ಕಿಯಾರಾಗೆ ಏನು ಇಷ್ಟವಿಲ್ಲವಂತೆ?
ಹೊಸ ಚಿತ್ರ `ಶೇರ್ ಶಾಹ್' ಯಶಸ್ವಿ ಆದದ್ದೇ ತಡ, ಎಲ್ಲರೂ ನಾಯಕಿ ಕಿಯಾರಾಳನ್ನು ಹೊಗಳಿದ್ದೇ ಹೊಗಳಿದ್ದು! ಅದು ಅವಳ ಪಾತ್ರದ್ದಾಗಿರಬಹುದು ಅಥವಾ ಚಿತ್ರದ ನಾಯಕ ಸಿದ್ಧಾರ್ಥನ ಜೊತೆಗಿನ ಅವಳ ಖಾಸಾ ದೋಸ್ತಿ ಬಗ್ಗೆ ಇರಬಹುದು. ವಿಷಯ ಅದಲ್ಲ ಇತ್ತೀಚೆಗೆ ಇವಳನ್ನೇ `ಐಡಿಯಲ್ ಶೀ' ಎಂದು ಭಾವಿಸುವ ಒಬ್ಬ ಹುಡುಗಿ ಐಶ್ವರ್ಯಾ FBನಲ್ಲಿ ಇವಳಂತೆಯೇ ಲುಕ್ಸ್ ಹೊಂದಿ ಎಲ್ಲರ ಗಮನ ಸೆಳೆದಿದ್ದಾಳೆ. ಕಿಯಾರಾ ಅವಳನ್ನು ಹೊಗಳಿದಳು ಕೂಡ. ಎಲ್ಲರೂ ಅವರವರ ಇಷ್ಟದಂತೆ ನಡೆದುಕೊಳ್ಳಬೇಕು, ನಾನಂತೂ ಯಾರ ಕಾರ್ಬನ್ಕಾಪಿ ಆಗಲು ಬಯಸಲಾರೆ ಅಂತಾಳೆ. ಮತ್ತೆ ಜನ ನಿನ್ನನ್ನು ಹೇಮಾಮಾಲಿನಿಗೆ ಹೋಲಿಸುತ್ತಾರಲ್ಲ ಎಂದು ಟ್ರೋಲಿಗರು ಕೇಳಿದರೆ ಇವಳು ಜವಾಬು ಕೊಡ್ತಾಳಾ ಕೇಳಿ......!
ರಿಚಾ ಕೊಟ್ಟ ಜವಾಬು
ಬಾಲಿವುಡ್ ಮಂದಿ FBನಲ್ಲಿ ಎಲ್ಲರಿಗೂ ದಿನೇದಿನೇ ನಿಕಟವಾಗುತ್ತಿದ್ದಂತೆ, ಪಬ್ಲಿಕ್ ಇವರನ್ನು ಹೇಗಾದರೂ ಕೆಣಕಬಹುದು ಎಂದು ಭಾವಿಸಿದಂತಿದೆ. ಆದರೆ ರಿಚಾ ಅಂಥದ್ದಕ್ಕೆ ಅವಕಾಶ ಕೊಡಲಿಲ್ಲ. ಜನ, ಅಲಿ ಫಝಲ್ ಜೊತೆ ಇವಳ ಸಂಬಂಧದ ಕುರಿತಾಗಿ, ಆಮೀರ್ ಖಾನ್ ಕಿರಣ್ ರಾವ್ ತರಹ ಇವರ ದಾಂಪತ್ಯ ಗೊಟಕ್ ಎನ್ನುತ್ತದೆ ಅಂದಾಗ, ರಿಚಾ ಅವರಿಗೆ ಸರಿಯಾಗಿ ತಿರುಗೇಟು ಕೊಟ್ಟಳು! ಅವಳು ಕಡಕ್ ಮಾತುಗಳಲ್ಲಿ ಹೇಗೆ ಚಾಟಿ ಬೀಸಿದಳೆಂದು ಇಲ್ಲಿ ನೇರ ಹೇಳುವಂತಿಲ್ಲ.... ಅಂದಿನಿಂದ ಟ್ರೋಲಿಗರು ಬಿಲ್ ಕುಲ್ತೆಪ್ಪಗಾದರು. ತನ್ನ ಪಾಡಿಗೆ ತಾನಿದ್ದ ಈ ಪಂಜಾಬಿ ಹುಡುಗಿಯನ್ನು ಅವರೇಕೆ ಹೀಗೆ ಕೆಣಕಬೇಕಿತ್ತು?
ಹಿಂದಿನ ಆ ದಮ್ ಖಂಡಿತಾ ಇಲ್ಲ!
ಕೊರೋನಾ ನಂತರ ಸೋನಿ ಟಿವಿಯ `ದಿ ಕಪಿಲ್ ಶರ್ಮ ಶೋ' ಶುರುವಾದಾಗ ಜನ ಸಖತ್ ಕಾಮಿಡಿಯ ಕಚಗುಳಿಗಾಗಿ ಕಾದಿದ್ದೇ ಬಂತು, ಆದರೆ ಈ ಶೋ ಮಾತ್ರ ದಿನೇದಿನೇ ಸಪ್ಪೆ ಸಪ್ಪೆ ಅನಿಸತೊಡಗಿದೆ. ಮತ್ತೆ ಮತ್ತೆ ಅದೇ ಹಳೆ ಮುಖಗಳಾದ ಗೋವಿಂದ, ಧರ್ಮೇಂದ್ರ, ಮತ್ತಾರೋ ಹಿರಿಯ ಕಲಾವಿದರು ಬಂದು ಇಡೀ ಕಂಟೆಂಟ್ ಠುಸ್ ಪಟಾಕಿ ಆಗಿಹೋಗಿದೆ. ಮತ್ತೆ ಮತ್ತೆ ಎಷ್ಟು ಅಂತ ಬಾಡಿ ಶೇಮಿಂಗ್ ಜೋಕ್ಸ್ ಸಹಿಸಲು ಸಾಧ್ಯ? ಹಿಂದಿನಂತೆ ಕಳೆಕಳೆಯಾಗಿರದೆ, ಕೇವಲ ಫಿಲ್ಮೀ ಪ್ರಮೋಶನ್ ಗಷ್ಟೇ ಸೀಮಿತ ಆಗಿಹೋಗಿದೆ. ಸ್ಟಾಂಡ್ ಅಪ್ ಕಾಮಿಡಿ, ಕಚಗುಳಿಯ ಜೋಕ್ಸ್ ಮರೆಯಾಗಿ ಬರೀ ಬಾಡಿ ಶೇಮಿಂಗ್ ಒಂದೇ ಉಳಿದುಬಿಟ್ಟಿದೆ ಎಂಬುದು ಕಪಿಲ್ ಗಮನಕ್ಕೆ ಬಂದಂತಿಲ್ಲ. ಮತ್ತೆ ಹೊಸತನ ಕಟ್ಟಿಕೊಂಡು ಗರಿಗೆದರದೆ ಇದ್ದರೆ, ಈ ಶೋ ಟೋಟಲ್ ಫ್ಲಾಪ್ ಎನಿಸುವ ದಿನ ದೂರವಿಲ್ಲ.
ಈ ತಾರೆಗೇಕೆ ನೆಲಕ್ಕೆ ಇಳಿಯುವ ಸ್ಥಿತಿ?
ಇತ್ತೀಚೆಗೆ ಬಾಲಿವುಡ್ ನಲ್ಲಿ ಎಲ್ಲೆಡೆ ಒಬ್ಬನೇ ಸ್ಟಾರ್ ಪುತ್ರ ಆವರಿಸಿಕೊಂಡು ಬಿಟ್ಟಿದ್ದಾನೆ, ಆರ್ಯನ್ ಖಾನ್! ತನ್ನ ಫಿಲ್ಮಿ ಡೆಬ್ಯು ಕಾರಣದಿಂದಲ್ಲ, ಮಾದಕ ವಸ್ತುಗಳ ಜಾಲದಡಿ ಬಂಧಿಸಲ್ಪಟ್ಟು ಇವನಪ್ಪ ಮಹಾನ್ ಖಾನ್ ತಲೆ ತಗ್ಗಿಸದಂತೆ ಮಾಡಿದ್ದಾನೆ. ಇಲ್ಲಿ ಪೇರೆಂಟಿಂಗ್ ಬಲು ಮುಖ್ಯ ಪಾತ್ರ ವಹಿಸುತ್ತದೆ. ಇಂದಿನ ಯುವಜನತೆಯಂತೂ ಉತ್ತಮ ಸಾಹಿತ್ಯದಿಂದ ಮಾರು ದೂರ..... ಸದಾ ಸೋಶಿಯಲ್ ಮೀಡಿಯಾ ಒಂದಿದ್ದುಬಿಟ್ಟರೆ ಸಾಕು. ತಾಯಿ ತಂದೆ, ಕುಟುಂಬ, ಅಣ್ಣತಂಗಿ.... ಯಾರೂ ಬೇಡ! ನಿರರ್ಥಕ ಅರೆಬರೆ ಮಾಹಿತಿಯ ಕಣಜವಾದ ಸೋಶಿಯಲ್ ಮೀಡಿಯಾ, ಇಂದಿನ ಯುವಜನತೆಯನ್ನು ದಾರಿ ತಪ್ಪಿಸಿ ಮತ್ತೆ ಹಿಂದಿನ ಜೀವನಕ್ಕೆ ಮರಳದಂತೆ ಮಾಡಿದೆ ಎಂದೇ ಹೇಳಬೇಕು. ಬಾಲ್ಯದಿಂದಲೇ ಮಕ್ಕಳಿಗೆ ಉತ್ತಮ ಸಂಸ್ಕಾರ, ಕುಟುಂಬದ ಮಹತ್ವ, ಉತ್ತಮ ಸಾಹಿತ್ಯ ಕಲಿಸಿದ್ದರೆ, ಅವರ ಕೆರಿಯರ್ ಮಾತ್ರವಲ್ಲ, ಅವರ ಭವಿಷ್ಯ ಬಂಗಾರವಾದೀತು, ಸಮಯ ಇರುವಾಗಲೇ ಎಚ್ಚೆತ್ತುಕೊಳ್ಳಬೇಕು!