ಭರತನಾಟ್ಯದಲ್ಲಿ ಖ್ಯಾತಿ ಗಳಿಸುವುದೇ ಕಷ್ಟ, ಹಾಗಿರುವಾಗ ಸತತ 216 ಗಂಟೆಗಳ ಕಾಲ ನಿರಂತರ ಭರತನಾಟ್ಯ ಪ್ರದರ್ಶನದ ಮೂಲಕ ಹೊಸ ವಿಶ್ವದಾಖಲೆ ಬರೆದು, ವಿದುಷಿ ದೀಕ್ಷಾ ವಿ. ಗೋಲ್ಡನ್ಬುಕ್ಆಫ್‌  ವರ್ಲ್ಡ್ ಕಾರ್ಡ್ನಲ್ಲಿ ತನ್ನ ಹೆಸರನ್ನು ದಾಖಲಿಸಿದ್ದಾರೆ…..!

ಭಾರತದ ಹೆಸರಿನೊಂದಿಗೇ ಬೆರೆತಿರುವ ಹೆಸರು ಭರತಮುನಿಯದು. ಭರತನ `ನಾಟ್ಯಶಾಸ್ತ್ರ’ ಎಲ್ಲಾ ಸಂಗೀತ, ನೃತ್ಯಕಲೆಗಳಿಗೆ ಒಂದು ಪ್ರಮುಖ ಆಧಾರ ಗ್ರಂಥವಾಗಿದೆ. ಭರತನಾಟ್ಯ ಅವುಗಳಲ್ಲೆ ಅತ್ಯಂತ ಹೆಚ್ಚಿನ ಪ್ರಮುಖ ಸ್ಥಾನ ಪಡೆದ ನೃತ್ಯ ಪ್ರಕಾರ. ಅಂತಹ ಭರತನಾಟ್ಯದಲ್ಲಿ ಹೊಸ ವಿಶ್ವ ದಾಖಲೆ ಬರೆದಿರುವವರು ಉಡುಪಿಯ ವಿದುಷಿ ದೀಕ್ಷಾ.

ಸತತ 216 ಗಂಟೆಗಳ ಕಾಲ ನಿರಂತರ ಭರತನಾಟ್ಯ ಪ್ರದರ್ಶನದ ಮೂಲಕ ಹೊಸ ವಿಶ್ವದಾಖಲೆ ಬರೆದಿರುವ ವಿದುಷಿ ದೀಕ್ಷಾ ವಿ. ಗೋಲ್ಡನ್‌ ಬುಕ್‌ ಆಫ್‌ ವರ್ಲ್ಡ್ ರೆಕಾರ್ಡ್‌ ನಲ್ಲಿ ತನ್ನ ಹೆಸರನ್ನು ದಾಖಲಿಸಿದ್ದಾರೆ.

D5

ಆಗಸ್ಟ್ 21 ರಂದು ಪ್ರತಿ ಮೂರು ಗಂಟೆಗೆ 15 ನಿಮಿಷಗಳ ವಿರಾಮ ನಿಯಮಕ್ಕೆ ಅನುಗುಣವಾಗಿ ಭರತನಾಟ್ಯ ಪ್ರದರ್ಶನವನ್ನು ವಿದುಷಿ ದೀಕ್ಷಾ ವಿ. ಆರಂಭಿಸಿದ್ದು, ಆಗಸ್ಟ್ 30ರ ಮಧ್ಯಾಹ್ನ 3.30ಕ್ಕೆ ನೃತ್ಯ ಪ್ರದರ್ಶನ ಅಂತ್ಯಗೊಂಡಿತ್ತು. ಸತತ 216 ಗಂಟೆಗಳ ಕಾಲ ಭರತನಾಟ್ಯ ಪ್ರದರ್ಶನದ ಮೂಲಕ ವಿಶ್ವದಾಖಲೆ ಸೃಷ್ಟಿಸಿದ್ದಾರೆ. ಗೋಲ್ಡನ್‌ ಬುಕ್‌ ಆಫ್‌ ವರ್ಲ್ಡ್ ರೆಕಾರ್ಡ್‌ ಏಷ್ಯಾ ಹೆಡ್ ಮನೀಶ್‌ ಬಿಷ್ಣೋಯ್‌, ವಿದುಷಿ ದೀಕ್ಷಾ ವಿ. ಅವರ ದಾಖಲೆಯ ಬಗ್ಗೆ ಘೋಷಿಸಿದ್ದಾರೆ. ಈ ಹಿನ್ನೆಲೆಯಲ್ಲಿ `ಗೃಹಶೋಭಾ’ ಅವರನ್ನು ಮಾತಿಗೆಳೆದಿತ್ತು. ಅವರೊಂದಿಗೆ ನಡೆಸಿದ ಆ ಮಾತುಕತೆಯ ಸಾರಾಂಶ ಇಲ್ಲಿದೆ.

ನಾನು ಹುಟ್ಟಿದ್ದು ಉಡುಪಿಯ ಬ್ರಹ್ಮಾವರ ತಾಲ್ಲೂಕಿನ ಆರೂರು ಗ್ರಾಮದಲ್ಲಿ. ತಂದೆ ವಿಠಲ, ತಾಯಿ ಶುಭಾ, ಈಗೊಂದು ವರ್ಷದ ಹಿಂದೆ ಮದುವೆಯಾಗಿದ್ದು, ನನ್ನ ಪತಿ ಸಿವಿಲ್ ‌ಕಾಂಟ್ರ್ಯಾಕ್ಟರ್‌ ರಾಹುಲ್‌. ಹೀಗೆ ದೀಕ್ಷಾ ತಮ್ಮ ಹಾಗೂ ಕುಟುಂಬದ ಕುರಿತು ಚಿಕ್ಕದಾಗಿ ಪರಿಚಯಿಸಿಕೊಂಡರು.

D2

ದೀಕ್ಷಾ ಲಿಟಲ್ ರಾಕ್‌ ಇಂಡಿಯನ್‌ ಶಾಲೆಯಲ್ಲಿ ಪೂರ್ವ ಪ್ರಾಥಮಿಕ, ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದಾಭ್ಯಾಸ ನಡೆಸಿದ್ದಾರೆ. ಹೆಬ್ರಿಯ ಅಮೃತ ಭಾರತೀ ಪಿಯು ಕಾಲೇಜಿನಲ್ಲಿ ಪಿಯು ವಿದ್ಯಾಭ್ಯಾಸ ನಡೆಸಿರುವ ಅವರು, ಡಾ. ಜಿ.ಶಂಕರ್‌ ಮಹಿಳಾ ಕಾಲೇಜು, ಅಜ್ಜರಕಾಡಿನಲ್ಲಿ ಪದವಿ ಪೂರೈಸಿದರು. ಪ್ರಸ್ತುತ ಡಾ. ಟಿ.ಎಂ.ಎ. ಪೈ ಎಜುಕೇಶನ್‌ ಕಾಲೇಜು, ಕುಂಜಿಬೆಟ್ಟುನಲ್ಲಿ ಬಿ.ಎಡ್‌. ವ್ಯಾಸಂಗ ಮಾಡುತ್ತಿದ್ದಾರೆ.

ನಾನು ಚಿಕ್ಕವಳಿದ್ದಾಗ ಭರತನಾಟ್ಯ ಹಾಗೂ ನೃತ್ಯದಲ್ಲಿ ನನಗೆ ಯಾವ ಆಸಕ್ತಿ ಇರಲಿಲ್ಲ. ಆದರೆ ಅಮ್ಮನಿಗೆ ನಾನು ನೃತ್ಯ ಕಲಿಯಬೇಕೆನ್ನುವ ಆಸೆ ಇತ್ತು. ಇದಕ್ಕಾಗಿ ಅವರು ನನಗಿನ್ನೂ ಮೂರು ವರ್ಷವಾಗಿದ್ದಾಗಲೇ ನನ್ನನ್ನು ಡ್ಯಾನ್ಸ್ ತರಗತಿಗೆ ಸೇರಿಸಲು ಮುಂದಾದರು. ಆದರೆ ಅಲ್ಲಿನ ಶಿಕ್ಷಕರು ನಾನಿನ್ನೂ ಚಿಕ್ಕವಳು, ಹಾಗಾಗಿ ಇನ್ನೂ ಸ್ವಲ್ಪ ಸಮಯ ಬಿಟ್ಟು ಬರಲು ಹೇಳಿದ್ದರು. ಆ ನಂತರ ನನಗೆ ಯಾವುದೇ ಆಸಕ್ತಿ ಇಲ್ಲದಿದ್ದರೂ ಒಂದನೇ ತರಗತಿಯಲ್ಲಿ ಕಲಿಯುವಾಗ, ಅಮ್ಮ ಮತ್ತೆ ನನ್ನನ್ನು ಡ್ಯಾನ್ಸ್ ತರಬೇತಿಗಾಗಿ ಸೇರಿಸಿದರು, ಎಂದು ದೀಕ್ಷಾ ತಮ್ಮ ನೃತ್ಯಾಭ್ಯಾಸದ ಮೊದಲ ದಿನಗಳನ್ನು ಬಾಲ್ಯದ ದಿನವನ್ನು ಮೆಲುಕು ಹಾಕಿದರು.

ಇದಾದ ನಂತರ ವಿದುಷಿ ಶೃತಿ ರಾಘವೇಂದ್ರ ಭಟ್‌ ರವರಲ್ಲಿ ದೀಕ್ಷಾ ನೃತ್ಯಾಭ್ಯಾಸ ಮುಂದುವರಿಸಿದರು. ಅಲ್ಲಿಂದ ದೀಕ್ಷಾ ಭರತನಾಟ್ಯವನ್ನು ಆಸಕ್ತಿಯಿಂದ ಕಲಿಯಲು ತೊಡಗಿದರು. ಭರತನಾಟ್ಯದಲ್ಲಿ ಜೂನಿಯರ್‌ ಹಾಗೂ ಸೀನಿಯರ್‌ಪರೀಕ್ಷೆಯಲ್ಲಿ ತೇರ್ಗಡೆಯಾದ ದೀಕ್ಷಾ, ಭರತನಾಟ್ಯದಲ್ಲಿ ವಿದ್ವತ್‌ ಪರೀಕ್ಷೆಗಾಗಿ ವಿದ್ಯಾನ್‌ಶ್ರೀಧರ ರಾವ್ ಬನ್ನಂಜೆಯವರಲ್ಲಿ ಅಧ್ಯಯನ ಮುಗಿಸಿದ್ದಾರೆ.

D6

ವಿಶ್ವದಾಖಲೆಗೆ ಪ್ರೇರಣೆ

ದೀಕ್ಷಾ, ಶ್ರೀಧರ ರಾವ್ ‌ರಲ್ಲಿ ಅಧ್ಯಯನ ನಡೆಸುತ್ತಿದ್ದಾಗ ಒಮ್ಮೆ ವಿದ್ವಾನ್‌ ಯಶವಂತ್‌ ಎಂ.ಜಿ.ಯವರೊಡನೆ ಆಕಸ್ಮಿಕ ಭೇಟಿಯಾಗಿತ್ತು ಯಶವಂತ್‌ ಸತತ 24 ಗಂಟೆಗಳ ಕಾಲ ಎಸ್‌.ಪಿ. ಬಾಲಸುಬ್ರಹ್ಮಣ್ಯರ ಹಾಡುಗಳನ್ನು ಹಾಡುವ ಮೂಲಕ ಗೋಲ್ಡನ್‌ ಬುಕ್‌ ಆಫ್‌ ವರ್ಲ್ಡ್ ರೆಕಾರ್ಡ್‌ ಬರೆದಿದ್ದಾರೆ. ಅವರನ್ನು ಭೇಟಿಯಾಗಿದ್ದ ದೀಕ್ಷಾಗೆ ತಾನೂ ಸಹ ಏಕೆ ವಿಶ್ವದಾಖಲೆ ಮಾಡಬಾರದು ಎನ್ನುವ ಮನಸ್ಸಾಗಿತ್ತು.

ಆದರೆ ಬಿ.ಎಡ್‌ ವ್ಯಾಸಂಗ ಮಾಡುತ್ತಿದ್ದುದ್ದರಿಂದ ತಕ್ಷಣವೇ ಈ ಸಂಬಂಧ ಮುಂದುವರಿಯಲು ಅವರಿಗೆ ಆಗಿರಲಿಲ್ಲ. ಆದರೆ ಬಿ.ಎಡ್. ಮೂರನೇ ಸೆಮಿಸ್ಟರ್‌ ಮುಗಿದ ನಂತರದಲ್ಲಿ ಒಂದು ತಿಂಗಳ ವಿರಾಮವಿದ್ದ ಕಾರಣ ಅದನ್ನೇ ಸದುಪಯೋಗ ಪಡಿಸಿಕೊಂಡ ದೀಕ್ಷಾ ಈಗ ವಿಶ್ವದಾಖಲೆ ನಿರ್ಮಾಣ ಮಾಡಿದ್ದಾರೆ. ಹೀಗೆ ದೀಕ್ಷಾರಿಗೆ ವಿಶ್ವದಾಖಲೆ ನಿರ್ಮಿಸಲು ವಿದ್ವಾನ್ ಯಶವಂತ್‌ ಪ್ರೇರಣೆಯಾಗಿದ್ದರು.

ದೀಕ್ಷಾ ಈಗ ಭರತನಾಟ್ಯದಲ್ಲಿ ಪ್ರವೀಣರಾಗಿದ್ದು, ನೂಪುರನಾದ ಕಲಾಕೇಂದ್ರ ಎಂಬ ತರಬೇತಿ ಕೇಂದ್ರವನ್ನೂ ನಡೆಸುತ್ತಿದ್ದು, ಇದುವರೆಗೆ ಎಪ್ಪತ್ತೈದಕ್ಕೂ ಹೆಚ್ಚು ಜನ ವಿದ್ಯಾರ್ಥಿಗಳು ಇವರಿಂದ ತರಬೇತಿ ಹೊಂದಿದ್ದಾರೆ. ಅಲ್ಲದೆ, ಪ್ರಸ್ತುತದಲ್ಲಿ ಸುಮಾರು ಮೂವತ್ತೈದು ವಿದ್ಯಾರ್ಥಿಗಳು ದೀಕ್ಷಾರಿಂದ ತರಬೇತಿ ಪಡೆಯುತ್ತಿದ್ದಾರೆ.

D3

ಯಕ್ಷಗಾನ, ಚಂಡೆ ಮದ್ದಳೆಗೂ ಸೈ

ದೀಕ್ಷಾ ಕೇವಲ ಭರತನಾಟ್ಯದಲ್ಲಿ ಮಾತ್ರವಲ್ಲದೆ, ಯಕ್ಷಗಾನ, ಚಂಡೆ ಮದ್ದಳೆ ವಾದನಗಳಲ್ಲಿಯೂ ಸಹ ಪರಿಣಿತಿ ಹೊಂದಿದ್ದಾರೆ. ಚೇರ್ಕಾಡಿ ಮಂಜುನಾಥ ಪ್ರಭುರವರಲ್ಲಿ ದೀಕ್ಷಾ ಯಕ್ಷಗಾನ ತರಬೇತಿ ಪಡೆದಿದ್ದಾರೆ. ಅಷ್ಟು ಮಾತ್ರವಲ್ಲದೆ, ಚಂಡೆ ಮದ್ದಳೆಗಳನ್ನು ಸಹ ಅವರಲ್ಲಿಯೇ ತರಬೇತಿ ಪಡೆಯುತ್ತಿದ್ದಾರೆ.

ದೀಕ್ಷಾ ಕರ್ನಾಟಕ ಸಂಗೀತ ಸಹ ಅಭ್ಯಾಸ ನಡೆಸಿದ್ದು, ಅದರಲ್ಲಿ ಸೀನಿಯರ್‌ ವಿಭಾಗದ ತರಬೇತಿ ಪಡೆದುಕೊಳ್ಳುತ್ತಿದ್ದು ವೀಣಾ ವಾದನ ಸಹ ಕಲಿಯುತ್ತಿದ್ದಾರೆ. ವಿದುಷಿ ಸುಮಾ ಐತಾಳ್‌ ರಲ್ಲಿ ದೀಕ್ಷಾ ಸಂಗೀತ ಹಾಗೂ ವೀಣಾವಾದನದ ತರಬೇತಿ ಪಡೆದುಕೊಳ್ಳುತ್ತಿದ್ದಾರೆ.

ಮಗುವಿನಂತೆ ಕಾಣ್ತಾರೆ

ನಾನು ಇಷ್ಟೆಲ್ಲಾ ಸಾಧನೆ ಮಾಡಲು ನನ್ನ ಕುಟುಂಬ ನನಗೆ ನೀಡಿದ ಸಹಕಾರವೇ ಪ್ರಮುಖ ಕಾರಣ, ಎನ್ನುವ ದೀಕ್ಷಾ ತಮ್ಮ ಕುಟುಂಬದ ಬೆಂಬಲಕ್ಕಾಗಿ ಧನ್ಯವಾದ ಹೇಳುತ್ತಾರೆ. ತಾಯಿ, ತಂದೆ, ಪತಿ ಸೇರಿದಂತೆ ಮನೆಯವರೆಲ್ಲಾ ನನಗೆ ಸಂಪೂರ್ಣ ಬೆಂಬಲ ಕೊಡುತ್ತಿದ್ದಾರೆ. ನನಗೆ ವಿವಾಹವಾಗಿದ್ದರೂ ವಿದ್ಯಾರ್ಥಿ ಜೀವನ ಮುಂದುವರಿಸಿದ್ದೇನೆ. ಎಲ್ಲರೂ ನನ್ನನ್ನು ಮಗುವಿನಂತೆ ನೋಡಿಕೊಳ್ಳುತ್ತಾರೆ. ಅವರಿಗೆಲ್ಲಾ ನನ್ನ ಹೃತ್ಪೂರ್ವಕ ಧನ್ಯವಾದಗಳು, ಎಂದು ದೀಕ್ಷಾ ಹೇಳಿದ್ದಾರೆ.

deeksha

ಸಕಲ ಕಲೆಗಳ ಕಲಾ ಅಕಾಡೆಮಿ ಕನಸು

ದೀಕ್ಷಾ ಭವಿಷ್ಯದಲ್ಲಿ ಎಲ್ಲಾ ವಿಧವಾದ ಕಲೆಗಳ ಅಕಾಡೆಮಿ ಪ್ರಾರಂಭಿಸುವ ಉದ್ದೇಶ ಹೊಂದಿದ್ದಾರೆ. ಈ ಅಕಾಡೆಮಿ ಮೂಲಕ ಬಡ, ಗ್ರಾಮೀಣ ಮಕ್ಕಳಿಗೆ ಉತ್ತಮ ಶಿಕ್ಷಣಕ್ಕಾಗಿ ನೆರವು ದೊರಕಬೇಕೆನ್ನುವುದು ದೀಕ್ಷಾರ ಮನದಾಳದ ಬಯಕೆ ಆಗಿದೆ.

ವಿಶ್ವದಾಖಲೆ ಬರೆದಿದ್ದಕ್ಕೆ ಹೆಚ್ಚು ಪ್ರಚಾರ

ದೀಕ್ಷಾರ ವಿಶ್ವದಾಖಲೆ ಪ್ರಮಾಣ ಪತ್ರ ಪ್ರದಾನ, ಸಮಾರೋಪ : ಮಣಿಪಾಲ ರತ್ನ ಸಂಜೀವ ಕಲಾಮಂಡಲದ ಸಹಭಾಗಿತ್ವದಲ್ಲಿ ಡಾ. ಜಿ. ಶಂಕರ್‌ ಮಹಿಳಾ ಪ್ರಥಮ ದರ್ಜೆ ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ನಡೆದಿದ್ದು, ಅಜ್ಜರಕಾಡು ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಪ್ರಮಾಣ ಪತ್ರ ವಿತರಣಾ ಸಮಾರಂಭದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಭಾಗವಹಿಸಿ ಅಭಿನಂದನೆ ಸಲ್ಲಿಸಿದರು.

ನಾಡೋಜ ಡಾ. ಜಿ. ಶಂಕರ್‌, ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಯಶಪಾಲ್ ‌ಎ. ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಸಚಿವ ಕೆ. ಜಯಪ್ರಕಾಶ್‌ ಹೆಗ್ಡೆ, ಮಾಜಿ ಶಾಸಕ ಕೆ. ರಘುಪತಿ ಭಟ್‌, ಮಾಜಿ ಸಚಿವ ವಿನಯ ಕುಮಾರ್‌ ಸೊರಕೆ, ಮುಖಂಡರಾದ ಎಂ.ಎ. ಗಪರ್‌, ಶಂಕರ ಪೂಜಾರಿ, ಪ್ರಸಾದ್‌ ರಾಜ್‌ ಕಾಂಚನ್‌, ಮುನಿಯಾಲು ಉದಯ ಶೆಟ್ಟಿ, ಡಾ. ರೋಶನ್ ಕುಮಾರ್‌ ಶೆಟ್ಟಿ. ಗುರು ಶ್ರೀಧರ್‌ ಬನ್ನಂಜೆ, ವಿದುಷಿ ಉಷಾ ಹೆಬ್ಬಾರ್‌, ಗೀತಾಂಜಲಿ ಸುವರ್ಣ, ಮಹೇಶ್‌ ಠಾಕೂರ್‌, ತಂದೆ ವಿಠಲ ಪೂಜಾರಿ, ತಾಯಿ ಶುಭಾ, ಪತಿ ರಾಹುಲ್‌, ಕಿಶೋರ್‌ ಕುಮಾರ್‌ ಕುಂದಾಪುರ, ವಿದ್ವಾನ್‌ ಯಶವಂತ್‌ ಎಂ.ಜೆ., ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ., ಉಡುಪಿ ಜಿಲ್ಲಾ ಪೊಲೀಸ್‌ ಅಧೀಕ್ಷಕ ಹರಿರಾಂ ಶಂಕರ್‌, ಜಿಲ್ಲಾ ಪಂಚಾಯಿತಿ ಸಿಇಓ ಪ್ರತೀಕ್‌ ಬಾಯ್‌, ಗೋಲ್ಡನ್‌ ಬುಕ್‌ ಆಫ್‌ ವರ್ಲ್ಡ್ ರೆಕಾರ್ಡ್‌ ಏಷ್ಯಾ ಹೆಡ್‌ ಮನೀಶ್‌ ಬಿಷ್ಣೋಯ್‌ಮುಂತಾದವರು ಉಪಸ್ಥಿತರಿದ್ದರು. ಅವಿನಾಶ್ ಕಾಮತ್‌ ಕಾರ್ಯಕ್ರಮದ ನಿರೂಪಕರಾಗಿದ್ದರು. ಈ ಕಾರ್ಯಕ್ರಮದ ಕುರಿತಂತೆ ದೀಕ್ಷಾ ಹೇಳುವುದು ಹೀಗೆ ನಾನು ಇದುವರೆಗೆ ಭರತನಾಟ್ಯ ಕಲಿತರೂ, ವಿದ್ಯಾರ್ಥಿಗಳಿಗೆ ತರಬೇತಿ ಕೊಡುತ್ತಾ ಬಂದಿದ್ದರೂ ಸಾಕಷ್ಟು ಮಟ್ಟಿನ ಪ್ರಚಾರ ದೊರಕಿರಲಿಲ್ಲ. ಆದರೆ ಈಗ ವಿಶ್ವದಾಖಲೆ ನಿರ್ಮಾಣ ಮಾಡಿದ ಕಾರಣ ಎಲ್ಲೆಡೆ ಪ್ರಚಾರ ಸಿಕ್ಕುತ್ತಿದೆ. ಇದು ನನಗೆ ಬಹಳ ಖುಷಿ ತಂದಿದೆ.

D9

ಹಿಂದಿನ ಪರಂಪರೆ ತಿಳಿದಿರಬೇಕು

ಇಂದಿನ ಯುವಪೀಳಿಗೆ ಬಗ್ಗೆ ಮಾತನಾಡುವ ದೀಕ್ಷಾ, ಭವಿಷ್ಯದ ಪೀಳಿಗೆಗೆ ನಮ್ಮ ಪರಂಪರೆಯ ಕುರಿತು ತಿಳಿದಿರಬೇಕು. ಪಾಶ್ಚಾತ್ಯರು ಸಹ ಭಾರತೀಯ ಸಂಸ್ಕೃತಿಯನ್ನು ಅನುಸರಿಸುತ್ತಿದ್ದಾರೆ. ನಮ್ಮ ಯುವಜನತೆ ಅದರಿಂದ ವಿಮುಖರಾಗುತ್ತಿದ್ದಾರೆ. ಆದರೆ ಹಾಗಾಗಬಾರದು. ಯುವ ಪೀಳಿಗೆ ನಮ್ಮ ಸಂಸ್ಕೃತಿಯನ್ನು ಅರಿತು ಅದನ್ನು ಉಳಿಸಿಕೊಂಡು ಹೋಗಬೇಕಿದೆ.

ನಾನು ನನ್ನ ಪೂರ್ವಜರ ಹೆಜ್ಜೆಯನ್ನೇ ಅನುಸರಿಸುತ್ತೇನೆ. ಅದರಂತೆ ಇಂದಿನ ಯುವ ಪೀಳಿಗೆ ಸಹ ನಮ್ಮ ಪವಿತ್ರ ಸಂಸ್ಕೃತಿಯ ಆಚರಣೆಯನ್ನು ಬೆಳೆಸಿಕೊಂಡು ಹೋಗಬೇಕಿದೆ ಎನ್ನುತ್ತಾರೆ.

ದೀಕ್ಷಾ ಮುಂಬರುವ ದಿನಗಳಲ್ಲಿ ಮತ್ತಷ್ಟು ಉನ್ನತ ಸಾಧನೆಗಳನ್ನು ಮಾಡುವಂತಹ ಅವಕಾಶಗಳು ಬರಲಿ. ಅವರಿಂದ ಮತ್ತಷ್ಟು ವಿದ್ಯಾರ್ಥಿಗಳು ಭರತನಾಟ್ಯ, ನೃತ್ಯಾಭ್ಯಾಸ ಕಲಿತು ಹೆಸರುಗಳಿಸಲಿ ಎಂದು ಗೃಹಶೋಭಾ ಹಾರೈಸುತ್ತಾಳೆ.

ರಾಘವೇಂದ್ರ ಅಡಿಗ ಎಚ್ಚೆನ್

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ