ಸ್ಯಾಂಡಲ್ವುಡ್ ನಟ, ನಿರ್ಮಾಪಕ ತನ್ನ ಮಗಳಿಗಾಗಿ ಪತ್ನಿಯನ್ನೇ ಅಪಹರಿಸಿ ಬೆದರಿಕೆ ಹಾಕಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಸಿನಿಮಾ ನಿರ್ಮಾಣ ಮಾಡಿ, ನಟನೆಯನ್ನೂ ಮಾಡಿರುವ ಹರ್ಷವರ್ಧನ್ ತನ್ನ ಪತ್ನಿಯನ್ನೇ ಅಪಹರಿಸಿ ಬಳಿಕ ಆಕೆಯನ್ನು ಮನೆಯವರಿಗೆ ಒಪ್ಪಿಸಿದ್ದಾರೆ. ಆದರೆ ಹೀಗೆ ಪತ್ನಿಯನ್ನೇ ಅಪಹರಿಸಲು ಕಾರಣವೆಂದರೆ ಅವರ ಮಗಳು. ಇದೀಗ ಪತಿ-ಪತ್ನಿ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗಿದ್ದು, ಇದು ಕೌಟುಂಬಿಕ ವಿಷಯ, ತಾವು ಇದನ್ನು ಬಗೆಹರಿಸಿಕೊಳ್ಳುವುದಾಗಿ ಹೇಳಿಕೆ ನೀಡಿದ್ದಾರೆ.
ವರ್ಧನ್ ಸಿನಿಮಾಸ್ ಕಂಪನಿ ಹೆಸರಿನ ಸಿನಿಮಾ ನಿರ್ಮಾಣ ಸಂಸ್ಥೆ ನಡೆಸುತ್ತಿರುವ ಹರ್ಷವರ್ಧನ್, ‘ನಿನ್ನಲ್ಲೇನೋ ಹೇಳಬೇಕು” ಎಂಬ ಸಿನಿಮಾ ನಿರ್ಮಿಸಿದ್ದಾರೆ. ಆ ಸಿನಿಮಾದಲ್ಲಿ ಚೈತ್ರಾ ನಟಿಸಿದ್ದರು. ಬಳಿಕ ಇಬ್ಬರೂ ಪ್ರೀತಿಸಿ ಮದುವೆಯಾದರು. ದಂಪತಿಗೆ ಹೆಣ್ಣು ಮಗು ಸಹ ಇದೆ. ಆದರೆ ಕೌಟುಂಬಿಕ ಕಲಹಗಳಿಂದಾಗಿ ದಂಪತಿ ದೂರಾಗಿದ್ದು, ಮಗಳು ಚೈತ್ರಾ ಜೊತೆಗೆ ಇದ್ದಾಳೆ.
ಮಗಳನ್ನು ನೋಡಲು ಪತ್ನಿ ಅವಕಾಶ ಕೊಡುತ್ತಿರಲಿಲ್ಲ. ಇದರಿಂದ ಬೇಸರಗೊಂಡ ಹರ್ಷವರ್ಧನ್, ಗೆಳೆಯನ ಜೊತೆ ಸೇರಿ ಪತ್ನಿಯನ್ನೇ ಅಪಹರಿಸಿದ್ದಾರೆ. ಗೆಳೆಯನ ಮೂಲಕ, ಶೂಟಿಂಗ್ ಇದೆಯೆಂದು ಹೇಳಿ ಚೈತ್ರಾ ಅವರಿಗೆ 20 ಸಾವಿರ ರೂಪಾಯಿ ಅಡ್ವಾನ್ಸ್ ಕೊಡಿಸಿ, ಮೈಸೂರಿಗೆ ಶೂಟಿಂಗ್ಗೆ ಕರೆಸಿಕೊಂಡಿದ್ದಾರೆ. ಬಳಿಕ ಪತ್ನಿಯನ್ನು ಅಪಹರಣ ಮಾಡಿ, ಚೈತ್ರಾ ಅವರ ತಾಯಿಗೆ ಕರೆ ಮಾಡಿ, ನಿಮ್ಮ ಮಗಳನ್ನು ಅಪಹರಣ ಮಾಡಿದ್ದೇನೆ, ನನ್ನ ಮಗಳನ್ನು ಕಳಿಸಿದರೆ, ನಾನು ನಿಮ್ಮ ಮಗಳನ್ನು ಬಿಟ್ಟು ಕಳಿಸುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆ.
ಚೈತ್ರಾ ಅವರ ಸಹೋದರಿ, ಬ್ಯಾಟರಾಯನಪುರ ಪೊಲೀಸರಿಗೆ ದೂರು ನೀಡಿದ್ದಾರೆ. ಬಳಿಕ ಹರ್ಷವರ್ಧನ್ ಅವರೇ ಪತ್ನಿಯನ್ನು ಕರೆದುಕೊಂಡು ಬಂದು ಕುಟುಂಬದವರಿಗೆ ಒಪ್ಪಿಸಿದ್ದಾರೆ. ಪೊಲೀಸರು ಇಬ್ಬರನ್ನೂ ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದು, “ಇದು ಕೌಟುಂಬಿಕ ವಿಷಯ. ನಾವು ಇದನ್ನು ಬಗೆಹರಿಸಿಕೊಳ್ಳುತ್ತೇವೆ” ಎಂದು ಪೊಲೀಸರ ಮುಂದೆ ದಂಪತಿ ಹೇಳಿದ್ದಾರೆ.
ಪತ್ನಿ ತನ್ನ ಮಗಳ ಮುಖ ನೋಡಲು ಅವಕಾಶ ಮಾಡಿಕೊಟ್ಟಿರಲಿಲ್ಲ, ಮಗುವಿನ ಜೊತೆ ಮಾತನಾಡಲು ಸಹ ಅವಕಾಶ ಕೊಡುತ್ತಿರಲಿಲ್ಲ ಪದೇ ಪದೇ ಕೇಳಿಕೊಂಡರೂ ಮಗುವಿನ ಮುಖ ತೋರಿಸುತ್ತಿರಲಿಲ್ಲ ಹಾಗಾಗಿ ನಾನು ಹೀಗೆ ಮಾಡಿದೆ ಎಂದು ಹರ್ಷವರ್ಧನ್ ಪೊಲೀಸರ ಎದುರು ಹೇಳಿಕೊಂಡಿದ್ದಾರೆ.





