ಮುನಿಸಿಕೊಂಡ ಹೆಂಡತಿ ನಿಧಿಯನ್ನು ಮನವೊಲಿಸಲೆಂದು ರಾಜೇಶ್ ಮನೆಗೆ ಹೋದಾಗ, ಅವನಿಗೆ ಅಲ್ಲಿ ನಿಧಿ ಕಾಣದೆ ಅವಳು ಬರೆದ ಒಂದು ಪತ್ರ ಸಿಕ್ಕಿತು. ಅದರಲ್ಲಿ ಅಂಥದ್ದೇನು ಬರೆದಿತ್ತು……..?
“ನಾನು, ನಿಮ್ಮನ್ನು ಪ್ರಶ್ನಿಸಿದೆನೆಂದು ನಿಮಗೆ ಕೆಟ್ಟದೆನಿಸಿತಾ?
“ಇಲ್ಲ, ಎಂಬ ನಿಮ್ಮ ಉತ್ತರ ಕೇಳಿ ನಾನು ಸ್ವಲ್ಪ ಹೊತ್ತು ಸ್ತಬ್ಧಳಾಗಿಬಿಟ್ಟಿದ್ದೆ. ನಾನು ನಿಮ್ಮ ಜೊತೆಗೆ ಮಾತಾಡಲಿ ಇಲ್ಲವೇ ಮಾತನಾಡದೆ ಇರುವುದರಿಂದ ನಿಮಗೆ ಯಾವುದೇ ವ್ಯತ್ಯಾಸ ಆಗುವುದಿಲ್ಲವೇ?
“ಆದರೆ ನಾನು ನಿಮ್ಮೊಂದಿಗೆ ಬೇಸರಗೊಂಡು ನಿಮ್ಮೊದಿಗೆ ಮಾತಾಡುವುದನ್ನು ನಿಲ್ಲಿಸಿದಾಗ, ನನ್ನ ಹೃದಯ ಬಡಿತ ನಿಂತಂತಾಗುತ್ತದೆ. ಮೆದುಳು ಯೋಚಿಸುವುದನ್ನು ನಿಲ್ಲಿಸಿಬಿಡುತ್ತೆ.
“ನೀವು ನನ್ನನ್ನು ಕೂಗಿ ಕರೆಯಬೇಕು ಹಾಗೂ ನಾನು ಆ ಧ್ವನಿಯಲ್ಲಿ ನನಗೆ ನಾನೇ ಕಳೆದುಹೋಗಬೇಕು ಎನಿಸುತ್ತೆ.
“ಒಮ್ಮೊಮ್ಮೆ ಅನಿಸುತ್ತೆ ಕಾಲ್ ಮಾಡಿ ನಿಮ್ಮ ಧ್ವನಿ ಕೇಳಿಸಿಕೊಳ್ಳಬೇಕು ಅಂತ. ಆದರೆ ನನ್ನ ಬಳಿಯೂ ಇದೆಯಲ್ಲ ಅಹಂಭಾವ, ಯಾಕೆ ಮಾಡಬೇಕು. ನಿಮಗೆ ಕೇಳಿಸಿಕೊಳ್ಳು ಅಪೇಕ್ಷೆ ಇಲ್ಲವೆಂದ ಮೇಲೆ. ನಾನು ಎಲ್ಲೋ ಕೇಳಿಸಿಕೊಂಡಿದ್ದೆ. ಜೀವನವನ್ನು ಬಹಳ ಹಗುರವಾಗಿ ತೆಗೆದುಕೊಳ್ಳಬೇಕೆಂದು. ಆದರೆ ಜೀವನದ ಪ್ರತಿಯೊಂದು ಪುಟಗಳು ನಿಮ್ಮೊಂದಿಗೆ ಸಂಬಂಧಪಟ್ಟಿವೆ ಎಂದಾದರೆ ಜೀವನವನ್ನು ಹಗುರವಾಗಿ ಹೇಗೆ ತೆಗೆದುಕೊಳ್ಳಲು ಸಾಧ್ಯ?
“ಕೆಲವು ಜನರು ಹೇಳುತ್ತಾರೆ, ಪ್ರೀತಿಗೀತಿ ಏನೂ ಇಲ್ಲ ಅದೇನಿದ್ದರೂ ಒಂದು ರಾಸಾಯನಿಕ ಕ್ರಿಯೆ, ಅದು ಹೃದಯ ಹಾಗೂ ಮೆದುಳನ್ನು ಮುಚ್ಚಿಬಿಡುತ್ತದೆ. ಹಾಗೊಂದು ವೇಳೆ ಹಾಗೆಯೇ ಇದೆಯೆಂದಾದರೆ, ಹೃದಯ ಒಬ್ಬರಿಗಾಗಿಯೇ ಏಕೆ ಮಿಡಿಯುತ್ತಿರುತ್ತದೆ? ಈ ಪ್ರೀತಿ ನಮ್ಮ ತಿಳಿವಳಿಕೆ ಇತಿಮಿತಿಗೆ ಹೊರತಾಗಿದೆ ಅಲ್ವೆ?
“ನನ್ನ ಹಾಗೆಯೇ ನಿಮ್ಮ ಹೃದಯ ಕೂಡ ಕೇವಲ ನನಗಾಗಿಯೇ ಮಿಡಿಯುತ್ತಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಅಲ್ವಾ? ನನ್ನ ಹೆಸರು ಸದಾ ನಿಮ್ಮ ನಾಲಿಗೆಯ ಮೇಲೆ ಇದ್ದಿದ್ದರೆ ಚೆನ್ನ ಅಲ್ವಾ? ಆದರೆ ನಿಮಗೆ ನನ್ನನ್ನು ಹೊರತುಪಡಿಸಿ ಎಲ್ಲರೂ ವಿಶೇಷ ಎನಿಸುತ್ತಾರೆ. ಅದೇ ರೀತಿ ಕೆಲಸದ ಒತ್ತಡ ಕೂಡ ನನ್ನಿಂದ ದೂರ ಇರಲು ಕಾರಣ ಅಲ್ವೇ? ಕೆಲರವ ಪ್ರೀತಿ ಅಪೂರ್ಣವಾಗಿಯೇ ಇರುತ್ತದೆ. ಹಾಗೆಂದು ನನಗೂ ಅಪೂರ್ಣ ಪ್ರೀತಿಯೇ ದಕ್ಕುತ್ತದೆ? ಆದರೆ ನಾನಂತೂ ನಿಮ್ಮದೇ ಬಣ್ಣದಲ್ಲಿ ಮಿಂದೇಳುತ್ತೇನೆ. ಹಾಗೆಂದು ನಾನು ನಿಮ್ಮಿಂದ ದೊರೆತ ಅರೆಬರೆ ಪ್ರೀತಿಯನ್ನೇ ಸ್ವೀಕರಿಸಿದ್ದೇನೆ.
“ನೀವು ಖುಷಿಯಿಂದಿರಿ. ಒಂದು ವಿಷಯ ಗೊತ್ತಾ? ನಾನು ನನ್ನ ಖುಷಿಯನ್ನು ನಿಮಗೇ ಕೊಟ್ಟುಬಿಡಬೇಕೆಂದು ಯೋಚಿಸುತ್ತೇನೆ. ಆದರೆ ನಾನು ಆ ಖುಷಿಯನ್ನು ಹಾಗೆ ಕೊಡಲು ಆಗುವುದಿಲ್ಲ. ಏಕೆಂದರೆ ನಾನು ಅಪೂರ್ಣಳಾಗಿ ಎಂದೂ ಖುಷಿಯಿಂದಿರಲು ಸಾಧ್ಯವಿಲ್ಲ.
“ಹೊರಟಿದ್ದೇನೆ. ನಿಮ್ಮಿಂದ ದೂರ….. ಸ್ವಲ್ಪ ದೂರ ಅದೂ ಕೂಡ ಅಲ್ಲಿಂದ ನಿಮ್ಮನ್ನು ನೋಡಲು ಸಾಧ್ಯವಾಗಬೇಕು. ಆದರೆ ನೀವು ನಿನ್ನನ್ನು ನೋಡಲು ಆಗುವುದಿಲ್ಲ. ನನ್ನ ಹೃದಯದಲ್ಲಿ ಎಷ್ಟು ತುಡಿತ ಇದೆಯೋ, ಅಷ್ಟೇ ನಿಮ್ಮ ಹೃದಯದಲ್ಲೂ ಯಾವಾಗ ಮಿಡಿಯುತ್ತೋ, ಆಗಲೇ ನಾನು ವಾಪಸ್ ಬರ್ತೀನಿ. ನಿಮ್ಮ ಬಾಹುಗಳಲ್ಲಿನ ಬಿಸುಪು, ನನ್ನನ್ನು ತಳಮಳಕ್ಕೀಡು ಮಾಡುತ್ತದೆ. ಆದರೆ ಆ ತಳಮಳದಲ್ಲೂ ಪ್ರೀತಿಯ ಅನುಭವ ನನ್ನನ್ನು ಬಂಧಿಯಾಗಿಸುತ್ತೆ. ಮನಸ್ಸು ಮಿಲನಕ್ಕಾಗಿ ಕಾತರಿಸುತ್ತದೆ.”
– ನಿಮ್ಮ ನಿಧಿ.
ಪತ್ರ ಓದಿ ನಾನೇ ಸ್ವಲ್ಪ ಹೊತ್ತು ದಿಗ್ಮೂಢನಾಗಿ ಕುಳಿತೆ. ಸುಮ್ಮನೇ ಉಳಿದು ಅವಳು ಬರೆದ ಪತ್ರವನ್ನು ಓದುತ್ತಿದ್ದೆ. ಮೊನ್ನೆ ರಾತ್ರಿ ತಾನೇ ಒಂದು ವಾರದ ಬಳಿಕ ಬಂದಿದ್ದೆ. ಮುನಿಸಿಕೊಂಡಿದ್ದ ನಿಧಿಯನ್ನು ಮನವೊಲಿಸಲು ಒಂದು ತಾಸು ಬೇಕಾಯಿತು. ಅವಳ ನಿರಾಶೆ ಸ್ವಲ್ಪ ದೂರವಾಗಲಿಲ್ಲ. 2 ದಿನ ಮನೆಯಲ್ಲಿ ಮೌನದ ಸಾಮ್ರಾಜ್ಯ ಆವರಿಸಿಕೊಂಡಿತ್ತು. ಇವತ್ತು ರಾತ್ರಿಯಷ್ಟೇ ಆ ಉಸಿರುಗಟ್ಟುವ ಮೌನಕ್ಕೆ ವಿರಾಮ ಸಿಕ್ಕಿತು. ಆಗ ಅವಳು ನನ್ನನ್ನು, `ನಾನು ಬೇಸರಗೊಳ್ಳುವುದರಿಂದ ನಿಮಗೆ ಕೆಡುಕೆನಿಸುತ್ತಾ,’ ಎಂದು ಕೇಳಿದ್ದಳು. ಆಗ ನಾನು ಸಹಜವಾಗಿಯೇ, “ಇಲ್ಲ,” ಎಂದು ಹೇಳಿದ್ದೆ.
`ಓಹ್….. ನಿಧಿ.’
ನೀನು ಮಾತಾಡದೆ ಇದ್ದರೆ ನನಗೂ ಕೂಡ ಬೇಸರವಾಗುತ್ತದೆ. ಆದರೆ ಅದನ್ನು ತೋರಿಸಿಕೊಳ್ಳುವುದಿಲ್ಲ. ಹಾಗೊಂದು ವೇಳೆ ನಾನು ಈ ವಿಷಯವನ್ನು ನಿನ್ನ ಮುಂದೆ ಹೇಳಿದರೆ ನೀನು ಮತ್ತಷ್ಟು ಮುನಿಸಿಕೊಳ್ಳುವೆ. ಹಾಗೊಂದು ವೇಳೆ ನನಗೆ ಕೆಡುಕೆನಿಸುವುದಿಲ್ಲ ಎಂದು ನಿನಗೆ ಹೇಳಿದರೆ…. ನೀನು ಮಾತಾಡುವ ಅಥವಾ ಮಾತಾಡದೇ ಇದ್ದರೆ, ನೀನು ಮುನಿಸಿಕೊಳ್ಳುವುದನ್ನು ಕಡಿಮೆ ಮಾಡುತ್ತವೆ. ನಾನು ನನ್ನ ಹಿತಾಸಕ್ತಿ ಗಮನಿಸಿದೆ ಹಾಗೂ ನಿನ್ನನ್ನು ನಿರ್ಲಕ್ಷ್ಯ ಮಾಡಿದೆ. ನನ್ನನ್ನು ಕ್ಷಮಿಸು ನಿಧಿ. ನೀನು ವಾಪಸ್ ಬಂದುಬಿಡು. ಈಗ ನೀನು ಅಂದುಕೊಂಡ ರೀತಿಯಲ್ಲಿಯೇ ನಾನು ನಡೆದುಕೊಳ್ಳುವೆ. ನಿನಗೆ ಸಮಯ ಕೊಡಬೇಕು ಎಂದು ನಾನು ಬಯಸುತ್ತೇನೆ.
ಆದರೆ…. ನೀನು ನನ್ನನ್ನು ಬಹಳ ಪ್ರೀತಿಸುತ್ತಿ ಎನ್ನುವುದು ನನಗೆ ಗೊತ್ತು. ಹಾಗೆಂದೇ ನೀನು ನನ್ನ ಮೇಲೆ ಮುನಿಸಿಕೊಳ್ಳುತ್ತಿ. ಈ ಕೋಪ ಕೂಡ ಪ್ರೀತಿಯ ಒಂದು ರೂಪವೇ ಹೌದು. ಆದರೆ ನಾನು ಆ ಸಮಯದಲ್ಲಿ ಏಕೆ ಒಪ್ಪುವುದಿಲ್ಲ ಎಂದರೆ, ಆ ಸಮಯದಲ್ಲಿ ನೀನು ನನ್ನ ಮಾತನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವುದಿಲ್ಲ. ಮನುಷ್ಯ ಯಾರೊಂದಿಗಾದರೂ ಬೇಸರಗೊಂಡಿದ್ದರೆ, ಆ ಸಮಯದಲ್ಲಿ ಅದು ತಪ್ಪು ಎನಿಸುತ್ತದೆ. ಆಗ ತಿಳಿವಳಿಕೆ ಹೇಳಬೇಕೆಂದರೆ, ಅದು ಕೋಪ ಹೆಚ್ಚಿಸಿದಂತೆಯೇ ಆಗುತ್ತದೆ.
ಆಗ ನಾನು ಬಹಳ ಆರಾಮವಾಗಿ ಇರುತ್ತೇನೆ ಎಂದು ನೀನು ಭಾವಿಸುತ್ತಿ. ಆದರೆ ನಿನಗೆ ಒಂದು ವಿಷಯ ಗೊತ್ತಿಲ್ಲ. ಆಗ ನಾನು ಪ್ರತಿ ರಾತ್ರಿ ಎಚ್ಚರದಿಂದಲೇ ಇರುತ್ತೇನೆ. ನಿನ್ನದೇ ನೆನಪುಗಳಲ್ಲಿ ಕಳೆದುಹೋಗಿರುತ್ತೇನೆ. ಆ ಸಮಯದಲ್ಲಿ ನೀನು ಕರೆ ಮಾಡಬಹುದು ಅಥವಾ ನಾನು ಕೇಳಿಸಿಕೊಳ್ಳದೆಯೂ ಇರಬಹುದು. ಆದರೆ ಆಗ ಕ್ಷಣ ಕ್ಷಣ ತಳಮಳ ಹಾಗೂ ಏನೋ ಒಂಥರಾ ಅಸಮಾಧಾನ ಆವರಿಸಿಕೊಂಡಿರುತ್ತದೆ. ಆಗ ಕೇವಲ ನೀನಷ್ಟೆ ನನ್ನ ಮನಸ್ಸಲ್ಲಿ ಕಾಣ್ತಾ ಇರ್ತಿಯಾ. ಸಮಯದ ಪರಿವೆಯೇ ಇರುವುದಿಲ್ಲ. ಊಟ ತಿಂಡಿ ಮರೆತೇ ಹೋಗುತ್ತದೆ.
ನಾನು ನಿನ್ನನ್ನು ನಿರ್ಲಕ್ಷ್ಯ ಮಾಡುತ್ತೇನೆ, ಎಂದು ನೀನು ಯಾಕೆ ಯೋಚಿಸುತ್ತಿ? ಆದರೆ ನೀನು ಒಂದು ಸಲ ನನ್ನ ಸ್ಥಾನದಲ್ಲಿ ನಿನ್ನನ್ನು ಇರಿಸಿಕೊಂಡು ನೋಡು, ಆಗ ನಿನಗೆ ನನ್ನ ಮೇಲೆ ಕೆಲಸದ ಒತ್ತಡ ಎಷ್ಟಿರುತ್ತದೆ ಎನ್ನುವುದು ಗೊತ್ತಾಗುತ್ತದೆ. ಆಗ ನೀನು ನನಗೆ ಇಷ್ಟೊಂದು ಕೆಲಸ ಏಕೆ ಮಾಡುತ್ತೀ ಎಂದು ಕೇಳಬಹುದು. ಆದರೆ ನಾನು ಕೆಲಸ ಮಾಡದೇ ಇದ್ದರೆ ನಿನ್ನ ಅಗತ್ಯಗಳನ್ನು ಹಾಗೂ ದೈನಂದಿನ ಬೇಡಿಕೆಗಳನ್ನು ಹೇಗೆ ಪೂರೈಸುವುದು ಚಿನ್ನಾ.
ಇದೆಲ್ಲ ಏಕೆಂದರೆ ನಾನು ನಿನ್ನನ್ನು ಬಿಟ್ಟು ಇರಲಾಗದು ಎನ್ನುವುದು ನಿನಗೆ ಚೆನ್ನಾಗಿ ಗೊತ್ತು. ಅಷ್ಟಿಷ್ಟು ವ್ಯವಸ್ತತೆ ಇತ್ತು ಮತ್ತು ಎಂದಾದರೊಮ್ಮೆ ಸ್ನೇಹಿತರ ಬಳಿ ಕುಳಿತುಬಿಡುತ್ತಿದ್ದೆ. ಆದಾಗ್ಯೂ ನಾನು ನಿನಗಾಗಿ ಸಮಯ ಹೊಂದಿಸಿಕೊಳ್ಳುತ್ತಿದ್ದೆ. ಹೌದು ಅಂದಹಾಗೆ ಇತ್ತೀಚೆಗೆ ಸ್ವಲ್ಪ ಹೆಚ್ಚೇ ಜಗಳಗಳಾಗುತ್ತಿದ್ದವು. ಆದರೆ ಅದಕ್ಕೆ ಕಾರಣ ನಾನು ಅಥವಾ ನೀನು ಅಲ್ಲ, ಅದಕ್ಕೆ ಕಾರಣ ಪರಿಸ್ಥಿತಿಗಳು. ಆದರೆ ಏನು ಮಾಡಲು ಸಾಧ್ಯವಿತ್ತು? ನನ್ನ ನೌಕರಿ ಹೇಗಿತ್ತೆಂದರೆ, ಅದಕ್ಕೆ 24 ಗಂಟೆಗಳು ಕೂಡ ಕಡಿಮೆ ಎನಿಸುತ್ತಿದ್ದವು. ನಿನಗೆ ಅದೆಷ್ಟು ಬಾರಿ ತಿಳಿ ಹೇಳಿದೆ. ನೀನು ಅರ್ಥ ಮಾಡಿಕೊಳ್ಳದ್ದಿದರೆ, ಮತ್ತೆ ಯಾರು ಅರ್ಥ ಮಾಡಿಕೊಳ್ಳುತ್ತಾರೆ ಹೇಳು. ನನಗೂ ಒಮ್ಮೊಮ್ಮೆ ಅಳುವ ಮನಸ್ಸಾಗುತ್ತಿತ್ತು.
ನೌಕರಿ ಬಿಟ್ಟು ಬಿಡಬೇಕು ಓಡಿ ಹೋಗಬೇಕು ಎನಿಸುತ್ತಿತ್ತು. ಆದರೆ ಅವಳು ಎಲ್ಲಿದ್ದಾಳೆಂದು ಹೇಳಿರಲಿಲ್ಲ. ವಸಂತ ಕಾಲದಲ್ಲಿ ನನ್ನ ವಸಂತ ಎಲ್ಲಿ ಹೋದ ಎಂದು ಗೊತ್ತಾಗಲಿಲ್ಲ. ನನ್ನ ಹೃದಯವೇ ಮಿಡಿಯುವುದನ್ನು ನಿಲ್ಲಿಸಿಬಿಟ್ಟಿದೆ ಎನಿಸುತ್ತಿತ್ತು. ಕೆಲವು ಹೊತ್ತಿನ ಅಗಲಿಕೆ ಇಷ್ಟೊಂದು ತೊಂದರೆದಾಯಕ ಈಗ ನನಗೆ ಅರ್ಥ ಆಗುತ್ತಿದೆ. ಹಲವು ದಿನಗಳ ಬಳಿಕ ಮನೆಗೆ ಬಂದಾಗ ನಿಧಿ ಅಷ್ಟೊಂದು ಮುನಿಸಿಕೊಳ್ಳುವುದು ಏಕೆ ಎಂದು. ನಿಜ, ಏಕಾಂಗಿತನ ಬಹಳ ಬೇಸರ ಹುಟ್ಟಿಸುತ್ತದೆ.
ಕಿಟಕಿ ಮುಕ್ತವಾಗಿದ್ದಾಗ್ಯೂ ಉಸಿರುಗಟ್ಟಿದಂತಾಗುತ್ತಿತ್ತು. ಬಹುಶಃ ವಾತಾವರಣ ಕೂಡ ನನ್ನೊಂದಿಗೆ ಮುನಿಸಿಕೊಂಡಂತೆ ಹೊರಗೆ ಹೊರಟೆ. ಕೈತೋಟದ ಹವ್ಯಾಸಿಯಾಗಿದ್ದ ನಿಧಿ, ಒಂದಕ್ಕಿಂತ ಒಂದು ಚೆಂದದ ಹೂವಿನ ಗಿಡಗಳನ್ನು ನೆಟ್ಟಿದ್ದಳು. ಈ ಮೊದಲು ನಾನೆಂದೂ ಆ ಬಗ್ಗೆ ಗಮನ ಕೊಟ್ಟಿರಲಿಲ್ಲ. ನನ್ನ ಮನಸ್ಸು ಅಲ್ಲೂ ಕೂಡ ನಿಲ್ಲಲಿಲ್ಲ.
ಇಂದು ಪುನಃ ತುಮಕೂರಿಗೆ ಹೋಗಬೇಕಿತ್ತು. ಆದರೆ ಮನಸ್ಸು ಹೋಗಲು ಇಚ್ಛಿಸುತ್ತಿರಲಿಲ್ಲ. ಆದಾಗ್ಯೂ ಹೋಗಲೇಬೇಕಿತ್ತು ಮತ್ತು ಈ ಏಕಾಂಗಿತನದಿಂದ ದೂರ ಹೋಗಲು ಇಚ್ಛಿಸುತ್ತಿದ್ದೆ. ಚಹಾ ಕುಡಿಯುವ ಇಚ್ಛೆಯಾಯಿತು. ಅಡುಗೆಮನೆಗೆ ಹೋಗುತ್ತಿದ್ದಂತೆಯೇ ನಿಧಿಯ ನೆನಪು ಬಂತು, ನಾನು ವಾಪಸ್ ಆದೆ. ಕಣ್ಣೀರು ಒರೆಸಿಕೊಳ್ಳುತ್ತಾ ತಯಾರಾದೆ ಹಾಗೂ ಮನೆಯಿಂದ ಹೊರಟೆ. ಆಗ ನನಗೆ ಬೆನ್ನ ಹಿಂದಿನಿಂದ ಯಾರದ್ದೋ ಕಣ್ಣಿನ ಸ್ಪರ್ಶವಾದಂತೆ ಭಾಸವಾಯಿತು. ಆಗ ನಾನು ತಿರುಗಿ ನೋಡಿದೆ, ಯಾರೂ ಕಾಣಲಿಲ್ಲ.ತುಮಕೂರಿಗೆ ಹೋದ ಬಳಿಕ, ನನ್ನ ಮನಸ್ಸು ಮನೆಗೆ ಹೋಗಲು ತಳಮಳಿಸತೊಡಗಿತು. ನಿಧಿ ನನ್ನನ್ನು ನಿರೀಕ್ಷಿಸುತ್ತಿರಬಹುದು ಎಂದು ನನಗೆ ಅನಿಸತೊಡಗಿತು. ನಾನು ಪುನಃ ಬೆಂಗಳೂರಿಗೆ ಬಂದೆ.
ಮನೆಗೆ ಬಂದು ನೋಡಿದಾಗ ನಿಧಿ ಇರಲಿಲ್ಲ. ಮನಸ್ಸು ಚಡಪಡಿಸಿತು. ನಿಧಿಯ ಮೇಲೆ ಕೋಪ ಕೂಡ ಬಂತು. ನಾನು ನೌಕರಿ ಮಾಡುವುದು ಅವಳ ಸುಖ ಸೌಲಭ್ಯಕ್ಕೆ ಎಂದು ಅವಳಿಗೆ ಏಕೆ ಅರ್ಥ ಆಗುವುದಿಲ್ಲ? ಅವಳಿಗೆ ಜಗತ್ತಿನ ಸುಖ ಸೌಲಭ್ಯಗಳೆಲ್ಲ ದೊರಕಬೇಕು ಎಂದು ನಾನು ಯೋಚಿಸುತ್ತೇನೆ. ಅವಳ ಜೊತೆಗೇ ಕುಳಿತು ಜೀವನ ನಡೆಸಬೇಕೆಂದೂ ನನ್ನ ಮನಸ್ಸು ಯೋಚಿಸುತ್ತಿರುತ್ತೆ. ಆದರೆ ಮನೆಯಲ್ಲಿಯೇ ಕುಳಿತಿರುವುದರಿಂದ ಯಾವುದೂ ಸಾಧ್ಯವಾಗುವುದಿಲ್ಲ. ಆದರೆ ಅದನ್ನು ಏಕೆ ಅರ್ಥ ಮಾಡಿಕೊಳ್ಳುವುದಿಲ್ಲವೋ ಏನೋ? ನನ್ನ ಮೇಲೆ ನನಗೇ ಬೇಸರ ಹುಟ್ಟಿತು. ಮನೆಯಿಂದ ಹೊರಗೆ ಬಂದೆ. ಉದ್ದೇಶವಿಲ್ಲದೆಯೇ ರಸ್ತೆಯ ಮೇಲೆ ಸುತ್ತಾಡತೊಡಗಿದೆ. ಮೈಸೂರಿನ ಕಡೆ ಹೋಗುವ ಬಸ್ ಕಾಣಿಸಿತು. ಹೋಗಿ ಕುಳಿತುಕೊಂಡೆ.
ಹಸಿವಿನಿಂದ ಹೊಟ್ಟೆ ಉರಿಯುತ್ತಿತ್ತು. ನೀರಡಿಕೆಯ ಅನುಭವ ಕೂಡ ಆಯಿತು. ಕಳೆದ 2 ದಿನಗಳಿಂದ ಹಸಿವು ನೀರಡಿಕೆ ಮರೆತು ಕಾರಣವಿಲ್ಲದೆಯೇ ನಾನು ಹೊರಟಿದ್ದೆ.
ಒಂದು ಕಡೆ ಬಸ್ ನಿಂತಿತು. ಬಿಸ್ಕತ್ತಿನ ಜೊತೆಗೆ ಚಹಾ ಗುಟುಕರಿಸಿದೆ. ದುಃಖವೇ ಇರಬಹುದು ಅಥವಾ ಸುಖ, ಹೊಟ್ಟೆ ಯಾವಾಗ ತಾನೇ ಶಾಂತವಾಗಿರುತ್ತದೆ?
ಶ್ರೀರಂಗಪಟ್ಟಣದಲ್ಲಿ ಇಳಿದು ಕಾವೇರಿ ತೀರದಲ್ಲಿ ಸುಮಾರು ಹೊತ್ತು ಹಾಗೆಯೇ ಕುಳಿತಿದ್ದೆ. ನದಿಯಲ್ಲಿ ಸುತ್ತಾಡುತ್ತಿದ್ದ ನಾವೆಗಳು, ನೀರಿನ ಮೇಲ್ಭಾಗಕ್ಕೆ ಬಂದು ಹಾಗೆಯೇ ಮರೆಯಾಗುತ್ತಿದ್ದ ಮೀನುಗಳು, ಪಕ್ಷಿಗಳ ಕಲರವ, ಚಿಲಿಪಿಲಿ ನಾದ, ಮಕ್ಕಳ ಓಡಾಟ, ಪ್ರೇಮಿಗಳ ನಗು, ವಯೋವೃದ್ಧರ ಆಸೆಯಿಂದ ಕೂಡಿದ ನೋಟ. ನನ್ನನ್ನು ಉದಾಸದ ಕೂಪಕ್ಕೆ ತಳ್ಳತೊಡಗಿದವು.
ಎಲ್ಲರೂ ಖುಷಿಯಿಂದಿದ್ದಾರೆ, ನನ್ನನ್ನು ಹೊರತುಪಡಿಸಿ. ನನ್ನ ಪಾಲಿಗೆ ನಿಧಿ ದುಃಖವನ್ನೇಕೆ ಕೊಡುತ್ತಿದ್ದಾಳೆ? ನದಿತೀರದಲ್ಲಿ ಜನರ ದಟ್ಟಣೆ ಹೆಚ್ಚಾಗುತ್ತಿರುವುದನ್ನು ಕಂಡು ನನ್ನ ಮನಸ್ಸು ಚಡಪಡಿಸತೊಡಗಿತು. ಅಲ್ಲಿಯೇ ಕುಳಿತಿರಬೇಕಾ, ಎದ್ದೇಳಬೇಕಾ ಎಂಬ ನನ್ನ ಮನಸ್ಸು ಡೋಲಾಯಮಾನದಲ್ಲಿತ್ತು. ಕೊನೆಗೂ ನನ್ನ ಮನಸ್ಸು ಎದ್ದೇಳುವುದೇ ಸೂಕ್ತ ಎಂದು ಹೇಳಿ ನನ್ನನ್ನು ಅಲ್ಲಿಂದ ಎಬ್ಬಿಸಿತು.
ಮತ್ತೊಮ್ಮೆ ನಿಧಿಗೆ ಫೋನ್ ಮಾಡಬೇಕೆಂದು ಮನಸ್ಸು ಯೋಚಿಸಿತು. ಅವಳು ಪುನಃ ನನ್ನ ಬಾಹುಗಳಲ್ಲಿ ಬರುವುದೇ ಸೂಕ್ತ ಎನಿಸಿತು. ಜೇಬಿಗೆ ಕೈ ಹಾಕಿ ನೋಡಿದೆ, ಆದರೆ ಅಲ್ಲಿ ಮೊಬೈಲ್ ಇರಲೇ ಇಲ್ಲ ತಳಮಳಗೊಂಡಿದ್ದ ಮನಸ್ಸು ಯೋಚಿಸಿತು, ಮೊಬೈಲ್ ಎಲ್ಲಿ ಬಿಟ್ಟುಬಂದೆ?
ಬಹುಶಃ ಆತುರಾತುರದಲ್ಲಿ ಮನೆಯಲ್ಲಿಯೇ ಬಿಟ್ಟುಬಂದಿರಬಹುದು ಎಂದು ಮನಸ್ಸು ಮತ್ತೆ ಯೋಚಿಸಿತು.
ತಂಗಾಳಿ ನನ್ನ ಪಕ್ಕದಿಂದ ಹಾಗೆಯೇ ಬಂದು, ಹಾಗೆಯೇ ಸರಿದು ಹೋಯಿತು. ನಾನು ಆಕಾಶದತ್ತ ಕತ್ತೆತ್ತಿ ನೋಡಿದೆ. ಸ್ವಚ್ಛ, ನಿರ್ಮಲ ಆಕಾಶದಲ್ಲಿ ಒಂಟಿ ಮೋಡಗಳು ತೇಲುತ್ತಿದ್ದವು. ಕೆಲವು ನಕ್ಷತ್ರಗಳು ಕಂಡುಬಂದವು. ಚಂದ್ರ ಮೋಡದ ಮಧ್ಯೆ ಚೆಲ್ಲಾಟ ನಡೆಸುತ್ತಿದ್ದವು. ಒಮ್ಮೊಮ್ಮೆ ಮುಕ್ತ ಆಕಾಶದಡಿ ನಾನು ಹಾಗೂ ನಿಧಿ ಪರಸ್ಪರರ ಬಾಹುಗಳಲ್ಲಿ ಕಳೆದುಹೋಗುತ್ತಿದ್ದೆವು. ನಿಧಿ ಎಂದಾದರೊಮ್ಮೆ ನಾಚಿಕೊಂಡು ಚಂದ್ರ ನಮ್ಮನ್ನು ನೋಡುತ್ತಿದ್ದಾನೆಂದು ಹೇಳುತ್ತಿದ್ದಳು.
ನಾನಾಗ ನಗುತ್ತಲೇ ಚಂದ್ರನು ಕೂಡ ನಿನ್ನ ಹಾಗೆಯೇ ನಾಚಿಕೊಂಡು ಸುಮ್ಮನಿದ್ದಾನೆ ಎಂದು ಹೇಳಿದೆ. ಎಲ್ಲಿ ಹೋದೆ ಗೊಂಬೆ? ನನಗೆ ನಗು ಬಂತು. ನಾನು ಯಾವಾಗಲಾದರೂ ಅವಳಿಗೆ ಗೊಂಬೆ ಎಂದು ಕರೆಯುತ್ತಿದ್ದರೆ, ಅವಳು ಕಣ್ಣುಗಳನ್ನು ಅತ್ತಿತ್ತ ತಿರುಗಿಸುತ್ತಾ ನಾನು ನಿಧಿ, ಪುಟ್ಟ ಗೊಂಬೆಯಲ್ಲ ಎಂದು ಹೇಳುತ್ತಿದ್ದಳು. ಗೊಂಬೆಯಾಗಿದ್ದರೆ, ನಾನು ಕೀ ತಿರುವಿದಂತೆ, ನನ್ನ ಆಸುಪಾಸು ಸುತ್ತುತ್ತಿದ್ದಳು ಎಂದು ಕಲ್ಪನೆ ಮಾಡಿಕೊಂಡೆ.
ನಿನ್ನ ಇಚ್ಛೆಯಿದ್ದರೆ ಅವಳು ನಿನ್ನ ಅಣತಿಯಂತೆಯೇ ತಿರುಗುತ್ತಿದ್ದಳು. ನನಗೆ ಪುನಃ ನಗುಬಂತು. ಅವಳಿಗೆ ಚಿನ್ನಾ ಎಂದು ಕರೆದಾಗೆಲ್ಲ ಅವಳು ಮೂರ್ತಿಯಂತೆ ನಿಂತುಬಿಡುತ್ತಿದ್ದಳು. ಚಿನ್ನಕ್ಕೆ ಸಜೀವ ಲಕ್ಷಣ ಎಲ್ಲಿಂದ ತರುತ್ತೀರಿ ಎಂದು ನನ್ನನ್ನು ಅಣುಕಿಸುವಂತೆ ನೋಡುತ್ತಿದ್ದಳು.
ನನ್ನ ಕೆನ್ನೆಗುಂಟ ಕಣ್ಣೀರು ಉದುರಿತು. ನಿಧಿ ಮತ್ತೆ ಮರಳಿ ಬರಲಾರಳೆ? ರಾತ್ರಿ ಹೊತ್ತು ಒಂದು ಹೋಟೆಲ್ ನಲ್ಲಿ ಕಾಲ ಕಳೆದೆ. ಬೆಳಗ್ಗೆ ಆಯಿತು. ಆಗ ಎಲ್ಲಿಗೆ ಹೋಗಬೇಕೆಂದು ಗೊತ್ತಾಗಲಿಲ್ಲ. ಹೀಗಾಗಿ ಮನೆಗೆ ಹೋಗಲೆಂದು ಪುನಃ ಬೆಂಗಳೂರು ಕಡೆಯ ಬಸ್ ಹತ್ತಿದೆ. ಆಗ ಕಡಲೆಕಾಯಿ ಕಡಲೆಕಾಯಿ ಎಂಬ ಶಬ್ದ ಕೇಳಿಬಂತು. ಅದು 10-12 ವರ್ಷದ ಹುಡುಗನ ಧ್ವನಿಯಾಗಿತ್ತು. ನಾನು ಅವನ ಮುಖದ ಮೇಲೆ ಮುಗ್ಧ ಮುಗುಳ್ನಗೆ ಕಂಡೆ. 10 ರೂ. ಕಡಲೆಕಾಯಿ ಖರೀದಿಸಿದೆ. ನಿಧಿಗೆ ಈ ಕಡಲೆಕಾಯಿ ಎಂದರೆ ಬಹಳ ಇಷ್ಟವಾಗುತ್ತಿತ್ತು. ನಾವು ಪ್ರವಾಸಕ್ಕೆ ಹೋದಾಗೆಲ್ಲ ಅವಳು ಅವಶ್ಯವಾಗಿ ಕಡಲೆಕಾಯಿ ಖರೀದಿಸುತ್ತಿದ್ದಳು.
ಬಸ್ ಹೊರಟಿತು. ಕೆಲವರು ತೂಕಡಿಸತೊಡಗಿದರು. ಮತ್ತೆ ಕೆಲವರು ಮಾತುಗಳಲ್ಲಿ ಮಗ್ನರಾದರು. ಇನ್ನು ಕೆಲವರು ಹೊರಗಿನ ದೃಶ್ಯಗಳನ್ನು ಕಣ್ತುಂಬಿಸಿಕೊಳ್ಳತೊಡಗಿದರು. ನಾನು ಬೇಸರದ ಮನಸ್ಸಿನಿಂದಲೇ ಹೊರಗಿನ ದೃಶ್ಯ ನೋಡತೊಡಗಿದೆ. ಆದರೆ ಮನಸ್ಸು ಮಾತ್ರ ಅಲ್ಲಿ ನಿಲ್ಲಲಿಲ್ಲ. ಬೇಗ ಮನೆ ತಲುಪಬೇಕೆಂದು ಮನಸ್ಸು ಕಾತರಿಸತೊಡಗಿತ್ತು. ಅಲ್ಲಿಯೇ ನಿಧಿಯ ನೆನಪಲ್ಲಾದರೂ ಉಳಿಯಬಹುದು ಎನಿಸಿತು.
ಮನೆ ತಲುಪಿದೆ. ಸಸಿಗಳು ಮುರುಟುತ್ತಿದ್ದವು. ಅವುಗಳಿಗೂ ನಿಧಿಯ ನೆನಪು ಬರುತ್ತಿರಬಹುದು ಎನಿಸಿತು. ಅವಳು ಅವುಗಳಿಗೆ ಪ್ರೀತಿಯಿಂದ ನೀರುಣಿಸುತ್ತಿದ್ದಳು. ಅಷ್ಟೇ ಚೆನ್ನಾಗಿ ನೋಡಿಕೊಳ್ಳುತ್ತಿದ್ದಳು. ಅವುಗಳನ್ನು ಪ್ರೀತಿಭರಿತ ದೃಷ್ಟಿಯಿಂದ ನೋಡುತ್ತಾ, ಬಾಗಿಲು ತೆರೆದು ಒಳಗೆ ಬಂದೆ. ಒಳಗೆ ಅಡುಗೆಮನೆಯಲ್ಲಿ ಪಾತ್ರೆಗಳ ಸದ್ದು ಕೇಳಿಸುತ್ತಿತ್ತು. ಅಲ್ಲಿ ಇಣುಕಿ ನೋಡಿದೆ, ನಿಧಿ ಅಲ್ಲಿ ಚಹಾ ತಯಾರಿಸುತ್ತಿದ್ದಳು. ನಾನು ಹುಚ್ಚನ ಹಾಗೆ ಅವಳನ್ನು ಅಪ್ಪಿಕೊಂಡು, “ಚಿನ್ನಾ, ನನ್ನ ಗೊಂಬೆ, ನೀನು ಎಲ್ಲಿಗೆ ಹೋಗಿದ್ದೆ? ನೀನಿಲ್ಲದೆ ನಾನು ಇರಲು ಸಾಧ್ಯವೇ ಇಲ್ಲ ಎನ್ನುವುದು ನಿನಗೆ ಗೊತ್ತಾ? ಒಂದೊಂದು ಕ್ಷಣ, ಒಂದೊಂದು ವರ್ಷದಷ್ಟು ದೀರ್ಘ ಎನಿಸುತ್ತಿದ್ದವು,” ಎಂದು ಹೇಳಿದೆ.
ನಿಧಿ ಮುಗುಳ್ನಕ್ಕಳು. ಅವಳು ನನ್ನ ಕಣ್ಣಲ್ಲಿ ಕಣ್ಣಿಟ್ಟು, “ಅಂತಹ ಅನುಭವ ಸಹಜವೇ ಸರಿ. ಅಗಲಿಕೆ ಪ್ರೀತಿಯನ್ನು ಹೆಚ್ಚಿಸುತ್ತದೆ ಎಂದು ಯಾರೊ ಹೇಳಿದ್ದನ್ನು ಕೇಳಿದ್ದೆ. ನಾನು ನಿಮ್ಮ ತಳಮಳವನ್ನು ಗಮನಿಸುತ್ತಿದ್ದೆ. ನಿಮ್ಮ ಜೊತೆಗೆ ನಾನೂ ಬಂದುಬಿಡಬೇಕೆಂದು ಯೋಚಿಸುತ್ತಿದ್ದೆ. ಆದರೆ ನೀವು ಇನ್ನೂ ಸ್ವಲ್ಪ ಹೊತ್ತು ಬೇಸರ ಮಾಡಿಕೊಳ್ಳುವುದನ್ನು ನೋಡಬೇಕೆಂಬ ಕಾರಣದಿಂದ ನಾನು ಹಾಗೆಯೇ ಬಚ್ಚಿಟ್ಟುಕೊಂಡಿದ್ದೆ. ನೀವು ನನ್ನನ್ನು ಅದೆಷ್ಟು ಪ್ರೀತಿಸುತ್ತೀರಿ ರಾಜೇಶ್, ನಾನು ನಿಮ್ಮನ್ನು ಬಿಟ್ಟು ಎಲ್ಲೂ ಹೋಗುವುದಿಲ್ಲ!” ಎಂದು ಪ್ರೀತಿಯಿಂದ ಹೇಳಿದಳು.
ನಾನು ಅವಳನ್ನು ಚುಂಬಿಸುತ್ತಾ, “ಇವತ್ತಿನ ದಿನ ನನಗೆ ಖುಷಿಯ ದಿನ. ಇವತ್ತು ನನಗೆ ವಸಂತಾಗಮನದ ದಿನ ಅನಿಸುತ್ತಿದೆ. ನೀನೇ ನನ್ನ ವಸಂತಾ…..”