ಸಾಮಾನ್ಯವಾಗಿ ಜನರಿಗೆ ಅನಿಸುವ ಒಂದು ಸಂಗತಿಯೆಂದರೆ, ದೈಹಿಕವಾಗಿ ಸಕ್ರಿಯವಾಗಿ ಇರುವುದರ ಮೂಲಕ ನಾವು ಆರೋಗ್ಯವಾಗಿ ಇರಬಹುದು ಎಂದು. ಆದರೆ ವಾಸ್ತವ ಸಂಗತಿ ಏನೆಂದರೆ, ಆರೋಗ್ಯಕರ ದೇಹಕ್ಕೆ ದೈಹಿಕವಾಗಿ ಸಕ್ರಿಯವಾಗಿರುವುದರ ಜೊತೆ ಜೊತೆಗೆ ಪೋಷಕಾಂಶವುಳ್ಳ ಹಾಗೂ ಸಮತೋಲಿತ ಆಹಾರ ಸೇವನೆ ಕೂಡ ಮುಖ್ಯ. ಸಮತೋಲಿತ ಆಹಾರ ನಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಪ್ರಬಲಗೊಳಿಸುತ್ತದೆ. ಅದು ಯಾವುದೇ ವಯಸ್ಸಿನಲ್ಲಿ ರೋಗಗಳಿಂದ ಮೇಲೇಳಲು ನಮಗೆ ನೆರವಾಗುತ್ತದೆ. ಒಂದು ವೇಳೆ ನಾವು ಸಮತೋಲಿತ ಆಹಾರ ಸೇವನೆ ಮಾಡದಿದ್ದರೆ ಹಲವು ರೋಗಗಳ ಅಪಾಯ ಹೆಚ್ಚುತ್ತದೆ. ಅದರಲ್ಲಿ ಕೊರೋನಾ ಸೋಂಕು ಕೂಡ ಸೇರಿದೆ. ಅದರಿಂದ ರಕ್ಷಿಸಿಕೊಳ್ಳಲು ನಮ್ಮ ಆಹಾರ ಪೌಷ್ಟಿಕಾಂಶವುಳ್ಳದ್ದು ಹಾಗೂ ಸಮತೋಲಿತ ಆಗಿರಬೇಕಾದುದು ಅತ್ಯವಶ್ಯ. ನಮ್ಮ ದೇಹಕ್ಕೆ ಪರಿಪೂರ್ಣ ಪೋಷಣೆ ದೊರೆಯುವಂತಹ ಯಾವುದೇ ಒಂದು ನಿರ್ದಿಷ್ಟ ಆಹಾರವಿಲ್ಲ. ಅದಕ್ಕಾಗಿ ಹಲವು ಆಹಾರಗಳಿದ್ದು, ಅವನ್ನು ನಮ್ಮ ಆಹಾರದಲ್ಲಿ ಸೇರ್ಪಡೆ ಮಾಡಿಕೊಳ್ಳಬೇಕು.
ನಾವೀಗ ನಿಮಗೆ ಎಂತಹ ಕೆಲವು ವಿಶೇಷ ಪದಾರ್ಥಗಳ ಬಗ್ಗೆ ಹೇಳುತ್ತಿದ್ದೇವೆಂದರೆ, ಅವುಗಳ ಸೇವನೆಯಿಂದ ನಮ್ಮ ದೇಹಕ್ಕೆ ಕೇವಲ ಪೋಷಣೆ ಮಾತ್ರ ದೊರಕುವುದಿಲ್ಲ. ಅದರಿಂದ ನಾವು ಆರೋಗ್ಯದಿಂದಲೂ ಇರಬಹುದು.
ಸಮತೋಲನದಿಂದ ಕೂಡಿದ ಆಹಾರದಲ್ಲಿ ಯಾವುದು ಎಷ್ಟು ಪ್ರಮಾಣದಲ್ಲಿ ಇರುತ್ತದೆ ಎಂಬುದನ್ನು ಗಮನಿಸಿ.
ಪ್ರೋಟೀನ್ : ಇದು ನಮ್ಮ ದೇಹದ ಮಾಂಸಖಂಡಗಳನ್ನು ಬಲಿಷ್ಠಗೊಳಿಸುತ್ತದೆ. ಹಾಲು ಹಾಗೂ ಹಾಲಿನಿಂದ ತಯಾರಿಸಿದ ಪದಾರ್ಥಗಳಲ್ಲಿ ಪ್ರೋಟೀನ್ ಹೇರಳವಾಗಿರುತ್ತದೆ. ಅದರ ಹೊರತಾಗಿ ಬೇಳೆಕಾಳುಗಳು, ಮೀನು, ಮೊಟ್ಟೆ, ಬಟಾಣಿ, ಶೇಂಗಾಕಾಳು ಹಾಗೂ ಚಿಕನ್ ನಲ್ಲೂ ಪ್ರೋಟೀನ್ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ. ಒಬ್ಬ ವ್ಯಕ್ತಿಗೆ ಒಂದು ದಿನಕ್ಕೆ 56 ಗ್ರಾಂನಷ್ಟು ಪ್ರೋಟೀನ್ ಅವಶ್ಯಕತೆ ಇರುತ್ತದೆ.
ಕಾರ್ಬನ್ಸ್ : ಕಾರ್ಬೋಹೈಡ್ರೇಟ್ಸ್ ನಮ್ಮ ದೇಹಕ್ಕೆ ಶಕ್ತಿ ಕೊಡುವ ಕೆಲಸ ಮಾಡುತ್ತವೆ. ಅದರಲ್ಲಿ ಒಳ್ಳೆಯ ಕಾರ್ಬನ್ಸ್ ಹಾಗೂ ಕೆಟ್ಟ ಕಾರ್ಬನ್ಸ್ ಎಂದು ವರ್ಗೀಕರಣ ಮಾಡಲಾಗುತ್ತದೆ. ಒಳ್ಳೆಯ ಕಾರ್ಬೋಹೈಡ್ರೇಟ್ಸ್ ನಲ್ಲಿ ಬ್ರೌನ್ ರೈಸ್, ಕಡಿಮೆ ಫ್ಯಾಟ್ ಇರುವ ಹಾಲು, ಬಾಳೆಹಣ್ಣು, ಗೋದಿ, ಸಜ್ಜೆ, ಓಟ್ಸ್ ನುಚ್ಚು, ಜೋಳ ಮುಂತಾದವು. ಒಬ್ಬ ವ್ಯಕ್ತಿಗೆ 225-325 ಗ್ರಾಮ್ ನಷ್ಟು ಕಾರ್ಬನ್ಸ್ ನ ಅಗತ್ಯವಿದೆ.
ಫ್ಯಾಟ್ : ಒಂದು ಸಮತೋಲನ ಆಹಾರದಲ್ಲಿ ಫ್ಯಾಟ್ ಇರುವುದು ಅತ್ಯವಶ್ಯ. ಆದರೆ ಟ್ರಾನ್ಸ್ ಫ್ಯಾಟ್ ನ ಸೇವನೆ ನಿಮ್ಮ ಆರೋಗ್ಯಕ್ಕೆ ಹಾನಿಯನ್ನುಂಟು ಮಾಡಬಹುದು. ಫ್ಯಾಟ್ ನಲ್ಲಿ ಮೋನೋ ಸ್ಯಾಚ್ಯುರೇಟೆಡ್ ಫ್ಯಾಟ್ ಮತ್ತು ಫಾಲಿ ಅನ್ ಸ್ಯಾಚುರೇಟೆಡ್ ಫ್ಯಾಟ್ ರೋಗ ನಿರೋಧಕ ಶಕ್ತಿಯನ್ನು ಪ್ರಬಲಗೊಳಿಸಿ ಮೂಳೆಗಳನ್ನು ಗಟ್ಟಿಗೊಳಿಸುತ್ತದೆ. ಶೇಂಗಾಕಾಳು, ಸೂರ್ಯಕಾಂತಿ, ಎಳ್ಳು, ಸಾಸುವೆ ಮತ್ತು ಮೀನಿನ ಎಣ್ಣೆಯಲ್ಲಿ ಆರೋಗ್ಯಕರ ಫ್ಯಾಟ್ ಕಂಡುಬರುತ್ತದೆ. ಪ್ರತಿದಿನ 472 ಗ್ರಾಂನಷ್ಟು ಫ್ಯಾಟ್ ಸೇವನೆ ಮಾಡಬೇಕು.
ವಿಟಮಿನ್ : ಹಲವು ಬಗೆಯ ವಿಟಮಿನ್ ಗಳಿದ್ದು, ಅವುಗಳಿಂದ ಬೇರೆಬೇರೆ ಬಗೆಯ ಲಾಭಗಳು ದೊರಕುತ್ತವೆ. ಹಸಿರು ಸೊಪ್ಪುಗಳು, ಹಾಲು, ಹಾಲು ಉತ್ಪನ್ನಗಳು, ಕ್ಯಾರೆಟ್, ಮೆಂತ್ಯ, ಕಲ್ಲಂಗಡಿ, ಪಪ್ಪಾಯಿ, ಸೇಬು ಹಣ್ಣುಗಳಲ್ಲಿ ವಿಟಮಿನ್ `ಎ’ ಹೇರಳವಾಗಿರುತ್ತದೆ. ಪಾಲಕ್, ಹಸಿರು ಸೊಪ್ಪುಗಳು ಮತ್ತು ಸೋಯಾಬೀನ್ ಎಣ್ಣೆಯಲ್ಲಿ ವಿಟಮಿನ್ `ಕೆ’ ಹೇರಳವಾಗಿರುತ್ತದೆ. ಬೀನ್ಸ್, ನಟ್ಸ್, ಮೊಟ್ಟೆ ಮತ್ತು ಆಲೂಗಡ್ಡೆಯಲ್ಲಿ ವಿಟಮಿನ್ ಬಿ12 ಕಂಡುಬರುತ್ತದೆ. ಮೀನು, ಹಾಲು, ಪನೀರ್ ನಲ್ಲಿ ವಿಟಮಿನ್ `ಡಿ’ ಜಾಸ್ತಿ ಇರುತ್ತದೆ. ಇದರ ಹೊರತು ಸೂರ್ಯನ ಬಿಸಿಲು ಕೂಡ `ಡಿ’ ವಿಟಮಿನ್ ನ ಉತ್ಕೃಷ್ಟ ಮೂಲವಾಗಿರುತ್ತದೆ. ಕಿತ್ತಳೆ, ನಿಂಬೆ, ನೆಲ್ಲಿಕಾಯಿ, ದ್ರಾಕ್ಷಿ, ಹಲಸು, ಪುದೀನಾ, ಟೊಮೇಟೊ, ಸೀಬೆ ಮತ್ತು ಪಾಲಕ್ ನಲ್ಲಿ `ಸಿ’ ವಿಟಮಿನ್ ಇರುತ್ತದೆ. ಒಂದು ದಿನಕ್ಕೆ 40 ಮಿಲಿ ಗ್ರಾಂನಷ್ಟು ವಿಟಮಿನ್ `ಸಿ’ಯ ಅವಶ್ಯಕತೆ ಇರುತ್ತದೆ.
ಕ್ಯಾಲ್ಶಿಯಂ : ಇದು ಮೂಳೆಗಳ ಆರೋಗ್ಯಕ್ಕೆ ಅತ್ಯವಶ್ಯ. ಹಾಲು, ಮೊಸರು, ಪನೀರ್, ತುಪ್ಪ, ಚೀಸ್, ಮಜ್ಜಿಗೆ, ಹಸಿರು ಸೊಪ್ಪು ಮತ್ತು ಹಣ್ಣುಗಳಲ್ಲಿ ಕ್ಯಾಲ್ಶಿಯಂ ಹೆಚ್ಚಿಗೆ ಇರುತ್ತದೆ. ಒಂದ ದಿನಕ್ಕೆ 1000-1200 ಮಿಲಿ ಗ್ರಾಂ ಕ್ಯಾಲ್ಶಿಯಂ ಸೇವಿಸಬೇಕು.
ಫೈಬರ್ : ನಾರಿನಂಶವುಳ್ಳ ಆಹಾರ ಪಚನ ಕ್ರಿಯೆಗೆ ಅತ್ಯವಶ್ಯ. ತರಕಾರಿಗಳು, ಬ್ರೌನ್ ಬ್ರೆಡ್, ಬೇಳೆ, ಹಣ್ಣು, ಗೋದಿಹಿಟ್ಟು, ಒಣಹಣ್ಣುಗಳು, ಓಟ್ಸ್, ಬಟಾಣಿ, ಮೆಕ್ಕೆಜೋಳ ಮುಂತಾದವುಗಳಲ್ಲಿ ನಾರಿನಂಶ ಹೇರಳವಾಗಿರುತ್ತದೆ. ಪ್ರತಿದಿನ 25-30 ಗ್ರಾಂನಷ್ಟು ನಾರಿನಂಶ ಸೇವಿಸಬೇಕು.
ಮಿನರಲ್ಸ್ : ಅಯೋಡಿನ್, ಕಬ್ಬಿಣಾಂಶ, ಕ್ಯಾಲ್ಶಿಯಂ ಹಾಗೂ ಪೊಟ್ಯಾಶಿಯಂ ಮಹತ್ವದ ಮಿನರಲ್ಸ್ ಆಗಿವೆ. ಬಾಳೆಹಣ್ಣು, ಟೊಮೇಟೊ, ಆಲೂಗಡ್ಡೆ, ಬೀಟ್ ರೂಟ್, ಹಸಿರು ಸೊಪ್ಪುಗಳು, ಹುಳಿಹಣ್ಣುಗಳು, ಕಡಿಮೆ ಫ್ಯಾಟ್ ಇರುವ ಹಾಲು, ಮೊಸರು, ಮೊಟ್ಟೆ, ಗೋಡಂಬಿ, ಬಾದಾಮಿ, ಸೇಬು, ಉಪ್ಪು ಇವುಗಳಲ್ಲಿ ಮಿನರಲ್ಸ್ ಹೆಚ್ಚಿಗೆ ಇರುತ್ತದೆ. ಒಂದು ದಿನಕ್ಕೆ 2000 ಮಿಲಿಗ್ರಾಂ ಪೊಟ್ಯಾಶಿಯಂ, 1300-1500 ಮಿಲಿ ಗ್ರಾಂ ಸೋಡಿಯಂ, 8-12 ಮಿಲಿ ಗ್ರಾಂ ಕಬ್ಬಿಣಾಂಶ ಹಾಗೂ 10-12 ಮಿಲಿಗ್ರಾಂ ಮೆಗ್ನಿಶಿಯಂ ಸೇವಿಸಬೇಕು.
ಯಾವುದರಿಂದ ರೋಗಮುಕ್ತಿ ಸಾಧ್ಯ?
ಕ್ಯಾನ್ಸರ್ : ಇಂತಹ ಸ್ಥಿತಿಯಲ್ಲಿ ಅರಿಶಿನದ ಸೇವನೆ ಉಪಯುಕ್ತ. ಅದರಲ್ಲಿ ಹಲವು ಔಷಧೀಯ ಗುಣಗಳಿರುತ್ತವೆ. ಅವು ಕ್ಯಾನ್ಸರ್ ನೊಂದಿಗೆ ಹೋರಾಡಲು ಸಹಾಯಕವಾಗಿವೆ. ಕ್ಯಾನ್ಸರ್ ರೋಗಿ ಪ್ರತಿದಿನ 500-1000 ಮಿಲಿ ಗ್ರಾಂ ಅರಿಶಿನದ ಸೇವನೆ ಮಾಡಬೇಕು.
ಆಹಾರದಲ್ಲಿ ರುಚಿಗೆ ತಕ್ಕಂತೆ ಅರಿಶಿನ ಬೆರೆಸಬೇಕು. ಅರಿಶಿನಯುಕ್ತ ಹಾಲು, ಉಪ್ಪಿನಕಾಯಿ ಮುಂತಾದವುಗಳನ್ನು ಸೇವಿಸಬೇಕು. ಅರಿಶಿನ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅದರಿಂದ ಕೊರೋನಾದಂತಹ ರೋಗಗಳೊಂದಿಗೆ ಹೋರಾಡಲು ಸಾಧ್ಯವಾಗುತ್ತದೆ.
ಆಸ್ಟಿಯೋಪೊರೊಸಿಸ್ : ಈ ತೊಂದರೆಯಲ್ಲಿ ಮೂಳೆಗಳು ದುರ್ಬಲಗೊಳ್ಳುತ್ತವೆ. ಅದರಿಂದ ಫ್ರಾಕ್ಚರ್ ನ ಸಾಧ್ಯತೆ ಹೆಚ್ಚಾಗುತ್ತದೆ. ಅಂತಹ ರೋಗಿಗಳು ಕ್ಯಾಲ್ಶಿಯಂನ್ನು ಸೇವಿಸಬೇಕು. ಆಸ್ಟಿಯೊಪೊರೊಸಿಸ್ ರೋಗಿಗಳು ಒಂದು ದಿನಕ್ಕೆ 1000-1800 ಮಿಲಿಗ್ರಾಂ ಕ್ಯಾಲ್ಶಿಯಂನ ಕೊರತೆಯನ್ನು ಪೂರ್ತಿಗೊಳಿಸಿಕೊಳ್ಳಬಹುದು. ಇದರ ಹೊರತಾಗಿ ಪ್ರತಿದಿನ ಮುಂಜಾನೆ ಅರ್ಧಗಂಟೆ ಬಿಸಿಲಿನ ಸ್ಪರ್ಶ ದೇಹಕ್ಕೆ ತಾಗುವಂತೆ ಮಾಡಬೇಕು. ಅದರಿಂದ ಮೂಳೆಗಳು ಗಟ್ಟಿಯಾಗುತ್ತವೆ.
ಉಸಿರಾಟಕ್ಕೆ ಸಂಬಂಧಿಸಿದ ಸಮಸ್ಯೆಗಳು : ಇಂತಹ ಸ್ಥಿತಿಯಲ್ಲಿ ವಿಟಮಿನ್ `ಸಿ’ಯ ಸೇವನೆ ಹೆಚ್ಚಿಸಬೇಕು. ಅದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ ಸೋಂಕಿನೊಂದಿಗೆ ಹೋರಾಡಲು ಸಹಾಯಕವಾಗಿದೆ. 1000 ಮಿಲಿಗ್ರಾಂ ವಿಟಮಿನ್ `ಸಿ’ಯ ಸೇವನೆ ಅತ್ಯವಶ್ಯಕ. ಅದಕ್ಕಾಗಿ ಪ್ರತಿದಿನ ಮೂಸಂಬಿ, ಪಾಲಕ್, ನೆಲ್ಲಿಕಾಯಿ, ಟೊಮೇಟೊ, ಸೀಬೆಹಣ್ಣು, ಹಾಲು ಸೇವನೆ ಮಾಡಿ ಅದರ ಕೊರತೆಯನ್ನು ನೀಗಿಸಿಕೊಳ್ಳಬೇಕು.
ಹೃದ್ರೋಗ : ಈ ಸಮಸ್ಯೆಯಿಂದ ಬಳಲುತ್ತಿರುವವರು ಬೆಳ್ಳುಳ್ಳಿ ಸೇವನೆ ಮಾಡಲು ಸಲಹೆ ನೀಡಲಾಗುತ್ತದೆ. ಅದು ರೋಗನಿರೋಧಕ ಶಕ್ತಿಯನ್ನು ಬಲಿಷ್ಠಗೊಳಿಸಿ ರೋಗಗಳೊಂದಿಗೆ ಹೋರಾಡುವಲ್ಲಿ ಸಹಾಯ ಮಾಡುತ್ತದೆ. ಅದನ್ನು ನಿಮ್ಮ ಆಹಾರದಲ್ಲಿ ಸೇರ್ಪಡೆ ಮಾಡಿಕೊಳ್ಳುವುದರ ಹೊರತಾಗಿ ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿಯ ಎರಡು ಎಸಳುಗಳನ್ನು ನೀರಿನೊಂದಿಗೆ ಸೇವಿಸಬೇಕು.
ಶೀತನೆಗಡಿ : ಬದಲಾಗುತ್ತಿರುವ ಹವಾಮಾನದಲ್ಲಿ ಕೆಮ್ಮು, ನೆಗಡಿ ಬರುವುದು ಸಾಮಾನ್ಯ. ಇಂತಹ ಸಮಯದಲ್ಲಿ ತುಳಸಿ ಹಾಗೂ ಶುಂಠಿ ಸೇವಿಸಲು ಹೇಳಲಾಗುತ್ತದೆ. ಅದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ ಹಾಗೂ ಶೀತನೆಗಡಿ ಬಹುಬೇಗ ನಿವಾರಣೆ ಆಗುತ್ತದೆ. ಮುಂಜಾನೆ ಖಾಲಿ ಹೊಟ್ಟೆಯಲ್ಲಿ ತುಳಸಿಯ 5 ಎಲೆಗಳನ್ನು ತಿನ್ನಿ. ಅದರ ಹೊರತಾಗಿ ತುಳಸಿ, ಹಸಿಶುಂಠಿಯ ಕಷಾಯ ಕೂಡ ಬಹಳಷ್ಟು ನಿರಾಳತೆ ದೊರಕಿಸಿಕೊಡುತ್ತದೆ.
– ಡಾ. ನಿರ್ಮಲಾ