– ರಾಘವೇಂದ್ರ ಅಡಿಗ ಎಚ್ಚೆನ್.
ಕಳೆದ 30 ವರ್ಷಗಳಿಂದಲೂ ಅಂಬರೀಶ್ ಅವರ ಅಪ್ಪಟ ಅಭಿಮಾನಿಯಾಗಿರುವ ಸುಬ್ರಮಣ್ಯ(ಅಂಬಿ ಸುಬ್ಬಣ್ಣ) ಅವರೀಗ ತಮ್ಮ ಮಗನನ್ನು ನಾಯಕನಾಗಿಸಿ ಹೊಸ ಚಲನಚಿತ್ರವೊಂದನ್ನು ನಿರ್ದೇಶಿಸಿದ್ದಾರೆ.
ಅಲ್ಲದೆ ಅಂಬಿ ಹುಟ್ಟೂರಾದ ದೊಡ್ಡರಸಿನಕೆರೆಯಲ್ಲಿ ತಮ್ಮ ಮಗನ ಹೊಸ ಚಿತ್ರದ ಚಿತ್ರೀಕರಣ ನಡೆಸಿದ್ದಾರಲ್ಲದೆ ಆ ಸಿನಿಮಾಗೆ” ಗಜೇಂದ್ರ ಕೇರಾಫ್ ದೊಡ್ಡರಸಿನಕೆರೆ” ಎಂಬ ಟೈಟಲ್ ಕೂಡ ಇಟ್ಟಿದ್ದಾರೆ.
ಇದು ಹಳ್ಳಿಯೊಂದರಲ್ಲಿ ನಡೆಯುವ ಕಥೆಯಾಗಿದ್ದು ಊರ ಗೌಡನೊಬ್ಬ ಹಳ್ಳಿಯ ಮುಗ್ಧ ಜನರಿಗೆ ಬಡ್ಡಿಗೆ ಸಾಲಕೊಟ್ಟು ಅವರು ಹಿಂದಿರುಗಿಸದಿದ್ದಾಗ ಅವರ ಆಸ್ತಿಯನ್ನು ತನ್ನವಶ ಮಾಡಿಕೊಳ್ಳುತ್ತಾನೆ. ಆತನ ಮಗ ಕೂಡ ಒಬ್ಬ ರೌಡಿಯೇ. ಊರ ಹೆಣ್ಣುಮಕ್ಕಳಿಗೆ ತೊಂದರೆ ಕೊಡುವುದೇ ಆತನ ಕೆಲಸ. ಇನ್ನುಆತನ ಮಗಳೂ ಸಹ ಬಜಾರಿಯೇ. ಗೌಡನ ಭಯದಿಂದ ಮಗನನ್ನು ಸಿಟಿಗೆ ಕಳಿಸಿದ್ದ ತಾಯಿ ಜನರ ಕೋರಿಕೆಯ ಮೇರೆಗೆ ವಾಪಸ್ ಕರೆಸಿಕೊಳ್ಳುತ್ತಾಳೆ.
ಈಗಾಗಲೇ ಚಿತ್ರೀಕರಣ ಹಾಗೂ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಮುಗಿಸಿಕೊಂಡಿರುವ ಗಜೇಂದ್ರ ಕೇರಾಫ್ ದೊಡ್ಡರಸಿನಕೆರೆ ಚಿತ್ರ ಸದ್ಯ ಸೆನ್ಸಾರ್ ಹಂತದಲ್ಲಿದ್ದು ನವೆಂಬರ್ ನಲ್ಲಿ ತೆರೆಕಾಣಲಿದೆ.
ಲವ್ ಕಮ್ ಅಕ್ಷನ್ ಕಾಮಿಡಿ ಜಾನರ್ ನಲ್ಲಿರುವ ಈ ಚಿತ್ರದಲ್ಲಿ ಅಭಿಷೇಕ್ ಸುಬ್ಬಣ್ಣ ನಾಯಕನಾಗಿ ನಟಿಸಿದ್ದು, ನಾಯಕಿಯರಾಗಿ ವೇದ ಹಾಗೂ ನಿರೀಕ್ಷಾ ನಟಿಸಿದ್ದಾರೆ. ಈಗಾಗಲೇ ಚಿತ್ರಕ್ಕೆ ಮಂಡ್ಯ ಹಾಗೂ ದೊಡ್ಡರಸನಕೆರೆ ಸುತ್ತಮುತ್ತ ಚಿತ್ರದ ಶೂಟಿಂಗ್ ನಡೆಸಲಾಗಿದೆ. ಚಿತ್ರದಲ್ಲಿ 5 ಹಾಡುಗಳಿದ್ದು, ಮನೋರಾವ್ ( ಮೈಸೂರು) ಸಂಗೀತ ಸಂಯೋಜನೆ, ರಾವುಲ್ ಶೇಖರ್ ಛಾಯಾಗ್ರಹಣವಿದೆ. ಕಮಲಮ್ಮ ಕಂಬೈನ್ಸ್ ಮೂಲಕ ಸುಬ್ರಮಣ್ಯ ಅವರೇ ಈ ಚಿತ್ರದ ಕಥೆ ಬರೆದು ನಿರ್ಮಾಣದ ಜತೆ ನಿರ್ದೇಶನ ಕೂಡ ಮಾಡಿದ್ದಾರೆ. ಚಿತ್ರದ 4 ಆಕ್ಷನ್ ಗಳನ್ನು ವಿನಯಕುಮಾರ್ ಕಂಪೋಜ್ ಮಾಡಿದ್ದಾರೆ. ಕಿಶೋರ್ ರಾಜ್ ಅವರ ಸಂಭಾಷಣೆ, ಬಾಬುಪ್ರಕಾಶ್, ಜೇಮ್ಸ್, ಸುಬ್ರಮಣ್ಯ ಅವರ ಸಾಹಿತ್ಯ ಈ ಚಿತ್ರಕ್ಕಿದೆ.
ಚಿತ್ರದ ಪ್ರಮುಖ ತಾರಾಗಣದಲ್ಲಿ ಅಭಿಷೇಕ್ ಸುಬ್ಬಣ್ಣ, ವೇದ, ನಿರೀಕ್ಷಾ, ವಿನಯ್ ಸುಬ್ಬಣ್ಣ, ತಿಮ್ಮರಾಜು, ಶ್ರೀಭೈರವಿ ಅಮ್ಮ, ಸಂತೋಷ್, ಗೋಲ್ಡ್ ಸುರೇಶ್, ಮಹದೇವು, ಶಿವಣ್ಣ, ಅನಂತು, ರಾಜೇಶ್ ಸುನಿಲ್, ಮಂಜುಳ, ಕುಮಾರ್, ಲತಾಶೇಖರಿ, ತ್ರಿಶಾ, ರುದ್ರೇಗೌಡ ಪರಮಶಿವ ಮುಂತಾದವರಿದ್ದಾರೆ.