ಹಿಮಾಚಲ ಪ್ರದೇಶದ ಸಣ್ಣ ಚಂಭಾ ನಗರದಿಂದ ಮಾಯಾನಗರಿ ಮುಂಬೈನ ಬಾಲಿವುಡ್‌ಗೆ ಧಾಂಗುಡಿಯಿಟ್ಟು, ಯಾವ ಗಾಡ್‌ಫಾದರ್‌ನ ನೆರವು ಇಲ್ಲದೆ, ಒಬ್ಬ ಯಶಸ್ವೀ ನಟಿಯಾಗಿ ಗುರುತಿಸಲ್ಪಡುವುದು ಖಂಡಿತಾ ಸಣ್ಣ ವಿಷಯವೇನಲ್ಲ. ಹೀಗೆ ಕಂಗನಾ ನಿಧಾನವಾಗಿ ತನ್ನನ್ನು ತಾನು ನಿರೂಪಿಸಿಕೊಳ್ಳುತ್ತಾ ಇಂದು ಈ ಮಟ್ಟ ತಲುಪಿದ್ದಾರೆ. ಇಂದು ಈಕೆ ಸಣ್ಣ ಊರುಗಳಿಂದ ಬರುವ ಹುಡುಗಿಯರಿಗೆ ಆದರ್ಶಪ್ರಾಯರಾಗಿದ್ದಾರೆ. ಬನ್ನಿ, ಈಕೆಯ ಫಿಲ್ಮೀ ಕೆರಿಯರ್‌ ಬಗ್ಗೆ ಹತ್ತಿರದಿಂದ ತಿಳಿಯೋಣ :

ಇಂಡಸ್ಟ್ರಿಯಲ್ಲಿ ನಿಮ್ಮ ಎಂಟ್ರಿ ಹೇಗಾಯಿತು? ನೀವು ಬಂದ ನಂತರ ಇಂಡಸ್ಟ್ರಿ ಎಷ್ಟು ಬದಲಾಗಿದೆ ಅನ್ಸುತ್ತೆ?

ನಾನು ಮನೆ ಬಿಟ್ಟು ಓಡಿ ಬಂದು ಈ ಇಂಡಸ್ಟ್ರಿ ಸೇರಿದವಳು. ಮನೆಯವರು ಒಪ್ಪದ ಈ ಚಿತ್ರರಂಗಕ್ಕೆ ನಾನು ಅವರನ್ನು ಎದುರುಹಾಕಿಕೊಂಡು ಹೀಗೆ ಬರಬೇಕಾಯಿತು. ಸಂಪ್ರದಾಯಸ್ಥ ಕುಟುಂಬ ನಮ್ಮದು, ಇಂಥ ಥಳುಕುಬಳುಕಿನ ಗ್ಲಾಮರ್‌ ಲೋಕಕ್ಕೆ ನಾನು ಸೇರುವುದನ್ನು ಅವರು ಬಯಸಲಿಲ್ಲ. ಆದರೆ ನಾನು ಮಹಾ ಹಠಮಾರಿ ಎಂದು ನಮ್ಮ ಮನೆಯವರಿಗೆ ಗೊತ್ತಿತ್ತು, ಮುಂಬೈಗೆ ಹೋಗಿಯೇ ತೀರುತ್ತೇನೆ ಎಂದವರು ಬಲ್ಲರು.

ಅಂತೂ ನಾನು ಇಂಡಸ್ಟ್ರಿಗೆ ಬಂದ ನಂತರ ಆಗ ಈ ಚಿತ್ರರಂಗ ಅಂಥ ಸ್ಪೆಷಲ್ ಎಂದೇನೂ ಅನಿಸಲಿಲ್ಲ. ಎಷ್ಟೋ ಚಿತ್ರಗಳ ಕಾಂಟ್ಯಾಕ್ಟ್ ಚೆನ್ನಾಗಿತ್ತು, ಹೀಗಾಗಿ ರಿಲೀಸ್‌ ಆಗ್ತಿತ್ತು. ಆದರೆ ಉತ್ತಮ ಗುಣಮಟ್ಟದ ಕ್ಲಾಸ್‌ ಚಿತ್ರಗಳನ್ನು ಕೇಳುವವರಾರು? ಅಂಥ ಕ್ಲಾಸ್‌ ಚಿತ್ರಗಳಿಗೆ ಮಾರ್ಕೆಟ್‌ ಇರಲೇ ಇಲ್ಲ ಎಂದರೆ ಉತ್ಪ್ರೇಕ್ಷೆ ಅಲ್ಲ! 2004ರ ನಂತರ ಈ ಹಿಂದಿ ಚಿತ್ರರಂಗದಲ್ಲಿ ಬದಲಾವಣೆಯ ಗಾಳಿ ಬೀಸಿತು. ಚಿತ್ರಗಳ ಕಲೆಕ್ಷನ್‌ ಇದ್ದಕ್ಕಿದ್ದಂತೆ ಬದಲಾಯಿತು. ಮಲ್ಟಿಪ್ಲೆಕ್ಸ್ ಸಿನಿಮಾ ನೋಡುವವರ ಅಭಿರುಚಿಯೂ ಬದಲಾಯಿತು. ಡಿಜಿಟಲ್ ಕನ್‌ಸ್ಯೂಮರ್‌ನಲ್ಲೂ ಎಷ್ಟೋ ಪ್ರಗತಿ ಕಂಡುಬಂತು. ಜನ ಎಂಥ ಚಿತ್ರ ನೋಡಲು ಬಯಸುತ್ತಿದ್ದರೋ, ಅಂಥದೇ ಚಿತ್ರಗಳು ತಯಾರಾಗ ತೊಡಗಿದವು. ಆ ಸಮಯದಲ್ಲಿ ನನ್ನ `ಕ್ವೀನ್‌’ ಚಿತ್ರ ಬಂದಿತು. ಈ ಚಿತ್ರ ಸಕ್ಸಸ್‌ ಆಗುತ್ತೋ ಇಲ್ಲವೋ ಅಂತ ಭಾರಿ ಡೌಟ್‌ ಇತ್ತು…. ನನ್ನ ಕೆರಿಯರ್‌ ಗೋತಾ ಅಂತಾನೇ ಅಂದುಕೊಂಡಿದ್ದೆ. ಆಗ ಇಂಥ ಟೈಪಿನ ಚಿತ್ರಗಳಿಗೆ ಬೇಡಿಕೆ ಇರಲಿಲ್ಲ. ಬಿಡಿ. ಆದರೆ `ಕ್ವೀನ್‌’ ಹಿಟ್‌ ಆದದ್ದೇ ತಡ, ಅಂಥದೇ ಚಿತ್ರಗಳು ಸಾಲು ಸಾಲಾಗಿ ಬಂದವು.

ಈ ಪುರುಷಪ್ರಧಾನ ಸಮಾಜದಲ್ಲಿ ನೀವು ನಿಮ್ಮ ಸ್ಥಾನ ಸ್ಥಾಪಿಸಿಕೊಳ್ಳುವುದು ಕಷ್ಟ ಅನಿಸಲಿಲ್ಲವೇ?

ಕಷ್ಟಗಳು…. ಒಂದೇ ಎರಡೇ…..? ಆದರೆ ನಾನು ನನಗೊಂದು ಸ್ಥಾನ ಕ್ರಿಯೇಟ್‌ ಮಾಡಿಕೊಳ್ಳಲೇಬೇಕಿತ್ತು. `ಕ್ವೀನ್‌’ನಂಥ ಚಿತ್ರ ನೀಡಿ, ನಾನು ಇಂದಿನ ಯುವಜನತೆಗೆ ಸ್ತ್ರೀಪ್ರಧಾನ ಚಿತ್ರಗಳ ಶಕೆಯನ್ನು ಪುನಃ ಆರಂಭಿಸಿದೆ ಎಂದರೆ ಅತಿಶಯೋಕ್ತಿಯಲ್ಲ. ಅದಾದ ಮೇಲೆ ವಿದ್ಯಾರ `ಕಹಾನೀ,’ ದೀಪಿಕಾರ `ಪೀಕೂ’ ಮುಂತಾದ ಚಿತ್ರಗಳು ಯಶಸ್ವೀ ಎನಿಸಿದವು. ಇತ್ತೀಚಿನ `ದಬಂಗ್‌’ ಸಹ ಮಹಿಳಾ ಪ್ರಗತಿಪರವಾದುದೇ ಎನ್ನಬಹುದು, ಇದಕ್ಕೆ ಬಹಳಷ್ಟು ಪ್ರೋತ್ಸಾಹ ಸಿಕ್ಕಿದೆ. ಇದೇ ನೆಪದಲ್ಲಿ ನಾನು ನಟಿಯರ ಸಂಭಾವನೆ ಹೆಚ್ಚಿಸುವ ಟ್ರೆಂಡ್‌ ಶುರು ಮಾಡಿದೆ. ಅಸಲಿಗೆ, ಇಂದಿನ ದಿನಗಳಲ್ಲಿ ನಟಿಯರು ಎಷ್ಟು ಕಷ್ಟಪಟ್ಟು ಕೆಲಸ ಮಾಡುತ್ತಾರೆಂದರೆ ಖಂಡಿತಾ ಅವರಿಗೆ ಸಿಗಬೇಕಾದ ಸಂಭಾವನೆ, ಸೌಲಭ್ಯ  ಸಿಗುತ್ತಿಲ್ಲ ಎಂದೇ ಹೇಳಬಹುದು. ನಾಯಕ ನಾಯಕಿ ಇಬ್ಬರೂ ಸಮಾನರಾಗಿ ಕಷ್ಟಪಡುತ್ತಿರುವಾಗ, ಇಬ್ಬರಿಗೂ ಸಮಾನ ಸಂಭಾವನೆ ಸಿಗಬೇಕು. ಯಾವುದು ತಪ್ಪು ಅನಿಸುತ್ತದೋ ಅದನ್ನು ನಾನು ಹೀಗೆ ಸಾರಾಸಗಟಾಗಿ ಖಂಡಿಸುತ್ತೇನೆ. ಹುಡುಗಿಯರು ತಮ್ಮ ಹಕ್ಕಿಗಾಗಿ ಹೋರಾಡಲೇಬೇಕು ಮತ್ತು ಸರಿಯಾದ ದಾರಿಯಲ್ಲಿ ಮುನ್ನಡೆದಾಗ ಮಾತ್ರ, ಈ ಪುರುಷಪ್ರಧಾನ ಸಮಾಜದಲ್ಲಿ ವಾಸಿಸುತ್ತಾ ತಮ್ಮ ಜೀವನಕ್ಕೊಂದು ಅರ್ಥ ರೂಪಿಸಬಹುದು.

ನಿಮ್ಮ ವ್ಯಕ್ತಿತ್ವ ರೂಪಿಸುವಲ್ಲಿ ನಿಮ್ಮ ತಂದೆಯವರ ಪಾತ್ರವೇನು?

ನನ್ನ ತಂದೆ ಒಬ್ಬ ಟಿಪಿಕಲ್ ಇಂಡಿಯನ್‌ ಫಾದರ್‌ ಎನ್ನಬಹುದು. ಅವರ ಜೀವನದ ಮುಖ್ಯ ಉದ್ದೇಶ, ತಮಗೆ ಸಂಬಂಧಿಸಿದ ಹೆಣ್ಣುಮಕ್ಕಳ ಜವಾಬ್ದಾರಿ ಹೊತ್ತು ಅವರಿಗೆ ಸುಂದರ ಜೀವನ ರೂಪಿಸಿ, ಸುರಕ್ಷಿತ ದಡ ತಲುಪಿಸಿದರೆ, ತಮ್ಮ ಕೌಟುಂಬಿಕ ಜವಾಬ್ದಾರಿ ಮುಗಿದಂತೆ ಎಂದು ಭಾವಿಸುತ್ತಾರೆ. ನನ್ನ ಗುರಿ ಸಹ ಅವರಂತೆಯೇ ಕುಟುಂಬದ ಜವಾಬ್ದಾರಿ ವಹಿಸುವುದಾಗಿದೆ. ನನ್ನ ತಂದೆ ನಿರ್ಭೀತ ಸ್ವಭಾವದವರು. ಅವರ ಈ ಗುಣ ನನ್ನಲ್ಲೂ ತುಂಬಿಕೊಂಡಿದೆ. ತಪ್ಪು ಕಂಡುಬಂದಲ್ಲಿ ಅದರ ವಿರುದ್ಧ ಧ್ವನಿ ಎತ್ತಿ ಹೋರಾಡುವ ಪ್ರವೃತ್ತಿಯನ್ನು ನಾನು ಅವರಿಂದಲೇ ಕಲಿತಿರುವೆ. ಬೆನ್ನು ತೋರಿಸಿ ಓಡಿಹೋಗುವ ವಿದ್ಯೆಯನ್ನು ಅವರೆಂದೂ ಕಲಿಸಿಲ್ಲ. ನನ್ನ ಇಂದಿನ ನಿಲುವನ್ನು ನನ್ನ ತಂದೆ ಹೆಮ್ಮೆಯಿಂದ ಸಮರ್ಥಿಸುತ್ತಾರೆ ಎನ್ನುವುದೇ ನನಗೊಂದು ಖುಷಿ!

ಇಂದಿನ ಸಿನಿಮಾ ಇಂಡಸ್ಟ್ರಿಯಲ್ಲಿ ದಿನೇದಿನೇ ಹೆಚ್ಚುತ್ತಿರುವ ಪೈಪೋಟಿಗೆ ನೀವು ಹೇಗೆ ಸಿದ್ಧತೆ ನಡೆಸಿದ್ದೀರಿ?

ಪೈಪೋಟಿ ಗುಣ ಹೆಚ್ಚುತ್ತಿರುವುದರಿಂದಲೇ ಪ್ರತಿಸ್ಪರ್ಧಿಗಳು ಹೆಚ್ಚುತ್ತಿದ್ದಾರೆ. ಆದರೆ ನಾನು ನನ್ನ ಎದುರಾಳಿಯನ್ನು ವ್ಯಕ್ತಿಯಲ್ಲಿ ಹುಡುಕುವ ಬದಲು, ಒಂದು ಅತ್ಯುತ್ತಮ ಪರ್ಫಾರ್ಮೆನ್ಸ್ ಎಂದೇ ಭಾವಿಸುತ್ತೇನೆ. ಅದನ್ನು ಸಮರ್ಥವಾಗಿ ನಿಭಾಯಿಸಿದಾಗ ಮಾತ್ರ ನಾನು ಅತ್ಯುತ್ತಮ ಕೆಲಸ ಮಾಡಿದ್ದೇನೆ ಎಂಬ ಸಮಾಧಾನ ನನಗಿರುತ್ತದೆ. ಜೊತೆಗೆ ನಾನು ಮಾಡಿದ ಅಂಥ ಕಷ್ಟಕರ ಕೆಲಸವನ್ನು ಬೇರಾರೂ ಮಾಡಲಾರರು ಎಂಬ ಆತ್ಮವಿಶ್ವಾಸ ನನಗಿದ್ದೇ ಇದೆ. ಇವತ್ತಿನವರೆಗೂ ನಾನು ಮೂರು ಕಿಂಗ್‌ಖಾನ್‌ಗಳ ಜೊತೆ ನಟಿಸಿಲ್ಲ. ಏಕೆಂದರೆ ಅಂಥವರ ಚಿತ್ರಗಳು ಕೇವಲ ಅವರತ್ತಲೇ ಕೇಂದ್ರೀಕೃತವಾಗಿರುತ್ತವೆ. ನಾನೋ…. ಒಳ್ಳೆಯ ಚಿತ್ರ, ಉತ್ತಮ ಪರ್ಫಾರ್ಮೆನ್ಸ್ ನಲ್ಲಿ ನಂಬಿಕೆ ಇಟ್ಟವಳು. ಆದುದರಿಂದಲೇ ನನಗಾಗಿ `ರಂಗೂನ್‌, ಸಿಮರ್‌, ರಾಣಿ ಲಕ್ಷ್ಮೀಬಾಯಿ’ ತರಹದ ಚಿತ್ರಗಳು ತಯಾರಾಗುತ್ತಿರುವಾಗ ನಾನೇಕೆ ಈ ಗೆದ್ದೆತ್ತುಗಳ ಬಾಲ ಹಿಡಿಯಲಿ?

ಬಾಲಿವುಡ್‌ನಲ್ಲಿ ನಿಮ್ಮ ಬಗ್ಗೆ ವಿವಾದಾಸ್ಪದ ಪ್ರಕರಣಗಳು ಬಂದಾಗ ನೀವು ಅದನ್ನು ಹೇಗೆ ನಿಭಾಯಿಸುತ್ತೀರಿ?

ನಾನು ಮೊದಲೇ ಹೇಳಿದಂತೆ, ತಪ್ಪು ಕಂಡು ಬಂದರೂ ಅದನ್ನು ನೋಡಿ ತೆಪ್ಪಗೆ ಕೂರುವವಳು ನಾನಲ್ಲ! ಜನ ಬೇಕೆಂದೇ ನನ್ನ ಬಗ್ಗೆ ಅಪಪ್ರಚಾರಕ್ಕೆ ತೊಡಗಿದರೆ ನಾನು ಅದಕ್ಕೆ ಸೊಪ್ಪು ಹಾಕುವುದಿಲ್ಲ. ಸರಿಯಾದ ಸಮಯಕ್ಕಾಗಿ ತಾಳ್ಮೆಯಿಂದ ಕಾಯುತ್ತೇನೆ, ಆಗ ಮಾತ್ರ ಅದಕ್ಕೆ ತಿರುಗೇಟು ನೀಡಲು ಸಾಧ್ಯ.

ನೀವು ನಿಮ್ಮ ಯಶಸ್ಸಿನ ಕ್ರೆಡಿಟ್‌ ಯಾರಿಗೆ ನೀಡಬಯಸುತ್ತೀರಿ?

ನನ್ನ ಹಠಮಾರಿ ಸ್ವಭಾವ, ಶ್ರದ್ಧೆ, ಕಷ್ಟಸಹಿಷ್ಣುತಾ ಗುಣಗಳಿಗೆ. ನನ್ನ ಹಠದ ಕಾರಣದಿಂದಲೇ ನಾನಿಂದು ಈ ಮಟ್ಟ ತಲುಪಿದ್ದೇನೆ.

– ಪಿ. ಪೂರ್ಣಿಮಾ 

Tags:
COMMENT