ಪ್ರೌಢಳಾದ ತಾಯಿಗೆ ಮುಂದೆ ಸಂತಾನದ ಆಸರೆಯ ಅಗತ್ಯ ಖಂಡಿತಾ ಬೇಕಾಗುತ್ತದೆ. ನೀವು ಒಬ್ಬಳೇ ಮಗಳಾದರೆ ಇದನ್ನು ಹೇಗೆ ನಿಭಾಯಿಸುವಿರಿ……?

ಇತ್ತೀಚೆಗೆ ಜನರ ಸರಾಸರಿ ಆಯುಸ್ಸು ಹೆಚ್ಚಿದೆ ಎಂದೇ ಹೇಳಬೇಕು. ನಮ್ಮ ದೇಶದಲ್ಲಿ ವೃದ್ಧರ ಸಂಖ್ಯೆ 1911 ರಿಂದ ಸತತ ಏರುತ್ತಲೇ ಇದೆ. 2023ರ ಹೊತ್ತಿಗೆ ಇವರ ಜನಸಂಖ್ಯೆ 14.1 ಕೋಟಿಗೆ ಹತ್ತಿರವಿದೆ. ಮುಂದಿನ 10 ವರ್ಷಗಳಲ್ಲಿ ಈ ಸಂಖ್ಯೆ 20.23 ಕೋಟಿ ದಾಟಿದರೆ ಆಶ್ಚರ್ಯವಿಲ್ಲ! `ನ್ಯಾಶನಲ್ ಸ್ಟಾಟಿಕ್ಸ್ ಆಫೀಸ್‌’ನ ಒಂದು ಸಂಶೋಧನೆ ಇದನ್ನು ದೃಢಪಡಿಸಿದೆ. ಇದರಿಂದ ಹೆಚ್ಚು ಸಮಸ್ಯೆಗಳಾ ನೀವು ಗಮನಿಸಿದರೆ ಈಗೆಲ್ಲ ಎಲ್ಲರ ಮನೆಯಲ್ಲೂ ಒಂದೇ ಸಂತಾನ ಮಗನೋ ಮಗಳೋ ಇರುತ್ತಾರೆ. 2-3 ಮಕ್ಕಳಾದರೆ ಅವರ ಪಾಲನೆ ಪೋಷಣೆ, ವ್ಯಾಸಂಗ ಇತ್ಯಾದಿಗಳ ಟೆನ್ಶನ್‌ ನಿಂದಾಗಿ ಎಲ್ಲರೂ ಒಂದೇ ಮಗು ಸಾಕು ಎಂದುಕೊಳ್ಳುತ್ತಾರೆ.

ಇಷ್ಟು ಮಾತ್ರವಲ್ಲ, ಗೃಹಿಣಿ ಉದ್ಯೊಗಸ್ಥೆ ಹಾಗೂ ವಿಭಕ್ತ ಕುಟುಂಬ ಆಗಿರುವುದರಿಂದಲೂ ದಂಪತಿಗಳು ಒಂದೇ ಸಂತಾನ ಸಾಕು ಎಂದು ನಿರ್ಧರಿಸುತ್ತಾರೆ. ಅದೇ ಮಗ/ಮಗಳು ದೊಡ್ಡವರಾಗಿ ಇವರು ಪ್ರೌಢರಾದಂತೆ ಸಮಸ್ಯೆ ಬೇರೊಂದು ತಿರುವು ಪಡೆಯುತ್ತದೆ.

ತಮ್ಮ ಈ ಪ್ರೌಢಾವಸ್ಥೆಯಲ್ಲಿ ಮಕ್ಕಳ ಆಸರೆ ಬೇಕೆಂದು ಅವರು ಅಪೇಕ್ಷಿಸುವುದು ಅತಿ ಸಹಜ. ಆದರೆ ಈ ಹಿರಿಯರನ್ನು ನೋಡಿಕೊಳ್ಳಲು ಮನೆಯಲ್ಲಿ ಯಾರಾದರೂ ಉಳಿದಿದ್ದರೆ ತಾನೇ? ಮಗ ಇಂಗ್ಲೆಂಡ್‌, ಮಗಳು ಅಮೆರಿಕಾ, ಆಸ್ಟ್ರೇಲಿಯಾ ಎಂದು ಸೆಟಲ್ ಆಗಿರುವ ಕುಟುಂಬಗಳೇ ಇಂದು ಎಲ್ಲೆಲ್ಲೂ ಹೆಚ್ಚಾಗಿ ಕಂಡುಬರುತ್ತವೆ. ಮಗಳು ಮದುವೆಯಾಗಿ ಹೋದ ಮೇಲೆ ಅವಳಿಗೆ ಅತ್ತೆ ಮನೆ, ತನ್ನ ಪರಿವಾರದ ಜಂಜಾಟವೇ ಸಾಕಾಗಿರುತ್ತದೆ. ಇವನ್ನು ತಾಯಿ ತಂದೆಯರನ್ನು ಹೇಗೆ ನೋಡಿಕೊಂಡಾಳು? ಮಗನಂತೂ ಕೇಳುವುದೇ ಬೇಡ, ಮದುವೆಯಾದ ಮರು ತಿಂಗಳೇ ಇದ್ದೂರಲ್ಲಿ ಅಥವಾ ಬೇರೆ ನಗರದಲ್ಲಿ ಹೊಸ ಮನೆ ಹೂಡಿದರೆ ಮುಗಿಯಿತು, ಈ ಮುದಿ ತಾಯಿ ತಂದೆಯರ ಜವಾಬ್ದಾರಿ ಯಾಕೆ ಬೇಕಾದೀತು? ವೃದ್ಧ ದಂಪತಿ ಇಬ್ಬರೂ ಜೊತೆ ಜೊತೆಗಿದ್ದಾಗ, ಹೇಗೋ ಕಾಲ ದಾಟಿ ಹೋಗುತ್ತದೆ. ಅದರಲ್ಲಿ ಒಬ್ಬರು ತೀರಿಕೊಂಡಾಗ ಇನ್ನೊಬ್ಬರಿಗೆ ಸಮಸ್ಯೆಗಳು ಹೆದ್ದೆರೆಗಳಂತೆ ಅಪ್ಪಳಿಸುತ್ತವೆ.

ಬಹು ದೊಡ್ಡ ಜವಾಬ್ದಾರಿ

ಅದರಲ್ಲೂ ಒಬ್ಬಳೇ ಮಗಳಾಗಿರುವ ಮನೆಗಳಲ್ಲಿ ಈ ಸಮಸ್ಯೆ ಇನ್ನಷ್ಟು ಕಷ್ಟಕರ ಎಂದೇ ಹೇಳಬೇಕು. ಅವಳಿಗೆ ತನ್ನ ಕೆರಿಯರ್ ಬಹಳ ಮುಖ್ಯ, ಅದರ ನಡುವೆ ಪೇರೆಂಟ್ಸ್ ಜವಾಬ್ದಾರಿ ದೊಡ್ಡ ಹೊರೆ ಎಂದೇ ಭಾವಿಸುತ್ತಾಳೆ. ಇದರಿಂದಾಗಿ ಅವಳು ಎಷ್ಟೋ ಸಲ ಕಾಂಪ್ರಮೈಸ್‌ ಆಗಲೇ ಬೇಕಾಗುತ್ತದೆ, ಏಕೆಂದರೆ ಒಬ್ಬಳೇ ಮಗಳಾದ್ದರಿಂದ ಇವಳ ಹೊರತು ಈ ವೃದ್ಧರನ್ನು ಈ ಕಾಲದಲ್ಲಿ ಗಮನಿಸುವವರಾದರೂ ಯಾರು? ಈ ಪೇರೆಂಟ್ಸ್ ತಮ್ಮೆಲ್ಲ ಆಸ್ತಿಪಾಸ್ತಿ, ಗಳಿಕೆ, ಪ್ರೀತಿ ವಾತ್ಸಲ್ಯ ಎಲ್ಲವನ್ನೂ ಈ ಒಬ್ಬಳೇ ಸಂತಾನಕ್ಕಾಗಿ ಧಾರೆ ಎರೆದಿರುತ್ತಾರೆ. ಇಂಥ ಪರಿಸ್ಥಿತಿಗಳಲ್ಲಿ ತಾಯಿಯನ್ನು ಗಮನಿಸಿಕೊಳ್ಳುವುದು ಹೇಗೆ?

ಮುಖ್ಯವಾಗಿ ಒಬ್ಬಳೇ ಮಗಳಾದಾಗ

29ರ ಹರೆಯದ ದಿವ್ಯಾ ತನ್ನ ಹೆತ್ತವರ ಒಬ್ಬಳೇ ಮಗಳು. ಅವಳಿಗೆ ಇಬ್ಬರು ಮಕ್ಕಳು. ಆಕೆ ಒಂದು ಖಾಸಗಿ ಶಾಲೆಯಲ್ಲಿ ಟೀಚರ್‌. ಪತಿ ವಿಶಾಲ್ ‌ಇವಳನ್ನು ಬಹಳ ಪ್ರೇಮಿಸುತ್ತಾನೆ, ಎಲ್ಲಾ ಸಹಾಯ ಮಾಡುತ್ತಾ ಚೆನ್ನಾಗಿ ನೋಡಿಕೊಳ್ಳುತ್ತಾನೆ. ಮನೆಯಲ್ಲಿ ಯಾವುದಕ್ಕೂ ಕೊರತೆ ಇಲ್ಲ. ಆದರೆ ದಿವ್ಯಾಳಿಗೆ ಸದಾ ತನ್ನ ತಾಯಿ ತಂದೆಯರದೇ ಚಿಂತೆ. ವಿಶಾಲ್ ‌ಹೆಚ್ಚು ಮಾವನ ಮನೆಗೆ ಹೋಗುವವನಲ್ಲ.

ದಿವ್ಯಾಳ ತಂದೆಗೆ ಈಗಾಗಲೇ 2 ಸಲ ಹೃದಯಾಘಾತ ಆಗಿದೆ. ತಾಯಿ ಒಬ್ಬಳೇ ಅವರನ್ನು ನೋಡಿಕೊಳ್ಳಲಾರಳು. ಪೆನ್ಶನ್‌ ಹಣ ಅವರ ಜೀವನ ನಿರ್ವಹಣೆಗೆ ಆಧಾರ. ಅವರು ಗಳಿಸಿದ ಬಹುತೇಕ ಹಣವೆಲ್ಲ ಮಗಳ ಉನ್ನತ ವ್ಯಾಸಂಗ, ಮದುವೆಗೇ ಖರ್ಚಾಗಿತ್ತು. ಹೀಗಾಗಿ ಹಣಕಾಸಿನ ತೊಂದರೆ ಸದಾ ಕಾಡುತ್ತಿತ್ತು. ದಿವ್ಯಾ ಅವರಿಗಾಗಿ ಹಣ ಖರ್ಚು ಮಾಡುವುದು ವಿಶಾಲ್ ‌ಗೆ ಸರಿಹೋಗುವುದಿಲ್ಲ, ಮಾವನ ಮನೆಯವರೊಂದಿಗೆ ಮೊದಲಿನಿಂದಲೂ ಅವನ ಅಟ್ಯಾಚ್‌ ಮೆಂಟ್‌ ಬಹಳ ಕಡಿಮೆ.

ಒಂದೇ ನಗರದಿ ವಾಸವಿದ್ದ ಅವರು ಎಂದೋ ಒಮ್ಮೊಮ್ಮೆ ಮಗಳ ಮನೆಗೆ ಬಂದರೂ, ಅಳಿಯನಿಗೆ ಅದು ಸರಿ ಹೋಗುತ್ತಿರಲಿಲ್ಲ, ಅವರೊಂದಿಗೆ ಹಾರ್ದಿಕ ಮಾತುಕತೆ ಆಡುತ್ತಿರಲಿಲ್ಲ. ಇದರಿಂದಾಗಿ ದಿವ್ಯಾ ಸದಾ ದುಃಖಿ. ತನ್ನ ವೃದ್ಧ ತಾಯಿ ತಂದೆಯರಿಗೆ ತಾನಲ್ಲದೆ ಬೇರೆ ಯಾರು ದಿಕ್ಕು ಎಂಬುದೇ ಅವಳ ದೊಡ್ಡ ಕೊರಗು. ಒಬ್ಬಳೇ ಮಗಳಾದ್ದರಿಂದ ತಾನೇ ಅವರ ಜವಾಬ್ದಾರಿ ಹೊರಬೇಕೆಂಬುದು ಅವಳಾಸೆ. ಆದರೆ ಅಸಹಾಯಕಳಾದ ಅವಳು ಏನು ಮಾಡಿಯಾಳು? ಪತಿಯೊಂದಿಗೆ ಅನಗತ್ಯ ಮನಸ್ತಾಪ ಅವಳಿಗೆ ಬೇಕಿರಲಿಲ್ಲ.

ಅವಳ ಪತಿಗೆ ಅತ್ತೆ ಮಾವನ ಜವಾಬ್ದಾರಿ ಬೇಕಿಲ್ಲ. ತಾನು ವಿಚ್ಛೇದನ ಪಡೆದು ಶಾಶ್ವತವಾಗಿ ಅಮ್ಮನ ಮನೆಗೆ ಹೋಗಿಬಿಡಲೇ ಎಂದು ದಿವ್ಯಾ ಯೋಚಿಸುತ್ತಾಳೆ, ಮಕ್ಕಳ ಮುಖ ನೋಡಿ ಸುಮ್ಮನಾಗುತ್ತಾಳೆ. ಅವಳ ತಾಯಿ ತಂದೆ ಸಹ ಇಂಥದ್ದಕ್ಕೆ ಖಂಡಿತಾ ಒಪ್ಪುವುದಿಲ್ಲ.

ಹೀಗಿರುವಾಗ ಒಮ್ಮೆ ದಿವ್ಯಾ ಪತಿಯನ್ನು ಕೇಳಿದಳು, “ನನ್ನ ತಾಯಿ ತಂದೆಯರ ಜಾಗದಲ್ಲಿ ನಿಮ್ಮ ತಾಯಿ ತಂದೆ ಇದ್ದಿದ್ದರೆ ಆಗಲೂ ಹೀಗೇ ಮಾಡ್ತಿದ್ರಾ? ಯಾವ ರೀತಿ ನಿಮ್ಮ ವೃದ್ಧ ತಾಯಿ ತಂದೆಯರ ಜವಾಬ್ದಾರಿ ನಮ್ಮಿಬ್ಬರದೋ, ಅದೇ ರೀತಿ ನನ್ನ ವೃದ್ಧ ತಾಯಿ ತಂದೆ ಜವಾಬ್ದಾರಿ ನಮ್ಮಿಬ್ಬರದೂ ಯಾಕಾಗುವುದಿಲ್ಲ? ನನ್ನನ್ನು ಬಿಟ್ಟರೆ ಅವರಿಗೆ ಬೇರೆ ಗತಿ ಯಾರಿದ್ದಾರೆ? ನನ್ನ ಓದು, ಮದುವೆಗಾಗಿ ಅವರು ತಮ್ಮದೆಲ್ಲ ಗಳಿಕೆ ಖರ್ಚು ಮಾಡಿದ್ದಾರೆ. ಅಂಥವರಿಗೆ ಏನಾದರೂ ಸಹಾಯ ಮಾಡಿದರೆ ಏನು ತಪ್ಪು?” ಇದಕ್ಕೆ ವಿಶಾಲ್ ‌ಏನೂ ಉತ್ತರಿಸಲಿಲ್ಲ.

ಮಾರನೇ ದಿನ ಅವಳ ಅತ್ತೆ ಮಾವ ಪತಿಗೆ ಏನೇನೋ ಸಲಹೆ ನೀಡುತ್ತಿರುವುದನ್ನು ಗಮನಿಸಿದಳು. ಅದರ ಮರು ವಾರ ಅವಳು ತಾಯಿಯನ್ನು ರೆಗ್ಯುಲರ್‌ ಚೆಕ್‌ ಅಪ್‌ ಗೆ ಕರೆದೊಯ್ಯಲು ಸಿದ್ಧಳಾಗುತ್ತಿದ್ದಾಗ, ವಿಶಾಲ್ ‌ತಾನೂ ಅವಳೊಂದಿಗೆ ಬರುವುದಾಗಿ ಕ್ಯಾಬ್‌ ಬುಕ್‌ ಮಾಡಿದ. ಇದರಿಂದ ಅವಳಿಗೆ ಪತಿ ಬಗ್ಗೆ ಗೌರವ ಹೆಚ್ಚಿತು.

ಯಾವುದೇ ಸಹಾಯ ಇಲ್ಲ

ಮದುವೆಯಾದ ಮೇಲೆ ಪತಿಪತ್ನಿ, ಸಂಸಾರವೆಂಬ ಗಾಡಿ ಎಳೆಯುವ ಜೋಡೆತ್ತುಗಳು. ಜೀವನದಲ್ಲಿ ಮುಂದೆ ಬರುವ ಎಲ್ಲಾ ಸುಖದುಃಖಗಳನ್ನೂ ಸಮಾನಾಗಿ ಇಬ್ಬರೂ ಹಂಚಿಕೊಳ್ಳಬೇಕು. ಈ ವಿಷಯದಲ್ಲಿ ಪತಿ ತನ್ನ ಪತ್ನಿಗೆ ಸಂಪೂರ್ಣ ಸಹಕಾರ ನೀಡುವಂತೆ, ಅವನ ತಾಯಿ ತಂದೆ ಸಹ ಸೊಸೆಯ ಹೆತ್ತವರನ್ನು ಗೌರವಾದರಗಳಿಂದ ಕಾಣಬೇಕು, ಅವರಿಗೆ ತೊಂದರೆಯಾದಾಗ ಕೈಲಾದ ಸಹಾಯ ಮಾಡಬೇಕು. ಈ ಕುರಿತಾಗಿ ದಿವ್ಯಾಳ ಅತ್ತೆ ಮಾವ ಮಗನಿಗೆ ತಿಳಿಹೇಳಿದಂತೆ ಮಾಡುವುದೇ ಸರಿ.

ಆದರೆ ನಮ್ಮ ಸಮಾಜದಲ್ಲಿ ಈ ಪರಿಸ್ಥಿತಿ ವಿಭಿನ್ನವೇ ಸರಿ. ನಮ್ಮ ದೇಶದಲ್ಲಿ ಮಗಳನ್ನು ಮದುವೆ ಮಾಡಿ ಕೊಟ್ಟ ನಂತರ, `ಕೊಟ್ಟ ಹೆಣ್ಣು ಕುಲಕ್ಕೆ ಹೊರಗು,’ ಎಂಬಂತೆ ತಾಯಿ ತಂದೆ ಅವಳಿಂದ ಸಹಾಯ ಪಡೆಯುವುದಿರಲಿ, ಅವಳ ಮನೆಯಲ್ಲಿ 1-2 ದಿನ ಉಳಿಯಲಿಕ್ಕೂ ಹಿಂಜರಿಯುತ್ತಾರೆ. ಮನೆಯಲ್ಲಿ ಅವರಿಗೂ ಮಗ ಸೊಸೆ ಇದ್ದರೆ, ಒಂದು ಹಂತದವರೆಗೂ ಇದು ನಡೆಯುತ್ತದೆ. ಆದರೆ ಇವರಿಗೆ ಮಗಳು ಒಬ್ಬಳೇ ಸಂತಾನವಾದರೆ, ಈ ತಾಯಿ ತಂದೆಗೆ  ಅವಳಲ್ಲದೆ ಸಹಾಯ ಮಾಡುವವರು ಬೇರೆ ಯಾರೂ ಇಲ್ಲ ಎಂದಾದರೆ, ತಾನು ತನ್ನ ಹೆತ್ತವರಿಗೆ ಏಕೆ ಸಹಾಯ ಮಾಡಬಾರದು ಎಂದು ಅವಳು ಯೋಚಿಸಿದರೆ ತಪ್ಪೇನು? ಅದರಲ್ಲೂ ಹೆತ್ತವರಲ್ಲಿ ಒಬ್ಬರು ತೀರಿಕೊಂಡು ಒಬ್ಬರು ಉಳಿದುಬಿಟ್ಟರೆ, ಅವರಿಗಂತೂ ಸಹಾಯದ ಅಗತ್ಯ ಹೆಚ್ಚಲ್ಲವೇ? ಆದರೆ ಇಂಥ ಸಂದರ್ಭದಲ್ಲಿ ಅವಳ ಪತಿ ಮತ್ತು ಅತ್ತೆ ಮಾವ ಸಹಾಯ ಮಾಡುವ ಬದಲು ಮುನಿಸಿಕೊಂಡರೆ ಸರಿಯೇ?

ತಾಯಿ ತಂದೆಯರ ಗೌರವಾದರ

ಕಷ್ಟ ಕಾಲದಲ್ಲಿ ತಾಯಿ ತಂದೆ ಮಗಳ ಮನೆಯಲ್ಲಿ ವಾಸಿಸುವುದರಲ್ಲಿ ಯಾವುದೇ ತಪ್ಪಿಲ್ಲ. ಇವರನ್ನು ಅಳಿಯ ಹಾಗೂ ಅವನ ತಾಯಿ ತಂದೆ ಗೌರವಾದರಗಳಿಂದ ಕಾಣಬೇಕು, ಹಾಗೆಯೇ ಇವರೂ ಸಹ ತಾವು ಇಲ್ಲಿನ ಅಥಿತಿಗಳು ಎಂದು ಸದಾ ಸೇವೆ ಬಯಸದೆ, ಮನೆಯರೆಲ್ಲರ ಜೊತೆ ಒಂದಾಗಿ ಬೆರೆತು, ತಮ್ಮದೇ ಮನೆ ಎಂಬಂತೆ ಕೆಲಸ ಕಾರ್ಯಗಳಲ್ಲಿ ತೊಡಗಿಕೊಳ್ಳಬೇಕು. ಸಾಮಾನ್ಯವಾಗಿ ಗಮನಿಸಿದರೆ, ಅಳಿಯನ ತಾಯಿ ತಂದೆ, ಬೀಗರು ತಮ್ಮ ಮನೆಯಲ್ಲಿ ಬಂದಿಳಿದಾಗ, 1-2 ತಿಂಗಳು ಚೆನ್ನಾಗಿ ಕಾಣಬಹುದು, ಆದರೆ ನಂತರ ಅವರನ್ನು ಕೀಳಾಗಿ ಕಾಣುತ್ತಾರೆ. ಇದರಿಂದ ಸೊಸೆಯ ತಾಯಿ ತಂದೆ ಹೀನಭಾವನೆಯಿಂದ ತತ್ತರಿಸಿ ಹೋಗುತ್ತಾರೆ.

ಮಗ ದೂರದಲ್ಲಿದ್ದಾಗ ಸಾಮಾನ್ಯವಾಗಿ ಗಂಡು/ಹೆಣ್ಣು ಮಕ್ಕಳು ಉನ್ನತ ವ್ಯಾಸಂಗ/ಉದ್ಯೋಗ ಅರಸಿ ದೂರದ ಊರು/ವಿದೇಶಕ್ಕೆ ಹೋಗಿಬಿಡುವುದು ವಾಡಿಕೆ. ನಂತರ ಅವರುಗಳು ಅಲ್ಲಿಯೇ ಮದುವೆಯಾಗಿ ಸೆಟಲ್ ಆಗುತ್ತಾರೆ. ಹೀಗಾದಾಗ ಊರಲ್ಲಿ ಉಳಿದ ಈ ತಾಯಿ ತಂದೆ ಒಂಟಿ ಆಗಿಬಿಡುತ್ತಾರೆ. ತಮ್ಮ ಕೆರಿಯರ್‌ ಗಾಗಿ ಮಕ್ಕಳು ವಾಪಸ್ಸು ಬರಲು ಬಯಸುವುದಿಲ್ಲ. ಆದರೆ ಹಾಗೇಂತ ತಮ್ಮ ಮುದಿ ತಾಯಿ ತಂದೆಯರ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವೇ? ಅದರಲ್ಲೂ ಅವರು ಒಬ್ಬಂಟಿ ಆದಾಗ ಪರಿಸ್ಥಿತಿ ಇನ್ನೂ ಹದಗೆಡುತ್ತದೆ. ಹೀಗಾದಾಗ ಮಗ/ಮಗಳು ಅವರನ್ನು ಹೇಗೆ ನೋಡಿಕೊಳ್ಳಬೇಕು?

ನಿಮ್ಮ ಹತ್ತಿರದ ನೆಂಟರು, ಗೆಳೆಯರಿಗೆ ಹೇಳಿ ಪ್ರತಿ ದಿನ ಆಗದಿದ್ದರೂ ವಾರದಲ್ಲಿ 2-3 ಸಲ ಈ ತಾಯಿ ತಂದೆಯರನ್ನು ಭೇಟಿ ಆಗುತ್ತಿರಲಿಲ್ಲ. ಆಗ ಅವರ ಆರೋಗ್ಯದಲ್ಲಿ ಏನಾದರೂ ದೊಡ್ಡ ವ್ಯತ್ಯಾಸ ಆಗಿದ್ದರೆ ನಿಮಗೆ ಸಕಾಲಕ್ಕೆ ಮಾಹಿತಿ ಸಿಗುತ್ತದೆ. ತಕ್ಷಣ ಅವರನ್ನು ಆಸ್ಪತ್ರೆಗೆ ಸೇರಿಸಿ, ನಿಮಗೆ ಸೂಚನೆ ಕೊಟ್ಟಾಗ, ಹೇಗಾದರೂ ಮಾಡಿ ನೀವು ಊರಿಗೆ ಮರಳಬಹುದು. ಇದಕ್ಕೆ ಬದಲಾಗಿ ನೀವು ನೆಂಟರು/ಗೆಳೆಯಯರಿಗೆ ಅಗತ್ಯ ಏನಾದರೂ ಸಹಾಯ ಮಾಡಿ.

ನಿಮ್ಮ ಪೇರೆಂಟ್ಸ್ ಬಳಿ ಒಬ್ಬ ನಂಬಿಕಸ್ತ ಹೆಣ್ಣಾಳು ಸದಾ ಮನೆಗೆಲಸಕ್ಕೆ ಅವರ ಜೊತೆಯಲ್ಲೇ ಇರಲಿ. ಅವಳು ಮನೆಯ ಅಡುಗೆ ಮಾಡಿ, ಇತರೇ ಅಗತ್ಯ ಕೆಲಸ ಮುಗಿಸಿ, ಇವರಿಗೆ ಕಾಲಕಾಲಕ್ಕೆ ಊಟ ತಿಂಡಿ, ಮಾತ್ರೆ, ಔಷಧಿ, ಮಸಾಜ್‌, ವೀಲ್ ಚೇರ್, ವಾಕಿಂಗ್‌, ಇನ್ನಿತರ ಯಾವುದೇ ಸೇವೆಯನ್ನು ಸಿಡುಕದೆ ಮಾಡುವಂತಿರಲಿ. ಸಕಾಲಕ್ಕೆ ಸರಿಯಾಗಿ ಅವರ ಮೆಡಿಕ್ಲೇಮ್ ಪಾಲಿಸಿ ಸರಿಪಡಿಸಿ.

ಶಾರದಾ ಭಟ್

ಕಾನೂನಿನ ಸಲಹೆ ಏನು?

ಭಾರತ ಸರ್ಕಾರ ವಯೋವೃದ್ಧರ ನೆರವಿಗೆಂದೇ `ಮೇಂಟೆನೆನ್ಸ್  ವೆಲ್ ‌ಫೇರ್‌ ಆಫ್‌ ಪೇರೆಂಟ್ಸ್ ಸೀನಿಯರ್‌ ಸಿಟಿಝನ್‌ ಆ್ಯಕ್ಟ್-2007′ ಜಾರಿಗೆ ಬರುವಂತೆ ಮಾಡಿದೆ. ಇದರಿಂದ ಹಿರಿಯರು ಗೌರವಾದರಗಳಿಂದ ಜೀವನ ನಡೆಸುವಂತಾಗಿದೆ. ಇದು ಮಕ್ಕಳ ಮೇಲೆ ಕಾನೂನಾತ್ಮಕ ಜವಾಬ್ದಾರಿಗಳನ್ನು ಹೇರುತ್ತದೆ. ಯಾವ ತಾಯಿ ತಂದೆ ತಮ್ಮ ವೃದ್ಧಾಪ್ಯದ ಕಾರಣ ಹೀಗೆ ಅಸಹಾಯಕರಾಗುತ್ತಾರೋ, ಅವರು ಮಾಸಿಕ ಮೇಂಟೆನೆನ್ಸ್ ಗಾಗಿ ಮಕ್ಕಳಿಂದ ಅದನ್ನು ಕೇಳಿ ಪಡೆಯಬಹುದು. ಇದರಲ್ಲಿ ಆಹಾರ, ಮನೆ, ಬಟ್ಟೆ, ಚಿಕಿತ್ಸಾ ಹಣ ಎಲ್ಲಾ ಕೂಡಿದೆ. ಸಂತಾನ ಇಲ್ಲದ ವೃದ್ಧರು ಸೀದಾ ಸರ್ಕಾರದಿಂದಲೇ ಇಂಥ ನೆರವು ಪಡೆಯಬಹುದು. ಯಾರ ಪಾಲಿಗೆ ಇವರ ಆಸ್ತಿ ದೊರಕಿ ಉತ್ತರಾಧಿಕಾರಿಗಳಾಗುವರೋ, ಅವರು ಜವಾಬ್ದಾರಿ ಹೊರಲೇಬೇಕು. ಹಿಂದೂ ದತ್ತಕ ಹಾಗೂ ಜವಾಬ್ದಾರಿಯ ಕಾನೂನು, 1956ರಲ್ಲಿ ಸ್ಪಷ್ಟ ಹೇಳಿರುವುದೆಂದರೆ, ಮಕ್ಕಳಾದರು ತಾಯಿ ತಂದೆಯರ ಜವಾಬ್ದಾರಿ ಹೊರಲೇಬೇಕು ಎಂಬುದು. ಯಾವ ಮುದಿ ತಾಯಿ ತಂದೆ ಆರ್ಥಿಕವಾಗಿ ತಮ್ಮ ಜವಾಬ್ದಾರಿ ತಾವೇ ಹೊರಲಾರರೋ, ಬೇರೆ ಆದಾಯ ಇಲ್ಲವೋ, ಅಂಥವರು ಈ ಕಾನೂನಿನ ಮೂಲಕ ಮೇಂಟೆನೆನ್ಸ್ ಹಣ ಪಡೆಯಬಹುದು. ವಿವಾಹಿತ ಮಗಳೂ ಸಹ ಅಸಹಾಯಕ ತಾಯಿ ತಂದೆಯರಿಗೆ ಸಹಾಯ ಮಾಡಲೇಬೇಕು ಎಂದಿದೆ. ಮುಸ್ಲಿಂ ಲಾ ಪ್ರಕಾರ ಮಗ/ಮಗಳು ಯಾರೇ ಇರಲಿ, ವೃದ್ಧರಿಗೆ ಸಹಾಯ ಮಾಡಲೇಬೇಕು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ