ಸ್ವಾಭಿಮಾನಿ ಅರವಿಂದ್ ಸಾಫ್ಟ್ ವೇರ್ ಕೆಲಸ ಬೇಡವೆಂದು ಕೃಷಿ ನಂಬಿಕೊಂಡು ಮಲೆನಾಡಿನಲ್ಲಿ ತಳವೂರಿದ. ಮದುವೆಯ ನೆಪದಲ್ಲಿ ಅವನ ಜೀವನದಲ್ಲಿ ಮೂರು ಹುಡುಗಿಯರು ಬಂದು ಹೋದರು. ಅವಿವಾಹಿತನಾಗಿಯೇ ಉಳಿದುಹೋದ ಅರವಿಂದ್ಧಾರಾಳನ್ನು ಆಕಸ್ಮಿಕವಾಗಿ ಭೇಟಿಯಾದ. ಮುಂದೆ ಇದು ಯಾವ ತಿರುವು ಪಡೆಯಿತು…..?
ಶಾಲೆಯ ಊರಿನಿಂದ ಮುಖ್ಯ ರಸ್ತೆಗೆ ಒಂದು ಕಿ.ಮೀ. ದೂರ. ಹೊತ್ತಾಗಿದ್ದರಿಂದ ಧಾರಾ ಗಡಿಬಿಡಿಯಿಂದ ಬಸ್ಸು ಹಿಡಿಯಲು ಹೊರಟಳು. ಅಲ್ಲಿಂದ ಶಿರಸಿ ಹನ್ನೆರಡು ಕಿ.ಮೀ. ಐದು ಗಂಟೆಯ ಬಸ್ಸು ಹಿಡಿದು ದಿನಾಲೂ ಶಿರಸಿ ಸೇರಿಕೊಳ್ಳುತ್ತಿದ್ದಳು. ಮುಗಿಲೋ ಕಪ್ಪನೆಯ ಮೋಡಗಳಿಂದ ತುಂಬಿ ತುಳುಕಾಡುತ್ತಿತ್ತು. ಮಳೆರಾಯ ಭುವಿಯನ್ನು ಚುಂಬಿಸುವ ತವಕದಲ್ಲಿದ್ದ. ನೆಲವನ್ನೊಮ್ಮೆ, ಆಕಾಶವನ್ನೊಮ್ಮೆ ನೋಡುತ್ತಾ ಧಾರಾ ದೌಡಾಯಿಸಿ ಹೆಜ್ಜೆ ಹಾಕುತ್ತಿದ್ದಳು.
ಬಸ್ ಶೆಲ್ಟರ್ ಇನ್ನೂ ಒಂದು ಫರ್ಲಾಂಗ್ ದೂರವಿತ್ತಷ್ಟೇ, ಮಳೆರಾಯ ಧುತ್ತೆಂದು ಧರೆಗಿಳಿದೇ ಬಿಟ್ಟ. ಅಂತಿಂಥ ಮಳೆಯಲ್ಲ, ಕುಂಭದ್ರೋಣ ಮಳೆ. ಮುಗಿಲೇ ಕಳಚಿಕೊಂಡಂತೆ ಸಾಂದ್ರ ಹನಿಗಳು. ಬೆಳಗ್ಗೆ ಹೊರಡುವ ಧಾವಂತದಲ್ಲಿ ಮಲೆನಾಡಿನ ಸಂಗಾತಿ ಛತ್ರಿಯನ್ನು ಮರೆತು ಬಂದಿದ್ದಳು. ಬಸ್ಸು ಮಿಸ್ಸಾಗುವ ಭಯ, ಬಿರಬಿರನೆ ಹೆಜ್ಜೆ ಹಾಕತೊಡಗಿದಳು. ನೂರು ಹೆಜ್ಜೆ ಹಾಕುವಷ್ಟರಲ್ಲಿ ತೊಯ್ದು ತೊಪ್ಪೆಯಾದಳು. ಉಟ್ಟಿದ್ದ ಸೀರೆ ಮೈಗಂಟಿಕೊಂಡಿತ್ತು. ಮುಖ್ಯ ರಸ್ತೆಗೆ ಬಂದು ಶೆಲ್ಟರ್ ಸೇರಿಕೊಂಡಳು. ಅಲ್ಲಿ ಕೆಲವೊಂದಿಷ್ಟು ಜನರು ಬಸ್ಸಿಗಾಗಿ ಕಾಯುತ್ತಿದ್ದರು.
“ಮೇಡಂ, ಶಿರಸಿಯ ಕಡೆಗಿನ ಬಸ್ಸು ಈಗಷ್ಟೇ ಹೋಯಿತು…..” ಎಂದರು ಒಬ್ಬರು.
ಅವಳೆದೆ ಧಸಕ್ಕೆಂದಿತು, “ಹೌದೇ…..?” ಎಂದ ಅವಳ ದನಿ ಬಾಯಿಯಲ್ಲೇ ಉಡುಗಿಹೋಯಿತು.
ಮುಂದಿನ ಬಸ್ಸು ಆರು ಗಂಟೆಗೆ. ಶೆಲ್ಟರ್ ನ ಮೂಲೆಯಲ್ಲಿ ನಿಂತುಕೊಂಡು ಬಟ್ಟೆ ಕೂದಲನ್ನು ಒದರಿಕೊಳ್ಳತೊಡಗಿದಳು. ಚೀಲದಲ್ಲಿದ್ದ ನ್ಯಾಪ್ ಕಿನ್ ತೆಗೆದು ಮುಖ ಒರೆಸಿಕೊಳ್ಳುತ್ತಾ ಬಸ್ಸು ಮಿಸ್ಸಾಗಿದ್ದಕ್ಕೆ ತನ್ನನ್ನೇ ಹಳಿದುಕೊಳ್ಳತೊಡಗಿದಳು. ಅಷ್ಟರಲ್ಲಿ ಶಿರಸಿಯ ಕಡೆಯಿಂದ ಬಸ್ಸೊಂದು ಬಂದಿತು. ಶೆಲ್ಟರ್ ನಲ್ಲಿದ್ದ ಜನರೆಲ್ಲರೂ ಸುರಿಯುತ್ತಿದ್ದ ಮಳೆಯನ್ನೂ ಲೆಕ್ಕಿಸದೇ ಬಸ್ಸನ್ನೇರಿದರು. ಉಳಿದಿದ್ದು ಧಾರಾ ಒಬ್ಬಳೇ. ಮಳೆ ಧೋ ಎಂದು ಸುರಿಯುತ್ತಲೇ ಇತ್ತು. ಆಗಾಗ ಗುಡುಗುಡು ಎಂದು ಆರ್ಭಟಿಸುತ್ತಿದ್ದ ಗುಡುಗು, ಕಣ್ಣು ಕೋರೈಸುವಂತಿದ್ದ ಮಿಂಚು ಎದೆ ಝಲ್ಲೆನಿಸುವಂತಿದ್ದವು. ಅತಂತ್ರತೆ ಭಯವೆಂಬ ಹುಳುವನ್ನು ಅಳೆದೆಯಲ್ಲಿ ಬಿಟ್ಟು, `ಮುಂದಿನ ಬಸ್ಸು ಬರುವುದೋ ಇಲ್ಲವೋ…..?’ ಎಂಬ ಅಳುಕು ಧೈರ್ಯವನ್ನು ಅಲುಗಾಡಿಸತೊಡಗಿತು. ಆರಾಯಿತು, ಬಸ್ಸು ಬರಲಿಲ್ಲ. ವರುಣದೇವ ಧರೆಗಿಳಿಯುವುದಕ್ಕೆ ಮೊದಲೇ ಸೂರ್ಯದೇವ ಕಾಣೆಯಾಗಿದ್ದರಿಂದ ಗವ್ವೆನ್ನುವ ಕತ್ತಲು ಜಗತ್ತನ್ನು ತನ್ನ ತೆಕ್ಕೆಯೊಳಗೆ ಎಳೆದುಕೊಳ್ಳತೊಡಗಿತ್ತು. ಜೀರುಂಡೆಗಳ ಸದ್ದು ಭಯ ಹುಟ್ಟಿಸುವಂತಿತ್ತು. ಮಳೆಯ ಅಬ್ಬರ ಕಡಿಮೆ ಆಗಿರಲಿಲ್ಲ. ಮಲೆನಾಡಿನ ಮಳೆಯ ಗಮ್ಮತ್ತು ಧಾರಾಳ ಮನದರಿವಿಗೆ ಯಾವಾಗಲೋ ಬಂದಿತ್ತು. `ಧೋ’ ಎಂದು ಸುರಿಯಲು ಶುರುವಾದರೆ ತಾಸುಗಟ್ಟಲೇ, ದಿನಗಟ್ಟಲೇ ಸುರಿಯುತ್ತಲೇ ಇರುತ್ತಿತ್ತು. ಧಾರಾಳ ಎದೆಯಲ್ಲಿ ಡಡ, ಆತಂಕ ಅವಳೆದೆಯನ್ನು ಇರಿಯತೊಡಗಿತು.
`ನಾನಿಲ್ಲಿ ಒಂಟಿ ಹೆಣ್ಣು. ಕಾಡು ಪ್ರಾಣಿಗಳು ಆಕ್ರಮಣ ಮಾಡಿದರೆ…?’ ಎದೆ ಝಲ್ಲೆಂದಿತು. ಕಾಡು ಪ್ರಾಣಿಗಳಿಗಿಂತ ಒಂಟಿ ಸಲಗದಂತಹ ಮನುಷ್ಯನೆಂಬ ಗಂಡು ಪ್ರಾಣಿ ಆಕ್ರಮಣ ಮಾಡಿದರೆ…?’ ತೊಯ್ದು ತೊಪ್ಪೆಯಾಗಿದ್ದ ಧಾರಾ ಥರಗುಟ್ಟಿ ನಡುಗತೊಡಗಿದಳು.
`ಛೀ…! ಬರೀ ಕೆಟ್ಟದ್ದನ್ನೇ ಏಕೆ ಯೋಚಿಸುತ್ತಿರುವೆ….? ಕಾಯುವನೊಬ್ಬನಿರುವಾಗ ಅಂತಹದ್ದೆಲ್ಲಾ ಏನೂ ಆಗುವುದಿಲ್ಲ. ಧೈರ್ಯವಿರಲಿ,’ ಮನದಲ್ಲೇ ದೇವರನ್ನು ಪ್ರಾರ್ಥಿಸತೊಡಗಿದಳು.
ಆರೂವರೆಯ ಬಸ್ಸು ಬರಬಹುದೇನೋ ಎಂಬ ಆಶಾಭಾವನೆ ಮೂಡಿದಾಗ ತುಸು ಹಾಯೆನಿಸಿತು. ಅಷ್ಟರಲ್ಲಿ ರಸ್ತೆಯಲ್ಲಿ ಬೆಳಕು ಪ್ರವಹಿಸಿದಂತಾಯಿತು. ಮನಸ್ಸು ಗೆಲುವಾಯಿತು. ರಸ್ತೆಯತ್ತ ದೃಷ್ಟಿ ನೆಟ್ಟಳು. `ಬಸ್ಸಂತೂ ಅಲ್ಲ, ಬೈಕ್ ಇರಬಹುದೇನೋ….?’ ಎಂದು ಊಹಿಸುವಷ್ಟರಲ್ಲಿ ಬೆಳಕು ಸಮೀಪ ಬರುತ್ತಿದ್ದಂತೆ ಅದು ಬೈಕ್ ಎಂದು ಮನದಟ್ಟಾಯಿತು.
`ಅಯ್ಯೋ…. ಬಸ್ ಅಲವಲ್ಲ….?’ ಎಂಬ ನಿರಾಶೆಯೂ ಮೂಡಿತು. ಬೈಕ್ ಮೆಲ್ಲಗೆ ಬರುತ್ತಿತ್ತು.
`ಕೈ ಮಾಡಿ ಗಾಡಿಯನ್ನು ನಿಲ್ಲಿಸಲೇ……? ಯಾರೋ ಏನೋ…..? ಅಪರಿಚಿತರ ಗಾಡಿಯನ್ನು ಅದ್ಹೇಗೆ ತಡೆದು ನಿಲ್ಲಿಸುವುದು….? ಇಂತಹ ಸಮಯದಲ್ಲಿ ಯಾರಾದರೇನು…..?’ ಹೀಗೆ ಯೋಚಿಸುವಷ್ಟರಲ್ಲಿ ಬೈಕ್, ಬಸ್ ಶೆಲ್ಟರ್ನ್ನು ದಾಟಿ ಮುಂದೆ ಸಾಗಿಯೇಬಿಟ್ಟಿತು. ನಿಗದಿತ ಸಮಯದಲ್ಲಿ ನಿರ್ಧಾರ ತೆಗೆದುಕೊಳ್ಳದಿದ್ದುದಕ್ಕೆ ಮನಸ್ಸಿಗೆ ಹಳಹಳಿಯಾಯಿತು. ಆದರೆ ಮುಂದೆ ಸಾಗಿದ್ದ ಬೈಕ್ ಟಕ್ಕಂತ ನಿಂತಿತು. ಸವಾರ ನಿಧಾನವಾಗಿ ಬೈಕ್ ನ್ನು ತಿರುಗಿಸಿಕೊಂಡು ಶೆಲ್ಟರ್ ಹತ್ತಿರ ಬಂದ. ಮೊಬೈಲ್ ಟಾರ್ಚ್ ಆನ್ ಮಾಡಿಕೊಂಡು ಶೆಲ್ಟರ್ ನೊಳಗೆ ಬಂದ. ಪರಸ್ಪರ ಮುಖಗಳು ಕಾಣಿಸಿದವು.
“ಮೇಡಂ ನಮಸ್ತೆ, ನಾನು ಅರವಿಂದ ಭಟ್ ಅಂತ. ಮುಂದಿನ ಊರೇ ನನ್ನದು. ನೀವು…..” ತಣ್ಣಗೆ ತನ್ನ ಪರಿಚಯ ಮಾಡಿಕೊಂಡ.
ಧಾರಾ ಒಂದು ಕ್ಷಣ ಅವನನ್ನೇ ಬಿಟ್ಟ ಕಣ್ಣುಗಳಿಂದ ನೋಡಿದಳು. ಮೂವತ್ತೈದರ ಆಜುಭಾಜಿನ ಯುವಕ, “ನಮಸ್ಕಾರ. ನಾನು ಧಾರಾ ಅಂತ. ಇಲ್ಲಿನ ಪ್ರೌಢಶಾಲೆಯಲ್ಲಿ ಇಂಗ್ಲೀಷ್ ಶಿಕ್ಷಕಿ.”
“ಬಸ್ ಮಿಸ್ ಮಾಡಿಕೊಂಡಿರುವಂತಿದೆ….?” ಹೌದೆಂದು ಗೋಣಾಡಿಸಿದಳು ಧಾರಾ ವಿನಮ್ರ ದೈನೇಸಿ ಭಾವದಲ್ಲಿ.
“ನೀವು ಶಿರಸಿಗೆ ಹೋಗಬೇಕು ತಾನೇ…..? ಇಂತಹ ಮಳೆಯಲ್ಲಿ ಮುಂದಿನ ಬಸ್ಸು ಬರುವುದೇನೂ ಗ್ಯಾರಂಟಿ ಇಲ್ಲ. ನನ್ನ ಮನೆ ಇಲ್ಲಿಂದ ಕೇವಲ ನಾಲ್ಕು ಕಿ.ಮೀ. ಅಷ್ಟೇ ಮೊದಲು ಅಲ್ಲಿಗೆ ಹೋಗೋಣ…..”
ಒಂದು ಕ್ಷಣ ಯೋಚನೆಗೆ ಬಿದ್ದ ಧಾರಾ, “ಈ ಹೊತ್ತಿನಲ್ಲಿ ನಿಮ್ಮ ಮನೆಗೇಕೆ….? ನೇರವಾಗಿ ನನ್ನನ್ನು ಶಿರಸಿಗೆ ತಲುಪಿಸಿದರೆ ತುಂಬಾ ಉಪಕಾರವಾಗುತ್ತೆ…..” ಎಂದಳು.
“ಮಳೆಯಲ್ಲಿ ತೋಯಿಸಿಕೊಂಡು ನಡುಗುತ್ತಿರುವಿರಿ. ನಡುಕ ಹೆಚ್ಚಾಗಿ ಶೀತ, ಜ್ವರ ಹಿಡಿಯಬಹುದು…..”
“ನೀವೇನು ಮಾಡಿಕೊಂಡಿರುವಿರಿ….?” ಧಾರಾ ಮೆಲ್ಲನೇ ಉಸುರಿಸಿದಳು.

“ಬೇಸಾಯ ಮಾಡಿಕೊಂಡಿದ್ದೇನೆ. ಹೆದರಿಕೊಳ್ಳಬೇಡಿ. ಈಗ ನನ್ನ ಜೊತೆಯಲ್ಲಿ ಬೈಕ್ ಲ್ಲಿ ಹೊರಡಿ. ಏಕೆಂದರೆ ಮಳೆ ಬಿಡುವ ಸೂಚನೆಯಿಲ್ಲ.”
`ಧೈರ್ಯಂ ಸರ್ವತ್ರ ಸಾಧನಂ’ ಎಂಬ ವಾಣಿ ಧಾರಾಳೆದೆಯೊಳಗೆ ರಿಂಗಣಿಸಿತು.
“ಸರಿ….” ಎಂದಳು ಧೈರ್ಯವನ್ನೆಲ್ಲವನ್ನೂ ಒಗ್ಗೂಡಿಸಿಕೊಂಡು.
“ನಿಮ್ಮದೇನೂ ಅಭ್ಯಂತರವಿಲ್ಲದಿದ್ದರೆ ನನ್ನ ಈ ಜರ್ಕಿನ್ ಹಾಕಿಕೊಳ್ಳಿ. ಇಲ್ಲದಿದ್ದರೆ ಗಾಡಿಯ ವೇಗಕ್ಕೆ ಚಳಿ ತಡೆಯಲು ಆಗುವುದಿಲ್ಲ,” ಬೇಡಿಕೊಳ್ಳುವ ಧ್ವನಿಯಲ್ಲಿ ಹೇಳುತ್ತಾ ಅರವಿಂದ್ ತೊಟ್ಟಿದ್ದ ಜರ್ಕಿನ್ ತೆಗೆದೇಬಿಟ್ಟ.
ಅನಿವಾರ್ಯತೆಯಲ್ಲಿ ಅವನ ಮಾತು ಸರಿ ಎನಿಸಿದ್ದರಿಂದ ಧಾರಾ ಹೆಚ್ಚಿಗೆ ಮಾತನಾಡದೇ ಅವನಿಗೆ ಜರ್ಕಿನ್ ಪಡೆದು ಧರಿಸಿಕೊಂಡಳು. ಕತ್ತಲು ಮತ್ತಷ್ಟೂ ಗಾಢವಾಗತೊಡಗಿತು. ಅರವಿಂದ್ ಬೈಕ್ ನ ಬಾಕ್ಸ್ ನಲಿದ್ದ ರೇನ್ ಕೋಟ್ ನ್ನು ಧರಿಸಿಕೊಂಡ. ಬೈಕ್ ಮಂದಗತಿಯಲ್ಲಿ ಮುಂದೆ ಓಡತೊಡಗಿತು. ಮಳೆಯ ಹನಿಗಳ ಆಲಾಪನೆಯಲ್ಲಿ ಮಾತುಗಳು ಕಿವಿಗೆ ತಲುಪುದಿಲ್ಲವೆಂದು ಅರಿತುಕೊಂಡ ಇಬ್ಬರೂ ಮೌನಕ್ಕೆ ಶರಣಾದರು.
ಅರವಿಂದನ ಮನೆ ತಲುಪಿದಾಗ ಆಗಲೇ ರಾತ್ರಿ ಏಳು ಗಂಟೆ. ಮನೆಯಲ್ಲಿ ಅವನೊಬ್ಬನೇ ಎಂದಾಗ ಧಾರಾ ತುಸು ಅಧೀರಳಾದಳು.
“ಚಳಿಯಿಂದ ನಡುಗುತ್ತಿರುವಿರಿ. ಮೊದಲು ಸೀರೆ ಬದಲಿಸಿಕೊಳ್ಳಿ. ಇಲ್ಲದಿದ್ದರೆ ಚಳಿಜ್ವರ ಬಂದೀತು. ನನ್ನಮ್ಮನ ಸೀರೆಗಳಿವೆ. ಬಿಸಿಬಿಸಿ ನೀರು ಕೊಡುವೆ. ಬಿಸಿ ನೀರಿನಿಂದ ಕೈಕಾಲು ಮುಖ ತೊಳೆದುಕೊಂಡರೆ ಹಾಯೆನಿಸುವುದು. ಅಷ್ಟರಲ್ಲಿ ನಾನೊಂದಿಷ್ಟು ಕಷಾಯ ಮಾಡುವೆ. ಕುಡಿದುಕೊಂಡು ಹೊರಡೋಣ. ನೀವು ಹ್ಞೂಂ ಎನ್ನುವುದಾದರೆ ದಿಢೀರ್ ಅನ್ನ ಸಾಂಬಾರ್ ಮಾಡುವೆ. ಇಲ್ಲೇ ಊಟ ಮುಗಿಸಿಕೊಂಡು ಹೋಗುವಿರಂತೆ, ಅಷ್ಟರಲ್ಲಿ ಮಳೆಯೂ ನಿಲ್ಲಬಹುದು. ಒಂಟಿ ಗಂಡಸಿನ ಮನೆಯೆಂದು ಅನುಮಾನಿಸಬೇಡಿರಿ,” ಅರವಿಂದ ಉದ್ದುದ್ದವಾಗಿ ಮಾತಾಡಿದ.
ಧಾರಾ ಅವನ ಮುಖದಲ್ಲಿನ ಭಾವನೆಗಳನ್ನು ಓದಲು ಪ್ರಯತ್ನಿಸಿದಳು. ನಿರ್ಮಲಭಾವದ ಮುಖಮುದ್ರೆ ಕಂಡಾಗ ಮನಸ್ಸಿಗೆ ನಿರಾಳವೆನಿಸಿತು. ಅವನು ತೋರಿಸಿದ ಅಲ್ಮೇರಾದಲ್ಲಿ ತರಹೇವಾರಿ ಸೀರೆಗಳಿದ್ದವು. ಧಾರಾ ತನ್ನ ಮನಸ್ಸಿಗೊಪ್ಪಿದ ಸೀರೆಯೊಂದನ್ನು ಎತ್ತಿಕೊಂಡಳು. ಅರವಿಂದ್ ಅವಳನ್ನು ಬಚ್ಚಲು ಮನೆಗೆ ಕರೆದುಕೊಂಡು ಹೋದ. ಹಿತ್ತಲಿನ ಹಂಡೆಯಲ್ಲಿದ್ದ ಬಿಸಿ ನೀರನ್ನು ಬಕೆಟ್ ಗೆ ಬೆರೆಸಿಕೊಟ್ಟ. ಅವಳು ಬರುವಷ್ಟರಲ್ಲಿ ಕಷಾಯ ಮಾಡಿಟ್ಟುಕೊಂಡು ಕಾಯುತ್ತಿದ್ದ. ಮಲೆನಾಡಿನ ಕಷಾಯದ ರುಚಿ, ಗಂಟಲಿಗೆ ಹಿತವೆನಿಸಿ, ತುಂಬಾ ಹಿಡಿಸಿತು.
“ಧಾರಾ ಅವರೇ, ನೀವು ಉತ್ತರ ಕರ್ನಾಟಕದವರು ಎಂದೆನಿಸುತ್ತದೆ….?” ಕಷಾಯ ಹೀರುತ್ತಾ ಪ್ರಶ್ನಿಸಿದ ಅರವಿಂದ್.
“ಹೌದು, ನಾನು ಕೊಪ್ಪಳ ಜಿಲ್ಲೆಯವಳು. ನಿಮಗೆ ಹೇಗೆ ಗೊತ್ತಾಯಿತು….?”
“ನಿಮ್ಮ ಮಾತಿನ ಧಾಟಿಯಿಂದ ಊಹಿಸಿದೆ ಅಷ್ಟೇ….”
“ನೀವೇನು ಓದಿಕೊಂಡಿರುವಿರಿ…..?”
“ಹೀಗೇ ವ್ಯವಹಾರಜ್ಞಾನಕ್ಕಾಗಿ, ಬೇಸಾಯ ಮಾಡಲು ತುಸು ಓದಿಕೊಂಡಿರುವೆ,” ಎಂದ ಅರವಿಂದ್.
“ನಿಮ್ಮ ತಾಯಿ ತಂದೆ…..?”
“ನನ್ನ ಜೊತೆ ಇಲ್ಲೇ ಇದ್ದಾರೆ. ಅಪ್ಪ ರಾಷ್ಟ್ರೀಕೃತ ಬ್ಯಾಂಕ್ ನಲ್ಲಿ ಚೀಫ್ ಮ್ಯಾನೇಜರ್ ಹುದ್ದೆಯಲ್ಲಿ ನಿವೃತ್ತರಾಗಿ ಐದು ವರ್ಷಗಳಾಗಿವೆ. ಸದ್ಯ ಬೆಂಗಳೂರಿಗೆ ತಂಗಿಯ ಮನೆಗೆ ಹೋಗಿದ್ದಾರೆ.”
“ನಿಮಗೆ ಓದು ಹಿಡಿಸಲಿಲ್ಲವೇ…..?”
“ಹೀಗೇ…..” ತೇಲಿಸಿ ಮಾತಾಡಿದ ಅರವಿಂದ್.
“ಮದುವೆ, ಮಕ್ಕಳು……”
“ಇನ್ನೂ ಇಲ್ಲ….” ನಿರ್ಲಿಪ್ತ ಭಾವವಿತ್ತು ಅವನ ಮಾತಿನಲ್ಲಿ.
“ಊಟ ಮಾಡಿಕೊಂಡು ಹೋಗಿರೆಂದು ನಾನು ಆಗಲೇ ಕೇಳಿದ್ದಕ್ಕೆ ಏನೂ ಹೇಳಲಿಲ್ಲ…..?”
“ನಿಮ್ಮಿಷ್ಟದಂತೆ ಇಲ್ಲೇ ಉಟ ಮಾಡುವೆ. ಆದಷ್ಟೂ ಬೇಗ ನನ್ನನ್ನು ಶಿರಸಿಗೆ ತಲುಪಿಸಬೇಕು ಅಷ್ಟೇ…..”
“ಧನ್ಯವಾದಗಳು…..” ಎಂದೆನ್ನುತ್ತಾ ಅಡುಗೆಮನೆಗೆ ಜಿಗಿದ ಅರವಿಂದ್.
ಮನೆ ಸುಸಜ್ಜಿತವಾಗಿತ್ತು. ಎರಡು ಬೆಡ್ ರೂಮ್ ಗಳು, ವಿಶಾಲವಾದ ಹಾಲ್, ಪೂಜಾ ಗೃಹ ಎಲ್ಲವೂ ಇತ್ತು. ವರಾಂಡದ ಮುಂದುಗಡೆಯೇ ಅಡಕೆ ತೋಟವಿತ್ತು. ಧಾರಾ ಒಂದೈದು ನಿಮಿಷ ಹಾಲ್ ನಲ್ಲಿ ಸುತ್ತು ಹೊಡೆದಳು. ಕೆಲವೊಂದಿಷ್ಟು ಫೋಟೋಗಳು ಅವಳ ಮನಸ್ಸಿಗೆ ಹಿಡಿಸಿದವು. ವರಾಂಡದಲ್ಲಿ ನಿಂತುಕೊಂಡಳು. ಅಡಕೆ ತೋಟ ಕತ್ತಲಲ್ಲಿ ಅಸ್ಪಷ್ಟವಾಗಿ ಕಾಣುತ್ತಿತ್ತು. ಮಳೆರಾಯ ಅಂತಿಮ ಚರಣ ಹಾಡಿದ್ದ. ಮನಸ್ಸಿಗೆ ನಿರಾಳವೆನಿಸಿತು. ಅಡುಗೆ ಮನೆಯತ್ತ ಹೆಜ್ಜೆ ಹಾಕತೊಡಗಿದಾಗ, ಕುಕ್ಕರ್ ಸೀಟಿ ಹೊಡೆಯತೊಡಗಿತು. ಅರವಿಂದನ ಜೊತೆ ಅಡುಗೆ ಕೆಲಸಕ್ಕೆ ಕೈಜೋಡಿಸಿದಳು.
ಅರವಿಂದ್ ಮತ್ತು ಧಾರಾ ಜೊತೆಯಾಗಿಯೇ ಊಟಕ್ಕೆ ಕುಳಿತರು. ತಾನು ಹೊಸಬಳಾಗಿದ್ದರೂ ಈ ಮೊದಲೇ ಪರಿಚಯ ಇದೆ ಎಂಬಂತೆ ಮನೆಗೆ ಕರೆದುಕೊಂಡು ಬಂದು ಆದರಾತಿಥ್ಯ ನೀಡುತ್ತಿರುವುದಕ್ಕೆ ಮನಸಾರೆ ಧನ್ಯವಾದ ಹೇಳಿದಳು ಧಾರಾ.
“ನನ್ನ ಸ್ಥಾನದಲ್ಲಿ ಯಾರಿದ್ದರೂ ಇದನ್ನೇ ಮಾಡುತ್ತಿದ್ದರಲ್ಲವೇ? ಮಾನವರಾಗಿ ಮಾನವ ಧರ್ಮ ಪಾಲಿಸದಿದ್ದರೆ ಹೇಗೆ…..?” ವಿನಮ್ರನಾಗಿ ಹೇಳಿದ ಅರವಿಂದ್.
ಅವನ ಮಾತಿಗೆ ಮಲ್ಲಿಗೆಯಂತೆ ಅರಳಿತು ಧಾರಾಳ ಮುಖಾರವಿಂದ. ಊಟದ ಜೊತೆಗೆ ಮಾತುಗಳೂ ಕಳೆಗಟ್ಟಿದವು.
“ನೌಕರಿಗಾಗಿ ನಿಮ್ಮ ಕಡೆಯವರು ಈ ಕಡೆಗೆ ಬರುವುದು ತುಂಬಾ ವಿರಳ ಅಲ್ವೇ….?” ಕೇಳಿದ ಅರವಿಂದ್.
“ನನಗೆ ಮೊದಲಿನಿಂದಲೂ ಪ್ರಕೃತಿ, ಮಲೆನಾಡ ಸಿರಿ ಅಂದರೆ ತುಂಬಾ ಇಷ್ಟ, ಏನೋ ಈ ಕಡೆಗೆ ಪೋಸ್ಟಿಂಗ್ ಸಿಕ್ಕಿತು, ಬಂದುಬಟ್ಟೆ…..” ಎಂದಳು ಧಾರಾ
“ಇಂಗ್ಲಿಷ್ ಶಿಕ್ಷಕಿಯೆಂದರೆ ನಿಮ್ಮದು ಎಂಎ ಇಂಗ್ಲಿಷ್ ಜೊತೆಗೆ ಬಿಎಡ್ ಆಗಿರಬೇಕಲ್ಲವೇ…..?”
“ಹೌದು. ಇರಲಿ, ನೀವೇಕೆ ಸುಳ್ಳು ಹೇಳಿದಿರಿ…..?” ಎಂದು ಕೇಳಿದಳು.
“ಸುಳ್ಳಾ….? ಅದೇನು….?” ಎಂದು ತಡವರಿಸಿದ.
“ಬಿಇ ಮಾಡಿಕೊಂಡಿದ್ದರೂ ಬೇಸಾಯ ಮಾಡಿಕೊಂಡಿರಲು ತುಸು ಓದಿದ್ದೇನೆ ಎಂದು ಹೇಳಿದಿರಿ, ಆದರೆ ಹಾಲ್ ನಲ್ಲಿರುವ ನಿಮ್ಮ ಡಿಗ್ರಿ ಸರ್ಟಿಫಿಕೇಟ್ ಸತ್ಯ ಹೇಳುತ್ತಿದೆಯಲ್ಲ…..?”
“ಬಿಇ ಉದರ ಪೋಷಣೆಗೆ ಸಾಥ್ ನೀಡಲಿಲ್ಲವಲ್ಲ….. ಅದಕ್ಕೆ ಹಾಗೆ ಹೇಳಿದೆ…..”
“ಅಂದರೆ ಬಿಇ ನಂತರ ನಿಮಗೆ ಕೆಲಸ ಸಿಗಲಿಲ್ಲವೇ……?”
“ಸಿಕ್ಕಿತ್ತು. 8 ವರ್ಷ ಬೆಂಗಳೂರಿನ ಸಾಫ್ಟ್ ವೇರ್ ಕಂಪನಿಯೊಂದರಲ್ಲಿ ಕೆಲಸ ಮಾಡಿದೆ. ಕೆಲಸದಲ್ಲಿನ ಒತ್ತಡ ಆರೋಗ್ಯದ ಮೇಲೆ ಪರಿಣಾಮ ಬೀರತೊಡಗಿತು. ಏಕೋ ಬೇಸರವೆನಿಸಿತು. ಬಿಟ್ಟುಬಿಟ್ಟೆ, ಭೂತಾಯಿಯ ಚೆಲುವಿನಲ್ಲಿ ಒಲವು ಹೆಚ್ಚಾಯಿತು. ಕೃಷಿ ಕೈ ಬೀಸಿ ಕರೆಯಿತು ಬಂದುಬಿಟ್ಟೆ…..” ಎಂದ.

“ಮತ್ತೆ ಮದುವೆ ಮಾಡಿಕೊಳ್ಳಲಿಲ್ಲವೇ…..?”
“ಅದೊಂದು ದೊಡ್ಡ ಕಥೆ. ಇನ್ನೊಂದು ದಿನ ವಿವರಿಸುವೆ. ಸದ್ಯ ಈಗ ಆರಾಮವಾಗಿ ಊಟ ಮಾಡಿ. ಆಗಲೇ ಒಂಬತ್ತು ಗಂಟೆಯಾಗುತ್ತಿದೆ. ನಿಮ್ಮನ್ನು ಸುರಕ್ಷಿತವಾಗಿ ನಿಮ್ಮ ಮನೆಗೆ ತಲುಪಿಸಿದಾಗಲೇ ನನ್ನ ಮನಸ್ಸಿಗೆ ನೆಮ್ಮದಿ,” ಎಂದ ಅರವಿಂದ್. ಧಾರಾ ಒತ್ತಾಯಿಸಲಿಲ್ಲ. ಸಮಯ ಬೇರೆ ಓಡುತ್ತಿತ್ತು. ಊಟ ಮುಗಿಯುತ್ತಲೇ ಇಬ್ಬರೂ ಹೊರಟರು. ಧಾರಾ, ಏನೋ ಜ್ಞಾಪಿಸಿಕೊಂಡವಳಂತೆ, “ನಾನು ಉಟ್ಟುಕೊಂಡಿರುವ ನಿಮ್ಮಮ್ಮನ ಸೀರೆ ಸದ್ಯ ನನ್ನ ಜೊತೆಗೇ ಇರುವುದಾದರೆ ಓಕೇನಾ….?” ಎಂದು ಕೇಳಿದಳು.
“ನೋ ಪ್ರಾಬ್ಲಮ್…. ಇನ್ನೊಮ್ಮೆ ಇಲ್ಲಿಗೆ ಬರುವಾಗ ತನ್ನಿ,” ಎಂದ.
ತಲೆಬಾಗಿಲಿಗೆ ಬಂದಾಗ, “ಹೌದು, ನೀವು ಏನೇನು ಕೃಷಿ ಮಾಡಿಕೊಂಡಿರುವಿರಿ….?” ಎಂದು ಪ್ರಶ್ನಿಸಿದಳು ಧಾರಾ.
“ಮನೆಯ ಮುಂದಿನ ಈ ಆರೆಕೆರೆಯ ಅಡಕೆ ತೋಟ ಪಿತ್ರಾರ್ಜಿತ ಆಸ್ತಿ. ಅಪ್ಪಾಜಿಗೆ ಕೃಷಿಯಲ್ಲಿ ತುಂಬಾ ಆಸಕ್ತಿ ಇತ್ತು. ಆದರೆ ಬ್ಯಾಂಕಿನ ಕರ್ತವ್ಯದ ನಿಮಿತ್ತ ಇತ್ತ ಕಡೆಗೆ ಗಮನ ಹರಿಸಲು ಆಗಲಿಲ್ಲ. ನನಗೂ ಕೃಷಿಯೆಂದರೆ ಚಿಕ್ಕವನಿದ್ದಾಗಿನಿಂದ ಒಲವಿತ್ತು. ಈ ತೋಟಕ್ಕೆ ಅಂಟಿಕೊಂಡ ನಮ್ಮ ಚಿಕ್ಕಪ್ಪನವರ ತೋಟ, ಮನೆ ಇದೆ. ಇನ್ನೊಮ್ಮೆ ಬಂದಾಗ ಅಲ್ಲಿಗೆ ಹೋಗೋಣ. ಈಗ ಹೊರಡೋಣ ಹೊತ್ತಾಗುತ್ತಿದೆ,” ಅರವಿಂದ್ ಬಾಗಿಲಿಗೆ ಬೀಗ ಹಾಕಿ, ಬೈಕ್ ಹತ್ತಿರ ಹೊರಟ.
“ಇಲ್ಲಿ ನಿಮ್ಮ ಜೀವನ ಅರಳಿದೆಯೇ…..?” ಅವನ ಜೊತೆಗೆ ಹೆಜ್ಜೆ ಹಾಕುತ್ತಾ ಧಾರಾ ಕೇಳಿದಳು.
“ನಗುನಗುತ್ತಾ ಬದುಕನ್ನು ಸ್ವೀಕರಿಸಿದಾಗ ನಗುವ ಜೀವನವನ್ನು ಅರಳಿಸುತ್ತದೆ, ಎಂದು ದಾರ್ಶನಿಕರು ಹೇಳಿದ್ದಾರೆ. ನಾನಿಲ್ಲಿ ನೆಮ್ಮದಿಯ ಜೀವನ ಸಾಗಿಸುತ್ತಿದ್ದೇನೆ. ಎಡರುತೊಡರುಗಳು ಇದ್ದದ್ದೇ. ಅವುಗಳ ಜೊತೆಗೇ ಜೀವನ ಅಲ್ಲವೇ? ಹಾಗಿದ್ದರೆ ಸಮಸ್ಯೆಗಳನ್ನು ಎದುರಿಸುತ್ತಾ ಸಾಫ್ಟ್ ವೇರ್ ಕಂಪನಿಯಲ್ಲೇ ಕೆಲಸ ಮುಂದುರಿಸಬಹುದಿತ್ತಲ್ಲಾ ಎಂದು ಕೇಳಬಹುದು. ಒತ್ತಡಗಳಿದ್ದರೂ ಪ್ರಕೃತಿಯ ಮಡಿಲಲ್ಲಿ ಢಾಳಾಗಿ ಕಾಣುವುದಿಲ್ಲ. ಇಲ್ಲಿ ಕೈತುಂಬಾ ಕೆಲಸ, ಕಣ್ತುಂಬ ನಿದ್ದೆ,” ಅರವಿಂದನ ಮಾತುಗಳನ್ನು ಕೇಳಿಸಿಕೊಳ್ಳುತ್ತಾ ಧಾರಾ ಬೈಕ್ ಏರಿದಳು.
ಬೈಕ್ ಹೆಡ್ ಲೈಟ್ ಬೆಳಗುತ್ತಾ ಮುಂದೆ ಸಾಗಿತು. ಧಾರಾಳ ಮನೆಯ ಮುಂದೆ ಬೈಕ್ ನಿಂತಿತು. ಅವಳು ಬೈಕಿನಿಂದಿಳಿದು ಅರವಿಂದನಿಗೆ ಮನೆಯೊಳಗೆ ಬರಲು ಒತ್ತಾಯಿಸಿದಳು.
“ಹೊತ್ತಾಗಿದೆ. ಇಂದು ಬೇಡ,” ಎಂದೆನ್ನುತ್ತಾ ಅರವಿಂದ್ ಗಾಡಿ ತಿರುಗಿಸಲು ಮುಂದಾದ. ಧಾರಾ ಮತ್ತೊಮ್ಮೆ ಅವನಿಗೆ ಧನ್ಯವಾದ ಹೇಳಿದಳು. ಪರಸ್ಪರ ಮೊಬೈಲ್ ನಂಬರ್ ತೆಗೆದುಕೊಂಡರು. ಶುಭರಾತ್ರಿ ವಿನಿಮಯವಾಯಿತು. ಆತ್ಮೀಯವಾಗಿ ಧಾರಾ ಅವನಿಗೆ ಕೈಯಾಡಿಸಿದಳು. ಅರವಿಂದ್ ಹೊರಟು ಹೋದ.
ಅದೊಂದು ರವಿವಾರದ ದಿನ, ಬೆಳಗ್ಗೆ ಎಂಟಕ್ಕೆಲ್ಲಾ ಅರವಿಂದ್ ದೇವಸ್ಥಾನಕ್ಕೆ ಬಂದಿದ್ದ. ಪ್ರಾಂಗಣದಲ್ಲಿ ಅವನಿಗೊಂದು ಅಚ್ಚರಿ ಕಾದಿತ್ತು. ಎರಡು ವಾರಗಳ ಹಿಂದೆ ಭೇಟಿಯಾಗಿದ್ದ ಧಾರಾ ಕಂಡಳು. ಇಬ್ಬರೆದೆಯಲ್ಲೂ ಸಂತಸದ ಕಿಣಿಕಿಣಿ ನಾದ. ಅರವಿಂದ್ ಬಿಟ್ಟ ಕಂಗಳಿಂದ ಅವಳನ್ನೇ ದಿಟ್ಟಿಸಿದ.
“ಕ್ಷಮಿಸಿ, ನಿಮ್ಮಮ್ಮನ ಈ ಸೀರೆ ತುಂಬಾ ಇಷ್ಟವಾಯಿತು. ಮತ್ತೊಮ್ಮೆ ಉಡಬೇಕೆನಿಸಿತು, ಇಂದು ದೇವಸ್ಥಾನಕ್ಕೆ ಉಟ್ಟುಕೊಂಡು ಬಂದಿರುವೆ,” ಎಂದಳು ಸಂಕೋಚದಿಂದ.
“ಛೇ… ಛೇ….! ಅದಕ್ಯಾಕೆ ಕ್ಷಮೆ ಕೇಳಬೇಕು? ಪರವಾಗಿಲ್ಲ. ಈ ಸೀರೆ ನಿಮಗೆ ತುಂಬಾ ಒಪ್ಪುತ್ತದೆ,” ಎಂದು ಅವಳನ್ನೇ ದಿಟ್ಟಿಸಿದ. ಗುಲಾಬಿ ಬಣ್ಣದ ಸೀರೆಯಲ್ಲಿ ಮುದ್ದು ಮುದ್ದಾಗಿ ಕಾಣುತ್ತಿದ್ದ ಧಾರಾ, ದೇವಲೋಕದ ಅಪ್ಸರೆಯಂತೆ ಕಂಡಳು ಅವನಿಗೆ. ಅವಳ ಮೈಬಣ್ಣ, ಚೆಲುವಿನಿಂದ ಸೀರಿಗೆ ಮೆರುಗು ಬಂದಿದ್ದರೆ, ಚೆಂದದ ಸೀರೆಯಿಂದ ಧಾರಾಳ ಸೌಂದಯಕ್ಕೂ ಮೆರುಗು ಬಂದಿತ್ತು. ಕಣ್ಣೋಟದಲ್ಲೇ ಪರಸ್ಪರ ಮೆಚ್ಚಿಕೊಳ್ಳುತ್ತಾ ಜೊತೆ ಜೊತೆಯಾಗಿ ಗರ್ಭಗುಡಿಯತ್ತ ಹೆಜ್ಜೆ ಹಾಕಿದರು.
ಭಕ್ತಿಭಾವದಿಂದ ದೇವಿಗೆ ಶಿರ ಸಾಷ್ಟಾಂಗ ನಮಸ್ಕಾರ ಸಲ್ಲಿಸಿ, ಪ್ರಸಾದ ಸ್ವೀಕರಿಸಿ ಪುನೀತರಾದೆವೆಂಬ ಭಾವದಲ್ಲಿ ಇಬ್ಬರೂ ಹೊರಗೆ ಬಂದು ಪ್ರಾಂಗಣದಲ್ಲಿ ಕಣ್ಮುಚ್ಚಿಕೊಂಡು ಕುಳಿತು ಧ್ಯಾನಸ್ಥರಾದರು. ಒಂದೈದು ನಿಮಿಷದ ನಂತರ ಅರವಿಂದ್ ಕಣ್ತೆರೆದು ಧಾರಾಳೆಡೆಗೆ ದೃಷ್ಟಿ ಹರಿಸಿದಾಗ ಅವಳಿನ್ನೂ ಕಣ್ತೆರೆದಿರಲಿಲ್ಲ. ಅವಳನ್ನೇ ದಿಟ್ಟಿಸಿದ. ಹಣೆಯ ಮೇಲಿನ ಪಟ್ಟೆ ವಿಭೂತಿ ತುಂಬಿದ ಕೆನ್ನೆಗಳಿಗೆ ವಿಶಿಷ್ಟ ಮೆರುಗು ನೀಡಿದ್ದು ಅವನ ಮನಸ್ಸಿಗೆ ತಾಗಿತು. ದಿವ್ಯಾ ಪ್ರಭಾವಳಿ ಅವಳನ್ನು ಸುತ್ತುರಿದಂತೆ, ಅಪೂರ್ವ ಕಳೆಯೊಂದು ಮುಖದಿಂದ ಹೊರಹೊಮ್ಮುತ್ತಿರುವಂಥ ಭಾಸ ಅವನಿಗಾಯಿತು. ಥೇಟ್ ಹನ್ನೆರಡನೇ ಶತಮಾನದ ಅಕ್ಕಮಹಾದೇವಿಯಂತೆ ಕಂಡಳು ಧಾರಾ.
“ನಿಮ್ಮನ್ನು ಕಾಯಿಸಿಬಿಟ್ಟೆ. ಅದೇನು ಅರ್ಜೆಂಟ್ ಕೆಲಸವಿತ್ತೋ ಏನೋ…..?” ಧ್ಯಾನಸ್ಥ ಭಾವದಿಂದ ಹೊರಬಂದ ಧಾರಾ ಕೇಳಿದಾಗ ಅವಳನ್ನೇ ನೋಡುತ್ತಿದ್ದ ಅರವಿಂದ್ ಗಲಿಬಿಲಿಗೊಂಡ.
“ಅಂಥಹದ್ದೇನೂ ಕೆಲಸವಿಲ್ಲ. ಅಮ್ಮನವರ ದರ್ಶನಕ್ಕೆಂದೇ ಬಂದೆ. ಅದರ ಜೊತೆಗೆ ನಿಮ್ಮ ದರ್ಶನವೂ ಆಯಿತು. ನಿಮಗೇನೂ ವಿಶೇಷ ಕೆಲಸ ಇಲ್ಲದಿದ್ದರೆ ನನ್ನ ಜೊತೆಗೆ ಬನ್ನಿ, ತೋಟವನ್ನು ಸುತ್ತಿಸುವೆ,” ಎಂದು ಅವಳ ಪ್ರತಿಕ್ರಿಯೆಗಾಗಿ ಅವಳ ಮುಖವನ್ನೇ ದಿಟ್ಟಿಸಿದ.
ಧಾರಾಳ ದೃಷ್ಟಿ ಕೈಗಡಿಯಾರದತ್ತ ಹರಿಯಿತು. ಸಮಯ ಆಗಿನ್ನೂ ಬೆಳಗಿನ ಒಂಬತ್ತು ಗಂಟೆ. ಒಪ್ಪಿಗೆ ಇದೆ ಎಂಬಂತೆ ಅವಳು ಗೋಣಾಡಿಸಿದಾಗ ಅರವಿಂದನ ಕಣ್ಣುಗಳಲ್ಲೂ ಮಿಂಚಿನ ಹೊಳಪಿತ್ತು.

“ನಿಮ್ಮದು ಬೆಳಗಿನ ತಿಂಡಿ ಆಗಿದೆಯೇ?” ಅವನನ್ನು ಕೇಳಿದಳು.
“ಇನ್ನೂ ಇಲ್ಲ. ನಿಮ್ಮದೂ ಆಗಿರಲಿಕ್ಕಿಲ್ಲ. ನೀವು ಹೆಣ್ಣುಮಕ್ಕಳು ಪೂಜೆ, ಪುನಸ್ಕಾರಗಳ ನಂತರಷ್ಟೇ ತಿಂಡಿ ತಿನ್ನುವುದು. ನಾವುಗಳು ಕೆಲಸವಿದ್ದರೆ `ಪಹಿ ಪಿಠೋಬ, ಬಾದ್ಮೆ ವಿಠೋಬ,’ ಎನ್ನುತ್ತೇವೆ,” ಎಂದು ತಮಾಷೆ ಮಾಡಿದ.
ಇಬ್ಬರೂ ಹೋಟೆಲ್ ಒಂದರಲ್ಲಿ ತಿಂಡಿ ತಿಂದರು. ಅರವಿಂದ್ ಬೈಕ್ ತೋಟದ ಮನೆಯತ್ತ ಸಾಗಿತು. ಪ್ರಯಾಣದುದ್ದಕ್ಕೂ ರಸ್ತೆ ಬದಿಯ ವನಸಿರಿಯನ್ನು ಕಣ್ಮನಗಳಲ್ಲಿ ತುಂಬಿಕೊಂಡು ಖುಷಿ ಅನುಭವಿಸುತ್ತಿದ್ದಳು ಧಾರಾ. ಒಬ್ಬನೇ ಇದ್ದಾಗ ಹೇಗೆಂದರೆ ಹಾಗೆ ಬೈಕ್ ಓಡಿಸುತ್ತಿದ್ದ ಅರವಿಂದ್ಈಗ ತುಂಬಾ ಎಚ್ಚರಿಕೆಯಿಂದ ಗಾಡಿ ಓಡಿಸತೊಡಗಿದ. ತಗ್ಗು ದಿನ್ನೆಗಳಲ್ಲಿ ನಿಧಾನವೇ ಪ್ರಧಾನ ಎಂಬ ಮಾತು ಅವನನ್ನು ಎಚ್ಚರಿಸುತ್ತಿತ್ತು. ಬಹುದಿನಗಳ ನಂತರ ಅವನೂ ಜಾಲಿ ಮೂಡ್ ನಲ್ಲಿದ್ದ.
“ನಿಮ್ಮ ಅಮ್ಮ ಅಪ್ಪ ಊರಿಂದ ವಾಪಸ್ ಬಂದರೆ…..?”
“ಅವರು ಬರಲು ಇನ್ನೂ ಎರಡು ತಿಂಗಳಾಗಬಹುದು,” ಅರವಿಂದ್ ಹೇಳಿದಾಗ ಧಾರಾ ಮಾತು ಬೆಳೆಸಲಿಲ್ಲ.
ಅರವಿಂದ, ಧಾರಾಳ ಮನದಿಚ್ಛೆಯಂತೆ ಮೊದಲು ತೋಟವನ್ನೆಲ್ಲಾ ಸುತ್ತಾಡಿಸಿಕೊಂಡು ಬಂದ. ಅಡಕೆ ಇನ್ನೆರಡು ತಿಂಗಳಲ್ಲಿ ಕೊಯ್ಲಿಗೆ ಬರುವುದರಲ್ಲಿತ್ತು. ಇಳಿಬಿದ್ದಿದ್ದ ಗೊಂಚಲು ಗೊಂಚಲು ಅಡಕೆ ಗೊನೆಗಳನ್ನು ಕಂಡಾಗ ಧಾರಾಳ ಹರ್ಷೋದ್ಗಾರ ಮೇರೆ ಮೀರಿತ್ತು. ಅಡಕೆ ಬೆಳೆಯ ಬಗ್ಗೆ ಅರವಿಂದನ ವಿವರಣೆ ಸುದೀರ್ಘವಾಗಿ ಸಾಗಿತ್ತು. ಚಿಕ್ಕಪ್ಪನ ಮನೆಗೆ ಕರೆದುಕೊಂಡು ಹೋಗಿ ಪರಿಚಯ ಮಾಡಿಕೊಟ್ಟ. ಅವರೊಂದಿಗಿನ ಉಭಯ ಕುಶೋಪರಿಯಲ್ಲಿ ಧಾರಾ ಖುಷಿ ಹಂಚಿಕೊಂಡಳು. ಮನೆಗೆ ಬಂದಾಗ ಹನ್ನೆರಡು ಗಂಟೆ. ಹಸುವಿನ ತುಪ್ಪದಲ್ಲಿ ತಯಾರಿಸಿದ್ದ ಮಲೆನಾಡಿನ ಸ್ಪೆಷಲ್ ಹಲ್ವಾದ ರುಚಿ ಸವಿದಳು.
ಇಬ್ಬರೂ ಸೇರಿ ಮಧ್ಯಾಹ್ನದ ಅಡುಗೆಯ ತಯಾರಿಗೆ ನಿಂತರು. ಅರವಿಂದನ ಮದುವೆ ಬಗ್ಗೆ ಕುತೂಹಲವಿದ್ದ ಧಾರಾ ಊಟದ ಸಮಯದಲ್ಲಿ ಪ್ರಸ್ತಾಪಿಸಿದಾಗ, “ಸದ್ಯ ಊಟ ಮಾಡಿ, ನಂತರ ಕುಳಿತು ಮಾತಾಡೋಣ,” ಎಂದ.
“ನಿಮ್ಮದು ಬಹುಮುಖ ಪ್ರತಿಭೆ. ಮೂಲತಃ ಎಂಜಿನಿಯರ್, ಕೃಷಿಯಲ್ಲಿ ಪರಿಣಿತರು, ಪಾಕ ಪ್ರವೀಣರು, ನಳ ಮಹಾರಾಜರು, ಭೀಮಸೇನನಿಗಿಂತ ಒಂದು ಕೈ ಮೇಲು, ಮಾಸ್ಟರ್ ಆಫ್ ಆಲ್ ಜೀನಿಯಸ್,” ಎಂದೆಲ್ಲಾ ಹೊಗಳಿದಳು.
“ನಿಮ್ಮ ಹೊಗಳಿಕೆಗೆ ಮಿತಿಯಿಲ್ಲವೇನೋ….?” ಎಂದು ಬಾಯಲ್ಲಿ ಹೇಳಿದರೂ ಒಳಗೊಳಗೇ ಖುಷಿಯಿಂದ ಬೀಗಿದ ಅರವಿಂದ್. ಊಟ ಮುಗಿಯುತ್ತಲೇ ಧಾರಾ ಮತ್ತೊಮ್ಮೆ ಜ್ಞಾಪಿಸುವುದಕ್ಕಿಂತ ಮೊದಲೇ ಅರವಿಂದ್ ತನ್ನ ಕಥಾನಕದ ಸುರುಳಿ ಬಿಚ್ಚಿದ.
“ಸೋದರತ್ತೆಯ ಮಗಳು ವಿಶಾಖಾಳನ್ನು ಇಷ್ಟಪಟ್ಟಿದ್ದೆ, ಪ್ರೀತಿಸಿದ್ದೆ. ಅವಳೂ ನನ್ನಂತೆ ಬಿಇ ಪದವೀಧರೆ. ಅವಳಿಗೂ ನನ್ನ ಮೇಲೆ ಒಲವಿತ್ತು. ಪದವಿ ಮುಗಿಯುತ್ತಿದ್ದಂತೆ ಅವಳೂ ಬೆಂಗಳೂರಿನಲ್ಲಿ ಕೆಲಸಕ್ಕೆ ಸೇರಿಕೊಂಡಳು. ಕೆಲಸಕ್ಕೆ ಸೇರಿದ ತುಸು ದಿನಗಳಲ್ಲೇ ನನ್ನ ಬಗೆಗಿನ ಅವಳ ನಿಲುವು ಬದಲಾಗತೊಡಗಿತು. ಒಂದು ದಿನ ನಾನೇ ಪ್ರಪೋಸ್ ಮಾಡಿದೆ. ಅದಕ್ಕವಳು, `ಅರೂ, ನನಗೂ ನಿನಗೂ ಗೆಳೆತನವಿದೆ. ಆದರೆ ನಾನೆಂದೂ ನಿನ್ನನ್ನು ಪ್ರೀತಿಸಲಿಲ್ಲ. ನೀನು ಸುಮ್ಮ ಸುಮ್ಮನೇ ನನ್ನ ಬಗ್ಗೆ ಕನಸು ಕಟ್ಟಿಕೊಳ್ಳಬೇಡ,’ ಎಂದು ಖಾರವಾಗಿ ಹೇಳಿ, ತನಗೆ ಇಷ್ಟವಿಲ್ಲವೆಂದು ವಿಶಾಖಾ ಮುಖಕ್ಕೆ ಹೊಡೆದಂತೆ ಹೇಳಿ ನಿರ್ದಯಿಯಾಗಿ ತಿರಸ್ಕರಿಸಿಬಿಟ್ಟಳು. ಇದು ಒಂದು ಅಧ್ಯಾಯ,” ಎಂದು ಮೌನಕ್ಕೆ ಶರಣಾದ ಅರವಿಂದನ ಮುಖದಲ್ಲಿ ನಿರ್ಲಿಪ್ತಭಾವವಿತ್ತು.
“ವಿಶಾಖಾಳ ನೆನಪಲ್ಲೇ ಒಂದು ವರ್ಷ ದೇವದಾಸನಂತೆ ಕಳೆದೆ. ಅಪ್ಪನ ಸಹೋದ್ಯೋಗಿಯೊಬ್ಬರ ಗೆಳೆಯನ ಮಗಳ ಪ್ರಸ್ತಾಪ ಬಂದಿತು. ಅನೂಷಾ ನನ್ನಂತೆ ಟೆಕ್ಕೀನೇ. ಅಂತೂ ಆ ಸಂಬಂಧ ಕುದುರಿತು. ಅನೂಷಾಳ ತಂದೆ ಬೆಂಗಳೂರಿನಲ್ಲಿ ಶ್ರೀಮಂತ ವಾಣಿಜ್ಯೋದ್ಯಮಿ. ಅನೂಷಾಳೊಡನೆ ನಿಶ್ಚಿತಾರ್ಥ ವಿಜೃಂಭಣೆಯಿಂದ ಜರುಗಿತು. ಅನೂಷಾ ಹೈಯಲ್ಲೇ ಹೈಫೈ. ಪಾಶ್ಚಾತ್ಯ ಉಡುಗೆಗಳು ಅವಳ ಮೈಗಂಟಿಕೊಂಡಿರುತ್ತಿದ್ದವು. ಶಾಪಿಂಗ್ ಪ್ರಿಯೆ. ಕೊಳ್ಳುಬಾಕುತನದ ಪ್ರವೃತ್ತಿಯ ಅವಳು ಬೇಕಾದ್ದು, ಬೇಡವಾದ್ದದ್ದೆಲ್ಲವನ್ನೂ ಖರೀದಿಸುತ್ತಿದ್ದಳು. ನನ್ನ ಕ್ರೆಡಿಟ್, ಡೆಬಿಟ್ ಕಾರ್ಡ್ ಗಳಿಂದ ಧಾರಾಳ ದುಡ್ಡನ್ನು ಮುಲಾಜಿಲ್ಲದೇ ಪೀಕಿಸಿದಳು.
“ಮದುವೆಗೆ ಮುಂಚೆ ರೆಸಾರ್ಟ್ ಗಳಿಗೆ ಹೋಗಿ ಏಕಾಂತದಲ್ಲಿ ಜಾಲಿಯಾಗಿದ್ದು ಬರೋಣವೆಂದಳು. ನನಗೆ ಸರಿ ಎನಿಸಲಿಲ್ಲ. `ಮದುವೆಗೆ ಮುಂಚೆ ಅಂತಹ ವೋಜುಮಸ್ತಿ ಬೇಡ, ಸ್ವಾತಂತ್ರ್ಯ ಸ್ವೇಚಾಚಾರಕ್ಕೆ ಎಡೆ ಮಾಡಿಕೊಡಬಾರದು. ನೈತಿಕತೆಯ ಅಧಃಪತನಕ್ಕೆ ನಾಂದಿ ಹಾಡುವುದು ಬೇಡ. ಹಿರಿಯರ ಸದ್ವಿಚಾರ, ಸಂಸ್ಕಾರಗಳಂತೆ ನಡೆದು ಖುಷಿ ಅನುಭವಿಸೋಣ,’ ಎಂದ ನನ್ನ ಉಪದೇಶ ಅವಳಿಗೆ ಹಿಡಿಸಲಿಲ್ಲ. ಮದುವೆಗೆ ಇನ್ನೊಂದು ತಿಂಗಳು ಬಾಕಿ ಇತ್ತು. ಮದುವೆ ಮುರಿದುಕೊಂಡಳು. ಹಿರಿಯರ ಮಧ್ಯಸ್ಥಿಕೆ ಯಶಸ್ವಿಯಾಗಲಿಲ್ಲ. ಹೀಗೆ ಎರಡನೇ ಪ್ರೀತಿಯೂ ಸಮಾಧಿಯಾಯಿತು.
“ಕೆಲಸದ ಒತ್ತಡ, ಬೇಸರ ಇವುಗಳಿಂದ ಮೌನದ ಚಿಪ್ಪಿನೊಳಗೆ ಸೇರಿಕೊಳ್ಳತೊಡಗಿದೆ. ಕೃಷಿಯಲ್ಲಿ ತೊಡಗಿಸಿಕೊಳ್ಳಬೇಕೆಂಬ ಹಂಬಲ ಎದೆಯೊಳಗೆ ಚಿಗುರತೊಡಗಿತ್ತು. ಪ್ರಕೃತಿಯ ಮಡಿಲಲ್ಲಿ ಇದ್ದುಕೊಂಡು ನನ್ನೆದೊಳಗಿನ ನೋವನ್ನು ಮರೆಯಬೇಕು ಎಂದುಕೊಂಡೆ. ಆಗ ಇನ್ನೊಂದು ಪ್ರಪೋಸ್ ಬಂದಿತು. ಅದೂ ನಮ್ಮ ಶಿರಸಿಯಿಂದಲೇ. ಹುಡುಗಿ ಬಿಎ ಬಿಎಡ್ ಮಾಡಿಕೊಂಡು ಶಿರಸಿಯ ಖಾಸಗಿ ಶಾಲೆಯೊಂದರಲ್ಲಿ ಟೀಚರ್ ಆಗಿದ್ದಳು. ಸೌಪರ್ಣಿಕಾ ಬಳುಕುವ ಬಳ್ಳಿ, ಮೊದಲ ನೋಟದಲ್ಲೇ ಮನತುಂಬಿದಳು. ಮದುವೆಯೂ ನಿಶ್ಚಯವಾಯಿತು. ಫೋನ್ ನಲ್ಲಿ ಮಾತುಕಥೆಗಳು ವಿಜೃಂಭಿಸತೊಡಗಿದವು.
“ಹೀಗೆ ಒಂದು ದಿನ ಪ್ರೇಮಾಭಿಷೇಕದ ಮಾತುಕಥೆಗಳು ಭೋರ್ಗರೆಯುತ್ತಿರುವಾಗ, ಕೃಷಿಯ ಬಗೆಗಿನ ನನ್ನ ಒಲವನ್ನು ವ್ಯಕ್ತಪಡಿಸಿದ್ದೆ.
`ಅವಸರ ಬೇಡ. ಕೈಯಲ್ಲಿರುವ ನೌಕರಿಯನ್ನು ಬಿಟ್ಟು ಕೃಷಿಯಲ್ಲಿ ತೊಡಗಿಕೊಳ್ಳುವುದು ಅಷ್ಟಾಗಿ ಸರಿ ಕಾಣುವುದಿಲ್ಲ. ಕೃಷಿ ಲಾಭದಾಯಕ ಉದ್ಯೋಗ ಅಲ್ಲ,’ ಎಂದು ಸೌಪರ್ಣಿಕಾ ತನ್ನ ಅಭಿಪ್ರಾಯ ತಿಳಿಸಿದ್ದಳು. ಮೌನವಾಗಿ ಇದ್ದುಕೊಂಡೇ ಕೃಷಿಯ ಬಗ್ಗೆ ಮಾಹಿತಿ ಸಂಗ್ರಹಿಸತೊಡಗಿದೆ. ಅದೊಂದು ಶುಭ ಮುಹೂರ್ತದಲ್ಲಿ ನೌಕರಿಗೆ ರಾಜೀನಾಮೆ ನೀಡಿ ಈ ತೋಟದ ಮನೆ ಸೇರಿಕೊಂಡೆ. ಸೌಪರ್ಣಿಕಾ ಸಂತಸದಿಂದ ಬೀಗಲಿಲ್ಲ. ಅಸಮಾಧಾನ ವ್ಯಕ್ತಪಡಿಸಿದಳು. ಅಷ್ಟರಲ್ಲಿ ಅವಳಿಗೆ ರಾಷ್ಟ್ರೀಕೃತ ಬ್ಯಾಂಕ್ ಒಂದರಲ್ಲಿ ಕೆಲಸ ಸಿಕ್ಕಿತು. ಮೊದಲ ಪೋಸ್ಟಿಂಗ್ ಉತ್ತರ ಕರ್ನಾಟಕದ ಕಲಬುರ್ಗಿ ಜಿಲ್ಲೆಯಲ್ಲಿ. ಸೌಪರ್ಣಿಕಾ ಖುಷಿಯಿಂದ ಕೆಲಸಕ್ಕೆ ಸೇರಿಕೊಂಡಳು.
“ಮದುವೆಗೆ ತಿಂಗಳೊಪ್ಪತ್ತು ಇರುವಾಗ ಕೃಷಿಯಲ್ಲಿ ತೊಡಗಿರುವ ನನ್ನೊಂದಿಗೆ ಮದುವೆ ಬೇಡವೆಂದು ಖಡಾಖಂಡಿತವಾಗಿ ತಿಳಿಸಿದಳು. ಮೂರನೇ ಮದುವೆ ಪ್ರಪೋಸ್ ಗೋರಿ ಕಟ್ಟಿಕೊಂಡಿತು. ನಾನು ಅಂತರ್ಮುಖಿಯಾಗತೊಡಗಿದೆ. ಕೃಷಿಯಲ್ಲಿ ನೋವನ್ನು ಮರೆತು ಮುಂದೆ ಸಾಗುತ್ತಿದ್ದೇನೆ,” ಅರವಿಂದ್ ಮಾತಿಗೆ ಮಂಗಳ ಹಾಡಿದಾಗ ಮೌನ ಆವರಿಸಿತು.
ತುಸು ಹೊತ್ತಿನವರೆಗೆ ಧಾರಾಳಿಂದಲೂ ಮಾತುಗಳು ಹೊರಬರಲಿಲ್ಲ. ಅವಳೆದೆಯಲ್ಲಿ ಖಾರ ಕಲಸಿದ ಅನುಭವ. ಮನ ವೇದನೆಯಿಂದ ಮರುಗತೊಡಗಿತು.
“ಅರೇ, ನನ್ನ ಕಥೆ ಕೇಳಿ ನೀವು ತುಂಬಾ ಡಲ್ಲಾಗಿಬಿಟ್ಟಿರಲ್ಲ….? ಅದೆಲ್ಲ ಒಂದು ಕೆಟ್ಟ ಕನಸು ಎಂದು ಭಾವಿಸಿ, ನಾನಿಲ್ಲಿ ಜೀವನೋತ್ಸಾಹ ಕಂಡುಕೊಂಡಿದ್ದೇನೆ. ನಗುನಗುತ್ತಾ ಜೀವನ ಸಾಗಿಸುತ್ತಿದ್ದೇನೆ. ಇದು ನನ್ನದೊಬ್ಬನದೇ ಕಥೆಯಲ್ಲ. ನೌಕರಿಗೆ ಸೇರಿಕೊಳ್ಳದೇ ಕೃಷಿಯಲ್ಲಿ ತೊಡಗಿಕೊಂಡಿರುವ ಇಲ್ಲಿನ ಅನೇಕ ಯುವಕರ ಕಥೆ ಇದೇ ಆಗಿದೆ. ನಲವತ್ತಾದರೂ ಮದುವೆಯಾಗದವರು ಸಾಕಷ್ಟು ಜನರಿದ್ದಾರೆ. ನಮ್ಮಲ್ಲಿಯ ಯುವತಿಯರಿಗೆ, ಅವರ ಹೆತ್ತವರಿಗೆ ನೌಕರಿ ಮಾಡುವ ಹುಡುಗರೇ ಬೇಕು,” ಅರವಿಂದನೇ ಮೌನ ಮುರಿದ.
“ಎದೆಯೊಳಗೆ ಸುಡೋ ಕೆಂಡಾನ ಇಟ್ಟುಕೊಂಡು ಏನೂ ಆಗಿಲ್ಲವೆಂಬಂತೆ ನಗುನಗುತ್ತಾ ಬಾಳನ್ನು ಕಟ್ಟಿಕೊಂಡಿರುವ ನೀವೇ ಗ್ರೇಟ್! ಅಂತರಂಗವನ್ನು ಅರಿತು ನಡೆಯುವ ಹುಡುಗಿಯೊಬ್ಬಳು ಆದಷ್ಟು ಬೇಗ ನಿಮಗೆ ಜೊತೆಯಾಗಲಿ ಎಂದು ತುಂಬು ಹೃದಯದಿಂದ ಹಾರೈಸುವೆ. ನಿಮ್ಮ ಕೃಷಿ ಕಾಯಕ ಯಶಸ್ವಿಯಾಗಿ ಸಾಗಲಿ. ಏಕೆಂದರೆ ಒಕ್ಕಲುತನ ನಿರ್ಲಕ್ಷಿತ ಲಯವಾಗಿರುವುದು ಕಟು ಸತ್ಯದ ಮಾತು,” ಧಾರಾ ನಗುಮೊಗದಿಂದ ಹೇಳಿದಾಗ ಬಿಗುವಿನ ವಾತಾವರಣ ತುಸು ತಿಳಿಯಾಯಿತು.
ವರ್ಷಗಳೆರಡು ಕಳೆಯುವಷ್ಟರಲ್ಲಿ ಧಾರಾ ಮಲೆನಾಡಿನ ವಾತಾವರಣಕ್ಕೆ ಹೊಂದಿಕೊಂಡು ಮಲೆನಾಡಿನವಳೇನೋ ಎಂಬಂತಾದಳು. ಅರವಿಂದನ ಕುಟುಂಬಕ್ಕೆ ಒಳ್ಳೆಯ ಸ್ನೇಹಿತೆಯಾಗಿಬಿಟ್ಟಳು. ರಜೆಯ ದಿನಗಳಲ್ಲಿ ಇಬ್ಬರ ಸುತ್ತಾಟಕ್ಕೆ ರಂಗೇರುತ್ತಿತ್ತು. ಧಾರಾಳಿಗೆ, ಶಿರಸಿಯ ಸುತ್ತಲಿನ ಪ್ರಸಿದ್ಧ ಉಂಚಳ್ಳಿ, ಶಿವಗಂಗಾ, ಮಾಗೋಡು, ಸಾತೊಡ್ಡಿ ಜಲಪಾತಗಳ ದರ್ಶನ ಮಾಡಿಸಿದ ಅರವಿಂದ್, ಮೇಲಿಂದ ಮೇಲೆ ಅರವಿಂದನ ಮನೆಗೆ ಎಡತಾಕುತ್ತಿದ್ದ ಧಾರಾ ಅವನ ತಾಯಿ ತಂದೆಗೆ ಮನೆಯ ಹುಡುಗಿ ಎಂಬಂತಾದಳು.
`ಇವನ ತಾಳ್ಮೆ, ಸಂಯಮ, ನಡತೆ, ಆತ್ಮೀಯ ಪವಿತ್ರ ಹಾವಭಾವ ನನ್ನ ಮನಸ್ಸಿನೊಳಗೆ ಪ್ರತಿಧ್ವನಿಸತೊಡಗಿವೆ. ವಿನಮ್ರ ಭಾವದ ಸಾತ್ವಿಕ ಮನುಷ್ಯ. ನಾನಾಗಲೀ, ಅವನಾಗಲೀ ಬಾಯಿಬಿಟ್ಟು ಏನನ್ನೂ ಹೇಳದಿದ್ದರೂ ಅವನಂತೂ ನನ್ನೆದೆಯೊಳಗೆ ಇಣುಕುತ್ತಿದ್ದಾನೆ. ಪ್ರೀತಿಯ ಕನಸುಗಳಿಗೆ ಬಣ್ಣ ತುಂಬುತ್ತಿದ್ದಾನೆ. ಅವನ ಹೆತ್ತವರೂ ಆತ್ಮೀಯರೆನಿಸತೊಡಗಿದ್ದಾರೆ,’ ಧಾರಾ ಅರವಿಂದನ ಪ್ರತಿ ನಡತೆಯಲ್ಲಿ ಮೆಚ್ಚುಗೆ ಕಂಡುಕೊಳ್ಳತೊಡಗಿದಳು.
`ಧಾರಾಳಿಗೆ ನನ್ನ ಮೇಲೆ ಪ್ರೀತಿ ಮೂಡಿರಬಹುದೇ…..? ಛೇ! ಇರಲಿಕ್ಕಿಲ್ಲ. ಎರಡು ವರ್ಷಗಳ ನಿರ್ಮಲ ಸ್ನೇಹದಲ್ಲಿ ಅವಳೆಂದೂ ಪ್ರೀತಿ ಪ್ರೇಮದ ಬಗ್ಗೆ ಮಾತಾಡಿಲ್ಲ. ದೂರದ ಬಯಲು ಸೀಮೆಯವಳು. ನೌಕರಿ ಅಂತ ಇತ್ತ ಬಂದಿದ್ದಾಳೆ. ಮುಂದಿನ ವರ್ಗಾವಣೆಯಲ್ಲಿ ತನ್ನೂರಿನ ಕಡೆಗೇ ಪೋಸ್ಟಿಂಗ್ ತೆಗೆದುಕೊಳ್ಳಬಹುದು. ನನಗೋ ಕೃಷಿಯ ನಂಟು. ಇದು ನಂಟು ಬೆಸೆಯುವ ಗೆಳೆತನಲ್ಲ, ಬರೀ ಸ್ನೇಹ ಅಷ್ಟೇ. ಸ್ನೇಹಕ್ಕೆ ಧಕ್ಕೆ ಬರದಂತೆ ನೋಡಿಕೊಳ್ಳುವುದು ನನ್ನ ಕರ್ತವ್ಯ. ಆದರೂ ಇವಳು ನನ್ನೆದೆಯಲ್ಲಿ ಬತ್ತಿರುವ ಪ್ರೀತಿ, ಪ್ರೇಮದ ಸೆಲೆಗಳಿಗೆ ಜೀವತುಂಬಿ ಪ್ರೇಮ ಸಂಜೀವಿನಿ ಆಗುತ್ತಿರುವಳಲ್ಲವೇ…?’ ಅರವಿಂದನ ತಲೆಯಲ್ಲೂ ಹೀಗೆ ಹಲವಾರು ಯೋಚನೆಗಳು ಸುಳಿದು ಮನಸ್ಸನ್ನು ಚಂಚಲಗೊಳಿಸುತ್ತಿದ್ದರೂ ಮಾನಸಿಕ ಸಮತೋಲನ ಕಾಯ್ದುಕೊಳ್ಳತೊಡಗಿದ್ದ.
`ಈ ಹುಡುಗಿಯ ಪ್ರತಿಯೊಂದು ನಡೆ ನುಡಿ ಮೆಚ್ಚುವಂಥಹವೇ. ಸೀದಾ ಸಾದಾ ಮನಸ್ಸಿನ ಸರಳ ವ್ಯಕ್ತಿತ್ವದವಳು. ಇವಳಿಗೆ ನಮ್ಮ ಅರವಿಂದನ ಮೇಲೆ ಲವ್ವಾಗಿರಬಹುದೇ…..? ಎಗ್ಗಿಲ್ಲದೇ ಜೊತೆ ಜೊತೆಯಾಗಿ ಸುತ್ತುತ್ತಿರುವಾಗ ಲವ್ವಾಗದೇ ಇದ್ದೀತೇ? ಆದರೆ ಇವನಾಗಲೀ, ಅವಳಾಗಲೀ ಯಾವತ್ತೂ ಪ್ರೀತಿ ಪ್ರೇಮದ ಬಗ್ಗೆ ಮಾತೇ ಆಡಿಲ್ಲ. ಅದಕ್ಕೆ ಇಂಬು ಕೊಡುವಂತೆಯೂ ವರ್ತಿಸಿಲ್ಲ. ಇಬ್ಬರೂ ಒಳ್ಳೇ ಸ್ನೇಹಿತರು. ಒಂದು ವೇಳೆ ಇಬ್ಬರಲ್ಲೂ ಪ್ರೀತಿ ಮೊಳೆತಿದ್ದರೆ ನಮ್ಮ ಅರೂನ ಬಾಳು ಹಸನಾದಂತೆ. ಈಗಾದರೂ ಇವನಿಗೆ ಕಂಕಣಭಾಗ್ಯ ಕೂಡಿ ಬಂದರೆ ನಮ್ಮಷ್ಟು ಖುಷಿ ಪಡುವವರು ಯಾರೂ ಇರಲಿಕ್ಕಿಲ್ಲ. ಇವನಿಗೋ ಮದುವೆ ವಯಸ್ಸು ಮೀರುತ್ತಿರುವುದರಿಂದ ಮದುವೆಯೇ ಬೇಡವೆನ್ನುತ್ತಿದ್ದಾನೆ. ಜಾತಿಯ ಬಗ್ಗೆ ನಮ್ಮದೇನೂ ತಕರಾರಿಲ್ಲ. ನಮಗಂತೂ ತುಂಬಾ ಇಷ್ಟವಾಗಿದ್ದಾಳೆ. ಅವಳ ಮನಸ್ಸಿನಲ್ಲಿ ಏನಿದೆಯೋ? ಇವನ ಮನಸ್ಸಿಲ್ಲಿ ಏನಿದೆಯೋ? ದೇವರೇ ನಮ್ಮ ಅರವಿಂದನನ್ನು ನೀನೇ ಹರಸಬೇಕು,’ ಹೀಗೆ ಸಾಗುತ್ತಿತ್ತು ಅರವಿಂದನ ತಾಯಿ ವೇದಾವತಿಯರ ಯೋಚನಾ ಲಹರಿ.
ಅಂದು ಆ ಊರಿನ ದೇವಸ್ಥಾನದಲ್ಲಿ ರಥೋತ್ಸವ. ಧಾರಾಳ ಇಚ್ಛೆಯ ಮೇರೆಗೆ ಅವಳ ತಾಯಿ ತಂದೆ ರಾಜಶೇಖರ್ ಸುಮಾ ಶಿರಸಿಗೆ ಬಂದಿದ್ದರು. ಮಧ್ಯಾಹ್ನ ಅರವಿಂದನ ಮನೆಯಲ್ಲಿ ಔತಣ. ನಂತರ ಎಲ್ಲರೂ ಸೇರಿಕೊಂಡು ಸಂಜೆಗೆ ದೇವರ ದರ್ಶನ ಪಡೆದು ರಥೋತ್ಸವವನ್ನು ಕಣ್ತುಂಬಿಕೊಳ್ಳುವ ಯೋಜನೆ ಇತ್ತು. ಹಬ್ಬದೂಟ ಸವಿದು ಎಲ್ಲರೂ ಮಾತಿಗೆ ಶುರುವಿಟ್ಟುಕೊಂಡರು.
“ದೇವರ ಕೃಪೆಯಿಂದ ಇಂದು ಎಲ್ಲರೂ ಇಲ್ಲಿ ಜೊತೆಗೂಡಿರುವುದು ಒಂದು ಯೋಗಾಯೋಗವೇ. ಧಾರಾ ನಿನ್ನೊಂದಿಗೆ ಒಂದಿಷ್ಟು ಮಾತನಾಡಬೇಕಿತ್ತು…..” ರಾಗವೆಳೆಯುತ್ತಾ ವೇದಾವತಿ ಎಲ್ಲರ ಮುಖಗಳನ್ನು ದಿಟ್ಟಿಸತೊಡಗಿದರು.
“ಅಮ್ಮಾ ಹೌದಾ…..? ಬಹಳ ದಿನಗಳಿಂದ ನಾನೂ ಒಂದು ವಿಷಯವನ್ನು ಪ್ರಸ್ತಾಪಿಸಬೇಕು ಎಂದುಕೊಂಡಿರುವೆ,” ಧಾರಾಳೂ ತೊದಲುತ್ತಾ ಉಲಿದಳು.
“ನಾನೂ ಒಂದು ಮಾತು ಹೇಳಬೇಕಿತ್ತು…..?” ಅರವಿಂದನೂ ಮಾತಿಗೆ ಪೀಠಿಕೆ ಹಾಕಿದ. ಟಿ.ವಿಯಲ್ಲಿನ ಧಾರಾವಾಹಿಗಳಲ್ಲಿನ ಪಾತ್ರಗಳಂತೆ ಎಲ್ಲರೂ ಒಬ್ಬರ ಮುಖ ಒಬ್ಬರು ನೋಡಿಕೊಳ್ಳತೊಡಗಿದರು. ತುಸು ಹೊತ್ತಿನ ಮೌನದ ಅಧಿಪತ್ಯ. ಎಲ್ಲರೆದೆಗಳಲ್ಲಿ ಒಂತರ ತವಕ. ಯಾರು, ಹೇಗೆ ಮಾತಿಗೆ ಶುರುವಿಟ್ಟುಕೊಳ್ಳಬೇಕೋ ಎಂಬ ಗೊಂದಲ. ಕೊನೆಗೆ ಮೌನ ಮುರಿದವರು ಧಾರಾಳ ತಾಯಿ ಸುಮಾ.
“ನಿಮ್ಮೆಲ್ಲರ ಮನಸ್ಸಿನಲ್ಲಿ ಇರುವುದನ್ನು ನಾನು ಬಲ್ಲೆ. ಅರವಿಂದ್, ಧಾರಾ ಪರಸ್ಪರ ಪ್ರೀತಿಸುತ್ತಿದ್ದರೂ ಮನಸ್ಸನ್ನು ಬಿಚ್ಚಿಡುತ್ತಿಲ್ಲ. ಅವರಿಬ್ಬರ ಪ್ರೀತಿ ವೇದಾವತಿಯವರ ತಾಯಿ ಹೃದಯದ ಅರಿವಿಗೆ ಬಂದಿದ್ದರೂ ಪ್ರಸ್ತಾಪಿಸಲು ಹಿಂಜರಿಕೆ. ಪ್ರೀತಿಸುವ ಹೃದಯಗಳಿಗೆ, ಮನಸ್ಸುಗಳಿಗೆ ಪ್ರೋತ್ಸಾಹ ನೀಡುವುದು ಮಾನವ ಧರ್ಮ. ನಮ್ಮ ಕಡೆಯಿಂದ ಅರವಿಂದ್, ಧಾರಾಳ ಪ್ರೀತಿಗೆ ಮನಸಾರೆ ಒಪ್ಪಿಗೆ ಇದೆ. ನಿಮ್ಮ ಒಪ್ಪಿಗೆ ಇದ್ದರೆ `ಶುಭಸ್ಯ ಶೀಘ್ರಂ’ ಎನ್ನೋಣ,” ಎಂದೆನ್ನುತ್ತಾ ಸುಮಾ, ವೇದಾವತಿ ಸುಬ್ರಹ್ಮಣ್ಯ ಅವರ ಕಡೆ ದೃಷ್ಟಿ ಹರಿಸಿದಳು. ಮತ್ತೆ ತುಸು ಹೊತ್ತಿನ ಮೌನಾಚರಣೆ. ವೇದಾವತಿ, ಸುಬ್ರಹ್ಮಣ್ಯ ಮುಖ ಮುಖ ನೋಡಿಕೊಂಡರೆ, ಧಾರಾ ಅರವಿಂದ್ ಪರಸ್ಪರ ದೃಷ್ಟಿ ಯುದ್ಧದಲ್ಲಿ ತಲ್ಲೀನರಾದರು. ಮತ್ತೆ ಎಲ್ಲರೆದೆಯಲ್ಲಿ ಕೌತುಕ.
“ಸುಮಾ, ನೀವು ನನ್ನ ಮನಸ್ಸಿನಲ್ಲಿ ಇದ್ದುದನ್ನೇ ಹೇಳಿರುವಿರಿ. ನಮಗೂ ಒಪ್ಪಿಗೆಯಿದೆ,” ಎಂದು ವೇದಾವತಿ ಹೇಳುವಷ್ಟರಲ್ಲಿ, “ಹಾಗಾದರೆ ನೀವು ಮಾತುಕಥೆ ಮುಂದುವರಿಸಿರಿ. ನಿಮ್ಮ ಆಶೀರ್ವಾದ ಗಟ್ಟಿಯಾದ ಮೇಲೆ ಇಲ್ಲಿ ನಮಗೇನು ಕೆಲಸ? ಮನೆಯ ಮುಂದಿನ ಅಡಕೆ ತೋಟದಲ್ಲಿ ಮರಗಳನ್ನು ಸುತ್ತುತ್ತಾ ಒಂದಿಷ್ಟು ಡ್ಯೂಯೆಟ್ ಹಾಡಿಕೊಳ್ಳುತ್ತೇವೆ,” ಎನ್ನುತ್ತಾ ಅರವಿಂದ್ ಮತ್ತು ಧಾರಾ ಜಿಂಕೆ ಮರಿಗಳಂತೆ ಜಿಗಿಯುತ್ತಾ ಹೊರಗೋಡಿದರು.
ಏಕಾಂತದಲ್ಲಿ ಪರಸ್ಪರ ಬಿಗಿದಪ್ಪಿಕೊಂಡು ಆನಂದಾತಿರೇಕದಲ್ಲಿ ಸಂಭ್ರಮಿಸತೊಡಗಿದಾಗ, ಅವರ ತುಂಟಾಟಕ್ಕೆ ನಾಚಿದ ಅಡಕೆ ಮರಗಳು ಬಾಗಿ, ಬಳುಕಿ ಸುವ್ವಿ ಸುವ್ವಾಲೆಯಾಡತೊಡಗಿದವು.





