ನಾನು ತುಂಬಾನೇ ಅದೃಷ್ಟವಂತೆ ಅಂತ ಮನಸ್ಛೂರ್ತಿಯಾಗಿ ಹೇಳಬಲ್ಲೆ. ಏಕೆಂದರೆ ಈ ಕಲಾಕ್ಷೇತ್ರದಲ್ಲಿ ಅದರಲ್ಲೂ ಕಿರುತೆರೆ ಲೋಕದಲ್ಲಿ ನಾನು ಹೊಸದೇನನ್ನೊ ಮಾಡಲು ಕೈ ಹಾಕಿದಾಗಲೆಲ್ಲ ಎಲ್ಲರೂ ಬೆಂಬಲ ನೀಡುತ್ತಿದ್ದರು. ನನ್ನ ಕೆಲಸಕ್ಕೆ ಭೇಷ್‌ ಅಂತ ಬೆನ್ನು ತಟ್ಟಿ ಕಳುಹಿಸೋರು ನಮ್ಮ ಹಿಂದೆ ಇದ್ದಾಗ ಮಾತ್ರ ಏನಾದರೂ ಸಾಧ್ಯ ಅಲ್ವಾ….!” ಎನ್ನುತ್ತಾ ಶೃತಿ ನಾಯ್ಡು ತಮ್ಮ ಕಾಲ ಬದುಕಿನ ಪಯಣದ ಒಂದೊಂದೇ ಪುಟಗಳನ್ನು ತೆರೆಯುತ್ತಾ ಹೋದರು.

ಹೌದು, ಇಂದು ಕಿರುತೆರೆ ಲೋಕದಲ್ಲಿ ಶೃತಿಯದು ಮಹತ್ತರ ಸಾಧನೆ. ನಟಿ, ನಿರ್ದೇಶಕಿ, ಹಾಗೂ ತನ್ನದೇ ಆದ ಪ್ರೊಡಕ್ಷನ್‌ ಹೌಸ್‌ ಮಾಡಿಕೊಂಡು ನೂರಾರು ಕಲಾವಿದರಿಗೆ, ತಂತ್ರಜ್ಞರಿಗೆ ಪ್ರತಿನಿತ್ಯ ಕೆಲಸ ಸಿಗವಂತೆ ಮಾಡಿದ್ದಾರೆ.

ಈ ಕಲಾ ಲೋಕಕ್ಕೆ ಬಂದದ್ದಾರೂ ಹೇಗೆ?

ನಮ್ಮೂರು ಮೈಸೂರು, ಅಲ್ಲೇ ವಿದ್ಯಾಭ್ಯಾಸ. ಮನೆಯಲ್ಲಿ ನೀನು ಹೀಗೇ ಇರಬೇಕು, ಇದನ್ನೇ ಮಾಡಬೇಕು ಅಂತ ಅಪ್ಪ ಅಮ್ಮ ಎಂದಿಗೂ ಹೇಳಿದವರಲ್ಲ. ಎಂಜಿನಿಯರಿಂಗ್‌ ಸೇರಿಕೊಂಡ ಮೇಲೆ ನನಗ್ಯಾಕೋ ಒಂದೇ ಕಡೆ ಕುಳಿತು ಓದುವುದು, ನಾಲ್ಕು ಗೋಡೆ ನಡುವೆ ನನ್ನನ್ನು ನಾನು ಕೂಡಿ ಹಾಕಿಕೊಳ್ಳಲು ಖಂಡಿತಾ ಇಷ್ಟವಿರಲಿಲ್ಲ. 24 ತಾಸು ಬಿಜಿಯಾಗಿರಬೇಕು. ಏನಾದರೂ ಕ್ರಿಯೇಟಿವ್‌ ಆಗಿ ಮಾಡುತ್ತಿರಬೇಕು ಎಂಬುದು ನನ್ನಾಸೆಯಾಗಿತ್ತು.

kannad

ಸ್ನೇಹಿತರೊಬ್ಬರು ನನ್ನ ಫೋಟೋ ನೋಡಿ ಏಕೆ ಮಾಡೆಲ್‌ ಆಗಬಾರದು ಅಂದರು. ಹಾಗೆಯೇ ಧಾರಾವಾಹಿಗಳಲ್ಲಿ ನಟಿಸಲು ಅವಕಾಶ ಸಿಕ್ಕಿತು. ನನಗ್ಯಾವತ್ತೂ ನಟಿಯಾಗಬೇಕು ಎಂದು ಅನಿಸಿರಲಿಲ್ಲ. ಆದರೂ ನನಗದು ತುಂಬಾ ಹಿಡಿಸಿತು. `ಪ್ರೀತಿ ಇಲ್ಲದ ಮೇಲೆ’ ಧಾರಾವಾಹಿಯಲ್ಲಿ ಅನಂತ್‌ನಾಗ್‌ರಿಗೆ ಜೋಡಿಯಾಗಿ ನಟಿಸಿದಾಗಲಂತೂ ಜನ ತುಂಬಾನೇ ಇಷ್ಟಪಟ್ಟರು, ನಾನು ನಟಿಯಾಗಿ ಜನಪ್ರಿಯ ಆಗುತ್ತಿರುವಾಗಲೇ ನಿರ್ದೇಶನದತ್ತ ಆಸೆ ವಾಲತೊಡಗಿತು.

ಯಾವುದದು….?

ನಿನ್ನಿಂದ ಈ ಕೆಲಸ ಸಾಧ್ಯವಿಲ್ಲ. ನಿನ್ನಿಂದ ಆಗೋಲ್ಲ… ಇಂಥ ಮಾತುಗಳು ನನ್ನೆದುರು ಯಾರೇ ಆಡಿದರೂ ನಾನದನ್ನು ಮಾಡಿ ತೋರಿಸೋ ಬುದ್ಧಿ ಮೊದಲಿನಿಂದಲೂ ನನ್ನಲ್ಲಿದೆ. `ನಮ್ಮಮ್ಮ ಶಾರದೆ….’ ಧಾರಾವಾಹಿಯಲ್ಲಿ ನಟಿಸುವಾಗ ನಿರ್ದೇಶನದ ಬಗ್ಗೆ ನನಗಿದ್ದ ಆಸಕ್ತಿ ಕಂಡು ನಿರ್ದೇಶಕ ರಮೇಶ್‌ ಒಂದು ಸೀನನ್ನು ಡೈರೆಕ್ಟ್ ಮಾಡು ಅಂದರು. ಅದು ಚಾನೆಲ್ ಹೆಡ್‌ಗೂ ಇಷ್ಟವಾಯ್ತು. ಆಗ ರಮೇಶ್‌ ಈ ಸೀನನ್ನು ಶೃತಿ ಡೈರೆಕ್ಟ್ ಮಾಡಿದ್ದು ಅಂತ ಹೇಳಿದರು. ಅದಾದ ನಂತರ `ಚಿ.ಸೌ. ಸಾವಿತ್ರಿ’ ಧಾರಾವಾಹಿಯನ್ನು ಸ್ವತಂತ್ರವಾಗಿ ನಾನೇ ನಿರ್ದೇಶಿಸಲು ಅವಕಾಶ ಸಿಕ್ಕಿತು. ಸಾಕಷ್ಟು ಯಶಸ್ವಿಯಾಯ್ತು. ದೊಡ್ಡ ದೊಡ್ಡ ಕಲಾವಿದರ ಬಳಗವೇ ಇತ್ತು. ಜೈಜಗದೀಶ್‌, ಬಿ.ವಿ. ರಾಧಾ ಇನ್ನೂ ಅನೇಕ ಪ್ರತಿಭಾವಂತ ಕಲಾವಿದರಿದ್ದರು. ಹಾಗೆಯೇ ನನ್ನದೇ ಆದ ಪ್ರೊಡಕ್ಷನ್‌ ಹೌಸ್‌ ಶುರುಮಾಡಿದೆ.

ರಿಸ್ಕ್ ಅಂತ ಅನ್ನಿಸಲಿಲ್ವಾ…..?

ಶಾಲೆಯಲ್ಲಿರುವಾಗಲೇ ನನಗೆ ಕಲೆ, ನಟನೆ ಬಗ್ಗೆ ಸಿಕ್ಕಾಪಟ್ಟೆ ಆಸಕ್ತಿ. ನಾಟಕಗಳಲ್ಲಿ ನಟಿಸಿದ್ದೆ. ನಿಜ ಹೇಳಬೇಕೆಂದರೆ ನನಗಿದುವರೆಗೂ ಯಾವುದೇ ರೀತಿಯಲ್ಲಿ ಕಷ್ಟ ಅನಿಸಿಲ್ಲ. ರಿಸ್ಕ್ ಅಂತೂ ಖಂಡಿತಾ ಇಲ್ಲ. ಎಲ್ಲರೂ ಸಪೋರ್ಟ್‌ ಮಾಡೋದ್ರಿಂದ, ಅದರಲ್ಲೂ ನನ್ನ ಜೊತೆ ಕೆಲಸ ಮಾಡುವವರಲ್ಲಿ ಪುರುಷರ ಸಂಖ್ಯೆಯೇ ಹೆಚ್ಚು. ಎಲ್ಲರೂ ಒಟ್ಟಾಗಿ ಕುಳಿತು ಕೆಲಸ ಮಾಡ್ತೀವಿ. ನಮ್ಮದು ದೊಡ್ಡ ಕುಟುಂಬ.

ನಿರ್ಮಾಣ ಹಂತದಲ್ಲಿ ನೀವು ಸಾಕಷ್ಟು ಬದಲಾವಣೆ ತಂದಿದ್ದೀರ ಅಂತ ಕೇಳಿದ್ದೇನೆ….. ಹೇಗೆ ಸಾಧ್ಯವಾಯ್ತು?

ಕಲಾವಿದರು ಬೆಳಗ್ಗೆಯಿಂದ ರಾತ್ರಿವರೆಗೂ ಶೂಟಿಂಗ್‌ ಸ್ಪಾಟಲ್ಲೇ ಕಳೆಯಬೇಕು. ಆಗ ಬಹಳ ಮುಖ್ಯವಾಗೋದು ಊಟ, ತಿಂಡಿ.  ನಾನು ನಟಿಯಾಗಿದ್ದಾಗ ಅದರ ಕಷ್ಟ ಅನುಭವಿಸಿದ್ದೆ. ಹಾಗಾಗಿ ನಾನು ಮನೆಯಲ್ಲೇ ಅಡುಗೆ ಮಾಡಿಸಿ ತರಿಸುತ್ತಿದ್ದೆ, ಕಾಸ್ಟ್ಯೂಮ್ ಕೂಡಾ ನಾನೇ ಮಾಡಿಸ್ತಿದ್ದೆ. ನನ್ನ ಪ್ರಾಡಕ್ಟ್ ಚೆನ್ನಾಗಿ ಬರಬೇಕೆಂದರೆ ಹಣ ಖರ್ಚು ಮಾಡಲೇಬೇಕು. ನೂರು ಜನರ ಟೀಮ್ ಇದೆ. ರೋಹಿಣಿಯಂಥ ಅನುಭವಿ ಕಲಾವಿದರ ಸಾಥ್‌ ಇದೆ. ನಾನೇ ಹೊಸ ಟ್ರೆಂಡ್‌ ಹುಟ್ಟುಹಾಕಿದೆ. `ಚಿ.ಸೌ. ಸಾವಿತ್ರಿ’ ಸೀರಿಯಲ್ ಗಾಗಿ ಸಾವಿತ್ರಿ ಮದುವೆ ಸೀನ್‌ನ್ನು ಲಲಿತ್‌ ಮಹಲ್ನಲ್ಲಿ ಮಾಡಿಸಿದ್ದೆ. ಟಿ.ವಿ ಲೋಕದಲ್ಲೇ ಅಚ್ಚರಿ ತರುವಂಥ ಸಂಗತಿಯಾಗಿತ್ತು. `ಪುನರ್ವಿವಾಹ’ ಧಾರಾವಾಹಿ ಕೂಡ ಅಷ್ಟೇ ಯಶಸ್ವಿಯಾಯ್ತು.

actress

ಆಸೆಗಳು…. ಕನಸುಗಳು….?

ಎಲ್ಲಿಯವರೆಗೂ ಶಕ್ತಿ ಇರುತ್ತದೋ ಅಲ್ಲಿಯವರೆಗೂ ಕೆಲಸ ಮಾಡಬೇಕು. ಆಸೆಗಳು ಅಂತ ಬಂದಾಗ ನನಗೆ ಡ್ರೈವಿಂಗ್‌ ತುಂಬಾ ಇಷ್ಟ. ಅಡುಗೆ ಮಾಡೋದು ನನ್ನ ಹಾಬಿ. ಧಾರಾವಾಹಿಗಳನ್ನು ನೋಡೋದಿಲ್ಲ. ಏಕೆಂದರೆ ಒಂದು ಕಡೆ ಕೂಡುವುದು ಅಂದ್ರೆ ಆಗಲ್ಲ.

ಟಿ.ವಿ. ಜೊತೆಗೆ ಸಿನಿಮಾರಂಗದಲ್ಲಿ ಏನಾದರೂ ಮಾಡುವ ಆಸೆ ಇದೆಯಾ?

ಖಂಡಿತಾ ಇದೆ. ಆದರೆ ಸಮಯ ಸಾಕಾಗುತ್ತಿಲ್ಲ. ಸಿನಿಮಾರಂಗದಲ್ಲೂ ನನ್ನದೇ ಆದ ಪ್ರೊಡಕ್ಷನ್‌ ಹೌಸ್‌ ಮಾಡಬೇಕು. ಸಿನಿಮಾ ನಿರ್ದೇಶಿಸಬೇಕು ಅನ್ನುವ ಐಡಿಯಾ ಇದೆ. ತುಂಬಾ ಜನರಿಗೆ ಕೆಲಸ ಕೊಡೋದ್ರಲ್ಲಿ ನಾನು ಹೆಚ್ಚು ತೃಪ್ತಿ ಕಂಡುಕೊಳ್ತೀನಿ. ತುಂಬಾ ಖುಷಿ ಪಡೋದು ಅದರಲ್ಲಿ.

ನಿಮ್ಮ ಹೊಸ ಯೋಜನೆ `ಕೃಷಿ ಖುಷಿ’ ಬಗ್ಗೆ ಹೇಳಿ….

ಸಮಾಜಸೇವೆ ಮಾಡಬೇಕು ಎಂಬುದು ನನ್ನ ಕನಸಾಗಿತ್ತು. ನಾನು ಬಹಳ ವಿಭಿನ್ನವಾಗಿ ಅದನ್ನು ರೂಪಿಸಿದ್ದೇನೆ. ನನ್ನ ಧಾರಾವಾಹಿ ಕಲಾವಿದರನ್ನು ಸೇರಿಸಿಕೊಂಡು `ಕೃಷಿ ಖುಷಿ’ ಎಂಬ ಹೆಸರಿನಲ್ಲಿ ಮಂಡ್ಯದ ಹಳ್ಳಿವೊಂದಕ್ಕೆ ತೆರಳಿ ಸಾವಯವ ಕೃಷಿ ಚಟುವಟಿಕೆ ನಡೆಸಿ ಬಂದೆ. ಈ ಪ್ರಯತ್ನಕ್ಕೆ ಸಿಕ್ಕ ಮೆಚ್ಚುಗೆಯಿಂದ ಈಗ ಒಂದು ಹೆಜ್ಜೆ ಮುಂದಿಟ್ಟು ಇನ್ನಷ್ಟು ಕಲಾವಿದರು, ಕಾಲೇಜು ವಿದ್ಯಾರ್ಥಿಗಳನ್ನು ಸೇರಿಸಿಕೊಂಡು ಗಣರಾಜ್ಯೋತ್ಸದ ದಿನದಂದು ಮಂಡ್ಯಕ್ಕೆ ಹೋಗಿ `ಕಿರೇಮಡಿ’ ಬೇಸಾಯಕ್ಕೆ ಕೈ ಜೋಡಿಸುವ ಯೋಜನೆ ಹಾಕಿಕೊಂಡಿದ್ದೇನೆ. ಇಂದಿನ ಯುವಜನತೆಗೆ ಕೃಷಿಯ ಮಹತ್ವ ತಿಳಿಸುವ ಉದ್ದೇಶ ನಮ್ಮದಾಗಿದೆ. ಕಾಲೇಜು ವಿದ್ಯಾರ್ಥಿಗಳಿಗೆ ಕೃಷಿ ಬಗ್ಗೆ ಅರಿವು ಮೂಡಿಸಬೇಕು ಎಂಬುದು ನನ್ನ ಆಸೆ.

ಹೀಗೆ ಹೇಳುವ ಶೃತಿ ನಾಯ್ಡು ದಿಟ್ಟ ಮಹಿಳೆಯಾಗಿ ಹಿರಿಯ ಸಾಧನೆಗಳನ್ನು ಮಾಡುತ್ತ ಸಮಾಜ ಸೇವೆಯತ್ತ ಸಹಾಯಹಸ್ತ ನೀಡುವ ಈಕೆಗೆ ಅಪ್ಪ ಅಮ್ಮನೇ ಬೆಸ್ಟ್ ಫ್ರೆಂಡ್ಸ್ ಅಂತೆ. ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಈ ಸಂದರ್ಭದಲ್ಲಿ `ಪ್ರಯತ್ನ ಪಟ್ಟರೆ ಏನು ಬೇಕಾದರೂ ನಮ್ಮಿಂದ ಸಾಧ್ಯ’ ಎಂದು ತೋರಿಸಿಕೊಟ್ಟಿರುವ ಶೃತಿ ನಾಯ್ಡು ಅವರಿಗೆ ಶುಭಾಶಯಗಳು!

– ಸರಸ್ವತಿ 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ