– ರಾಘವೇಂದ್ರ ಅಡಿಗ ಎಚ್ಚೆನ್.
ಕನ್ನಡದ ಖ್ಯಾತ ನಟ, ನಿರ್ದೇಶಕ ಮತ್ತು ನಿರ್ಮಾಪಕ ರಕ್ಷಿತ್ ಶೆಟ್ಟಿ ಅವರ ನಿರ್ಮಾಣ ಸಂಸ್ಥೆ ‘ಪರಂವಾ ಸ್ಟುಡಿಯೋಸ್’ ಈಗ ಕಾನೂನು ಜಾಲದಲ್ಲಿ ಸಿಲುಕಿದ್ದು, ದೆಹಲಿ ಹೈಕೋರ್ಟ್ ಒಟ್ಟು 25 ಲಕ್ಷ ರೂಪಾಯಿ ದಂಡ ವಿಧಿಸಿದೆ. ಪ್ರಕರಣವು ಅವರ ಸಿನಿಮಾದ ‘ಬ್ಯಾಚುಲರ್ ಪಾರ್ಟಿ’ ಚಿತ್ರದಲ್ಲಿ ಅನುಮತಿಯಿಲ್ಲದೆ ಎರಡು ಹಾಡುಗಳನ್ನು ಬಳಸಿಕೊಂಡಿರುವುದಕ್ಕೆ ಸಂಬಂಧಿಸಿದೆ.
ಖ್ಯಾತ ಮ್ಯೂಸಿಕ್ ಕಂಪನಿ ‘ಎಮ್ಆರ್ಟಿ ಮ್ಯೂಸಿಕ್’ 2020ರಲ್ಲಿ ಮಾಡಿದ ಹಕ್ಕುಸ್ವಾಮ್ಯ ಒಪ್ಪಂದದ ಪ್ರಕಾರ ‘ನ್ಯಾಯ ಎಲ್ಲಿದೆ’ ಮತ್ತು ‘ಒಮ್ಮೆ ನಿನ್ನನ್ನು’ ಹಾಡುಗಳ ಮಾಲೀಕತ್ವ ಹೊಂದಿರುವುದಾಗಿ ದೂರು ದಾಖಲಿಸಿತ್ತು. ಆದರೆ ರಕ್ಷಿತ್ ಶೆಟ್ಟಿ ತಂಡವು ಈ ಹಾಡುಗಳನ್ನು ಅನುಮತಿ ಪಡೆಯದೆ ತಮ್ಮ ಸಿನಿಮಾದಲ್ಲಿ ಬಳಸಿದ್ದಾರಂತೆ.
ವಿಚಾರಣೆಯ ವೇಳೆ ನಿರ್ಮಾಪಕರು, ‘ನ್ಯಾಯ ಎಲ್ಲಿದೆ’ ಹಾಡನ್ನು 7 ಸೆಕೆಂಡ್, ‘ಒಮ್ಮೆ ನಿನ್ನನ್ನು’ ಹಾಡನ್ನು 31 ಸೆಕೆಂಡ್ ಮಾತ್ರ ಬಳಸಲಾಗಿದೆ. ಇದು ಹಕ್ಕುಸ್ವಾಮ್ಯ ಉಲ್ಲಂಘನೆಯಾಗುವುದಿಲ್ಲ’ ಎಂದು ತಕ್ಕಷ್ಟು ಸಮರ್ಥನೆ ನೀಡಿದ್ದರು.
ಆದರೆ ನ್ಯಾಯಾಲಯವು ಈ ವಾದವನ್ನು ತಿರಸ್ಕರಿಸಿದ್ದು, “ಹಾಡುಗಳ ಬಳಕೆ ಕೇವಲ ಸೃಜನಾತ್ಮಕವಾಗಿರದೆ, ವಾಣಿಜ್ಯ ಲಾಭಕ್ಕಾಗಿ ಉದ್ದೇಶಪೂರ್ವಕವಾಗಿ ಬಳಸಲಾಗಿದೆ. ಪಾತ್ರದ ಸಂಕಷ್ಟಕ್ಕೆ ಹಿನ್ನೆಲೆ ನೀಡಲು ಬಳಸಿರುವುದು ಹಕ್ಕುಸ್ವಾಮ್ಯದ ಅಡಿ ಬರುತ್ತದೆ” ಎಂದು ಸ್ಪಷ್ಟಪಡಿಸಿದೆ.
ಹಾಗಾಗಿ, ಹಕ್ಕುಸ್ವಾಮ್ಯ ಉಲ್ಲಂಘನೆಗಾಗಿ ಪರಂವಾ ಸ್ಟುಡಿಯೋಸ್ 20 ಲಕ್ಷ ರೂಪಾಯಿಗಳನ್ನು ‘ಎಮ್ಆರ್ಟಿ ಮ್ಯೂಸಿಕ್’ ಗೆ ವಿತರಿಸಲು ಆದೇಶಿಸಿತು. ಆದೇಶವನ್ನು ಸಮಯಕ್ಕೆ ಸರಿಯಾಗಿ ಪಾಲಿಸದಿದ್ದರೆ 5 ಲಕ್ಷ ರೂಪಾಯಿ ಹೆಚ್ಚುವರಿ ದಂಡ ಕೂಡ ವಿಧಿಸಲಾಗಿದೆ.
ನ್ಯಾಯಾಲಯವು ರಕ್ಷಿತ್ ಶೆಟ್ಟಿಗೆ ಜೈಲು ಶಿಕ್ಷೆ ವಿಧಿಸದೇ ವಿನಾಯಿತಿ ನೀಡಿದರೂ, ಹಣಕಾಸಿನ ವಿಚಾರದಲ್ಲಿ ಕಟ್ಟುನಿಟ್ಟಿನ ಆದೇಶವು ಪ್ರಭಾವ ಬೀರುತ್ತಿದೆ.





