ತಂದೆಯಂತೆಯೇ ಸಾಹಸಿ, ಧೀರಳಾದ ಮಗಳು ಮಧುರಾ, ಪೊಲೀಸ್ ಇಲಾಖೆಗೆ ಸೇರಿ ತಂದೆಯ ಶತ್ರುಗಳನ್ನು ಬಗ್ಗುಬಡಿಯುವಲ್ಲಿ ಯಶಸ್ವಿಯಾದಳೇ……?
ರಾಧಾಳ ಕಾಲುಗಳು ನೆಲದಲ್ಲೇ ನಿಲ್ಲುತ್ತಿರಲಿಲ್ಲ. ಒಂದು ನಿಮಿಷ ಇಲ್ಲಿದ್ದರೆ ಏನೋ ನೆನಪಾದವಳ ಹಾಗೆ ಇನ್ನೊಂದು ನಿಮಿಷಕ್ಕೆ ಅಡುಗೆಮನೆಗೆ ಓಡುತ್ತಿದ್ದಳು. ಮತ್ತೆ ಬಾಗಿಲಿಗೆ ಬಂದು ಹೊರಗಡೆ ನೋಡುತ್ತಿದ್ದಳು. ಮುಖದ ಮೇಲೆ ನಗು, ಕಣ್ಣಲ್ಲಿ ಹೊಳಪು ತುಂಬಿ ತುಳುಕುತ್ತಿತ್ತು.
“ರಾಧಾ, ಮಗಳು ಮನೆಗೆ ಬಂದ ತಕ್ಷಣ ಮೊದಲು ಅವಳಿಗೆ ದೃಷ್ಟಿ ತೆಗೆದುಬಿಡು. ಹಾಗೇ ಮಾತನಾಡುತ್ತಾ ನಿಂತುಬಿಡಬೇಡ…..”
“ಆಯ್ತು ಅತ್ತೆ….”
“ರಾಧಾ…. ಒಂದು ನಿಮಿಷ ಕುಳಿತುಕೋ. ಬೆಳಗ್ಗೆಯಿಂದ ಓಡಾಡುತ್ತಿದ್ದೀಯಾ…. ಅವಳು ಬರುವುದು 11 ಗಂಟೆಗೆ, ಈಗಿನ್ನೂ 9 ಗಂಟೆ.”
ಆದರೆ ತಾಯಿಯ ಕರುಳು ಕೇಳಬೇಕಲ್ಲ,…., “ಇಲ್ಲಾ ಅತ್ತೆ ಹೀಗೆ ಅಂದರೆ ಹಾಗೆ ತಾಸುಗಳು ಉರುಳುತ್ತವೆ. ನಾನು ಒಳಗಡೆ ಇದ್ದಾಗ ಅವಳು ಬಂದುಬಿಟ್ಟರೆ…..”
ಜಾನಕಮ್ಮನಿಗೆ ಸೊಸೆಯ ಖುಷಿ ನೋಡಿ ಮನತುಂಬಿ ಬಂದಿತು. `ಎಷ್ಟು ವರ್ಷಗಳ ತಪಸ್ಸಿನ ಮೇಲೆ ಈ ಖುಷಿ ರಾಧಾಳ ಬಾಳಲ್ಲಿ ಸಿಕ್ಕಿದೆ. ಅವಳಿಗೆ ಹೇಗೆ ಬೇಕೋ ಹಾಗೆ ಅನುಭವಿಸಲಿ,’ ಎಂದು ಮಂದಹಾಸದಿಂದ ರೂಮಿನಲ್ಲಿದ್ದ ಮಗನ ಫೋಟೋ ಮುಂದೆ ಹೋಗಿ ನಿಂತರು.
ಅವರ ಮನ ಗತಕಾಲಕ್ಕೆ ಹೋಯಿತು. `ನಾನು ನಿನ್ನ ತಂದೆ ಆ ದಿನ ಹೀಗೆಯೇ ಸಂಭ್ರಮಪಟ್ಟೆವು. ನಿನ್ನನ್ನು ಮೊದಲ ಬಾರಿ ಆ ಪೊಲೀಸ್ ಸಮಸ್ತ್ರದಲ್ಲಿ ನೋಡಿ ಹೆಮ್ಮೆಪಟ್ಟೆ. ನಿನ್ನ ಕರ್ತವ್ಯ ನಿಷ್ಠೆಯಿಂದ ನೀನು ಎಲ್ಲರಿಗೂ ದುಃಸ್ವಪ್ನನಾದೆ. ಎಲ್ಲರೂ ನಿನ್ನ ಹೆಸರಿಗೆ ಜೈಕಾರ ಹಾಕುತ್ತಿದ್ದರು. ಆದರೆ ಕಳ್ಳಕಾಕರಿಗೆ ನಿನ್ನ ಮೇಲೆ ಎಲ್ಲಿಲ್ಲದ ಸಿಟ್ಟು. ನಿನಗೋ ಸಿಟ್ಟು ಕಡಿಮೆ ಇರಲಿಲ್ಲ. ಆ ಸಿಟ್ಟನ್ನು ಕಡಿಮೆ ಮಾಡಲು ಸರಿಯಾದ ಜೋಡಿಯಾಗಿ ಬಂದಳು ರಾಧಾ…..
`ನನ್ನ ಸೊಸೆ, ತನ್ನ ನಗುಮುಖದಿಂದ ನಮ್ಮ ಮನೆ ತುಂಬಿದಳು. ಅವಳ ಮುಗ್ಧತನ, ಒಳ್ಳೆಯ ಮನಸ್ಸು ನಮಗೆ ಸೊಸೆ ಎಂಬ ಭಾವ ಬರಲೇ ಇಲ್ಲ. ಅವಳು ಮನೆ ಮಗಳಾದಳು. ಒಳ್ಳೆಯವರಿಗೆ ಕಾಲವಿಲ್ಲ ಎನ್ನುವ ಹಾಗೆ ವಿಷ ಸರ್ಪಗಳ ಮಧ್ಯೆ ತನ್ನ ಪ್ರಾಮಾಣಿಕತೆಯನ್ನು ಒರೆ ಹಚ್ಚಿ ದುಡಿಯುವ ನಿನ್ನನ್ನು ಆ ಪಾಪಿಗಳು ಕೊಂದುಬಿಟ್ಟರು,’ ಜಾನಕಮ್ಮನ ಕಣ್ಣಿಂದ ಕಣ್ಣೀರು ಒಂದೇ ಸಮನೆ ಸುರಿಯಲಾರಂಭಿಸಿತು.
ಮಡಿಲಲ್ಲಿ ಎಳೆ ಕೂಸನ್ನು ಇಟ್ಟುಕೊಂಡು ರಾಧಾ ಮಗಳಿಗಾಗಿ, ಗಂಡನ ಆಸೆಗಾಗಿ ಧೈರ್ಯ ತಂದುಕೊಂಡು ಜೀವನ ಎದುರಿಸಿದಳು.
ಇನ್ನೂ ಚಿಕ್ಕ ವಯಸ್ಸು, ಸಂಸಾರದ ಸುಖ ಕಾಣುವ ಮನಸ್ಸು. ಮಗು ನಮಗೆ ಕೊಡು ನಾವು ಸಾಕುತ್ತೇವೆ. ನೀನು ತರಿಗೆ ಹೋಗಿ, ಬೇರೆ ಮದುವೆಯಾಗು, ಎಂದು ಹೇಳಿದರೂ ಕೇಳಲಿಲ್ಲ.
ಬಾಯಿ ತುಂಬಾ ಮಗಳೇ ಅನ್ನುತ್ತೀರಿ. ಒಂದು ದಿನ ತವರು ಮನೆಯ ನೆನಪು ಬರದ ಹಾಗೆ ನೋಡಿಕೊಂಡಿದ್ದೀರಿ. ಜೀವನದ ಆಸರೆ, ಇಳಿವಯಸ್ಸಿನ ಊರುಗೋಲಾಗಿದ್ದ ಸ್ವಂತ ಮಗನನ್ನು ಕಳೆದುಕೊಂಡು ಎಷ್ಟು ದುಃಖದಲ್ಲಿ ಇದ್ದೀರಿ ಅಂತ ನನಗೆ ಗೊತ್ತು. ನಾನು, ನಿಮ್ಮ ಮೊಮ್ಮಗಳು ಎಲ್ಲಿಯೂ ಹೋಗುವುದಿಲ್ಲ. ನಿಮ್ಮ ಜೊತೆ ನಿಮ್ಮ ಮಗನಾಗಿ ನಿಮ್ಮನ್ನು ನೋಡಿಕೊಳ್ಳುವ ಜವಾಬ್ದಾರಿ ನನ್ನದು, ಎಂದು ಹೇಳಿದ ರಾಧಾಳಾ ಮಾತುಗಳು ಇಂದಿಗೂ ನೆನಪಾಗುತ್ತದೆ.
ಇಂತಹ ಸೊಸೆ ಹುಡುಕಿದರೂ ಸಿಗುವುದಿಲ್ಲ. ಇದು ನಮ್ಮ ಪೂರ್ವಜನ್ಮದ ಪುಣ್ಯ. ಅಂದಿನಿಂದ ರಾಧಾ ಮಗಳನ್ನು ಒಬ್ಬ ಮಗನ ಹಾಗೆ ಬೆಳೆಸಿದಳು.
“ಅತ್ತೆ….. ಮಧು ಬಂದಳು!” ಎಂಬ ದನಿ ಕೇಳಿ ವಾಸ್ತವಕ್ಕೆ ಬಂದ ಜಾನಕಮ್ಮ ಕಣ್ಣೊರೆಸಿಕೊಳ್ಳುತ್ತಾ ಪ್ರಸನ್ನಚಿತ್ತರಾಗಿ ಹೊರಗೆ ಓಡಿ ಬಂದರು.
ಡಿವೈಎಸ್ಪಿ ಮಧುರಾ ಸಮಸ್ತ್ರದಲ್ಲಿ ನಿಂತಿದ್ದಳು. ಅವಳ ಕಣ್ಣಲ್ಲಿ ತನ್ನ ತಂದೆಯ ಅದೇ ಹೊಳಪು. ರಾಧಾ ಮಗಳಿಗೆ ದೃಷ್ಟಿ ತೆಗೆದು, ಮಗಳನ್ನು ಹೆಮ್ಮೆಯಿಂದ ಅಪ್ಪಿಕೊಂಡು ಆನಂದಬಾಷ್ಪ ಸುರಿಸಿದಳು.
ತಾಯಿ ಮತ್ತು ಅಜ್ಜಿಯ ಕಾಲಿಗೆ ನಮಸ್ಕರಿಸಿ ತಂದೆಯ ಫೋಟೋ ಮುಂದೆ ಕೈ ಮುಗಿದು ನಿಂತ ಮಧು, “ಅಪ್ಪಾ, ನಿನ್ನ ಮಗಳು ಇಂದು ನಿನ್ನ ಸಮವಸ್ತ್ರ ಧರಿಸಿ ನಿಂತಿದ್ದಾಳೆ. ಡಿವೈಎಸ್ಪಿ ರಾಜಶೇಖರರ ಮಗಳು ಡಿವೈಎಸ್ಪಿ ಮಧುರಾ ಎನ್ನುತ್ತಿದ್ದಾರೆ ಅಪ್ಪ,” ಎಂದು ಕಣ್ಣೀರು ಸುರಿಸಿದಳು.
ಅಜ್ಜಿ ಮೊಮ್ಮಗಳನ್ನು ಅಪ್ಪಿಕೊಂಡು ಸಮಾಧಾನಪಡಿಸಿದರು. ರಾಧಾಳ ಮುಖ ಮಂಕಾಯಿತು. ಅಮ್ಮನ ಹಿಂದೆ ಹೋದ ಮಧುರಾ, “ಅಮ್ಮಾ, ಏನಾಯಿತು…?” ಎಂದು ಕೇಳಿದಳು.
“ಏನಿಲ್ಲಾ ಮಧು, ಸಂತೋಷದಿಂದ ಮಾತೆ ಬರುತ್ತಿಲ್ಲ. ಬಟ್ಟೆ ಬದಲಿಸು, ಅಜ್ಜಿ ನಿನ್ನ ಇಷ್ಟದ ಅಡುಗೆಯನ್ನು ಹೇಳಿ ಮಾಡಿಸಿದ್ದಾರೆ. ಬೇಗ ಬಾ,” ಎನ್ನುತ್ತಾ ಅಡುಗೆಮನೆಯತ್ತ ಹೋದಳು.
ಮಧುರಾ ಮರು ಮಾತನಾಡದೆ ಬಟ್ಟೆ ಬದಲಿಸಲು ತನ್ನ ರೂಮಿಗೆ ಹೋದಳು. ಅಪ್ಪ ತೀರಿಕೊಂಡ ಮೇಲೆ ಪೊಲೀಸ್ ಡಿಪಾರ್ಟ್ ಮೆಂಟ್ ನಲ್ಲೇ ಅಮ್ಮನಿಗೆ ಕ್ಲರ್ಕ್ ಕೆಲಸ ಸಿಕ್ಕಿತ್ತು. ಆದರೆ ಈ ಪ್ರಪಂಚದಲ್ಲಿ ಒಂದು ಒಂಟಿ ಹೆಣ್ಣು ತನ್ನ ಮಗುವನ್ನು ಅದರಲ್ಲೂ ಹೆಣ್ಣು ಮಗುವನ್ನು ಬೆಳೆಸಲು ಹಣವಷ್ಟೇ ಅವಶ್ಯವಲ್ಲ, ಪ್ರತಿದಿನ ಪ್ರತಿ ಕ್ಷಣ ಸಮಾಜದೊಡನೆ ಹೊಡೆದಾಡಬೇಕಿತ್ತು. ಧುತ್ತೆಂದು ಎದ್ದು ನಿಲ್ಲುವ ಸಮಸ್ಯೆಯ ಜಾಲ ಹಿಡಿದು ಸರಿ ಮಾಡಿ ಮತ್ತೆ ಧೈರ್ಯದಿಂದ ಮುನ್ನುಗ್ಗಬೇಕಿತ್ತು. ಇದು ಒಬ್ಬ ತಾಯಿಯಿಂದ ಆಗದು ಆದರೂ ನನ್ನ ತಾಯಿ ಮಹಾದೇವಿ ಅಕ್ಕನ ವಚನ ಪರಿಪಾಲಿಸುತ್ತಾ ನನ್ನನ್ನು ಸಾಕಿ ಈ ಮಟ್ಟಕ್ಕೆ ಬೆಳೆಸಿದ್ದಾಳೆ ಎಂದು ನೆನೆಸಿ ತಾಯಿಯ ಬಗ್ಗೆ ಹೆಮ್ಮೆಪಟ್ಟಳು.
ಊಟ ಮಾಡುತ್ತಾ, “ಅಜ್ಜಿ, ನಿನ್ನ ಕೈ ರುಚಿ ಆಹಾ…. ಎಷ್ಟು ಸೊಗಸಾಗಿದೆ. ಊಪ್ಪಿನಕಾಯಿಯಂತೂ ಸೂಪರ್,” ಎನ್ನುತ್ತಾ ಬಾಯಿ ಚಪ್ಪರಿಸಿ ಊಟ ಮುಗಿಸಿದಳು.
ತಾಯಿ, ಅಜ್ಜಿ ಇಬ್ಬರೂ ಮಧುರಾಳ ಖುಷಿಯನ್ನು ಕಣ್ಣಲ್ಲಿ ಹಿಡಿದಿಟ್ಟುಕೊಳ್ಳಲು ಪ್ರಯತ್ನಿಸುತ್ತಿದ್ದರು. ಅಂದು ರಾತ್ರಿ ಮಧುರಾ ತನ್ನ ಟ್ರೈನಿಂಗ್ ನಲ್ಲಿ ನಡೆದ ಹಾಸ್ಯ ಪ್ರಸಂಗಗಳನ್ನು ತಾಯಿಯೊಂದಿಗೆ ಹೇಳಿಕೊಂಡು ನಕ್ಕಳು.
ತನ್ನ ತೊಡೆಯ ಮೇಲೆ ಮಲಗಿಕೊಂಡಿದ್ದ ಮಗಳ ತಲೆಗೂದಲಲ್ಲಿ ಕೈಯಾಡಿಸುತ್ತಿದ್ದ ರಾಧಾಳ ಆಲೋಚನೆ ಬೇರೆಯದೇ ಆಗಿತ್ತು. ತಾಯಿ ಮೌನವಾಗಿರುವುದನ್ನು ಗಮನಿಸಿದ ಮಧುರಾ, ಆಕೆಯ ಆತಂಕದ ಮುಖ ನೋಡಿ ಎದ್ದು ಕುಳಿತು, ತಾಯಿಯ ಕೈಯನ್ನು ತನ್ನ ಕೈಯಲ್ಲಿ ಹಿಡಿದುಕೊಂಡು ತಾಯಿಯ ಕಣ್ಣಲ್ಲಿ ಕಣ್ಣಿಟ್ಟು…. “ಬೆಟ್ಟದ ಮೇಲೊಂದು ಮನೆಯ ಮಾಡಿ ಮೃಗಗಳಿಗಂಜಿದಡೆಂತಯ್ಯ…..? ಸಮುದ್ರದ ತಡಿಯಲ್ಲೊಂದು ಮನೆಯ ಮಾಡಿ ನೊರೆ ತೆರೆಗಳಿಗಂಜಿದಡೆಂತಯ್ಯಾ…..? ಸಂತೊಳಗೊಂದು ಮನೆಯ ಮಾಡಿ ಶಬ್ದಕ್ಕೆ ನಾಚಿದಡೆಂತಯ್ಯಾ……? ಚೆನ್ನಮಲ್ಲಿಕಾರ್ಜುನ ದೇವ ಕೇಳಯ್ಯಾ….” ಎಂದು ಅಮ್ಮನ ಗಲ್ಲ ಸವರುತ್ತಾ, “ಅಮ್ಮಾ, ಅಕ್ಕಮಹಾದೇವಿಯ ವಚನ ಪ್ರತಿದಿನ ಗುನುಗುತ್ತಿರುತ್ತೀಯಾ. ಅದೇ ವಚನಗಳನ್ನು ಹೇಳುತ್ತಾ ನನ್ನನ್ನು ಬೆಳೆಸಿದ್ದೀಯಾ…. ಆದರೆ ಈ ವಚನ ಹೇಗೆ ಮರೆತೆ!
“ನಿನ್ನ ಆತಂಕ ನನಗೆ ಗೊತ್ತು. ಮತ್ತೆ ಆ ಕದೀಮರ ಊರಿಗೆ ನನ್ನ ಪೋಸ್ಟಿಂಗ್ ಆಗಿರುವುದು ನಿನಗೆ ಭಯ ಹುಟ್ಟಿಸಿದೆ. ನಾನು ಈಗಾಗಲೇ ಸಮುದ್ರದಲ್ಲಿ ಇಳಿದಾಗಿದೆ. ಈಗ ನೊರೆತೊರೆಗಳಿಗೆ ಅಂಜಲ್ಲಮ್ಮ….. ನನಗೆ ಆ ಮೃಗಗಳ ಆರ್ಭಟ ಗೊತ್ತಿದೆ. ಅದಕ್ಕಾಗಿಯೇ ಅವರ ಊರಿಗೆ ಹೋಗಲು ಸನ್ನದ್ಧಳಾಗಿದ್ದೇನೆ.
“ಅಪ್ಪನ ಸಾವಿನ ಪ್ರತೀಕಾರ ತೀರಿಸಬೇಕಿದೆ. ನಿನ್ನ ಮಗಳು ಅಲ್ಲಿಯೇ ಮನೆ ಮಾಡಿಕೊಂಡು ಅಲ್ಲೇ ಇದ್ದು ಆ ಕಾಡು ಮೃಗಗಳೊಡನೆ ಹೋರಾಡುತ್ತಾಳೆ. ಭಯ ಬಿಡಮ್ಮಾ….” ಎಂದು ಆತ್ಮವಿಶ್ವಾಸದಿಂದ ಹೇಳಿದಳು.
ಮಗಳ ರೋಷ, ಆತ್ಮವಿಶ್ವಾಸ ಕಂಡು ದೇವರೇ ಕಾಪಾಡು ಎಂದು ಮನಸ್ಸಿನಲ್ಲೇ ಹರಸಿದಳು ರಾಧಾ. ದಿನಗಳು ಯಾರ ಅಪ್ಪಣೆ ಇಲ್ಲದೆ ಸಾಗುತ್ತಿದ್ದವು. ಬಂದ ಹೊಸದರಲ್ಲಿಯೇ ಟಿವಿ, ಪೇಪರ್ ಎಲ್ಲೆಲ್ಲೂ ದಕ್ಷ ಅಧಿಕಾರಿ ಮಧುರಾ ಎನ್ನುವ ತಲೆಬರಹ ಓಡಾಡುತ್ತಿತ್ತು. ಅವಳ ತೀಕ್ಷ್ಣ ಚಾಣಾಕ್ಷ ಬುದ್ಧಿಯಿಂದ, ಧೈರ್ಯದಿಂದ ಮುನ್ನುಗ್ಗುವ ಎದೆಗಾರಿಕೆಯಿಂದ ದೊಡ್ಡ ದೊಡ್ಡ ಕುಳಗಳು ಕಂಬಿಯ ಹಿಂದೆ ಬಂದು ಬೀಳತೊಡಗಿದರು. ಸಮಾಜಘಾತುಕರ ನಡುವೆ ಇದ್ದು ಅವರನ್ನು ತನ್ನ ಕಪಿಮುಷ್ಟಿಯಲ್ಲಿ ಸಿಕ್ಕಿಸತೊಡಗಿದಳು. ಕಡೆಗೂ ಈ ಧೀರ ಸಾಹಸಿ ಮಗಳು ತನ್ನ ತಂದೆಯ ಕೊಲೆಗಾರರಿಗೆ ಶಿಕ್ಷೆ ಕೊಡಿಸಿದಳು.
ಸಮಾಜಘಾತುಕರಿಗೆ ದುಃಸ್ವಪ್ನಳಾಗಿ ತನಗೆ ವಹಿಸಿದ ಜವಾಬ್ದಾರಿಯನ್ನು ಅತಿ ಕಾಳಜಿಯಿಂದ ನೆರವೇರಿಸುವುದರ ಜೊತೆಗೆ ದಕ್ಷತೆಯಿಂದ ತನ್ನ ಕೆಲಸವನ್ನು ಪೂರೈಸುತ್ತಾ ಎಲ್ಲರಿಗೂ ಅಚ್ಚುಮೆಚ್ಚಿನ ಅಧಿಕಾರಿಯಾದಳು. ಎಲ್ಲರ ಬಾಯಲ್ಲೂ ಡಿವೈಎಸ್ಪಿ ಮಧುರಾಳ ಹೆಸರು, ಗುಣಗಾನದ ಸುದ್ದಿಯೇ ಸುದ್ದಿ. ಒಂದು ಹೆಣ್ಣು ಮನಸ್ಸು ಮಾಡಿದರೆ ಜಗತ್ತನ್ನೇ ಜಯಿಸಬಹುದು ಎನ್ನುವುದಕ್ಕೆ ಮಧುರಾ ಸಾಕ್ಷಿಯಾದಳು.