ಕೇಂದ್ರ ಸರ್ಕಾರವು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ 133 ಸಾಧಕರಿಗೆ 131 (ಇಬ್ಬರಿಗೆ ಜಂಟಿಯಾಗಿ) “ಪದ್ಮ” ಪ್ರಶಸ್ತಿಗಳನ್ನು ಪ್ರಕಟಿಸಿದೆ. ಕರ್ನಾಟಕದ ಎಂಟು ಮಂದಿ ಸಾಧಕರು ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಕೋಲಾರ ಜಿಲ್ಲೆಯಲ್ಲಿ ಜನಿಸಿದ ವಿದ್ವಾಂಸ, ಅಕ್ಷರ ಬ್ರಹ್ಮ ಶತಾವಧಾನಿ ಡಾ. ಆರ್. ಗಣೇಶ್ ಅವರಿಗೆ “ಪದ್ಮಭೂಷಣ” ಗೌರವ ಸಂದಿದೆ. ಮೆಕ್ಯಾನಿಕಲ್ ಎಂಜಿನಿಯರ್ ಆಗಿದ್ದರೂ ಅಧಾನದ ಮೂಲಕ ಜ್ಞಾನ ಪಸರಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ.
ದಾವಣೆಗೆರೆಯ ವೈದ್ಯ ಡಾ.ಸುರೇಶ್ ಹನಗವಾಡಿ ಅವರಿಗೆ ಪದ್ಮಶ್ರೀ ಗೌರವ ದೊರೆತಿದೆ. ಎರಡು ಸಾವಿರಕ್ಕೂ ಹೆಚ್ಚು ಹಿಮೋಫಿಲಿಯಾ ರೋಗಿಗಳಿಗೆ ಉಚಿತ ಔಷಧ, ಚಿಕಿತ್ಸೆ ಮೂಲಕ ನಿಜವಾದ “ವೈದ್ಯೋ ನಾರಾಯಣೋ ಹರಿ” ಎನ್ನಿಸಿಕೊಂಡವರು ಡಾ.ಸುರೇಶ್.
ಶಿಕ್ಷಣ ಮತ್ತು ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ಶಿಕ್ಷಣದ ಘಮ ಪಸರಿಸಿದವರು ಬೆಳಗಾವಿ ಮೂಲದ ಡಾ. ಪ್ರಭಾಕರ ಕೋರೆ. ಕರ್ನಾಟಕ ಲಿಂಗಾಯತ ಎಜುಕೇಶನ್ ಸೊಸೈಟಿಯನ್ನು (ಕೆಎಲ್ಇ) ಜಾಗತಿಕ ಮಟ್ಟಕ್ಕೆ ಕೊಂಡೊಯ್ದ ಕೀರ್ತಿ ಕೋರೆ ಅವರಿಗೆ ಸಲ್ಲುತ್ತದೆ. ಕೆ ಎಲ್ ಇ ಪ್ರಭಾಕರ ಕೋರೆ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರ, ಚಾರಿಟೇಬಲ್ ಆಸ್ಪತ್ರೆ ಮೂಲಕ ಜನರಿಗೆ ವಿಶ್ವದರ್ಜೆ ಚಿಕಿತ್ಸೆ ಸಿಗುವಂತೆ ಮಾಡಿದ ಕೀರ್ತಿ ಕೋರೆ ಅವರದು.
ಪುಸ್ತಕ ಸಂಗ್ರಹದ ಮೂಲಕವೇ ಸಾಹಿತ್ಯಕ್ಕೆ ಕೊಡುಗೆ ನೀಡಿದವರು ಲಕ್ಷ ಪುಸ್ತಕಗಳ ಸಿರಿವಂತ, ಮಂಡ್ಯದ ಚಿನಕುರಳಿಯ ಅಂಕೇಗೌಡರು. ಸುಮಾರು ನಾಲ್ಕು ಲಕ್ಷ ಪುಸ್ತಕಗಳು, ನಾಣ್ಯ, ಅಂಚೆ ಚೀಟಿ ಮತ್ತು ಲಗ್ನಪತ್ರಿಕೆಗಳ ಅಪರೂಪದ ಸಂಗ್ರಹ ಮಾಡಿದ್ದಾರೆ. ತಮ್ಮ ದುಡಿಮೆಯ ಶೇ.40ರಷ್ಟು ಹಣವನ್ನು ಪುಸ್ತಕಗಳ ಖರೀದಿಗಾಗಿಯೇ ಮೀಸಲಿಟ್ಟಿದ್ದಾರೆ. ಲಕ್ಷ ಲಕ್ಷ ಪುಸ್ತಕಗಳ ಪೋಷಣೆಗಾಗಿ ಇವರು “ಅಂಕೇಗೌಡ ಪುಸ್ತಕ ಮನೆ” ಎಂಬ ಬೃಹತ್ ಗ್ರಂಥಾಲಯ ಕಟ್ಟಿದ್ದಾರೆ.
ಬೆಂಗಳೂರಿನ ಡಾ.ಎಸ್.ಜಿ.ಸುಶೀಲಮ್ಮ ಅವರು ಸೇವಾಶ್ರಮದ ಮೂಲಕ ಮಹಿಳೆಯರು ಮತ್ತು ಮಕ್ಕಳ ಸೇವೆಗೆ ಇಡೀ ಜೀವನವನ್ನು ಮುಡಿಪಾಗಿಟ್ಟಿದ್ದಾರೆ. ಅವರ ಸದ್ದಿಲ್ಲದ ಸೇವೆಗೆ ಈಗ ಪದ್ಮಶ್ರೀ ದೊರೆತಿದೆ. 1963ರಲ್ಲಿ ತಮ್ಮ ವೃತ್ತಿಜೀವನಕ್ಕೆ ವಿಧಾಯ ಹೇಳಿ, ಮಹಿಳೆಯರು, ಮಕ್ಕಳ ಕಲ್ಯಾಣಕ್ಕಾಗಿ ಸೇವೆ ಸಲ್ಲಿಸುತ್ತಿರುವ ಸುಶೀಲಮ್ಮ, ಮಕ್ಕಳಿಗೆ ಗ್ರಂಥಾಲಯ, ಮಹಿಳಾ ಮತ್ತು ಮಕ್ಕಳ ಆಧ್ಯಾತ್ಮಿಕ ತರಬೇತಿ ಕೇಂದ್ರ, ನಿರ್ಗತಿಕ ಮಹಿಳೆಯರ ಸಬಲೀಕರಣ ಜತೆ ಸ್ವಯಂ ಉದ್ಯೋಗ ಕಲ್ಪಿಸುವ ಕೆಲಸ ಮಾಡುತ್ತಿದ್ದಾರೆ.
ಸರಕಾರಿ ಸ್ವಾಮ್ಯದ ಕಂಪನಿಯ ಸಿಇಒ ಆಗಿದ್ದರೂ ಜನರ ಶಿಕ್ಷಣಕ್ಕೆ, ತಂತ್ರಜ್ಞಾನಕ್ಕೆ ಆದ್ಯತೆ ಮೂಲಕ ಕ್ರಾಂತಿಕಾರಿ ಬದಲಾವಣೆ ತಂದವರು ಶಶಿಶೇಖರ್ ವೆಂಪತಿ. ಪ್ರಸಾರ ಭಾರತಿ (ದೂರದರ್ಶನ ಮತ್ತು ಆಲ್ ಇಂಡಿಯಾ ರೇಡಿಯೋ) ಮಾಜಿ ಮುಖ್ಯನಿರ್ವಾಹಕ ಅಧಿಕಾರಿ ಶಶಿಶೇಖರ್ ವೆಂಪತಿ ಅವರು ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ.
2017ರಿಂದ 2022ರವರೆಗೆ ಪ್ರಸಾರ ಭಾರತಿಯಲ್ಲಿ ಸಿಇಒ ಆಗಿ ಸೇವೆ ಸಲ್ಲಿಸಿದ ಅವರು ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿದ ಅಮೋಘ ಸೇವೆಗಾಗಿ ಈ ಪ್ರಶಸ್ತಿ ಸಂದಿದೆ. ಪ್ರಸಾರ ಭಾರತಿಯಲ್ಲಿ ಡಿಜಿಟಲ್ ರೂಪಾಂತರಕ್ಕೆ ಒತ್ತು ನೀಡಿದ್ದ ಅವರು, ದೂರದರ್ಶನ ಮತ್ತು ಆಕಾಶವಾಣಿಯನ್ನು ಆಧುನೀಕರಣಗೊಳಿಸುವುದರಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ದೇಶದ ವೈಮಾನಿಕ ಸುರಕ್ಷತೆಗೆ ಹೊಸ ಭಾಷ್ಯ ಬರೆದವರು ಬೆಂಗಳೂರಿನ ಶುಭಾ ವೆಂಕಟೇಶ್ ಅಯ್ಯಂಗಾರ್. ವಿಜ್ಞಾನ ಮತ್ತು ತಂತ್ರಜ್ಞಾನದ ಕ್ಷೇತ್ರದ ಸಾಧನೆಗಾಗಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ.
ಬೆಂಗಳೂರಿನ ನ್ಯಾಷನಲ್ ಏರೋಸ್ಪೇಸ್ ಲ್ಯಾಬೋರೇಟರಿ (ಎನ್ ಎ ಎಲ್) ವಿಜ್ಞಾನಿಯಾಗಿ ಕಾರ್ಯನಿರ್ವಹಿಸುತ್ತಿರುವ ಅವರು, ಏರೋಸ್ಪೇಸ್ ತಂತ್ರಜ್ಞಾನ ಕ್ಷೇತ್ರದಲ್ಲಿನ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಪರಿಣತಿ ಹೊಂದಿದ್ದಾರೆ.
ದೇಶದ ಪ್ರತಿ ಮನೆಗಳಿಗೆ ಸುರಕ್ಷಿತವಾದ ಪ್ರೆಶರ್ ಕುಕ್ಕರ್ ಆವಿಷ್ಕರಿಸಿದ ಖ್ಯಾತಿ ಖ್ಯಾತ ಕೈಗಾರಿಕೋದ್ಯಮಿ ದಿವಂಗತ ಟಿ.ಟಿ.ಜಗನ್ನಾಥನ್ ಅವರಿಗೆ ಸಲ್ಲುತ್ತದೆ. ಮರಣೋತ್ತರವಾಗಿ ಪದ್ಮಶ್ರೀ ಗೌರವ ಅವರಿಗೆ ಲಭಿಸಿದೆ. ಪ್ರೆಸ್ಟೀಜ್ ಸಮೂಹದ ಅಧ್ಯಕ್ಷರಾಗಿದ್ದ ಟಿ.ಟಿ.ಜಗನ್ನಾಥನ್, ಪ್ರೆಶರ್ ಕುಕ್ಕರ್ಗಳನ್ನು ಪರಿಚಯಿಸುವ ಮೂಲಕ ಜನಸಾಮಾನ್ಯರ ಅಡುಗೆ ಮನೆಗಳಲ್ಲಿ ತಂತ್ರಜ್ಞಾನದ ಆವಿಷ್ಕಾರಕ್ಕೆ ಮುನ್ನುಡಿ ಬರೆದವರು.





