ಕನ್ನಡದ ಸ್ವತಂತ್ರ ಸಂಗೀತ ಕ್ಷೇತ್ರದಲ್ಲಿ ಹೊಸ ಅಲೆ ಮೂಡಿಸುವ ಉದ್ದೇಶದಿಂದ ವೈಷ್ಣವಿ ಫಿಲಂಸ್ 'ಆಹನ' ಎಂಬ ವಿಭಿನ್ನ ಆಲ್ಬಂ ಹಾಡನ್ನು ಸಿದ್ಧಪಡಿಸಿದೆ. ಭಾವನಾತ್ಮಕ ಕಥೆ ಮತ್ತು ವಿನೂತನ ಸಂಗೀತದ ಸಮ್ಮಿಲನವೇ ಈ ಪ್ರಾಜೆಕ್ಟ್.
ವಿಜಯ್ ಲೋಹಿತ್ (ವೈಷ್ಣವಿ ಫಿಲಂಸ್) ನಿರ್ಮಾಣ ಹಾಗೂ ಸತೀಶ್ ಹೆಚ್ ಗೌಡ ಅವರ ಸಹ ನಿರ್ಮಾಣವಿರುವ ಈ ಆಲ್ಬಂಗೆ ರಜತ್ ಹೆಗಡೆ ಸಂಗೀತ ಸಂಯೋಜಿಸಿದ್ದಾರೆ.
ಈ ಯೋಜನೆಯ ವಿಶೇಷತೆ ಎಂದರೆ, ಪ್ರತಿಭಾವಂತ ಕಲಾವಿದ ರಜತ್ ಹೆಗಡೆ ಅವರು ಈ ಹಾಡಿಗೆ ಕೇವಲ ಸಂಗೀತ ಸಂಯೋಜನೆ ಮಾಡಿರುವುದ್ದಲ್ಲದೆ, ಅವರೇ ಗಾಯಕರಾಗಿ ಧ್ವನಿ ನೀಡಿದ್ದಾರೆ. ಅಷ್ಟೇ ಅಲ್ಲದೆ, ವಿಡಿಯೋದಲ್ಲಿ ನಾಯಕ ನಟನಾಗಿಯೂ ಕಾಣಿಸಿಕೊಳ್ಳುವ ಮೂಲಕ ಈ ಭಾವನಾತ್ಮಕ ಪ್ರಯಾಣಕ್ಕೆ ಜೀವ ತುಂಬಿದ್ದಾರೆ.

'ಆಹನ' ಒಬ್ಬ ಕಲಾವಿದ ಮತ್ತು ಸಂಗೀತದ ನಡುವಿನ ಸಂಬಂಧವನ್ನು ಅನಾವರಣಗೊಳಿಸುತ್ತದೆ. "ಒಬ್ಬ ಕಲಾವಿದ ಸಂಗೀತವನ್ನು ತಲುಪಲು ಹಾತೊರೆಯುತ್ತಿರುವಾಗ, ಸಂಗೀತವೇ ಅವನನ್ನು ನಿರಾಕರಿಸಿದರೆ ಏನಾಗಬಹುದು?" ಎನ್ನುವ ಆಳವಾದ ಪ್ರಶ್ನೆಯೇ ಈ ಹಾಡಿನ ಜೀವಾಳ. ಈ ಕಥೆಯು ರಜತ್ ಹೆಗಡೆ ಅವರ ಸ್ವಂತ ಸೃಜನಾತ್ಮಕ ಅನುಭವಗಳಿಂದ ಮೂಡಿಬಂದಿರುವುದರಿಂದ, ಅವರ ಅಭಿನಯ ಮತ್ತು ಸಂಗೀತದಲ್ಲಿ ಒಂದು ವಿಶೇಷವಾದ ಆಪ್ತತೆ ಇದೆ. 'ಆಹನ' ಎಂದರೆ "ಸೂರ್ಯನ ಮೊದಲ ಕಿರಣ". ಇದು ಜಾಗೃತಿ, ಭರವಸೆ ಮತ್ತು ಹೊಸ ಆರಂಭವನ್ನು ಸೂಚಿಸುತ್ತದೆ.
ನಾರಾಯಣ ಶರ್ಮ ಅವರು ಈ ಹಾಡಿಗೆ ವಿಶಿಷ್ಟವಾದ 'ರೆಟ್ರೋ-ಮೋಡರ್ನ್' ಶಬ್ದ ನೀಡಿದ್ದಾರೆ. ಆಲ್ಬಂ ನ ವಿಶೇಷವೆಂದರೆ
ಭಾರತೀಯ ಶಾಸ್ತ್ರೀಯ ಸಂಗೀತದ ತಂಬೂರಿಯನ್ನು ಆಧುನಿಕ ಸಿಂತ್ (Synth) ಮ್ಯೂಸಿಕ್ ಜೊತೆ ಸಮರ್ಥವಾಗಿ ಬೆರೆಸಲಾಗಿದೆ. ಕಂಠೀರವ ಸ್ಟುಡಿಯೋದಲ್ಲಿ ಕೇವಲ 14 ಗಂಟೆಗಳ ಅವಧಿಯಲ್ಲಿ ಬೃಹತ್ ಸೆಟ್ಗಳನ್ನು ನಿರ್ಮಿಸಿ ಈ ಹಾಡನ್ನು ಚಿತ್ರೀಕರಿಸಿರುವುದು ಮತ್ತೊಂದು ವಿಶೇಷ.
"ಪ್ರಸ್ತುತ ಕನ್ನಡದಲ್ಲಿ ಸ್ವತಂತ್ರ ಸಂಗೀತ ಆಲ್ಬಂಗಳು ಬರುತ್ತಿರುವುದು ಕಡಿಮೆ. ರಜತ್ ಹೆಗಡೆ ಅವರಂತಹ ಬಹುಮುಖ ಪ್ರತಿಭೆಗಳ ಮೂಲಕ ನಾವು ಹೊಸ ಆಲೋಚನೆಗಳನ್ನು ಪ್ರೇಕ್ಷಕರಿಗೆ ತಲುಪಿಸಲು ಬಯಸಿದ್ದೇವೆ. ಹೊಸಬರಿಗೆ ವೇದಿಕೆ ಕಲ್ಪಿಸುವುದೇ ನಮ್ಮ ಸಂಸ್ಥೆಯ ಮುಖ್ಯ ಉದ್ದೇಶ." ಎಂದು ನಿರ್ಮಾಪಕರ ಮಾತು ವೈಷ್ಣವಿ ಫಿಲಂಸ್ ನ ನಿರ್ಮಾಪಕ ವಿಜಯ್ ಲೋಹಿತ್ ತಿಳಿಸಿದ್ದಾರೆ.





