ಶರತ್ ಚಂದ್ರ
ಇತ್ತೀಚಿನ ವರ್ಷಗಳಲ್ಲಿ ಬಾಲಿವುಡ್ ಗಾಯಕ ಗಾಯಕಿಯರ ಕೈಲ್ಲಿ ಹಾಡಿಸುವುದು ಸರ್ವೇ ಸಾಮಾನ್ಯ ಕೆಲವು ವರ್ಷ ಗಳ ಹಿಂದೆ ಉದಿತ್ ನಾರಾಯಣ್, ಸೋನು ನಿಗಮ್ ಶ್ರೇಯ ಘೋಷಾಲ್ ನಂತ ಕಲಾವಿದರು ಕನ್ನಡದಲ್ಲಿ ಪಾರುಪತ್ಯ ನಡೆಸುತ್ತಿದ್ದರು.
ಆದರೆ 70 ರ ದಶಕದಲ್ಲಿ ಹಿಂದಿ ಗಾಯಕ ಗಾಯಕಿಯ ರನ್ನು ಕನ್ನಡಕ್ಕೆ ಕರೆ ತರುವುದು ತುಂಬಾ ಕಷ್ಟಕರವಾಗಿತ್ತು. ದುಬಾರಿ ಸಂಭಾವನೆ, ಹಿಂದಿ ಚಿತ್ರರಂಗದಲ್ಲಿ ಅವರ ಬ್ಯುಸಿ ಶೆಡ್ಯೂಲ್, ಭಾಷಾ ಉಚ್ಚಾರಣೆ ಸಮಸ್ಯೆ ಇದಕ್ಕೆ ಪ್ರಮುಖ ಕಾರಣ ಗಳಾಗಿತ್ತು. ಇಂತಹ ಸಂದರ್ಭದಲ್ಲಿ ಲತಾ ಮಂಗೇಷ್ಕರ್ ಹಾಡಿದ ‘ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ‘ಚಿತ್ರದ ಬೆಳ್ಳನೇ ಬೆಳಗಾಯಿತು ಮಹಮ್ಮದ್ ರಫಿ ಹಾಡಿರುವ ‘ಒಂದೇ ಬಳ್ಳಿಯ ಹೂಗಳು’ ಚಿತ್ರದ ಶೋಕ ಗೀತೆ’ ನೀನೆಲ್ಲಿ ನಡೆವ ದೂರ’ ಕಿಶೋರ್ ಕುಮಾರ್ ದ್ವಾರಕೀಶ್ ನಿರ್ಮಾಣದ ‘ಕುಳ್ಳ ಏಜೆಂಟ್ 000 ಚಿತ್ರಕ್ಕೆ ಹಾಡಿದ ‘ಆಡು ಆಟ ಆಡು ಹೀಗೆ ಆ ಕಾಲದ ತುಂಬಾ ಬ್ಯುಸಿ ಗಾಯಕ ಗಾಯಕಿಯರಿಂದ ಹಾಡು ಹಾಡಿಸಿದ ಹೆಗ್ಗಳಿಕೆ ಕನ್ನಡ ನಿರ್ಮಾಪಕರದ್ದಾಗಿತ್ತು.
ವಿಶೇಷವೆಂದರೆ ಮೇಲೆ ತಿಳಿಸಿದ ದಿಗ್ಗಜರು ಹಾಡಿದ್ದು ಒಂದೇ ಹಾಡದರೂ ಕೂಡ ಅವುಗಳು ಹಿಟ್ ಆಗಿ ಈಗಲೂ ಜನರ ಬಾಯಲ್ಲಿ ಗುನುಗುನಿಸುವಂತೆ ಮಾಡಿದೆ.

ಇಷ್ಟೆಲ್ಲಾ ಪೀಠಿಕೆಯ ಉದ್ದೇಶವೇನೆಂದರೆ ಈ ತಿಂಗಳ 12ರಂದು ನಮ್ಮನ್ನು ಅಗಲಿದ ಲೆಜೆಂಡರಿ ಸಿಂಗರ್ ಆಶಾ ಭೋಸ್ಲೆ ಕನ್ನಡದಲ್ಲಿ ಮೂರು ಹಾಡುಗಳನ್ನು ಹಾಡಿದರೂ ಕೂಡ ಯಾವ ಹಾಡು ಕೂಡ ಜನಪ್ರಿಯವಾಗಿಲ್ಲ.
ಲತಾ ಅವರು ಹಾಡಿದ ಸಂಗೊಳ್ಳಿ ರಾಯಣ್ಣ ಚಿತ್ರದ ‘ಹಾಡು ಬೆಳ್ಳನೇ ಬೆಳಗಾಯಿತು ‘ಸೂಪರ್ ಹಿಟ್ ಆದರೂ ಅದೇ ಚಿತ್ರದಲ್ಲಿ ಆಶಾ ಭೋಸ್ಲೆ ಹಾಡಿದ ‘ ‘ಯಾಕೋ ಏನೋ ‘ ‘ ಹಾಡು ಯಾರಿಗೂ ಕೇಳಿದ ನೆನಪಿಲ್ಲ. ಡಾ. ರಾಜ್ ನಟಿಸಿದ ದೂರದ ಬೆಟ್ಟ ಸಿನಿಮಾ ಎಂದಾಗ ‘ಪ್ರೀತಿನೇ ಆ ದ್ಯಾವ್ರು ತಂದ ಹಾಡು ನೆನಪಾಗುವುದೇ ಹೊರತು ಆಶಾ ಭೋಸ್ಲೆ ಪಿ. ಬಿ ಎಸ್ ಜೊತೆ ಹಾಡಿರುವ “ಸವಾಲು ಹಾಕಿ ಸೋಲಿಸಿ’ ಎಂಬ ಹಾಡು ನೆನಪಾಗುವುದಿಲ್ಲ! 2010ರಲ್ಲಿ ಬಿಡುಗಡೆಯಾದ ‘ಮತ್ತೆ ಮುಂಗಾರು’ ಎಂಬ ಚಿತ್ರದಲ್ಲಿ’ ಹೇಳದೆ ಕಾರಣ ‘ ಎಂಬ ಹಾಡು ಆ ಸಿನಿಮಾದ ಹಾಗೆ ಬಂದು ಹೋಗಿದ್ದು ಗೊತ್ತಾಗಲಿಲ್ಲ. ಬಹುಷಃ ಇವರು ಹಾಡಿದ ಈ ಮೂರು ಹಾಡುಗಳು ರೇಡಿಯೋಗಳಲ್ಲಿ ಕೂಡ ಪ್ರಸಾರವಾಗಿದ್ದು ನೆನಪಿಲ್ಲ.

ಈ ಹಿಂದೆ ಆಶಾ ಭೋಸ್ಲೆ ಸಂದರ್ಶನವೊಂದರಲ್ಲಿ ಕನ್ನಡದಲ್ಲಿ ಒಳ್ಳೆ ಹಾಡು ಹಾಡುವ ಅವಕಾಶ ಸಿಕ್ಕಿದರೆ ಖಂಡಿತ ಹಾಡುತ್ತೇನೆ ಎಂದು ಹೇಳಿದ್ದರಂತೆ. ದುರದೃಷ್ಟವಶಾತ್ ಕನ್ನಡದ ಯಾವುದೇ ಸಂಗೀತ ನಿರ್ದೇಶಕ ಕೂಡ ಆಶಾ ಭೋಸ್ಲೆ ಅವರ ಪ್ರತಿಭೆಯನ್ನು ಕನ್ನಡದಲ್ಲಿ ಬಳಸಿಕೊಳ್ಳಲಿಲ್ಲ.





