾರ್ಖಂಡ್‌ ರಾಜ್ಯಗಳಲ್ಲಿ ರಾಜ್ಯಪಾಲರನ್ನು ನೇಮಿಸಿ ಕುಣಿಸುತ್ತಿದೆ!

ಪೌರಾಣಿಕ ಋಷಿಗಳ ಈ ಮೂಗು ತೂರಿಸುವಿಕೆಯಿಂದ ಅಂದಿನ ರಾಜರು ಅವರ ಶಾಪಕ್ಕೆ ಹೆದರಿ, ಅವರ ಮಾತುಗಳನ್ನು ಪರಿಪಾಲಿಸುತ್ತಿದ್ದಂತೆ. ಇದೇ ಋಷಿಬುದ್ಧಿಯ ಅತ್ತೆಯವರು ಮಗನ ಮನೆಯನ್ನು ನರಕವಾಗಿಸುತ್ತಿದ್ದಾರೆ. ಸಾಮಾನ್ಯವಾಗಿ ಈ ಅತ್ತೆಯರು ಯಾರೋ ಸಾಧುಸಂತರುಗಳ ಭಕ್ತೆಯರಾಗಿದ್ದು, ಸದಾಕಾಲ ಅವರ ಸೇವೆಗೆ ತೊಡಗಿರುತ್ತಾರೆ. ಆ ಸಾಧು ಸಂತರ ಆದೇಶ ಪರಿಪಾಲಿಸಲು ಈ ಅತ್ತೆಯರು ಆಧುನಿಕ ಸೊಸೆಯರನ್ನು ಗೋಳಾಡಿಸುತ್ತಾರೆ.

ಕೇಂದ್ರ ಸರ್ಕಾರ ತನ್ನ ಕೆಲಸದಿಂದಾಗಿ ಕೇವಲ ಗೃಹಕೃತ್ಯ ನಡೆಸುವ ಗೃಹಿಣಿ ಅಥವಾ ಅವಳ ಆರ್ಥಿಕ ಸ್ಥಿತಿ ಸಶಕ್ತಗೊಳಿಸಲು ಹೋರಾಟ ನಡೆಸುತ್ತಿದೆ ಎಂದು ಭಾವಿಸುವಿರಾ? ಖಂಡಿತಾ ಇಲ್ಲ! ಏಕೆಂದರೆ ಪ್ರತಿಯೊಂದು ಜೀವದ ತೀರ್ಪು ಇಂದು ಹಿಂದಿನ ಪುರಾಣದ ಋಷಿಗಳಂತೆ ಆಲೋಚಿಸುವವರ ಕೈಯಲ್ಲಿ ಸಿಕ್ಕಿಹಾಕಿಕೊಂಡಿದೆ. ರಾಜ್ಯಾಡಳಿತದಲ್ಲಿ ರಾಜ್ಯಪಾಲರುಗಳ ಮೂಗು ತೂರಿಸುವಿಕೆ, ಕೇಂದ್ರ ಸರ್ಕಾರದ ದುರಾಡಳಿತ, ಬುಲ್ಡೋಝರ್‌ ನೀತಿ, ಬೇಕೆಂದೇ ಹಿಂದೂ ಮುಸ್ಲಿಂ ವಿವಾದ…. ಇತ್ಯಾದಿಗಳ ಎಲ್ಲಾ ದುಷ್ಪರಿಣಾಮಗಳೂ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಎಲ್ಲಾ ಮನೆಗಳ, ಗೃಹಿಣಿಯರ ಮೇಲೂ ಆಗುತ್ತಿದೆ.

ವಿಡಂಬನೆ ಎಂದರೆ, ನಮ್ಮಲ್ಲಿ ಹೆಂಗಸರು ಮತದಾನದಲ್ಲಿ ಸಹಭಾಗಿಗಳಾದರೂ, ಪುರಾಣತತ್ವ ಆದರಿಸುವ ಪಕ್ಷವನ್ನೇ ಗೆಲ್ಲಿಸುತ್ತಿರುವುದು! ಈ ರಾಜಕೀಯ ನಮಗೆ ಬೇಕಿಲ್ಲ, ಗಂಡ ಹೇಳಿದಂತೆ ವೋಟ್‌ ಹಾಕಿದರಾಯ್ತು ಅಂದುಕೊಳ್ಳುತ್ತಾರೆ. ಈ ಕಂದಾಚಾರದ ಸ್ವಾತಂತ್ರ್ಯವನ್ನು ವೋಟಿನ ದಾನವಾಗಿ ನೀಡುತ್ತಿದ್ದಾರೆ, ಇದೇ ಹೆಂಗಸರನ್ನು ಅಸಹಾಯಕರನ್ನಾಗಿಸುತ್ತಿದೆ.

ರಾಜ್ಯಪಾಲರುಗಳ ಒಂದೇ ಹಠ ಎಂದರೆ, ನಾವು ಹೇಳಿದಂತೆ ಆಡಳಿತ ನಡೆಸಿ, ಇಲ್ಲದಿದ್ದರೆ ನಿಮ್ಮ ಕೆಲಸಗಳು ಮುಂದುವರಿಯದಂತೆ ಹಿಂಸಿಸುತ್ತೇವೆ ಅಂತ. ಈ ಬಗೆಯ ಯೋಚನೆ ಪ್ರಧಾನಮಂತ್ರಿಯ ಕಾರ್ಯಾಲಯದಿಂದ ಶುರುವಾಗಿ, ಸರ್ಕಾರದ ಎಲ್ಲಾ ವಿಭಾಗಗಳಲ್ಲೂ ನುಸುಳಿ, ಮನೆ ಮನೆ ತಲುಪಿ ಗೃಹಿಣಿಯರನ್ನು ಹಿಂಸಿಸುತ್ತಿದೆ. ಕ್ರಾಂತಿ ಮಾಡುವ, ವಿರೋಧಿಸುವ, ತಂತಮ್ಮ ಸ್ವಾಭಿಮಾನ, ಆತ್ಮವಿಶ್ವಾಸಗಳನ್ನು ಉಳಿಸಿಕೊಳ್ಳುವ ಹಕ್ಕು ಪ್ರತಿ ಸೊಸೆಗೂ ಇದೆಯೋ ಇಲ್ಲವೋ? ಪ್ರಜಾಪ್ರಭುತ್ವದಲ್ಲಿ ವಿರೋಧ ಪಕ್ಷಗಳಿಗೆ ಸರ್ಕಾರವನ್ನು ಖಂಡಿಸುವ ಹಕ್ಕು ಇದೆಯೋ ಇಲ್ಲವೋ?

Sas-BAHU-Feb2-23-1

ಹೀಗಾದರೆ ಮನೆಯ ಸೂರು ಕುಸಿದೀತು!

ಫುಡ್‌ಹೋಂ ಡೆಲಿವರಿ ಸರ್ವೀಸ್‌ ಸ್ವಿಗ್ಗಿಯ ಈ ವರ್ಷದ ನಷ್ಟ 3,629 ಕೋಟಿ ರೂ. ಮೀರಿದ್ದು, ಇದರ ಜೊತೆ ಕೆಲಸ ಮಾಡುತ್ತಿರುವ ಝೊಮ್ಯಾಟೋ ಸಹ ಭಾರಿ ನಷ್ಟದಲ್ಲಿದೆ. ಅದು ಯಾವುದೋ ಖಾಸಗಿ ಹಣಕಾಸು ಸಂಸ್ಥೆಯಿಂದ 550 ಕೋಟಿ ರೂ. ಸಾಲ ಪಡೆದಿದೆ. ಸ್ವಿಗ್ಗಿಗೆ ಕಳೆದ ವರ್ಷ 1,617 ಕೋಟಿ ರೂ.ಗಳ ನಷ್ಟವಾಗಿತ್ತು. ಆದರೂ ಅದರ ಆಡಳಿತ ಮಂಡಳಿ ಧಡಧಡ ಹಣ ಖರ್ಚು ಮಾಡುತ್ತಲೇ ಇತ್ತು. ಇದೀಗ ಈ ಲಾಸ್‌ ದುಪ್ಪಟ್ಟು ಹೆಚ್ಚಿದೆ.

ಸ್ವಿಗ್ಗಿಯ ಡೆಲಿವರಿಯಿಂದ ಅಡುಗೆ ತಂಟೆ ತಪ್ಪಿತೆಂದು ಹಿಗ್ಗುವ ಗ್ರಾಹಕರು, ಇಂದಲ್ಲ ನಾಳೆ ತಾವೇ ಆ ನಷ್ಟ ಭರಿಸಬೇಕಾದೀತೆಂದು ಮರೆಯುತ್ತಿದ್ದಾರೆ. ಇಂಥ ಯಾವುದೇ ಆ್ಯಪ್‌ ಬೇಸ್ಡ್ ಸೇವೆಗಳಿರಲಿ, ಅವು ಫ್ರೀ ಅಥವಾ ಅಗ್ಗವಾಗಿ ನೀಡುತ್ತಾ ಮೊದಲ ಕೆಲವು ವರ್ಷ ಹೇಗೋ ಕುಂಟುತ್ತಾ ಸಾಗುತ್ತವೆ. ಆದರೆ ಅವು ಒಮ್ಮೆ ಇಡೀ ಮಾರ್ಕೆಟ್‌ ನ್ನು ಕೈವಶ ಪಡಿಸಿಕೊಂಡಿವೆ, ಬಾಯಿಗೆ ಬಂದಂತೆ ಗ್ರಾಹಕರ ರಕ್ತ ಹೀರುತ್ತವೆ.

ಇದೀಗ ಸ್ವಿಗ್ಗಿ ನಿಧಾನವಾಗಿ ಸಣ್ಣಪುಟ್ಟ ಹೋಟೆಲ್ ‌ಗಳ ವ್ಯಾಪಾರ ಹಾಳು ಮಾಡುತ್ತಿದೆ. ಅದು ಕ್ಲೌಡ್‌ ಕಿಚನ್‌ ಗಳಿಂದ ಕೆಲಸ ತೂಗಿಸುತ್ತಿದೆ. ಅದು ಡೆಲಿವರಿ ಬಾಯ್ಸ್ ಗೆ ಷರತ್ತು ಒಡ್ಡಿ, ಮನ ಬಂದಂತೆ ದುಡಿಸಿಕೊಳ್ಳುತ್ತಿದೆ. ಯಾವ ಹೋಟೆಲ್ ‌ಈ ಸ್ವಿಗ್ಗಿ ಸರಣಿಯಡಿಗೆ ಬರುವುದಿಲ್ಲವೇ, ಅದು ಕಾಲಕ್ರಮೇಣ ಕಣ್ಮರೆ ಆಗುತ್ತಿದೆ. ಆ ಹೋಟೆಲ್ ‌ನ ಸೇವೆ, ವ್ಯಂಜನ ರುಚಿ ಉತ್ತಮವಾಗಿ ಇದ್ದರೂ ಈ ಗತಿ ತಪ್ಪದು.

ಸ್ವಿಗ್ಗಿಯಂಥ ಗೃಹಿಣಿಯರು ಅಡುಗೆಮನೆಗೆ ಹೋಗುವುದೇ ಬೇಡ ಎಂಬ ನಶೆ ಹತ್ತಿಸಿವೆ. ಇದಕ್ಕಾಗಿ 1 ವರ್ಷಕ್ಕೆ 3,600 ಕೋಟಿ. ರೂ.ಗಳ ಖರ್ಚಿನ ಆಮಿಷ ಒಡ್ಡುತ್ತಿದೆ. ಗೃಹಿಣಿಯರು ಹೀಗೆ ಕ್ರಮೇಣ ಅಡುಗೆಮನೆ ಎಂದರೆ ಮುಖ ಸಿಂಡರಿಸತೊಡಗಿದರೆ, ಸ್ವಿಗ್ಗಿ ಯಾ ಅಂಥ ಕಂಪನಿಗಳು ಏನು ಬೇಯಿಸಿ ಬಡಿಯುತ್ತೇವೋ ಅದನ್ನೇ ಉಣ್ಣ ಬೇಕಾದ ಅನಿವಾರ್ಯತೆ ಒದಗುತ್ತದೆ. ಮನೆಗಳಿಂದ ಒರಳು ಒನಕೆ ಮಾಯಾದಂತೆ ಮುಂದೊಂದು ದಿನ ಅಡುಗೆಮನೆಯೂ ಕಣ್ಮರೆ ಅಂದರೆ ಆಶ್ಚರ್ಯವಿಲ್ಲ. ಆಗ ಈ ಆ್ಯಪ್‌ ಗಳೇ ಗತಿ!

ಅಮೆಝಾನ್‌, ಜಿಯೋ ಭಾರಿ ನಷ್ಟ ಅನುಭವಿಸುತ್ತಿದ್ದರೂ ಹೇಗೆ ಸಣ್ಣಪುಟ್ಟ ಪ್ರಾವಿಷನ್‌ ಸ್ಟೋರ್‌ ಗಳನ್ನು ಇನ್ನಿಲ್ಲದಂತೆ ಮಾಡಿವೆಯೋ, ಹಾಗೆಯೇ ಸ್ವಿಗ್ಗಿ ಜನರ ಬಾಯಿ ರುಚಿ ಕೆಡಿಸಿಟ್ಟಿದೆ. ಮನೆಯ ಹೆಂಗಸರು ಮಾಡುವ ಅಡುಗೆ ಬಿಟ್ಟು, ಇವರು ಡೆಲಿವರಿ ಮಾಡಿದ್ದನ್ನೇ ತಿನ್ನುವ ಕರ್ಮ ಎಲ್ಲರದಾಗಿದೆ. ಇದರಲ್ಲಿ  ಮನೆಯವರ ಪ್ರೀತಿ ವಾತ್ಸಲ್ಯ ಹೇಗೆ ಬೆರೆತಿರಲು ಸಾಧ್ಯ? ಯಾವಾಗ ಹೆಂಗಸರ ಈ ಪ್ರೀತಿ ವಾತ್ಸಲ್ಯ ಬೇಡ ಎಂದಾಗುತ್ತದೋ, ಆಗ ಸಹಜವಾಗಿಯೇ ಮನೆಯ ಸೂರು ಕುಸಿಯತೊಡಗುತ್ತವೆ! ಇದು ದೊಡ್ಡ ದೊಡ್ಡ ಕಾರ್ಪೋರೇಶನ್‌ ಗಳಿಗೆ ಸರಿ ಹೋದೀತು. ಕಳೆದ ಎಷ್ಟೋ ದಶಕಗಳವರೆಗೆ ರಾಜ, ಧರ್ಮದ ಗುತ್ತಿಗೆದಾರರು ಮನೆಗಳಿಂದ ಗಂಡಸರನ್ನು ರಣರಂಗಕ್ಕೆ ಓಡಿಸುತ್ತಿದ್ದಂತೆ, ಇಂದಿನ ಸ್ವಿಗ್ಗಿ ದುಡಿಯುವ ಪತಿಪತ್ನಿಯರ ಹಣವನ್ನು ಹೀಗೆ ಕೊಳ್ಳೆ ಹೊಡೆಯುತ್ತಿವೆ.

ಅಂದಿನ ಕಾಲದ ಗಂಡಸರು ಹಾಗೆ ಹೋದ ಮೇಲೆ, ಹೆಂಗಸರು ಬಲು ಅಸಹಾಯಕರಾಗಿ ಕೇವಲ ಮಕ್ಕಳು ಹೆರುವ ಯಂತ್ರಗಳಾಗಿ ಉಳಿಯುತ್ತಿದ್ದರು. ಇಂದಿನ ಆಧುನಿಕ ಹೆಂಗಸರನ್ನು ಇಂಥ ಕಾರ್ಪೋರೇಶನ್‌ ಗಳು ಟಾರ್ಗೆಟ್‌ ಮಾಡಿಕೊಂಡು, ಅವರಿಂದ ಅಡುಗೆಮನೆ ಬೇರ್ಪಡಿಸಿವೆ. ಅಂದಿನ ಗಂಡಸರು ರಣರಂಗದ ಯಾವುದೋ ಮೂಲೆಯಲ್ಲಿ ಗಂಡಸರೇ ಬೇಯಿಸುತ್ತಿದ್ದ ಆಹಾರ ತಿಂದು ಹೇಗೋ ಬದುಕಿಕೊಳ್ಳುತ್ತಿದ್ದರು. ಇಂದಿನವರಿಗೆ ಸ್ವಿಗ್ಗಿಯೂ ಇದೇ ಗತಿ ತಂದಿದೆ. ನಕಲಿ, ಆಡಂಬರ, ಎಂಥದೋ ಮಾದಕ ರುಚಿ, ಸುವಾಸನೆ ತುಂಬಿಸಿಕೊಂಡ ಈ ವ್ಯಂಜನಗಳಲ್ಲಿ ಅಗ್ಗದ ಸಾಮಗ್ರಿ ತುಂಬಿದ್ದರೂ ಪ್ಯಾಕಿಂಗ್‌ ಬೊಂಬಾಟ್ ಆಗಿರುತ್ತದೆ. ಇಲ್ಲಿ ಬೆಲೆ ಕುರಿತು ಆಕ್ಷೇಪಿಸಿದಿರೋ, ನಿಮಗೆ ಊಟವೇ ಇಲ್ಲ.

ಭಾರತದಲ್ಲಿ ಈ ಸಲ ಹೊಸ ವರ್ಷದ ಮೊದಲ ದಿನವೇ ಸ್ವಿಗ್ಗಿ 13 ಲಕ್ಷಕ್ಕೂ ಹೆಚ್ಚಿನ ಆರ್ಡರ್ಸ್‌ ಡೆಲಿವರಿ ಮಾಡಿದೆ! ಏಕೆಂದರೆ ಅಷ್ಟೂ ಮನೆಗಳ ಹೆಂಗಸರು ಆ ದಿನ ಅಡುಗೆ ಮಾಡಲಿಲ್ಲವೇ ಎಂದಿದ್ದರು. ಇಂಥ ಡೆಲಿವರಿ ಸಕಾಲಕ್ಕೆ ಒದಗಿದ್ದು ಹೇಗೆ? ಸ್ವಿಗ್ಗಿಯ ಗುಲಾಮಿ ಹುಡುಗರು, ಭಾರಿ ಟ್ರಾಫಿಕ್‌ ನಲ್ಲೂ ಮನೆ ಮನೆಗೆ ಬಿಸಿಯೂಟ ಒದಗಿಸುವುದೇ ಇವರ ಗುರಿ. ಇಂಥವರಿಗೆ ವರ್ಷದಲ್ಲಿ ಯಾವ ಹಬ್ಬ ತಾನೇ ಇದ್ದೀತು?

3,600 ಕೋಟಿ ರೂ.ಗಳ ಖರ್ಚು ಇಂಥ ಭಾರಿ ಜನತೆಯನ್ನು ಮನೆಗಳಲ್ಲಿ ಅಡುಗೆ ಮಾಡಿಸದೆ ಕೂರಿಸಲು ಖರ್ಚಾಗಿದೆ, ಹುಡುಗರು ಡೆಲಿವರಿ ಮಾಡಲು ಗುಲಾಮರಾಗಿದ್ದಾರೆ. ಇದರ ಲಾಭ ಯಾರಿಗೆ ಹೋಗುತ್ತಿದೆಯೋ ಏನೋ? ಅದು ನಿಮಗೆ ತಿಳಿಯದಿರಬಹುದು.

ವೋಟು ನೋಟಿನ ಪ್ರಕರಣಕ್ಕೆ ಸಂಬಂಧಿಸಿದ್ದಲ್ಲ

ಜನತೆಯ ಹಿತಕ್ಕಾಗಿ ಜನರ ವೋಟಿನಿಂದ ಗೆದ್ದು ಬಂದ ಸರ್ಕಾರಗಳೇ ರಚಿಸಿರುವ ಕಾನೂನು ಪಾಲಿಸುವ ಕೋರ್ಟುಗಳು, ಜನಹಿತದ ವ್ಯಾಖ್ಯೆ ಮಾಡುತ್ತಾ ಕೆಲಸ ನಿರ್ವಹಿಸುತ್ತವೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ.

ನಮ್ಮ ಸರ್ಕಾರಗಳ ಬಳಿ ಮಂದಿರ ಕಟ್ಟಿಸುವ, ಜನತೆಯ ಗುತ್ತಿಗೆದಾರಿ ನಡೆಸುವ ಕೆಲಸ ಬಿಟ್ಟರೆ ಬೇರೇನಿಲ್ಲ ಎಂಬುದನ್ನು ಕೋರ್ಟ್‌ ಗಳು ಸಾಬೀತುಪಡಿಸಿವೆ. ಎರಡೂ ಕಡೆ ಜನತೆಯ ಪ್ರಾಣ ಹೀರಿ ಹಣ ವಸೂಲು ಮಾಡಲಾಗುತ್ತಿದೆ. ಸಾಮಾನ್ಯ ಜನತೆಯ ದುಃಖ ನೋವಿನ ಗೊಡವೆ ಸರ್ಕಾರಕ್ಕೆ ಎಲ್ಲಿಂದ ಬರಬೇಕು? ಅದು ತೆರಿಗೆ, ವೋಟು, ಧರ್ಮ ಯಾವುದೇ ಆಗಬಹುದು.

ಚೆನ್ನೈನ ಹೈಕೋರ್ಟ್‌ ಒಂದು ಉತ್ತಮ ತೀರ್ಪಿನಲ್ಲಿ ಹೇಳಿದ್ದೆಂದರೆ, ಒಬ್ಬ ಮುಸ್ಲಿಂ ಹೆಣ್ಣಿಗೆ ಮುಕ್ತ ರಿವಾಜಿನ ಪ್ರಕಾರ ತಲಾಖ್ ಪಡೆಯುವ ಪೂರ್ಣ ಹಕ್ಕಿದೆ, ಆದರೆ ಇದರ ಸರ್ಟಿಫಿಕೇಟ್‌ ನ್ನು ಯಾರೇ 4 ಮಂದಿ ಜಮಾತ್‌ ಮಾಡಿ ಸಲ್ಲಿಸಲಾಗದು. ಇದುವರೆಗೆ ಮಾನ್ಯ `ಕೋರ್ಟ್‌’ ಇಂಥ ಸರ್ಟಿಫಿಕೇಟ್‌ ನೀಡುತ್ತಿತ್ತು. ಅದನ್ನು ಹೇಗೆ ಮಾಡಲಾಗುತ್ತಿತ್ತು, ಅದರ ತರ್ಕವಿತರ್ಕಗಳೇನು…. ಇತ್ಯಾದಿಗಳ ರೆಕಾರ್ಡ್‌ ಅಲ್ಲೇ ಮಾಡಲಾಗುತ್ತಿರಲಿಲ್ಲ. ಆಗ ಹೈಕೋರ್ಟ್‌ ಹೇಳಿದ್ದೆಂದರೆ, ಹೆಂಗಸರು ಫ್ಯಾಮಿಲಿ ಕೋರ್ಟುಗಳಿಗೆ ಹೋಗಿ ತಮ್ಮ ಸರ್ಟಿಫಿಕೇಟ್‌ ಪಡೆಯಬಹುದು, ಅಲ್ಲಿಯೇ ಅವರ ಖಾವಂದರಿಗೂ ಇದನ್ನು ತಿಳಿಸಲಾಗುತ್ತದೆ.

ಇದೇ ತರಹ ಸೇನೆಯಲ್ಲಿ ಅಡಲ್ಟ್ರಿ ಅಂದ್ರೆ ಪತಿ ಪತ್ನಿಯರಲ್ಲಿ ಒಬ್ಬರು ಅನೈತಿಕ ಸಂಬಂಧ ಹೊಂದಿದ್ದರೆ, ಪ್ರಕಾರ ಸೇನೆ ನಡೆಯುತ್ತದೆ. ಇದು ಅತಿ ಅಗತ್ಯ ಹೌದು, ಏಕೆಂದರೆ ತಿಂಗಳಾನುಗಟ್ಟಿ ಸೈನಿಕರು ಮನೆಗಳಿಂದ ದೂರವಿರುತ್ತಾರೆ, ಅವರಿಗೆ ಆಗಾಗ ಪತ್ನಿ ಹಾದಿ ತಪ್ಪಿದ್ದಾಳೆ ಎಂಬಂಥ ಸುದ್ದಿ ಬರುತ್ತಿರುತ್ತದೆ.

ಇದೇ ತರಹ ಪತ್ನಿಯಿಂದ ದೂರ ಇರುವ ಸೈನಿಕರು, ತಾವಿರುವ ಕಡೆಯೇ ಯಾವುದೋ ಹೆಣ್ಣಿನ ಜೊತೆ ಅನೈತಿಕ ಸಂಬಂಧ ಇರಿಸಿಕೊಂಡರೆ ಏನು ಗತಿ ಎಂದು ಅವರ ಪತ್ನಿಯರೂ ಕೊರಗುತ್ತಿರುತ್ತಾರೆ.

ಬಹುಶಃ ಅಪರಾಧ ಮಾಡಿದ ಭಾವ ಇಬ್ಬರನ್ನೂ ಕಂಟ್ರೋಲ್ ನಲ್ಲಿ ಇರಿಸಬಹುದು. ಮನೆಯ, ಕೌಟುಂಬಿಕ ಚಿಂತೆ ಅಂಟಿಸಿಕೊಳ್ಳದೆ ಸೈನಿಕ ಗಡಿ ಹೋರಾಟದಲ್ಲಿ ನಿರತನಾಗಿರುವುದು ದೇಶದ ದೃಷ್ಟಿಯಿಂದ ಕ್ಷೇಮ.

ಕೇಂದ್ರ ಸರ್ಕಾರ ಮುಸ್ಲಿಂ ಕಾನೂನಿನಲ್ಲಿ 3 ಬಾರಿ ತಲಾಖ್‌ ಹೇಳಿಸುವುದನ್ನು ನಿಲ್ಲಿಸುವುದಾಗಿ ಘೋಷಣೆ ಮಾಡುತ್ತಲೇ ಇರುತ್ತದೆ. ಆದರೆ ಇದೇ ಸರ್ಕಾರಕ್ಕೆ ಲಕ್ಷಾಂತರ ಮಂದಿ ಹಿಂದೂ ಹೆಂಗಸರು ವಿಚ್ಛೇದನಕ್ಕಾಗಿ ಚಪ್ಪಲಿ ಸವೆಸುತ್ತಾ ಕೋರ್ಟಿಗೆ ಅಲೆದಾಡುತ್ತಿರುವುದರ ಗೊಡವೇ ಇಲ್ಲವೇ ಇಲ್ಲ.

ಪತಿಪತ್ನಿಯರಲ್ಲಿ ಯಾರೇ ಆಗಲಿ 1 ನಿಮಿಷ ಮಾಡಿದ ತಪ್ಪಿಗಾಗಿ, ವಿಚ್ಛೇದನ ಕೋರಿ ಮುಂದುವರಿದರೆ ಎಷ್ಟೋ ವರ್ಷ ಕೋರ್ಟಿಗೆ ಅಲೆದಾಡಬೇಕಾಗುತ್ತದೆ. ಪುರೋಹಿತರ ಸಮ್ಮುಖದಲ್ಲಿ ಕ್ಷಣ ಮಾತ್ರದಲ್ಲಿ ಹಿಂದೂ ಮದುವೆಗಳು ಸಿಂಧು ಆಗಬಹುದಾದರೆ, ವಿಚ್ಛೇದನಕ್ಕಾಗಿ ವರ್ಷಗಟ್ಟಿ ಅಲೆದಾಡಬೇಕೇಕೆ? ಆದರೆ ಹಿಂದೂ ಹೆಂಗಸರು ಪಾತಿವ್ರತ್ಯ, ಧರ್ಮಕರ್ಮ, ಜನ್ಮಾಂತರಗಳನ್ನು ನಂಬುವವಳಾದರೆ, ಆ ವಿಚಾರ ಬೇರೆ. ಬದಲಿಗೆ ವಿಚ್ಛೇದನ ಪಡೆಯಬೇಕೆಂದು ಹೋರಾಡುವವರ ಬದುಕು, ಕತ್ತಿ ಅಲುಗಿಗೆ ಕತ್ತು ಕೊಟ್ಟಂತೆಯೇ! ಸರ್ಕಾರ ಇಂಥವರಿಗೆ ವಿಚ್ಛೇದನ ಕೊಡಿಸುವಲ್ಲಿ ಅಣು ಅಣುವಾಗಿ ಶಿಕ್ಷಿಸುತ್ತಾ, ಎಳೆದಾಡುತ್ತದೆ. ವಿಚ್ಛೇದನದ ಈ ಕಾನೂನು ಕಟ್ಟಳೆಗಳನ್ನು ಬದಲಾಯಿಸಿ ಇಂಥವರಿಗೆ ಸಹಕರಿಸಲು ಸರ್ಕಾರಕ್ಕೆ ಕಿಂಚಿತ್ತೂ ಮನಸ್ಸಿಲ್ಲ. ಏಕೆಂದರೆ ಈ ಪ್ರಕರಣ ವೋಟುನೋಟಿಗೆ ಸಂಬಂಧಿಸಿದ್ದೇ ಅಲ್ಲ! ಚೆನ್ನೈ ಹೈಕೋರ್ಟ್‌ ಮಾಡಿದ್ದು ಸರಿಯೋ ತಪ್ಪೋ ಈಗಲೇ ಹೇಳಲಾದೀತೇ?

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ