– ರಾಘವೇಂದ್ರ ಅಡಿಗ ಎಚ್ಚೆನ್.
ರಂಗಭೂಮಿಯಲ್ಲಿ ಹೊಸಾ ಸಾಧ್ಯತೆಗಳ ಅನ್ವೇಷಣೆಯ ತುಡಿತದೊಂದಿಗೆ ಜೀವ ಪಡೆದಿರುವ ತಂಡ `ಕಲಾದ್ಯುತಿ ಪ್ರೊಡಕ್ಷನ್ಸ್’. ಒಂದು ಕಾಲದಲ್ಲಿ ಜನ ನೋಡಿ ರೋಮಾಂಚಿತರಾಗಿದ್ದ ನಾಟಕಗಳನ್ನು ಮತ್ತೆ ಪ್ರೇಕ್ಷಕರ ಮುಂದೆ ಪ್ರಸುತಪಡಿಸುತ್ತಲೇ, ಒಂದಷ್ಟು ಪ್ರಯೋಗಾತ್ಮಕ ಪ್ರಯತ್ನಗಳ ಉದ್ದೇಶ ಹೊಂದಿರುವ ಕಲಾದ್ಯುತಿ ಪ್ರೊಡಕ್ಷನ್ಸ್ ವತಿಯಿಂದ ಪ್ರದರ್ಶನಗೊಂಡಿದ್ದ ‘ಉಂಡಾಡಿ ಗುಂಡ’ ನಾಟಕ ಯಶಸ್ವಿಯಾಗಿತ್ತು. ಇದೀಗ ಎರಡನೇ ಹೆಜ್ಜೆಯಾಗಿ `ಮಳೆ ನಿಲ್ಲುವವರೆಗೆ’ ಎಂಬ ನಾಟಕ ಇದೇ ಸೆಪ್ಟೆಂಬರ್ 17ನೇ ತಾರೀಕಿನಂದು ಸಂಜೆ 7.3೦ಕ್ಕೆ ಬೆಂಗಳೂರಿನ ಚೌಡಯ್ಯ ಮೆಮೋರಿಯಲ್ ಹಾಲ್ನಲ್ಲಿ ಪ್ರದರ್ಶನಗೊಳ್ಳಲಿದೆ.
ವಿಶೇಷವೆಂದರೆ, ಪ್ರಸಿದ್ಧ ನಟ, ಲೇಖಕ ಎಲ್.ಎಸ್ ಸುಧೀಂದ್ರ ಜರ್ಮನ್ ಕಥೆಯನ್ನು ಆಧರಿಸಿ ಕನ್ನಡಕ್ಕೆ ರೂಪಾಂತರಿಸಿರುವ `ಮಳೆ ನಿಲ್ಲುವವರೆಗೆ’ ನಾಟಕದ ಮೂಲಕ ನಟ ರಾಜೇಶ್ ನಟರಂಗ ರಂಗಭೂಮಿಗೆ ಮರಳಿದ್ದಾರೆ. ನಟನಾಗಿ ತಮ್ಮದೇ ಛಾಪು ಮೂಡಿಸಿರುವ ರಾಜೇಶ್ ನಟರಂಗ ರಂಗಭೂಮಿಯೊಂದಿಗೆ ಆಪ್ತವಾದ ನಂಟು ಹೊಂದಿರುವವರು. ಭರ್ತಿ ಇಪ್ಪತ್ತು ವರ್ಷಗಳ ನಂತರ ಈ ನಾಟಕದ ಮೂಲಕ ರಾಜೇಶ್ ಅವರು ನಾಟಕಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಅವರ ಅಭಿಮಾನಿಗಳಿಗೆಲ್ಲ ತಮ್ಮಿಷ್ಟದ ನಟನ ನಟನಾ ಕೌಶಲ್ಯವನ್ನು ನೇರವಾಗಿ ಕಣ್ಣು ತುಂಬಿಕೊಳ್ಳುವ ಅವಕಾಶ ಈ ಮೂಲಕ ಕೂಡಿ ಬಂದಿದೆ.

ಈ ನಾಟಕವನ್ನು ಶರತ್ ಪರ್ವತವಾಣಿ ನಿರ್ದೇಶನ ಮಾಡಲಿದ್ದಾರೆ. ರೋಚಕ ಥ್ರಿಲ್ಲರ್ ಶೈಲಿಯ ‘ಮಳೆ ನಿಲ್ಲುವವರೆಗೆ’ ನಾಟಕ ಒಂದು ಆಟದಂತೆ ಪ್ರಾರಂಭವಾಗಿ ಬೆರಗು ಮೂಡಿಸುವ ತಿರುವುಗಳನ್ನು ಪಡೆದು, ವಿಶಿಷ್ಟ ಪಾತ್ರಗಳ ನಡುವೆ ನಡೆಯುವ ಸಸ್ಪೆನ್ಸ್ ಕಥಾ ಹಂದರವನ್ನೊಳಗೊಂಡಿದೆ. ಪ್ರತೀ ಕ್ಷಣವೂ ಉಸಿರು ಬಿಗಿಹಿಡಿದು ನೋಡುವಂತೆ ಮಾಡೋ ಗುಣ ಹೊಂದಿರೋ ಈ ನಾಟಕ ಹೊಸಾ ತಲೆಮಾರಿಗೂ ಕೂಡಾ ಅದ್ಭುತ ಅನುಭೂತಿ ತುಂಬುವಂತೆ ಮೂಡಿ ಬರಲಿದೆ. ಹಾಗೆ ಹೊಸಾ ತಲೆಮಾರಿನ ಯುವ ಸಮುದಾಯ ನೋಡಿ ಆನಂದಿಸಿದರೆ ಕಲಾದ್ಯುತಿ ಪ್ರೊಡಕ್ಷನ್ಸ್ ಸಂಸ್ಥೆಯ ಮೂಲ ಆಶಯ ಕೈಗೂಡಿದಂತಾಗುತ್ತದೆ.

ಈ ನಾಟಕವನ್ನು ರಚಿಸಿರುವ ಎಲ್.ಎಸ್ ಸುಧೀಂದ್ರ ಕ್ಲಾಸ್೧ ಕೆಎಎಸ್ ಅಧಿಕಾರಿಯಾಗಿದ್ದವರು. ಸರ್ಕಾರಿ ಅಧಿಕಾರಿಯಾಗಿದ್ದರೂ ಅತೀವ ಕಲಾಪ್ರೇಮ ಹೊಂದಿದ್ದ ಸುಧೀಂದ್ರ ಅವರು ರಂಗಭೂಮಿಗೆ ಅನುಕೂಲವಾಗುವಂಥಾ ಅನೇಕ ಕೆಲಸ ಕಾರ್ಯಗಳನ್ನು ತಮ್ಮ ಸೇವಾವಧಿಯಲ್ಲಿ ಮಾಡಿದ್ದರು. ಈಗ ನಮ್ಮೊಂದಿಗಿರದ ಸುಧೀಂದ್ರ ಅವರ ಪರಿವಾರವನ್ನು ಕಲಾದ್ಯುತಿ ತಂಡ ರಿಚರ್ಡ್ ಲೂಯಿಸ್ ಅವರ ಸಹಕಾರದಿಂದ ಸಂಪರ್ಕಿಸಿದೆ. ಬಹಳಷ್ಟು ಪ್ರಯತ್ನ ನಡೆಸಿ ಈ ನಾಟಕದ ಪ್ರತಿಯನ್ನು ಕಲೆ ಹಾಕಿ ಅದಕ್ಕೆ ನವ ಸ್ಪರ್ಶ ನೀಡಿ ಪ್ರೇಕ್ಷಕರ ಮುಂದೆ ತರುತ್ತಿದೆ. ಜಾಹೀರಾತು ನಿರ್ಮಾಣ ಲೋಕದಲ್ಲಿ ದೊಡ್ಡ ಹೆಸರು ಮಾಡಿರುವ ಪ್ರದೀಪ್ ಬೆಳವಾಡಿ ಅವರು ಈ ನಾಟಕದ ಸೆಟ್ ರೂಪಿಸಲಿದ್ದಾರೆ. ಒಟ್ಟಾರೆಯಾಗಿ ‘ಮಳೆ ನಿಲ್ಲುವವರೆಗೆ’ ನಾಟಕದ ಮೂಲಕ ರಂಗಭೂಮಿಯಲ್ಲಿ ನವ ಸಂಚನವೊಂದು ಮೂಡಿಕೊಳ್ಳುವ ಘಳಿಗೆ ಸಮೀಪಿಸುತ್ತಿದೆ.





